ಕೃಷಿ

ಕೃಷಿಯು ಎಲ್ಲ ಶಾಸ್ತ್ರಗಳಿಗೂ ತಾಯಿ ಸ್ವರೂಪವಾಗಿದ್ದು, ಮಾನವ ಸಂಸ್ಕೃತಿಯ ಮೂಲವಾಗಿದೆ. ಭಾರತೀಯ ಕೃಷಿಯು ಅತಿ ಸಮೃದ್ಧ ಇತಿಹಾಸವನ್ನು ಹೊಂದಿರುವುದು ದಾಖಲೆಗಳಿಂದ ತಿಳಿದುಬಂದಿದೆ. ಆರ್ಯರ ಮತ್ತು ಸಿಂಧೂ ಕಣಿವೆಯ ನಾಗರಿಕತೆಯ ಸಮಯದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕೃಷಿಯಿಂದ ಅಭಿವೃದ್ಧಿ ಹೊಂದಿರುವುದು ಕೃಷಿಯ ಪ್ರಾಮುಖ್ಯತೆಗೆ ದೊರಕಿರುವ ಅಭೂತಪೂರ್ವ ಸಮ್ಮಾನವಾಗಿದೆ.

 

ಪುರಾತನ ಕೃಷಿ

ವೇದಗಳ ಕಾಲದಲ್ಲಿ (ಕ್ರಿಸ್ತ ಪೂರ್ವ ೪೫೦೦ ರಿಂದ ೧೦೦೦ ವರೆಗೆ) ಅಥರ್ವಣ ವೇದದ ಒಂದು ಭಾಗವಾದ ಅರ್ಥಶಾಸ್ತ್ರವು ಕೃಷಿಯ ಬಗ್ಗೆಯೂ ಸಹ ಉಲ್ಲೇಖಿಸಿದೆ. ಕೌಟಿಲ್ಯನ ಅರ್ಥಶಾಸ್ತ್ರವೂ ಸಹ ಕೃಷಿಗೆ ಸಂಬಂಧಿಸಿದಂತಹ ನಿಯಮಗಳು, ಭೂಮಿಗೆ ಸಂಬಂಧಿಸಿದ ಶಾಸನ ಇತ್ಯಾದಿಗಳನ್ನು ಒಳಗೊಂಡಿದೆ.

ತಮಿಳು ಕವಿ ತಿರುವಳ್ಳುವಾರ್ ಅವರು ಕ್ರಿಸ್ತ ಶಕ ೧೦೩೩ ರಲ್ಲಿ ನೆಲವನ್ನು ಉಳುಮೆ ಮಾಡುವವರು ಮಾತ್ರ ನಿಜವಾದ ಜೀವನವನ್ನು ಸಾಗಿಸುತ್ತಾರೆ. ಉಳಿದವರೆಲ್ಲಾ ಅವರನ್ನು ಹಿಂಬಾಲಿಸುತ್ತಾರೆ ಹಾಗೂ ಆಹಾರಕ್ಕಾಗಿ ಅವಲಂಬಿತರಾಗಿರುತ್ತಾರೆ ಎಂದು ಸಾರಿದ್ದಾರೆ. ಈ ರೀತಿ ಪುರಾತನ ಕಾಲದಿಂದಲೂ  ಭಾರತದಲ್ಲಿ ಕೃಷಿಗೆ ಹೆಚ್ಚಿನ ಮಹತ್ವವು ಲಭಿಸಿದೆ. ಈ ರಾಷ್ಟ್ರವನ್ನು ಆಳಿದ ಅನೇಕ ಅರಸರೂ ಸಹ ಕೃಷಿ ಅಭಿವೃದ್ಧಿಯ ಅಗತ್ಯತೆಯನ್ನು ಮನಗಂಡಿದ್ದರು. ಭಾರತದ ಯಾತ್ರೆಯನ್ನು ಕೈಗೊಂಡಿದ್ದ ಚೀನಾ ಯಾತ್ರಿಕರೂ ಸಹ  ಭಾರತೀಯ ಕೃಷಿಯನ್ನು ಹೊಗಳಿ ಬರೆದಿದ್ದಾರೆ. ಆ ಪೈಕಿ ಕ್ರಿಸ್ತ ಶಕ ೩೯೦ ರಿಂದ ೪೧೧ರ ಅವಧಿಯಲ್ಲಿದ್ದ ಎರಡನೆಯ ಚಂದ್ರಗುಪ್ತ (ವಿಕ್ರಮಾದಿತ್ಯ)ನ ಆಳ್ವಿಕೆಯ ಸಮಯದಲ್ಲಿ ಪ್ರವಾಸ ಕೈಗೊಂಡಿದ್ದ ಫಾಹಿಯಾನ್ ಮತ್ತು ಕ್ರಿಸ್ತ ಶಕ ೬೩೦ ರಿಂದ ೬೪೪ ರ ಅವಧಿಯಲ್ಲಿ ಶ್ರೀಹರ್ಷನ ಆಳ್ವಿಕೆಯಲ್ಲಿ ಪ್ರವಾಸ ಕೈಗೊಂಡಿದ್ದ ಹುಯನ್‌ತ್ಸಾಂಗ್‌ರವರನ್ನು ಉಲ್ಲೇಖಿಸಬಹುದಾಗಿದೆ.

 

ಆಂಗ್ಲರ ಆಳ್ವಿಕೆಯಲ್ಲಿ ಭಾರತೀಯ ಕೃಷಿ:

ಭಾರತೀಯ ಕೃಷಿಗೆ ಇದ್ದ ಅಗಾಧ ಸಾಮರ್ಥ್ಯವನ್ನು ಮನಗಂಡಿದ್ದ ಆಂಗ್ಲ ಸರ್ಕಾರವು ಕೃಷಿ ಅಭಿವೃದ್ಧಿಗಾಗಿ ಅನೇಕ ಕ್ರಮಗಳನ್ನು ಕೈಗೊಂಡಿತ್ತು. ಭಾರತೀಯ ಕಂದಾಯ ಇಲಾಖೆಯ ಒಂದು ಭಾಗವಾಗಿದ್ದ ಕೃಷಿಯನ್ನು ೧೮೭೧ರಲ್ಲಿ ಪ್ರತ್ಯೇಕ ಕೃಷಿ ಇಲಾಖೆಯಾಗಿ ಮಾಡಲಾಯಿತು. ಭಾರತದ ವೈಸರಾಯ್ ಆಗಿದ್ದ ಲಾರ್ಡ್‌ಕರ್ಜನ್ನನು ಆಂಗ್ಲ ಸರ್ಕಾರವನ್ನು ಒತ್ತಾಯಿಸಿ ೧೯೦೫ ರಲ್ಲಿ ಬಿಹಾರದ ಪೂಸಾ ಎಂಬಲ್ಲಿ ಇಂಪೀರಿಯಲ್(ಸಾಮ್ರಾಜ್ಯದ) ಕೃಷಿ ಸಂಶೋಧನಾ ಸಂಸ್ಥೆಯನ್ನು ಸ್ಥಾಪಿಸಲು ಕಾರಣಕರ್ತನಾದನು. ಈ ಸಂಸ್ಥೆಯನ್ನು ನಂತರ ನವದೆಹಲಿಗೆ ವರ್ಗಾಯಿಸಲಾಯಿತು. ಸ್ವಾತಂತ್ರ್ಯಾನಂತರ ಈ ಸಂಸ್ಥೆಯನ್ನು ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯೆಂದು ಕರೆಯಲಾಗುತ್ತಿದೆ. ಕೃಷಿ ಪಠ್ಯದ ಬೋಧನೆ, ಸಂಶೋಧನೆ ಹಾಗೂ ವಿಸ್ತರಣಾ ಶಿಕ್ಷಣವನ್ನು ಈ ಸಂಸ್ಥೆಯು ನೀಡುವುದಲ್ಲದೆ ರಾಷ್ಟ್ರೀಯ ಮಹತ್ವವನ್ನು ಪಡೆದ ಕೃಷಿ ಸಮಸ್ಯೆಗಳನ್ನೂ ಸಹ ನಿವಾರಿಸುತ್ತದೆ. ರಾಷ್ಟ್ರದ ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗ(ಯು.ಜಿ.ಸಿ.) ಸಂಸ್ಥೆಯು ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯನ್ನು ಪರಿಗಣಿತ ವಿಶ್ವವಿದ್ಯಾನಿಲಯವೆಂದು ಗಣನೆಗೆ ತೆಗೆದುಕೊಂಡಿದೆ. ಆಂಗ್ಲರ ಆಳ್ವಿಕೆಯ ಅವಧಿಯಲ್ಲಿ ಅದರಲ್ಲೂ ಮುಖ್ಯವಾಗಿ ೧೯೦೫ರಲ್ಲಿ ಭಾರತದಲ್ಲಿ ಐದು ಕಾಲೇಜುಗಳನ್ನು ಮತ್ತು ಕೆಲವು ಸಂಶೋಧನಾ ಸಂಸ್ಥೆಗಳನ್ನು ಸ್ಥಾಪಿಸಲಾಯಿತು. ಕೃಷಿ ವಿಜ್ಞಾನದ ಎಲ್ಲಾ ವಿಭಾಗಗಳಲ್ಲೂ ಬೋಧನೆ, ಸಂಶೋಧನೆ ಹಾಗೂ ವಿಸ್ತರಣಾ ಶಿಕ್ಷಣವನ್ನು ವ್ಯವಸ್ಥೆಗೊಳಿಸಲು ಹಾಗೂ ನಿರ್ವಹಿಸಲು ೧೯೨೯ ರಲ್ಲಿ ಇಂಪೀರಿಯಲ್ ಕೃಷಿ ಸಂಶೋಧನಾ ಪರಿಷತ್ತು ಎಂಬ ಸ್ವಾಯತ್ತ ಮೇರು ಸಂಸ್ಥೆಯನ್ನು ಸ್ಥಾಪಿಸಲಾಯಿತು. ಜೊತೆಗೆ ಕೃಷಿಯ ಬಗ್ಗೆ ಆಂಗ್ಲ ಆಳರಸರು ರಚಿಸಿದ ಆಯೋಗದ ಶಿಫಾರಸ್ಸುಗಳ ಸಲುವಾಗಿ ನೀಲಿ ನಕ್ಷೆಯೊಂದನ್ನು ತಯಾರಿಸಿಕೊಡಲು ಇಂಗ್ಲೆಂಡಿನ ರೋಥಮ್‌ಸ್ಟೇಡ್ ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥರು ಹಾಗೂ ಕೃಷಿ ತಜ್ಞರೂ ಆಗಿದ್ದ ಸರ್ ಜಾನ್ ರಸೆಲ್‌ರವರನ್ನು ಆಹ್ವಾನಿಸಲಾಯಿತು. ಈ ಕೃಷಿ ತಜ್ಞರ ವರದಿಯ ಆಧಾರದ ಮೇರೆಗೆ ಖುಷ್ಕಿ ಕೃಷಿಯ ಸಂಶೋಧನೆ, ಹತ್ತಿ, ಕಬ್ಬು, ಕಾಫಿ, ಚಹಾ(ಟೀ), ರಬ್ಬರ್, ಸಾಂಬಾರು ಬೆಳೆಗಳು ಇತ್ಯಾದಿಗಳ ಅಭಿವೃದ್ಧಿಯ ಬಗ್ಗೆ ಸಂಶೋಧನೆ ಕೇಂದ್ರಗಳು ಕಾರ್ಯಕ್ರಮಗಳನ್ನು ಹೊಂದಿದ್ದವು. ಆದರೂ ಸಹ ಆಹಾರ ಧಾನ್ಯ ಉತ್ಪಾದನೆಗೆ ಬೇಕಾಗಿದ್ದಷ್ಟು, ಒತ್ತನ್ನು ನೀಡಲಾಗಲಿಲ್ಲ.

 

ಸ್ವಾತಂತ್ರ್ಯಾನಂತರದ ಕೃಷಿ ಅಭಿವೃದ್ಧಿ

ಸ್ವಾತಂತ್ರ್ಯಾನಂತರ ಭಾರತ ಸರ್ಕಾರವು  ರಾಷ್ಟ್ರದಲ್ಲಿ ಕೃಷಿ ಶಿಕ್ಷಣವನ್ನು ಬಲಪಡಿಸಲು ಅನೇಕ ಚಟುವಟಿಕೆಗಳನ್ನು  ಹಮ್ಮಿಕೊಂಡಿತು. ಕೃಷಿ ವಿಸ್ತರಣಾ ಸೇವೆಯನ್ನು ಬಲಪಡಿಸಲು ಮತ್ತು ಕೃಷಿ ಅಭಿವೃದ್ಧಿಯನ್ನು ಸಾಧಿಸಲು ಹಾಗೂ ವಿವಿಧ ಬೆಳೆಗಳ ಬಗ್ಗೆ ಮತ್ತು ಕೃಷಿ ಸಂಬಂಧಿತ ವಿಷಯಗಳ ಬಗ್ಗೆ ಸಂಶೋಧನೆಯನ್ನು ಬಲಪಡಿಸಲು ಪ್ರತಿಯೊಂದು ರಾಜ್ಯದಲ್ಲಿಯೂ ಕೃಷಿ ಕಾಲೇಜುಗಳನ್ನು ಮತ್ತು ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಲಾಯಿತು. ಡಾ.ಎಸ್. ರಾಧಾಕೃಷ್ಣನ್‌ರವರ ಅಧ್ಯಕ್ಷತೆಯಲ್ಲಿ ೧೯೪೯ ರಲ್ಲಿ ರಚಿಸಲಾದ ಶಿಕ್ಷಣ ಆಯೋಗವು ತನ್ನ ಶಿಫಾರಸ್ಸುಗಳಲ್ಲಿ ರಾಷ್ಟ್ರದ ಕೃಷಿ ಸವಾಲುಗಳನ್ನು ಅಂದರೆ ಕೃಷಿ ಶಿಕ್ಷಣ, ಸಂಶೋಧನೆ ಮತ್ತು ವಿಸ್ತರಣಾ ಸೇವೆಗಳಲ್ಲಿನ ಸವಾಲುಗಳನ್ನು ಎದುರಿಸುವ ಸಲುವಾಗಿ ಗ್ರಾಮೀಣ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ತಿಳಿಸಿತು.

ನಂತರ ೧೯೫೫ ರಿಂದ ೧೯೬೦ ರ ಅವಧಿಯಲ್ಲಿ ರಚಿಸಲಾಗಿದ್ದ ಭಾರತ-ಅಮೇರಿಕಾ ಜಂಟಿ ಸಮಿತಿಯು ಈ ಸಂಸ್ಥೆಗಳನ್ನು ಅಮೇರಿಕಾದಲ್ಲಿರುವಂತೆ ಲ್ಯಾಂಡ್ ಗ್ರಾಂಟ್ ಕಾಲೇಜುಗಳು- ಭೂ ಅನುದಾನ ಕಾಲೇಜುಗಳು ಮಾದರಿಯಲ್ಲಿ ಸ್ಥಾಪಿಸಲು ಶಿಫಾರಸ್ಸು ಮಾಡಿತು. ಆ ಪ್ರಕಾರವಾಗಿ ರಾಷ್ಟ್ರದ ಮೊದಲ ಕೃಷಿ ವಿಶ್ವವಿದ್ಯಾನಿಲಯವನ್ನು ಆಗಿನ ಪ್ರಧಾನಮಂತ್ರಿಯಾಗಿದ್ದ ಪಂಡಿತ್ ಜವಾಹರ್‌ಲಾಲ್ ನೆಹರೂರವರು ೧೯೬೦ ರ ಜುಲೈ ತಿಂಗಳಿನಲ್ಲಿ ಉತ್ತರ ಪ್ರದೇಶದ ಪಂತ್ ನಗರದಲ್ಲಿ ಉದ್ಫಾಟಿಸಿದರು. ಆನಂತರ ೧೯೬೪ ರಿಂದ ೧೯೬೬ರ ಅವಧಿಯವರೆಗೆ ರಚಿಸಲಾಗಿದ್ದ ಕೊಠಾರಿ ಶಿಕ್ಷಣ ಆಯೋಗವು ಪ್ರತಿಯೊಂದು ರಾಜ್ಯದಲ್ಲಿಯೂ ಸಹ ಕನಿಷ್ಠ ಪಕ್ಷ ಒಂದು ಕೃಷಿ ವಿಶ್ವವಿದ್ಯಾನಿಲಯವನ್ನಾದರೂ ಸ್ಥಾಪಿಸಬೇಕೆಂದು ಶಿಫಾರಸ್ಸು ಮಾಡಿತು. ಇದಕ್ಕೆ ಅನುಗುಣವಾಗಿ ಬೆಂಗಳೂರಿನಲ್ಲಿ ಕೃಷಿ ವಿಶ್ವವಿದ್ಯಾನಿಲಯವನ್ನು ೧೯೬೬ರಲ್ಲಿ ಪ್ರಾರಂಭಿಸಲಾಯಿತು. ತದನಂತರ ೧೯೮೬ ರಲ್ಲಿ ಧಾರವಾಡದಲ್ಲಿ ಕೃಷಿ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲಾಯಿತು. ರಾಷ್ಟ್ರದ ಎಲ್ಲೆಡೆಗಳಲ್ಲಿ ಕೃಷಿ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸಿ ತನ್ಮೂಲಕ ಕೃಷಿ ಉತ್ಪಾದನೆಯಲ್ಲಿ ಗಣನೀಯ ಪ್ರಗತಿಯನ್ನು ಸಾಧಿಸಲು ಅನುವು ಮಾಡಿಕೊಟ್ಟ ದಾರ್ಶನಿಕರೂ ಮತ್ತು ಮುತ್ಸದ್ದಿಗಳೂ ಆದ ಶ್ರೀಮತಿ ಇಂದಿರಾಗಾಂಧಿಯವರು, ಶ್ರೀ ಸಿ. ಸುಬ್ರಮಣ್ಯಂ, ಡಾ. ಎಂ.ಎಸ್.ಸ್ವಾಮಿನಾಥನ್, ಡಾ. ವಿ.ಕುರಿಯನ್ ಮತ್ತು ಡಾ. ನಾರ್ಮನ್ ಬೋರ್ಲಾಗ್ ಮುಂತಾದ ಕಳೆದ ಶತಮಾನದ ಅನೇಕ ಮಹನೀಯರು ಮತ್ತು ಗಣ್ಯರಿಗೆ ರಾಷ್ಟ್ರವು ಕೃತಜ್ಞತೆಯನ್ನು ಅರ್ಪಿಸುತ್ತದೆ.

 

ಕರ್ನಾಟಕದಲ್ಲಿ ಕೃಷಿ ಅಭಿವೃದ್ಧಿ

ಮೈಸೂರು ಸಂಸ್ಥಾನದಲ್ಲಿ ೧೮೩೪ ರಿಂದ ೧೮೬೧ ರವರೆಗೆ ಆಂಗ್ಲರು ನೇಮಿಸಿದ್ದ ಆಯುಕ್ತರಾಗಿದ್ದ ಸರ್ ಮಾರ್ಕ್ ಕಬ್ಬನ್ ರವರು ರಾಜ್ಯದ ಕೃಷಿ ಸಾಮರ್ಥ್ಯವನ್ನು ಮನಗಂಡು ೧೮೩೬ ರಲ್ಲಿ ವೈಜ್ಞಾನಿಕ ಕೃಷಿಯನ್ನು ರೂಢಿಸುವ ಮುಂಚೂಣಿ ಅಭಿವೃದ್ಧಿ ಪ್ರಯತ್ನಗಳನ್ನು ಕೈಗೊಂಡರು ಹಾಗೂ ಮೈಸೂರು ಕೃಷಿ ಸಂಘವನ್ನು ಸ್ಥಾಪಿಸಲು ಕಾರಣರಾದರು. ಈಗಿನ ಲಾಲ್‌ಬಾಗ್ ತೋಟವನ್ನು ಆಗ ಬೆಂಗಳೂರು ಸಸ್ಯ ತೋಟವೆಂದು ಕರೆಯಲಾಗುತ್ತಿದ್ದು, ತೋಟಗಾರಿಕಾ ಚಟುವಟಿಕೆಗಳನ್ನು ಅಭಿವೃದ್ಧಿಪಡಿಸಲು ವಿವಿಧ ಕ್ರಮಗಳನ್ನು ತೆಗೆದುಕೊಳ್ಳುವ ಸಲುವಾಗಿ ೧೮೫೭ ರಲ್ಲಿ ಶ್ರೀ ವಿಸ್ಟರ್ ನ್ಯೂರವರನ್ನು ಆ ತೋಟದ ಅಧೀಕ್ಷಕರನ್ನಾಗಿ ನೇಮಿಸಲಾಯಿತು. ಮೈಸೂರು ಪ್ರಾಂತವು ರೇಷ್ಮೆ ಕೃಷಿಗೆ ಮುಂಚಿನಿಂದಲೂ ಹೆಸರುವಾಸಿಯಾಗಿದ್ದು, ೧೮೬೨ ರಲ್ಲಿ ಶ್ರೀ ಸಿಗ್ನೋರ್ಡಿವಿಚಿ ರವರು ಹೊಸ ರೇಷ್ಮೆ ಹುಳುಗಳ ತಳಿಗಳು ಮತ್ತು ಹಿಪ್ಪು ನೇರಳೆ ತಳಿಗಳನ್ನು ರಾಜ್ಯಕ್ಕೆ ಪರಿಚಯಿಸಿ ರಾಜ್ಯದ ರೇಷ್ಮೆ ಕೃಷಿಗೆ ಹೊಸ ಆಯಾಮವನ್ನು ತಂದುಕೊಟ್ಟರು. ಇದೇ ರೀತಿಯಲ್ಲಿ ಮೈಸೂರು ಸಂಸ್ಥಾನದಲ್ಲಿ ವೈಜ್ಞಾನಿಕ ಅರಣ್ಯ ಕೃಷಿಗೆ ಚಾಲನೆ ಕೊಟ್ಟ ಕೀರ್ತಿಯು ಆಗಿನ ಅರಣ್ಯ ಸಂರಕ್ಷಕರಾಗಿದ್ದ ಶ್ರೀಮಾನ್ ಸೊಮೇರಿನ್ ರವರಿಗೆ ಸಲ್ಲುತ್ತದೆ.

ರಾಜ್ಯದ ಕೃಷಿ ಅಭಿವೃದ್ಧಿಯ ಪ್ರಸ್ತಾಪ ಬಂದಾಗಲೆಲ್ಲಾ ಮೈಸೂರು ಸಂಸ್ಥಾನವನ್ನು ೧೮೯೪ ರಿಂದ ೧೯೪೦ ರವರೆಗೆ ಆಳಿದ ಮಹಾರಾಜರಾದ ರಾಜಶ್ರೀ ನಾಲ್ಮಡಿ ಕೃಷ್ಣರಾಜ ಒಡೆಯರ್ ರವರನ್ನು ಸ್ಮರಿಸುವುದು ಎಲ್ಲರ  ಆದ್ಯಕರ್ತವ್ಯವಾಗಿದೆ. ಶ್ರೀಯುತರು ರಾಜ್ಯದ ಕೃಷಿ ಸಾಮರ್ಥ್ಯವನ್ನು ಅರಿತಿದ್ದು, ಅದಕ್ಕಾಗಿ ನಿಯತವಾಗಿ ಅನೇಕ ಅಭಿವೃದ್ಧಿ ಚಟುವಟಿಕೆಗಳನ್ನು ಪ್ರಾರಂಭಿಸಿದರು ಹಾಗೂ ಕೃಷಿಯ ವಿವಿಧ ವಿಭಾಗಗಳಲ್ಲಿ ಕರ್ನಾಟಕವು ರಾಷ್ಟ್ರದಲ್ಲಿಯೇ ಅಗ್ರಗಾಮಿ ಆಗುವಂತೆ ಮಾಡಿದರು. ಮಹಾರಾಜರು ೧೮೯೯ ರಲ್ಲಿ ಮಣ್ಣು ಪರೀಕ್ಷಾ ಕೇಂದ್ರ ಒಂದನ್ನು ಮತ್ತು ವಿವಿಧ ವಿಷಯಗಳಿಗೆ ಸಂಬಂಧಿಸಿದ ಕೃಷಿ ಪ್ರಯೋಗಾಲಯ ಒಂದನ್ನು ಸ್ಥಾಪಿಸುವ ಸಲುವಾಗಿ ಜರ್ಮನಿಯ ರಸಾಯನ ತಜ್ಞರಾಗಿದ್ದ ಡಾ.ಲೇಹ್‌ಮನ್ ರವರನ್ನು ನೇಮಿಸಿದರು. ನಂತರ ಕೆನಡಾದ ವಿಜ್ಞಾನಿಯಾಗಿದ್ದ ಡಾ. ಲೆಸ್ಲೀ ಸಿ. ಕೋಲ್‌ಮನ್ ರವರನ್ನು ಕೀಟಶಾಸ್ತ್ರ ಮತ್ತು ರೋಗಶಾಸ್ತ್ರದ ಸಂಶೋಧನೆಯನ್ನು ಕೈಗೊಳ್ಳಲು ೧೯೦೫ ರಲ್ಲಿ ನೇಮಿಸಲಾಯಿತು. ಡಾ. ಕೋಲ್‌ ಮನ್‌ರವರು ಡಾ. ಲೇಹ್‌ಮನ್‌ರವರ ಕರ್ತವ್ಯವನ್ನೂ ಸಹ ೧೯೦೭ರಲ್ಲಿ ವಹಿಸಿಕೊಂಡರು. ಇವರ ಶಿಫಾರಸ್ಸಿನ ಮೇರೆಗೆ ರಾಜ್ಯದಲ್ಲಿ ಕಂದಾಯ ಇಲಾಖೆಯ ಒಂದು ಭಾಗವಾಗಿದ್ದ ಕೃಷಿಯನ್ನು ೧೯೧೨ರಲ್ಲಿ ಪ್ರತ್ಯೇಕಗೊಳಿಸಿ ೧೯೧೩ ರ ಜುಲೈ ೫ ರಂದು ಡಾ.ಕೋಲ್‌ಮನ್‌ರವರನ್ನೇ ಕೃಷಿ ಇಲಾಖೆಯ ಪ್ರಪ್ರಥಮ ಕೃಷಿ ನಿರ್ದೇಶಕರನ್ನಾಗಿ ನೇಮಿಸಲಾಯಿತು.

ಏಷ್ಯಾ ಖಂಡದಲ್ಲಿಯೇ ಮೊದಲನೆಯದಾದ ನಾಲ್ಕು ವರ್ಷಗಳ ಕೃಷಿ ಡಿಪ್ಲೊಮಾ ಶಿಕ್ಷಣವನ್ನು ಬೆಂಗಳೂರಿನ ಹೆಬ್ಬಾಳದಲ್ಲಿ ಪ್ರಾರಂಭಿಸಿದ ಕೀರ್ತಿ ಡಾ. ಕೋಲ್‌ಮನ್ ರವರದ್ದಾಗಿದೆ. ನಂತರ ಸ್ಥಳೀಯ ಕೃಷಿ ಸಮಸ್ಯೆಗಳ ನಿವಾರಣೆಗಾಗಿ ಶ್ರೀಯುತರು ತುಮಕೂರು ಜಿಲ್ಲೆಯ ಚಿಕ್ಕನಹಳ್ಳಿಯಲ್ಲಿ ೧೯೧೬ ರಲ್ಲಿ ಕೃಷಿ ಶಾಲೆಯೊಂದನ್ನು ಸ್ಥಾಪಿಸಿದರು. ನಂತರ ಇದೇ ಉದ್ದೇಶಕ್ಕಾಗಿ ಮಂಡ್ಯ ಜಿಲ್ಲೆಯ ಸೋಮನಹಳ್ಳಿಯಲ್ಲಿ ಬೆಂಗಳೂರು ಜಿಲ್ಲೆಯ ಆನೇಕಲ್‌ನಲ್ಲಿ ಹಾಗೂ ಮಿಕ್ಕೆಡೆಗಳಲ್ಲಿ ಕೃಷಿ ಶಾಲೆಗಳನ್ನು ಪ್ರಾರಂಭಿಸಿದರು. ಇದೇ ರೀತಿಯಲ್ಲಿ ಅಡಕೆ ಬೆಳೆಯ ಸಂಶೋಧನೆಗಾಗಿ ತೀರ್ಥಹಳ್ಳಿಯಲ್ಲಿ, ಕಾಫಿ ಬೆಳೆಯ ಸಂಶೋಧನೆಗಾಗಿ ಬಾಳೆಹೊನ್ನೂರಿನಲ್ಲಿ, ಕಬ್ಬು, ಭತ್ತ ಮತ್ತು ರಾಗಿ ಬೆಳೆಗಳ ಸಂಶೋಧನೆಗಾಗಿ ಮಂಡ್ಯ ವಿಶ್ವೇಶ್ವರಯ್ಯ ನಾಲಾ(ವಿ.ಸಿ.) ಫಾರಂನಲ್ಲಿ ಹಾಗೂ ಎಣ್ಣೆಕಾಳು ಬೆಳೆಗಳ ಸಂಶೋಧನೆಗಾಗಿ ಬಬ್ಬೂರಿನಲ್ಲಿ ಕೃಷಿ ಸಂಶೋಧನಾ ಕೇಂದ್ರಗಳನ್ನು ಶ್ರೀಯುತರು ಸ್ಥಾಪಿಸಿದರು. ಮಂಡ್ಯದಲ್ಲಿ ೧೯೩೦ ರಲ್ಲಿ ಸ್ಥಾಪಿಸಿದ ಸಂಶೋಧನಾ ಕೇಂದ್ರವು ನೀರಾವರಿ ಪರಿಸರ ಕೃಷಿಗೆ ಸಂಬಂಧಿಸಿದಂತೆ ಸ್ಥಾಪಿಸಿದ ಭಾರತದಲ್ಲಿಯೇ ಬಹುಶಃ ಮೊದಲನೆಯದಾದ ಕೇಂದ್ರವಾಗಿದೆ.

ಡಾ.ಕೋಲ್‌ಮನ್ ರವರು ಸೇವೆಯಿಂದ ೧೯೩೭ ರಲ್ಲಿ ನಿವೃತ್ತರಾಗುವ ಮುನ್ನ ರಾಜ್ಯದಲ್ಲಿ ಕೃಷಿ ಪದವಿ ಕಾಲೇಜನ್ನು ಪ್ರಾರಂಭಿಸುವ ಒಂದು ಮಾಸ್ಟರ್ ಯೋಜನೆಯನ್ನು ಸಹ ಸಿದ್ಧಪಡಿಸಿದರು. ಡಾ.ಕೋಲ್‌ಮನ್‌ರವರು ೧೯೫೦ ರಲ್ಲಿ ಆಗಿನ ಮೈಸೂರಿನ ಮಹಾರಾಜರಾಗಿದ್ದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ ಆಹ್ವಾನದ ಮೇರೆಗೆ ರಾಜ್ಯಕ್ಕೆ ಮತ್ತೆ ಭೇಟಿ ಕೊಟ್ಟರು ಹಾಗೂ ರಾಜ್ಯದ ಸಮಗ್ರ ಕೃಷಿ ಅಭಿವೃದ್ಧಿಗೆ ಒಂದು ಯೋಜನೆಯನ್ನು ತಯಾರಿಸಿಕೊಟ್ಟರು. ಹೆಬ್ಬಾಳದಲ್ಲಿ ಮತ್ತು   ಧಾರವಾಡದಲ್ಲಿ ೧೯೪೬ ರಲ್ಲಿ ಕೃಷಿ ಕಾಲೇಜುಗಳು ಪ್ರಾರಂಭಗೊಂಡು ನಂತರ ೧೯೬೬ ರಲ್ಲಿ ಕೃಷಿ ವಿಶ್ವವಿದ್ಯಾನಿಲಯವಾಗಿ ಮೇಲ್ದರ್ಜೆಗೆ ಏರಿದವು.

ಕರ್ನಾಟಕದಲ್ಲಿನ ಕೃಷಿ ಶಿಕ್ಷಣ, ಸಂಶೋಧನೆ ಮತ್ತು ಕೃಷಿ ಒಟ್ಟಾರೆ ಅಭಿವೃದ್ಧಿಗಾಗಿ ಈ ನಾಡಿನ ರೈತರು ಡಾ.ಕೋಲ್‌ಮನ್ ರವರಿಗೆ ಎಷ್ಟು ಋಣಿಯಾಗಿದ್ದಾರೋ ಅಷ್ಟರ ಮಟ್ಟಿಗೆ ಇತರರೂ ಕೂಡ ಅವರಿಗೆ ಋಣಿಯಾಗಿರಬೇಕು. ಇದೇ ರೀತಿಯಲ್ಲಿ ಆಧುನಿಕ ಭಾರತದಲ್ಲಿ ತೋಟಗಾರಿಕಾ ಆಂದೋಳನದ ಹರಿಕಾರರಾಗಿದ್ದ ಡಾ.ಎಂ.ಎಚ್.ಮರಿಗೌಡರಿಗೂ ಸಹ ನಾಡಿನ ಜನತೆ ಕೃತಜ್ಞತೆಗಳನ್ನು ಸಲ್ಲಿಸಬೇಕು.

ಡಾ.ಎಂ.ಎಚ್.ಮರಿಗೌಡರು ಕರ್ನಾಟಕದ ತೋಟಗಾರಿಕಾ ಅಭಿವೃದ್ಧಿಗಾಗಿ ೧೯೫೧ ರಿಂದ ೧೯೭೪ ರವರೆಗೆ ಅಹರ್ನಿಶಿ ದುಡಿದು ರಾಜ್ಯದ ಸಾಮಾನ್ಯ ರೈತರಿಗೂ ತೋಟಗಾರಿಕೆಯಿಂದ ಪ್ರಯೋಜನ ದೊರಕುವಂತೆ ಮಾಡಿದ್ದಾರೆ. ಶ್ರೀಯುತರು ೧೯೬೫ರಲ್ಲಿ ರಾಜ್ಯದ ಕೃಷಿ ಇಲಾಖೆಯನ್ನು ವಿಭಾಗಿಸಿ ಭಾರತದಲ್ಲಿಯೇ ಮೊಟ್ಟಮೊದಲಿಗೆ ಪ್ರತ್ಯೇಕ ತೋಟಗಾರಿಕಾ ಇಲಾಖೆಯೊಂದನ್ನು ಸ್ಥಾಪಿಸಲು ಕಾರಣಿಕರ್ತರಾದರು ಹಾಗೂ ರಾಜ್ಯದ ಒಟ್ಟಾರೆ ತೋಟಗಾರಿಕಾ ಅಭಿವೃದ್ಧಿಗಾಗಿ ಮುಂದಾಳತ್ವ ವಹಿಸಿಕೊಂಡು ತೋಟಗಾರಿಕಾ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿದರು.

 

ಪಂಚವಾರ್ಷಿಕ ಯೋಜನೆಗಳ ಅವಧಿಯಲ್ಲಿ ಕೃಷಿ ಅಭಿವೃದ್ಧಿ

ಕರ್ನಾಟಕ ರಾಜ್ಯವು ೧೯೫೬ರ ನವೆಂಬರ್ ತಿಂಗಳಿನಲ್ಲಿ ಅಸ್ತಿತ್ವಕ್ಕೆ ಬಂದಾಗ ಎರಡನೆಯ ಪಂಚವಾರ್ಷಿಕ ಯೋಜನೆಯು ಆಗಲೇ ಅನುಷ್ಠಾನದಲ್ಲಿ ಇತ್ತು. ಆದ್ದರಿಂದ ಎರಡನೆಯ ಪಂಚವಾರ್ಷಿಕ ಯೋಜನೆಗಾಗಿ ಒಂದು ಸಮಗ್ರ ಕೃಷಿ ಅಭಿವೃದ್ಧಿ ಯೋಜನೆಯನ್ನು ಸಿದ್ಧಪಡಿಸಲು ರಾಜ್ಯಕ್ಕೆ ಅವಕಾಶ ದೊರಕಲಿಲ್ಲ. ಹೀಗಾಗಿ ಒಗ್ಗೂಡಿದ ಬೇರೆ ಬೇರೆ ಪ್ರಾಂತ್ಯಗಳ ಎಲ್ಲಾ ಯೋಜನೆಗಳನ್ನೂ ಒಟ್ಟುಗೂಡಿಸಿ ಅನುಷ್ಠಾನಗೊಳಿಸಲು ಮಾತ್ರ ರಾಜ್ಯಕ್ಕೆ ಸಾಧ್ಯವಾಯಿತು. ಅದೇ ಸಮಯದಲ್ಲಿ ಮೂರನೆಯ ಪಂಚವಾರ್ಷಿಕ ಯೋಜನೆಯನ್ನು ರೂಪಿಸಲಾಯಿತು ಮತ್ತು ೧೯೬೧ ರಿಂದ ೧೯೬೬ರವರೆಗೆ ಅದನ್ನು ಅನುಷ್ಠಾನಗೊಳಿಸಲಾಯಿತು. ಹೊಸ ರಾಜ್ಯದ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಸಮಗ್ರ ಯೋಜನೆಗಳನ್ನು ರೂಪಿಸಲು ಹೆಚ್ಚಿನ ಗಮನವನ್ನು ನೀಡಲಾಯಿತು. ಒಟ್ಟಿನಲ್ಲಿ ಹೇಳುವುದಾದರೆ ಹೊಸ ರಾಜ್ಯಕ್ಕೆ ಮೂರನೆಯ ಪಂಚವಾರ್ಷಿಕ ಯೋಜನೆಯೇ ಮೊದಲ ಪಂಚವಾರ್ಷಿಕ ಯೋಜನೆಯಾಯಿತು.

ರಾಜ್ಯದಲ್ಲಿನ ಕೃಷಿ ಅಭಿವೃದ್ಧಿಯನ್ನು ಸಾಮಾನ್ಯವಾಗಿ ನಾಲ್ಕು ಹಂತಗಳನ್ನಾಗಿ ವಿಂಗಡಿಸಬಹುದಾಗಿದೆ. ಮೊದಲನೆಯ ಹಂತವು ೧೯೫೬ ರಿಂದ ೧೯೬೬ರ ವರೆಗಿನ ವಿವಿಧ ಕೃಷಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸೀಮಿತವಾಗಿದೆ. ಈ ಹಂತದಲ್ಲಿ ಸಾಂಪ್ರದಾಯಿಕ ಅಭಿವೃದ್ಧಿ ಕ್ರಮಗಳಾದ ಸಾಗುವಳಿ ಪ್ರದೇಶ ವಿಸ್ತೀರ್ಣದ ಹೆಚ್ಚಳ, ನೀರಾವರಿ ಮೂಲಗಳನ್ನು ಹೆಚ್ಚಿಸುವಿಕೆ, ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಜನಪ್ರಿಯಗೊಳಿಸುವಿಕೆ, ಸುಧಾರಿತ ಬೀಜಗಳ ಬಳಕೆಯನ್ನು ಹೆಚ್ಚಿಸುವಿಕೆ, ಜಪಾನ್ ಪದ್ಧತಿಯ ಭತ್ತದ ಸಾಗುವಳಿಯನ್ನು ಜನಪ್ರಿಯಗೊಳಿಸುವಿಕೆ ಇತ್ಯಾದಿಗಳಿಗೆ ಒತ್ತನ್ನು ನೀಡಲಾಗಿದೆ. ಇದರ ಮೂಲ ಉದ್ದೇಶವು ಕೃಷಿ ಉತ್ಪಾದನೆಯನ್ನು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಹೆಚ್ಚಿಸುವುದಾಗಿತ್ತು. ಎರಡನೆಯ ಹಂತವು ೧೯೬೬ ರಿಂದ ೧೯೮೦ ರವರೆಗಿನ ಅವಧಿಗೆ ಸೀಮಿತಗೊಂಡಿದೆ. ಈ ಅವಧಿಯಲ್ಲಿ ಹೆಚ್ಚಿನ ಒತ್ತನ್ನು ಸಾಂದ್ರ ಬೇಸಾಯಕ್ಕೆ ನೀಡಲಾಯಿತು. ಹೊಸ ತಂತ್ರಜ್ಞಾನವು ಹೆಚ್ಚಿನ ಕೃಷಿ ಉತ್ಪಾದನೆಗೆ ದಾರಿ ಮಾಡಿಕೊಟ್ಟಿತು.

ಮುಖ್ಯವಾಗಿ ಸಂಕರ ತಳಿಗಳು ಮತ್ತು ಅಧಿಕ ಇಳುವರಿ ತಳಿಗಳು ಹೆಚ್ಚಿನ ಉತ್ಪಾದನೆಗೆ ಕಾರಣವಾದವು. ಏಕದಳ ಧಾನ್ಯಗಳ ಉತ್ಪಾದನೆಯು ಸಂಕರ ಹಾಗೂ ಅಧಿಕ ಇಳುವರಿ ತಳಿಗಳ ಕಾರಣವಾಗಿ ಬಹಳವಾಗಿ ಹೆಚ್ಚಿತು. ಮೂರನೆಯ ಹಂತದ ಅವಧಿಯು ೧೯೮೦ ರಿಂದ ೧೯೯೫ ರವರೆಗೆ ಸೀಮಿತಗೊಂಡಿದೆ. ಈ ಅವಧಿಯಲ್ಲಿ ಬಡತನ ರೇಖೆಯಿಂದ ಕೆಳಗಿರುವ ಮತ್ತು ಸೌಲಭ್ಯ ವಂಚಿತರಾದ ರೈತ ಸಮುದಾಯಕ್ಕೆ ಅದರಲ್ಲೂ ಮುಖ್ಯವಾಗಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ, ಪರಿಶಿಷ್ಠ ಜಾತಿ ಮತ್ತು ಪಂಗಡಗಳ ರೈತರಿಗೆ, ಖುಷ್ಕಿ ಸಾಗುವಳಿ ರೈತರಿಗೆ ಆಧುನಿಕ ತಂತ್ರಜ್ಞಾನ ಲಭಿಸಿ ಹೆಚ್ಚಿನ ಕೃಷಿ ಉತ್ಪಾದನೆಯ ಮೂಲಕ ಅವರುಗಳು ಮೇಲಕ್ಕೆ ಬರಲಿ ಎಂಬ ಉದ್ದೇಶವನ್ನು ಹೊಂದಲಾಗಿತ್ತು. ನಾಲ್ಕನೆಯ ಹಂತವು ೧೯೯೫ ರಿಂದ ಪ್ರಾರಂಭವಾಗಿದೆ. ರಾಜ್ಯ ಸರ್ಕಾರವು ತನ್ನದೇ ಆದ ಕೃಷಿ ನೀತಿಯೊಂದನ್ನು ೧೯೯೫ ರಲ್ಲಿ ಹೊರತಂದಿತು. ಈ ಕೃಷಿ ನೀತಿಯಲ್ಲಿ ಬದಲಾಗುತ್ತಿರುವ ಕೃಷಿ ಸನ್ನಿವೇಶಗಳಿಗೆ ಅನುಗುಣವಾಗಿ, ಕೃಷಿಯ ಪ್ರಪಂಚೀಕರಣ ಹಾಗೂ ಉದಾರೀಕರಣಕ್ಕೆ ಅನುಗುಣವಾಗಿ ವಿಶ್ವ ಮಾರುಕಟ್ಟೆಯ ಸನ್ನಿವೇಶಕ್ಕೆ ಅನುಗುಣವಾಗಿ ಸಮಗ್ರ ಬೆಳವಣಿಗೆಯನ್ನು ಸಾಧಿಸಲು ಮತ್ತು ಕೃಷಿ ಹಾಗೂ ಅದಕ್ಕೆ ಸಂಬಂಧಿಸಿದ ಉದ್ದಿಮೆಗಳಲ್ಲಿ ಹೆಚ್ಚಿನ ಬೆಳವಣಿಗೆ ಗತಿಯನ್ನು ಹೊಂದಲು ವಿಶೇಷ ಒತ್ತನ್ನು ನೀಡಲಾಗಿದೆ.

ಕೃಷಿಯು ರಾಜ್ಯದ ಆರ್ಥಿಕತೆಗೆ ತನ್ನದೇ ಆದ ಬೆಂಬಲವನ್ನು ನೀಡುತ್ತಿದೆ. ಕನ್ನಡದ ಪ್ರಮುಖ ಕವಿ ಸರ್ವಜ್ಞನು ತನ್ನ ವಚನದಲ್ಲಿ ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲು ಎಂದು ಹೇಳಿರುವುದು  ರಾಜ್ಯದಲ್ಲಿ ಕೃಷಿಗೆ ಹಿಂದೆ ನೀಡಿದ್ದ ಪ್ರಾಮುಖ್ಯತೆಯನ್ನು ಸೂಚಿಸುತ್ತದೆ. ಮುಂದುವರಿದು ಸರ್ವಜ್ಞನು ಮೇಟಿ(ನೇಗಿಲು)ಯ ಜೊತೆಗೆ ರಾಟೆಯು ಕೂಡ ನಿರಂತರವಾಗಿ ತಿರುಗುತ್ತಿರಬೇಕೆಂದು ತಿಳಿಸಿರುತ್ತಾನೆ. ಇದು ರಾಜ್ಯದಲ್ಲಿ ರೈತರು ಅದರಲ್ಲೂ ಮುಖ್ಯವಾಗಿ ಹೆಂಗಸರು ಬಟ್ಟೆಯ ನೂಲು ತೆಗೆಯುವುದರಲ್ಲಿ ಹಾಗೂ ನೇಯ್ಗೆ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರೆಂಬುದನ್ನು ತೋರಿಸುತ್ತದೆ. ಇದಕ್ಕೆ ಹಲವಾರು ಪುರಾವೆಗಳು ದಾಖಲೆಯ ರೂಪದಲ್ಲಿ ದೊರೆಯುತ್ತವೆ. ಪ್ರವಾಸಿಗ ಬುಕಾನನ್ (೧೮೦೦) ತನ್ನ ಕಥನದಲ್ಲಿ ಕೃಷಿ ಕಾರ್ಮಿಕನ ದಿನದ ವೇತನದಷ್ಟೇ ಆದಾಯವನ್ನು ಒಬ್ಬ ನೇಕಾರನು ತನ್ನ ವೃತ್ತಿಯಿಂದ ಗಳಿಸುತ್ತಿದ್ದನೆಂದು ದಾಖಲಿಸಿದ್ದಾನೆ. ಆದರೆ ಇಂಗ್ಲೆಂಡ್‌ನಲ್ಲಾದ ಕೈಗಾರಿಕಾ ಕ್ರಾಂತಿ ಹಾಗೂ ಅಲ್ಲಿನ ತೆರಿಗೆ ಪದ್ದತಿಯಿಂದ ಭಾರತದ ಪ್ರಾಚೀನ ಜವಳಿ ಮತ್ತು ಇನ್ನಿತರ ಕರಕುಶಲ ಉದ್ದಿಮೆಗಳು ನಾಶವಾಗಿ ಭಾರತವು ಕೃಷಿ ಪ್ರಧಾನ ರಾಷ್ಟ್ರವಾಗಿ ಮಾತ್ರ ಉಳಿದುಕೊಂಡಿತು. ಇದರಿಂದಾಗಿ ಈ ಉದ್ದಿಮೆಗಳಲ್ಲಿ ತೊಡಗಿಸಿಕೊಂಡಿದ್ದ ಜನರು ಕೃಷಿಯ ಮೇಲೆಯೇ ಅವಲಂಬಿತವಾಗಬೇಕಾಯಿತು.

ಐತಿಹಾಸಿಕವಾಗಿ ಕರ್ನಾಟಕವು ಬತ್ತ, ರಾಗಿ, ಜೋಳದ ಬೆಳೆಗಳಿಗೆ ಪ್ರಸಿದ್ಧವಾಗಿದ್ದು ಭತ್ತವು ರಾಜ್ಯದ ಕರಾವಳಿಯಿಂದ ರಫ್ತಾಗುತ್ತಿದ್ದ ಪ್ರಮುಖವಾದ ಬೆಳೆಯಾಗಿತ್ತು. ಸಾಂಬಾರು ಬೆಳೆಗಳಾದ ಕರಿಮೆಣಸು, ಏಲಕ್ಕಿ, ದಾಲ್ಚಿನ್ನಿ, ಜಾಯಿಕಾಯಿ, ಶುಂಠಿ ಇತ್ಯಾದಿ ಬೆಳೆಗಳನ್ನು ಕೂಡ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿತ್ತು. ಇದರಲ್ಲಿ ಕೆಲವೊಂದು ಕಾಡು ಜಾತಿಯದಾಗಿದ್ದವು. ಸಾಹಿತ್ಯ ಹಾಗೂ ಶಿಲಾಶಾಸನ ದಾಖಲೆಗಳು ರಾಜ್ಯದ ಕರಾವಳಿ ಪ್ರದೇಶದಲ್ಲಿದ್ದ ಸಂಪದ್ಭರಿತ ಭತ್ತದ ಗದ್ದೆಗಳು, ತೆಂಗು, ಅಡಿಕೆ ಮತ್ತು ಬಾಳೆ ತೋಟಗಳ ಬಗ್ಗೆ ತಿಳಿಸಿಕೊಡುತ್ತವೆ. ಇಬ್ನಬತೂತ ಎಂಬ ಪ್ರವಾಸಿಗನು ರಾಜ್ಯದ ಕರಾವಳಿ ಪ್ರದೇಶದಲ್ಲಿದ್ದ ಸಂಪದ್ಭರಿತ ಬತ್ತದ ಗದ್ದೆಗಳು, ಅವುಗಳ ಮಧ್ಯದಲ್ಲಿ ಹೂವಿನ ಗಿಡಗಳು ಹಾಗೂ ಹಣ್ಣಿನ ಮರಗಳಿಂದ ಸುತ್ತುವರಿದಿದ್ದ ಮನೆಗಳು ಇದ್ದುದನ್ನು ಕ್ರಿ.ಶ. ೧೩೪೭ ರಲ್ಲಿ ಉಲ್ಲೇಖಿಸಿರುತ್ತಾನೆ. ೧೬ನೇ ಶತಮಾನದ ಆರಂಭ ಭಾಗದಲ್ಲಿ ವಿಜಯನಗರ ಸಾಮ್ರಾಜ್ಯಕ್ಕೆ ಭೇಟಿ ನೀಡಿದ ಡೊಮಿಂಗೋ ಪೇಸ್, ಈ ಭಾಗಗಳು ಸೊಗಸಾಗಿ ಕೃಷಿಯಾಗಿವೆ ಮತ್ತು ಬಹಳ ಫಲವತ್ತಾಗಿವೆ ಎಂದು ಹೇಳಿದ್ದಾನೆ. ಅವನು ಮುಂದುವರಿದು ಈ ದೇಶದಲ್ಲಿ ಬಹಳವಾಗಿ ಅಕ್ಕಿ ಮತ್ತು ಮುಸುಕಿನ ಜೋಳ, ಧಾನ್ಯಗಳು, ಬೇಳೆ ಕಾಳುಗಳು ಮತ್ತು ನಮ್ಮ ದೇಶಗಳಲ್ಲಿ ಬೆಳೆಯದೆ ಇರುವಂತಹ ಇತರ ಬೆಳೆಗಳು ಇವೆ. ವಿಪುಲವಾಗಿ ಹತ್ತಿಯೂ ಸಹ ಇದೆ. ಧಾನ್ಯಗಳು ಯಥೇಚ್ಛವಾಗಿರುವುದರಿಂದ, ಅವು ಮನುಷ್ಯಿರಿಗೆ ಆಹಾರವಾಗಿ ಬಳಕೆಯಾಗುವುದಲ್ಲದೆ, ಬೇರೆ ಬಗೆಯ ಬಾರ್ಲಿಗಳಿಲ್ಲದಿರುವುದರಿಂದ ಕುದುರೆಗಳಿಗೂ ಆಹಾರವಾಗಿ ಬಳಕೆಯಾಗುತ್ತದೆ. ಈ ದೇಶದಲ್ಲಿ ಗೋಧಿ ಬಹಳವಾಗಿದೆ ಮತ್ತು ಅದು ಚೆನ್ನಾಗಿದೆ ಎಂದು ಹೇಳಿದ್ದಾನೆ.

ಪೋರ್ಚುಗೀಸರು ನವಜಗತ್ತಿನಿಂದ ಅಂದರೆ ಅಮೆರಿಕಾ ಖಂಡಗಳಿಂದ ಮುಸುಕಿನ ಜೋಳ, ಹೊಗೆಸೊಪ್ಪು (ತಂಬಾಕು), ನೆಲಗಡಲೆ(ಶೇಂಗಾ), ಆಲೂಗಡ್ಡೆ, ಮೆಣಸಿನ ಕಾಯಿ ಮತ್ತು ಟೊಮೊಟೋ ಗಳನ್ನು ತಂದು ಭಾರತಕ್ಕೆ ಪರಿಚಯ ಮಾಡಿಸಿದರು. ಗೋವಾಕ್ಕೆ ಬಹಳ ಸಮೀಪದಲ್ಲಿ ಇರುವುದರಿಂದ ಈ ಹೊಸ ಬೆಳೆಗಳ ತಿಳುವಳಿಕೆಯನ್ನು ಕರ್ನಾಟಕವು ಮೊದ ಮೊದಲೇ ಪಡೆದುಕೊಂಡಿತು. ಅಲ್ಲದೆ ಗೋವಾದ ಕ್ರೈಸ್ತ ಕೃಷಿಕರು ಕರ್ನಾಟಕಕ್ಕೆ ಮುಖ್ಯವಾಗಿ ಕರಾವಳಿ ಹಾಗೂ ಮಲೆನಾಡುಗಳಿಗೆ ಸಾಕಷ್ಟು ಸಂಖ್ಯೆಯಲ್ಲಿ ವಲಸೆ ಬಂದರು. ಬುಕಾನನ್‌ನು ೧೮೦೦ರಲ್ಲಿ ಅಲ್ಲಿನ ಭತ್ತದ ಗದ್ದೆಗಳು ಮಲಬಾರಿನದಕ್ಕಿಂತಲೂ ಹೆಚ್ಚು ಅಚ್ಚು ಕಟ್ಟಾಗಿ ಕೃಷಿಯಾದಂತಹವು ಎಂದು ಅಭಿಪ್ರಾಯ ಪಟ್ಟಿದ್ದಾನೆ.

ಬ್ರಿಟಿಷರು ಭಾರತಕ್ಕೆ ಮುಖ್ಯವಾಗಿ ಕರ್ನಾಟಕಕ್ಕೆ ಅಮೆರಿಕದ ನೀಳ ಎಳೆಯ ಹತ್ತಿಯನ್ನು ತಂದರು. ಅಮೆರಿಕದ ಅಂತರ್ಯುದ್ಧದ ದಿನಗಳ (೧೮೬೦ ರ ದಶಕ) ಹತ್ತಿಯ ಉತ್ಕರ್ಷ ಕಾಲವು ಹತ್ತಿಯ ಕೃಷಿಗೆ ಅಭೂತಪೂರ್ವ ಪ್ರೋತ್ಸಾಹವನ್ನು ನೀಡಿತು. ೧೯ನೇ ಶತಮಾನದಲ್ಲಿ ಬ್ರಿಟೀಷರು ದೊಡ್ಡ ಪ್ರಮಾಣದಲ್ಲಿ ಕಾಫಿ ತೋಟಗಳನ್ನು ಬೆಳೆಸಿದರು. ಕರ್ನಾಟಕದ ಆಳರಸರು ನೀರಾವರಿಗೆ, ಮುಖ್ಯವಾಗಿ ಕೆರೆಗಳಿಗೆ ಬಹಳ ಗಮನ ಹರಿಸಿದರಾದರೂ ನಮ್ಮ ಕಾಲದ (ಆಧುನಿಕ ಕಾಲದ) ಬೃಹತ್ ನೀರಾವರಿ ಕಾಮಗಾರಿಗಳನ್ನು ನಿರ್ಮಿಸುವ ಮೊದಲು ನೀರಾವರಿ ಪ್ರದೇಶವು ಶೇಕಡಾ ಐದನ್ನು ಎಂದೂ ಮೀರಿರಲಿಲ್ಲ. ಪ್ರಸ್ತುತದಲ್ಲಿ ಕೃಷಿಯು ಜನರ ಬಹಳ ಮುಖ್ಯ ಆಹಾರದ ಮತ್ತು ದನಗಳ ಮೇವಿನ ಮೂಲ. ಅಲ್ಲದೆ ಅದು ಜನಸಂಖ್ಯೆಯ ಶೇಕಡಾ ೬೫ ರಷ್ಟು ಜನರ ಜೀವನೋಪಾಯವಾಗಿದೆ. ಹಿಡುವಳಿಯಲ್ಲಿರುವ  ಜಮೀನುಗಳು, ಕೃಷಿ ಉಪಕರಣಗಳು, ನೀರಾವರಿ ಕಾಮಗಾರಿಗಳು ಮತ್ತು ಪಶು ಸಂಪತ್ತು ರಾಜ್ಯದ ಅತ್ಯಂತ ದೊಡ್ಡ ಸ್ಥಿರ ಬಂಡವಾಳವನ್ನು ಪ್ರತಿನಿಧಿಸುತ್ತದೆ.

ದೇಶದ ಜನಸಂಖ್ಯೆಯ ಶೇ.೬೮.೯ ಭಾಗ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಾರೆ. ಆದರೆ ಕರ್ನಾಟಕದಲ್ಲಿ ಅದು ಶೇ. ೬೧.೩೨ ರಷ್ಟು ಮಾತ್ರ. ದೇಶದ ಒಟ್ಟು ಜನಸಂಖ್ಯೆಯಲ್ಲಿ ಪ್ರಧಾನ ದುಡಿಮೆಗಾರರು, ಶೇ.೩೨.೨. ಆದರೆ ರಾಜ್ಯದಲ್ಲಿ ಶೇ. ೩೮.೩ ರಷ್ಟು ಪ್ರಧಾನ ದುಡಿಮೆಗಾರರಲ್ಲಿ ಶೇ.೨೮.೧೩ ರಷ್ಟು ಸ್ವಂತದ ಕೃಷಿಕರು. ಶೇ. ೩೦.೫೬ ಮಂದಿ ಕೃಷಿ ಕಾರ್ಮಿಕರು ಮತ್ತು ಶೇ. ೩.೬ ಮಂದಿ ಪಶುಪಾಲನೆ, ಅರಣ್ಯ, ಮೀನುಗಾರಿಕೆ, ತೋಟಗಳು ಮತ್ತು ಸಂಬಂಧಪಟ್ಟ ಇತರ ಚಟುವಟಿಕೆಗಳಲ್ಲಿ ನಿರತರಾಗಿರುವವರು. ದುಡಿಮೆಯಲ್ಲಿ ಭಾಗವಹಿಸುವ ಮಹಿಳೆಯರ ಪ್ರಮಾಣ ದೇಶದಲ್ಲಿ ಶೇ.೨೫.೫ ಇದ್ದಲ್ಲಿ ಕರ್ನಾಟಕದಲ್ಲಿ ಅದು ಅದಕ್ಕಿಂತ ಹೆಚ್ಚಾಗಿ ಶೇ.೩೧.೮೭ ರಷ್ಟಿದೆ. ಆದರೆ ಈ ಪ್ರಮಾಣವು ಆಂಧ್ರ ಪ್ರದೇಶದಲ್ಲಿ (೩೬.೧೬) ಇನ್ನೂ ಹೆಚ್ಚಿಗೆ ಇದೆ.

ಒಟ್ಟು ಆಂತರಿಕ ಉತ್ಪಾದನೆಯಲ್ಲಿ ಕೃಷಿ ವಲಯದ ಪಾಲು ಇತ್ತೀಚಿನ ವರ್ಷಗಳಲ್ಲಿ, ಕೃಷಿ ಕರ್ನಾಟಕದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದೆ. ಕೃಷಿ ರಾಜ್ಯದ ಗ್ರಾಮೀಣ ಜನರ ಮುಖ್ಯ ಕಸುಬು ಹಾಗೂ  ಜೀವನೋಪಾಯಕ್ಕೆ ಹಾದಿಯಾಗಿದೆ. ಅನಾನುಕೂಲ ಹವಾಮಾನದ ನಡುವೆಯೂ ಮತ್ತು ಪ್ರಕೃತಿಯ ಬದಲಾವಣೆ ಇದ್ದರೂ ರಾಜ್ಯ ವ್ಯವಸಾಯ ಉತ್ಪಾದನೆಯಲ್ಲಿ ಗಮನಾರ್ಹ ಸಾಧನೆ ಮಾಡಿದೆ. ೨೦೧೪- ೧೫ನೇ ಸಾಲಿನಲ್ಲಿ ರಾಜ್ಯವು ಆಹಾರ ಉತ್ಪಾದನೆ ೧೧೨.೩೨ ಲಕ್ಷ ಟನ್ ಏಕದಳ ಧಾನ್ಯ ಹಾಗೂ ೧೩.೯೦ ಲಕ್ಷ ಟನ್ ದ್ವಿದಳ ಧಾನ್ಯಗಳನ್ನು ಒಟ್ಟುಗೂಡಿಸಿ ಒಟ್ಟು ೧೨೬.೨೨ ಲಕ್ಷ ಟನ್ ಆಹಾರಧಾನ್ಯ ಉತ್ಪಾದನೆಯಾಗಿದೆ. ಹತ್ತಿ ಉತ್ಪಾದನೆಯು ಸಹ ೨೦೧೪-೧೫ ರಲ್ಲಿ ೨೩.೧೧ ಲಕ್ಷ ಬೇಲ್‌ಗಳಷ್ಟಾಗಿದ್ದು, ಇದು ಸಹ ಸರ್ವಕಾಲಿಕ ದಾಖಲೆ. ಬೆಳೆಗಳ ಕೃಷಿ ಮತ್ತು ಅವಲಂಬಿತ ಕ್ಷೇತ್ರದಲ್ಲಿ ತೀವ್ರ ಬೆಳವಣಿಗೆಗಾಗಿ  ರಾಜ್ಯ ಸರ್ಕಾರ ೨೦೧೧- ೧೨ ನೇ ಸಾಲಿಗಾಗಿ ಪ್ರತ್ಯೇಕ ಆಯವ್ಯಯ ಮಂಡಿಸಿದ್ದು, ಇದು ಇಡೀ ರಾಷ್ಟ್ರದಲ್ಲೆ ಮೊಟ್ಟಮೊದಲನೆ ಪ್ರಯತ್ನವಾಗಿರುತ್ತದೆ.

ಭೂ ಮತ್ತು ನೀರಿಗೆ ಸಂಬಂಧಿಸಿದಂತೆ ಯೋಜನೆಗಳನ್ನು ಒಟ್ಟುಗೂಡಿಸಿ ಹೊಸ ಪ್ರಯತ್ನ ಮಾಡಲಾಯಿತು. ವಲಯವಾರು ಹಂಚಿಕೆಗಳಲ್ಲಿ ಕೃಷಿ ಮತ್ತು ಅವಲಂಬಿತ ಕ್ಷೇತ್ರಕ್ಕೆ ೨೦೧೧-೧೨ ನೇ ಸಾಲಿನಲ್ಲಿ ರೂ.೩೮೩೦.೬೪ ಕೋಟಿಗಳ ಅನುದಾನವನ್ನು ನೀಡಿ ಒಟ್ಟು ಅನುದಾನದ ಶೇಕಡ ೧೦ ರಷ್ಟು ಪಾಲು ನೀಡಲಾಯಿತು. ಇದರಿಂದಾಗಿ ರಾಜ್ಯದಲ್ಲಿ, ಕೃಷಿ ಕ್ಷೇತ್ರಕ್ಕೆ ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವದೊಂದಿಗೆ ಹೆಚ್ಚಿನ ಹೂಡಿಕೆ ಮತ್ತು ಹೊಸ ತಂತ್ರಜ್ಞಾನ ದೊರೆಯಿತು.

ಕೃಷಿ ಇಲಾಖೆಯ ಯೋಜನೆಗಳು

ಕೃಷಿ ಇಲಾಖೆಯ ರಾಜ್ಯದ ಪ್ರಮುಖ ಅಭಿವೃದ್ಧಿ ಇಲಾಖೆಗಳಲ್ಲಿ ಒಂದಾಗಿದ್ದು. ರೈತರ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡು ವಿವಿಧ ಮೂಲಗಳಿಂದ ಹೊರಹೊಮ್ಮುವ ಸಂಶೋಧನಾ ಫಲಿತಾಂಶಗಳನ್ನು ಆಧುನಿಕ ತಂತಜ್ಞಾನವನ್ನು ಮಳೆ ಹಾಗೂ ನೀರಾವರಿ ಆಶ್ರಯದ ಸುಮಾರು ಒಟ್ಟು ೧೨೧.೬೧ ಲಕ್ಷ ಹೆಕ್ಟೇರುಗಳಲ್ಲಿ ಸಾಗುವಳಿ ಮಾಡುತ್ತಿರುವ ೭೮.೩೨ ಲಕ್ಷ ರೈತ ಕುಟುಂಬಗಳಿಗೆ ಪರಿಣಾಮಕಾರಿಯಾಗಿ ವರ್ಗಾಯಿಸುವ ಮೂಲಕ ಇವರುಗಳು ತಮ್ಮ ಹಿಡುವಳಿಗಳಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಹೆಚ್ಚು ಇಳುವರಿ ಪಡೆಯಲು ನೆರವು ನೀಡುತ್ತಿದೆ. ರಾಜ್ಯದ ಒಟ್ಟಾರೆ ಕೃಷಿ ಉತ್ಪಾದನೆಯನ್ನು ಹೆಚ್ಚಿಸಲು ಕೃಷಿ ಇಲಾಖೆಯು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕಾರ್ಯಗತಗೊಳಿಸುತ್ತಿದೆ.

ಈ ನಿಟ್ಟಿನಲ್ಲಿ ೨೦೧೫-೧೬ನೇ ಸಾಲಿನಲ್ಲಿ ಕೃಷಿ ಭಾಗ್ಯ, ಕೃಷಿ ಯಂತ್ರೋಪಕರಣಗಳ ಬಾಡಿಗೆ ಆಧಾರಿತ  ಸೇವಾ ಕೇಂದ್ರ, ಭೂ ಚೇತನ, ರಾಷ್ಟ್ರೀಯ ಇ-ಆಡಳಿತ, ಭೂಸಮೃದ್ಧಿ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ, ಸಾವಯವ ಕೃಷಿ ಮುಂತಾದ ಪ್ರಮುಖ ಕಾರ್ಯಕ್ರಮಗಳ ಅನುಷ್ಠಾನದಿಂದ ಹಾಗೂ ಕೃಷಿ ಪರಿಕರಗಳಾದ ಬಿತ್ತನೆ ಬೀಜ, ಲಘು ಪೋಷಕಾಂಶ, ಜೈವಿಕ ಗೊಬ್ಬರ ಮತ್ತು ಸಸ್ಯ ಸಂರಕ್ಷಣಾ ಔಷಧಿಗಳ ಸಕಾಲಿಕ ಸರಬರಾಜಿನಿಂದಾಗಿ ೨೦೧೫- ೧೬ ರಲ್ಲಿ ರಾಜ್ಯದ ಬಹುತೇಕ ಭಾಗಗಳಲ್ಲಿ (೨೭ ಜಿಲ್ಲೆಗಳ ೧೩೭ ತಾಲೂಕುಗಳಲ್ಲಿ) ಬರಗಾಲ ಪರಿಸ್ಥಿತಿಯಿಂದಾಗಿ ೧೪೦ ಲಕ್ಷ ಟನ್ ಆಹಾರ ಧಾನ್ಯ ಉತ್ಪಾದನೆ ಗುರಿಗೆ ಎದುರಾಗಿ ೧೧೦ ಲಕ್ಷ ಟನ್ ಆಹಾರ ಧಾನ್ಯ ಉತ್ಪಾದನೆ ನಿರೀಕ್ಷಿಸಲಾಗಿದೆ.

 

ಇಲಾಖೆಯ ದೂರದೃಷ್ಟಿ

ಆಹಾರ ಭದ್ರತೆ ಕಾಪಾಡುವುದರ ಜೊತೆಗೆ ೨೦೨೦ ನೇ ಸಾಲಿನ ಅಂತ್ಯಕ್ಕೆ ಕೃಷಿಯನ್ನು ಸುಸ್ಥಿರ ಹಾಗೂ ಜೀವನಾಧಾರ ಬೆಂಬಲಿಸುವ ಸಲುವಾಗಿ ಒಂದು ಲಾಭದಾಯಕ ಉದ್ದಿಮೆಯಾಗಿ ಪರಿವರ್ತಿಸುವುದು.

ಉದ್ದೇಶ

೧) ಕೃಷಿ ತಾಂತ್ರಿಕತೆಗಳನ್ನು / ಮಾಹಿತಿಯನ್ನು ರೈತರಿಗೆ ವರ್ಗಾಯಿಸುವುದು;

೨) ಕೃಷಿ ಉತ್ಪಾದನೆ ಹಾಗೂ ಉತ್ಪಾದಕತೆಯನ್ನು ಹೆಚ್ಚಿಸುವ ಸಲುವಾಗಿ ಗುಣಮಟ್ಟದ ಕೃಷಿ ಪರಿಕರಗಳ ಸರಬರಾಜನ್ನು ಖಚಿತಪಡಿಸುವುದು,

೩) ಮಣ್ಣಿನ ಸುಸ್ಥಿರ ಆರೋಗ್ಯ ನಿರ್ವಹಣೆ

೪) ಮಳೆ ಆಶ್ರಿತ ಕೃಷಿಯ ರೈತರನ್ನು ಕೇಂದ್ರೀಕರಿಸಿ, ಮಳೆ ನೀರು ಸಂಗ್ರಹಣೆ ಮತ್ತು ಪುನರ್ ಬಳಕೆಗೆ ಆದ್ಯತೆ ನೀಡುವುದು,

೫) ಸಸ್ಯ ಸಂರಕ್ಷಣೆ ಮತ್ತು ನೈರ್ಮಲ್ಯತೆ,

೬) ರಾಜ್ಯದ ಗ್ರಾಮೀಣ ಪ್ರದೇಶದ ರೈತರಿಗೆ ಸಕಾಲದಲ್ಲಿ, ಪಾರದರ್ಶಕವಾಗಿ ಮತ್ತು ಕಡಿಮೆ ಬಾಡಿಗೆ ದರದಲ್ಲಿ ಭೂಮಿ ಸಿದ್ಧತೆ, ಬಿತ್ತನೆ/ನಾಟಿ ಮಾಡುವ ಉಪಕರಣಗಳು,, ಕೊಯ್ಲು ಮತ್ತು ಸಂಸ್ಕರಣೆಗೆ ಉಪಯುಕ್ತವಾಗಿರುವ ವಿವಿಧ ಕೃಷಿ ಯಂತ್ರೋಪಕರಣಗಳನ್ನು ಒದಗಿಸುವುದು ಮತ್ತು ಕೃಷಿ ಯಾಂತ್ರೀಕರಣ ಮತ್ತು ಸೂಕ್ಷ್ಮ ನೀರಾವರಿ ಯೋಜನೆಗಳಡಿ ರೈತರ ಅರ್ಜಿಗಳನ್ನು ಆನ್‌ಲೈನ್ ಮುಖಾಂತರ ಸ್ವೀಕರಿಸಲು e-ಟೆಂಡರ್‌ ವ್ಯವಸ್ಥೆ ಮಾಡುವುದು.

ಇಲಾಖೆಯ ಕಾರ್ಯಕ್ರಮಗಳ ಕುರಿತು ಸ್ಥೂಲ ವಿವರಣೆ:

೧) ಬೇಡಿಕೆಗೆ ಅನುಗುಣವಾಗಿ ಬೀಜ, ರಸಗೊಬ್ಬರ, ಪೀಡೆನಾಶಕ, ಕೃಷಿ ಸಾಲ, ಕೃಷಿ ಯಂತ್ರೋಪಕರಣಗಳು ಹಾಗೂ ವಿಸ್ತರಣಾ ಸೇವೆಗಳನ್ನು ಸಮಯೋಚಿತವಾಗಿ ಒದಗಿಸುವುದು,

೨) ಮಳೆ ಆಶ್ರಿತ ಕೃಷಿ ರೈತರನ್ನು ಕೇಂದ್ರೀಕರಿಸಿ ಮಳೆ ನೀರು ಸಂಗ್ರಹಣೆ ಮತ್ತು ಪುನರ್ ಬಳಕೆಗೆ ಆದ್ಯತೆ ನೀಡಲು ಕೃಷಿ ಭಾಗ್ಯ ಯೋಜನೆಯನ್ನು ಜಾರಿಗೊಳಿಸುವುದು ಮತ್ತು ನೀರಿನ ಸಂರಕ್ಷಣೆ ಹಾಗೂ ಸಂರಕ್ಷಿತ ನೀರಾವರಿ ಪ್ರದೇಶದ ವಿಸ್ತೀರ್ಣವನ್ನು ಹೆಚ್ಚಿಸುವ ಸಲುವಾಗಿ ಸೂಕ್ಷ್ಮ ನೀರಾವರಿಯನ್ನು ಉತ್ತೇಜಿಸುವುದು,

೩) ರಾಜ್ಯದ ಗ್ರಾಮೀಣ ಪ್ರದೇಶದ ರೈತರಿಗೆ ಸಕಾಲದಲ್ಲಿ, ಪಾರದರ್ಶಕವಾಗಿ ಮತ್ತು ಕಡಿಮೆ ಬಾಡಿಗೆ ದರದಲ್ಲಿ ಭೂಮಿ ಸಿದ್ಧತೆ, ಬಿತ್ತನೆ/ನಾಟಿ ಮಾಡುವ ಉಪಕರಣಗಳು, ಕೊಯ್ಲು ಮತ್ತು ಸಂಸ್ಕರಣೆಗೆ ಉಪಯುಕ್ತವಾಗಿರುವ ವಿವಿಧ ಕೃಷಿ ಯಂತ್ರೋಪಕರಣಗಳನ್ನು ಒದಗಿಸುವುದು,

೪) ಸಾವಯುವ ಕೃಷಿಗೆ ಉತ್ತೇಜನ ನೀಡುವುದು ಹಾಗೂ ಉತ್ಪನ್ನಗಳ ಮಾರಾಟಕ್ಕೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದು,

೫) ಕೃಷಿ ಪರಿಕರಗಳ ಮಾರಾಟ ಮತ್ತು ಗುಣಮಟ್ಟ ಕಾಪಾಡುವ ಸಲುವಾಗಿ ವಿವಿಧ ಕಾಯ್ದೆಗಳನ್ನು ಜಾರಿಗೊಳಿಸುವುದು,

೬) ರಾಷ್ಟ್ರೀಯ ಕೃಷಿ ವಿಮಾ ಯೋಜನೆಯಡಿ ರೈತರಿಗೆ ಬೆಳೆ ನಷ್ಟ ಪರಿಹಾರ ಒದಗಿಸುವುದು,

೭) ಪ್ರಮುಖ ಕೃಷಿ ಬೆಳೆಗಳಲ್ಲಿ ರೈತರಿಗೆ ಲಾಭದಾಯಕವಾಗುವಂತಹ ಕನಿಷ್ಠ ಬೆಂಬಲ ಬೆಲೆಯನ್ನು ನಿರ್ಧರಿಸಲು ಕೇಂದ್ರ ಸರ್ಕಾರಕ್ಕೆ ಸಹಾಯ ಮಾಡುವುದು,

೮) ಉತ್ತಮ ತಂತ್ರಜ್ಞಾನ ಪ್ರಚಾರದ ಮೂಲಕ ಸೂಕ್ತ ಸಸ್ಯ ಸಂರಕ್ಷಣಾ ಕ್ರಮಗಳ ಅಳವಡಿಕೆಯನ್ನು

ಪ್ರೋತ್ಸಾಹಿಸುವುದು,

೯) ಗುಣಮಟ್ಟದ ಬೀಜೋತ್ಪಾದನೆ ಹಾಗೂ ವಿತರಣೆಗಾಗಿ ಕಾರ್ಯ ಚಟುವಟಿಕೆಯನ್ನು ರೂಪಿಸುವುದು,

೧೦) ಕೃಷಿ ಕಾರ್ಮಿಕರ ಕೊರತೆಯನ್ನು ನೀಗಿಸಲು ಹಾಗೂ ಕೃಷಿ ಕಾರ್ಮಿಕರ ಮೇಲಿನ ಒತ್ತಡವನ್ನು ಕಡಿಮೆಗೊಳಿಸಲು ಕೃಷಿ ಯಾಂತ್ರೀಕರಣವನ್ನು ಉತ್ತೇಜಿಸುವುದು ಮತ್ತು ಕೃಷಿ ವಾರ್ತಾ ಸೇವೆಗಳು, ಸಿಬ್ಬಂದಿ ಮತ್ತು ರೈತರ ತರಬೇತಿಗಳು, ವಿವಿಧ ಬೆಳೆ ಪ್ರಾತ್ಯಕ್ಷಿಕೆಗಳು ಹಾಗೂ ರೈತರ ಅಧ್ಯಯನ ಪ್ರವಾಸಗಳ ಮೂಲಕ ಪ್ರಯೋಗಾಲಯದಿಂದ ರೈತರ ಭೂಮಿಗೆ ತಂತ್ರಜ್ಞಾನ ವರ್ಗಾವಣೆ.

ರಾಜ್ಯ ಕೃಷಿ ವಿಶ್ವವಿದ್ಯಾನಿಲಯಗಳು, ಭಾರತೀಯ ಕೃಷಿ ಅನುಸಂಧಾನ ಹಾಗೂ ಖಾಸಗಿ ಸಂಸ್ಥೆಗಳು ಅಭಿವೃದ್ಧಿ ಪಡಿಸಿರುವ ಹೊಸ ತಾಂತ್ರಿಕ ವಿಧಾನಗಳನ್ನು ರೈತ ಸಂಪರ್ಕ ಕೇಂದ್ರಗಳ ಮೂಲಕ ರೈತ ಸಮುದಾಯಕ್ಕೆ ವರ್ಗಾಯಿಸಲಾಗುತ್ತಿದೆ. ಗುಣಮಟ್ಟದ ತಯಾರಿಕಾ ಸಾಮಗ್ರಿಗಳ ಸರಬರಾಜನ್ನು ವೃದ್ಧಿಸುವ ಸಲುವಾಗಿ ಹಾಗೂ ತಯಾರಿಕಾ ಸಾಮಗ್ರಿಗಳ ಗುಣಮಟ್ಟವನ್ನು ಹೆಚ್ಚಿಸಲು ಪ್ರಸ್ತುತವಿರುವ ವಿಧಿವಿಧಾನಗಳನ್ನು ಅನುಷ್ಠಾನಗೊಳಿಸಲು, ವಿವಿಧ ತಯಾರಿಕಾ ಸಾಮಗ್ರಿಗಳ ಸರಬರಾಜು ಏಜೆನ್ಸಿಗಳ ನಡುವೆ ಸಮನ್ವಯತೆಯನ್ನು ಏರ್ಪಡಿಸುವುದು ರಾಜ್ಯ ಸರ್ಕಾರಕ್ಕೆ ಪ್ರಾಮುಖ್ಯತೆಯ ಅಂಶವಾಗಿರುತ್ತದೆ. ಹೆಚ್ಚಿನ ಕೃಷಿ ಉತ್ಪಾದನೆಗಾಗಿ, ಕೃಷಿ ವಿಸ್ತರಣಾ ಚಟುವಟಿಕೆಗಳು, ರೈತ ಸಮುದಾಯಕ್ಕೆ ಹೊಸ ತಾಂತ್ರಿಕ ವಿಧಾನಗಳನ್ನು ಅಳವಡಿಸಿಕೊಳ್ಳಲು ಬೇಕಾಗುವಂತಹ ತರಬೇತಿ ಸೌಲಭ್ಯಗಳನ್ನು ಒದಗಿಸುತ್ತದೆ. ಇದಲ್ಲದೆ, ಕೇಂದ್ರ ಪ್ರಾಯೋಜಿತ ಮತ್ತು ಕೇಂದ್ರೀಯ ಯೋಜನೆಗಳ ಮೂಲಕ ರಾಜ್ಯವು ಹೊಸ ಹೊಸ ಯೋಜನೆಗಳನ್ನು ಕೃಷಿಯ ಸರ್ವಾಂಗೀಣ ಅಭಿವೃದ್ಧಿಗಾಗಿ ಅನುಷ್ಠಾನಗೊಳಿಸುತ್ತಿದೆ.

ಕೃಷಿಗಣತಿ

ಕೃಷಿಗಣತಿಯು ಪ್ರತಿ ಐದುವರ್ಷಗಳಿಗೊಮ್ಮೆ ನಡೆಯುವ ಪ್ರಕ್ರಿಯೆಯಾಗಿದ್ದು, ಕೃಷಿ ಗಣತಿಯು ೧೯೭೦- ೧ ರಲ್ಲಿ ಪ್ರಾರಂಭವಾದಂದಿನಿಂದ ಸತತವಾಗಿ ನಡೆಯುತ್ತಿದೆ. ಇತ್ತೀಚಿನ ೨೦೧೦-೧೧ ರ ಕೃಷಿ ಗಣತಿಯೂ  ಸೇರಿದಂತೆ ಇದುವರೆಗೂ ಒಂಬತ್ತು ಕೃಷಿ ಗಣತಿಗಳಾಗಿವೆ. ಅದರಂತೆ ೨೦೦೫-೦೬ ನೇ ವರ್ಷವನ್ನು ಭೂ ದಾಖಲೆಗಳ ವರ್ಷವನ್ನಾಗಿ ಘೋಷಿಸಲಾಯಿತು. ಈ ಗಣತಿ ಸಂದರ್ಭದಲ್ಲಿ ಪ್ರಥಮ ಬಾರಿಗೆ ರೈತರು ಮತ್ತು ರೈತ ಮಹಿಳೆಯರಿಗಾಗಿ ಪ್ರತ್ಯೇಕವಾಗಿ ಭೂ ಹಿಡುವಳಿಗಳ ಸಂಖ್ಯೆ ಹಾಗೂ ವಿಸ್ತೀರ್ಣದ ಮಾಹಿತಿಯನ್ನು ಕಲೆ ಹಾಕಲಾಯಿತು.  ರಾಷ್ಟ್ರದ ಇತರ ರಾಜ್ಯಗಳಂತೆ, ಕರ್ನಾಟಕದಲ್ಲೂ ಸಹ ಸರಾಸರಿ ಭೂ ಹಿಡುವಳಿ ವಿಸ್ತೀರ್ಣ ಕಡಿತಗೊಳ್ಳುತ್ತಿದೆ. ೧೯೭೦-೭೧ ರಲ್ಲಿ ಸರಾಸರಿ ಭೂ ಹಿಡುವಳಿ ೩.೨೦ ಹೆಕ್ಟೇರ್ ದಿಂದ ೧೯೯೫-೯೬ ರಲ್ಲಿ ೧.೯೫ ಹೆಕ್ಟೇರ್‌ಗೆ ಮತ್ತು ೨೦೧೦-೧೧ ರಲ್ಲಿ ಇಳಿಮುಖವಾಗಿ ೧.೫೫ ಹೆ.ಗೆ ಬಂದಿದೆ.ಒಟ್ಟು ೭೮.೩೨ ಲಕ್ಷ ಭೂ ಹಿಡುವಳಿದಾರರ ಪೈಕಿ ಅತಿಸಣ್ಣ (ಶೇ. ೪೯.೧) ಹಾಗೂ ಸಣ್ಣ (ಶೇ.೨೭.೩) ಹಿಡುವಳಿದಾರರು ಶೇ.೭೬ ರಷ್ಟು ಇದ್ದು ಕೇವಲ ಶೇ.೪೦.೦೫ ಭೂ ಹಿಡುವಳಿಯನ್ನು ಹೊಂದಿರುತ್ತಾರೆ. ಅರೆ ಮಧ್ಯಮ ಹಿಡುವಳಿದಾರರು (ಶೇ. ೧೬), ಮಧ್ಯಮ ಹಿಡುವಳಿದಾರರು (ಶೇ. ೬.೫) ಹಾಗೂ ದೊಡ್ಡ ಹಿಡುವಳಿದಾರರು (ಶೇ. ೧) ಒಟ್ಟಾರೆ ಶೇ.೨೩.೨ ರಷ್ಟು ಇದ್ದು, ಇವರ ಹಿಡುವಳಿ ವಿಸ್ತೀರ್ಣ ಶೇ.೬೦ ರಷ್ಟು ಇರುತ್ತದೆ. ವಿವಿಧ ವರ್ಗದ ಹಿಡುವಳಿದಾರರು ಸರಾಸರಿ ಭೂ ಹಿಡುವಳಿಯ ವಿಸ್ತೀರ್ಣವನ್ನು ವಿಶ್ಲೇಷಿಸಿದರೆ, ಅತಿ ಸಣ್ಣ ಹಿಡುವಳಿದಾರರ ಸರಾಸರಿ ಕ್ಷೇತ್ರ ೧೯೯೫-೯೬ ರಲ್ಲಿ ೦.೪೮ ಹೆ.೨೦೦೫-೦೬ ರಲ್ಲಿ ೦.೫೫ ಹೆ. ಹಾಗೂ ೨೦೧೦-೧೧ ರಲ್ಲಿ ೦.೪೮ ಹೆ. ಗೆ ಇಳಿದಿದೆ. ಅದೇ ರೀತಿ ದೊಡ್ಡ ಹಿಡುವಳಿದಾರರ ಸರಾಸರಿ ಕ್ಷೇತ್ರ ೧೯೯೫-೯೬ ರಲ್ಲಿ ೧೫.೦೨ ಹೆ.ನಿಂದ ೨೦೧೦-೧೧ ರಲ್ಲಿ ೧೪.೭೧ ಹೆ.ಗೆ ಇಳಿದಿದೆ.

ಕೃಷಿ ಭೂಬಳಕೆ

೨೦೧೩-೧೪ನೇ ಸಾಲಿನ ಭೂ ಬಳಕೆ ಅಂಕಿ ಅಂಶಗಳ ಪ್ರಕಾರ, ರಾಜ್ಯದ ಒಟ್ಟು ಭೌಗೋಳಿಕ ವಿಸ್ತೀರ್ಣ ೧೯೦.೫ ಲಕ್ಷ ಹೆ.ಇದ್ದು, ಒಟ್ಟು ಸಾಗುವಳಿಯಾದ ವಿಸ್ತೀರ್ಣ ೧೨೨.೬೭ ಲಕ್ಷ. ಹೆ. ಇರುತ್ತದೆ. ಇದು ಒಟ್ಟು ಭೌಗೋಳಿಕ ವಿಸ್ತೀರ್ಣದ ಶೇ. ೬೪.೪ ರಷ್ಟು ಇರುತ್ತದೆ. ನಿವ್ವಳ ಸಾಗುವಳಿ ವಿಸ್ತೀರ್ಣ ಒಟ್ಟು ಭೌಗೋಳಿಕ ವಿಸ್ತೀರ್ಣಕ್ಕೆ ಶೇ.೫೨.೧ ರಷ್ಟು ಹಾಗೂ ಬಂಜರು ಭೂಮಿಯ ವಿಸ್ತೀರ್ಣ ಶೇ.೬.೩ ರಷ್ಟು ಇರುತ್ತದೆ. ಅರಣ್ಯ ಕ್ಷೇತ್ರ ಒಟ್ಟು ಕ್ಷೇತ್ರದ ಶೇ.೧೬.೧೩ ರಷ್ಟು ಇರುತ್ತದೆ. ಕೃಷಿಯೇತರ ಬಳಕೆಗೆ, ಸಾಗುವಳಿಗೆ ಯೋಗ್ಯವಿಲ್ಲದ ಹಾಗೂ ಸಾಗುವಳಿ ಯೋಗ್ಯವಾದ ಬಂಜರು ಪ್ರದೇಶದ ಪಾಲು ಒಟ್ಟು ಕ್ಷೇತ್ರದಲ್ಲಿ ಕ್ರಮವಾಗಿ ಶೇ.೭.೮೭, ೪.೧೧ ಮತ್ತು ೯.೦೬ ರಷ್ಟು ಇರುತ್ತದೆ. ಖಾಯಂ ಗೋಮಾಳ ಮತ್ತು ಇತರ ಹುಲ್ಲುಗಾವಲುಗಳ ಕ್ಷೇತ್ರ  ಶೇ.೬.೩ ರಷ್ಟು ಇದೆ. ಬೆಳೆ ಸಾಂದ್ರತೆ ನಿವ್ವಳ ಸಾಗುವಳಿ ವಿಸ್ತೀರ್ಣವನ್ನು ಒಂದಕ್ಕಿಂತ ಹೆಚ್ಚು ಬಾರಿ ಸಾಗುವಳಿ ಮಾಡುವ ಸಾಮರ್ಥ್ಯವನ್ನು ತೋರಿಸುತ್ತದೆ. ಇತ್ತೀಚಿನ ದಶಕದಲ್ಲಿ ರಾಜ್ಯದಲ್ಲಿ ಬೆಳೆ ಸಾಂದ್ರತೆ  ಕ್ರಮೇಣವಾಗಿ ಹೆಚ್ಚಾಗುತ್ತಿದೆ ಹಾಗೂ ೨೦೧೩-೧೪ ರಲ್ಲಿ ಶೇಕಡ ೧೨೪ ರಷ್ಟು ಇರುತ್ತದೆ.

 

ಮಣ್ಣು

ರಾಜ್ಯದಲ್ಲಿನ ವಿವಿಧ ಸ್ಥಳಗಳಲ್ಲಿನ ಮಣ್ಣು ತನ್ನದೇ ಆದ ಭೌತಿಕ ಹಾಗೂ ರಾಸಾಯನಿಕ ಗುಣಲಕ್ಷಣಗಳನ್ನು  ಹೊಂದಿದ್ದು ಪ್ರತ್ಯೇಕ ಸ್ಥಾನವನ್ನು ಕಾಯ್ದುಕೊಂಡಿವೆ. ವಿವಿಧ ರೀತಿಯ ಮಣ್ಣಿನಿಂದ ಆವೃತಗೊಂಡಿರುವ ಪ್ರದೇಶದ ವಿಸ್ತೀರ್ಣವು ಈ ರೀತಿ ಇದೆ.

 ೧) ಕಪ್ಪು ಮಣ್ಣು (ಶೇ. ೧.೩)

೨.) ಮಧ್ಯಮ ಕಪ್ಪು ಮಣ್ಣು (೨೦.೩೪%),

 ೩) ಆಳವಾದ ಕಪ್ಪು ಮಣ್ಣು (೧೦.೨೫%)

೪). ಕೆಂಪು ಮರಳು ಮಣ್ಣು (೨೯.೨೭%),

೫) ಕೆಂಪು ಮತ್ತು ಕಪ್ಪು ಮಿಶ್ರಿತ ಮಣ್ಣು (೧೧.೮೨%)

೬) ಕೆಂಪು ಗೋಡು ಮಣ್ಣು (೧೫.೪%),

೭)ಜಂಬಿಟ್ಟಿಗೆ ಮಣ್ಣು ಮತ್ತು ಜಂಬಿಟ್ಟಿಗೆ ಗರಸು ಮಣ್ಣು (೯.೩%) ಹಾಗೂ  

೮) ಕರಾವಳಿ ಮೆಕ್ಕಲು ಮಣ್ಣು (೨.೫೮%).

 

ಕೃಷಿ ಬೆಳೆ ಪದ್ಧತಿ

ಕೇಂದ್ರೀಯ ಯೋಜನಾ ಆಯೋಗದ ಕೃಷಿ ಹವಾಮಾನ ಕ್ಷೇತ್ರೀಯ ಯೋಜನೆಯ ಪ್ರಕಾರ ಕರ್ನಾಟಕ ರಾಜ್ಯ ೧೦ನೇ ವಲಯ ಮತ್ತು ೧೨ನೇ ವಲಯ ವಲಯಕ್ಕೆ ಒಳಪಟ್ಟಿರುತ್ತದೆ. ಮಳೆಹಂಚಿಕೆ ಮತ್ತು ಪ್ರಮಾಣ, ಮಣ್ಣಿನ ಗುಣಗಳ ಆಧಾರ, ಸಮುದ್ರ ಮಟ್ಟದಿಂದ ಮೇಲಿರುವ ಎಲಿವೇಷನ್‌ ಮತ್ತು ಪ್ರಮುಖ ಬೆಳೆಗಳ ಆಧಾರದ ಮೇಲೆ ರಾಜ್ಯವನ್ನು ೧೦ ಕೃಷಿವಲಯಗಳಾಗಿ ವಿಂಗಡಿಸಲಾಗಿದೆ.

೧. ಈಶಾನ್ಯ ಅರೆಮಲೆನಾಡು ವಲಯ,

೨. ಈಶಾನ್ಯ ಒಣವಲಯ,

೩. ಉತ್ತರ ಒಣವಲಯ.

೪. ಮಧ್ಯ ಒಣವಲಯ,

೫. ಪೂರ್ವ ಒಣವಲಯ.

೬. ದಕ್ಷಿಣ ಒಣವಲಯ.

೭. ದಕ್ಷಿಣ ಮಲೆನಾಡು ವಲಯ.

೮. ಉತ್ತರ ಅರೆಮಲೆನಾಡು ವಲಯ.

೯. ಗುಡ್ಡಗಾಡು ವಲಯ.

೧೦. ಕರಾವಳಿ ವಲಯ.

ವಿವಿಧ ಹವಾಮಾನದ ಪ್ರಯುಕ್ತ ರಾಜ್ಯದಲ್ಲಿ ಎಲ್ಲಾ ತರಹದ ಏಕದಳಧಾನ್ಯಗಳು, ದ್ವಿದಳಧಾನ್ಯಗಳು, ಎಣ್ಣೆಕಾಳುಗಳು ಹಾಗೂ ವಾಣಿಜ್ಯ ಬೆಳೆಗಳನ್ನು ವಿವಿಧ ಭಾಗಗಳಲ್ಲಿ ಬೆಳೆಯಲಾಗುತ್ತಿದೆ. ರಾಜ್ಯದಲ್ಲಿ ಬೆಳೆಗೆ ಉಪಯೋಗಿಸಲಾಗಿರುವ ಭೂಮಿಯ ವಿಸ್ತೀರ್ಣ ಮತ್ತಿತರ ವಿಷಯಗಳನ್ನು (ಗ್ರಾಮ, ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ) ಗ್ರಾಮ ಲೆಕ್ಕಾಧಿಕಾರಿಗಳು ಸರ್ವೆ ನಂಬರ್‌ಗಳ ಪ್ರಕಾರ ಆರ್.ಟಿ.ಸಿ (ಮೂಲ ಗೇಣಿ ಮತ್ತು ಹಕ್ಕು ಪತ್ರ)ಗಳಲ್ಲಿ ನಮೂದಿಸಿರುತ್ತಾರೆ. ಇವುಗಳ ಆಧಾರದಲ್ಲಿ ಗ್ರಾಮ, ತಾಲ್ಲೂಕು ಹಾಗೂ ಜಿಲ್ಲಾ  ಮಟ್ಟದಲ್ಲಿ ಕ್ರೋಢೀಕರಿಸಲಾಗುವುದು. ರಾಜ್ಯದಲ್ಲಿ ಬೆಳೆಯಲಾಗುವ ಬೆಳೆಗಳನ್ನು ಏಕದಳ ಧಾನ್ಯಗಳು, ದ್ವಿದಳ ಧಾನ್ಯಗಳು, ಎಣ್ಣೆ ಕಾಳುಗಳು ಹಾಗೂ ವಾಣಿಜ್ಯ ಬೆಳೆಗಳಾಗಿ ವಿಂಗಡಿಸಲಾಗುವುದು ಕರ್ನಾಟಕ ರಾಜ್ಯದಲ್ಲಿ ರೈತರು ಹೊಸ ತಾಂತ್ರಿಕತೆಯನ್ನು ಅಳವಡಿಸುವಲ್ಲಿ ಮುಂದಾಳತ್ವ ವಹಿಸಿ, ಮಾರುಕಟ್ಟೆ ವಿಶ್ಲೇಷಣೆ ಅನುಸಾರ ಬೆಳೆ ವೈವಿಧ್ಯತೆಯನ್ನು ಅಳವಡಿಸುವಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ೨೦೧೪-೧೫ ನೇ ಸಾಲಿನ ಅಂಕಿ ಸಂಖ್ಯೆಗಳನುಸಾರ ಕೃಷಿ ಬೆಳೆಗಳನ್ನು ೩ ಹಂಗಾಮುಗಳಲ್ಲಿ (ಮುಂಗಾರು,-೬೯.೨೨ ಲಕ್ಷ ಹೆ, ಹಿಂಗಾರು-೩೭.೬೪ ಲಕ್ಷ ಹೆ ಮತ್ತು ಬೇಸಿಗೆ ೫.೪೦ ಲಕ್ಷ ಹೆ) ಸುಮಾರು ೧೦೨ ಲಕ್ಷ ಹೆ. ವಿಸ್ತೀರ್ಣದಲ್ಲಿ ಬೆಳೆಯಲಾಗುತ್ತಿದೆ. ಒಟ್ಟು ಕೃಷಿಬೆಳೆಗಳ ವಿಸ್ತೀರ್ಣದಲ್ಲಿ ಏಕದಳ ಧಾನ್ಯಗಳು, ದ್ವಿದಳ ಧಾನ್ಯಗಳು, ಎಣ್ಣೆಕಾಳುಗಳು, ಹತ್ತಿ, ಕಬ್ಬು ಮತ್ತು ತಂಬಾಕು ಬೆಳೆಗಳ ವಿಸ್ತೀರ್ಣ ಕ್ರಮವಾಗಿ ಶೇ. ೪೮, ೨೩, ೩೦, ೮, ೬ ಹಾಗೂ ಒಂದರಷ್ಟಿರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಭತ್ತ, ಮುಸುಕಿನ ಜೋಳ, ತೊಗರಿ, ಕಡಲೆ, ಹತ್ತಿ ಮತ್ತು ಸೊಯಾ ಅವರೆ ವಿಸ್ತೀರ್ಣ ಹೆಚ್ಚಾದರೆ, ಸೂರ್ಯಕಾಂತಿ, ಜೋಳ, ರಾಗಿ ಇತ್ಯಾದಿ ಬೆಳೆಗಳ ವಿಸ್ತೀರ್ಣದಲ್ಲಿ ಇಳಿಕೆ ಕಂಡುಬಂದಿದೆ.

ರಾಜ್ಯದ ಕೃಷಿವಲಯದ ಶೇ. ೬೦ ರಿಂದ ೭೦ ಭಾಗದಷ್ಟು ಭೂ ವಿಸ್ತೀರ್ಣದ ಬೆಳೆಯ ಉತ್ಪಾದನೆಯು ಪೂರ್ಣವಾಗಿ ಅಥವಾ ಭಾಗಶಃ ಮಳೆಯಾಧಾರಿತವಾಗಿದೆ. ಆದ್ದರಿಂದ ರಾಜ್ಯದ ಕೃಷಿ ಚಟುವಟಿಕೆಗಳು ಹೆಚ್ಚಾಗಿ ಮಳೆಯನ್ನು ಅವಲಂಬಿಸಿರುತ್ತವೆ. ಬೀಳುವ ಮಳೆಯ ಪ್ರಮಾಣವು ಎಲ್ಲಾ ಕಾಲದಲ್ಲೂ ಹಾಗೂ ಎಲ್ಲಾ ಪ್ರದೇಶಗಳಲ್ಲೂ ಸಮನಾಗಿರುವುದಿಲ್ಲ. ಇದರಿಂದ ಮಳೆಯಾಶ್ರಿತ ಕೃಷಿಯಲ್ಲಿ ದೊರೆಯುವ ಇಳುವರಿಯು ತುಂಬಾ ಕಡಿಮೆಯಾಗಿರುತ್ತದೆ. ನೈಋತ್ಯ ಮುಂಗಾರು (ಜೂನ್‌ನಿಂದ ಸೆಪ್ಟೆಂಬರ್‌ವರೆಗೆ) ಹಾಗೂ ಈಶಾನ್ಯ ಮುಂಗಾರು (ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ) ಋತುಗಳಲ್ಲಿ ಬೀಳುವ ಮಳೆಯು ಮುಖ್ಯವಾದ ಮಳೆಯ ಕಾಲವಾಗಿರುತ್ತದೆ. ವಾರ್ಷಿಕ ಮಳೆಯ ಶೇ.೭೧ರಷ್ಟು ಮಳೆಯು ನೈಋತ್ಯ ಮುಂಗಾರಿನಲ್ಲಿ ಬೀಳುತ್ತದೆ.

 

ರಾಜ್ಯ ಮಣ್ಣು ಸಮೀಕ್ಷೆ

ಮಣ್ಣು ಪ್ರಕೃತಿದತ್ತವಾದ ಒಂದು ಕೊಡುಗೆಯಾಗಿದ್ದು, ಸಸ್ಯಗಳಿಗೆ ನೀರು ಮತ್ತು ಪೋಷಾಕಾಂಶಗಳನ್ನು  ಒದಗಿಸುವ ಆಧಾರ ಸಂಪನ್ಮೂಲವಾಗಿದೆ. ಅಲ್ಲದೆ ಸಸ್ಯದ ಬೇರುಗಳು ಅಭಿವೃದ್ಧಿಯಾಗಲು ಉತ್ತಮ ವಾತಾವರಣವನ್ನು ಕಲ್ಪಿಸುತ್ತದೆ. ಆದುದರಿಂದ ಸೂಕ್ತ ರೀತಿಯಲ್ಲಿ ಮಣ್ಣನ್ನು ಬಳಕೆ ಮಾಡಲು ಅದರ ಬಗ್ಗೆ  ಜ್ಞಾನವನ್ನು ಪಡೆಯುವುದು ಅವಶ್ಯಕವಾಗಿದೆ. ಸೂಕ್ತ ರೀತಿಯಲ್ಲಿ ಯೋಜಿಸಿ ಮಣ್ಣು ಸಮೀಕ್ಷೆಯನ್ನು ಕೈಗೊಳ್ಳುವುದರಿಂದ ಮಣ್ಣಿನ ಗುಣಧರ್ಮಗಳಾದ ಕಣಗಾತ್ರ, ರಚನೆ, ಮಣ್ಣಿನ ರಚನೆ, ನೀರು ಇಂಗುವಿಕೆ, ಆಳ, ಮೇಲ್ಮೈ ಲಕ್ಷಣ, ಸಮಸ್ಯಾತ್ಮಕ ಸವಳು ಮತ್ತು ಕ್ಷಾರ ಮುಂತಾದವುಗಳ ಬಗ್ಗೆ ಮಾಹಿತಿ ಪಡೆದು ಅದನ್ನು ನಿರ್ವಹಿಸಲು ಅನುಕೂಲವಾಗುವುದು. ಮಣ್ಣಿನ ಪಾರ್ಶ್ವದೃಶ್ಯಗಳ ಗುಣಧರ್ಮಗಳನ್ನು ಆಧರಿಸಿ ಮಣ್ಣುಗಳ ಶ್ರೇಣಿ, ವಿಧ ಹಾಗೂ ಹಂತಗಳನ್ನಾಗಿ ವರ್ಗೀಕರಿಸಿ ನಿರ್ದಿಷ್ಟ ಬಳಕೆ ಹಾಗೂ ನಿರ್ವಹಣೆಗೆ ವಿಶ್ಲೇಷಿಸಿ, ವರ್ಗೀಕರಿಸಿ ಉಪಯೋಗಿಸಬಹುದು. ಸುಸ್ಥಿರ ಕೃಷಿ ಉತ್ಪಾದನೆ ಹಾಗೂ ಸಮಗ್ರ ಕೃಷಿಗಾಗಿ ಮಣ್ಣು ಸಂಪನ್ಮೂಲಗಳ ಉತ್ತಮ ಮಾಹಿತಿಯನ್ನು ಪಡೆಯಲು ಮಣ್ಣು ಸಮೀಕ್ಷೆಯು ಅನಿವಾರ್ಯ ಮತ್ತು  ಅವಶ್ಯಕವಾಗಿದೆ. ಈ ಉದ್ದೇಶಕ್ಕೆ ಬೆಂಗಳೂರು ಹಾಗೂ ಧಾರವಾಡದಲ್ಲಿ ಒಂದೊಂದು ಘಟಕವು ಕಾರ್ಯನಿರ್ವಹಿಸುತ್ತಿದೆ.

ಉದ್ದೇಶಗಳು:

ಮಣ್ಣಿನ ಉತ್ಪತ್ತಿ, ಅಭಿವೃದ್ಧಿ, ವರ್ಗೀಕರಣ ಹಾಗೂ ನಾಮಕರಣ ಮುಂತಾದವುಗಳನ್ನು ತಿಳಿದುಕೊಳ್ಳುವುದು;

ಮಣ್ಣು ಸಮೀಕ್ಷೆಯ ಮಾಹಿತಿಯನ್ನು ವ್ಯಾಖ್ಯಾನ ಮಾಡಿ ಸೂಕ್ತ ಭೂಬಳಕೆಯನ್ನು ಯೋಜಿಸುವುದು;

ಮಣ್ಣು ಸಮೀಕ್ಷೆಯ ಮಾಹಿತಿಯನ್ನು ಉಪಯೋಗಿಸಿ ಕೊಂಡು ನೀರಾವರಿಗಾಗಿ ಭೂ ಬಳಕೆ ಮತ್ತು ನಿರ್ವಹಣೆ ಯೋಜನೆಗಳನ್ನು ತಯಾರು ಮಾಡುವುದು;

ಮಣ್ಣಿನ ಗುಣ ಧರ್ಮಗಳನ್ನು ಅರ್ಥೈಸಿ ಕೃಷಿಗೆ ಸೂಕ್ತ ಭೂಬಳಕೆ ಹಾಗೂ ಬೆಳೆ ಹೊಂದಾಣಿಕೆ ಯೋಜಿಸಿ ನಿರ್ವಹಿಸುವುದು.

 

ಮುಖ್ಯ ಕಾರ್ಯ ಚಟುವಟಿಕೆಗಳು

ಮಧ್ಯಮ ಮತ್ತು ಸಣ್ಣ ನೀರಾವರಿ ಯೋಜನೆಗಳ ಅಚ್ಚುಕಟ್ಟು ಪ್ರದೇಶದಲ್ಲಿ ನೀರಾವರಿ ಪೂರ್ವ ಮಣ್ಣು  ಸಮೀಕ್ಷೆ ಕೈಗೊಂಡು ನೀರಾವರಿ ಸೂಕ್ತತೆಯನ್ನು ನೀಡುವುದು; ವಿಶ್ವವಿದ್ಯಾಲಯಗಳ ಮತ್ತು ಇಲಾಖಾ ಕ್ಷೇತ್ರಗಳಲ್ಲಿ ಮಣ್ಣು  ಸಮೀಕ್ಷೆ ಕೈಗೊಂಡು ಯೋಜನೆಗಳಿಗೆ ಉಪಯುಕ್ತ ಮಣ್ಣಿನ ವರ್ಗೀಕರಣ ನೀಡುವುದು; ಮಣ್ಣು ವಿಶ್ಲೇಷಣೆ ಕೈಗೊಂಡು ಸಮೀಕ್ಷೆ ವರದಿಗಳನ್ನು ಬಿಡುಗಡೆ ಮಾಡುವುದು.

 

ಬೀಜೋತ್ಪಾದನೆ ಮತ್ತು ವಿತರಣೆ

ಎಲ್ಲಾ ಬೆಳೆಗಳ ಎಲ್ಲಾ ತಳಿಗಳ ತಳಿವರ್ಧಕ ಬೀಜಗಳನ್ನು ಒದಗಿಸುವ ಗುರುತರ ಜವಾಬ್ದಾರಿಯು ರಾಜ್ಯದ ಕೃಷಿ ವಿಶ್ವವಿದ್ಯಾನಿಲಯ ಗಳದ್ದಾಗಿರುತ್ತದೆ. ರಾಜ್ಯದಲ್ಲಿ ಒಟ್ಟು ೭೩ ಬೀಜೋತ್ಪಾದನಾ ಘಟಕಗಳು ಇದ್ದವು. ಇಲಾಖಾ ತಾಲೂಕುಗಳಲ್ಲಿ ಉತ್ಪಾದನೆ ಮಾಡಲಾಗುತ್ತಿದ್ದ ಮೂಲ ಬೀಜಗಳ ಬಿತ್ತನೆಗಳನ್ನು ಕರ್ನಾಟಕ ರಾಜ್ಯ ಬೀಜ ನಿಗಮಕ್ಕೆ ಮುಂದಿನ ಹಂತದ ಬೀಜೋತ್ಪಾದನೆ ಹಾಗೂ ಸಂಸ್ಕರಣೆಗಾಗಿ ನೀಡಲಾಗುತ್ತಿತ್ತು. ಇದರ ನಡುವೆ ಖಾಸಗಿ ಬೀಜೋತ್ಪಾದನೆಯ ಉದ್ಯಮದ ಅವಶ್ಯಕತೆಯನ್ನು ಮನಗಂಡು ಅವುಗಳಿಗೆ ಅವಶ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಅನೇಕ ಬಹುರಾಷ್ಟ್ರೀಯ ಕಂಪನಿಗಳು ಬೀಜೋತ್ಪಾದನಾ ಉದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿವೆ. ರಾಜ್ಯದಲ್ಲಿ ಬೆಂಗಳೂರು ಹಾಗೂ ಧಾರವಾಡ ನಗರಗಳಲ್ಲಿ ಬೀಜ ಪರೀಕ್ಷಾ ಕೇಂದ್ರಗಳು ಸ್ಥಾಪನೆಗೊಂಡಿವೆ. ಇದಲ್ಲದೆ ಬೆಂಗಳೂರಿನ ಲಾಲ್‌ಬಾಗ್ ಉದ್ಯಾನವನದಲ್ಲಿ ತೋಟಗಾರಿಕಾ ಇಲಾಖೆಯ ಆಶ್ರಯದಲ್ಲಿ ಮತ್ತೊಂದು ಬೀಜ ಪರೀಕ್ಷಾ ಕೇಂದ್ರವು ಕಾರ್ಯ ನಿರ್ವಹಿಸುತ್ತಿವೆ.

ಖಾಸಗಿ ಸಂಸ್ಥೆಗಳಿಗೆ ತಳಿವರ್ಧಕ ಬೀಜಗಳನ್ನು ಪೂರೈಸಲು ಸೀಡ್ ಅಸೋಸಿಯೇಷನ್‌ ಆಫ್ ಇಂಡಿಯಾವನ್ನು ನೋಡಲ್ ಸಂಸ್ಥೆಯಾಗಿ ನೇಮಿಸಲಾಗಿದೆ. ಬೀಜೋತ್ಪಾದನೆ ಮತ್ತು ವಿತರಣಾ ಸಂಸ್ಥೆಗಳು ಬೀಜ ಖರೀದಿ ವೆಚ್ಚ, ಉತ್ಪಾದನಾವೆಚ್ಚ, ಪ್ರಮಾಣೀಕರಣ, ಸಂಸ್ಕರಣಾ, ಪೊಟ್ಟಣೀಕರಣ ಹಾಗೂ ಸಾದಿಲ್ವಾರು ವೆಚ್ಚಗಳನ್ನು ಗಣನೆಗೆ ತೆಗೆದುಕೊಂಡು ಬೀಜ ಖರೀದಿ ಮತ್ತು ಮಾರಾಟ ಬೆಲೆಯನ್ನು ನಿಗದಿಪಡಿಸುತ್ತವೆ.

ಬೀಜ ಅಧಿನಿಯಮ ಜಾರಿಗೊಳಿಸುವಿಕೆ

ರೈತರಿಗೆ ಗುಣಮಟ್ಟ ಬೀಜಗಳನ್ನು ಸರಬರಾಜು ಮಾಡಲು ಕೇಂದ್ರ ಸರ್ಕಾರ ರೂಪಿಸಿದ ಬೀಜ ಅಧಿನಿಯಮ ೧೯೬೬, ಬೀಜ ನಿಯಮಾವಳಿ ೧೯೬೮ ರ ಮುಖ್ಯ ಉದ್ದೇಶ ಬೀಜದ ಗುಣಮಟ್ಟ ಕಾಪಾಡುವ ಬಗ್ಗೆ ಇರುತ್ತದೆ. ಸದರಿ ಕಾಯಿದೆಯಡಿಯಲ್ಲಿ ಪ್ರಕಟಗೊಂಡ ೧೨೦೭ ಬೀಜ ಪರಿವೀಕ್ಷಕರು ಮಾರಾಟಕ್ಕಿಟ್ಟ ಬೀಜಗಳ ಮಾದರಿಗಳನ್ನು ತೆಗೆದು ಪ್ರಕಟಿತ ಬೀಜ ಪರೀಕ್ಷಾಪ್ರಯೋಗಾಲಯಗಳಲ್ಲಿ ಪರೀಕ್ಷೆಗೆ ಒಳಪಡಿಸಿ ಪರೀಕ್ಷೆಯಲ್ಲಿ ಮೊಳಕೆ ಪ್ರಮಾಣ ಕಡಿಮೆ ಇದ್ದ ಮಾದರಿಗಳಿಗೆ ಸಂಬಂಧಪಟ್ಟಂತೆ ತಪ್ಪಿತಸ್ಥ ಮಾರಾಟಗಾರರ ವಿರುದ್ಧ ಕ್ರಮ ಜರುಗಿಸಿರುತ್ತಾರೆ. ಬೀಜ (ನಿಯಂತ್ರಣ) ಆದೇಶ, ೧೯೮೩ರ ಪ್ರಮುಖ ಉದ್ದೇಶ ಮೇಲೆ ತಿಳಿಸಿರುವ ಬೀಜಗಳ ಗುಣಮಟ್ಟ ಕಾಪಾಡುವುದರ ಜೊತೆಯಲ್ಲಿ ಬೀಜದ ವ್ಯವಹಾರವನ್ನು ನಿಯಂತ್ರಿಸುವುದಾಗಿರುತ್ತದೆ. ಸದರಿ ಆದೇಶದಡಿಯಲ್ಲಿ ಯಾವುದೇ ವ್ಯಕ್ತಿಯು ಬೀಜ ಮಾರಾಟ ಪರವಾನಗಿ ಪಡೆಯದೆ ಹಾಗೂ ಪರವಾನಗಿಯ ನಿಯಮ ಮತ್ತು ಷರತ್ತುಗಳಿಗೆ ವಿರುದ್ಧವಾಗಿ ಬೀಜದ ಮಾರಾಟ ರಫ್ತು ಹಾಗೂ ಆಮದು ಮಾಡಲು ಅವಕಾಶವಿರುವುದಿಲ್ಲ.

 

ಗೊಬ್ಬರ ಹಾಗೂ ರಸಗೊಬ್ಬರಗಳು

ರಸಗೊಬ್ಬರಗಳ ಬೆಲೆಯು ಏರಿಕೆಯಾಗುತ್ತಿರುವ ಈ ದಿನಗಳಲ್ಲಿ ಸಾವಯವ ಗೊಬ್ಬರಗಳ ಉತ್ಪಾದನೆ ಹಾಗೂ ಬಳಕೆಯು ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಜೈವಿಕ ಗೊಬ್ಬರಗಳಾದ ರೈಜೋಬಿಯಂ, ನೀಲಿ- ಸಿರುಪಾಚಿ, ಅಜೆಟೋಬ್ಯಾಕ್ಟರ್ ಮತ್ತು ಅಜೋಸ್ಪೈರಿಲಂ ಬಗ್ಗೆ ರೈತರಲ್ಲಿ ಹೆಚ್ಚಿನ ಅರಿವು ಹಾಗೂ ಒಲವನ್ನು ಬೆಳೆಸಲಾಗುತ್ತಿದೆ. ವೈಜ್ಞಾನಿಕವಾಗಿ ಗ್ರಾಮೀಣ ಹಂತದಲ್ಲಿ ಕಾಂಪೋಸ್ಟ್ ಗೊಬ್ಬರವನ್ನು ಸುಧಾರಿತ ಮಾದರಿಯಲ್ಲಿ ತಯಾರಿಸುವಂತೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಇದಕ್ಕಾಗಿ ಗ್ರಾಮೀಣ ಜನರಿಗೆ ಅಗತ್ಯವಾದ ಮಾಹಿತಿಗಳನ್ನು ಒದಗಿಸಲಾಗುತ್ತದೆ ನಗರ ಪ್ರದೇಶಗಳಲ್ಲಿ ಸ್ಥಳೀಯ ಸಂಸ್ಥೆಗಳು ನಗರದ ತ್ಯಾಜ್ಯ ವಸ್ತುಗಳನ್ನು ಬಳಸಿ ಕಾಂಪೋಸ್ಟ್  ತಯಾರಿಕೆಯಲ್ಲಿ ತೊಡಗಿಸಿಕೊಂಡಿವೆ.

 

ರಸಗೊಬ್ಬರ ನಿಯಂತ್ರಣ ಪ್ರಯೋಗಾಲಯಗಳು

ವಿವಿಧ ಕಡೆ ತಯಾರಾದ ರಸಗೊಬ್ಬರವನ್ನು ಉತ್ಪಾದಕರು ಹಾಗೂ ಮಾರಾಟಗಾರರ ಮೂಲಕ ರಾಜ್ಯದಲ್ಲಿ ಮಾರಾಟ ಮಾಡಲಾಗುತ್ತಿದೆ. ಹೀಗೆ ಮಾರಾಟಕ್ಕಾಗಿ ಬಿಡುಗಡೆ ಮಾಡಿದ ರಸಗೊಬ್ಬರ ನಿರ್ದಿಷ್ಟ ಗುಣವನ್ನು ಹೊಂದಿದೆಯೇ ಇಲ್ಲವೇ ಎಂಬುದನ್ನು ತಿಳಿಯುವುದು ಕೃಷಿ ಇಲಾಖೆಯ ಆದ್ಯ ಕರ್ತವ್ಯ. ಈ ಗೊಬ್ಬರದ ಗುಣ ನಿಯಂತ್ರಣ ಕಾಯ್ದೆ ಅನುಸಾರವಾಗಿ ಕೃಷಿ ಇಲಾಖೆಯ ಅಧಿಕಾರಿಗಳನ್ನು ರಸಗೊಬ್ಬರ ಪರಿವೀಕ್ಷಕರುಗಳಾಗಿ ನೇಮಿಸಲಾಗಿದೆ. ಇವರು ರಸಗೊಬ್ಬರದ ಮಾದರಿಗಳನ್ನು ತೆಗೆದು ಪ್ರಯೋಗ ಶಾಲೆಗಳಿಗೆ ಕಳುಹಿಸಿಕೊಡುತ್ತಾರೆ. ರಸಗೊಬ್ಬರದ ಗುಣಮಟ್ಟವನ್ನು ಪ್ರಯೋಗ ಶಾಲೆಯಲ್ಲಿ ವಿಶ್ಲೇಷಿಸಲಾಗುತ್ತದೆ. ಕಳಪೆ ಗುಣಮಟ್ಟದ್ದೆಂದು ಕಂಡುಬರುವ ಮಾದರಿಗಳ ಬಗ್ಗೆ ರಸಗೊಬ್ಬರ ಪರಿವೀಕ್ಷಕರು ರಸಗೊಬ್ಬರ ನಿಯಂತ್ರಣ ಕಾಯ್ದೆಯಂತೆ ಕ್ರಮ ಕೈಗೊಳ್ಳುತ್ತಾರೆ. ಕರ್ನಾಟಕ ರಾಜ್ಯದಲ್ಲಿ ಈಗ ಬೆಂಗಳೂರು, ಬೆಳ್ತಂಗಡಿ, ಗಂಗಾವತಿ ಮತ್ತು ಧಾರವಾಡಗಳಲ್ಲಿ ಪ್ರಯೋಗ ಶಾಲೆಗಳಿವೆ. ಇವುಗಳ ವಾರ್ಷಿಕ ರಸಗೊಬ್ಬರ ವಿಶ್ಲೇಷಣೆ ಗುರಿ ಒಟ್ಟು ೬,೯೬೦ ಮಾದರಿಗಳು.

 

ಸಸ್ಯ ಸಂರಕ್ಷಣೆ

ಕೃಷಿ ಇಲಾಖೆಯು ಸಸ್ಯ ಸಂರಕ್ಷಣಾ ಉಪಕರಣಗಳನ್ನು ಹಾಗೂ ಔಷಧಿಗಳನ್ನು ರಿಯಾಯಿತಿ ದರದಲ್ಲಿ ಒದಗಿಸುವುದರ ಜೊತೆಗೆ ಇತರೆ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಸ್ಯ ಸಂರಕ್ಷಣಾ ಕಾರ್ಯದ ಬಗ್ಗೆ ರೈತರಲ್ಲಿ ಹೆಚ್ಚಿನ ಅರಿವು ಮೂಡಿಸಲಾಗುತ್ತಿದೆ.

 

ಕೀಟನಾಶಕ ನಿಯಂತ್ರಣ ಪ್ರಯೋಗಾಲಯಗಳು

ರಾಜ್ಯದ ರೈತರಿಗೆ ಉತ್ತಮ ಗುಣಮಟ್ಟದ ಪೀಡೆ ನಾಶಕಗಳನ್ನು ಪೂರೈಕೆ ಮಾಡಿಸುವ ಉದ್ದೇಶದಿಂದ ಕೀಟನಾಶಕ ನಿಯಂತ್ರಣ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿರುತ್ತದೆ. ಬೆಂಗಳೂರು, ಬಳ್ಳಾರಿ, ಧಾರವಾಡ, ಕಲಬುರಗಿ ಮತ್ತು ಶಿವಮೊಗ್ಗಗಳಲ್ಲಿ ಒಟ್ಟು ಐದು ಕೀಟನಾಶಕ ನಿಯಂತ್ರಣ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದ್ದು, ವಾರ್ಷಿಕ ಒಟ್ಟು ೬,೦೦೦ ಮಾದರಿಗಳನ್ನು ವಿಶ್ಲೇಷಿಸುವ ಸಾಮರ್ಥ್ಯ ಹೊಂದಲಾಗಿದೆ. ತಾಲೂಕು, ಜಿಲ್ಲೆ ಹಾಗೂ ರಾಜ್ಯ ಮಟ್ಟದ ಕೀಟನಾಶಕ ಪರಿವೀಕ್ಷಕರುಗಳು  ತಮ್ಮ ವ್ಯಾಪ್ತಿಯಲ್ಲಿ ಬರುವ ಕೀಟನಾಶಕ ಮಾರಾಟ ಮಳಿಗೆಯಲ್ಲಿ ಹಾಗೂ ತಯಾರಿಕ ಘಟಕಗಳಿಂದ ಮಾದರಿಗಳನ್ನು ತೆಗೆದು ವಿಶ್ಲೇಷಣೆಗಾ ಸಂಬಂಧಪಟ್ಟ ಪ್ರಯೋಗಶಾಲೆಗಳಿಗೆ ಕಳುಹಿಸುತ್ತಾರೆ.

ಜೈವಿಕ ನಿಯಂತ್ರಣ/ಪರತಂತ್ರ ಜೀವಿ ಪ್ರಯೋಗಾಲಯಗಳು

ರಾಜ್ಯದಲ್ಲಿ ಮಂಡ್ಯ, ಬೈಲಹೊಂಗಲ, ಗಂಗಾವತಿಗಳಲ್ಲಿ ಪರತಂತ್ರ ಜೀವಿ ಪ್ರಯೋಗಾಲಯಗಳು ಮತ್ತು ಕಲಬುರಗಿ, ಧಾರವಾಡ ಮತ್ತು ದಾವಣಗೆರೆಗಳಲ್ಲಿ ಜೈವಿಕ ನಿಯಂತ್ರಣ ಪ್ರಯೋಗಾಲಯಗಳು ಕಾರ್ಯನಿರ್ವಹಿಸುತ್ತಿದ್ದು, ಈ ಪ್ರಯೋಗಾಲಯಗಳಲ್ಲಿ ಕಬ್ಬಿನ ಕಾಂಡ ಕೊರೆಯುವ ಹುಳು, ಹತ್ತಿ ಕಾಯಿ ಕೊರಕ ಮತ್ತು ತೊಗರಿ ಕಾಯಿ ಕೊರೆಯುವ ಹುಳುವಿನ ಹತೋಟಿಗೆ ಟ್ರೈಕೋಗ್ರಾಮ ಎಂಬ ಪರತಂತ್ರ ಜೀವಿ ಮೊಟ್ಟೆಗಳನ್ನು ಉತ್ಪಾದನೆ ಮಾಡಲಾಗುತ್ತಿದೆ. ಈ ಪರತಂತ್ರ ಜೀವಿಯನ್ನು ಮಂಡ್ಯ, ಬೆಳಗಾವಿ, ಕೊಪ್ಪಳ, ವಿಜಯಪುರ, ಬಾಗಲಕೋಟೆ, ರಾಯಚೂರು, ಮೈಸೂರು, ಬಳ್ಳಾರಿ, ಧಾರವಾಡ, ದಾವಣಗೆರೆ ಹಾಗೂ ಇತರೆ ಜಿಲ್ಲೆಗಳಲ್ಲಿ ರೈತರಿಗೆ ಅತ್ಯಂತ ಕನಿಷ್ಠ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ರೈತಮಿತ್ರ ಜೈವಿಕ ನಿಯಂತ್ರಣ ಕಾರಕಗಳನ್ನು ಬಳಸಲು ಹಾಗೂ ಅವುಗಳ ಉತ್ಪಾದನೆಯನ್ನು ಕೈಗೊಳ್ಳುವಂತೆ ರೈತರನ್ನು ಪ್ರೇರೇಪಿಸಿ ಆಸಕ್ತ ರೈತರಿಗೆ ತರಬೇತಿಯನ್ನು ನೀಡಲಾಗುತ್ತಿದೆ.

ಅಲ್ಲದೆ, ಇಲಾಖೆಯ ವಿವಿಧ ಕಾರ್ಯಕ್ರಮಗಳಡಿಯಲ್ಲಿ ರೈತರಿಗೆ ವಿತರಿಸುವ ಜೈವಿಕ ಪೀಡೆನಾಶಕಗಳನ್ನು ಗುಣ ವಿಶ್ಲೇಷಣೆ ಪರೀಕ್ಷೆಗೊಳಪಡಿಸಲು ಬೈಲಹೊಂಗಲ ಮತ್ತು ಮಂಡ್ಯ ಪರತಂತ್ರ ಜೀವಿ ಪ್ರಯೋಗಾಲಯಗಳಲ್ಲಿ ಉಪಕರಣಗಳು ಮತ್ತು ಇನ್ನಿತರೆ ಸೌಲಭ್ಯಗಳನ್ನು ಒದಗಿಸಿಕೊಳ್ಳಲಾಗಿದ್ದು ಪ್ರಸ್ತುತ ವರ್ಷದಿಂದ ಗುಣ ವಿಶ್ಲೇಷಣೆ ಕಾರ್ಯ ಆರಂಭಿಸಲು ಉದ್ದೇಶಿಸಲಾಗಿದೆ.

 

ಸಸ್ಯ ನೈರ್ಮಲ್ಯ ಸಮರ್ಥನಾ ಪತ್ರಗಳು

ಹೊರ ದೇಶಗಳ ರಫ್ತು ಉದ್ದೇಶಿತ ಸಸ್ಯ ಮತ್ತು ಸಸ್ಯೋತ್ಪನ್ನಗಳನ್ನು ಅವುಗಳ ಬೆಳವಣಿಗೆ ಹಂತದಲ್ಲಿ ಬೆಳೆ ತಾಕುಗಳಲ್ಲಿ ಕೀಟ ರೋಗಗಳಿಂದ ಮುಕ್ತವಾಗಿರುವ ಬಗ್ಗೆ ತಪಾಸಣೆ ಕೈಗೊಳ್ಳುವುದರಿಂದ ಮೊದಲುಗೊಂಡು ಉತ್ಪನ್ನದ ಸಂಸ್ಕರಣೆಯ ಹಂತದಲ್ಲಿ ತದನಂತರ ಲಾಟ್‌ಗಳಲ್ಲಿ ಮಾದರಿಗಳನ್ನು ಸಂಗ್ರಹಿಸಿ, ಪರೀಕ್ಷೆಗೊಳಪಡಿಸಿ, ಕೀಟ ರೋಗಗಳಿಂದ ಮುಕ್ತವಾಗಿರುವ ಬಗ್ಗೆ ಧೃಡೀಕರಣದ ನಂತರ ಅಂತಹ ರಫ್ತು ಸಸ್ಯೋತ್ಪನ್ನಗಳಿಗೆ ಸಸ್ಯ ನೈರ್ಮಲ್ಯ ಪ್ರಮಾಣ ಪತ್ರ ನೀಡಲಾಗುವುದು. ರಫ್ತು ಉದ್ದೇಶಿತ ಸಸ್ಯ ಮತ್ತು ಸಸ್ಯೋತ್ಪನ್ನಗಳ ಪೈಕಿ ಕಾಫಿ ಬೀಜ, ಗುಲಾಬಿ ಹಾಗೂ ಇತರ ತುಂಡು ಹೂಗಳು, ಹಣ್ಣು ಮತ್ತು ತರಕಾರಿ ಬೀಜಗಳು. ಅಂಗಾಂಶ ಕೃಷಿ ಸಸ್ಯಗಳು, ತೋಟಗಾರಿಕಾ ಅಲಂಕಾರಿಕ ಸಸ್ಯಗಳು, ಹಣ್ಣು ಮತ್ತು ತರಕಾರಿಗಳು ಇತ್ಯಾದಿ ಉತ್ಪನ್ನಗಳಿಗೆ ಸಸ್ಯ ನೈರ್ಮಲ್ಯ ಪ್ರಮಾಣ ಪತ್ರವನ್ನು ನೀಡಲಾಗುತ್ತಿದೆ.

ಕೃಷಿ ಅಭಿವೃದ್ಧಿ ಕಾರ್ಯಕ್ರಮಗಳು

ಕೃಷಿ ಇಲಾಖೆಯು ರಾಜ್ಯದಲ್ಲಿ ಕೃಷಿ ಅಭಿವೃದ್ಧಿಗಾಗಿ ವಿವಿಧ ರೀತಿಯ ನಿಯಮ ಹಾಗೂ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಇಲಾಖೆಯು ಮುಖ್ಯವಾದ ಬೆಳೆಗಳ ಉತ್ಪಾದನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಆಯ್ದ ಜಿಲ್ಲೆಗಳಲ್ಲಿ ಹೆಚ್ಚು ಒತ್ತು ನೀಡುವ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ.

ರೈತ ಮಿತ್ರ ಯೋಜನೆ, ೨೦೦೦-೦೧:

ಯೋಜನೆ ಉದ್ದೇಶ

ಕೃಷಿ ವಿಸ್ತರಣಾ ಯೋಜನೆಯನ್ನು ೧೯೭೭-೭೮ ರಲ್ಲಿ ಪ್ರಾರಂಭಿಸಿದ್ದು, ನಂತರ ರಾಷ್ಟ್ರೀಯ ಕೃಷಿ ವಿಸ್ತರಣಾ ಯೋಜನೆಯಾಗಿ ಮುಂದುವರೆಸಲಾಗಿತ್ತು. ತದನಂತರ ರಾಷ್ಟ್ರೀಯ ಕೃಷಿ ವಿಸ್ತರಣಾ ಯೋಜನೆಯನ್ನು ಸಂಮಿಳಿತಗೊಂಡ ಕೃಷಿ ನಿರ್ದೇಶನಾಲಯ ಯೋಜನೆಯನ್ನು ೨೦೦೦-೦೧ ನೇ ಸಾಲಿನಿಂದ ಮುಂದುವರೆಸಲಾಗುತ್ತಿದೆ. ಕೃಷಿ ತಂತ್ರಜ್ಞಾನ ಹಾಗೂ ಕೌಶಲ್ಯ ಬೋಧನೆಯಲ್ಲಿ ಸಕ್ಷಮತೆಯನ್ನು ಹಾಗೂ ಆಧುನಿಕ ತಂತ್ರಜ್ಞಾನಗಳಲ್ಲಿ ವಿಸ್ತರಣಾ ಕಾರ್ಯಕರ್ತರಿಗೆ ಮತ್ತು ಅಧಿಕಾರಿಗಳಿಗೆ ಪರಿಣತಿ ಗಳಿಸಿಕೊಳ್ಳಲು ಜಿಲ್ಲಾ ಮಟ್ಟದಲ್ಲಿ ದ್ವೈಮಾಸಿಕ ಕಾರ್ಯಾಗಾರ (ತಾಂತ್ರಿಕ ಕೃಷಿ ಕಾರ್ಯಾಗಾರ) ಮತ್ತು ತಾಲೂಕು ಮಟ್ಟದಲ್ಲಿ ಪಾಕ್ಷಿಕ ತರಬೇತಿ ಕಾರ್ಯಕ್ರಮಗಳನ್ನು ಏರ್ಪಡಿಸುವುದು ಈ ಯೋಜನೆಯ ಉದ್ದೇಶ. ಈ ಯೋಜನೆಯ ಅನುದಾನವನ್ನು ದ್ವೈಮಾಸಿಕ ಕಾರ್ಯಾಗಾರ (ತಾಂತ್ರಿಕ ಕೃಷಿ ಕಾರ್ಯಾಗಾರ) ಮತ್ತು ತಾಲೂಕು ಮಟ್ಟದಲ್ಲಿ ಪಾಕ್ಷಿಕ ತರಬೇತಿ ಕಾರ್ಯಾಗಾರಗಳಿಗೆ ಬೇಕಾದ ಅವಶ್ಯ ಸಾಧನಾ-ಸಾಮಗ್ರಿಗಳನ್ನು, ಕೌಶಲ್ಯ ಪ್ರದರ್ಶನಕ್ಕೆ ಬೇಕಾದ ವಸ್ತುಗಳನ್ನು ಖರೀದಿಸಲು, ತಾಂತ್ರಿಕ ಸಂದೇಶಗಳನ್ನು ಮುದ್ರಿಸಿ ಹಾಗೂ ವಿಶ್ವವಿದ್ಯಾಲಯದ ಪರಿಣತರಿಗೆ ಬೇಕಾದ ದೃಶ್ಯ ಶ್ರವಣ ಸಾಧನಗಳನ್ನು ತಯಾರಿಸಲು ಖರ್ಚು ಮಾಡಲಾಗುವುದು.

ಬೀಜ ಕ್ಷೇತ್ರಗಳು: ಯೋಜನೆ ಉದ್ದೇಶ

ಬೀಜೋತ್ಪಾದನಾ ಕೇಂದ್ರಗಳಲ್ಲಿ ಮುಖ್ಯವಾಗಿ ಮೂಲ/ಪ್ರಮಾಣಿತ ಬೀಜೋತ್ಪಾದನೆಯನ್ನು ಕೈಗೊಂಡು  ಗುಣಮಟ್ಟದ ಬೀಜವನ್ನು ಕರ್ನಾಟಕ ಬೀಜ ನಿಗಮ ಸಂಸ್ಥೆಯ ಮುಖಾಂತರ ರೈತರಿಗೆ ಸರಬರಾಜು ಮಾಡಲಾಗುವುದು. ಮೂಲ ಬೀಜೋತ್ಪಾದನೆಗೆ ಬೇಕಿರುವ ತಳಿವರ್ಧಕ ಬೀಜಗಳನ್ನು ಕೃಷಿ ವಿಶ್ವವಿದ್ಯಾಲಯಗಳಿಂದ ಪಡೆಯಲಾಗುವುದು. ಕೃಷಿ ವಿಶ್ವವಿದ್ಯಾಲಯಗಳಲ್ಲಿ ತಳಿವರ್ಧಕ ಬೀಜಗಳನ್ನು ಮರುಹಂಚಿಕೆ ಮಾಡಲಾಗುವುದು. ಕ್ಷೇತ್ರಗಳಲ್ಲಿನ ಹೆಚ್ಚುವರಿ ಪ್ರದೇಶಗಳಲ್ಲಿ ಪ್ರಮಾಣಿತ ಬೀಜೋತ್ಪಾದನೆಯನ್ನು ಕೈಗೊಳ್ಳಲಾಗುವುದು.

ರಾಗಿ ಮತ್ತು ಜೋಳದ ಉತ್ಪಾದನೆಗೆ ವಿಶೇಷ ಪ್ರೋತ್ಸಾಹಧನ ಕಾರ್ಯಕ್ರಮ ೨೦೧೪-೧೫ ನೇ ಸಾಲಿನಿಂದ ಅನುಷ್ಠಾನಗೊಳಿಸಲಾಗುತ್ತಿದೆ.

ಯೋಜನೆಯ ಉದ್ದೇಶ:

೧) ರಾಗಿ ಮತ್ತು ಜೋಳ ಬೆಳೆಗಳ ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವುದು,

೨) ಹೆಚ್ಚಿನ ಪೌಷ್ಠಿಕಾಂಶವುಳ್ಳ ಆಹಾರ ಧಾನ್ಯಗಳನ್ನು ಬೆಳೆಯಲು ರೈತರನ್ನು ಪ್ರೇರೇಪಿಸುವುದು, ಮತ್ತು

೩) ರೈತರ ಆರ್ಥಿಕ ಮಟ್ಟವನ್ನು ಸುಧಾರಿಸುವುದು.

ಆಧುನಿಕ ತಾಂತ್ರಿಕತೆಗಳ ದೊಡ್ಡ ಪ್ರಮಾಣದ ಪ್ರಾತ್ಯಕ್ಷಿಕೆಗಳ ಮುಖಾಂತರ ಹೆಚ್ಚು ರೈತರು ರಾಗಿ ಮತ್ತು ಜೋಳದ ಬೆಳೆಗಳ ಬೇಸಾಯ ಕೈಗೊಳ್ಳಲಿದ್ದಾರೆ. ರಾಜ್ಯದಲ್ಲಿ ರಾಗಿ ಮತ್ತು ಜೋಳದ ಉತ್ಪಾದನೆಯನ್ನು ಹೆಚ್ಚಿಸುವುದರ ಮುಖಾಂತರ ಅನ್ನ ಭಾಗ್ಯ ಯೋಜನೆಯಡಿಯಲ್ಲಿ ಅಕ್ಕಿಯ ಜೊತೆಗೆ ಪೌಷ್ಠಿಕ ಆಹಾರ ಧಾನ್ಯಗಳಾದ ರಾಗಿ ಮತ್ತು ಜೋಳವನ್ನೂ ಸಹ ವಿತರಿಸಲು ಸದರಿ ಕಾರ್ಯಕ್ರಮ ಸಹಕಾರಿಯಾಗಲಿದೆ

ಮಣ್ಣಿನ ಸತ್ವ ಹೆಚ್ಚಿಸುವಿಕೆ ಯೋಜನೆ

ಯೋಜನೆ ಉದ್ದೇಶ:

 ೧) ಮಣ್ಣಿನ ಫಲವತ್ತತೆ ಮತ್ತು ಉತ್ಪಾದಕತೆ ಹೆಚ್ಚಿಸುವುದು,

೨) ರೈತರ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುವುದು,

೩) ರಾಜ್ಯದ ರೈತರ ಆರ್ಥಿಕ ಮಟ್ಟವನ್ನು ಸುಧಾರಿಸುವುದು,

೪) ರಾಸಾಯನಿಕ ರಹಿತ ಗುಣಮಟ್ಟದ ಆಹಾರ ಉತ್ಪಾದನೆ ಮಾಡುವುದು,

೫) ಮಳೆಯಾಶ್ರಿತ ಪ್ರದೇಶದಲ್ಲಿ ಬರದ ಪರಿಸ್ಥಿತಿಯನ್ನು ನಿಭಾಯಿಸುವುದು, ಮತ್ತು

೬) ಪರಿಸರ ಸಂರಕ್ಷಿಸಿ ಮನುಷ್ಯರ ಮತ್ತು ಪ್ರಾಣಿಗಳ ಆರೋಗ್ಯ ಕಾಪಾಡುವುದು.

 

 

ಮಣ್ಣಿನ ಸತ್ವ ಹೆಚ್ಚಿಸುವಿಕೆ ಯೋಜನೆ

ಯೋಜನೆ ಉದ್ದೇಶ:

೧) ಪರಿಶಿಷ್ಟ ಜಾತಿ ರೈತರ ಉತ್ಪಾದನಾ ವೆಚ್ಚವನ್ನು ಕಡಿತಗೊಳಿಸುವುದರ ಮೂಲಕ ಆರ್ಥಿಕ ಪರಿಸ್ಥಿತಿ ಸುಧಾರಿಸುವುದು, ೨) ಮಣ್ಣಿನ ಫಲವತ್ತತೆ ಮತ್ತು ಉತ್ಪಾದಕತೆ ಹೆಚ್ಚಿಸುವುದು, ೩) ರಾಸಾಯನಿಕ ಉಳಿಕೆಗಳಿಲ್ಲದ ಗುಣಮಟ್ಟದ ಆಹಾರ ಉತ್ಪಾದನೆ ಮಾಡಿ ಪರಿಶಿಷ್ಟ ಜಾತಿ ರೈತರ ಆದಾಯ ಹೆಚ್ಚಿಸುವುದು, ೪) ಮಳೆಯಾಶ್ರಿತ ಪ್ರದೇಶದಲ್ಲಿ ಬರದ ಪರಿಸ್ಥಿತಿಯನ್ನು ನಿಭಾಯಿಸುವುದು, ಮತ್ತು ೫) ಪರಿಸರ ಸಂರಕ್ಷಿಸಿ ಮನುಷ್ಯರ ಮತ್ತು ಪ್ರಾಣಿಗಳ ಆರೋಗ್ಯ ಕಾಪಾಡುವುದು.

ಮಣ್ಣಿನ ಸತ್ವ ಹೆಚ್ಚಿಸುವಿಕೆ ಯೋಜನೆ ಗಿರಿಜನ ಉಪಯೋಜನೆ

ಯೋಜನೆ ಉದ್ದೇಶ:

೧) ಗಿರಿಜನ ರೈತರ ಉತ್ಪಾದನಾ ವೆಚ್ಚವನ್ನು ಕಡಿತಗೊಳಿಸುವುದರ ಮೂಲಕ ಆರ್ಥಿಕ ಪರಿಸ್ಥಿತಿ

ಸುಧಾರಿಸುವುದು,

೨) ಮಣ್ಣಿನ ಫಲವತ್ತತೆ ಮತ್ತು ಉತ್ಪಾದಕತೆ ಹೆಚ್ಚಿಸುವುದು,

೩) ರಾಸಾಯನಿಕ ಉಳಿಕೆಗಳಿಲ್ಲದ ಗುಣಮಟ್ಟ ಆಹಾರ ಉತ್ಪಾದನೆ ಮಾಡಿ ಗಿರಿಜನ ರೈತರ ಆದಾಯ ಹೆಚ್ಚಿಸುವುದು,

೪) ಮಳೆಯಾಶ್ರಿತ ಪ್ರದೇಶದಲ್ಲಿ ಬರದ ಪರಿಸ್ಥಿತಿಯನ್ನು ನಿಭಾಯಿಸುವುದು, ಮತ್ತು

೫) ಪರಿಸರ ಸಂರಕ್ಷಿಸಿ ಮನುಷ್ಯರ ಮತ್ತು ಪ್ರಾಣಿಗಳ ಆರೋಗ್ಯ ಕಾಪಾಡುವುದು.

 

ಕೃಷಿ ಯಾಂತ್ರೀಕರಣ ಯೋಜನೆ

ಕೃಷಿ ಯಾಂತ್ರೀಕರಣ ಯೋಜನೆಯಡಿ ರೂ. ಎರಡು ಲಕ್ಷದವರೆಗೆ ಇರುವ ಕೃಷಿ ಯಂತ್ರೋಪಕರಣಗಳಿಗೆ ಸಾಮಾನ್ಯ ರೈತರಿಗೆ ಶೇ. ೫೦ ರಷ್ಟು ಸಹಾಯಧನ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಶೇ. ೯೦ ರಷ್ಟು ಸಹಾಯ ಧನವನ್ನು ಗರಿಷ್ಟ ಮಿತಿ ರೂ ಒಂದು ಲಕ್ಷ ದವರೆಗೆ ನೀಡಲಾಗುತ್ತಿದೆ. ಕೇಂದ್ರವಲಯದ ಅನುದಾನವನ್ನು ಎಸ್‌.ಎಂ.ಎ.ಎಂ ಮಾರ್ಗಸೂಚಿ ಅನ್ವಯ ರಾಜ್ಯವಲಯದ ಅನುದಾನದೊಂದಿಗೆ ಸಮನ್ವಯಗೊಳಿಸಿ (೪೦:೬೦) ಅನುಷ್ಠಾನ ಮಾಡಲಾಗುತ್ತಿದೆ. ಕೇಂದ್ರ ವಲಯದ ಅನುದಾನ ಲಭ್ಯವಿಲ್ಲದಿದ್ದಲ್ಲಿ ರಾಜ್ಯವಲಯದ ಅನುದಾನದಲ್ಲಿ ಒಂದೇ ಬಿಲ್ಲಿನಲ್ಲಿ ವೆಚ್ಚ ಭರಿಸಲಾಗುತ್ತದೆ.

ಯೋಜನೆಯ ಉದ್ದೇಶ

೧) ಉತ್ಪಾದನಾ ವೆಚ್ಚ ಕಡಿಮೆ ಮಾಡುವುದು,

೨) ಸಕಾಲದಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳುವುದು,

೩) ಉತ್ಪಾದನೆ ಮತ್ತು ಉತ್ಪಾದಕತೆ ಹೆಚ್ಚಿಸುವುದು,

೪) ಕೃಷಿಯಲ್ಲಿ ಆರ್ಥಿಕ ಸ್ಪರ್ಧಾಕತೆ ಮತ್ತು ಸುಸ್ಥಿರತೆ ಕಾಪಾಡಲು, ಮತ್ತು

೫) ಕೃಷಿ ಅವಲಂಬಿತ ಕೈಗಾರಿಕೆಗಳನ್ನು ಪ್ರೋತ್ಸಾಹಿಸಲು ಹಾಗೂ ಉದ್ಯೋಗ ಒದಗಿಸುವಲ್ಲಿ ಪೂರಕವಾಗಿರುತ್ತದೆ.

 

ಕೃಷಿ ಯಾಂತ್ರೀಕರಣ ಹಾಗೂ ಲಘು ನೀರಾವರಿ ಯೋಜನೆ

ರೈತರು ಸಕಾಲದಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಹಾಗೂ ಕೃಷಿ ಕಾರ್ಮಿಕರ ಮೇಲಿನ ಅವಲಂಬನೆಯನ್ನು ನೀಗಿಸಲು ಸಹಕಾರಿಯಾಗಲು ಕೃಷಿ ಯಾಂತ್ರೀಕರಣ ಯೋಜನೆಯನ್ನು ಜಾರಿಗೆ ತರಲಾಗಿದೆ. ಭೂಮಿ ಸಿದ್ಧತೆ ಉಪಕರಣಗಳು, ಬಿತ್ತನೆ/ ನಾಟಿ ಮಾಡುವ ಉಪಕರಣಗಳು, ಕೊಯ್ಲು ಮತ್ತು ಸಂಸ್ಕರಣೆಗೆ ಉಪಯುಕ್ತವಾಗಿರುವ ವಿವಿಧ ಮಾದರಿಗಳ ಉಪಕರಣಗಳಿಗೆ ಶೇ.೫೦ ರಷ್ಟು ಸಹಾಯ ಧನವನ್ನು ಸಾಮಾನ್ಯ ವರ್ಗದ ರೈತರಿಗೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ಶೇ.೯೦ ರಷ್ಟು ಸಹಾಯಧನವನ್ನು ಒದಗಿಸಲಾಗುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ಕೃಷಿ ಯಾಂತ್ರೀಕರನ ಯೋಜನೆಯಡಿ  ವಿವಿಧ ಮಾದರಿಗಳ ಯಂತ್ರೋಪಕರಣಗಳನ್ನು ೪.೧೩ ಲಕ್ಷ ರೈತರಿಗೆ ಒದಗಿಸಲಾಗಿದೆ.

 

ಕೃಷಿ ಯಂತ್ರೋಪಕರಣಗಳ ಬಾಡಿಗೆ ಆಧಾರಿತ ಸೇವಾ ಕೇಂದ್ರ

೨೦೧೪-೧೫ ನೇ ಸಾಲಿನಲ್ಲಿ ರಾಜ್ಯದ ಗ್ರಾಮೀಣ ಪ್ರದೇಶದ ರೈತರಿಗೆ ಸಕಾಲದಲ್ಲಿ, ಪಾರದರ್ಶಕವಾಗಿ ಮತ್ತು  ಕಡಿಮೆ ಬಾಡಿಗೆ ದರದಲ್ಲಿ ಭೂಮಿ ಸಿದ್ಧತೆ, ಬಿತ್ತನೆ/ ನಾಟಿ ಮಾಡುವ ಉಪಕರಣಗಳು, ಕೊಯ್ಲು ಮತ್ತು ಸಂಸ್ಕರಣೆಗೆ ಉಪಯುಕ್ತವಾಗಿರುವ ವಿವಿಧ ಕೃಷಿ ಯಂತ್ರೋಪಕರಣಗಳನ್ನು ಒದಗಿಸಲು ೭,೦೦೦ ಲಕ್ಷ ರೂ.ಗಳ ಅನುದಾನದಲ್ಲಿ ೧೮೬ ಹೋಬಳಿಗಳಲ್ಲಿ ಚಾರಿಟಬಲ್ ಟ್ರಸ್ಟ್/ಸರ್ಕಾರೇತರ ಸಂಸ್ಥೆಗಳ ಮೂಲಕ ಬಾಡಿಗೆ ಆಧಾರಿತ ಸೇವಾ ಕೇಂದ್ರಗಳನ್ನು ಸ್ಥಾಪಿಸಲು ಶ್ರೀ ಕ್ಷೇತ್ರ ಧರ್ಮಸ್ಥಳ ರೂರಲ್ ಡೆವಲೆಪ್‌ಮೆಂಟ್ ಪ್ರಾಜೆಕ್ಟ್, ಧರ್ಮಸ್ಥಳ,  ಇಂಡಿಯನ್ ಸೊಸೈಟಿ ಆಫ್ ಅಗ್ರಿಬ್ಯುಸಿನೆಸ್ ಪ್ರೊಫೆಷನಲ್ಸ್, ನವದೆಹಲಿ, ವಿಜಯಪುರ ಡಿಸ್ಟ್ರಿಕ್ ಮೈನಾರಿಟಿ ನ್ಯಾಷನಲ್‌ ಎಜ್ಯುಕೇಷನ್‌ ಸೊಸೈಟಿ, ವಿಜಯಪುರ ಹಾಗೂ ಗ್ರಾಮ ಕಿರಣ ಸೇವಾ ಸಂಸ್ಥೆ, ಕಲಬುರಗಿ ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ.

 

ಕೃಷಿ ಕ್ಷೇತ್ರಗಳು ಮತ್ತು ಅಭಿವೃದ್ಧಿ ಕೇಂದ್ರ

ಯೋಜನೆ ಉದ್ದೇಶ

ಕೃಷಿ ಕ್ಷೇತ್ರಗಳಲ್ಲಿ ಮುಖ್ಯವಾಗಿ ಮೂಲ/ಪ್ರಮಾಣಿತ ಬೀಜೋತ್ಪಾದನೆಯನ್ನು ಕೈಗೊಂಡು ಗುಣಮಟ್ಟದ  ಬೀಜವನ್ನು ಕರ್ನಾಟಕ ಬೀಜ ನಿಗಮ ಸಂಸ್ಥೆಯ ಮುಖಾಂತರ ರೈತರಿಗೆ ಸರಬರಾಜು ಮಾಡಲಾಗುವುದು. ಮೂಲ ಬೀಜೋತ್ಪಾದನೆಗೆ ಬೇಕಿರುವ ತಳಿವರ್ಧಕ ಬೀಜಗಳನ್ನು ಕೃಷಿ ವಿಶ್ವವಿದ್ಯಾಲಯಗಳಿಂದ ಪಡೆಯಲಾಗುವುದು. ಕೃಷಿ ವಿಶ್ವವಿದ್ಯಾಲಯಗಳಲ್ಲಿ ತಳಿವರ್ಧಕ ಬೀಜಗಳ ಲಭ್ಯತೆಯ ಮೇರೆಗೆ ಕೃಷಿ ಕ್ಷೇತ್ರಗಳಿಗೆ ತಳಿವರ್ಧಕ ಬೀಜಗಳನ್ನು ಮರುಹಂಚಿಕೆ ಮಾಡಲಾಗುವುದು. ಕ್ಷೇತ್ರಗಳಲ್ಲಿನ ಹೆಚ್ಚುವರಿ ಪ್ರದೇಶಗಳಲ್ಲಿ ಪ್ರಮಾಣಿತ ಬೀಜೋತ್ಪಾದನೆಯನ್ನು ಕೈಗೊಳ್ಳಲಾಗುವುದು.

 

ಕೃಷಿ ಯಂತ್ರಧಾರೆ,

ಯೋಜನೆಯ ಉದ್ದೇಶ

ಬಾಡಿಗೆ ಆಧಾರದ ಮೇಲೆ ವಿವಿಧ ಕೃಷಿ ಯಂತ್ರೋಪಕರಣಗಳನ್ನು ರೈತರಿಗೆ ಅನುಕೂಲಕರ ದರಗಳಲ್ಲಿ ಪೂರೈಸಲು ಸೇವಾ ಕೇಂದ್ರಗಳ ಸ್ಥಾಪನೆ. ಈ ಕಾರ್ಯಕ್ರಮದಡಿ ೨೦೧೪-೧೫ನೇ ಸಾಲಿನಲ್ಲಿ ೮೬ ಹೋಬಳಿಗಳಲ್ಲಿ ಚಾರಿಟಬಲ್ ಟ್ರಸ್ಟ್/ಸರ್ಕಾರೇತರ ಸಂಸ್ಥೆಗಳ ಮೂಲಕ ಬಾಡಿಗೆ ಆಧಾರಿತ ಸೇವಾ ಕೇಂದ್ರಗಳನ್ನು ಸ್ಥಾಪಿಸಿ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ವಿವಿಧ ಕೃಷಿ ಯಂತ್ರೋಪಕರಣಗಳನ್ನು ಕಡಿಮೆ ದರದಲ್ಲಿ ಬಾಡಿಗೆ ಆಧಾರದ ಮೇಲೆ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಒದಗಿಸಲು ಅನುವು ಮಾಡಿಕೊಡಲಾಗುವುದು. ಕೃಷಿ ಯಂತ್ರಧಾರೆ ಯೋಜನೆಯಡಿ ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆಗೆ ಒದಗಿಸುವ ೩೧೫ ಸೇವಾ ಕೇಂದ್ರಗಳು ರಾಜ್ಯದಲ್ಲಿ ಸ್ಥಾಪನೆಯಾಗಿವೆ. ಇದರಿಂದಾಗಿ ಕಡಿಮೆ ಬಾಡಿಗೆಗೆ ಕೃಷಿ ಯಂತ್ರೋಪಕರಣಗಳನ್ನು ಪಡೆದು ಯಾಂತ್ರಿಕವಾಗಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುತ್ತಿರುವುದು ರಾಜ್ಯದಲ್ಲಿ ಕಂಡುಬರುತ್ತಿದೆ. ಹಂತ ಹಂತವಾಗಿ ಕೃಷಿಯಂತ್ರೋಪಕರಣಗಳ ಬಳಕೆಯನ್ನು ಸಣ್ಣ ಸಣ್ಣ ಹಿಡುವಳಿದಾರರು ಬಳಸಿಕೊಳ್ಳುತ್ತಿರುವುದು ಸಂತಸದ ಸಂಗತಿಯಾಗಿದೆ. ಕೃಷಿ ಕ್ಷೇತ್ರಕ್ಕೆ ಸಮಗ್ರ ದೂರದೃಷ್ಟಿ ರೂಪಿಸಲು ಡಾ.ಸ್ವಾಮಿನಾಥನ್ ಅವರ ಅಧ್ಯಕ್ಷತೆಯಲ್ಲಿ ’ವಿಷನ್ ಗ್ರೂಪ್’ ರಚಿಸಲಾಗಿದೆ.

ಕೀಟನಾಶಕ ನಿಯಂತ್ರಣ ಪ್ರಯೋಗಶಾಲೆ

ಯೋಜನೆ ಉದ್ದೇಶ

ತೀವ್ರ ವೇಗದಲ್ಲಿ ಬೆಳೆಯುತ್ತಿರುವ ರಾಷ್ಟ್ರದ ಪ್ರಜಾ ಸಂಖ್ಯೆಗೆ ಬೇಕಾಗುವಷ್ಟು ಆಹಾರೋತ್ಪನ್ನವಾಗದಿರುವ ಇಂದಿನ ಕಠಿಣ ಪರಿಸ್ಥಿತಿಯಲ್ಲಿ ಮಾನವ ಪ್ರಯತ್ನದಿಂದ ಬೆಳೆಯುತ್ತಿರುವ ಸಸ್ಯ ಸಮುದಾಯಗಳನ್ನು ಕೀಟ ಮತ್ತು ರೋಗಗಳಿಂದ ಪರಿಣಾಮಕಾರಿಯಾಗಿ ನಿಯಂತ್ರಿಸಲು ಅಗತ್ಯವಾದ ತಾಂತ್ರಿಕತೆ/ ತಂತ್ರಜ್ಞಾನ ಒದಗಿಸುವುದರೊಂದಿಗೆ ರಾಸಾಯನಿಕ ಪೀಡೆನಾಶಕಗಳ ಬಳಕೆಯನ್ನು ಕಡಿಮೆಗೊಳಿಸಿ ಜೈವಿಕ  ಪೀಡೆನಾಶಕಗಳನ್ನು ಉತ್ತೇಜಿಸಲು ಹಾಗೂ ಪರಿಸರ ಮಾಲಿನ್ಯವನ್ನು ತಗ್ಗಿಸಲು ಜೈವಿಕ ಪೀಡೆನಾಶಕ ಹಾಗೂ ಜೈವಿಕ ನಿಯಂತ್ರಣಕಾರಕಗಳನ್ನು ರಿಯಾಯಿತಿ ದರದಲ್ಲಿ ರೈತರಿಗೆ ವಿತರಿಸುವುದು. ಅದರಂತೆ ಕೃಷಿಯಿಂದ ಉತ್ಪನ್ನಗೊಂಡು ಶೇಖರಿಸಲ್ಪಟ್ಟ ದವಸ ಧಾನ್ಯಗಳಿಗೆ ಕಾಡುವ ಇಲಿ, ಹೆಗ್ಗಣ, ಕೀಟ ಮತ್ತು ರೋಗಗಳ  ಕಾಟದಿಂದ ಆಗುವ ನಷ್ಟವನ್ನು ತಪ್ಪಿಸಿ ವೈಜ್ಞಾನಿಕವಾಗಿ ಧಾನ್ಯವನ್ನು ಸಂರಕ್ಷಿಸಲು ಸುಧಾರಿತ ಧಾನ್ಯ ಸಂಗ್ರಹಣಾ ಪೆಟ್ಟಿಗೆಗಳನ್ನು ರಿಯಾಯಿತಿ ದರದಲ್ಲಿ ರೈತರಿಗೆ ವಿತರಿಸುವುದು.

ರಾಜ್ಯದ ವಿವಿಧ ಕೃಷಿ ವಲಯಗಳಲ್ಲಿ ಮುಖ್ಯ ಬೆಳೆಗಳಿಗೆ ಪದೇ ಪದೇ ಬಾಧಿಸುವ ಅಥವಾ ವಿವಿಧ ಕಾರಣಗಳಿಂದಾಗಿ ಹಠಾತ್ ಬಾಧಿಸುವ ಕೀಟ ಹಾಗೂ ರೋಗ ಬಾಧೆಗಳ ನಿರ್ವಹಣೆಗೆ ತುರ್ತಾಗಿ ಸಸ್ಯ ಸಂರಕ್ಷಣಾ ಕ್ರಮಗಳನ್ನು ತೆಗೆದುಕೊಳ್ಳಲು ಪೀಡೆ ನಾಶಕಗಳನ್ನು ರಿಯಾಯಿತಿ ದರದಲ್ಲಿ ರೈತರಿಗೆ ವಿತರಿಸುವುದು. ಬೀಜದಿಂದ ಹಾಗೂ ಮಣ್ಣಿನಿಂದ ಹರಡುವ ರೋಗ ಮತ್ತು ಕೀಟಗಳಿಂದ ಬೆಳೆಗಳನ್ನು ರಕ್ಷಿಸಲು ಬೀಜವನ್ನು ಬಿತ್ತನೆಗೆ ಉಪಯೋಗಿಸುವ ಮೊದಲು ಪೀಡೆನಾಶಕಗಳಿಂದ ಉಪಚರಿಸಿ ಬಿತ್ತುವುದರಿಂದ ಹೆಚ್ಚಿನ ಇಳುವರಿ ಪಡೆಯುವ ಸಲುವಾಗಿ ಈ ಬಗ್ಗೆ ರೈತರಲ್ಲಿ ಅರಿವು ಮೂಡಿಸಲು ಬೀಜೋಪಚಾರ ಆಂದೋಲನ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಸುರಕ್ಷಿತ ಕೀಟನಾಶಕ ಬಳಕೆ ಮತ್ತು ಸಮಗ್ರ ಪೀಡೆ ನಿರ್ವಹಣೆ ಬಗ್ಗೆ ತಾಲ್ಲೂಕು/ಹೋಬಳಿ ಮಟ್ಟದಲ್ಲಿ ರೈತರಿಗೆ ಹಾಗೂ ಪರಿಕರ ಮಾರಾಟಗಾರರಿಗೆ ತರಬೇತಿ ನೀಡಲು ಹಾಗೂ ಕೌಶಲ್ಯ ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಇಲಾಖೆಯು ಅನುಷ್ಠಾನಗೊಳಿಸುತ್ತಿರುವ ಬೀಜ, ರಸಗೊಬ್ಬರ ಮತ್ತು ಕೀಟನಾಶಕ ಕಾಯ್ದೆ ಹಾಗೂ ಕಾನೂನು ಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಗುಣ ನಿಯಂತ್ರಣ ಕಾರ್ಯಕ್ರಮಕ್ಕಾಗಿ ಅನುದಾನ ಒದಗಿಸಲಾಗಿದೆ. ಬೀಜ, ರಸಗೊಬ್ಬರ ಮತ್ತು ಕೀಟನಾಶಕ  ಕಾಯ್ದೆ ಹಾಗೂ ಕಾನೂನು ಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಗುಣ ನಿಯಂತ್ರಣ ಕಾರ್ಯಕ್ರಮದ ಬಗ್ಗೆ ಪರಿವೀಕ್ಷಕರುಗಳಿಗೆ ತರಬೇತಿಯನ್ನು ಸಹ ನೀಡಲಾಗುವುದು. ರಾಸಾಯನಿಕ ಪೀಡೆನಾಶಕಗಳ ಬಳಕೆಯನ್ನು ಕಡಿಮೆ ಮಾಡಿ ಜೈವಿಕ ಪೀಡೆನಾಶಕಗಳ ಬಳಕೆಯು ಅಧಿಕಗೊಂಡಿರುವುದು ವಿವಿಧ ಪೀಡೆಗಳ ಬಾಧೆಗಳು ನಿಯಂತ್ರಣಗೊಂಡು ಬೆಳೆಗಳ ಉತ್ಪಾದನೆ ಮತ್ತು ಉತ್ಪಾದಕತೆಯಲ್ಲಿ ಹೆಚ್ಚಳವಾಗಿರುವುದು. ಸಮಗ್ರ ಪೀಡೆ ನಿರ್ವಹಣೆಯನ್ನು ಉತ್ತೇಜಿಸಲಾಗಿದೆ. ಸಂಗ್ರಹಿಸಿಟ್ಟ ದವಸ ಧಾನ್ಯಗಳಿಗೆ ಇಲಿ, ಹೆಗ್ಗಣ, ಕೀಟ ಮತ್ತು ರೋಗ ಬಾಧೆಗಳಿಂದ ಆಗುವ ನಷ್ಟವನ್ನು ತಗ್ಗಿಸಿರುವುದು. ಗುಣ ನಿಯಂತ್ರಣ ಕಾರ್ಯಕ್ರಮದಿಂದಾಗಿ ರೈತರಿಗೆ ಉತ್ತಮ ಗುಣಮಟ್ಟದ ಕೃಷಿ ಪರಿಕರಗಳನ್ನು ಒದಗಿಸಲಾಗಿದೆ. ಈ ಯೋಜನೆಯಿಂದ ಸುಮಾರು ೭೧,೨೮೦ ಫಲಾನುಭವಿಗಳು ಪ್ರಯೋಜನ ಪಡೆದಿರುತ್ತಾರೆ.

 

ಕೃಷಿ ಪರಿಕರಗಳು ಮತ್ತು ಗುಣಮಟ್ಟ ನಿಯಂತ್ರಣ

ಮಣ್ಣು ಆರೋಗ್ಯ ಅಭಿಯಾನ

ಯೋಜನೆ ಉದ್ದೇಶ

ಮಣ್ಣು ಪರೀಕ್ಷೆಯು ಕೃಷಿ ಇಲಾಖೆಯ ಮೂಲ ಭೂತ ಕಾರ್ಯಕ್ರಮಗಳಲ್ಲಿ ಒಂದಾಗಿದ್ದು, ಸಮತೋಲನ ಮತ್ತು ಸಮಗ್ರ ಪೋಷಕಾಂಸಗಳ  ಬಳಕೆ, ಮಣ್ಣು ಆರೋಗ್ಯ ಸಂರಕ್ಷಣೆ ಮತ್ತು ಸುಧಾರಣೆ ಕೈಗೊಳ್ಳಲು ಆಧುನಿಕ ಕೃಷಿ ಉತ್ಪಾದನೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಕರ್ನಾಟಕ ರಾಜ್ಯದಲ್ಲಿ ೨೯ ಮಣ್ಣು ಆರೋಗ್ಯ ಕೇಂದ್ರಗಳಲ್ಲಿ ಮಣ್ಣು ಮಾದರಿಗಳನ್ನು ವಿಶ್ಲೇಷಣೆ ಮಾಡಲಾಗುತ್ತಿದೆ.

 

ಸಾವಯವ ಕೃಷಿ ಯೋಜನೆ ಉದ್ದೇಶ

೧) ರೈತರ ಸಮುದಾಯದಲ್ಲಿ ಸಾವಯವ ಕೃಷಿ ಪರಿಕಲ್ಪನೆ, ತತ್ವಗಳ ಬಗ್ಗೆ ಹಾಗೂ ಅನುಸರಣೆ ಬಗ್ಗೆ ಅರಿವು ಮೂಡಿಸುವುದು,

೨) ವಿವಿಧ ಅಭಿವೃದ್ಧಿ ಇಲಾಖೆಗಳ ವಿಸ್ತರಣಾ ಸಿಬ್ಬಂದಿ ಮೂಲಕ ರೈತರಿಗೆ ಸಾವಯವ ಕೃಷಿ ಬಗ್ಗೆ ಜಾಗೃತಿ ಮೂಡಿಸುವುದು,

೩) ನೈಸರ್ಗಿಕ ಸಂಪನ್ಮೂಲಗಳಾದ ಭೂಮಿ, ನೀರು ಮತ್ತು ಜೀವರಾಶಿಗಳನ್ನು ಸಮರ್ಪಕವಾಗಿ ಹಂಚಿಕೊಂಡು ಬಳಸಲು ರೈತರ ಗುಂಪು/ರೈತರ ಕ್ಲಬ್/ ರೈತರ ಸಂಘಗಳ ರಚನೆಗೆ ಅನುವು ಮಾಡುವುದು, ಮತ್ತು

೪) ಕ್ಷೇತ್ರದಲ್ಲಿಯೇ ಸಂಸ್ಕರಣೆ, ಮೌಲ್ಯವರ್ಧನೆ ಹಾಗೂ ಸಾವಯವ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ಕಲ್ಪಿಸುವುದು.

 

ಸಾವಯವ ಭಾಗ್ಯ ಯೋಜನೆ

ಪ್ರತಿ ಹೋಬಳಿಯಲ್ಲಿ ೧೦೦ಹೆ. ಪ್ರದೇಶದಷ್ಟು ಕ್ಷೇತ್ರವನ್ನು ಸಾವಯವ ಕೃಷಿ ಕ್ಷೇತ್ರವನ್ನಾಗಿ ಪರಿವರ್ತನೆ ಮಾಡುವ ಕಾರ್ಯಕ್ರಮ ಈ ಯೋಜನೆಯಲ್ಲಿ ಸೇರಿದೆ. ಒಟ್ಟಾರೆ ರಾಜ್ಯಾದ್ಯಂತ ಸುಮಾರು ೬೩,೬೭೭ ಹೆ. ಪ್ರದೇಶದಲ್ಲಿ ೫೩,೮೨೯ ಜನ ರೈತರು ಉಪಯೋಗ ಪಡೆದಿರುತ್ತಾರೆ. ರಾಜ್ಯದ ಸಾವಯವ ಕೃಷಿಕರ ಸಂಘಗಳನ್ನು ಒಗ್ಗೂಡಿಸಿ ರಾಜ್ಯಾದ್ಯಂತ ೧೪ ಪ್ರಾಂತೀಯ ಒಕ್ಕೂಟಗಳನ್ನು ಸ್ಥಾಪಿಸಲಾಗಿದ್ದು, ಸದರಿ ಒಕ್ಕೂಟಗಳ ಮುಖಾಂತರ ಸಾವಯವ ಉತ್ಪನ್ನಗಳಿಗೆ ವ್ಯವಸ್ಥಿತ ಮಾರುಕಟ್ಟೆಯನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಮುಂದುವರೆದು, ಒಕ್ಕೂಟಗಳ ಮುಖಾಂತರ ಸಾವಯವ ಕೃಷಿ ಉತ್ಪನ್ನಗಳ ಸಂಗ್ರಹಣೆ, ಗ್ರೇಡಿಂಗ್, ಮೌಲ್ಯವರ್ಧನೆ, ಸಂಸ್ಕರಣೆ, ಪ್ಯಾಕಿಂಗ್, ಬ್ರಾಂಡ್ ಅಭಿವೃದ್ದಿ, ಮಾರುಕಟ್ಟೆ ಬಳಕೆದಾರರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಈ ಮುಂತಾದ ಚಟುವಟಿಕೆಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ.

ಕೃಷಿ ಮೇಳಗಳು ಮತ್ತು ವಸ್ತು ಪ್ರದರ್ಶನ

ರಾಜ್ಯದ ರೈತ ಬಾಂಧವರಿಗೆ ಆಧುನಿಕ ಕೃಷಿ ತಾಂತ್ರಿಕತೆಗಳನ್ನು ಪರಿಚಯಿಸುವುದೇ ಈ ಯೋಜನೆಯ ಉದ್ದೇಶವಾಗಿದೆ. ಕೃಷಿ ವಸ್ತು ಪ್ರದರ್ಶನಗಳು ರೈತ ಸಮುದಾಯಕ್ಕೆ ಆಧುನಿಕ ಕೃಷಿ ತಾಂತ್ರಿಕತೆಗಳನ್ನು ಪರಿಣಾಮಕಾರಿಯಾಗಿ ವರ್ಗಾಯಿಸಲು ಅನುಕೂಲವಾಗುವುದರಿಂದ, ರಾಷ್ಟ್ರೀಯ/ಅಂತರರಾಜ್ಯ/ರಾಜ್ಯ/ ಜಿಲ್ಲಾ/ತಾಲೂಕು/ಅರೆಪಟ್ಟಣ/ಗ್ರಾಮಾಂತರಪ್ರದೇಶಗಳಲ್ಲಿ/ ಸ್ಥಳೀಯಜಾತ್ರೆ/ಕೃಷಿಮೇಳಗಳನ್ನು ಸಂದರ್ಭಕ್ಕನುಸಾರವಾಗಿ ಆಯಾ ಮಟ್ಟದ ಅಧಿಕಾರಿಗಳು ಏರ್ಪಡಿಸುವುದು/ಭಾಗ ವಹಿಸುವುದು ಮತ್ತು ರೈತರನ್ನು ತೊಡಗಿಸಿಕೊಳ್ಳುವುದು, ಸಾಧ್ಯವಾದ ಕಡೆ ಬೆಳೆ ಅಂಗಳಗಳನ್ನು ಮಾಡುವುದು, ಉತ್ತಮ ಪ್ರದರ್ಶಿಕೆಗಳ ತಯಾರಿಕೆ/ಸಾಗಾಣಿಕೆ, ಮಳಿಗೆ ಬಾಡಿಗೆ ಹಾಗೂ ಲಭ್ಯವಿರುವ ಹಣದ ಪರಿಮಿತಿಯೊಳಗೆ ಸ್ವಾತಂತ್ರೋತ್ಸವ/ ಗಣರಾಜ್ಯೋತ್ಸವ/ಸಮ್ಮೇಳನಗಳ ಅಂಗವಾಗಿ ಸ್ತಬ್ಧ ಚಿತ್ರಗಳನ್ನು ತಯಾರಿಸಲು ಈ ಯೋಜನೆಯಡಿ ಅವಕಾಶ ಕಲ್ಪಿಸಲಾಗಿದೆ.

ಕೃಷಿ ವಾರ್ತಾ ಘಟಕ

ಕೃಷಿ ಉತ್ಪಾದನೆಯನ್ನು ಹೆಚ್ಚಿಸಲು ನವೀನ ತಾಂತ್ರಿಕತೆಗಳನ್ನು ವಿಸ್ತರಣಾ ಚಟುವಟಿಕೆಗಳಿಗೆ ಪೂರಕವಾಗುವಂತೆ ವರ್ಗಾವಣೆ ಮಾಡುವುದೇ ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ರಾಜ್ಯ, ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಪ್ರಚಾರ ಸಾಹಿತ್ಯಗಳ ಪ್ರಕಟಣೆ ಹಾಗೂ ದೃಶ್ಯ ಶ್ರವಣ ಸಾಧನಗಳನ್ನು ಹೊರ  ತರಲಾಗುತ್ತಿದೆ. ಇದಲ್ಲದೆ ರಾಜ್ಯದ ರೈತ ಬಾಂಧವರ ಉಪಯೋಗಕ್ಕಾಗಿ ಆಕಾಶವಾಣಿ ಮತ್ತು ದೂರದರ್ಶನ ಕೇಂದ್ರಗಳ ಮೂಲಕ ಪ್ರತಿದಿನ ಮುಂಜಾನೆ ಮತ್ತು ಸಂಜೆ ವೇಳೆಯಲ್ಲಿ ರೈತರಿಗೆ ಸಲಹೆಗಳನ್ನು ಬಿತ್ತರಿಸಲಾಗುತ್ತಿದೆ.

ಆಗಿಂದ್ದಾಗ್ಗೆ ನೇರ ಪೋನ್ ಇನ್ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದೆ. ಸಮಯೋಚಿತವಾಗಿ ಪತ್ರಿಕಾ ಪ್ರಕಟಣೆಗಳನ್ನು ಸಹ ನೀಡಲಾಗುತ್ತಿದೆ. ಸಂದರ್ಭಕ್ಕೆ ಹಾಗೂ ಅಗತ್ಯತೆಗೆ ಅನುಸಾರವಾಗಿ ವಿಸ್ತರಣಾ ಸಾಹಿತ್ಯಗಳನ್ನು ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಪ್ರಕಟಿಸಲಾಗುತ್ತಿದ್ದು ಇದರ ಪ್ರಯೋಜನವನ್ನು ವಿಸ್ತರಣಾ ಕಾರ್ಯಕರ್ತರ ಮೂಲಕ ರಾಜ್ಯದ ರೈತಾಪಿ ಜನರು ಪಡೆಯುತ್ತಿದ್ದಾರೆ. ಪತ್ರಿಕಾ ಪ್ರಕಟಣೆಗಳನ್ನು ಮತ್ತು ರೈತರಿಗೆ ಸಲಹೆಗಳನ್ನು ಆಕಾಶವಾಣಿ ಮತ್ತು ಹಾಗೂ ದೂರದರ್ಶನ ಕೇಂದ್ರಗಳ ಮೂಲಕ ಪ್ರಸಾರಗೊಳ್ಳುತ್ತಿರುವ ಫೋನ್ ಇನ್ ಕಾರ್ಯಕ್ರಮಗಳ ಪ್ರಯೋಜನವನ್ನು ರಾಜ್ಯದೆಲ್ಲೆಡೆ ರೈತರು ಪಡೆಯುತ್ತಿದ್ದಾರೆ.

 

ವಿಸ್ತರಣಾಧಿಕಾರಿಗಳ ಮತ್ತು ರೈತರ /ರೈತ ಮಹಿಳೆಯರ ತರಬೇತಿ ಕಾರ್ಯಕ್ರಮ

ಯೋಜನೆಯ ಉದ್ದೇಶ:

ಕೃಷಿ ವಿಸ್ತರಣಾಧಿಕಾರಿಗಳ ನಿರ್ವಹಣಾ ಸಾಮರ್ಥ್ಯ ಮತ್ತು ರೈತರ/ ರೈತ ಮಹಿಳೆಯರಲ್ಲಿನ ವೃತ್ತಿ ಸಾಮರ್ಥ್ಯವನ್ನು ಹೆಚ್ಚಿಸಲು ತರಬೇತಿ, ಮತ್ತು ಕೃಷಿ ಅಧಿಕಾರಿ/ಸಹಾಯಕ ಕೃಷಿ ಅಧಿಕಾರಿ ಮತ್ತು  ಕೃಷಿ ಸಹಾಯಕರಿಗೆ ವೃತ್ತಿ ಸಾಮರ್ಥ್ಯವನ್ನು ಹೆಚ್ಚಿಸಲು ಸಾಮಾನ್ಯ ಬುನಾದಿ ತರಬೇತಿ ನೀಡುವುದು.

ಅ) ಸದೃಢ ಕೃಷಿ ವಿಸ್ತರಣಾ ವ್ಯವಸ್ಥೆಯನ್ನು ಹೊಂದುವುದು.

ಆ) ಇಲಾಖೆಯ ಕೃಷಿ ವಿಸ್ತರಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಹಾಗೂ ಕೃಷಿಯಲ್ಲಿ ತೊಡಗಿಸಿಕೊಂಡಿರುವ ರೈತರು/ರೈತಮಹಿಳೆಯರಿಗೆ ತರಬೇತಿ ನೀಡುವುದು.

ಭೂಚೇತನ

ಇದು ರಾಜ್ಯ ಸರ್ಕಾರದ ಯೋಜನೆಯಾಗಿದ್ದು ಕೇಂದ್ರ ಮತ್ತು ರಾಜ್ಯದ ಪಾಲು ನಿಗದಿಯಾಗಿರುವುದಿಲ್ಲ. ಯೋಜನೆ ಅನುಷ್ಠಾನಕ್ಕೆ ಸಮಗ್ರ ಕೃಷಿ ವಿಸ್ತರಣಾ ಪದ್ಧತಿ ಯೋಜನೆಯಡಿ ಒದಗಿಸಲಾಗಿರುವ ಅನುದಾನ ಹೊರತುಪಡಿಸಿ ಅವಶ್ಯವಿರುವ ಹೆಚ್ಚುವರಿ ಅನುದಾನವನ್ನು ಈ ಯೋಜನೆಯಡಿ ಒದಗಿಸಲಾಗಿದೆ. ಯೋಜನೆ ಉದ್ದೇಶ:

ಉತ್ತಮ ಖುಷ್ಕಿ ಬೇಸಾಯ ತಾಂತ್ರಿಕತೆಗಳನ್ನು (ಮಣ್ಣು ಮತ್ತು ನೀರು ಸಂರಕ್ಷಣೆ, ಸುಧಾರಿತ ತಳಿಗಳ ಬಳಕೆ, ಮಣ್ಣು ಪರೀಕ್ಷೆ ಆಧಾರಿತ ರಸಗೊಬ್ಬರ ಮತ್ತು ಲಘು ಪೋಷಕಾಂಶಗಳ ಬಳಕೆ) ಅಳವಡಿಸುವ ಮೂಲಕ ರಾಜ್ಯದ ಎಲ್ಲಾ ೩೦ ಜಿಲ್ಲೆಗಳ ಆಯ್ದ ಖುಷ್ಕಿ ಬೆಳೆಗಳಲ್ಲಿ ಇಳುವರಿಯನ್ನು ಶೇ.೨೦ ರಷ್ಟು ಹೆಚ್ಚಿಸುವುದು.

ರಾಜ್ಯದ ಖುಷ್ಕಿ ಪ್ರದೇಶದ ರೈತರ ಜೀವನ ಮಟ್ಟವನ್ನು ಉತ್ತಮಗೊಳಿಸಲು ಹಾಗೂ ರೈತರ ಆರ್ಥಿಕ  ಸ್ಥಿತಿಯನ್ನು ಸುಧಾರಿಸಲು ಕೃಷಿ ಕ್ಷೇತ್ರದ ಬೆಳವಣಿಗೆಯನ್ನು ತ್ವರಿತವಾಗಿ ಹೆಚ್ಚಿಸಬೇಕಾಗಿರುತ್ತದೆ.  ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರವು ೨೦೦೯-೧೦ ರಿಂದ ೨೦೧೨-೧೩ ಸಾಲಿನವರೆಗೆ ಭೂಚೇತನ ಯೋಜನೆಯನ್ನು ಹಾಗೂ ಎರಡನೇ ಹಂತದಲ್ಲಿ ೨೦೧೩- ೧೪ ರಿಂದ ೨೦೧೭-೧೮ರ ವರೆಗೆ ಹಮ್ಮಿಕೊಂಡಿದೆ. ಉತ್ತಮ ತಾಂತ್ರಿಕತೆಯನ್ನು ರೈತರಿಗೆ ತಲುಪಿಸುವ ಸಲುವಾಗಿ ರೈತ ಅನುವುಗಾರರ ಸೇವೆಯನ್ನು ಬಳಸಿಕೊಳ್ಳಲಾಗಿದೆ. ಈ ರೈತ ಅನುವುಗಾರರಿಗೆ ಉತ್ಪಾದನಾ ತಾಂತ್ರಿಕತೆಗಳಾದ ಬೀಜೋಪಚಾರ ರಸಗೊಬ್ಬರ ಪೀಡೆನಾಶಕಗಳ ಬಳಕೆ, ಸಮಗ್ರ ಪೋಷಕಾಂಶಗಳ ನಿರ್ವಹಣೆ ಹಾಗೂ  ಸಮಗ್ರ ಕೀಟ ನಿರ್ವಹಣೆ ಬಗ್ಗೆ ತರಬೇತಿ ನೀಡಲಾಗಿದೆ. ಇದಲ್ಲದೆ ರೈತರಿಗೆ ತರಬೇತಿ ಹಾಗೂ ಶೇ. ೫೦ ರಿಯಾಯಿತಿ ದರದಲ್ಲಿ ಜಿಪ್ಸಂ, ಲಘು ಪೋಶಕಾಂಶ, ರಸಗೊಬ್ಬರ, ಪೀಡೆ ನಾಶಕಗಳೂ ಹಾಗೂ ಸಸ್ಯ ಸಂರಕ್ಷಣ ಔಷಧಗಳನ್ನು ನೀಡಲಾಗುತ್ತಿದೆ.

ಭೂಸಮೃದ್ದಿ

ಇದು ರಾಜ್ಯ ಸರ್ಕಾರದ ಯೋಜನೆಯಾಗಿದ್ದು, ಯೋಜನೆ ಅನುಷ್ಠಾನಕ್ಕೆ ಅವಶ್ಯವಿರುವ ಅನುದಾನವನ್ನು ಸಮಗ್ರ ಕೃಷಿ ವಿಸ್ತರಣಾ ಪದ್ಧತಿ ಯೋಜನೆಯಡಿ ಒದಗಿಸಲಾಗಿದೆ.

ಯೋಜನೆ ಉದ್ದೇಶ:

೧) ನಾಲ್ಕು ವರ್ಷಗಳಲ್ಲಿ ಬೆಳೆ, ಉತ್ಪಾದನೆಯನ್ನು ಶೇ. ೨೦ ರಷ್ಟು ಮತ್ತು ರೈತರ ಆರ್ಥಿಕ ಮಟ್ಟವನ್ನು ಶೇ.೨೫ ರಷ್ಟು ಹೆಚ್ಚಿಸುವುದು,

೨) ಸಿಜಿಐಎಆರ್ ಸಂಸ್ಥೆಗಳು, ಕೃಷಿ ಮತ್ತು ಸಂಬಂಧಿಸಿದ ಇಲಾಖೆಗಳಾದ ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ, ಅರಣ್ಯೀಕರಣ ಮತ್ತು ಜಲಾನಯನ ಅಭಿವೃದ್ಧಿ ಇಲಾಖೆಗಳ ಸಹಯೋಗದೊಂದಿಗೆ  ನೂತನ ತಾಂತ್ರಿಕತೆಗಳನ್ನು ಅಳವಡಿಸುವುದು, ಮತ್ತು

೩) ಎಲ್ಲಾ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ, ಸಂಶೋಧನ ವಿಜ್ಞಾನಿಗಳ ಮತ್ತು ರೈತರ ಸಾಮರ್ಥ್ಯ ಅಭಿವೃದ್ಧಿ ಮತ್ತು ಕೌಶಲ್ಯ ಹೆಚ್ಚಿಸುವುದು.

ಅಂದಾಜು ಫಲಿತಾಂಶ/ ಫಲಾನುಭವಿಗಳು:

ಕರ್ನಾಟಕ ಸರ್ಕಾರದ ಆದೇಶದ ಪ್ರಕಾರ ಯೋಜನೆಯನ್ನು ೨೦೧೩-೧೪ ನೇ ಸಾಲಿನಿಂದ ೨೦೧೬-೧೭ ನೇ ಸಾಲಿನವರೆಗೆ ನಾಲ್ಕು ವರ್ಷಕ್ಕೆ ಪ್ರಾಯೋಗಿಕವಾಗಿ ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ, ಪ್ರತಿ ವಿಭಾಗಕ್ಕೆ ಒಂದು ಜಿಲ್ಲೆಯಂತೆ ತುಮಕೂರು, ರಾಯಚೂರು, ಚಿಕ್ಕಮಗಳೂರು ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಪ್ರಾರಂಭಿಸಲಾಗಿತ್ತು. ಪ್ರತಿ ಜಿಲ್ಲೆಯಲ್ಲಿ ೪೦,೦೦೦ ಹೆ. ನಂತೆ ಒಟ್ಟು ೧,೬೦,೦೦೦ ಹೆ. ಪ್ರದೇಶದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

೨೦೧೫-೧೬ನೇ ಸಾಲಿನಲ್ಲಿ ಪ್ರತಿ ಕಂದಾಯ ವಿಭಾಗಗಳಲ್ಲಿ, ಪ್ರತಿ ವಿಭಾಗಕ್ಕೆ ಮತ್ತೊಂದು ಜಿಲ್ಲೆಯಂತೆ ಬೀದರ್, ಧಾರವಾಡ, ಚಿಕ್ಕಬಳ್ಳಾಪುರ ಮತ್ತು ಉಡುಪಿ ಜಿಲ್ಲೆಗಳಲ್ಲಿ ಅನುಷ್ಠಾನ ಮಾಡಲಾಗಿದ್ದು, ಪ್ರತಿ ಜಿಲ್ಲೆಯಲ್ಲಿ ೧೦,೦೦೦ ಹೆ. ನಂತೆ ಒಟ್ಟು ೪೦,೦೦೦ ಹೆ ಪ್ರದೇಶದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೃಷಿ ಮತ್ತು ಸಂಬಂಧಿಸಿದ ಇಲಾಖೆಗಳಾದ ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ, ಅರಣ್ಯೀಕರಣ ಮತ್ತು ಜಲಾನಯನ ಅಭಿವೃದ್ಧಿ ಇಲಾಖೆಗಳು ಹಾಗೂ ಸಿಜಿಐಎಆರ್ ಸಂಸ್ಥೆಗಳ ಸಹಯೋಗದೊಂದಿಗೆ ನೂತನ ತಾಂತ್ರಿಕತೆಗಳನ್ನು ಅಳವಡಿಸಲಾಗಿದ್ದು ೨೦೧೫-೧೬ ನೇ ಸಾಲಿನಲ್ಲಿ  ೧,೧೦,೯೨೮ ಫಲಾನುಭವಿಗಳಿರುತ್ತಾರೆ.

ರಾಜ್ಯದ ಗ್ರಾಮೀಣ ಜನರ ಜೀವನಾಧಾರ ಉತ್ತಮ ಪಡಿಸಲು ಭೂಸಮೃದ್ಧಿ ಎಂಬ ನೂತನ ಯೋಜನೆಯನ್ನು ೨೦೧೩-೧೪ ನೇ ಸಾಲಿನಿಂದ ಆರಂಭಿಸಲಾಗಿದೆ. ಕೃಷಿ ಮತ್ತು ಸಂಬಂಧಿಸಿದ ಇಲಾಖೆಗಳೊಂದಿಗೆ ಚಾಲ್ತಿಯಲ್ಲಿರುವ ಕಾರ್ಯಕ್ರಮಗಳದ ಜೊತೆಗೆ, ನವೀನ ತಾಂತ್ರಿಕತೆಗಳನ್ನು ಗುರುತಿಸಿ ಕಾರ್ಯಕ್ರಮಗಳನ್ನು ರೂಪಿಸಿ ಜಿಲ್ಲೆಗಳ ಅನುಷ್ಠಾನ ಮಾಡಬೇಕಾಗಿರುತ್ತದೆ. ಇಕ್ರಿಸ್ಯಾಟ್ ಸಂಸ್ಥೆಯು ಸಿಜಿಐಎಆರ್ ಸಂಸ್ಥೆಗಳ ಪರವಾಗಿ ನೋಡಲ್ ಸಂಸ್ಥೆಯಾಗಿ ನೇಮಕಗೊಂಡಿದ್ದು, ಸಿಜಿಐಎಆರ್ ಸಂಸ್ಥೆಗಳ ಸಹಯೋಗದೊಂದಿಗೆ ಕಾರ್ಯಕ್ರಮಗಳನ್ನು ಆಯ್ದ ಎಂಟು ಜಿಲ್ಲೆಗಳಲ್ಲಿ ಅನುಷ್ಠಾನ ಮಾಡಲಾಗುತ್ತಿದೆ.

ಕೃಷಿ ವಿಸ್ತರಣೆ ಮತ್ತು ತರಬೇತಿ

ಇಲಾಖೆಯ ಯೋಜನೆಗಳ ಸಮರ್ಪಕ ಅನುಷ್ಠಾನ, ತಂತ್ರಜ್ಞಾನ ವರ್ಗಾವಣೆಯ ಮೂಲಕ ರೈತ ಸಂಪರ್ಕ ಕೇಂದ್ರಗಳ ಬಲವರ್ಧನೆಗಾಗಿ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದಿಂದ ಅಂತಿಮ ವರ್ಷದ ವಿದ್ಯಾರ್ಥಿಗಳನ್ನು, ಕನಿಷ್ಠ ಪ್ರಾಯೋಗಿಕ ಕೌಶಲ್ಯ ಕ್ಷೇತ್ರ ಅನುಭವ ಮತ್ತು ಜ್ಞಾನಕ್ಕಾಗಿ ರೈತ ಸಂಪರ್ಕ ಕೇಂದ್ರಗಳಿಗೆ ಕನಿಷ್ಠ ಮೂರು ತಿಂಗಳ ಅವಧಿಗೆ ನಿಯೋಜಿಸಲು ಪ್ರತಿ ವಿದ್ಯಾರ್ಥಿಗೆ ಮಾಸಿಕ ರೂ ೩,೦೦೦ ಗೌರವಧನ ನೀಡಲಾಗುವುದು.

 

ಹಸಿರು ಹಬ್ಬ/ಕೃಷಿ ಉತ್ಸವ/ಕೃಷಿ ಅಭಿಯಾನ

ಕೃಷಿ ಬೆಳೆಗಳ ಉತ್ಪಾದಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮತ್ತು ಅವಶ್ಯವಿರುವ ತಂತ್ರಜ್ಞಾನವನ್ನು ತಲುಪಿಸಲು, ಕೃಷಿ ಮತ್ತು ವಿವಿಧ ಅಭಿವೃದ್ಧಿ ಇಲಾಖೆಗೆ ಸಮನ್ವಯದೊಂದಿಗೆ ಸಮಗ್ರ ಕೃಷಿ ಮಾಹಿತಿಯನ್ನು ರೈತರಿಗೆ ತಲುಪಿಸುವ ಸಮೂಹ ಜಾಗೃತಿ ಕಾರ್ಯಕ್ರಮವಾಗಿ ’ಕೃಷಿ ಅಭಿಯಾನ’ವನ್ನು ಹಮ್ಮಿಕೊಂಡಿದೆ.

ಕೃಷಿ ಅಭಿಯಾನದ ಉದ್ದೇಶ

೧) ಕೃಷಿ ಹಾಗೂ ಬೇಸಾಯ ಸಂಬಂಧಿತ ಇಲಾಖೆಗಳ ಸಮನ್ವಯದೊಂದಿಗೆ ಸಮಗ್ರ ಕೃಷಿ ಮಾಹಿತಿಯನ್ನು ರೈತರಿಗೆ ತಲುಪಿಸುವುದು,

೨) ಉತ್ಪಾದಕತೆ ಹೆಚ್ಚಿಸುವ ತಾಂತ್ರಿಕತೆಗಳ ಮನವರಿಕೆ ಮತ್ತು ವಿಜ್ಞಾನಿಗಳೊಂದಿಗೆ ರೈತರ ಸಂವಾದ. ಕೃಷಿ ಅಭಿಯಾನವನ್ನು ’ಇಲಾಖೆಗಳ ನಡಿಗೆ ರೈತರ ಬಾಗಿಲಿಗೆ’ ಎಂಬ ಶೀರ್ಷಿಕೆಯಲ್ಲಿ ಆಯೋಜಿಸಲಾಗಿದೆ,

ಸದರಿ ಕಾರ್ಯಕ್ರಮದಿಂದ ನಿರೀಕ್ಷಿಸಲಾಗುವ ಫಲಿತಾಂಶಗಳು: ೧) ಕೃಷಿ ಇಲಾಖೆ ಮತ್ತು ಇತರೆ ಅಭಿವೃದ್ಧಿ ಇಲಾಖೆಗಳ ಯೋಜನೆಗಳ ಮಾಹಿತಿ ರೈತರ ಬಾಗಿಲಿಗೆ ತಲುಪಿಸುವುದು, ೨) ರೈತರ ಮತ್ತು ಕೃಷಿ ವಿಜ್ಞಾನಿಗಳ ನಡುವೆ ಚರ್ಚೆ/ನೇರ ಸಂವಾದ/ಸಮಸ್ಯೆಗಳಿಗೆ ಸ್ಪಂದನ, ೩) ತಾಂತ್ರಿಕತೆಗಳ ಅಳವಡಿಕೆಯನ್ನು ಪ್ರೋತ್ಸಾಹಿಸುತ್ತಾ, ಆಹಾರ ಬೆಳೆಗಳ ಉತ್ಪಾದಕತೆಯಲ್ಲಿ ಗಮನಾರ್ಹ ಬದಲಾವಣೆ ತರುವುದು.

 

ಕೃಷಿ ವಿಸ್ತರಣೆ ಮತ್ತು ತರಬೇತಿ-ರೈತರ ಅಧ್ಯಯನ ಪ್ರವಾಸ

ಯೋಜನೆ ಉದ್ದೇಶ

ಕೃಷಿ ಪಂಡಿತ/ ಕೃಷಿ ಪ್ರಶಸ್ತಿ/ ಕೃಷಿ ವಿಶ್ವವಿದ್ಯಾಲಯಗಳಿಂದ ಪ್ರಶಸ್ತಿ ವಿಜೇತ ರೈತರನ್ನು ದೇಶದ ಯಾವುದಾದರೂ ಒಂದು ರಾಜ್ಯದಲ್ಲಿ ಇರುವ ಕೃಷಿ ವಿಶ್ವವಿದ್ಯಾಲಯ, ಕೃಷಿ ಸಂಶೋಧನಾ ಕೇಂದ್ರ, ಕೃಷಿ ಸಂಬಂಧಿತ ಚಟುವಟಿಕೆಗಳ ಸಂಸ್ಥೆಗಳಲ್ಲಿ ಹಾಗೂ ರೈತರ ತಾಲೂಕುಗಳಲ್ಲಿ ಇತ್ತೀಚಿನ ದಿನಗಳಲ್ಲಿ ಆಗಿರುವ ನವೀನ ತಾಂತ್ರಿಕತೆಗಳನ್ನು, ಬದಲಾಗಿರುವ ಕೃಷಿ ಪದ್ಧತಿಗಳನ್ನು ಮಣ್ಣು ಮತ್ತು ನೀರು ನಿರ್ವಹಣೆಯಲ್ಲಿ ಉತ್ತಮ ಸಾಧನೆ ಮಾಡಿರುವ ಕುರಿತು ಅರಿವು ಮೂಡಿಸುವ ಕುರಿತು ಪ್ರವಾಸವನ್ನು ಏರ್ಪಡಿಸಲಾಗಿದೆ. ಸದರಿ ಪ್ರವಾಸದ ಅವಧಿಯು ಆರು ದಿನಗಳಾಗಿರುತ್ತದೆ. ರೈತರ ಇತರ ರಾಜ್ಯಗಳ ಕೃಷಿ ಸಂಶೋಧನ ಕೇಂದ್ರ ಸಂಸ್ಥೆಗಳು ಮತ್ತು ಇತರ ರೈತರ ತಾಕುಗಳಿಗೆ ಬೇಟಿ ನೀಡುವುದರಿಂದ ಬದಲಾಗಿರುವ ಕೃಷಿ ಪದ್ಧತಿಗಳು ಮತ್ತು ನವೀನ ತಾಂತ್ರಿಕತೆಗಳ ಬಗ್ಗೆ ಅರಿವು ಮೂಡಿಸುವುದು. ೧,೨೬೪ ರೈತರನ್ನು ಪ್ರವಾಸಕ್ಕೆ ಕಳುಹಿಸಲಾಗಿದೆ.

 

ರಾಷ್ಟ್ರೀಯ ಕೃಷಿ ವಿಮಾ ಯೋಜನೆ

ಪ್ರಾಯೋಗಿಕ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ

ಹಿಂಗಾರು ಹಂಗಾಮು: ಯೋಜನೆಯ ಉದ್ದೇಶಗಳು: ೧) ಪ್ರಕೃತಿ ವಿಕೋಪಗಳು, ಕೀಟಗಳು ಮತ್ತು ರೋಗಗಳಿಂದಾಗಿ ಯಾವುದೇ ಅಧಿಸೂಚಿತ ಬೆಳೆ ವಿಫಲವಾದ ಪಕ್ಷದಲ್ಲಿ ರೈತರಿಗೆ ವಿಮಾ ರಕ್ಷಣೆ ಮತ್ತು ಹಣಕಾಸು ಬೆಂಬಲ ಒದಗಿಸಲಾಗುವುದು, ೨) ಕೃಷಿಯಲ್ಲಿ ಪ್ರಗತಿಪರ ಬೇಸಾಯ ಪದ್ಧತಿಗಳನ್ನು, ಹೆಚ್ಚಿನ ಮೌಲ್ಯದ ಪರಿಕರಗಳನ್ನು ಉನ್ನತ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ರೈತರಿಗೆ ಪ್ರೋತ್ಸಾಹ  ನೀಡುವುದು, ೩) ಕೃಷಿ ವರಮಾನವು, ವಿಶೇಷವಾಗಿ ವಿಪತ್ತೊದಗಿದ ಸನ್ನಿವೇಷಗಳಲ್ಲಿ ಸ್ಥಿರವಾಗಿರುವಂತೆ  ಮಾಡಲು ನೆರವಾಗುವುದು, ೪) ವಿಮಾ ಹಣ ನೀಡುವ ಮೂಲಕ ರೈತರನ್ನು ಹವಾಮಾನ ವೈಪರಿತ್ಯಗಳಿಂದ  ಅಂದರೆ, ಅರಿವೃಷ್ಠಿ, ಅನಾವೃಷ್ಠಿ, ಆರ್ಧ್ರತೆ, ಗಾಳಿಯ ವೇಗ ಮತ್ತು ತಾಪಮಾನಗಳಿಂದ ರಕ್ಷಣೆ ನೀಡುತ್ತದೆ, ಮತ್ತು ೫) ಸ್ಥಳೀಯ ಪ್ರಕೃತಿ ವಿಕೋಪಗಳಾದ ಅಲಿಕಲ್ಲು ಮಳೆ ಮತ್ತು ಭೂ ಕುಸಿತದಿಂದ ಉಂಟಾಗುವ ನಷ್ಟದ ನಿರ್ದರಣೆಯನ್ನು ವೈಯುಕ್ತಿಕವಾಗಿ ನಿರ್ಧರಿಸಿ ಬೆಳೆವಿಮಾ ನಷ್ಟ ಪರಿಹಾರವನ್ನು  ಇತ್ಯರ್ಥಪಡಿಸಲಾಗುವುದು.

 

ಕೃಷಿ ಪಂಡಿತ ಪ್ರಶಸ್ತಿ

ಕೃಷಿ ವಲಯದಲ್ಲಿ ತಮ್ಮ ಅಮೂಲ್ಯ ಅನ್ವೇಷಣೆ/ ವಿಶಿಷ್ಟ ಸಾಧನೆ/ಸೃಜನಾತ್ಮಕ ಕಾರ್ಯಗಳ ಮೂಲಕ ರೈತ ಸಮುದಾಯದ ಶ್ರೇಯೋಭಿವೃದ್ಧಿಗೆ ಅಪಾರ ಕೊಡುಗೆ ನೀಡುತ್ತಿರುವ ಪರಿಣಿತ ರೈತ ಮಹನೀಯರುಗಳನ್ನು ಗುರುತಿಸಿ, ಈ ಕೆಳಕಂಡ ನಾಲ್ಕು ವಿಭಾಗಗಳಲ್ಲಿ ಪ್ರತಿ ವರ್ಗಕ್ಕೆ ಮೂರು ಕೃಷಿ ಪಂಡಿತ ಪ್ರಶಸ್ತಿಗಳನ್ನು ನಗದು ಬಹುಮಾನದೊಂದಿಗೆ ನೀಡಿ ಗೌರವಿಸುವುದೇ ಈ ಯೋಜನೆಯ ಮುಖ್ಯ ಉದ್ದೇಶ.

ಪರಿಗಣಿಸಲಾಗುವ ಕೃಷಿ ಕ್ಷೇತ್ರದ ನಾಲ್ಕು ವಿಭಾಗಗಳು: (೧) ನೀರಿನ ಸಮರ್ಥ ಬಳಕೆ (೨) ಸಾವಯವ ಕೃಷಿ (೩) ಕೃಷಿ ಯಂತ್ರೋಪಕರಣಗಳ ಅಭಿವೃದ್ಧಿ (೪) ಸಮಗ್ರ ಕೃಷಿ ಪದ್ಧತಿ/ಬೆಳೆ ಪದ್ಧತಿ ಮತ್ತು ಬೆಳೆ ವೈವಿಧ್ಯೀಕರಣ.

ರೈತರಿಗೆ ಕೃಷಿ ಉತ್ಪಾದನಾ ಬಹುಮಾನಗಳು:

ಯೋಜನೆ ಉದ್ದೇಶ: ಕಳೆದ ಮೂರು ದಶಕಗಳಿಂದ ರಾಜ್ಯದ ಕೃಷಿ ಉತ್ಪಾದನೆ ಗಣನೀಯವಾಗಿ ಹೆಚ್ಚಳವಾಗಲು ರೈತರ ಶ್ರಮ ಮತ್ತು ಸಕ್ರಿಯ ಪಾಲುಗಾರಿಕೆ ಕಾರಣವಾಗಿರುತ್ತದೆ. ರಾಜ್ಯದ ರೈತರ ಪರಿಶ್ರಮ/ ಪ್ರಯತ್ನಕ್ಕೆ ಪ್ರೋತ್ಸಾಹ ನೀಡಲು ಹಾಗೂ ರೈತರಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸಲು ರಾಜ್ಯ, ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಆಯ್ದ ಬೆಳೆಗಳಲ್ಲಿ ಪ್ರತಿ ಬೆಳೆಗೆ ಮೂರು ಕೃಷಿ ಪ್ರಶಸ್ತಿ ಬಹುಮಾನಗಳನ್ನು ನೀಡಲಾಗುತ್ತದೆ.

ಗ್ರಾಮೀಣ ಗೋದಾಮುಗಳಿಗೆ ಬಡ್ಡಿ ಸಹಾಯಧನ

ಕೃಷಿ ಸಮೀಪದ ಪಟ್ಟಣಗಳು ಮತ್ತು ಗ್ರಾಮಗಳಲ್ಲಿ ರೈತರಿಗೆ ಉಗ್ರಾಣ ಮತ್ತು ಶೀತಲೀಕರಣ ಘಟಕಗಳ ನಿರ್ಮಾಣವನ್ನು ಪ್ರೋತ್ಸಾಹಿಸಲು ಬಡ್ಡಿ ಸಹಾಯಧನ ನೀಡುವುದು. ಈ ಘಟಕಗಳಿಂದ ಕೃಷಿ ಉತ್ಪನ್ನಗಳನ್ನು ಸಂಗ್ರಣೆ ಮಾಡುವುದರಿಂದ ಉತ್ಪನ್ನಗಳು ಬೇಗನೆ ಹಾಳಾಗುವುದನ್ನು ತಡೆಯಬಹುದು. ಈ ಯೋಜನೆ ಅನುಷ್ಟಾನಕ್ಕಾಗಿ ಅನುದಾನವನ್ನು kappec ಸಂಸ್ಥೆಗೆ ಬಿಡುಗಡೆ ಮಾಡುವುದು. ಕೃಷಿ ಉತ್ಪನ್ನಗಳನ್ನು ಸಂಗ್ರಹಿಸಲು ಮತ್ತು ಬೇಗನೆ ಹಾಳಾಗದಂತೆ ತಡೆಯಲು ಗ್ರಾಮೀಣ ಗೋದಾಮುಗಳು ಮತ್ತು ಶೀತಲೀಕರಣ ಘಟಕಗಳ ನಿರ್ಮಾಣಕ್ಕೆ ಬಡ್ಡಿ ಸಹಾಯಧನ ನೀಡುವುದು.

ಕೃಷಿ ಭಾಗ್ಯ ಯೋಜನೆ

ಯೋಜನೆ ಉದ್ದೇಶ

ಮಳೆ ನೀರಿನ ಸಂರಕ್ಷಣೆ, ಸಂಗ್ರಹಣೆ ಹಾಗೂ ಉಪಯುಕ್ತ ಬಳಕೆ, ಲಾಭದಾಯಕ ಬೆಳೆ ಪದ್ಧತಿಗಳ ಅಳವಡಿಕೆ, ಉತ್ತಮ ಆದಾಯ ತರುವ ತೋಟಗಾರಿಕೆ ಬೆಳೆಗಳು, ಪಶುಸಂಗೋಪನಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವುದರ ಮೂಲಕ ಕೃಷಿಯಲ್ಲಿ ಸುಸ್ಥಿರ ಅಭಿವೃದ್ಧಿಯ ಆಶಯ ಹೊಂದಲಾಗಿದೆ. ಕೃಷಿ ಹೊಂಡದಲ್ಲಿ ಸಂಗ್ರಹಣೆಯಾದ ನೀರನ್ನು ಬೆಳೆಗಳಿಗೆ ಸಂದಿಗ್ಧ ಪರಿಸ್ಥಿತಿಯಲ್ಲಿ ರಕ್ಷಣಾತ್ಮಕವಾಗಿ ಉಪಯೋಗಿಸಿ ಬೆಳೆಯ ಇರುವಿಕೆಯನ್ನು ಕಾಪಾಡಿಕೊಳ್ಳಬಹುದಾಗಿದೆ. ಪಾಲಿಹೌಸ್ /ನೆರಳು ಪರದೆ ವಿನ್ಯಾಸದಡಿ ಬೆಳೆದ ಬೆಳೆಗಳಿಗೆ ಶೇ.೪೦-೫೦ ರಷ್ಟು ಅಧಿಕ ಇಳುವರಿ ಪಡೆಯಬಹುದಾಗಿದೆ.

 

ಭೂಚೇತನ (ಸಮಗ್ರ ಕೃಷಿ ವಿಸ್ತರಣಾ ಪದ್ಧತಿ ಯೋಜನೆ)

ಒಣ ಬೇಸಾಯ ಮಾಡುವ ಕೃಷಿಕರ ಸಹಾಯಕ್ಕಾಗಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ(ಆರ್.ಕೆ.ವಿ.ವೈ)ಯಲ್ಲಿ ವೈಜ್ಞಾನಿಕ ಪದ್ಧತಿಯನ್ನು ಅಳವಡಿಸಿಕೊಂಡು ಒಣಭೂಮಿಯಲ್ಲಿ ಬೆಳೆಯುವ ಬೆಳೆಗಳ ಇಳುವರಿಯನ್ನು ಹೆಚ್ಚಿಸುವ ಸಲುವಾಗಿ ಭೂಚೇತನ ಎಂಬ ಹೊಸ ಕಾರ್ಯಕ್ರಮವನ್ನು ೨೦೦೯-೧೦ ರಿಂದ ಪ್ರಾರಂಭಿಸಲಾಗಿದೆ. ಈ ಯೋಜನೆಯ ಮುಖ್ಯ ಅಂಶಗಳು ಹೀಗಿವೆ. ೧) ವೈಜ್ಞಾನಿಕ ಬೇಸಾಯ ಪದ್ಧತಿಯಿಂದ ರಾಜ್ಯದ ೨೪ ಒಣ ಬೇಸಾಯ ಮಾಡುವ ಜಿಲ್ಲೆಗಳಲ್ಲಿ ಬೆಳೆಗಳ ಇಳುವರಿಯನ್ನು ಶೇಕಡ ೨೦ರಷ್ಟು ಹೆಚ್ಚಿಸುವುದು, ೨) ಆಯ್ಕೆಯಾದ ಜಿಲ್ಲೆಗಳಲ್ಲಿ ಜಿ.ಐ.ಎಸ್. ಆಧಾರಿತ ಮಣ್ಣು ನಕ್ಷೆ ಹಾಗೂ ಪರೀಕ್ಷೆ ಕೈಗೊಂಡು ರೈತರಿಗೆ ಭೂ ಆರೋಗ್ಯ ಚೀಟಿಗಳನ್ನು ಹಂಚುವುದು, ೩) ಕೃಷಿ ವಿಶ್ವವಿದ್ಯಾಲಯ, ಇಕ್ರಿಸ್ಯಾಟ್ ಸಂಸ್ಥೆ ಹಾಗೂ ಇತರ ಸಂಬಂಧಿತ ಇಲಾಖೆಗಳ ಸಮನ್ವಯದಿಂದ ಒಣ ಬೇಸಾಯ ಮಾಡುವ ರೈತರ ಗ್ರಹಣ ಶಕ್ತಿಯನ್ನು ಹೆಚ್ಚಿಸಲಾಗುವುದು, ೪) ಇಕ್ರಿಸ್ಯಾಟ್ ಸಂಸ್ಥೆ, ಹೈದರಾಬಾದ್‌ರವರು ಸಲಹೆ  ಮಾಡಿದ ತಾಂತ್ರಿಕತೆಯನ್ನು ಅಳವಡಿಸಿ ಈ ಯೋಜನೆಯನ್ನು ಅನುಷ್ಟಾನಗೊಳಿಸಲಾಗುವುದು.

ಈ ಯೋಜನೆಯಡಿಯಲ್ಲಿ ರೈತರಿಗೆ ಬಿತ್ತನೆ ಬೀಜ, ಲಘು ಪೋಷಾಕಾಂಶಗಳು, ಜೈವಿಕ ಗೊಬ್ಬರ ಮುಂತಾದ ಪರಿಕರಗಳನ್ನು ಇಲಾಖೆಯ ಚಾಲ್ತಿ ಯೋಜನೆಗಳ ಅಡಿಯಲ್ಲಿ ವಿತರಿಸಲಾಗುವುದು ಹಾಗೂ ಇದಲ್ಲದೆ, ರೈತರನ್ನು ಲಘು ಪೋಷಕಾಂಶಗಳ ಬಳಕೆ ಮತ್ತು ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಉತ್ತೇಜಿಸಲಾಗುವುದು. ರಾಜ್ಯದ ಖುಷ್ಕಿ ಪ್ರದೇಶದ ರೈತರ ಜೀವನ ಮಟ್ಟವನ್ನು ಉತ್ತಮಗೊಳಿಸಲು ಹಾಗೂ ರೈತರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಕೃಷಿ ಕ್ಷೇತ್ರದ ಬೆಳವಣಿಗೆಯನ್ನು ತ್ವರಿತವಾಗಿ ಹೆಚ್ಚಿಸಬೇಕಾಗಿರುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ೨೦೦೯-೧೦ ರಿಂದ ೨೦೧೨-೧೩ ಸಾಲಿನವರೆಗೆ ಭೂ ಚೇತನಾ ಯೋಜನೆಯನ್ನು ಹಾಗೂ ಎರಡನೇ ಹಂತದಲಿ ೨೦೧೩-೧೪ ರಿಂದ ೨೦೧೭-೧೮ ರವರೆಗೆ ಹಮ್ಮಿಕೊಂಡಿದೆ.

೨೦೧೫-೧೬ನೇ ಸಾಲಿನಲ್ಲಿ ಈ ಯೋಜನೆಯನ್ನು ಎಲ್ಲಾ ೩೦ ಜಿಲ್ಲೆಗಳಲ್ಲಿ ಮುಖ್ಯ ಬೆಳೆಗಳಲ್ಲಿ ಮುಂಗಾರು ಹಂಗಾಮಿನಲ್ಲಿ ೪೪.೩ ಲಕ್ಷ ಹೆ. ಹಾಗೂ ಹಿಂಗಾರು ಹಂಗಾಮಿನಲ್ಲಿ ೨೨.೭೧ ಲಕ್ಷ ಹೆ. ಪ್ರದೇಶದಲ್ಲಿ ಅನುಷ್ಠಾನಗೊಳಿಸಲಾಗಿದೆ. ಉತ್ತಮ ತಾಂತ್ರಿಕತೆಯನ್ನು ರೈತರಿಗೆ ತಲುಪಿಸುವ ಸಲುವಾಗಿ ಅನುವುಗಾರರ ಸೇವೆಯನ್ನು ಬಳಸಿಕೊಳ್ಳಲಾಗಿದೆ. ಈ ರೈತ ಅನುವುಗಾರರಿಗೆ ಉತ್ಪಾದನಾ ತಾಂತ್ರಿಕತೆಗಳಾದ ಬೀಜೋಪಚಾರ, ರಸಗೊಬ್ಬರ, ಪೀಡೆನಾಶಕಗಳ ಬಳಕೆ, ಸಮಗ್ರ ಪೋಷಕಾಂಶಗಳ ನಿರ್ವಹಣೆ ಹಾಗೂ ಸಮಗ್ರ ಕೀಟ ನಿರ್ವಹಣೆ ಬಗ್ಗೆ ತರಬೇತಿ ನೀಡಲಾಗಿದೆ. ಇದಲ್ಲದೆ ರೈತರಿಗೆ ತರಬೇತಿ ಹಾಗೂ ಶೇ ೫೦ ರಿಯಾಯತಿ ದರದಲ್ಲಿ ಜಿಪ್ಸಂ, ಲಘು ಪೋಷಕಾಂಶ, ರಸಗೊಬ್ಬರ, ಪೀಡೆನಾಶಕಗಳು ಹಾಗೂ ಸಸ್ಯ ಸಂರಕ್ಷಣಾ ಔಷಧಿಗಳನ್ನು ನೀಡಲಾಗುತ್ತಿದೆ.

 

ರಾಷ್ಟ್ರೀಯ ಕೃಷಿ ವಿಮಾ ಯೋಜನೆ

ರಾಷ್ಟ್ರೀಯ ಕೃಷಿ ವಿಮಾ ಯೋಜನೆಯು ರಾಜ್ಯದಲ್ಲಿ ೨೦೦೦ರ ಮುಂಗಾರು ಹಂಗಾಮಿನಿಂದ ಅನುಷ್ಠಾನಗೊಳಿಸಲಾಗಿದೆ ಹಾಗೂ ೨೦೧೫-೧೬ ನೇ ಸಾಲಿನಲ್ಲಿ ಮುಂದುವರಿಸಲಾಗಿದೆ. ಈ ಯೋಜನೆಯಡಿ ಬೆಳೆ ಸಾಲ ಪಡೆದ ಹಾಗೂ ಬೆಳೆ ಸಾಲ ಪಡೆಯದ ಎಲ್ಲಾ ರೈತರೂ ಒಳಗೊಳ್ಳಬಹುದಾಗಿದ್ದು. ಪ್ರಾಕೃತಿಕ ವಿಕೋಪಗಳಿಂದ ಬೆಳೆ ನಷ್ಟವಾದಾಗ ಬೆಳೆ ನಷ್ಟ ಪರಿಹಾರ ನೀಡಲಾಗುವುದು. ಬೆಳೆ ಸಾಲ ಪಡೆದ ರೈತರಿಗೆ ಯೋಜನೆಯು ಕಡ್ಡಾಯವಾಗಿದ್ದು. ಬೆಳೆ ಸಾಲ ಪಡೆಯದ ರೈತರಿಗೆ ಸ್ವಯಿಚ್ಚೆಯಿಂದ ಯೋಜನೆಗೆ ಒಳಪಡಬಹುದು. ಸಣ್ಣ ಮತ್ತು ಅತಿಸಣ್ಣ ರೈತರಿಗೆ ವಿಮಾ ಕಂತಿನ ಮೇಲೆ ಶೇಕಡಾ ೧೦ರ ಸಹಾಯಧನವನ್ನು ನೀಡಲಾಗಿದೆ. ಬೆಳೆಯ ಇಂಡೆಮ್ನಿಟಿ ಮಟ್ಟ ಆಧರಿಸಿ ಪ್ರಾರಂಭಿಕ ಇಳುವರಿ ಮತ್ತು ವಾಸ್ತವಿಕ ಇಳುವರಿ ಇವುಗಳನ್ನು ಗಣನೆಗೆ ತೆಗೆದುಕೊಂಡು ಇಳುವರಿಯಲ್ಲಿನ ಕೊರತೆಗನುಗುಣವಾಗಿ ಹಾಗೂ ವಿಮಾ ಮೊತ್ತಕ್ಕನುಗುಣವಾಗಿ ಬೆಳೆ ನಷ್ಟ ಪರಿಹಾರವನ್ನು ನೀಡಲಾಗುವುದು.

೨೦೦೯-೧೦ರ ಮುಂಗಾರು, ಹಿಂಗಾರು ಮತ್ತು ಬೇಸಿಗೆ ಹಂಗಾಮುಗಳಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಸ್ಥಳ ನಿರ್ದಿಷ್ಟ ಪ್ರಕೃತಿ ವಿಕೋಪಗಳಾದ ಅಲೀಕಲ್ಲು ಮಳೆ, ಚಂಡಮಾರುತ, ಪ್ರವಾಹ ಮತ್ತು ಭೂ ಕುಸಿತ ಉಂಟಾದ ಸಂದರ್ಭದಲ್ಲಿ ರೈತರಿಗೆ ವೈಯಕ್ತಿಕವಾಗಿ ಬೆಳೆನಷ್ಟ ನಿರ್ಧರಣೆಗಾಗಿ ಅಳವಡಿಸಿ ಅಧಿಸೂಚಿಸಲಾಗಿದೆ.

 

ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ

ರಾಷ್ಟ್ರೀಯ ಕೃಷಿ ವಿಮಾ ಯೋಜನೆಗೆ ಪರ್ಯಾಯವಾಗಿ ಈ ಯೋಜನೆಯನ್ನು ಭಾರತ ಸರ್ಕಾರ ರೂಪಿಸಿದ್ದು, ರಾಷ್ಟ್ರದಲ್ಲಿ ೨೦೦೭ರ ಮುಂಗಾರು ಹಂಗಾಮಿನಿಂದ ಅನುಷ್ಠಾನಗೊಳಿಸಲಾಗಿದೆ. ಹವಾಮಾನ ವೈಪರೀತ್ಯಗಳಿಂದ ಉಂಟಾಗುವ ಬೆಳೆ ಹಾನಿಯಿಂದ ಅನುಭವಿಸುವ ನಷ್ಟ ರೈತರಿಗೆ ಅರ್ಥಿಕ ನಷ್ಟವನ್ನು ಯೋಜನೆಯು ತುಂಬಿಕೊಡುತ್ತದೆ. ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿ ಮತ್ತು ಅನಾವೃಷ್ಟಿಯ ಸಂದರ್ಭದಲ್ಲಿ ರಕ್ಷಣೆ ನೀಡುತ್ತದೆ. ಹಿಂಗಾರು ಹಂಗಾಮಿನಲ್ಲಿ ಅಕಾಲಿಕ ಮಳೆ, ತಾಪಮಾನ, ಗಾಳಿಯ ವೇಗ ಹಾಗೂ ಆರ್ದ್ರತೆಗಳಿಂದ ಆಗುವ ತೊಂದರೆಗಳಿಂದ ರಕ್ಷಣೆ ನೀಡುತ್ತದೆ. ಯೋಜನೆಯು ಬೆಳೆ ಸಾಲ ಪಡೆಯದ ರೈತೆರಿಗೆ ಐಚ್ಚಿಕವಾಗಿರುತ್ತದೆ. ಬೆಳೆ ನಷ್ಟ ಪರಿಹಾರ ವಿಮಾ ಸಂಸ್ಥೆಯ ಹೊಣೆಗಾರಿಕೆಯಾಗಿರುತ್ತದೆ. ೨೦೧೪-೧೫ ರ ಹಿಂಗಾರು ಹಂಗಾಮಿನಲ್ಲಿ ೧೦ ತೋಟಗಾರಿಕಾ ಬೆಳೆಗಳಾದ ಮೆಣಸಿನಕಾಯಿ (ನೀರಾವರಿ), ಈರುಳ್ಳಿ (ನೀರಾವರಿ),ಆಲೂಗೆಡ್ಡೆ (ನೀರಾವರಿ), ದಾಳಿಂಬೆ, ದ್ರಾಕ್ಷಿ, ಸಿಹಿ ಕಿತ್ತಳೆ, ಟೊಮ್ಯಾಟೊ, ಬೆಳ್ಳುಳ್ಳಿ, ಮಾವು ಮತ್ತು ಗೋಡಂಬಿ ಇವುಗಳನ್ನು ೭೧೭ ಸಂಬಂಧಿಸಿದ ಕ್ಷೇತ್ರ ಘಟಕಗಳಲ್ಲಿ ರಾಜ್ಯದ ೨೯ ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲಾಗಿರುತ್ತದೆ.

ರೈತ ಮಿತ್ರ ಯೋಜನೆ

ಪರಿಚಯ ಮತ್ತು ಹಿನ್ನೆಲೆ: ದೇಶದ ಉಳಿದೆಡೆ ಇರುವ ಹಾಗೆ ಕರ್ನಾಟಕದ ಕೃಷಿ ಸಹ ೬೦ರ ದಶಕದ ಪೂರ್ವ ಭಾಗದಿಂದ ದಾಪುಗಾಲು ಹಾಕಿ ಮುಂದೆ ಸಾಗುತ್ತಿದೆ. ಒಟ್ಟು ಜನಸಂಖ್ಯೆ ಪೈಕಿ, ಗ್ರಾಮೀಣ ಜನಸಂಖ್ಯೆ ಶೇ.೭೬ರಷ್ಟಿದ್ದು, ಅವರಲ್ಲಿ ಬಹುಪಾಲು ಮಂದಿ ಬೇಸಾಯ ಮತ್ತು ಪೂರಕ ಚಟುವಟಿಕೆಗಳಲ್ಲಿ ತೊಡಗಿಕೊಂಡವರಾಗಿದ್ದಾರೆ. ೨೦೦೧ರ ಜನಗಣತಿ ವರದಿ ಪ್ರಕಾರ ಕೃಷಿ ಹಾಗೂ ತತ್ಸಂಬಂಧಿ ಚಟುವಟಿಕೆಗಳ ಕೊಡುಗೆ ರಾಜ್ಯದ ಆದಾಯದಲ್ಲಿ ಶೇ. ೪೯ ರಷ್ಟು ವರಮಾನಕ್ಕೆ ಮೂಲವಾಗಿದೆ. ಇದು, ರಾಜ್ಯದಲ್ಲಿ ಕೃಷಿಯ ಪ್ರಾಧಾನ್ಯತೆಯ ಪ್ರತಿಬಿಂಬವಾಗಿದೆ. ೧೯೭೭-೭೮ ರಲ್ಲಿ ರಾಜ್ಯದಲ್ಲಿ ಕೃಷಿ ವಿಸ್ತರಣೆ ಕಾರ್ಯಕ್ರಮವನ್ನು ಪರಿಚಯಿಸಲಾಯಿತು ಹಾಗೂ ಇದನ್ನು ರಾಷ್ಟ್ರೀಯ ಕೃಷಿ ವಿಸ್ತರಣೆ ಕಾರ್ಯಕ್ರಮವಾಗಿ ಮತ್ತು ರಾಜ್ಯ ಕಾರ್ಯಕ್ರಮವಾಗಿ ೨೦೦೦-೦೧ ರಿಂದ ಮುಂದುವರಿಸಿಕೊಂಡು ಬರಲಾಗಿದೆ. ಕೃಷಿ ಕ್ಷೇತ್ರದಲ್ಲಿನ ಅಭಿವೃದ್ಧಿಯನ್ನು ಪರಿಗಣಿಸಿದರೆ, ರಾಷ್ಟೀಯ ಹಾಗೂ ರಾಜ್ಯ ಸನ್ನಿವೇಶಗಳು, ಪರಿಸ್ಥಿತಿಗಳು ಹಾಗೂ ರೈತ ಸಮುದಾಯದ ಬೇಡಿಕೆಗಳ ವಿಯಷದಲ್ಲಿ ಉಂಟಾಗಿರುವ ಬದಲಾವಣೆಯಿಂದ ಕೃಷಿ ವಿಸ್ತರಣೆ ಕಾರ್ಯಕ್ರಮವನ್ನು ಬಲಪಡಿಸುವ ಅವಶ್ಯಕತೆ ಕಂಡು ಬಂತು. ಅದರ ಫಲಶೃತಿಯಾಗಿ ೨೦೦೦-೦೧ ರಿಂದ ರಾಜ್ಯದಲ್ಲಿ ರೈತ ಮಿತ್ರ ಯೋಜನೆಯನ್ನು ಪರಿಚಯಿಸಲಾಯಿತು.

ಯೋಜನೆಯ ತಾರ್ಕಿಕತೆ: ರೈತರಿಗೆ ಪರಿಣಾಮಕಾರಿಯಾದ ವಿಸ್ತರಣಾ ಸೇವೆಗಳನ್ನು ಒದಗಿಸುವ ಅವಶ್ಯಕತೆಯ ಪ್ರಾಮುಖ್ಯತೆಯನ್ನು ಪರಿಗಣಿಸಿ, ಕರ್ನಾಟಕದಲ್ಲಿ ಬೇಡಿಕೆ ಆಧಾರಿತ ಕೃಷಿ ವಿಸ್ತರಣಾ ವ್ಯವಸ್ಥೆ, ’ರೈತ ಮಿತ್ರ’ ಯೋಜನೆಯನ್ನು ಆರಂಭಿಸಲಾಯಿತು. ಹೋಬಳಿ ಮಟ್ಟದಲ್ಲಿ, ಮೊದಲಿದ್ದ ವಿಸ್ತರಣಾ ವ್ಯವಸ್ಥೆಯ ಜಾಗದಲ್ಲಿ ರೈತ ಸಂಪರ್ಕ ಕೇಂದ್ರಗಳೆಂದು ಕರೆಯಲ್ಪಡುವ ಕೃಷಿ ವಿಸ್ತರಣಾ ಕೇಂದ್ರಗಳನ್ನು ಸ್ಥಾಪಿಸುವಲ್ಲಿ ಕಾರ್ಯಕ್ರಮದ ತಾರ್ಕಿಕತೆ ಅಡಗಿದೆ. ಈವರೆಗೆ ಕರ್ನಾಟಕ ರಾಜ್ಯದಲ್ಲಿ ೧೭೬ ತಾಲೂಕುಗಳಲ್ಲಿ ಹೋಬಳಿ/ಉಪ ಬ್ಲಾಕ್ ಮಟ್ಟದಲ್ಲಿ ೭೪೭ ರೈತ ಸಂಪರ್ಕ ಕೇಂದ್ರಗಳನ್ನು (ಕೃಷಿ ವಿಸ್ತರಣೆ ಕೇಂದ್ರಗಳು) ಸ್ಥಾಪಿಸಲಾಗಿದೆ. ಈ ರೈತ ಸಂಪರ್ಕ ಕೇಂದ್ರಗಳು ರೈತ ಸಮುದಾಯಗಳ ಸಮೀಪದಲ್ಲಿ ಸ್ಥಾಪಿಸಲಾಗಿದ್ದು ಕೃಷಿಗೆ ಸಂಬಂಧಿಸಿದ ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸುವ ಗುರಿ ಹೊಂದಿವೆ ಮತ್ತು ಒಂದೇ ಸ್ಥಳದಲ್ಲಿ ರೈತರಿಗೆ ಕೃಷಿ ಸಂಬಂಧಿತ ಮಾಹಿತಿ ಮತ್ತು ಸೇವೆಗಳನ್ನು ಒದಗಿಸುತ್ತವೆ. ರೈತರು  ತಳಮಟ್ಟದಲ್ಲೇ ಕೃಷಿ ಆಧಾರಿತ ತಂತ್ರಜ್ಞಾನದ ಮಾಹಿತಿಯನ್ನು ಪಡೆಯಲು ಮತ್ತು ವಿಚಾರ ವಿನಿಯಮ ನಡೆಸಲು ಈ ಕೇಂದ್ರಗಳು ವೇದಿಕೆಯಾಗಿ ಕೆಲಸ ಮಾಡುತ್ತವೆ. ಸಬ್ಸಿಡಿ ವಿತರಣೆ ಒಳಗೊಂಡಂತೆ ವಿಸ್ತರಣಾ ಚಟುವಟಿಕೆಯ ಪ್ರಧಾನ ಕೇಂದ್ರಗಳಾಗಿ ಈ ರೈತ ಸಂಪರ್ಕ ಕೇಂದ್ರಗಳನ್ನು ಬಳಸಿಕೊಳ್ಳಲಾಗುತ್ತದೆ.

ಮುಖ್ಯಾಂಶಗಳು ಮತ್ತು ಯೋಜನೆಯ ಭೌಗೋಳಿಕ ವ್ಯಾಪ್ತಿ

ರೈತರಿಗೆ ಏಕ ಗವಾಕ್ಷಿ ವ್ಯವಸ್ಥೆ ಮೂಲಕ ಸೇವೆಗಳನ್ನು ಹಾಗೂ ಮಾಹಿತಿಯನ್ನು ಒದಗಿಸಲು ರೈತ ಮಿತ್ರ ಯೋಜನೆಯಡಿ ಕೃಷಿ ಇಲಾಖೆಯು ಹೋಬಳಿಗೆ ಒಂದರಂತೆ ೭೪೭ ರೈತ ಸಂಪರ್ಕ ಕೇಂದ್ರಗಳನ್ನು ಸ್ಥಾಪಿಸಿದೆ. ಇಲ್ಲಿಯವರೆಗೆ ೫೬೨೮ ಗ್ರಾಮಪಂಚಾಯಿತಿಗಳಲ್ಲಿ ಕೃಷಿ ಬೆಳೆಗಳ ಉತ್ಪಾದನೆಗೆ ಬೆಳೆ ಬೆಳೆಯುವ ಋತುಮಾನದುದ್ದಕ್ಕೂ ೭೨ ಲಕ್ಷ ಕೃಷಿಕುಟುಂಬಗಳು ಒಳಪಟ್ಟಿವೆ.

ಪ್ರತಿ ರೈತ ಸಂಪರ್ಕ ಕೇಂದ್ರದಲ್ಲಿ ಒದಗಿಸಲಾಗುವ ಸೌಕರ್ಯಗಳು

ಬೀಜ ಮಾದರಿಗಳ ಪರೀಕ್ಷೆ (ಪ್ರತಿ ಮಾದರಿಗೆ ರೂ.೫), ಮಣ್ಣಿನ ಮಾದರಿ ಪರೀಕ್ಷೆ (ಪ್ರತಿ ಮಾದರಿಗೆ ರೂ ಮೂರು), ಸಾರ್ವಜನಿಕ ಹಾಗೂ ಖಾಸಗಿ ಕ್ಷೇತ್ರದವರಿಂದ ಕೃಷಿ ದಾಸ್ತಾನು ಮತ್ತು ಮಾರಾಟಕ್ಕೆ ಸ್ಥಳದ ಬಾಡಿಗೆ (ತಿಂಗಳಿಗೆ ರೂ.೧೦೦), ಸಾರ್ವಜನಿಕ ಹಾಗೂ ಖಾಸಗಿ ಕ್ಷೇತ್ರದವರಿಂದ ಕೃಷಿ ಪ್ರದರ್ಶನ/ಪ್ರಾತ್ಯಕ್ಷಿಕೆಗೆ ಸ್ಥಳದ ಬಾಡಿಗೆ (ನಾಲ್ಕು ತಿಂಗಳ ಅವಧಿಗೆ ಒಂದು ಪ್ಲಾಟ್‌ಗೆ ರೂ.೩೦೦), ಸಾರ್ವಜನಿಕ ಹಾಗೂ ಖಾಸಗಿ ಕ್ಷೇತ್ರದವರಿಂದ ರೈತ ಸಂಪರ್ಕ ಕೇಂದ್ರಗಳ ಆವರಣದೊಳಗೆ ಕೈಗೊಳ್ಳುವ ಪ್ರೋತ್ಸಾಹಕ ಮತ್ತು ಪ್ರಚಾರ ಕಾರ್ಯಕ್ರಮಗಳ ಬಾಡಿಗೆ (ಪ್ರತಿ ಕಾರ್ಯಕ್ರಮಕ್ಕೆ ಪ್ರತಿ ದಿನಕ್ಕೆ ರೂ.೧೦೦).

ವಿನ್ಯಾಸ ಮತ್ತು ಅನುಷ್ಠಾನ ಪ್ರಕ್ರಿಯೆ

ಪ್ರತಿಯೊಂದು ರೈತ ಸಂಪರ್ಕ ಕೇಂದ್ರವು ಒಬ್ಬ ಕೃಷಿ ಅಧಿಕಾರಿ (ಕೃಷಿ ಪದವೀಧರರು) ಮುಖ್ಯಸ್ಥರಾಗಿರುತ್ತಾರೆ. ಈ ಕೃಷಿ ಅಧಿಕಾರಿಗೆ ಸಹಾಯಕ ಕೃಷಿ ಅಧಿಕಾರಿಗಳು ಮತ್ತು ಕೃಷಿ ಸಹಾಯಕರ ಬೆಂಬಲವಿರುತ್ತದೆ. ಆಯಾ ಕೇಂದ್ರದ ವ್ಯಾಪ್ತಿಯಲ್ಲಿ ಬೆಳೆ ಬೆಳೆಯುವ ಪ್ರದೇಶದ ವಿಸ್ತೀರ್ಣ, ನೀರಾವರಿ  ಸೌಕರ್ಯಗಳು, ಬೆಳೆ ವೈವಿಧ್ಯತೆ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಬೇಸಾಯ ಸಾಮರ್ಥ್ಯವನ್ನು ಆಧರಿಸಿ ಸಹಾಯಕರ ಸಂಖ್ಯೆ ನಿರ್ಧರಿಸಲಾಗುತ್ತದೆ. ರೈತರು ಈ ರೈತ ಸಂಪರ್ಕ ಕೇಂದ್ರಗಳಿಗೆ ಖುದ್ದಾಗಿ ಭೇಟಿ ನೀಡಿ ತಮಗೆ ಬೇಕಾದ ಮಾಹಿತಿ ಪಡೆದುಕೊಳ್ಳಬಹುದು ಅಥವಾ ದೂರವಾಣಿ ಮೂಲಕವೂ ಮಾಹಿತಿಯನ್ನು ಪಡೆದುಕೊಳ್ಳಬಹುದು. ರೈತ ಸಂಪರ್ಕ ಕೇಂದ್ರಗಳಲ್ಲಿ ’ಪ್ರತಿಸ್ಪಂದನ’ ರಿಜಿಸ್ಟರ್ ಇರಿಸಲಾಗುವುದು.

ಈ ರಿಜಿಸ್ಟರ್‌ನಲ್ಲಿ ರೈತರ ಹೆಸರು, ವಿಳಾಸ ಮತ್ತು ಭೇಟಿಯ ಉದ್ದೇಶ ಕುರಿತ ವಿವರಗಳನ್ನು  ದಾಖಲಿಸಲಾಗುವುದು. ರೈತರು ಕೇಳುವ ಪ್ರಶ್ನೆ/ಸಮಸ್ಯೆಗೆ ಕೇಂದ್ರದ ಕೃಷಿ ಅಧಿಕಾರಿ ಲಿಖಿತ ರೂಪದಲ್ಲಿ ಸಲಹೆ ಅಥವಾ ಶಿಫಾರಸ್ಸು ನೀಡುತ್ತಾರೆ ಮತ್ತು ಅದರ ವಿವರಗಳನ್ನು ರಿಜಿಸ್ಟರ್‌ನಲ್ಲಿ ನಮೂದಿಸಲಾಗುತ್ತದೆ. ರೈತ ಸಂಪರ್ಕ ಕೇಂದ್ರದ ತಾಂತ್ರಿಕ ಸಿಬ್ಬಂದಿ ಹೋಬಳಿಯ ಎಲ್ಲಾ ಗ್ರಾಮಗಳಲ್ಲಿರುವ ರೈತರ ಸಮೂಹಗಳಿಗೆ ಮೊದಲೇ ಯೋಜಿಸಿಕೊಂಡ ಹಾಗೆ ನಿಯತವಾಗಿ ಭೇಟಿ ನೀಡುತ್ತಾರೆ. ರಾಜ್ಯ ಮಟ್ಟದಲ್ಲಿ ಈ ಯೋಜನೆಯ ಅನುಷ್ಠಾನಕ್ಕೆ ಕೃಷಿ ಆಯುಕ್ತರು ಅನುಷ್ಠಾನ ಅಧಿಕಾರಿಗಳಾಗಿರುತ್ತಾರೆ. ಅವರಿಗೆ ನೆರವಾಗಿ ಕೃಷಿ ನಿರ್ದೇಶಕರು ಹಾಗೂ ಹೆಚ್ಚುವರಿ ಕೃಷಿ ನಿರ್ದೇಶಕರು (ಮಾನವ ಸಂಪನ್ಮೂಲ ಅಭಿವೃದ್ಧಿ), (ಬೆಳೆ ಯೋಜನೆ ಮತ್ತು ಅಭಿವೃದ್ಧಿ) ಹಾಗೂ (ಗುಣಮಟ್ಟ ನಿಯಂತ್ರಣ) ಇರುತ್ತಾರೆ.

ಆತ್ಮ-ಸುಧಾರಿತ ಕೃಷಿ ವಿಸ್ತರಣಾ ಪದ್ಧತಿ- ಕೇಂದ್ರ ಪುರಸ್ಕೃತ ಯೋಜನೆ

ಈ ಯೋಜನೆಯ ಮುಖ್ಯ ಉದ್ದೇಶ, ಕೃಷಿ ವಿಸ್ತರಣೆಯ ಪ್ರಮುಖ ಪಾಲುದಾರರಾದ ಪಂಚಾಯತ್‌ರಾಜ್ ವ್ಯವಸ್ಥೆಯಡಿ ಕೆಲಸ ನಿರ್ವಹಿಸುತ್ತಿರುವ ಕೃಷಿ ಮತ್ತು ಸಂಬಂಧಿತ ಇಲಾಖೆಗಳು, ರಾಜ್ಯ ಕೃಷಿ ವಿಶ್ವ ವಿದ್ಯಾನಿಲಯಗಳು ಖಾಸಗಿ ಉದ್ದಿಮೆದಾರರು, ಪರಿಕರ ಮಾರಾಟಗಾರರು ಹಾಗೂ ರೈತರ ಮಧ್ಯೆ ಸಮನ್ವಯ ಸಾಧಿಸುವುದು. ಜಿಲ್ಲಾಮಟ್ಟದ ಆತ್ಮ ಚಾಲನಾ ಸಮಿತಿಯ ಮಾರ್ಗದರ್ಶನದಂತೆ ತಾಲೂಕುಮಟ್ಟದ ಆತ್ಮ ಅನುಷ್ಠಾನ ಸಮಿತಿಗಳ ಮುಖಾಂತರ ವಿಸ್ತರಣಾ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಪ್ರಥಮ ಹಂತದಲ್ಲಿ ರಾಜ್ಯದಲ್ಲಿ ಈ ಯೋಜನೆಯನ್ನು ಬೀದರ್. ಕಲಬುರಗಿ, ವಿಜಯಪುರ, ಕೊಪ್ಪಳ, ಹಾವೇರಿ, ಶಿವಮೊಗ್ಗ, ಹಾಸನ, ಕೋಲಾರ ಮತ್ತು ಚಾಮರಾಜನಗರ ಮುಂತಾದ ಒಂಬತ್ತು ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲಾಯಿತು.

೨೦೦೬-೦೭ನೇಯ ಸಾಲಿನಲ್ಲಿ ಈ ಯೋಜನೆಯನ್ನು ಇತರೆ ನಾಲ್ಕು ಅಂದರೆ ಬೆಳಗಾವಿ, ಚಿಕ್ಕಮಗಳೂರು. ಚಿತ್ರದುರ್ಗ ಮತ್ತು ಕೊಡಗು ಜಿಲ್ಲೆಗಳಿಗೆ ಮಾನ್ಯ ಪ್ರಧಾನಮಂತ್ರಿಯವರ ವಿಶೇಷ ಪ್ಯಾಕೇಜ್ ಕಾರ್ಯಕ್ರಮದಡಿಯಲ್ಲಿ ವಿಸ್ತರಿಸಲಾಯಿತು. ೨೦೦೭- ೦೮ನೇಯ ಸಾಲಿನಲ್ಲಿ ಈ ಯೋಜನೆಯನ್ನು ರಾಜ್ಯದ ಇನ್ನುಳಿದ ೧೫ ಜಿಲ್ಲೆಗಳಿಗೆ ವಿಸ್ತರಿಸಲಾಯಿತು. ರಾಜ್ಯಮಟ್ಟದಲ್ಲಿ ಅಂತರ್ ಇಲಾಖಾ ಕಾರ್ಯತಂಡ ರಚಿಸಲಾಗಿದ್ದು.

ಇದಕ್ಕೆ ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಅಭಿವೃದ್ಧಿ ಆಯುಕ್ತರು ಮುಖ್ಯಸ್ಥರಾಗಿರುತ್ತಾರೆ. ರಾಜ್ಯಮಟ್ಟದ ನೋಡಲ್ ಅಧಿಕಾರಿಗಳಾಗಿರುವ ಕೃಷಿ ಆಯುಕ್ತರು ರಾಜ್ಯಮಟ್ಟದ ಯೋಜನಾ ಅನುಷ್ಠಾನ   ಸಮಿತಿಯ ಮುಖ್ಯಸ್ಥರಾಗಿರುತ್ತಾರೆ. ರಾಜ್ಯ ಸರ್ಕಾರದ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ನೋಡಲ್ ಇಲಾಖೆಯಾಗಿರುತ್ತದೆ. ಮಾನವ ಸಂಪನ್ಮೂಲ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕ್ರಮವಾಗಿ ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು ಮತ್ತು ಧಾರವಾಡದಲ್ಲಿರುವ ಸಮಿತಿಯ ಪ್ರಾದೇಶಿಕ ಕೇಂದ್ರ, ದಕ್ಷಿಣ ಹಾಗೂ ಉತ್ತರ ಇವು ನೋಡಿಕೊಳ್ಳುತ್ತವೆ. ಇದು ಶೇಕಡಾ ೯೦:೧೦ರ ಪಾಲುಗಾರಿಕೆಯ ಕೇಂದ್ರ ಪುರಸ್ಕೃತ ಯೋಜನೆಯಾಗಿರುತ್ತದೆ.

ಸಾವಯವ ಕೃಷಿ ಉತ್ತೇಜನ ಕಾರ್ಯಕ್ರಮಗಳು

 

೨೦೦೮- ೦೯ನೇ ಸಾಲಿನಿಂದ ಸಾವಯವ ಕೃಷಿಗೆ ರಾಜ್ಯ ಸರ್ಕಾರವು ಗರಿಷ್ಠ ಒತ್ತು ನೀಡುತ್ತಿದ್ದು, ಸಾವಯವ ಕೃಷಿ ಉತ್ತೇಜನ ಮತ್ತು ರೈತರ ಸಮಸ್ಯೆಗಳನ್ನು ರೈತರುಗಳಿಂದಲೇ ಬಗೆಹರಿಸಿಕೊಳ್ಳುವ ಒಂದು ಪ್ರಯತ್ನವಾಗಿ ಡಾ. ಎ. ಎಸ್. ಆನಂದ ಇವರ ಅಧ್ಯಕ್ಷತೆಯಲ್ಲಿ ರಾಜ್ಯಮಟ್ಟದ ಸಾವಯವ ಕೃಷಿ ಮಿಷಿನ್‌ ಅಧಿಕಾರಯುಕ್ತ ಸಮಿತಿ ರಚನೆಯಾಗಿರುತ್ತದೆ. ರಾಜ್ಯ ಸರ್ಕಾರದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಉನ್ನತ ಮಟ್ಟದ ಸಮಿತಿಯೊಂದಕ್ಕೆ ಕೃಷಿಕರ ಸೇರ್ಪಡೆ ಮಾಡಲಾಗಿದೆ. ಸಮಿತಿಯಲ್ಲಿ ಅಧ್ಯಕ್ಷರೂ ಸೇರಿದಂತೆ ಹದಿನಾಲ್ಕು ಪ್ರಗತಿಪರ ಸಾವಯವ ಕೃಷಿಕರು ಮತ್ತು ಒಂಬತ್ತು ಜನ ಸರ್ಕಾರದ ಹಿರಿಯ ಅಧಿಕಾರಿಗಳು ಇರುತ್ತಾರೆ.

ಸಾವಯವ ಕೃಷಿ ಮಿಷನ್ ಕಾರ್ಯಕ್ರಮದ ಅನುಷ್ಠಾನಕ್ಕಾಗಿ ರಾಜ್ಯದ ೧೭೬ ತಾಲೂಕುಗಳಲ್ಲಿ ೧೭೪ ಸಾವಯವ ಕೃಷಿಕರ ಸಂಘಗಳನ್ನು ಆಯ್ಕೆಮಾಡಲಾಗಿದ್ದು, ಈ ಸಂಘಗಳ ಮೂಲಕ ಪ್ರತಿ ತಾಲೂಕಿನಲ್ಲಿ ೩೦೦ ರೈತರಂತೆ ಈ ಯೋಜನೆಯಡಿ ರಾಜ್ಯಾದ್ಯಂತ ೫೨,೨೦೦ ರೈತರನ್ನು ಗುರುತಿಸಲಾಗಿದ್ದು ಪ್ರಥಮ ಹಂತದಲ್ಲಿ ಸುಮಾರು ೭೧,೦೦೦ ಹೆಕ್ಟೇರ್ ಪ್ರದೇಶವನ್ನು ಸಾವಯವ ಕೃಷಿ ಪದ್ಧತಿಗೆ ಅಳವಡಿಸಲು  ಉದ್ದೇಶಿಸಲಾಗಿದೆ.

ಮಿಷನ್ ಅನುಮೋದಿತ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸರ್ಕಾರದ ಅನುಮೋದನೆಗಾಗಿ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ೨೦೦೯- ೧೦ನೇ ಸಾಲಿನಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಿರುವ ಪ್ರಮುಖ ಸಾವಯವ ಕೃಷಿ ಉತ್ತೇಜನ ಕಾರ್ಯಕ್ರಮಗಳು.

೧) ಆಯ್ಕೆಯಾದ ಸಾವಯವ ಕೃಷಿಕರ ಸಂಘಗಳ ಮುಖಾಂತರ ೫೨,೨೦೦ ರೈತ ಫಲಾನುಭವಿಗಳ ಕ್ಷೇತ್ರವನ್ನು ಸಾವಯವ ಕೃಷಿಗೆ ಪರಿವರ್ತಿಸಲು ಕಾರ್ಯಕ್ರಮ,

೨) ಸಾವಯವ ಕೃಷಿ ಉತ್ಪನ್ನಗಳ ಮಾರಾಟ ಮಳಿಗೆ ಪ್ರಾರಂಭಕ್ಕೆ ಸಹಾಯಧನ,

೩) ಸಾವಯವ ಕೃಷಿಯಲ್ಲಿ ತರಬೇತಿ ಮತ್ತು ಕೌಶಲ್ಯ ವೃದ್ಧಿ,

೪) ಸಾವಯವ ಕೃಷಿಯಲ್ಲಿ ಸಂಶೋಧನೆ,

೫) ಆಕಾಶವಾಣಿ ಮುಖಾಂತರ ಸಾವಯವ ಕೃಷಿ ಉತ್ತೇಜನ ಕಾರ್ಯಕ್ರಮಗಳ ಪ್ರಸಾರ,

೬) ಗ್ರಾಹಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳು,

೭) ಸ್ಥಳೀಯ / ನಾಟಿ ತಳಿಗಳ ಸಂರಕ್ಷಣೆ / ಅಭಿವೃದ್ಧಿ ಮತ್ತು ಕೃಷಿ ಪ್ರವಾಸ ಯೋಜನೆ.

 

ಸಾವಯವ ಗ್ರಾಮ/ಸ್ಥಳ ಯೋಜನೆ, ವಸ್ತು ಪ್ರದರ್ಶನ, ಹಸಿರೆಲೆ ಗೊಬ್ಬರ ಬೀಜ ವಿತರಣೆ, ಎರೆಹುಳು ಗೊಬ್ಬರ ಉತ್ಪಾದನೆ ಘಟಕ ಸ್ಥಾಪನೆ. ಬಯೋಡೈಜೆಸ್ಟರ್ ಸ್ಥಾಪನೆ ಮುಂತಾದ ಕಾರ್ಯಕ್ರಮಗಳಿಗೆ ಈವರೆವಿಗೂ ರೂ.೬.೬೫ ಕೋಟಿ ಅನುದಾನವನ್ನು ಬಳಸಿಕೊಳ್ಳಲಾಗಿದೆ. ೨೦೧೦-೧೧ ನೇ ಸಾಲಿನಲ್ಲಿ ಸಾವಯವ ಗ್ರಾಮ/ಸ್ಥಳ ಯೋಜನೆಯಡಿ, ಪ್ರತಿತಾಲ್ಲೂಕಿನ ಮತ್ತೊಂದು ಹೊಸ ೧೦೦ ಹೆ. ಪ್ರದೇಶವನ್ನು  ಸಾವಯವ ಕೃಷಿಗೆ ಅಳವಡಿಸಲಾಗಿರುತ್ತದೆ. ಈ ಯೋಜನೆಯಡಿ ರಾಜ್ಯಾದ್ಯಂತ ಸುಮಾರು ೧೪,೭೮೪ ರೈತರ ಒಟ್ಟಾರೆ ೨೧,೦೩೧ ಹೆ. ಪ್ರದೇಶವನ್ನು ಸಾವಯವ ಕೃಷಿಗೆ ಅಳವಡಿಸಲಾಗಿರುತ್ತದೆ. ೨೦೧೧-೧೨ ನೇ ಸಾಲಿನಲ್ಲಿ ಸುವರ್ಣಭೂಮಿ ಯೋಜನೆಯಡಿ, ಸಾವಯವ ಕೃಷಿಗಾಗಿ ಪ್ರತ್ಯೇಕ ಅನುದಾನವನ್ನು ಕಾಯ್ದಿರಿಸಲಾಗಿದ್ದು, ರಾಜ್ಯಾದ್ಯಂತ ಸುಮಾರು ೧,೯೬,೦೦೦ ರೈತ ಫಲಾನುಭವಿಗಳಿಗೆ ಸಾವಯವ ಕೃಷಿ ಘಟಕ/ ಚಟುವಟಿಕೆಗಳಿಗೆ ಪ್ರೋತ್ಸಾಹಧನವನ್ನು ನೀಡಲಾಗುತ್ತಿದೆ ಸಾಲದ ಹೊರೆಯಿಂದ ರೈತರ ಆತ್ಮಹತ್ಮೆ ಪ್ರಕರಣಗಳಿಗೆ ಪರಿಹಾರ ವಿತರಿಸುವುದು: ೨೦೦೩-೦೪ ನೇ ಸಾಲಿನಿಂದ ಸಾಲದ ಹೊರೆಯಿಂದ ಅತ್ಮಹತ್ಮೆ  ಮಾಡಿಕೊಳ್ಳುವ ರೈತರ ಕುಟುಂಬಗಳಿಗೆ ಪರಿಹಾರ ನೀಡುವ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯಂತೆ ಅಧಿಕೃತ ಸಾಲ ನೀಡುವ ಸಂಸ್ಥೆಗಳಿಂದ ಪಡೆದ ಸಾಲದ ಹೊರೆಯಿಂದ ಅತ್ಮಹತ್ಮೆ ಮಾಡಿಕೊಂಡ ಪ್ರತಿ ರೈತರ ಕುಟುಂಬಕ್ಕೆ ರೂ. ಒಂದು ಲಕ್ಷ ಪರಿಹಾರವನ್ನು ನೀಡಲು ಸರ್ಕಾರ ಆದೇಶ ಹೊರಡಿಸಿದೆ. ಸದರಿ ವಿಷಯ ಯೋಜನೆ ಅನ್ವಯ ೨೦೦೯-೧೦ ನೇ ಸಾಲಿನಲ್ಲಿ ರೂ. ೨೦೨ ಲಕ್ಷಗಳ ಅನುದಾನ ಮೀಸಲಿಡಲಾಗಿದೆ. ಡಿಸೆಂಬರ್, ೨೦೦೯ ರವರೆಗೆ ರೂ. ೮೬ ಲಕ್ಷಗಳ ಪರಿಹಾರವನ್ನು  ನೀಡಲಾಗಿದೆ.

ಪ್ರಧಾನ ಮಂತ್ರಿಯವರ ಪುನರ್ವಸತಿ ವಿಶೇಷ ಪ್ಯಾಕೇಜ್

ಮಾನ್ಯ ಪ್ರಧಾನ ಮಂತ್ರಿಗಳ ಪುನರ್ವಸತಿ ಪ್ಯಾಕೇಜ್‌ನಲ್ಲಿ ಸುಸ್ಥಿರ ಕೃಷಿ ಹಾಗೂ ಜೀವನಾಧಾರಕ್ಕಾಗಿ ಹೆಚ್ಚು ರೈತರ ಆತ್ಮಹತ್ಮೆಗೆ ಒಳಪಟ್ಟಿರುವ ಆರು ಜಿಲ್ಲೆಗಳಾದ ಬೆಳಗಾವಿ, ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ, ಕೊಡಗು, ಮತ್ತು ಶಿವಮೊಗ್ಗ ಜಿಲ್ಲೆಗಳನ್ನು ಆಯ್ಕೆ ಮಾಡಲ್ಪಟ್ಟಿದೆ. ಕೇಂದ್ರ ಸರ್ಕಾರವು ಈ ಪ್ಯಾಕೇಜನ್ನು ಮೂರು ವರ್ಷಗಳ ಅವಧಿಗೆ ಮಂಜೂರು ಮಾಡಿದ್ದು. ಅಕ್ಟೋಬರ್ ೨೦೦೬ರಿಂದ ಮೂರು ವರ್ಷದವರೆಗೆ ಅನುಷ್ಠಾನಗೊಳಿಸಲಾಗಿತ್ತು ನಂತರ ಈ ಯೋಜನೆಯನ್ನು ಸೆಪ್ಟಂಬರ್, ೨೦೧೧ರ ವರೆಗೆ ವಿಸ್ತರಿಸಲಾಯಿತು. ಯೋಜನೆಯಡಿ ಕೃಷಿ ಇಲಾಖೆ, ಬೃಹತ್ ನೀರಾವರಿ, ಸಣ್ಣ ನೀರಾವರಿ, ಜಲಾನಯನ ಅಭಿವೃದ್ಧಿ ಇಲಾಖೆ, ತೋಟಗಾರಿಕೆ ಇಲಾಖೆ ಮತ್ತು ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಗಳು ಕಾರ್ಯನಿರ್ವಹಿಸುತ್ತಿವೆ. ಈ ಯೋಜನೆಗಾಗಿ ರೂ.೨೬೮೯.೬೪ ಕೋಟಿ ಅನುದಾನ ಮೀಸಲಿಡಲಾಗಿದೆ, ಅಕ್ಟೋಬರ್, ೨೦೦೯ರ ವರೆಗೆ ಕೇಂದ್ರ ಸರ್ಕಾರ ರೂ.೧೫೪೬.೪೫ ಕೋಟಿಗಳನ್ನು ಬಿಡುಗಡೆ ಮಾಡಿದೆ ಹಾಗೂ ರೂ. ೨೭೨೨.೭೯ ಕೋಟಿಗಳನ್ನು ವೆಚ್ಚ ಮಾಡಲಾಗಿದೆ.

ಕೃಷಿ ಯಾಂತ್ರೀಕರಣ

ಕೇಂದ್ರ ಪುರಸ್ಕೃತ ಕೃಷಿ ಯಾಂತ್ರೀಕರಣ ಯೋಜನೆಯನ್ನು ಮ್ಯಾಕ್ರೋ ಮ್ಯಾನೇಜಮೆಂಟ್ ಮೋಡ್ ಆಫ್ ಅಗ್ರಿಕಲ್ಚರ್ (ವರ್ಕಪ್ಲಾನ್)ಅಡಿ ೨೦೦೧-೦೨ನೇ ಸಾಲಿನಿಂದ ಅನುಷ್ಠಾನ ಗೊಳಿಸಲಾಗುತ್ತಿದೆ. ಈ ಯೋಜನೆಯಡಿ ಕೇಂದ್ರ ಸರ್ಕಾರದ ಸಹಾಯಧನದ ಮಿತಿಯನ್ವಯ ಶೇ.೨೫ರ ಸಹಾಯಧನವನ್ನು ಒದಗಿಸಲಾಗುತ್ತಿದೆ. ೨೦೦೩-೦೪ನೇ ಸಾಲಿನಿಂದ ರಾಜ್ಯಸರ್ಕಾರದ ಆದೇಶದನ್ವಯ ಶೇ.೨೫ರ ಕೇಂದ್ರದ ಸಹಾಯಧನಕ್ಕೆ ಪೂರಕವಾಗಿ ಶೇ.೨೫ರ ಸಹಾಯಧನವನ್ನು ರಾಜ್ಯ ಸರ್ಕಾರದಿಂದ ಒದಗಿಸಲಾಗಿದ್ದು, ಸಹಾಯಧನದ ಮಿತಿಯನ್ನು ಶೇ.೫೦ಕ್ಕೆ ಹೆಚ್ಚಿಸಲಾಗಿರುತ್ತದೆ. ೨೦೦೮-೦೯ನೇ ಸಾಲಿನಿಂದ ಮ್ಯಾಕ್ರೋ ಮ್ಯಾನೇಜಮೆಂಟ್ ಮೋಡ್ ಆಫ್ ಅಗ್ರಿಕಲ್ಚರ್ (ವರ್ಕ ಪ್ಲಾನ್) ಅಡಿ ಕೇಂದ್ರದ ಅನುದಾನವನ್ನು  ರಾಜ್ಯಸರ್ಕಾರದ ಅನುದಾನಕ್ಕೆ ಪೂರಕವಾಗಿ ಉಪಯೋಗಿಸಿಕೊಳ್ಳಲಾಗುತ್ತಿದೆ.

ಕೇಂದ್ರದ ಅನುದಾನವನ್ನು ಪೂರ್ಣವಾಗಿ ವೆಚ್ಚ ಭರಿಸಿದ ನಂತರ, ಕೃಷಿ ಯಂತ್ರೋಪಕರಣಗಳಿಗೆ ನೀಡುವ ಶೇ.೫೦ರ ಸಹಾಯಧನವನ್ನು ರಾಜ್ಯ ಸರ್ಕಾರದ ಅನುದಾನದಲ್ಲಿ ವೆಚ್ಚ ಭರಿಸಲಾಗುವುದು. ೨೦೧೪-೧೫ನೇ ಸಾಲಿನಲ್ಲಿ ೨೨,೨೦೯.೭೯ ಲಕ್ಷ ರೂ ಯೋಜನೆ ರೂಪಿಸಲಾಗಿದೆ. ೨೦೧೧-೧೨ನೇ ಸಾಲಿನಿಂದ ರಾಜ್ಯ ಸರ್ಕಾರದ ಆದೇಶದನ್ವಯ, ರೂ. ಐದು ಲಕ್ಷದೊಳಗಿರುವ ಯಂತ್ರೋಪಕರಣಗಳಿಗೆ ಶೇ.೫೦ ರ ಸಹಾಯಧನ ಹಾಗೂ ರೂ. ಐದು ಲಕ್ಷ ಮೇಲ್ಪಟ್ಟ ಯಂತ್ರೋಪಕರಣಗಳಿಗೆ ಶೇ. ೪೦ರ ಸಹಾಯಧನವನ್ನು ಒದಗಿಸಲಾಗುತ್ತಿದೆ. ಕೇಂದ್ರ ಪುರಸ್ಕೃತ ಕೃಷಿ ಯಾಂತ್ರೀಕರಣ ಯೋಜನೆಯಡಿ ಕಳೆದ ಮೂರು ವರ್ಷಗಳ  ಪ್ರಗತಿ ವಿವರಗಳನ್ನು ನೀಡಲಾಗಿದೆ.

ಲಘು ನೀರಾವರಿ

ರಾಜ್ಯದಲ್ಲಿ ಲಘು ನೀರಾವರಿ ಯೋಜನೆಯಲ್ಲಿ ನೀರನ್ನು ಸಂರಕ್ಷಿಸಿ, ಅಂತರ್ಜಲ ಮಟ್ಟವನ್ನು ಹೆಚ್ಚಿಸುವುದು ಮತ್ತು ಲಭ್ಯವಿರುವ ನೀರನ್ನು ಮಿತವಾಗಿ ಬಳಸುವುದನ್ನು ಪ್ರೋತ್ಸಾಹಿಸಿ, ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವುದು ಈ ಯೋಜನೆಯ ಮುಖ್ಯ ಉದ್ದೇಶ. ಲಘು ನೀರಾವರಿ ಪದ್ಧತಿಯನ್ನು  ರೈತರು ಅಳವಡಿಸುವ ಸಲುವಾಗಿ ಕೇಂದ್ರ ಪುರಸ್ಕೃತ ಲಘು ನೀರಾವರಿ ಯೋಜನೆಯನ್ನು ರಾಜ್ಯದಲ್ಲಿ ಶೇ.೭೫ ರ ಸಹಾಯಧನದಡಿ ಅನುಷ್ಠಾನ ಮಾಡಲಾಗುತ್ತಿದೆ. ನೀರಿನ ಸಮರ್ಪಕ ಬಳಕೆ ಮಾಡುವ ಉದ್ದೇಶದಿಂದ ಸದರಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಸದರಿ ಯೋಜನೆಯಡಿ ತುಂತುರು ನೀರಾವರಿ ಹಾಗೂ ಹನಿ ನೀರಾವರಿ ಘಟಕಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ರೈತರು ಅಳವಡಿಸಲು ಶೇ.೭೫ರಷ್ಟು ಸಹಾಯಧನ ವಿತರಿಸಲಾಗುತ್ತಿದೆ. ಸದರಿ ಯೋಜನೆಯಡಿ ದೊಡ್ಡ ರೈತರಿಗೆ ಕೇಂದ್ರ ಸರ್ಕಾರದ ಶೇ.೪೦ ರಷ್ಟು ಸಹಾಯಧನದ ಜೊತೆ ರಾಜ್ಯದ ಪಾಲಿನ ಶೇ.೩೫ ರಷ್ಟು ಹೊಂದಾಣಿಕೆ ಮಾಡಿ ಹಾಗೂ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಕೇಂದ್ರ ಸರ್ಕಾರದ ಶೇ.೫೦ ರಷ್ಟು ಸಹಾಯಧನದ ಜೊತೆ ರಾಜ್ಯದ ಪಾಲಿನ ಶೇ.೨೫ ರಷ್ಟು ಹೊಂದಾಣಿಕೆ ಮಾಡಿ ಒಟ್ಟು ಶೇ.೭೫ರ ಸಹಾಯಧನವನ್ನು ಲಘು ನೀರಾವರಿ ಘಟಕಗಳಿಗೆ ಒದಗಿಸಲಾಗುತ್ತಿದೆ. ೨೦೧೧-೧೨ನೇ ಸಾಲಿನಲ್ಲಿ ಒಟ್ಟು ರೂ.೭,೩೩೮ ಲಕ್ಷಗಳ ಕಾರ್ಯಕ್ರಮವನ್ನು ರೂಪಿಸಲಾಗಿರುತ್ತದೆ. ಲಘು ನೀರಾವರಿ ಯೋಜನೆಯಡಿ ಕಳೆದ ಮೂರು ವರ್ಷಗಳ ಪ್ರಗತಿ ವಿವರಗಳನ್ನು ನೀಡಲಾಗಿದೆ.

ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನ

ಆಹಾರ ಭದ್ರತಾ ಯೋಜನೆ ಅಡಿಯಲ್ಲಿ ರಾಜ್ಯದಲ್ಲಿ ಅಕ್ಕಿ ಮತ್ತು ದ್ವಿದಳ ಧಾನ್ಯಗಳ ಉತ್ಪಾದನೆಯನ್ನು ಹೆಚ್ಚಿಸುವ ಸಲುವಾಗಿ ರಾಷ್ಟ್ರಿ ಎನ್‌ಎಫ್‌ಎಸ್‌ಎಂ (ಅಕ್ಕಿ)ಯೋಜನೆಯನ್ನು ಏಳು ಜಿಲ್ಲೆಗಳಲ್ಲಿ ಮತ್ತು ಎನ್‌ಎಫ್‌ಎಸ್‌ಎಂ (ದ್ವಿದಳ ಧಾನ್ಯಗಳು)ಯೋಜನೆಯನ್ನು ರಾಜ್ಯದ ಎಲ್ಲಾ ೩೦ ಜಿಲ್ಲೆಗಳಲ್ಲಿ ಅನುಷ್ಠಾನ ಗೊಳಿಸಲಾಗುತ್ತಿದೆ. ಅಕ್ಕಿ ಹಾಗೂ ದ್ವಿದಳ ದಾನ್ಯಗಳ ಉತ್ಪಾದಕತೆಯನ್ನು ಜಿಲ್ಲೆಗಳಲ್ಲಿ ಹೆಚ್ಚಿಸುವ ಸಲುವಾಗಿ ಎನ್.ಎಫ್. ಎಸ್.ಎಂ. ಯೋಜನೆಯಡಿ ಕೇಂದ್ರ ಸರ್ಕಾರವು ಅನುದಾನವನ್ನು ಒದಗಿಸಿದೆ. ಎನ್.ಎಫ್.ಎಸ್.ಎಂ; ಅಕ್ಕಿ-ರೂ.೧೭೩೮.೪೬ ಲಕ್ಷ, ಎನ್.ಎಫ್.ಎಸ್.ಎಂ -ದ್ವಿದಳ ಧಾನ್ಯ, ಎನ್.ಎಫ್.ಎಸ್.ಎಮ್.- ಒರಟು ಧಾನ್ಯಗಳು ಎನ್.ಎಫ್.ಎಸ್.ಎಮ್.-ವಾಣಿಜ್ಯ ಬೆಳೆಗಳು (ಹತ್ತಿ ಮತ್ತು ಕಬ್ಬು) ಯೊಜನೆಯನ್ನು ರಾಜ್ಯದಲ್ಲಿ ೨೦೧೫-೧೬ ನೇ ಸಾಲಿನಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಈ ಅಭಿಯಾನಕ್ಕಾಗಿ ೨೦೧೫-೧೬ ನೇ ಸಾಲಿಗೆ ರೂ ೧೭೨೮೭.೫೦ ಲಕ್ಷ ಅನುದಾನ ನೀಡಲಾಗಿದೆ.

ವೇಗವರ್ಧಕ ದ್ವಿದಳಧಾನ್ಯ ಉತ್ಪಾದನಾ ಯೋಜನೆ

ರಾಜ್ಯದ ಪ್ರಮುಖ ದ್ವಿದಳ ಧಾನ್ಯಗಳಾದ ತೊಗರಿ, ಕಡಲೆ, ಹೆಸರು ಮತ್ತು ಉದ್ದು ಬೆಳೆಗಳ ಉತ್ಪಾದನೆ, ಉತ್ಪಾದಕತೆಯನ್ನು ತೀವ್ರಗತಿಯಲ್ಲಿ ಹೆಚ್ಚಿಸಿ ಸಮಗ್ರ ಪೋಷಕಾಂಶ ಮತ್ತು ಸಸ್ಯ ಸಂರಕ್ಷಣೆ ಕೇಂದ್ರದ ತಾಂತ್ರಿಕತೆಗಳನ್ನು ಅಳವಡಿಸಿ ರೈತರ ಆದಾಯವನ್ನು ಹೆಚ್ಚಿಸಲು ೨೦೧೦-೧೧ನೇ ಸಾಲಿನಿಂದ ವೇಗವರ್ಧಕ ದ್ವಿದಳಧಾನ್ಯ ಉತ್ಪಾದನಾ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಪ್ರಸ್ತುತ ವರ್ಷ ಕಲಬುರಗಿ, ಬೀದರ್, ಯಾದಗಿರಿ, ಗದಗ, ಧಾರವಾಡ ರಾಯಚೂರು ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.

 ೨೦೧೧-೧೨ನೇ ಸಾಲಿಗೆ ಕರ್ನಾಟಕ ರಾಜ್ಯವು ಮುಂಗಾರು ಹಂಗಾಮಿಗೆ ೨೨ಎ ೩ಪಿ ಘಟಕ ಹಾಗೂ ಹಿಂಗಾರು ಹಂಗಾಮಿಗೆ ೧೦ ಘಟಕಗಳಿಗೆ ಒಟ್ಟು ೧೭೫೭.೯೦ ಲಕ್ಷ ಅನುದಾನ ನೀಡಲಾಗಿದ್ದು, ಇದರಲ್ಲಿ ೧೬೪೩.೭೨ ಲಕ್ಷ ರೂ ಗಳನ್ನು ವಿನಿಯೋಗಿಸಲಾಗಿದೆ. ಸದರಿ ಕಾರ್ಯಕ್ರಮದಡಿ ಮುಂಗಾರು ಹಂಗಾಮಿನಲ್ಲಿ ತೊಗರಿ, ಹೆಸರು, ಉದ್ದು ಬೆಳೆಗಳಲ್ಲಿ ೨೨,೦೦೦ ಹೆಕ್ಟೇರ್ ಪ್ರದೇಶದ ಬದಲಾಗಿ ೬೫,೪೦೦ ಹೆಕ್ಟೇರ್ ಪ್ರದೇಶದಲ್ಲಿ ಹಾಗೂ ಹಿಂಗಾರು ಹಂಗಾಮಿನಲ್ಲಿ ೨೦೦೦ ಹೆಕ್ಟೇರ್ ಪ್ರದೇಶದಲ್ಲಿ ದೊಡ್ಡ ಪ್ರಮಾಣದ ಪ್ರಾತ್ಯಕ್ಷಿಕೆಗಾಗಿ ಬೀಜದ ಕಿರುಚೀಲಗಳನ್ನು (ಐ.ಎಸ್.ಎಂ/ಐ.ಪಿ.ಎಂ ಇನ್‌ಪುಟ್ ಕಿಟ್ ವಿತರಿಸಲಾಗಿದೆ. ಹಿಂಗಾರಿನಲ್ಲಿ ೧,೧೨,೨೯೮ ಐ.ಎನ್.ಎಂ /ಐ.ಪಿ.ಎಂ ಕಿಟ್ (ಇನ್‌ಪುಟ್‌ಕಿಟ್)ಗಳನ್ನು ವಿತರಿಸಲಾಗಿದೆ. ಒಟ್ಟು ೨,೦೦೦ ಹೆಕ್ಟೇರ್ ಪ್ರದೇಶದಲ್ಲಿ ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿದೆ.

ಹೆಚ್ಚುವರಿ ದ್ವಿದಳ ಧಾನ್ಯ ಕಾರ್ಯಕ್ರಮ

ರಾಜ್ಯದಲ್ಲಿ ದ್ವಿದಳ ಧಾನ್ಯ ಬೆಳೆಯುವ ಜಿಲ್ಲೆಗಳಲ್ಲಿ ೨೦೧೧-೧೨ ನೇ ಸಾಲಿನಲ್ಲಿ ಪೂರ್ವ ಮುಂಗಾರು ಮಳೆಯಾಗದಿದ್ದುದರಿಂದ ಹಾಗೂ ಮುಂಗಾರು ಹಂಗಾಮಿನಲ್ಲಿ ಮಳೆ ತಡವಾಗಿದ್ದರಿಂದ ದ್ವಿದಳಧಾನ್ಯ  ಬಿತ್ತನೆ ಪ್ರದೇಶದಲ್ಲಿ ಸುಮಾರು ೩.೪೭ ಲಕ್ಷ ಹೆ. ಪ್ರದೇಶ ಕುಂಠಿತವಾಗಿರುತ್ತದೆ. ೨೦೧೧-೧೨ನೇ ಸಾಲಿನಲ್ಲಿ ಒಟ್ಟು ದ್ವಿದಳಧಾನ್ಯಗಳ ಸಮಗ್ರ ಉತ್ಪಾದನೆಯನ್ನು ಸ್ಥಿರೀಕರಿಸುವ ದಿಶೆಯಲ್ಲಿ ಕೇಂದ್ರ ಸರ್ಕಾರವು ಒಟ್ಟು  ೨.೭೦ ಲಕ್ಷ ಹೆ. ಹೆಚ್ಚುವರಿ ದ್ವಿದಳ ಧಾನ್ಯಗಳನ್ನು ೨೦೧೧-೧೨ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ಅಳವಡಿಸಲು ಒಟ್ಟು ೮೮೮ ಲಕ್ಷ ರೂ ಗಳ ಅನುದಾನವನ್ನು ಬಿಡುಗಡೆ ಮಾಡಿರುತ್ತದೆ. ೨೦೧೧-೧೨ನೇ

 ಸಾಲಿಗೆ ಒಟ್ಟಾರೆ ರೂ ೬೦೩೪.೧೩ ಲಕ್ಷ ಅನುದಾನ ಲಭ್ಯವಿದ್ದು, ಇದರಲ್ಲಿ ೫೪೯೩.೦೩ ಲಕ್ಷದಷ್ಟು  ಡಿಸೆಂಬರ್ ೨೦೧೧ರ ಅಂತ್ಯಕ್ಕೆ ವೆಚ್ಚಮಾಡಲಾಗಿದೆ. ಈ ಕಾರ್ಯಕ್ರಮದಡಿ ಆಯ್ದ ಕಲಬುರಗಿ, ವಿಜಯಪುರ, ರಾಯಚೂರು, ಬೆಳಗಾವಿ, ಧಾರವಾಡ, ಗದಗ, ಬಾಗಲಕೋಟೆ, ಬೀದರ್, ಬಳ್ಳಾರಿ, ಯಾದಗಿರಿ ಜಿಲ್ಲೆಗಳಲ್ಲಿ ಕೆಳಕಂಡ ಘಟಕಗಳನ್ನು ಅನುಷ್ಠಾನಗೊಳಿಸಲಾಗಿದೆ. ೧) ರಿಯಾಯಿತಿ ದರದಲ್ಲಿ ಬಿತ್ತನೆಬೀಜ ವಿತರಣೆ; ೨)ಐಎನ್‌ಎಮ್/ಐಪಿಎಂ ಪರಿಕರಕಿಟ್‌ಗಳ ವಿತರಣೆ; ೩) ಸಸ್ಯ ಸಂರಕ್ಷಣೆ ಔಷಧಿಗಳ ಬಳಕೆ ೨೭.೦೦೦ ಹೆಕ್ಟೇರ್‌ಗಳಿಗೆ (ಶೇಕಡ ೧೦ ರಷ್ಟು ಹೆಚ್ಚುವರಿ ವಿಸ್ತೀರ್ಣಕ್ಕೆ) ಪ್ರತಿ ಹೆಕ್ಟೇರ್‌ಗಳಿಗೆ ೫೦೦ ರೂ ಗಳಂತೆ (ಸಾಮೂಹಿಕ ಸಿಂಪರಣೆ); ೪) ಪ್ರತಿ ೧೦,೦೦೦ ಹೆಕ್ಟೇರ್‌ಗಳಿಗೆ ಪ್ರತಿ ಹೆಕ್ಟೇರ್‌ಗೆ ರೂ ೫೦೦ ರಂತೆ ಸಸ್ಯ ಸಂರಕ್ಷಣೆ ಔಷಧಿಯನ್ನು ಬಟಾಣಿ ಬೆಳೆಗೆ (ಸಾಮೂಹಿಕ ಸಿಂಪರಣೆ) ಬೆಳೆ ಪದ್ದತಿಯನ್ನು ಅನುಸರಿಸಿ ವಿತರಿಸಲಾಗಿದೆ.

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ

ಭಾರತ ಸರ್ಕಾರವು ೨೦೦೭-೦೮ರಲ್ಲಿ ಕೃಷಿಯ ಅಮೂಲಾಗ್ರ ಅಭಿವೃದ್ಧಿಗಾಗಿ ಹಾಗೂ ಕೃಷಿಯನ್ನು ಪುನಃಶ್ಚೇತನಗೊಳಿಸಲು ವಿಶೇಷ ಹೆಚ್ಚುವರಿ ಕೇಂದ್ರ ಧನ ಸಹಾಯ ಯೋಜನೆ ಯಡಿಯಲ್ಲಿ ರಾಷ್ಟ್ರೀಯ ಕೃಷಿವಿಕಾಸಯೋಜನೆಯನ್ನು ಪ್ರಾರಂಭಿಸಿರುತ್ತದೆ. ಕೃಷಿ ಹಾಗೂ ಪೂರಕ ಇಲಾಖೆಗಳಲ್ಲಿ ಸಾರ್ವಜನಿಕ ಬಂಡವಾಳ ಹೂಡಲು ರಾಜ್ಯಗಳಿಗೆ ಉತ್ತೇಜನ ನೀಡುವಂತದ್ದಾಗಿರುತ್ತದೆ, ಹಾಗೂ ಇದರ ಮುಖ್ಯ ಉದ್ದೇಶವು ಪ್ರಮುಖ ಬೆಳೆಗಳಲ್ಲಿನ ಇಳುವರಿಯ ಅಂತರವನ್ನು ಕಡಿಮೆಗೊಳಿಸಿ, ರೈತರಿಗೆ ಕೃಷಿ ಹಾಗೂ ಪೂರಕ ಚಟುವಟಿಕೆಗಳಿಂದ ಆದಾಯವನ್ನು ಹೆಚ್ಚು ಮಾಡುವಂತದ್ದಾಗಿರುತ್ತದೆ. ಈ ಯೋಜನೆಯನ್ನು ಕೃಷಿ ಮತ್ತು ಕೃಷಿಯೇತರ ಇಲಾಖೆಗಳಲ್ಲಿ ಅನುಷ್ಠಾನಗೊಳಿಸಲು ಕೃಷಿ ಇಲಾಖೆಯನ್ನು ನೋಡಲ್ ಇಲಾಖೆಯಾಗಿ ಕೇಂದ್ರ ಸರ್ಕಾರವು ಆಯ್ಕೆ ಮಾಡಿರುತ್ತದೆ. ಈ ಯೋಜನೆಗೆ ೨೦೧೦-೧೧ನೇ ಸಾಲಿನಲ್ಲಿ ಒಟ್ಟು ರೂ.೨೮೪ ಕೋಟಿ ಬಿಡುಗಡೆಯಾಗಿದ್ದು, ವಿವಿಧ ಇಲಾಖೆಗಳಾದ ಕೃಷಿ ಇಲಾಖೆ, ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ, ಕೃಷಿ ಮಾರುಕಟ್ಟೆ ಅಭಿವೃದ್ಧಿ, ರೇಷ್ಮೆ ಕೃಷಿ, ಕೃಷಿ ವಿಶ್ವವಿದ್ಯಾನಿಲಯಗಳು (ಬೆಂಗಳೂರು, ಧಾರವಾಡ ಹಾಗೂ ರಾಯಚೂರು) ಹಾಗೂ ಕರ್ನಾಟಕ ರಾಜ್ಯ ಬೀಜ ನಿಗಮ ಯೋಜನೆಗಳಿಗೆ ಹಣ  ವಿನಿಯೋಗವಾಗಿರುತ್ತದೆ.

ನೂತನ ಕೃಷಿ ವಿಸ್ತೃತ ನಿರ್ವಹಣಾ ಯೋಜನೆ

ರಾಜ್ಯದಲ್ಲಿ ಪ್ರಾದೇಶಿಕ ನಿರ್ದಿಷ್ಟ ಬೆಳೆಗಳ ಬೇಡಿಕೆಯನ್ನು ಪರಿಗಣಿಸಿ, ರಾಜ್ಯ ಯೋಜನೆಗಳಾದ ಕಬ್ಬು  ಬೆಳೆಯಲ್ಲಿ ಗುಣ ಮಟ್ಟದ ಬಿತ್ತನೆ ಬೀಜ ಕಾರ್ಯಕ್ರಮ, ಬೆಳೆ ಉತ್ಪಾದನೆ ನಿರ್ವಹಣಾ ಕಾರ್ಯಕ್ರಮ, ಸಮಗ್ರ ಪೋಷಕಾಂಶ ನಿರ್ವಹಣೆ, ಮತ್ತು ಕೃಷಿಯಾಂತ್ರೀಕರಣ ಕಾರ್ಯಕ್ರಮಗಳನ್ನು ವರ್ಕ ಪ್ಲಾನ್  ಯೋಜನೆಯಡಿಯಲ್ಲಿ ಅನುಷ್ಠಾನಗೊಳಿಸಲು ಅನುದಾನವನ್ನು ವಿನಿಯೋಗಿಸಲು ರೂಪಿಸಿದೆ. ಈ  ಯೋಜನೆಯಲ್ಲಿ ರೈತರಿಗೆ ಕೃಷಿ ಉಪಕರಣಗಳನ್ನು ಕೊಳ್ಳಲು ಸಹಾಯಧನವನ್ನು ನೀಡಲಾಗುವುದು. ಇದರಿಂದ ರೈತರಿಗೆ ಕಷ್ಟಕರವಾದ ಕೃಷಿ ಪದ್ಧತಿಯನ್ನು ವೈಜ್ಞಾನಿಕವಾಗಿ ಸಕಾಲದಲ್ಲಿ ಕೃಷಿ ಅಭಿವೃದ್ದಿಪಡಿಸಲು ಅನುಕೂಲವಾಗುವುದು.

ಕೇಂದ್ರ ಪುರಸ್ಕೃತ ಎಣ್ಣೆಕಾಳು, ಆಯಿಲ್‌ಪಾಮ್ ಹಾಗೂ ಮುಸುಕಿನ ಜೋಳ ಯೋಜನೆ [ಐಸೋಪಾಂ]

ಕೇಂದ್ರ ಪುರಸ್ಕೃತ ಐಸೋಪಾಂ ಯೋಜನೆಯು ೨೦೦೪-೦೫ರಲ್ಲಿ ರಾಜ್ಯದ ಎಣ್ಣೆಕಾಳು, ದ್ವಿದಳಧಾನ್ಯ ಮುಸುಕಿನ ಜೋಳ ಬೆಳೆಗಳ ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ಅನುಷ್ಠಾನಗೊಳಿಸಲಾಯಿತು. ೨೦೦೭ರಲ್ಲಿ ಈ ಯೋಜನೆಯನ್ನು ಮಾರ್ಪಡಿಸಲಾಗಿದ್ದು, ಏಪ್ರಿಲ್ ೨೦೧೦ ರಿಂದ ಐಸೋಪಾಂ ಯೋಜನೆಯನ್ನು ಮುಸುಕಿನ ಜೋಳ ಎಣ್ಣೆಕಾಳು, ದ್ವಿದಳ ಧಾನ್ಯಗಳಿಗೆ ಬೆಂಬಲ ನೀಡಲಾಯಿತು.

ಕೇಂದ್ರ ಸರ್ಕಾರವು ಟಿ.ಎಂ.ಒ.ಪಿ. ಅಧೀನದಲ್ಲಿ ಬರುವ ಎಣ್ಣೆಕಾಳು ಅಭಿವೃದ್ಧಿ ಯೋಜನೆ, ರಾಷ್ಟ್ರೀಯ ದ್ವಿದಳಧಾನ್ಯ ಅಭಿವೃದ್ಧಿ ಯೋಜನೆ, ಆಯಿಲ್ ಪಾಮ್ ಅಭಿವೃದ್ಧಿ ಯೋಜನೆ ಮತ್ತು ವೇವಗರ್ಧಕ ಅಭಿವೃದ್ಧಿ ಯೋಜನೆಗಳನ್ನು ವಿಲೀನಗೊಳಿಸಿ ಕೇಂದ್ರ ಪುರಸ್ಕೃತ ಸಮಗ್ರ ಎಣ್ಣೆಕಾಳು, ದ್ವಿದಳ ಧಾನ್ಯ, ಆಯಿಲ್ ಪಾಂ ಹಾಗೂ ಮುಸುಕಿನ ಜೋಳ ಯೋಜನೆಯನ್ನು ೧೦ನೇ ವಾರ್ಷಿಕ ಯೋಜನೆಯಡಿ ರೂಪಿಸಿದೆ. ಈ ಯೋಜನೆಯು ರಾಜ್ಯದ ೩೦ ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.

ಸುವರ್ಣ ಭೂಮಿ ಯೋಜನೆ

ಪರಿಚಯ ಮತ್ತು ಹಿನ್ನಲೆ

ರಾಜ್ಯದ ಶುಷ್ಕ ಭೂ ಪ್ರದೇಶಗಳಲ್ಲಿರುವ ಸಣ್ಣ ಮತ್ತು ಅತಿ ಸಣ್ಣ ರೈತರು ಸೇರಿದಂತೆ ಪರಿಶಿಷ್ಟ ಜಾತಿ ಮತ್ತು ಪಂಗಡದವರು ಕಡಿಮೆ ಆದಾಯ ತರುವಂತಹ ಧಾನ್ಯ ಬೆಳೆಗಳಾದ ಬತ್ತ, ರಾಗಿ, ಜೋಳ, ತೃಣ ಧಾನ್ಯ ಮತ್ತು ಇತರ ಬೆಳೆಗಳನ್ನು ಬೆಳೆಯುತ್ತಾರೆ. ಇಂತಹ ರೈತರಿಗೆ ಹೆಚ್ಚು ಲಾಭ ತರುವಂತಹ ಕಾಳುಗಳು, ಎಣ್ಣೆ ಬೀಜಗಳು ಬಿಟಿ ಹತ್ತಿ ಮತ್ತು ಜೈವಿಕ ಇಂಧನ, ತೋಟಗಾರಿಕೆ, ಜೇನುಸಾಕಣೆ, ಮೀನುಗಾರಿಕೆ, ರೇಷ್ಮೆ ಹುಳು ಸಾಕಣೆ ಮತ್ತು ಸಾವಯವ ಕೃಷಿ ಪದ್ಧತಿಗಳಿಗೆ ಬದಲಾಯಿಸಿಕೊಳ್ಳುವಂತೆ ಅವರನ್ನು ಪ್ರೋತ್ಸಾಹಿಸಿ, ಆ ಮೂಲಕ ಅವರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಸುವರ್ಣ ಭೂಮಿ ಯೋಜನೆಯನ್ನು ಪರಿಚಯಿಸಲಾಯಿತು. ಈ ಯೋಜನೆಯ ಪ್ರಮುಖ ಉದ್ದೇಶವು ಕೃಷಿಯನ್ನು ಲಾಭದಾಯಕ ವೃತ್ತಿಯನ್ನಾಗಿಸಿ, ರೈತರನ್ನು ಕೃಷಿಯಡೆಗೆ ಆಕರ್ಷಿಸುವುದಾಗಿದೆ.

ಯೋಜನೆಯ ತಾರ್ಕಿಕತೆ: ಸುವರ್ಣ ಭೂಮಿ ಯೋಜನೆಯನ್ನು ೨೦೧೧-೧೨ರಿಂದ ಅನುಷ್ಠಾನಗೊಳಿಸಲಾಗಿದೆ. ಈ ಯೋಜನೆಯ ಪ್ರಮುಖ ಉದ್ದೇಶವು ಶುಷ್ಕ ಭೂಪ್ರದೇಶಗಳ ಸಣ್ಣ ಮತ್ತು  ಅತಿ ಸಣ್ಣ ರೈತರಿಗೆ, ಕಡಿಮೆ ಆದಾಯದ ಬೆಳೆಗಳಿಂದ ಹೆಚ್ಚು ಆದಾಯ ತರುವ ಬೆಳೆಗಳಾದ ಕಾಳುಗಳು, ಎಣ್ಣೆ ಬೀಜಗಳು ಮತ್ತು ಬಿಟಿ ಹತ್ತಿಗೆ ಬದಲಾವಣೆ ಆಗಲು ಉತ್ತೇಜನ ನೀಡುವುದು. ಈ ಉತ್ತೇಜನವನ್ನು ಇತರ ಚಟುವಟಿಕೆಗಳಿಗೂ, ಅಂದರೆ ಜೈವಿಕ ಇಂಧನ, ತೋಟಗಾರಿಕೆ, ಜೇನುಸಾಕಣೆ, ಮೀನುಗಾರಿಕೆ, ರೇಷ್ಮೆಹುಳು ಸಾಕಣೆ ಮತ್ತು ಸಾವಯವ ಕೃಷಿಗಳಿಗೆ ವಿಸ್ತರಿಸಲಾಗಿದೆ.

ಧ್ಯೇಯ: ಶುಷ್ಕ ಭೂಮಿ ಪ್ರದೇಶಗಳಲ್ಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮತ್ತು ಸಣ್ಣ ಮತ್ತು ಅತಿ ಸಣ್ಣ ರೈತರನ್ನು ಆಕರ್ಷಿಸಲು, ಹೆಚ್ಚು ಬೆಲೆಯ ಬೆಳೆಗಳನ್ನು ಬೆಳೆದು ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಈ ಯೋಜನೆಯನ್ನು ಪರಿಚಯಿಸಲಾಯಿತು, ಈ ಯೋಜನೆಯನ್ನು ರಾಜ್ಯದ ಎಲ್ಲಾ ೩೦ ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲಾಯಿತು. ಈ ಯೋಜನೆಯನ್ನು ೨೦೧೨-೧೩ ರಲ್ಲಿಯೂ ಮುಂದುವರೆಸಲಾಗುವುದು.

ಯೋಜನೆಯ/ಕಾರ್ಯಕ್ರಮದ ಪ್ರಮುಖ ಲಕ್ಷಣಗಳು ಮತ್ತು ಭೌಗೋಳಿಕ ವ್ಯಾಪ್ತಿ

ಸಣ್ಣ ಮತ್ತು ಅತಿ ಸಣ್ಣ ರೈತರಿಗೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವರ್ಗದವರೂ ಸೇರಿ, ರೂ ೧೦,೦೦೦ ಗಳ ಪ್ರೋತ್ಸಾಹ ಧನಗಳು (ಗರಿಷ್ಟ ಎರಡು ಎಕರೆಗಳಿಗೆ) ರೂ ೫,೦೦೦ ರಂತೆ ಎರಡು ಕಂತುಗಳಲ್ಲಿ ಬ್ಯಾಂಕ್‌ಗಳ ಮೂಲಕ ನೀಡಲಾಗುವುದು. ಈ ಪ್ರೋತ್ಸಾಹ ಧನವನ್ನು ಆಯ್ದ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ. ಫಲಾನುಭವಿಗಳು, ತಮ್ಮ ಪ್ರಾಸ್ತಾವಿಕ ಚಟುವಟಿಕೆಯನ್ನು ಮಾಡಲು ಬಳಸಿಕೊಳ್ಳುತ್ತಾನೆ. ಜಲಾನಯನ ಪ್ರದೇಶಗಳಲ್ಲಿನ ರೈತರು ಈ ಯೋಜನೆಯ ಪ್ರೋತ್ಸಾಹ ಧನವನ್ನು ಪಡೆಯಲು ಅನರ್ಹರಾಗಿರುತ್ತಾರೆ.

ದಿನಪತ್ರಿಕೆಗಳು, ಸ್ಥಳೀಯ ಪತ್ರಿಕೆಗಳು ಮತ್ತು ಕರಪತ್ರಗಳಲ್ಲಿ ನೀಡಿರುವಂತಹ ಪ್ರಚಾರಗಳ ಮೂಲಕ ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ರೈತರ ಮೇಲೆ ಅನಗತ್ಯವಾದ ಆರ್ಥಿಕ ಹೊರೆಯನ್ನು  ತಪ್ಪಿಸಲು, ಯಾವುದೇ ದಾಖಲೆಗಳಿಲ್ಲದೆ ಅರ್ಜಿಗಳನ್ನು ಸ್ವೀಕರಿಸಲಾಯಿತು. ಕಂದಾಯ ಇಲಾಖೆಯಿಂದ ಸಣ್ಣ ಮತ್ತು ಅತಿ ಸಣ್ಣ ಪ್ರಮಾಣಪತ್ರಗಳನ್ನು ಪಡೆಯಲು ಇಲಾಖೆಯು ಕ್ರಮ ಕೈಗೊಂಡಿದೆ. ಪ್ರತಿ ತಾಲೂಕಿನಲ್ಲಿಯೂ ನಿಗದಿಪಡಿಸಿರುವ ಮೊತ್ತಕ್ಕಿಂತ ಹೆಚ್ಚು ಅರ್ಜಿಗಳು ಬಂದಿದ್ದರಿಂದ ಮತ್ತು ಫಲಾನುಭವಿಗಳ ಆಯ್ಕೆಯಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು. ಲಾಟರಿ ವ್ಯವಸ್ಥೆಯನ್ನು  ಅನುಸರಿಸಲಾಯಿತು.

ಪೌಷ್ಟಿಕ ತೃಣಧಾನ್ಯಗಳ ಉತ್ಪಾದನೆ ಉತ್ತೇಜಿಸುವ ಕಾರ್ಯಕ್ರಮ

ಭಾರತ ಸರ್ಕಾರವು ತೃಣಧಾನ್ಯಗಳ ಉತ್ಪಾದಕತೆ ಮತ್ತು ಅವುಗಳ ಪೌಷ್ಟಿಕತೆ ಕುರಿತು ಪ್ರಚಾರ ಮಾಡಿ ಅವುಗಳನ್ನು ದಿನ ನಿತ್ಯದ ಆಹಾರದಲ್ಲಿ ಉಪಯೋಗಿಸಲು ಉತ್ತೇಜಿಸಲು INITIATIVE FOR

NUTRITIONAL SECURITY THROUGH INTENSIVE MILLETS PROMOTION PROGRAMME (INSIMP) ವೆಂಬ ವಿಶೇಷ ಯೋಜನೆಯನ್ನು ಆರ್.ಕೆ.ವಿ.ವೈ ಹಮ್ಮಿಕೊಂಡಿದೆ. ಈ ಯೋಜನೆಯಡಿ ಕರ್ನಾಟಕ  ರಾಜ್ಯದಲ್ಲಿ ೧೬ ಜಿಲ್ಲೆಗಳಲ್ಲಿ ಜೋಳ, ರಾಗಿ, ಸಜ್ಚೆ ಮತ್ತು ಕಿರು ತೃಣ ಧಾನ್ಯಗಳಾದ ನವಣೆ ಮತ್ತು ಸಾಮೆ ಬೆಳೆಗಳ ಒಟ್ಟು ೫೭,೮೦೦ ಹೆಕ್ಟೇರ್ ಪ್ರದೇಶದಲ್ಲಿ ಉತ್ಪಾದನಾ ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸಲಾಗಿದೆ. ಇದಲ್ಲದೇ, ಈ ಕಾರ್ಯಕ್ರಮದಡಿಯಲ್ಲಿ ಕೊಯ್ಲೋತ್ತರ ಸಂಸ್ಕರಣೆ ಹಾಗೂ ಮೌಲ್ಯವರ್ಧನೆ ಕಾರ್ಯಕ್ರಮಗಳಿರುತ್ತವೆ.

ಹಾವು ಕಡಿತದಿಂದ, ಮರಗಳಿಂದ ಬಿದ್ದು ಹಾಗೂ ಕೃಷಿಗೆ ಸಂಬಂಧಿಸಿದ ಇತರೆ ಆಕಸ್ಮಿಕಗಳಿಂದ ಮರಣ ಹೊಂದಿದ ರೈತರು ಮತ್ತು ಕೃಷಿ ಕಾರ್ಮಿಕರಿಗೆ ಪರಿಹಾರ ಮತ್ತು ಬೆಂಕಿ ಆಕಸ್ಮಿಕದಿಂದ ಹುಲ್ಲು ಮೆದೆ/ಬಣವೆಗಳು ನಷ್ಟವಾದಲ್ಲಿ ಪರಿಹಾರ:

೨೦೧೦- ೧೧ನೇ ಸಾಲಿನಿಂದ ಹಾವು ಕಡಿತದಿಂದ, ಮರಗಳಿಂದ ಬಿದ್ದು ಹಾಗೂ ಕೃಷಿಗೆ ಸಂಬಂಧಿಸಿದ ಇತರೆ ಆಕಸ್ಮಿಕಗಳಿಂದ ಮರಣ ಹೊಂದಿದ ರೈತರು ಮತ್ತು ಕೃಷಿ ಕಾರ್ಮಿಕರಿಗೆ ಪರಿಹಾರ ಮತ್ತು ಬೆಂಕಿ ಆಕಸ್ಮಿಕದಿಂದ ಹುಲ್ಲು ಮೆದೆ/ ಬಣವೆಗಳು ನಷ್ಟವಾದಲ್ಲಿ ಪರಿಹಾರ ನೀಡುವ ಯೋಜನೆಯನ್ನು ಜಾರಿಗೆ  ತರಲಾಗಿದೆ.

ಈ ಯೋಜನೆಯಂತೆ ಹಾವು ಕಡಿತದಿಂದ, ಮರಗಳಿಂದ ಬಿದ್ದು ಹಾಗೂ ಕೃಷಿಗೆ ಸಂಬಂಧಿಸಿದ ಇತರೆ ಆಕಸ್ಮಿಕಗಳಿಂದ ಮರಣ ಹೊಂದಿದ ರೈತರು ಮತು ಕೃಷಿಕಾರ್ಮಿಕರಿಗೆ ರೂ. ಒಂದು ಲಕ್ಷ ಪರಿಹಾರ ಮತ್ತು ಬೆಂಕಿ ಆಕಸ್ಮಿಕದಿಂದ ಹುಲ್ಲುಮೆದೆ / ಬಣವೆಗಳು ನಷ್ಟವಾದಲ್ಲಿ ರೂ. ೧೦,೦೦೦ ದವರೆಗೆ ಪರಿಹಾರ ನೀಡಲು ಸರ್ಕಾರ ಆದೇಶ ಹೊರಡಿಸಿದೆ. ಸದರಿ ವಿಷಯ ಯೋಜನೆ ಅನ್ವಯ ೨೦೧೧-೧೨ನೇಸಾಲಿನಲ್ಲಿ ರೂ.೧೦೦ ಲಕ್ಷಗಳ ಅನುದಾನ ಮೀಸಲಿದೆ. ಡಿಸೆಂಬರ್೨೦೧೧ರವರೆಗೆ ರೂ. ೪೯.೯೩ ಲಕ್ಷಗಳ ನಗದು ಪರಿಹಾರವನ್ನು ನೀಡಲಾಗಿದೆ.

 

ಕರ್ನಾಟಕ ಕೃಷಿ ಮಿಷನ್

ಕೃಷಿ ಹಾಗೂ ಕೃಷಿಯೇತರ ಚಟುವಟಿಕೆಗಳ ಸಮಗ್ರ ಅಭಿವೃದ್ಧಿಗಾಗಿ ಮಾನ್ಯಮುಖ್ಯ ಮಂತ್ರಿಯವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಕೃಷಿ ಮಿಷಿನ್‌ ಸ್ಥಾಪಿಸಲಾಗಿದೆ. ಈ ಅಭಿಯಾನದ ಮುಖ್ಯಉದ್ದೇಶಗಳು ಹೀಗಿವೆ:

೧)ಕೃಷಿ ಇಲಾಖೆ, ಕೃಷಿ ವಿಶ್ವವಿದ್ಯಾಲಯಗಳು ಹಾಗೂ ಸಂಬಂಧಿತ ಇಲಾಖೆಗಳ ಕಾರ್ಯಕ್ರಮಗಳಲ್ಲಿ ಕೃಷಿ ಅಭಿವೃದ್ಧಿಗಾಗಿ ನೂತನ ಪರಿಕಲ್ಪನೆ/ವಿಚಾರಗಳನ್ನು ಮೂಡಿಸಿ, ಹೊಸ ಕಾರ್ಯಕ್ರಮ/ ಯೋಜನೆಗಳನ್ನು ರೂಪಿಸುವುದು,

೨)ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ರೇಷ್ಮೆ, ಮೀನುಗಾರಿಕೆ ಇಲಾಖೆಗಳು ಹಾಗೂ ಕೃಷಿ ವಿಶ್ವವಿದ್ಯಾಲಯಗಳ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ / ಸಮನ್ವಯದೊಂದಿಗೆ ರೂಪಿಸಿ ಏಕಗವಾಕ್ಷಿ  ಮೂಲಕ ತಾಂತ್ರಿಕ ಮಾಹಿತಿಯನ್ನು ಒದಗಿಸುವುದು,

೩) ಕೃಷಿ ಉತ್ಪನ್ನದಲ್ಲಿ ಪ್ರತಿ ವರ್ಷ ಶೇಕಡ ೪.೫ರ ಉನ್ನತಿಯನ್ನು ಸಾಧಿಸಲು ಮತ್ತು ರೈತರ ಆದಾಯವನ್ನು ಹೆಚ್ಚಿಸಲು ಹೊಸ ಕಾರ್ಯಕ್ರಮ/ ಮಾರ್ಗಸೂಚಿಗಳನ್ನು ರೂಪಿಸುವುದು,

೪) ಸಹಿಷ್ಣುತ ಕೃಷಿಗಾಗಿ, ನೈಸರ್ಗಿಕ ಸಂಪನ್ಮೂಲಗಳಾದ ನೆಲ, ಜಲ ಮತ್ತು ಮಣ್ಣಿನ ಫಲವತ್ತತೆಯನ್ನು / ನೀರಿನ ಸದ್ಬಳಕೆಗಾಗಿ ಹೊಸ ಕಾರ್ಯಕ್ರಮಗಳನ್ನು ರೂಪಿಸುವುದು,

೫) ಸಾವಯವ ಕೃಷಿಯನ್ನು ಉತ್ತೇಜಿಸುವುದು,

೬) ನೂತನ ಕೃಷಿ ತಾಂತ್ರಿಕತೆ ಹಾಗೂ ಮಾರುಕಟ್ಟೆ ಮಾಹಿತಿ ಬಗ್ಗೆ ರೈತರಿಗೆ ಉನ್ನತ ತರಬೇತಿಗಳನ್ನು ಏರ್ಪಡಿಸುವುದು,

೭) ರೈತ ಸಮೂಹಗಳಿಗೆ ಬೀಜ ಶೇಖರಣೆಗಾಗಿ, ಮಳೆ ನೀರಿನ ಕೊಯ್ಲಿಗಾಗಿ ಹಾಗೂ ನೀರಿನ ಸದ್ಬಳಕೆಗಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು,

೮) ರೈತರಿಗೆ ಕಮಾಡಿಟಿ ಗ್ರೂಪ್ ಹಾಗೂ ಫ್ಯೂಚರ್ ಟ್ರೇಡಿಂಗ್ ಮೂಲಕ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಬೆಲೆ ದೊರಕಿಸಲು ಕ್ರಮ ಕೈಗೊಳ್ಳುವುದು,

೯) ಮಳೆ ಆಧಾರಿತ ಸ್ಥಿತಿಯಲ್ಲಿಯ ರೈತರ ಅದಾಯ ಹೆಚ್ಚಿಸಲು ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸುವುದು,

೧೦) ಬದಲಾಗುತ್ತಿರುವ ಕೃಷಿ ಪರಿಸ್ಥಿತಿಯನ್ನು ನಿಭಾಯಿಸಲು ವೃತ್ತಿ ಹಾಗೂ ವೃತ್ತಿಪರ ಮಾನವ ಸಂಪನ್ಮೂಲವನ್ನು  ತಯಾರುಗೊಳಿಸಲು ಕೃಷಿ ವಿಶ್ವವಿದ್ಯಾಲಯಗಳಿಗೆ ಮಾರ್ಗದರ್ಶನ ನೀಡುವುದು,

೧೧) ತೋಟಗಾರಿಕೆ ಬೆಳೆಗಳ ಸಸಿಗಳನ್ನು, ಪಶು, ಕುಕ್ಕಟ ಮತ್ತು ಮೀನು ಮರಿಗಳು ಇತ್ಯಾದಿ ವಿವಿಧ ಕ್ಷೇತ್ರಗಳಲ್ಲಿ ಬೀಜೋತ್ಪಾದನೆ ಬಗ್ಗೆ ಪ್ರಥಮ ಆದ್ಯತೆಯನ್ನು ನೀಡುವುದು.

 

ತರಬೇತಿ

ಕೃಷಿಯಲ್ಲಿನ ಶಿಕ್ಷಣ ಮತ್ತು ತರಬೇತಿಯು, ಅಭ್ಯರ್ಥಿಯ ತಾಂತ್ರಿಕ ಮಟ್ಟವನ್ನು ಹೆಚ್ಚು ಮಾಡುವುದು ಮತ್ತು ಹೊಸ ತಾಂತ್ರಿಕತೆಗಳನ್ನು ಅಳವಡಿಸಿಕೊಳ್ಳಲು ಬಹಳ ಉಪಯುಕ್ತವಾಗಿದೆ ಮತ್ತು ಅನಿವಾರ್ಯವೂ ಸಹಾ ಆಗಿರುತ್ತದೆ. ಹೆಚ್ಚಿನ ರೈತರು ಮತ್ತು ರೈತ ಮಹಿಳೆಯರಿಗೆ ಕೃಷಿಯಲ್ಲಿನ ಹೊಸ ತಂತ್ರಜ್ಞಾನವನ್ನು ಬಳಕೆಗೆ ತರುವುದಕ್ಕೆ ಅನುಕೂಲವಾಗುವಂತೆ ತರಬೇತಿಗಳನ್ನು ವಿವಿಧ ಯೋಜನೆಗಳ ಅಡಿಯಲ್ಲಿ ಹಮ್ಮಿಕೊಳ್ಳಲಾಗಿದೆ.

ಜಿಲ್ಲಾ ಕೃಷಿ ತರಬೇತಿ ಕೇಂದ್ರಗಳು-ಜಿಲ್ಲಾ ವಲಯ(ಯೋಜನೆ)

ಕೃಷಿಯಲ್ಲಿನ ಆಧುನಿಕ ತಂತ್ರಜ್ಞಾನದ ಕುರಿತು ರೈತರಿಗೆ ಮತ್ತು ರೈತ ಮಹಿಳೆಯರಿಗೆ ಹಾಗು ಇಲಾಖೆಯ ವಿಸ್ತರಣಾ ಕಾರ್ಯಕರ್ತರಿಗೆ ತರಬೇತಿಯನ್ನು ನೀಡುವ ಮುಖ್ಯ ಉದ್ದೇಶದಿಂದ ಜಿಲ್ಲಾ ಕೃಷಿ ತರಬೇತಿ ಕೇಂದ್ರಗಳು ೨೦೦೧-೦೨ನೇ ಸಾಲಿನಲ್ಲಿ ೨೩ ಜಿಲ್ಲೆಗಳಲ್ಲಿ ಸೃಷ್ಟಿಸಲಾಯಿತು. ಜಿಲ್ಲಾ ಕೃಷಿ ತರಬೇತಿ ಕೇಂದ್ರಗಳು ಇಲ್ಲದ ಉಡುಪಿ, ಚಾಮರಾಜನಗರ, ಗದಗ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಮತ್ತು ಬೆಂಗಳೂರಿನ ಹೆಬ್ಬಾಳದಲ್ಲಿರುವ ರೈತ ತರಬೇತಿ ಸಂಸ್ಥೆಯಲ್ಲಿ ತರಬೇತಿಯನ್ನು ನೀಡಲಾಗುತ್ತಿದೆ.

 

ಮಾನವ ಸಂಪನ್ಮೂಲ ಅಭಿವೃದ್ಧಿ ಯೋಜನೆ

ಮಾನವ ಸಂಪನ್ಮೂಲವನ್ನು ಸರ್ವತೋಮುಖವಾಗಿ ಅಭಿವೃದ್ಧಿಗೊಳಿಸುವ ಮುಖ್ಯ ಉದ್ದೇಶದಿಂದ ೨೦೦೧-೦೨ನೇ ಸಾಲಿನಿಂದ ಮಾನವ ಸಂಪನ್ಮೂಲ ಅಭಿವೃದ್ಧಿ ಯೋಜನೆಯನ್ನು ಭಾರತ ಸರ್ಕಾರ ವಿಸ್ತೃತ ಯೋಜನೆಯಡಿಯಲ್ಲಿ ಮೊದಲ ಬಾರಿಗೆ ತರಲಾಯಿತು. ಈ ಯೋಜನೆಯಡಿಯಲ್ಲಿ ಕೆಳಕಂಡ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

೧) ರೈತರಿಗೆ ಮತ್ತು ವಿಸ್ತರಣಾ ಕಾರ್ಯಕರ್ತರಿಗೆ ಸಾಂಸ್ಥಿಕ ತರಬೇತಿಯನ್ನು ನೀಡುವುದು;

೨)ರೈತರಿಗೆ ಹಾಗು ಚುನಾಯಿತ ಪ್ರತಿನಿಧಿಗಳಿಗೆ ಮತ್ತು ವಿಸ್ತರಣಾ ಕಾರ್ಯಕರ್ತರಿಗೆ ಉಪಗ್ರಹ ಆಧಾರಿತ ತರಬೇತಿ

೩) ಇಲಾಖೆಯ ವಿಸ್ತರಣಾ ಅಧಿಕಾರಿಗಳಿಗೆ ಕೃಷಿ ವಿಶ್ವವಿದ್ಯಾನಿಲಯಗಳಲ್ಲಿ ತರಬೇತಿ

೪)ರೈತ ಸಮುದಾಯಕ್ಕೆ ಕೃಷಿ ಮೇಳ ಮತ್ತು ಕ್ಷೇತ್ರ ಭೇಟಿ ಮತ್ತು ಅಧ್ಯಯನ ಕಾರ್ಯಕ್ರಮ

೫)ತರಬೇತಿ ಕೇಂದ್ರಗಳಲ್ಲಿ ರೈತರಿಗೆ ಮತ್ತು ರೈತ ಮಹಿಳೆಯರಿಗೆ ಉತ್ತಮ ವಾಸ್ತವ್ಯ ಕಲ್ಪಿಸುವ ಸಲುವಾಗಿ ತರಬೇತಿ ಕೇಂದ್ರಗಳಲ್ಲಿನ ಮೂಲಭೂತ ಸೌಲಭ್ಯಗಳನ್ನು ಬಲಪಡಿಸುವುದು

೬)ಮುಂಗಾರು, ಹಿಂಗಾರು ಮತ್ತು ಬೇಸಿಗೆ ಹಂಗಾಮು ಕಾರ್ಯಾಗಾರ

೭)ವಿಶ್ವ ಆಹಾರ ದಿನಾಚರಣೆ

೮)ಅಂತಾರಾಷ್ಟ್ರೀಯ ರೈತರ ದಿನಾಚರಣೆ ಮತ್ತು

೯) ಕೃಷಿ ಸಂಸ್ಕರಣಾ ತರಬೇತಿ.

 

ಕೃಷಿ ನಿರ್ವಹಣೆ ಅಧ್ಯಯನ

 ಕೃಷಿ ನಿರ್ವಹಣೆ ಅಧ್ಯಯನದ ಮುಖ್ಯ ಉದ್ದೇಶವೇನೆಂದರೆ, ಕೃಷಿ ವಲಯಗಳಲ್ಲಿ ವಿವಿಧ ಬೆಳೆಗಳಿಗೆ ಹೆಕ್ಟೇರುವಾರು ವ್ಯವಸಾಯಕ್ಕೆ ತಗಲುವ ಖರ್ಚುಗಳನ್ನು ಮತ್ತು ಪ್ರತಿ ಕ್ವಿಂಟಾಲ್ ಉತ್ಪನ್ನಕ್ಕೆ ತಗಲಬಹುದಾದ ಖರ್ಚನ್ನು ಕಂಡು ಹಿಡಿಯುವುದು ಮತ್ತು ವಿವಿಧ ಬೆಳೆಗಳ ಭೌತಿಕ ಸಾಮಾಗ್ರಿಗಳ ಬಳಕೆ ಮತ್ತು ಉತ್ಪನ್ನ ಹಾಗೂ ಖರ್ಚು ನಡುವಿನ ಸಂಬಂಧ ಕಂಡುಹಿಡಿಯುವುದು. ಈ ಮಾಹಿತಿಯು ಸರ್ಕಾರದ ಕೆಲವು ಕಾರ್ಯನೀತಿ ನಿರ್ಣಯ ತೆಗೆದುಕೊಳ್ಳಲು ಮತ್ತು ರೈತರು ಲಾಭದಾಯಕ ಬೆಳೆ ಆರಿಸಿಕೊಳ್ಳಲು ತುಂಬಾ ಉಪಯುಕ್ತವಾಗಿದೆ.

ಕೃಷಿ ಇಲಾಖೆಯ ವಿಶ್ವ ವಾಣಿಜ್ಯ ಸಂಸ್ಥೆ ಘಟಕ

ಕೃಷಿ ಇಲಾಖೆಯಡಿ ಡಿಸೆಂಬರ್ ೨೦೦೨ ರಲ್ಲಿ ವಿಶ್ವ ವಾಣಿಜ್ಯ ಸಂಸ್ಥೆ ಘಟಕವನ್ನು ಸ್ಥಾಪಿಸಲಾಯಿತು. ವಿಶ್ವ ವಾಣಿಜ್ಯ ಸಂಸ್ಥೆ ಒಪ್ಪಂದದಡಿ ಕೃಷಿ ಸಂಬಂಧಿತ ಒಪ್ಪಂದಗಳ ಬಗೆಗಿನ ಇತ್ತೀಚಿನ ಚಟುವಟಿಕೆಗಳ ಬಗ್ಗೆ ಕ್ಷೇತ್ರ ಸಿಬ್ಬಂದಿ ಹಾಗೂ ರೈತ ಸಮುದಾಯದಲ್ಲಿ ವ್ಯಾಪಕ ಪ್ರಚಾರ ನೀಡುವುದು ಈ ಘಟಕದ ಧ್ಯೇಯವಾಗಿದೆ. ಈ ಘಟಕದಿಂದ ವಿಶ್ವ ವಾಣಿಜ್ಯ ಸಂಸ್ಥೆ ಒಪ್ಪಂದ, ಕೃಷಿ ಹಾಗೂ ಆಹಾರ ಸಂಬಂಧಿತ ವಿಷಯಗಳ ಬಗ್ಗೆ ಅಧ್ಯಯನ ಮಾಡಲು ಕರ್ನಾಟಕ ಸರ್ಕಾರ ನೇಮಿಸಿದ ಡಾ. ಪ್ರೇಮನಾಥ್ ಸಮಿತಿಯ ವರದಿಯನ್ನು ವಿಶ್ವ ವಾಣಿಜ್ಯ ಒಪ್ಪಂದದಿಂದ ರಾಜ್ಯದ ಕೃಷಿ ವಲಯದ ಮೇಲೆ ಆಗುವ ಪರಿಣಾಮ, ಜಾಗತೀಕರಣ ಮತ್ತು ವಾಣಿಜ್ಯ ಉದಾರೀಕರಣದಿಂದಾಗುವ ಬದಲಾವಣೆಗೆ ಹೊಂದಿಕೊಳ್ಳುವ ಕುರಿತ ವಿಚಾರಗಳನ್ನು ಪ್ರಚಾರ ಪಡಿಸಲಾಗುತ್ತಿದೆ. ಅಲ್ಲದೇ, ಸಸ್ಯತಳಿಗಳ ರಕ್ಷಣೆ ಮತ್ತು ರೈತರ ಹಕ್ಕುಗಳ ಅಧಿನಿಯಮ ೨೦೦೧ ರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಈಗಾಗಲೇ ಸರ್ಕಾರದಿಂದ ಡಾ: ಜಿ.ಕೆ.ವೀರೇಶ್ ರವರ ಅಧ್ಯಕ್ಷತೆಯಲ್ಲಿ ರಾಜ್ಯಮಟ್ಟದ ಸಮಿತಿ ಹಾಗೂ ಕೃಷಿ ಆಯುಕ್ತರ ಅಧ್ಯಕ್ಷತೆಯಲ್ಲಿ ರಾಜ್ಯ ಮಟ್ಟದ ಉಪಸಮಿತಿಯನ್ನು ರಚಿಸಲಾಗಿದೆ. ರಾಜ್ಯದ ಮೂರು ಕೃಷಿ ವಿಶ್ವವಿದ್ಯಾನಿಲಯಗಳ ವ್ಯಾಪ್ತಿಗೆ ಪ್ರತ್ಯೇಕವಾಗಿ ಒಂದೊಂದು ರಾಜ್ಯಮಟ್ಟದ ತಾಂತ್ರಿಕ ಸಮಿತಿಗಳನ್ನು ಮತ್ತು ಜಿಲ್ಲಾ ಮಟ್ಟದಲ್ಲಿ ಸಸ್ಯತಳಿಗಳನ್ನು ಗುರುತಿಸಿ ಮಾಹಿತಿ ಸಂಗ್ರಹಿಸಲು ಜಿಲ್ಲಾ ಜಂಟಿ ಕೃಷಿ ನಿರ್ದೇಶಕರ ಅಧ್ಯಕ್ಷತೆಯಲ್ಲಿ ತಾಂತ್ರಿಕ ಸಮಿತಿಗಳನ್ನು ಈ ಕೆಳಕಂಡ ಉದ್ದೇಶಗಳಿಗಾಗಿ ರಚಿಸಲಾಗಿದೆ.

೧) ಭೌಗೋಳಿಕ ನಿಶ್ಚಯಾರ್ಥ (ಜಿಯೋಗ್ರಾಫಿಕಲ್ ಇಂಡಿಕೇಷನ್ಸ್) ಆಧಾರದ ಮೇರೆಗೆ ಸ್ಥಳೀಯ ತಳಿಗಳನ್ನು ಗುರುತಿಸುವುದು;

೨) ಸ್ಥಳೀಯ ಸಸ್ಯತಳಿಗಳ ರಕ್ಷಣೆಗೆ ಮಾಹಿತಿಯನ್ನು ಸಂಗ್ರಹಿಸುವುದು ನಶಿಸಿಹೋದ ತಳಿಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುವುದು ಮತ್ತು

೩) ತಾಲೂಕು ಮಟ್ಟದಲ್ಲಿ ಸಸ್ಯತಳಿಗಳ ಬಗ್ಗೆ ಮೂಲ ಮಾಹಿತಿ/ವಿಷಯವನ್ನು ಸಂಗ್ರಹಿಸುವುದು.

 

ರಾಜ್ಯ ಭೂಬಳಕೆ ಮಂಡಳಿ

ರಾಷ್ಟ್ರೀಯ ಭೂಬಳಕೆ ಮತ್ತು ಸಂರಕ್ಷಣೆ ಮಂಡಳಿಯ ಆದೇಶದಂತೆ ಕರ್ನಾಟಕ ಸರ್ಕಾರ ೧೯೭೫ರಲ್ಲಿ ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ರಾಜ್ಯ ಭೂಬಳಕೆ ಮಂಡಳಿಯನ್ನು ಪ್ರಾರಂಭಿಸಿತು. ೧೯೯೬ರಲ್ಲಿ ರಾಜ್ಯ ಭೂಬಳಕೆಮಂಡಳಿಯನ್ನು ಮಾನ್ಯ ಕೃಷಿ ಸಚಿವರ ಅಧ್ಯಕ್ಷತೆಯಲ್ಲಿ ಪುನಃರಚಿಸಲಾಯಿತು. ಇದಲ್ಲದೆ ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ಕಾರ್ಯಕಾರಿ ಸಮಿತಿ ಸಹ ರೂಪಿಸಿ ಈ ಎರಡೂ ಸಮಿತಿಗಳಿಗೆ ಅಪರ ಕೃಷಿ ನಿರ್ದೇಶಕರು, ರಾಜ್ಯ ಭೂಬಳಕೆ ಮಂಡಳಿಯವರನ್ನು ಸದಸ್ಯ ಕಾರ್ಯದರ್ಶಿಯಾಗಿ ನೇಮಿಸಿತು. ರಾಜ್ಯ ಭೂ ಬಳಕೆ ಮಂಡಳಿಯ ಕೇಂದ್ರ ಕೋಶದ ಮುಖ್ಯಸ್ಥರಾಗಿ ಅಪರ ಕೃಷಿ ನಿರ್ದೇಶಕರು,  ರಾಜ್ಯ ಭೂಬಳಕೆ ಮಂಡಳಿಯವರನ್ನು ನೇಮಿಸಿತು. ಈ ಹುದ್ದೆ ೩೧ ಆಗಸ್ಟ್ ೨೦೦೬ರಲ್ಲಿ ರದ್ದಾಯಿತು.

ಚಟುವಟಿಕೆಗಳು

೧) ಭೂ ಸಂಪನ್ಮೂಲಗಳ ಸಂರಕ್ಷಣೆ, ನಿರ್ವಹಣೆ ಮತ್ತು ಅಭಿವೃದ್ಧಿ ಕುರಿತ ಭಿತ್ತಿ ಪತ್ರಗಳು, ಕಿರು ಹೊತ್ತಿಗೆಗಳು ಮತ್ತು ಸಾಕ್ಷ್ಯ ಚಿತ್ರಗಳನ್ನು (ಸಿ.ಡಿ) ತಯಾರಿಸುವುದು;

೨) ಬಂಜರು ಭೂಮಿಯಲ್ಲಿ ಜೈವಿಕ ಇಂಧನ ಮರಗಳನ್ನು ಅಭಿವೃದ್ಧಿಪಡಿಸಲು ಕಾರ್ಯಕ್ರಮ ಅನುಷ್ಠಾನ ಮಾಡುವುದು

೩) ರಾಜ್ಯದ ೨೭ ಜಿಲ್ಲೆಗಳ ಭೂ ಬಳಕೆ ಮತ್ತು ಭೂ ಹೊದಿಕೆ ನಕ್ಷೆಗಳನ್ನು ಕರ್ನಾಟಕ ರಾಜ್ಯ ದೂರ ಸಂವೇದಿ ಸಂಸ್ಥೆಯ ವತಿಯಿಂದ ತಯಾರಿಸುವುದು;

೪) ರಾಜ್ಯದ ೨೭ ಜಿಲ್ಲೆಗಳ ಮಣ್ಣಿನ ನಕ್ಷೆ, ಭೂಮಿ ಸಾಮರ್ಥ್ಯದ ನಕ್ಷೆ ಹಾಗೂ ಭೂಮಿ ನೀರುಣಿಸುವ ಸಾಮರ್ಥ್ಯದ ನಕ್ಷೆಗಳನ್ನು ವತಿಯಿಂದ ತಯಾರಿಸುವುದು

೫) ರಾಷ್ಟ್ರೀಯ ಭೂ ಸಂಪನ್ಮೂಲಗಳ ಸಂರಕ್ಷಣಾ ಸಪ್ತಾಹಗಳನ್ನು ಆಚರಿಸುವುದು.

 

ಕರ್ನಾಟಕ ರಾಜ್ಯ ಬೀಜ ನಿಗಮ

ಉದ್ದೇಶ: ರಾಜ್ಯ ಬೀಜ ಉದ್ದಿಮೆಯಲ್ಲಿ ಸತತವಾಗಿ ಒಳ್ಳೆಯ ಗುಣಮಟ್ಟ ಹೊಂದಿರುವ ಬೀಜಗಳನ್ನು ಸರಿಯಾದ ವೇಳೆಗೆ ದಾಸ್ತಾನು ಮಾಡಿ, ಸರಿಯಾದ ಸ್ಥಳದಲ್ಲಿ, ಯೋಗ್ಯ ದರದಲ್ಲಿ ಒದಗಿಸುವುದು. ನಿಗಮದ ದೃಷ್ಟಿಕೋನ: ಕೃಷಿ ಉತ್ಪಾದಕತೆಯನ್ನು ಮತ್ತು ಕೃಷಿಯನ್ನು ಒಂದು ಲಾಭದಾಯಕ ಉದ್ಯಮವನ್ನಾಗಿ ಮಾಡುವಲ್ಲಿ ಮುಂಚೂಣಿ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುವುದು ನಿಗಮದ ದೃಷ್ಟಿಕೋನವಾಗಿದೆ.

ನಿಗಮದ ಅತ್ಯುನ್ನತ ಸಾಧನೆಗಳು:

ರಾಷ್ಟೀಯ ಕೃಷಿ ವಿಕಾಸ ಯೋಜನೆ ಅಡಿಯಲ್ಲಿ ನಿಗಮವು ಬೀಜ ಸಂಸ್ಕರಣಾ ಸಾಮರ್ಥ್ಯವನ್ನು ಸುಮಾರು  ಎರಡು ಪಟ್ಟು ವೃದ್ಧಿಗೊಳಿಸಿ, ಐದು ಲಕ್ಷ ಕ್ವಿಂಟಾಲ್‌ಗಳಿಗೆ ಹೆಚ್ಚಿಸಿದೆ. ಅಲ್ಲದೆ. ವೈಜ್ಞಾನಿಕ ಬೀಜ ಶೇಖರಣಾ ಗೋದಾಮುಗಳನ್ನು ನಿರ್ಮಿಸಿ ಬೀಜ ಶೇಖರಣಾ ಸಾಮರ್ಥ್ಯವನ್ನು ೧.೦೩ ಲಕ್ಷದಿಂದ ಸುಮಾರು ನಾಲ್ಕು ಲಕ್ಷ ಕ್ವಿಂಟಾಲ್‌ಗಳಿಗೆ ಹೆಚ್ಚಿಸಿದೆ.

ಕರ್ನಾಟಕ ರಾಜ್ಯ ಬೀಜ ನಿಗಮದ ಇತಿಹಾಸ

ನಿಗಮವು ೧೯೭೩ರಲ್ಲಿ ಕರ್ನಾಟಕ ಆಗ್ರೋಸೀಡ್ಸ್ ಕಾರ್ಪೊರೇಷನ್ ಲಿಮಿಟೆಡ್ ಎಂಬ ಹೆಸರಿನಲ್ಲಿ ಕರ್ನಾಟಕ ಕೃಷಿ ಕೈಗಾರಿಕೆ ಸಂಸ್ಥೆಯ ಅಧೀನ ಸಂಸ್ಥೆಯಾಗಿ ಅಸ್ತಿತ್ವಕ್ಕೆ ಬಂದಿತು. ೧೯೭೯ ರಲ್ಲಿ ಕರ್ನಾಟಕ ರಾಜ್ಯ ಸರ್ಕಾರ ರಾಷ್ಟ್ರೀಯ ಬೀಜ ಯೋಜನೆ-೨ ರಲ್ಲಿ ಭಾಗವಹಿಸಿದೆ. ರಾಷ್ಟ್ರೀಯ ಬೀಜ ಯೋಜನೆ ಜಾರಿಯಾದಾಗ ಅಧೀನ ಸಂಸ್ಥೆಯಾಗಿದ್ದ ನಿಗಮವನ್ನು ಕರ್ನಾಟಕ ರಾಜ್ಯ ಬೀಜ ನಿಗಮ ಎಂಬ ಹೆಸರಿನಲ್ಲಿ ಸ್ವತಂತ್ರ ಸಂಸ್ಥೆಯಾಗಿ ಮಾಡಲಾಯಿತು.

ಇಂದು ನಿಗಮವು ಯಶಸ್ವಿಯಾಗಿ ನಡೆಯುತ್ತಿರುವ ಕರ್ನಾಟಕ ಸರ್ಕಾರದ ಕೆಲವೇ ಸಂಸ್ಥೆಗಳಲ್ಲಿ ಒಂದಾಗಿದೆ.

ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣದ ಸಂಸ್ಥೆ

(ಕರ್ನಾಟಕ ಸರ್ಕಾರದ ಒಂದು ಅಂಗ ಸಂಸ್ಥೆ)

ಹಿನ್ನಲೆ: ಕರ್ನಾಟಕ ರಾಜ್ಯ ಬೀಜ ಪ್ರಮಾಣನ ಸಂಸ್ಥೆಯನ್ನು (ಕೆ.ಎಸ್.ಎಸ್.ಸಿ.ಎ.) ನವೆಂಬರ್-೧೯೭೪ ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರದಿಂದ ಕೇಂದ್ರ ಬೀಜ ಕಾಯ್ದೆ ೧೯೬೬ ರ ಪರಿಛೇದ ೮ರ ಪ್ರಕಾರ ಸ್ಥಾಪಿಸಲ್ಪಟ್ಟಿದ್ದು, ಕರ್ನಾಟಕ ಸೊಸೈಟಿ ನೋಂದಣಿ ಕಾಯ್ದೆ ೧೯೬೦ರ ಅಡಿಯಲ್ಲಿ ನೋಂದಾಯಿಸಲ್ಪಟ್ಟಿದೆ. ಸಂಸ್ಥೆಯು ಜನವರಿ ೧೯೭೫ ನೇ ಸಾಲಿನಲ್ಲಿ ಕಾರ್ಯರೂಪಕ್ಕೆ ಬಂದಿರುತ್ತದೆ. ಕೃಷಿ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಸೇವೆಯನ್ನು ವಿಸ್ತರಿಸಿಕೊಳ್ಳಲು ಅವಕಾಶವಿರುವುದರಿಂದ ಸಂಸ್ಥೆಯಲ್ಲಿ ಸಾವಯವ ಪ್ರಮಾಣನ ವಿಭಾಗವನ್ನು ೨೦೧೩ನೇ ಸಾಲಿನಲ್ಲಿ ಸ್ಥಾಪಿಸಿ ಸಂಸ್ಥೆಯನ್ನು ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ ಎಂಬುದಾಗಿ ಮರು ನಾಮಕಾರಣ ಮಾಡಲಾಗಿದೆ. ಸಂಸ್ಥೆಯಲ್ಲಿ ಸಧ್ಯಕ್ಕೆ ಬೀಜ ಪ್ರಮಾಣನ ಸೇವೆಗಳು ಮತ್ತು ಸಾವಯವ ಪ್ರಮಾಣನ ಸೇವೆಗಳು ಲಭ್ಯವಿರುವುದರಿಂದ ಮತ್ತು ಎರಡೂ ಸೇವೆಗಳನ್ನು ಪ್ರತ್ಯೇಕವಾಗಿ ನಿರ್ವಹಿಸಬೇಕಾಗಿರುವುದರಿಂದ ಆಯಾ ಕಾರ್ಯಕ್ರಮಕ್ಕೆ ಪ್ರತ್ಯೇಕ ಗುರಿಗಳನ್ನು ನಿಗಧಿಪಡಿಸಿ ಅದರಂತೆ ಕಾರ್ಯಚಟುವಟಿಕೆ ಕೈಗೊಳ್ಳಲಾಗಿದೆ.

ಕರ್ನಾಟಕ ರಾಜ್ಯದಲ್ಲಿ ಬಿತ್ತನೆ ಬೀಜಗಳ ಪ್ರಮಾಣೀಕರಣ ಕಾರ್ಯವನ್ನು ಕೈಗೊಳ್ಳುವುದು ಮುಖ್ಯ ಉದ್ದೇಶವಾಗಿರುತ್ತದೆ. ಪ್ರಾರಂಭವಾದಾಗಿನಿಂದ ಸಂಸ್ಥೆಯು ಬೀಜ ಉತ್ಪಾದಕರಿಗೆ, ಬೀಜ ಬೆಳೆಗಾರರಿಗೆ ಮತ್ತು ಅದರಲ್ಲೂ ರೈತ ಸಮುದಾಯಕ್ಕೆ ಅತ್ಯುತ್ತಮ ಸೇವೆಯನ್ನು ಒದಗಿಸುತ್ತಾ ಬಂದಿದೆ. ಬೀಜ ಪ್ರಮಾಣನ ಚಟುವಟಿಕೆಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, ೧೯೭೫ ರಲ್ಲಿ ೬,೩೧೫ ಹೆಕ್ಟೇರ್ ವಿಸ್ತೀರ್ಣ  ಮತ್ತು ೫೬,೧೭೯ ಕ್ವಿಂಟಾಲ್ ಬಿತ್ತನೆ ಬೀಜವು ಪ್ರಮಾಣೀಕರಿಸಲ್ಪಟ್ಟಿದ್ದು, ಇದು ೨೦೧೫-೧೬ನೇ ಸಾಲಿನಲ್ಲಿ  ೫೨,೬೬೫ ಹೆಕ್ಟೇರ್ ಮತ್ತು ೨,೬೯,೫೧೩ ಕ್ವಿಂಟಾಲ್‌ಗೆ ಹೆಚ್ಚಳಗೊಂಡಿದೆ. ಈ ಗಣನೀಯ ಹೆಚ್ಚಳಕ್ಕೆ ಕೆಲವು ಅಂಶಗಳು ಸಹಕಾರಿಯಾಗಿದ್ದು, ಅದರಲ್ಲಿ ಮುಖ್ಯವಾಗಿ ರೈತ ಸಮುದಾಯದಲ್ಲಿ ಬಿತ್ತನೆ ಬೀಜದ ಉತ್ಪಾದನೆ ಬಗ್ಗೆ ಹೆಚ್ಚಿನ ತಿಳುವಳಿಕೆ ಹಾಗೂ ರೈತರಲ್ಲಿ ಪ್ರಮಾಣಿತ ಮತ್ತು ಉತ್ತಮ ಬಿತ್ತನೆ ಬೀಜದ ಬಳಕೆಯಿಂದಾಗುವ ಇಳುವರಿಯಲ್ಲಿ ಹೆಚ್ಚಿನ ಆದಾಯವನ್ನು ಅರಿತಿರುವುದರಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಕಾರ್ಯಕ್ರಮಗಳಲಿ, ಉತ್ತಮ ಗುಣಮಟ್ಟ ಪ್ರಮಾಣಿತ ಬೀಜದ ಉತ್ಪಾದನೆ ಮತ್ತು ವಿತರಣೆ ಕಾರ್ಯಕ್ರಮಕ್ಕಾಗಿ ಪ್ರೋತ್ಸಾಹ ಧನಗಳನ್ನು ಹಾಗೂ ರಿಯಾಯಿತಿಗಳನ್ನು ನೀಡುತ್ತಿರುವುದರ ಜೊತೆಗೆ ರಾಜ್ಯದ ವಿವಿಧ ರೀತಿಯ ವಾತಾವರಣ ಮತ್ತು ವಿವಿಧ ಬಗೆಯ ಮಣ್ಣುಗಳು ಇರುವುದರಿಂದ ವಿವಿಧ ಬೆಳೆಗಳು ಮತ್ತು ತಳಿಗಳನ್ನು ಬೀಜೋತ್ಪಾದನೆ ಮಾಡಲು ವಿಫುಲ ಅವಕಾಶವಿರುತ್ತದೆ.

ಗುರಿಗಳು

೧) ರೈತರು ತಮ್ಮ ಜಮೀನುಗಳಲ್ಲಿ ಎಕರೆವಾರು ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ಉತ್ತಮ ಗುಣಮಟ್ಟದ ಪ್ರಮಾಣಿತ ಬಿತ್ತನೆ ಬೀಜಗಳನ್ನು ಪ್ರಮಾಣೀಕರಿಸುವುದು, ಮತ್ತು

೨) ಸಾವಯವ ಕೃಷಿಯನ್ನು ಉತ್ತೇಜಿಸಲು ಹಾಗೂ ಸಮಾಜಕ್ಕೆ ಪ್ರಮಾಣೀಕರಿಸಿದ ಸಾವಯವ ಉತ್ಪನ್ನಗಳು ಲಭ್ಯವಾಗಲು ಪ್ರಮಾಣೀಕರಣ ಕಾರ್ಯ ಕೈಗೊಳ್ಳುವುದು.

ಉದ್ದೇಶಗಳು: ಬೀಜ ಪ್ರಮಾಣನ

೧) ಕೇಂದ್ರ ಸರ್ಕಾರದಿಂದ ಅಧಿಸೂಚನೆಯಾಗಿರುವ (ನೋಟಿಫೈಡ್) ತಳಿಗಳ ಮತ್ತು ಹೈಬ್ರಿಡ್ ಬೆಳೆಗಳ ಬೀಜಗಳನ್ನು ಪ್ರಮಾಣೀಕರಿಸುವುದು,

೨) ಕೇಂದ್ರ ಬೀಜ ಪ್ರಮಾಣನ ಮಂಡಳಿಯಿಂದ ಅನುಮೋದಿಸಲ್ಪಟ್ಟ ಬ್ರೀಡರ್ ಬೀಜ ಹಾಗೂ ಮೂಲ ಬೀಜ ಲಭ್ಯವಿರುವ ಸಂಸ್ಥೆಗಳ ಪಟ್ಟಿಯನ್ನು ನಿರ್ವಹಿಸುವುದು,

೩) ಪ್ರಮಾಣೀಕರಣಕ್ಕೆ ಅರ್ಜಿ ಸಲ್ಲಿಸುವುದು, ಬೆಳೆ ಬೆಳೆಯುವುದು, ಕಟಾವು, ಸಂಸ್ಕರಣೆ, ಸಂಗ್ರಹಣೆ, ಲೇಬಲ್ ಹಾಕುವುದು, ಇವುಗಳ ಬಗ್ಗೆ ಮಾರ್ಗಸೂಚಿ ರೂಪಿಸುವುದು ಹಾಗೂ ಬಿತ್ತನೆ ಬೀಜವು ಗುಣಮಟ್ಟದಿಂದ ಕೂಡಿದ್ದು, ತಳಿ ಶುದ್ಧವಾಗಿರುವುದಾಗಿ ಪ್ರಮಾಣೀಕರಣಕ್ಕೆ ಅನುಮೋದನೆ ನೀಡುವುದು,

೪) ಕ್ಷೇತ್ರ ಮಟ್ಟದಲ್ಲಿ ಬೆಳೆಯ ವಿವಿಧ ಹಂತಗಳಲ್ಲಿ ನಿಗಧಿ ಮಾಡಿರುವಂತೆ ಭೇಟಿ ಕೊಟ್ಟು ಕ್ಷೇತ್ರದಲ್ಲಿ ಪ್ರಮಾಣೀಕರಣದ ಅಂಶಗಳನ್ನು ಪರಿಶೀಲನೆ ಮಾಡುವುದು,

೫) ಸಂಸ್ಕರಣಾ ಘಟಕದಲ್ಲಿ ಸಂಸ್ಕರಣಾ ಕಾರ್ಯವನ್ನು ಉಸ್ತುವಾರಿ ಮಾಡಿ ಮಿಶ್ರಣ ಮತ್ತು ಇತರೇ ತಳಿಗಳು ಮೂಲ ಬೀಜದ ರಾಶಿಗೆ ಸೇರ್ಪಡೆಯಾಗದಂತೆ ಉಸ್ತುವಾರಿ ಮಾಡುವುದು,

೬) ಸಂಸ್ಕರಣೆ ಮಾಡಿದ ಬೀಜಗಳ ರಾಶಿಯಿಂದ ಮಾರ್ಗಸೂಚಿ ಪ್ರಕಾರ ಮಾದರಿಗಳನ್ನು ತೆಗೆದು ಬೀಜ ಪರೀಕ್ಷೆ ಮತ್ತು ತಳಿ ಶುದ್ಧತಾ ಪರೀಕ್ಷೆಗೆ ಒಳಪಡಿಸುವುದು,

೭) ಬೀಜ ಅಧಿನಿಯಮದಡಿಯಲ್ಲಿ ಇರುವ ನಿಯಮಾವಳಿಗನುಸಾರವಾಗಿ ಬೀಜ ಪ್ರಮಾಣದ ಪತ್ರವನ್ನು ನೀಡುವುದು (ಟ್ಯಾಗ್‌ಗಳು, ಸೀಲುಗಳು, ಇತ್ಯಾದಿ ಸೇರಿದಂತೆ),

೮) ಬೀಜ ಪ್ರಮಾಣನ ವಿವಿಧ ಹಂತಗಳಲ್ಲಿ ಬೀಜ ಪ್ರಮಾಣನ ಕಾರ್ಯವು ಶೀಘ್ರವಾಗಿ ನಿರ್ವಹಿಸಲ್ಪಡುವಂತೆ ಕ್ರಮ ವಹಿಸುವುದು, ಹಾಗೂ

೯) ಪ್ರಮಾಣಿತ ಬಿತ್ತನೆ ಬೀಜವನ್ನು ಉಪಯೋಗಿಸುವಂತೆ ರೈತರನ್ನು ಪ್ರೇರೇಪಿಸಲು ವಿವಿಧ ವಿಸ್ತರಣಾ ಮತ್ತು ತರಬೇತಿ ಕಾರ್ಯಕ್ರಮಗಳನ್ನು ಕೈಗೊಳ್ಳುವುದು ಹಾಗೂ ಪ್ರಮಾಣನ ಬಿತ್ತನೆ ಬೀಜ ಬೆಳೆಯುವ ರೈತರು ಮತ್ತು ಪ್ರಮಾಣಿತ ಬಿತ್ತನೆ ಬೀಜ ದೊರೆಯುವ ಸಂಸ್ಥೆಗಳ ಪಟ್ಟಿಯನ್ನು ಪ್ರಕಟಿಸುವುದು.

ಸಂಸ್ಥೆಯ ಆಡಳಿತ ಮಂಡಳಿ

ರಾಜ್ಯದ ರಾಜಧಾನಿಯಲ್ಲಿ ಮುಖ್ಯ ಕಛೇರಿಯನ್ನು ಹೊಂದಿರುವ ಸಂಸ್ಥೆಯು ಬೆಂಗಳೂರು, ಧಾರವಾಡ ಹಾಗೂ ರಾಯಚೂರಿನಲ್ಲಿ ವಲಯ ಕಛೇರಿಗಳು ಹಾಗೂ ಬೆಂಗಳೂರು, ಮೈಸೂರು, ದಾವಣೆಗೆರೆ, ಹಾವೇರಿ, ಧಾರವಾಡ, ಗದಗ, ಬಾಗಲಕೋಟೆ, ರಾಯಚೂರು, ಬಳ್ಳಾರಿ, ಕಲಬುರಗಿ, ವಿಜಯಪುರ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ವಿಭಾಗೀಯ ಕಛೇರಿಗಳು ಹೊಂದಿದೆ. ಸಂಸ್ಥೆಯ ಬೀಜ ಪ್ರಮಾಣನಕ್ಕೆ ಅತ್ಯಗತ್ಯವಾದ ವಿವಿಧ ಬೀಜ ಗುಣ ಲಕ್ಷಣಗಳನ್ನು ವಿಶ್ಲೇಷಿಸಲು ಬೆಂಗಳೂರು ಹೆಬ್ಬಾಳ ಮತ್ತು ಧಾರವಾಡದಲ್ಲಿ ಸುಸಜ್ಜಿತ ಬೀಜ ಪರೀಕ್ಷಾ ಪ್ರಯೋಗಾಲಯವನ್ನು ಮತ್ತು ತಳಿ ಶುದ್ಧತಾ ಪರೀಕ್ಷೆಯನ್ನು ಕೈಗೊಳ್ಳಲು ಬೆಂಗಳೂರು ಜಿಲ್ಲೆಯ ಆನೇಕಲ್ ತಾಲೂಕಿನ ಚಂದಾಪುರದ ಬಳಿಯಿರುವ ರಾಷ್ಟ್ರೀಯ ಕೃಷಿ ಪಾಠ ಶಾಲಾ ಮತ್ತು ಧಾರವಾಡದಲ್ಲಿ  ಅಭಿವೃದ್ಧಿಪಡಿಸಿದ ತಳಿ ಶುದ್ಧತಾ ಪರೀಕ್ಷಾ ಕೇಂದ್ರವನ್ನು ಹೊಂದಿದೆ.

ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ (ಕೆಪೆಕ್)

 ರಜ್ಯ ಸರ್ಕಾರವು ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ ವನ್ನು ದಿನಾಂಕ: ೨೨.೦೪.೧೯೯೬ ರಲ್ಲಿ ಕಂಪನಿ ಕಾಯ್ದೆ ೧೯೫೬ ರಡಿಯಲ್ಲಿ ಸ್ಥಾಪಿಸಿದೆ. ನಿಗಮದ ಅಧಿಕೃತ ಷೇರು ಬಂಡವಾಳ ರೂ.೫೦೦ ಲಕ್ಷಗಳು, \ಈ ಪೈಕಿ ರೂ.೫೦ ಲಕ್ಷ ಷೇರು ಬಂಡವಾಳವನ್ನು ಸರ್ಕಾರವು ಸಂಸ್ಥೆಗೆ ಬಿಡುಗಡೆ ಮಾಡಿರುತ್ತದೆ.

ನಿಗಮದ ಮುಖ್ಯ ಉದ್ದೇಶಗಳು:

೧) ಕೃಷಿ, ತೋಟಗಾರಿಕೆ ಹಾಗೂ ಪುಷ್ಪೋಧ್ಯಮ ಅಭಿವೃದ್ಧಿ, ಪದೋನ್ನತಿ, ಸಂಸ್ಕರಣೆ ಹಾಗೂ ರಫ್ತಿಗೆ ಅನುಕೂಲ ಕಲ್ಪಿಸುವುದು,

೨) ಕೃಷಿ ಹಾಗೂ ತೋಟಗಾರಿಕೆ ಉತ್ಪನ್ನಗಳ ಕೊಯ್ಲಿನ ನಂತರದ ನಿರ್ವಹಣೆಗೆ ಅವಶ್ಯವಾದ ಮೂಲಭೂತ ಸೌಕರ್ಯಗಳನ್ನು ನಿರ್ಮಾಣ ಮಾಡುವುದು ಹಾಗೂ ಖಾಸಗಿಯವರಿಗೆ ನಿರ್ಮಿಸಲು ಪ್ರೋತ್ಸಾಹಿಸುವುದು,

೩) ರೈತರು, ವಿಜ್ಞಾನಿಗಳು, ಮತ್ತು ಹಣಕಾಸು ಸಂಸ್ಥೆಯ ಅಧಿಕಾರಿಗಳನ್ನು ಒಳಗೊಂಡ ಸಭೆಗಳನ್ನು ನಡೆಸಿ  ರೈತರಿಗೆ ಅವರಲ್ಲಿ ಕೃಷಿ ಉತ್ಪನ್ನಗಳ ರಫ್ತಿನಿಂದಾಗುವ ಅನುಕೂಲಗಳ ಬಗ್ಗೆ ತಿಳಿಸುವುದು,

೪) ಸರ್ಕಾರದಿಂದ ಘೋಷಿಸಲ್ಪಡುವ ಕೊಯ್ಲಿನ ನಂತರದ ಮೂಲಭೂತ ಸೌಕರ್ಯಗಳಿಗೆ ಸಂಬಂಧಿಸಿದ

ಯೋಜನೆಗಳ ಅನುಷ್ಠಾನಕ್ಕೆ ನೋಡಲ್ ಏಜನ್ಸಿಯಾಗಿ ಕಾರ್ಯನಿರ್ವಹಣೆ, ಹಾಗೂ

೫) ರೈತರಿಗೆ, ರೈತರ ಸಂಸ್ಥೆಗಳಿಗೆ, ಭಾವಿ ಉದ್ದಿಮೆದಾರರಿಗೆ/ ರಫ್ತುದಾರರಿಗೆ ರಫ್ತು ವ್ಯಾಪಾರ ಪ್ರಾರಂಭಿಸಲು ಹಾಗೂ ಕೃಷಿ ಸಂಸ್ಕರಣೆ ಘಟಕಗಳನ್ನು ಸ್ಥಾಪಿಸಲು ಅವಶ್ಯಕವಿರುವ ಮಾರ್ಗದರ್ಶನ ನೀಡುವುದು.

ಕೆಪೆಕ್ ಸಂಸ್ಥೆಯು ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಸಂಸ್ಕರಣೆ ಹಾಗೂ ಸಂರಕ್ಷಣೆ ಸಲುವಾಗಿ ರಾಜ್ಯದ ವಿವಿಧ ಭಾಗಗಳಲ್ಲಿ ಕೊಯ್ಲಿನ ನಂತರದ ಮೂಲಭೂತ ಸೌಕರ್ಯಗಳಾದ ಪ್ಯಾಕ್‌ಹೌಸ್,ಪ್ರೀ ಕೂಲಿಂಗ್ ಘಟಕ, ಶೀತಲ ಗೃಹ, ಹಣ್ಣು ಮಾಗಿಸುವ ಘಟಕ, ಉಗ್ರಾಣಗಳು ಮುಂತಾದವುಗಳನ್ನು ಸ್ಥಾಪಿಸಲಾಗಿದೆ ಹಾಗೂ ಸುರಕ್ಷಿತ ಸಾಗಾಣಿಕೆಗೆ ರೆಫ್ರಿಜರೇಟೆಡ್ ವಾಹನ ಮುಂತಾದವುಗಳನ್ನು ಹೊಂದಲಾಗಿದೆ.

ವಿವರಗಳು

೧) ದ್ರಾಕ್ಷಿ, ದಾಳಿಂಬೆ, ಲಿಂಬೆ ಮುಂತಾದ ಕೃಷಿ/ ತೋಟಗಾರಿಕೆ ಉತ್ಪನ್ನಗಳ ಸಂಸ್ಕರಣೆ, ಸಂರಕ್ಷಣೆ ಹಾಗೂ ರಫ್ತು ಅನುಕೂಲಕ್ಕೋಸ್ಕರ ರಾಜ್ಯದ ವಿಜಯಪುರ ಮತ್ತು ಕುಷ್ಟಗಿಯಲ್ಲಿ ಸಮಗ್ರ ಶೀತಲ ಸರಪಳಿ ಘಟಕಗಳನ್ನು ಸ್ಥಾಪಿಸಲಾಗಿದೆ,

೨) ಮಾವು, ದ್ರಾಕ್ಷಿ, ದಾಳಿಂಬೆ ಹಾಗೂ ಇತರೇ ಕೃಷಿ/ತೋಟಗಾರಿಕೆ ಉತ್ಪನ್ನಗಳ ಸಂರಕ್ಷಣೆ, ಸಂಸ್ಕರಣೆ ಹಾಗೂ ರಫ್ತಿನ ಸಲುವಾಗಿ ರಾಜ್ಯದ ಹುಬ್ಬಳ್ಳಿ ಹಾಗೂ ಬಾಗಲಕೋಟೆಗಳಲ್ಲಿ ಸಮಗ್ರ ಶೀತಲ ಸರಪಳಿ ಘಟಕಗಳನ್ನು ಸ್ಥಾಪಿಸಲಾಗಿದೆ,

೩) ವಿಜಯಪುರದಲ್ಲಿ ರೈತರು ಸಂಸ್ಕರಿಸಿದ ಒಣದ್ರಾಕ್ಷಿ ಹಾಗೂ ಇತರೇ ಕೃಷಿ/ತೋಟಗಾರಿಕೆ ಉತ್ಪನ್ನಗಳ ಶೇಖರಣೆಗೆ ಸುಮಾರು ೪,೦೦೦ ಮೆ. ಟನ್ ಸಾಮರ್ಥ್ಯದ ಶೀತಲಗೃಹ ಸ್ಥಾಪಿಸಲಾಗಿದೆ,

೪) ಒಣ ಮೆಣಸಿನಕಾಯಿ, ಹೆಸರು ಹಾಗೂ ಇತರೇ ಕೃಷಿ/ ತೋಟಗಾರಿಕೆ ಉತ್ಪನ್ನಗಳ ಶೇಖರಣೆಗೆ ಗದಗ ಎ.ಪಿ.ಎಂ.ಸಿ ಆವರಣದಲ್ಲಿ ಸುಮಾರು ೧,೦೦೦ ಮೆ. ಟನ್ ಸಾಮರ್ಥ್ಯದ ಶೀತಲಗೃಹ ಸ್ಥಾಪಿಸಲಾಗಿದೆ,

೫) ಕೃಷಿ ಉತ್ಪನ್ನಗಳ ಶೇಖರಣೆಗೆ ಹುಬ್ಬಳ್ಳಿ ಎ.ಪಿ.ಎಂ.ಸಿ ಆವರಣದಲ್ಲಿ ಸುಮಾರು ೬೩೦೦ ಮೆ. ಟನ್ ಸಾಮರ್ಥ್ಯದ ಗೋದಾಮು ನಿರ್ಮಾಣ ಮಾಡಲಾಗಿದೆ ಹಾಗೂ ಇದೇ ಜಾಗದಲ್ಲಿ ಸುಮಾರು ೨೫೦೦ ಮೆ. ಟನ್ ಸಾಮರ್ಥ್ಯದ ಗೋದಾಮು ವಿಸ್ತರಣಾ ಕಾರ್ಯವು ಮುಕ್ತಾಯ ಹಂತದಲ್ಲಿದೆ,

೬) ಹುಬ್ಬಳ್ಳಿ ಸಮೀಪದ ಕಲಘಟಗಿ ತಾಲೂಕಿನ ಖಾಸಗೀ ಸಹಭಾಗಿತ್ವದಲ್ಲಿ ಮೆ|| ಟ್ರಾಪಿಕೂಲ್ ಫುಡ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಹೆಸರಿನಲ್ಲಿ ಹಣ್ಣು ಮತ್ತು ತರಕಾರಿ ಸಂಸ್ಕರಣಾ ಘಟಕವನ್ನು ಪ್ರಾರಂಭಿಸಿದ್ದು, ಘಟಕವು ರೈತರಿಂದ ನೇರವಾಗಿ ಉತ್ಪನ್ನಗಳನ್ನು ಖರೀದಿಸುತ್ತಿದ್ದು, ಇದರಿಂದ ಒಪ್ಪಂದ ಕೃಷಿ ಅಭಿವೃದ್ಧಿಗೆ ಸಹಾಯಕಾರಿಯಾಗಿದೆ. ಈ ಘಟಕದಲ್ಲಿ ಸಂಸ್ಥೆಯಿಂದ ರೂ.೧೬೯ ಲಕ್ಷಗಳ ಷೇರು ಬಂಡವಾಳ ಹೂಡಲಾಗಿದೆ,

೭) ದ್ರಾಕ್ಷಿ, ದಾಳಿಂಬೆ, ಲಿಂಬೆ ಹಾಗೂ ಇತರೇ ತೋಟಗಾರಿಕೆ ಉತ್ಪನ್ನಗಳ ಸಂಸ್ಕರಣೆ ಹಾಗೂ ಸಂರಕ್ಷಣೆಗೆ ಮತ್ತು ರಫ್ತಿನ ಅನುಕೂಲಕ್ಕೋಸ್ಕರ ಬೀದರ್ ಜಿಲ್ಲೆಯ ಹುಮಾನಾಬಾದ್‌ನಲ್ಲಿ ಸಮಗ್ರ ಶೀತಲ ಸರಪಳಿ ಘಟಕ ಸ್ಥಾಪನೆಯ ಕಾರ್ಯ ಮುಕ್ತಾಯ ಹಂತದಲ್ಲಿದೆ,

೮) ಅಪೇಡಾ ಸಹಾಯಧನದಿಂದ ಮೆ|| ದಿ ರಾಯ್‌ಬಾಗ್ ತಾಲೂಕಾ ದ್ರಾಕ್ಷಿ ಬೆಳೆಗಾರರ ಸಂಸ್ಕರಣೆದಾರರ ಹಾಗೂ ರಫ್ತುದಾರರ ಕೋ- ಆಪರೇಟಿವ್ ಸೊಸೈಟಿ ನಿಯಮಿತ, ಕುಡಚಿ ಇವರಿಗೆ ಬೆಳಗಾವಿ ಜಿಲ್ಲೆಯ ಕುಡಚಿಯಲ್ಲಿ ಸಮಗ್ರ ಶೀತಲ ಸರಪಳಿ ಘಟಕ ನಿರ್ಮಾಣ ಮಾಡಲಾಗುತ್ತಿದೆ. ಈ ಯೋಜನೆಯಲ್ಲಿ ಕೆಪೆಕ್ ಸಂಸ್ಥೆಯು ಯಾವುದೇ ಹಣಕಾಸು ತೊಡಗಿಸಿರುವುದಿಲ್ಲ, ಹಾಗೂ

೯) ಕೆಪೆಕ್ ಸಂಸ್ಥೆಯು ಕರ್ನಾಟಕ ಕೃಷಿ ವಾಣಿಜ್ಯ ಹಾಗೂ ಆಹಾರ ಸಂಸ್ಕರಣಾ ನೀತಿ-೨೦೧೫ ನ್ನು ಸಿದ್ಧಪಡಿಸುವಲ್ಲಿ ತೊಡಗಿಸಿಕೊಂಡಿದೆ ಹಾಗೂ ರಾಜ್ಯದ ಕೃಷಿ ವಾಣಿಜ್ಯ ಮತ್ತು ಆಹಾರ ಸಂಸ್ಕರಣೆ ವಲಯಗಳಲ್ಲಿರುವ ವಿಪುಲವಾದ ಅವಕಾಶಗಳನ್ನು ಇನ್ವೆಸ್ಟ್ ಕರ್ನಾಟಕ -೨೦೧೬ ರಲ್ಲಿ ಬಿಂಬಿಸಲಾಗಿದೆ.

ಮುಂದುವರೆದು, ರಾಜ್ಯದ ರೈತರ ಅನುಕೂಲಕ್ಕೋಸ್ಕರ ಕೆಪೆಕ್ ಸಂಸ್ಥೆಯು ರಾಜ್ಯದ ವಿವಿಧ ಭಾಗಗಳಲ್ಲಿ ಅವಶ್ಯಕತೆಗೆ ಹಾಗೂ ಆದ್ಯತೆಗೆ ಅನುಗುಣವಾಗಿ ಕೊಯ್ಲಿನ ನಂತರದ ಮೂಲಭೂತ ಸೌಕರ್ಯಗಳನ್ನು ಹಂತ ಹಂತವಾಗಿ ಸ್ಥಾಪಿಸುವ ಉದ್ದೇಶ ಹೊಂದಿದೆ. ಈ ಉದ್ದೇಶಕ್ಕಾಗಿ ಸಂಸ್ಥೆಯು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ, ಅಪೇಡಾ, ರಾಷ್ಟ್ರೀಯ ತೋಟಗಾರಿಕೆ ಮಿಷನ್ ಹಾಗೂ ರಾಜ್ಯ ಸರ್ಕಾರದಿಂದ ಹಣಕಾಸಿನ ನೆರವನ್ನು ಪಡೆಯುತ್ತಿದೆ.

ಕರ್ನಾಟಕ ತೊಗರಿ ಅಭಿವೃದ್ಧಿ ಮಂಡಳಿ ನಿಯಮಿತ, ಕಲುಬರಗಿ ಸ್ಥಾಪನೆ

ಕರ್ನಾಟಕ ತೊಗರಿ ಅಭಿವೃದ್ಧಿ ಮಂಡಳಿಯು ಸರ್ಕಾರದ ಆದೇಶ ಅನ್ವಯ ಅಸ್ತಿತ್ವಕ್ಕೆ ಬಂದಿರುತ್ತದೆ. ಉದ್ದೇಶಗಳು

೧) ವಿವಿಧ ತಳಿಯ ತೊಗರಿ ಬೆಳೆಯಲು, ಖರೀದಿಸಲು, ಸಂಗ್ರಹಣೆ ಮತ್ತು ಮಾರಾಟ ಮಾಡುವ ಮೂಲ ಉದ್ದೇಶ ಹೊಂದಿದ ಮಂಡಳಿಯು ಸಂಘಟನೆ ಮತ್ತು ಧನ ಸಹಾಯ ಇತ್ಯಾದಿಗಳ ಕುರಿತು ಸೂಕ್ತ ಕ್ರಮ ಕೈಗೊಳ್ಳುವುದು,

೨) ತೊಗರಿ ಹಾಗೂ ಇತರೆ ಬೇಳೆ ಕಾಳುಗಳು ಮತ್ತು ಅವುಗಳ ಉತ್ಪನ್ನಗಳನ್ನು ಹೆಚ್ಚಿಸುವುದಲ್ಲದೆ ಅಭಿವೃದ್ಧಿಪಡಿಸುವುದು, ಸಹಾಯ ಮಾಡುವುದು, ಸಂರಕ್ಷಿಸುವುದು ಮತ್ತು ಮಾರಾಟವನ್ನು ಉತ್ತೇಜಿಸುವುದು,

೩) ಕೃಷಿ ವಿಶ್ವವಿದ್ಯಾಲಯಗಳಿಂದ, ನಡೆಯುವ ಸಂಶೋಧನಾ ಕಾರ್ಯಗಳಿಗೆ ಪ್ರೋತ್ಸಾಹಿಸುವುದು ಮತ್ತು ಲಭ್ಯವಿರುವ ತಂತ್ರಜ್ಞಾನ ಸೇವೆಯನ್ನು ಉಪಯೋಗಿಸಿಕೊಳ್ಳುವವರಿಗೆ ದೊರಕಿಸಿ ಕೊಡುವುದು,

೪) ತೊಗರಿ ಹಾಗೂ ಇತರೆ ಬೇಳೆಕಾಳುಗಳ ಉತ್ಪನ್ನ ಹೆಚ್ಚಿಸುವುದಕ್ಕಾಗಿ, ರೂಪಾಂತರಿಸುವುದಕ್ಕಾಗಿ, ತಂತ್ರಜ್ಞಾನವನ್ನು ಗುರುತಿಸಿ ಅದನ್ನು ರೈತರಿಗೆ, ರೈತರ ಸಹಕಾರ ಸಂಘಗಳಿಗೆ, ವ್ಯಾಪಾರಿಗಳಿಗೆ ಮತ್ತು ಸಂಸ್ಕರಣಾ ಘಟಕಗಳಿಗೆ ಸಿಗುವಂತೆ ಮಾಡುವುದು,

೫) ತೊಗರಿ ಹಾಗೂ ಇತರೆ ಬೇಳೆಕಾಳುಗಳ ಉಪಯುಕ್ತತೆಯ ಸಂರಕ್ಷತೆಗಾಗಿ ಕರ್ನಾಟಕ ಸರ್ಕಾರದ ಪರವಾಗಿ ಕಾರ್ಯ ನಿರ್ವಹಿಸುವುದು, ಹಾಗೂ

೬) ವಿಶ್ವವಿದ್ಯಾಲಯಗಳಿಂದ, ರಾಷ್ಟ್ರೀಯ ಸಂಶೋಧನಾ ಕೇಂದ್ರಗಳಿಂದ, ಕಂಪನಿಗಳಿಂದ ಮತ್ತು ದೇಶದ ಹೊರಗೂ ನಡೆಯುವ ಸಂಶೋಧನಾ ಕಾರ್ಯಗಳಿಗೆ ಪ್ರೋತ್ಸಾಹಿಸುವುದು ಮತ್ತು ಲಭ್ಯವಿರುವ ತಂತ್ರಜ್ಞಾನ ಸೇವೆಯನ್ನು ಉಪಯೋಗಿಸಿಕೊಳ್ಳವವರಿಗೆ ದೊರಕಿಸಿ ಕೊಡುವುದು.

ಚಟುವಟಿಕೆಗಳು:

೧) ತರಬೇತಿ ಕಾರ್ಯಕ್ರಮಗಳನ್ನು ಜರುಗಿಸುವುದು,

೨) ಸಂಶೋಧನೆಗಳನ್ವಯ ತಾಂತ್ರಿಕತೆಯನ್ನು ರೈತರಿಗೆ ತಿಳಿಯಪಡಿಸುವುದು,

೩) ಬೀಜೋತ್ಪಾದನಾ ಕಾರ್ಯಕ್ರಮಗಳಿಗೆ ಸಹಕರಿಸುವುದು,

೪) ಬೆಂಬಲ ಬೆಲೆ ಯೋಜನೆಯಡಿ ಮಾರುಕಟ್ಟೆ ಮಧ್ಯಪ್ರವೇಶ ಕಾರ್ಯಕ್ರಮದಡಿ ತೊಗರಿಯನ್ನು ರೈತರಿಂದ ನೇರವಾಗಿ ಖರೀದಿಸುವುದು.

ದಿ ಮೈಸೂರು ಟೊಬ್ಯಾಕೊ ಕಂಪನಿ

ಸಂಕ್ಷಿಪ್ತ ವರದಿ: ಮೈಸೂರು ಟೊಬ್ಯಾಕೊ ಕಂಪನಿಯು ಸರ್ಕಾರದ ಒಂದು ಉದ್ಯಮವಾಗಿದ್ದು, ಕೃಷಿ ಮಂತ್ರಾಲಯದ ಅಧೀನದಲ್ಲಿ ಬರುತ್ತದೆ. ಇದು ೧೯೩೭ ರಲ್ಲಿ ಪ್ರಾರಂಭವಾಯಿತು. ೧೯೮೦ ರಲ್ಲಿ ಕೇಂದ್ರ  ಸರ್ಕಾರದ ವತಿಯಿಂದ ತಂಬಾಕು ಮಂಡಳಿಯು ಸ್ಥಾಪನೆಯಾಯಿತು ಮತ್ತು ಕರ್ನಾಟಕದಲ್ಲಿ ಅದರ ಕಾರ್ಯಗಳು ೧೯೮೩ ರಲ್ಲಿ ಪ್ರಾರಂಭ ಮಾಡಲಾಯಿತು.  ಕಂಪನಿಯ ಎಲ್ಲಾ ಚಟುವಟಿಕೆಗಳು ತಂಬಾಕು ಮಂಡಳಿಗೆ ವರ್ಗಾವಣೆ ಆಗಿರುತ್ತದೆ. ಆದುದರಿಂದ ಕಂಪನಿಯು ನಷ್ಟ ಅನುಭವಿಸಿತು. ಸರ್ಕಾರದ ಆದೇಶದ ಪ್ರಕಾರ ೧೯೮೪ ರಲ್ಲಿ ಕಂಪನಿಯ ವ್ಯವಹಾರಗಳನ್ನು ನಿಲ್ಲಿಸಲಾಯಿತು. ಈ ಕಂಪನಿಯಲ್ಲಿ ಸರ್ಕಾರದ ಬಂಡವಾಳ ೭೮.೨೧% ಕೆ.ಎ.ಐ.ಸಿ ೧೪.೨೮% ಹಾಗೂ ಖಾಸಗಿ ಶೇರು ೭.೫೧% ವೈಟ್‌ಫೀಲ್ಡ್‌ನಲ್ಲಿ ಸಂಸ್ಥೆಯು ಗೋದಾಮುಗಳನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಉಗ್ರಾಣ ನಿಗಮಗಳಿಗೆ ಬಾಡಿಗೆಗೆ ಕೊಡಲಾಗಿದೆ ಮತ್ತು ಕೇಂದ್ರ ಕಛೇರಿಯ ಒಂದು ಭಾಗವನ್ನು ಕೆಪೆಕ್‌ಗೆ ಬಾಡಿಗೆಗೆ ಕೊಡಲಾಗಿದೆ.

ಸರ್ಕಾರದ ಕಾರ್ಯದರ್ಶಿರವರು, ಕೃಷಿ ಇಲಾಖೆಯ ಕಂಪನಿಯ ಅಧ್ಯಕ್ಷರಾಗಿರುತ್ತಾರೆ. ಸರ್ಕಾರವು ಖಾಸಗಿ ಶೇರುದಾರರು ಹೊಂದಿರುವ ಶೇರುಗಳನ್ನು ರೂ.೧.೪೭೯ ರಂತೆ ಪ್ರತಿ ಶೇರಿಗೆ ಖರೀದಿಸಿ ಕಂಪನಿಯನ್ನು ಸಂಪೂರ್ಣ ಸರ್ಕಾರಿ ಸಂಸ್ಥೆಯನ್ನಾಗಿಸಿ ಮತ್ತು ಸಾರ್ವಜನಿಕ ಹಿತಾಸಕ್ತಿಯಿಂದ ಕಂಪನಿಯು ಬೆಂಗಳೂರಿನ ರಿಚ್‌ಮಂಡ್ ರಸ್ತೆ ಮತ್ತು ವೈಟ್‌ಫೀಲ್ಡ್‌ನಲ್ಲಿ ಹೊಂದಿರುವ ಆಸ್ತಿಗಳನ್ನು ಉಪಯೋಗಿಸಿಕೊಳ್ಳುವುದು. ಸರ್ಕಾರದ ಆದೇಶ ಸಂಖ್ಯೆ:ಕೃಇ ೧೪೬ ವುಇ ೨೦೧೪ ದಿನಾಂಕ ೧೬.೦೧.೨೦೧೫ ರಂತೆ ಕಂಪನಿಯ ಕೇಂದ್ರ ಕಛೇರಿ ಹಾಗೂ ಕಾಡುಗೋಡಿಯಲ್ಲಿರುವ ಆಸ್ತಿಯನ್ನು ಕೆಪೆಕ್ ಖರೀದಿಸಲು ಸರ್ಕಾರದ ಪರವಾಗಿ ಕೆಪೆಕ್ ಸಂಸ್ಥೆಯನ್ನು ನೇಮಿಸಲಾಗಿದೆ. ಇದುವರೆವಿಗೂ ರೂ.೨,೯೮,೨೨೦ ಮೊತ್ತದ ೨೦,೧೮೦ ಖಾಸಗಿ ಷೇರುಗಳನ್ನು ಕೊಂಡುಕೊಳ್ಳಲಾಗಿದೆ.

 

ಆಹಾರ ಕರ್ನಾಟಕ ನಿಯಮಿತ

ಭಾರತ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಹಣಕಾಸನ್ನು ಉಪಯೋಗಿಸಿ ರಾಜ್ಯದಲ್ಲಿ ಆಹಾರಪಾರ್ಕ್‌ಗಳ ಸ್ಥಾಪನೆಗೆ ಅನುಕೂಲವಾಗಿ ’ಆಹಾರ ಕರ್ನಾಟಕ ನಿಯಮಿತ’ ಎಂಬ ಸಂಸ್ಥೆಯನ್ನು ದಿನಾಂಕ: ೨೯.೦೪.೨೦೦೩ ರಂದು ವಿಶೇಷ ಉದ್ದೇಶ ಸಂಸ್ಥೆಯಾಗಿ ಕಂಪನಿ ಕಾಯ್ದೆ ೧೯೫೬ರ ಅಡಿಯಲ್ಲಿ ಸ್ಥಾಪಿಸಲಾಗಿದೆ. ಆಹಾರ ಕರ್ನಾಟಕ ನಿಯಮಿತವು ಹಾಲೀ ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ (ಕೆಪೆಕ್)ದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಆಹಾರ ಕರ್ನಾಟಕ ನಿಯಮಿತವು ರಾಜ್ಯದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಉದ್ದಿಮೆದಾರರು ಹೊಸದಾಗಿ ಸ್ಥಾಪಿಸುವ ಆಹಾರ ಸಂಸ್ಕರಣಾ ಘಟಕಗಳಿಗೆ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿ ಹಣಕಾಸು ಸಹಾಯಧನವನ್ನು ನೀಡುವ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ.

ರಾಜ್ಯದಲ್ಲಿರುವ ಆಹಾರ ಪಾರ್ಕ್‌ಗಳ ಪ್ರಸ್ತುತ ಪ್ರಗತಿ ಈ ಕೆಳಕಂಡಂತಿದೆ.

ಇನ್ನೋವಾ ಅಗ್ರಿ ಬಯೋ-ಪಾರ್ಕ್ ನಿಯಮಿತ ಮಾಲೂರು: ೮೭ ಎಕರೆ ಭೂ ಪ್ರದೇಶದಲ್ಲಿ ಆಹಾರ ಪಾರ್ಕನ್ನು ಕೋಲಾರ ಜಿಲ್ಲೆಯ, ಮಾಲೂರು ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪಿಸಲಾಗಿದೆ. ರಸ್ತೆ ಮತ್ತು ಚರಂಡಿ ಕಾರ್ಯ ಮುಗಿದಿದೆ, ಸಾಮಾನ್ಯ ಮೂಲಭೂತ ಸೌಕರ್ಯಗಳಾದ ಶೀತಲ ಗೃಹ, ಉಗ್ರಾಣಗಳ ನಿರ್ಮಾಣ ಮುಂತಾದವುಗಳು ಪೂರ್ತಿಯಾಗಿವೆ. ಪಾರ್ಕ್‌ನಲ್ಲಿ ವಿಂಗಡಿಸುವ, ಧಾನ್ಯ ಸಂಸ್ಕರಿಸುವ, ಪ್ಯಾಕೇಜಿಂಗ್ ಮತ್ತು ಗಾಮಾ ಇರಾಡಿಯೋಷನ್‌ ಸೌಲಭ್ಯವನ್ನೂ ಅಳವಡಿಸಿದೆ.

ಹಣ್ಣು ಮತ್ತು ತರಕಾರಿಗಳನ್ನು ಬೆಳೆಯುವ ಪ್ರದೇಶದಿಂದ ಮಾರುಕಟ್ಟೆಗೆ ಸಂಸ್ಕರಿಸಿದ ಉತ್ಪನ್ನವನ್ನು ಸಾಗಿಸಲು ರೆಫ್ರಿಜರೆಟಡ್ ವ್ಯಾನ್ ಮತ್ತು ಲಘುವಾಹನಗಳನ್ನು ಪೂರೈಸಲಾಗಿದೆ. ಭಾರತ ಸರ್ಕಾರದ ಆಹಾರ ಸಂಸ್ಕರಣಾ ಮಂತ್ರಾಲಯದ ಮಾರ್ಗಸೂಚಿ ಪ್ರಕಾರ ಕನಿಷ್ಠ ೨೦ ಆಹಾರ ಸಂಸ್ಕರಣಾ ಘಟಕಗಳನ್ನು ಆಹಾರ ಪಾರ್ಕ್‌ನಲ್ಲಿ ಸ್ಥಾಪಿಸಬೇಕು. ಆದಾಗ್ಯೂ ಇದುವರೆಗೆ ಪಾರ್ಕ್‌ನಲ್ಲಿ ಒಟ್ಟು ಮೂರು ಆಹಾರ ಸಂಸ್ಕರಣಾ ಘಟಕಗಳು ಸ್ಥಾಪನೆಗೊಂಡಿವೆ.

ಉಳಿದ ಸಂಸ್ಕರಣಾ ಘಟಕಗಳ ಸ್ಥಾಪನೆಗಾಗಿ ಆಹಾರ ಕರ್ನಾಟಕವು ಡೆವಲಪಪರ್ಸ್‌ರೊಡನೆ ಸತತ ಸಂಪರ್ಕದಲ್ಲಿದ್ದು ಬಾಕಿ ಆಹಾರ ಸಂಸ್ಕರಣಾ ಘಟಕಗಳು ಸ್ಥಾಪನೆಗೆ ಕ್ರಮ ಕೈಗೊಳ್ಳಲು ಸೂಚಿಸಿದೆ. ಸದರೀ ಪಾರ್ಕನ ಪ್ಯಾಕ್ ಹೌಸ್ ಸೌಲಭ್ಯವು ಕೇಂದ್ರ ಸರ್ಕಾರದ ಅಪೇಡಾ ಸಂಸ್ಥೆಯಿಂದ ಅನುಮೋದಿತವಾಗಿದೆ. ಇದರಿಂದ ಅಮೇರಿಕ ಮತ್ತು ಯುರೋಪ್ ದೇಶಗಳಿಗೆ ತೋಟಗಾರಿಕಾ ಉತ್ಪನ್ನಗಳನ್ನು ರಫ್ತು ಮಾಡಲು ಅನುಕೂಲವಾಗಿದೆ.

ಮೆ: ಗ್ರೀನ್‌ಪುಡ್ ಪಾರ್ಕ್, ಬಾಗಲಕೋಟೆ: ೧೦೦ ಎಕರೆ ಪ್ರದೇಶದಲ್ಲಿ ಆಹಾರ ಪಾರ್ಕನ್ನು ಬಾಗಲಕೋಟೆಯ ಜಿಲ್ಲೆಯ, ನವನಗರ ಕೈಗಾರಿಕ ಪ್ರದೇಶದಲ್ಲಿ ಸ್ಥಾಪಿಸಲಾಗುತ್ತಿದೆ. ರಸ್ತೆ ಮತ್ತು ಚರಂಡಿ ಕಾರ್ಯ ಮುಗಿದಿವೆ. ಸಾಮಾನ್ಯ ಸೌಕರ್ಯಗಳಾದ ಶೀತಲ ಗೃಹ ಮತ್ತು ಧಾನ್ಯಗಳು/ತರಕಾರಿಗಳು/ಹಣ್ಣುಗಳನ್ನು ವಿಂಗಡಿಸುವ ಮತ್ತು ಪ್ಯಾಕೇಜಿಂಗ್ ಯಂತ್ರೋಪಕರಣಗಳ ಅಳವಡಿಸುವ ಕಾರ್ಯ ಮುಗಿದಿದೆ. ತೂಕ ಸೇತುವೆ ಕಾರ್ಯವು ಮುಗಿದಿರುತ್ತದೆ. ಮಾರ್ಗಸೂಚಿಗಳಂತೆ ಪಾರ್ಕ್‌ನಲ್ಲಿ ಕನಿಷ್ಠ ೨೦ ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಬೇಕು. ಆದಾಗ್ಯೂ ಇದುವರೆಗೆ ಪಾರ್ಕ್‌ನಲ್ಲಿ ಒಟ್ಟು ಆರು ಆಹಾರ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.

ಅಕ್ಷಯ ಆಹಾರ ಪಾರ್ಕ್ ನಿಯಮಿತ, ಹಿರಿಯೂರು: ಕಂಪನಿಯು ಚಿತ್ರದುರ್ಗ ಜಿಲ್ಲೆಯ, ಹಿರಿಯೂರು ತಾಲೂಕಿನ ಹುಚ್ಚವನಹಳ್ಳಿಯಲ್ಲಿ ಸುಮಾರು ೧೦೬ ಎಕರೆ ಪ್ರದೇಶದಲ್ಲಿ ಆಹಾರ ಪಾರ್ಕ್‌ನ್ನು ಸ್ಥಾಪಿಸಿದೆ. ರಸ್ತೆಗಳು ಮತ್ತು ಚರಂಡಿ ನಿರ್ಮಿಸುವ ಕಾರ್ಯ ಪೂರ್ಣಗೊಂಡಿದೆ. ಸಾಮಾನ್ಯ ಸೌಕರ್ಯಗಳಾದ ಶೀತಲ ಗೃಹ, ಗೋದಾಮು ಹಣ್ಣು ತರಕಾರಿ ಆಹಾರಧಾನ್ಯ, ಎಣ್ಣೆ ಕಾಳುಗಳು ಹಾಗೂ ಮಸಾಲಾ ಪದಾರ್ಥಗಳ ಸಂಸ್ಕರಣಾ ಘಟಕಗಳನ್ನು ಆಹಾರ ಪಾರ್ಕ್‌ಗಳಲ್ಲಿ ಸ್ಥಾಪಿಸಬೇಕು. ಆದಾಗ್ಯೂ ಇದುವರೆಗೆ ಕಂಪನಿಯಲ್ಲಿ ಒಟ್ಟು ಎರಡು ಆಹಾರ ಸಂಸ್ಕರಣಾ ಘಟಕಗಳ ಸ್ಥಾಪನೆಯಾಗಿರುತ್ತದೆ. ಉಳಿದಂತೆ ಘಟಕಗಳು ಸ್ಥಾಪನೆಯಾಗಬೇಕಿದೆ.

ಜೇವರ್ಗಿ ಪುಡ್ ಪಾರ್ಕ್ ನಿಯಮಿತ, ಜೇವರ್ಗಿ: ಸದರೀ ಪಾರ್ಕನ್ನು, ಜೇವರ್ಗಿಯ ೧೦೫ ಎಕರೆ ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪಿಸಲಾಗುತ್ತಿದೆ. ರಸ್ತೆ ಮತ್ತು ಚರಂಡಿಗಳನ್ನು ನಿರ್ಮಿಸಿದ್ದು, ಭದ್ರತಾ ವಿಭಾಗ, ತೂಕ ಸೇತುವೆ ಕೊಠಡಿಯ ಸಿವಿಲ್ ಕಾಮಗಾರಿಗಳೂ ಸಹ ಪೂರ್ಣಗೊಂಡಿವೆ. ಉಳಿದಂತೆ ಶೀತಲ ಗೃಹ, ಗೋದಾಮು, ಪ್ಯಾಕ್ ಹೌಸ್, ಆಡಳಿತ ವಿಭಾಗದ ಕಾಮಗಾರಿಗಳು ಪ್ರಗತಿಯಲ್ಲಿದೆ. ಮಾರ್ಗಸೂಚಿ ಪ್ರಕಾರ  ಕನಿಷ್ಠ ೨೦ ಆಹಾರ ಸಂಸ್ಕರಣಾ ಘಟಕಗಳನ್ನು ಆಹಾರ ಪಾರ್ಕ್‌ನಲ್ಲಿ ಸ್ಥಾಪಿಸಬೇಕು. ಆದಾಗ್ಯೂ ಇದುವರೆಗೆ ಯಾವುದೇ ಘಟಕ ಸ್ಥಾಪನೆಯಾಗಿಲ್ಲ ಆಸಕ್ತಿಯುಳ್ಳ ಉದ್ದಿಮೆದಾರರಿಗೆ ಭೂ ಹಂಚಿಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ.

ರಾಜ್ಯದ ಯೋಜನೆಯಡಿಯಲ್ಲಿ ಆಹಾರ ಪಾರ್ಕುಗಳು

ರಾಜ್ಯ ಸರ್ಕಾರವು ೨೦೦೮-೦೯ನೇ ಸಾಲಿನ ಆಯವ್ಯಯದಲ್ಲಿ ಬೆಂಗಳೂರು ಗ್ರಾಮಾಂತರ, ತುಮಕೂರು, ಶಿವಮೊಗ್ಗ. ದಾವಣಗೆರೆ, ವಿಜಯಪುರ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಆಹಾರ ಪಾರ್ಕ್‌ಗಳ ಸ್ಥಾಪನೆಗೆ ಪ್ರಸ್ತಾಪಿಸಲಾಗಿದೆ.

ಶಿವಮೊಗ್ಗ ಆಹಾರ ಪಾರ್ಕ್:

ಸದರೀ ಪಾರ್ಕ್‌ಗೆ ಶಿವಮೊಗ್ಗ ಜಿಲ್ಲೆಯ ನಿಧಿಗೆ ಹೋಬಳಿಯ ಕೈಗಾರಿಕಾ ಪ್ರದೇಶದಲ್ಲಿ ಸುಮಾರು ೧೦೦  ಎಕರೆ ಪ್ರದೇಶವನ್ನು ಆಹಾರ ಕರ್ನಾಟಕ ನಿಯಮಿತವು ಖರೀದಿಸಿದೆ. ಮೆ|| ಎಲ್. ಎಂ.ಜೆ ಇಂಟರ್‌ನ್ಯಾಷನಲ್ ಎಂಬ ಕಂಪನಿಯನ್ನು ಪಾರದರ್ಶಕ ನಿಯಮದಡಿ ಪ್ರವರ್ತಕರನ್ನಾಗಿ ಆಯ್ಕೆಮಾಡಲಾಗಿದೆ. ರಾಜ್ಯದಲ್ಲಿ ಸ್ಥಾಪಿಸುತ್ತಿರುವ ಇತರೇ ಆಹಾರ ಪಾರ್ಕ್‌ಗಳ ಮಂದಗತಿಯ ಪ್ರಗತಿಯನ್ನು ಅವಲೋಕಿಸಿ  ಶಿವವೊಗ್ಗ ಆಹಾರ ಪಾರ್ಕ್‌ನ ಪ್ರವರ್ತಕರಿಗೆ ಭೂಮಿ ಹಸ್ತಾಂತರಿಸುವ ಪ್ರಕ್ರಿಯೆಯನ್ನು ಪರಿಶೀಲಿಸಲಾಗುತ್ತಿದೆ.

ವಿಜಯಪುರ ಆಹಾರ ಪಾರ್ಕ್:

ಬಿಜಾಪುರ ಜಿಲ್ಲೆಯ ಇಟ್ಟಂಗಿಹಾಳದಲ್ಲಿ ೭೫ ಎಕರೆ ಜಮೀನನ್ನು ಖರೀದಿಸಲಾಗಿದೆ. ಸದರೀ ಜಮಿನಿನಲ್ಲಿ  ಆಹಾರ ಪಾರ್ಕಿನ ಸ್ಥಾಪನೆಯನ್ನು ಶಿವಮೊಗ್ಗ ಆಹಾರ ಪಾರ್ಕ್‌ನ ಅಭಿವೃದ್ಧಿಯ ನಂತರ ಕೈಗೆತ್ತಿಕೊಳ್ಳಲು ಯೋಜಿಸಲಾಗಿದೆ.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯ

ಬೋಧನೆ: ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ಜಿ.ಕೆ.ವಿ.ಕೆ. ಬೆಂಗಳೂರು, ಚಿಂತಾಮಣಿ, ಹಾಸನ ಹಾಗೂ ಮಂಡ್ಯಗಳಲ್ಲಿ ಬೋಧನಾ ಆವರಣಗಳನ್ನು ಹೊಂದಿದೆ. ಆರು ವಿಷಯಗಳಲ್ಲಿ ಸ್ನಾತಕ ಪದವಿಗಳನ್ನು, ೨೧ ವಿಷಯಗಳಲ್ಲಿ ಸ್ನಾತಕೋತ್ತರ ಪದವಿಗಳನ್ನು, ೧೪ ವಿಷಯಗಳಲ್ಲಿ ಡಾಕ್ಟ್ರೋಲ್ ಹಾಗೂ ಆಯ್ದ ವಿಷಯಗಳಲ್ಲಿ ಪೋಸ್ಟ್ ಡಾಕ್ಟ್ರೋಲ್ ಶಿಕ್ಷಣ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ವಿಶ್ವವಿದ್ಯಾಲಯವು ಎರಡು ವರ್ಷ ಅವಧಿಯ ಕೃಷಿಯಲ್ಲಿ ಡಿಪ್ಲೋಮಾ ಶಿಕ್ಷಣವನ್ನು ನಡೆಸಲಾಗುತ್ತಿದ್ದು, ದೂರಶಿಕ್ಷಣ ಪದ್ಧತಿಯಲ್ಲಿ ಒಂದು ವರ್ಷ ಅವಧಿಯ ಕೃಷಿ ಡಿಪ್ಲೊಮಾ ಮತ್ತು ಕೃಷಿ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್‌ಗಳನ್ನು ಸಹ ನಡೆಸುತ್ತದೆ. ರಾಜ್ಯದ ಎಲ್ಲಾ  ಕೃಷಿ ವಿಶ್ವವಿದ್ಯಾನಿಲಯಗಳ  ವಿದ್ಯಾರ್ಥಿಗಳು, ವಿವಿಧ ಸ್ನಾತಕ ಶೈಕ್ಷಣಿಕ ಕಾರ್ಯಕ್ರಮಗಳಿಗೆ ವಿದ್ಯಾರ್ಥಿಗಳ ಪ್ರವೇಶಾತಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವತಿಯಿಂದ ಸಾಮಾನ್ಯ ಪ್ರವೇಶ ಪರೀಕ್ಷೆಯ ಮೂಲಕವೇ ನೀಡಲಾಗುತ್ತದೆ. ಅದೇ ರೀತಿ ಸ್ನಾತಕೋತ್ತರ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಪ್ರವೇಶ ಪರೀಕ್ಷೆ ಮೂಲಕ ಪ್ರವೇಶ ನೀಡಲಾಗುತ್ತದೆ.

ಸಂಶೋಧನೆ: ವಿಶ್ವವಿದ್ಯಾಲಯವು ರಾಜ್ಯದ ಕೃಷಿ ಸಂಶೋಧನಾ ಅವಶ್ಯಕತೆಗಳನ್ನು ಹತ್ತು ದಕ್ಷಿಣ ಜಿಲ್ಲೆಗಳ ನಾಲ್ಕು ಕೃಷಿ ಹವಾಮಾನ ವಲಯಗಳಲ್ಲಿನ ಹದಿಮೂರು ವಿವಿಧ ಕೃಷಿ ಸಂಶೋಧನಾ ಕೇಂದ್ರಗಳ ಮೂಲಕ ಪೂರೈಸುತ್ತಿದೆ.

ವಿಸ್ತರಣೆ: ವಿಸ್ತರಣೆ ನಿರ್ದೇಶನಾಲಯವು ರಾಜ್ಯ ಸರ್ಕಾರದ ವಿವಿಧ ಅಭಿವೃದ್ಧಿ ಇಲಾಖೆಗಳ ಪ್ರಯತ್ನಗಳಿಗೆ ಪೂರಕವಾಗಿ ಹಾಗೂ ಬೆಂಬಲವಾಗಿ ವಿಸ್ತರಣಾ ಚಟುವಟಿಕಗಳನ್ನು ಆಯೋಜಿಸಿ ತನ್ನ ವಿವಿಧ ಘಟಕಗಳಾದ ಏಳು ಕೃಷಿ ವಿಜ್ಞಾನ ಕೇಂದ್ರಗಳು, ಎರಡು ವಿಸ್ತರಣಾ ಶಿಕ್ಷಣ ಘಟಕಗಳು, ರೈತ ತರಬೇತಿ ಸಂಸ್ಥೆ, ಸಿಬ್ಬಂದಿ ತರಬೇತಿ ಘಟಕ, ಬೇಕರಿ ತರಬೇತಿ ಘಟಕ, ದೂರ ಶಿಕ್ಷಣ ಘಟಕ, ಕೃಷಿ ಮಾಹಿತಿ ಘಟಕ, ಕೃಷಿ ತಂತ್ರಜ್ಞಾನ ಮಾಹಿತಿ ಕೇಂದ್ರ ಮತ್ತು ರಾಷ್ಟ್ರೀಯ ಕೃಷಿ ವಿಸ್ತರಣಾ ಯೋಜನೆ ಮೂಲಕ ಕಾರ್ಯಗತಗೊಳಿಸುತ್ತಿದೆ.

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕೃಷಿ-ಟೆಕ್‌ಪೋರ್‌ಟಲ್: ಇ-ವಿಸ್ತರಣಾ ಸೇವೆಯನ್ನು ಪ್ರಾರಂಭಿಸಿದ್ದು ಅದರಲ್ಲಿ ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ, ರೇಷ್ಮೆ ಮಾರುಕಟ್ಟೆ ಮಾಹಿತಿ, ಹವಾಮಾನ ಮಾಹಿತಿ, ಯಶೋಗಾಥೆಗಳು ಮುಂತಾದ ಮಾಹಿತಿಯನ್ನು ರೈತರಿಗೆ ಹಾಗೂ ವಿಸ್ತರಣಾ ಸಿಬ್ಬಂದಿಗೆ ಅವಶ್ಯಕತೆ ಆಧಾರದ ಮೇಲೆ ದೊರೆಯುತ್ತದೆ. ರಾಜ್ಯದ ಇತರೆ ಕೃಷಿ ವಿಶ್ವವಿದ್ಯಾನಿಲಯಗಳು ತಮ್ಮಲ್ಲಿ ಬಿಡುಗಡೆಯಾದ ನೂತನ ತಾಂತ್ರಿಕತೆಗಳನ್ನು ಉನ್ನತೀಕರಿಸಲು ಅವಕಾಶವನ್ನು ಕಲ್ಪಿಸಲಾಗಿದೆ.

ಕೃಷಿ ವಿಶ್ವವಿದ್ಯಾಲಯ, ಧಾರವಾಡ

ಧಾರವಾಡ ಕೃಷಿ ವಿಶ್ವವಿದ್ಯಾಲಯವು ಅಸ್ತಿತ್ವಕ್ಕೆ ಬರಲು ಕಾರಣೀಭೂತವಾದ ಮಹಾನ್ ಸಂಸ್ಥೆಯಾದ ಕೃಷಿ ಮಹಾವಿದ್ಯಾಲಯವು ೧೯೪೭ ನೇ ಇಸವಿಯಲ್ಲಿ ಸ್ಥಾಪಿತವಾಯಿತು. ತರುವಾಯ, ಅಕ್ಟೋಬರ್ ೧.೧೯೮೬ ರಂದು ಈ ಮಹಾ ವಿದ್ಯಾಲಯವು ವಿಶ್ವವಿದ್ಯಾಲಯವಾಗಿ ಮಾರ್ಪಾಡಾಗುವ ಮೂಲಕ ಉತ್ತರ ಕರ್ನಾಟಕದ ರೈತ ಸಮುದಾಯದ ಅಶೋತ್ತರಗಳಿಗೆ ಸ್ಪಂದಿಸುವ ಕೆಲಸಕ್ಕೆ ಚಾಲನೆ ದೊರಕಿತು. ಕೃಷಿ ವಿಶ್ವವಿದ್ಯಾಲಯ ಧಾರವಾಡದ ವ್ಯಾಪ್ತಿಯಲ್ಲಿ ಒಟ್ಟು ೩೦ ಕೃಷಿ ಸಂಶೋಧನಾ ಕೇಂದ್ರಗಳು ವಿವಿಧ ಬೆಳೆಗಳ ಬೀಜೋತ್ಪಾದನೆ, ಕೃಷಿ ಸಂಶೋಧನೆ, ಮತ್ತು ವಿಸ್ತರಣಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕೆಲಸ ನಿರ್ವಹಿಸುತ್ತಿವೆ. ಅಲ್ಲದೆ, ವಿವಿಧ ಬೆಳೆಗಳ ೨೬ ಅಖಿಲ ಭಾರತ ಸಮನ್ವಯ ಸಂಶೋಧನಾ ಯೋಜನೆಗಳು ಕಾರ್ಯಪ್ರವೃತ್ತವಾಗಿದೆ. ಈ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ರಾಜ್ಯದ ಪ್ರತಿಶತ ೨೮ ರಷ್ಟು ಭೌಗೋಳಿಕ ಕ್ಷೇತ್ರ, ಪ್ರತಿಶತ ೨೭ ರಷ್ಟು ಉಳುಮೆ ಕ್ಷೇತ್ರ ಮತ್ತು ಪ್ರತಿಶತ ೧೪ ರಷ್ಟು ನೀರಾವರಿಕ್ಷೇತ್ರ ಬರುತ್ತದೆ. ಈ ವಿಶ್ವವಿದ್ಯಾಲಯವು ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಬೋಧನೆ, ಸಂಶೋಧನೆ ಮತ್ತು ವಿಸ್ತರಣಾ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದು. ಭಾರತೀಯ ಕೃಷಿ ಅನುಸಂದಾನ ಪರಿಷತ್ತು ನೀಡುವ ಸರದಾರ್ ಪಟೇಲ ಅತ್ಯುತ್ತಮ ಐ.ಸಿ.ಎ.ಆರ್. ಸಂಸ್ಥೆ ಪ್ರಶಸ್ತಿಯು ೨೦೦೦ ನೇ ಸಾಲಿನಲ್ಲಿ ಲಭಿಸಿದೆ.

ಕೃಷಿ ವಿಶ್ವವಿದ್ಯಾನಿಲಯ ರಾಯಚೂರು

೨೦೧೫-೧೬ ನೇ ಸಾಲಿನಲ್ಲಿ ೩೦೯ ಸ್ನಾತಕ, ೧೧೪ ಸ್ನಾತಕೋತ್ತರ ಮತ್ತು ೩೦ ವಿದ್ಯಾರ್ಥಿಗಳು ಡಾಕ್ಟರೇಟ್ ಪದವಿಗಳಿಗೆ ಪ್ರವೇಶ ಪಡೆದಿದ್ದಾರೆ. ಪ್ರಸ್ತುತ ೧,೧೬೭ ವಿದ್ಯಾರ್ಥಿಗಳು ಸ್ನಾತಕ ಪದವಿ. ೩೨೯ ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಪದವಿ ವಿದ್ಯಾರ್ಥಿಗಳು ಮತ್ತು ೧೩೫ ವಿದ್ಯಾರ್ಥಿಗಳು ಡಿಪ್ಲೋಮಾ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯ, ಶಿವಮೊಗ್ಗ

ಬೋಧನೆ : ಪ್ರಸ್ತುತ ವರ್ಷ ೨೫೮ ವಿದ್ಯಾರ್ಥಿಗಳು ಶಿವಮೊಗ್ಗ, ಹಿರಿಯೂರು, ಮೂಡಿಗೆರೆ ಮತ್ತು  ಪೊನ್ನಂಪೇಟೆ ಕಾಲೇಜುಗಳಲ್ಲಿ ಕೃಷಿ ಮತ್ತು ಕೃಷಿಯೇತರ ಪದವಿಗೆ, ೧೧೨ ವಿದ್ಯಾರ್ಥಿಗಳು ಶಿವಮೊಗ್ಗ,  ಮೂಡಿಗೆರೆ ಮತ್ತು ಪೊನ್ನಂಪೇಟೆ ಕಾಲೇಜುಗಳಲ್ಲಿ ಸ್ನಾತಕೋತ್ತರ ಪದವಿಗೆ ಹಾಗೂ ೧೦೧ ವಿದ್ಯಾರ್ಥಿಗಳು ಕತ್ತಲಗೆರೆ ಮತ್ತು ಬ್ರಹ್ಮಾವರದಲ್ಲಿ ಡಿಪ್ಲೊಮೊ ಕೃಷಿಗೆ ಪ್ರವೇಶ ಪಡೆದಿರುತ್ತಾರೆ.

ಜಲ ಸಂಪನ್ಮೂಲ ಅಭಿವೃದ್ಧಿ

ರಾಜ್ಯದ ಸರ್ವತೋಮುಖ ಅಭಿವೃದ್ಧಿಯಲ್ಲಿ ನೀರಾವರಿ ವಲಯ ಆದ್ಯತಾ ವಲಯ. ರಾಜ್ಯದ ಅಮೂಲ್ಯ ಜಲ ಸಂಪನ್ಮೂಲವನ್ನು ಪೂರ್ಣವಾಗಿ ರಾಜ್ಯದ ಅಭಿವೃದ್ಧಿಗಾಗಿ ಬಳಸಿ ಕೊಳ್ಳುವುದಕ್ಕೆ ಸರ್ಕಾರ ಆದ್ಯತೆ ನೀಡಿದೆ. ನಾಡಿನ ಎರಡು ಕಣ್ಣುಗಳಂತಿರುವ ಕೃಷ್ಣ  ಮತ್ತು ಕಾವೇರಿ ನದಿಗಳ ಪಾಲಿನ ನೀರನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲು ಸರ್ಕಾರವು ಬದ್ಧವಾಗಿದೆ. ಸರ್ವಪಕ್ಷಗಳ ಸಹಮತಿಯಂತೆ ಮಹದಾಯಿ ನದಿ ವಿವಾದ ನ್ಯಾಯಾಧಿಕರಣದನ್ವಯ ರಾಜ್ಯದ ಪಾಲಿನ ನೀರನ್ನು ಪಡೆಯಲು ಸೂಕ್ತ ಕ್ರಮಕೈಗೊಳ್ಳಲಾಗುತ್ತಿದೆ. ನಾಡಿನ ನೆಲ-ಜಲದ ಬಗ್ಗೆ ಯಾವುದೇ ಕಾರಣಕ್ಕೂ ಸರ್ಕಾರ ರಾಜಿಮಾಡಿಕೊಳ್ಳುವುದಿಲ್ಲ ಎಂಬ ಧ್ಯೇಯವನ್ನು ಸರ್ಕಾರವು ಹೊಂದಿದೆ.

ಕೃಷ್ಣ ಮೇಲ್ದಂಡೆ ಯೋಜನೆ ಹಂತ-೩ ರ ಅನುಷ್ಠಾನಕ್ಕೆ ಸರ್ಕಾರ ತೀವ್ರ ಒತ್ತು ನೀಡಿದೆ. ಈ ಯೋಜನೆಯ ಉಪ ಯೋಜನೆಗಳಾದ ಮುಳವಾಡ, ಕೊಪ್ಪಳ, ಮಲ್ಲಾಬಾದ್, ರಾಂಪುರ, ಚಿಮ್ಮಲಗಿ, ಇಂಡಿ ಏತ ನೀರಾವರಿ ಯೋಜನೆಗಳು, ನಾರಾಯಣಪುರ ಬಲದಂಡೆ ಕಾಲುವೆ ವಿಸ್ತರಣೆ ಮತ್ತು ಹೆರ್ಕಲ್ ಏತ ನೀರಾವರಿ ಯೋಜನೆಗಳನ್ನು ತೀವ್ರಗತಿಯಲ್ಲಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ೧೪ ಹೆಡ್‌ವರ್ಕ್ಸ್ ಕಾಮಗಾರಿಗಳ ಪೈಕಿ ನಾಲ್ಕು ಕೆಲಸಗಳು ಪೂರ್ಣಗೊಂಡಿರುತ್ತವೆ ಮತ್ತು ಉಳಿಕೆ ಹೆಡ್‌ವರ್ಕ್ಸ್ ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ.

೧೭೬.೮೭ ಕಿ.ಮೀ. ಉದ್ದದ ಮುಖ್ಯ ಶಾಖಾ ಕಾಲುವೆಗಳ ಕಾಮಗಾರಿಗಳ ಕಾಮಗಾರಿಗಳು ಪೂರ್ಣಗೊಂಡಿದ್ದು, ೩೪೦.೪೦ ಕಿ,ಮೀ ಉದ್ದ ಕಾಲುವೆ ಕಾಮಗಾರಿ ಪ್ರಗತಿಯಲ್ಲಿದೆ. ಕೃಷ್ಣ ಮೇಲ್ದಂಡೆ ಯೋಜನೆಯ ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆಯ ಆಧುನೀಕರಣವನ್ನು ಎಂಟು ಪ್ಯಾಕೇಜ್‌ಗಳಡಿ ೧,೯೧೨ ಕೋಟಿ ರೂ.ಗಳ ವೆಚ್ಚದಲ್ಲಿ ಮತ್ತು ಎಸ್‌ಸಿವಡಿಎ (ಸ್ಕಾಡಾ) ಆಧಾರಿತ ಆಟೋಮೇಷನ್‌ಗೆ ೧೩೨ ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಂಡಿದ್ದು ಕಾಮಗಾರಿಗಳು ಪ್ರಗತಿಯಲ್ಲಿವೆ. ಕುಡಿಯುವ ನೀರಿನ ಕೊರತೆ ಎದುರಿಸುತ್ತಿರುವ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಒದಗಿಸಲು ೧೩ ಸಾವಿರ ಕೋಟಿ ರೂ.ಗಳ ವೆಚ್ಚದ ಎತ್ತಿನಹೊಳೆ ಯೋಜನೆಯ ಮೊದಲ ಹಂತದ ಕಾಮಗಾರಿಗಳು ಭರದಿಂದ ಸಾಗಿವೆ. ಅಂತಾರಾಷ್ಟ್ರೀಯ, ಖಾಸಗಿ ಹಾಗೂ ಕಾರ್ಪೋರೇಟ್ ಸಂಸ್ಥೆಗಳ ಸಹಯೋಗ ಹಾಗೂ ಸಹಭಾಗಿತ್ವದೊಂದಿಗೆ ಅರ್ಕಾವತಿ ನದಿಯ ಪುನರುಜ್ಜೀವನ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಸಿಂಗಟಾಲೂರು ಏತ ನೀರಾವರಿ ಯೋಜನೆಯ ಅಂದಾಜು ಮೊತ್ತವನ್ನು ೫.೭೬೮ ಕೋಟಿ ರೂ.ಗಳಿಗೆ ಪರಷ್ಕರಿಸಿ ಒಟ್ಟು ೨.೬೫ ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಕ್ರಮ ಕೈಗೊಳ್ಳಲಾಗಿದೆ.

ಸಿಂಗಟಾಲೂರು, ಭದ್ರಾ ಮೇಲ್ದಂಡೆ, ಕೊಪ್ಪಳ, ತುಬಚಿ- ಬಬಲೇಶ್ವರ ರಾಮತಾಳ ಏತ ನೀರಾವರಿ, ಸವಣೂರು ಏತ ನೀರಾವರಿ ಯೋಜನೆಗಳಡಿ ಸೂಕ್ಷ್ಮ (ಹಾನಿ ಮತ್ತು ತುಂತುರು) ನೀರಾವರಿ ವ್ಯವಸ್ಥೆಯನ್ನು ಅಳವಡಿಸಲು ಒತ್ತು ನೀಡಿದೆ.

ತುಂಗಭದ್ರಾ ಯೋಜನೆ ಕಾಲುವೆಗಳು, ವಿಶ್ವೇಶ್ವರಯ್ಯ ನಾಲೆ  ಕಾಲುವೆಗಳು, ಚಾಮರಾಜ ಕಾಲುವೆಗಳು, ಕೃಷ್ಣರಾಜ (ಕಟ್ಟೆಪುರ) ಕಾಲುವೆಗಳು, ಮಿರ್ಲೆ ಮತ್ತು ರಾಮಸಮುದ್ರ ಕಾಲುವೆಗಳು, ಹಾರಂಗಿ ಬಲದಂಡೆ ಕಾಲುವೆಗಳು, ರಾಜಪರಮೇಶ್ವರಿ ಕಾಲುವೆಗಳನ್ನು ಆಧುನೀಕರಣಗೊಳಿಸಿದೆ. ಆಲಮಟ್ಟಿ ಅಣೆಕಟ್ಟನ್ನು  ೫೨೪.೨೫ ಮೀಟರ್‌ಗೆ ಏರಿಸುವ ಉದ್ದೇಶಕ್ಕಾಗಿ ಮುಳುಗಡೆ ಪ್ರದೇಶದ ಭೂಸ್ವಾಧೀನ, ಪುನರ್ವಸತಿ ಹಾಗೂ ಪುನರ್‌ನಿರ್ಮಾಣ ಕಾಮಗಾರಿಗಳನ್ನು ಚುರುಕುಗೊಳಿಸಲು ಉನ್ನತ ಮಟ್ಟದ ಸಮಿತಿ ಮತ್ತು ಕ್ರಿಯಾ ಯೋಜನೆ ಪರಿಶೀಲನಾ ಸಮಿತಿಯನ್ನು ರಚಿಸಲಾಗಿದೆ. ಕೃಷ್ಣ ಮೇಲ್ದಂಡೆ ಯೋಜನೆಯಿಂದ ಪುನರ್ವಸತಿಗೊಳ್ಳುವ ಬಾಧಿತ ಕುಟುಂಬಗಳ ಪುನರ್ವಸತಿಗೆ ಮಾನ್ಯ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಿದೆ.

ಕಬಿನಿ ಜಲಾಶಯದಿಂದ ನಂಜನಗೂಡು, ಚಾಮರಾಜನಗರ ಮತ್ತು ಗುಂಡ್ಲುಪೇಟೆಗಳಲ್ಲಿರುವ ೫೨ ಗ್ರಾಮಗಳ ೨೦ ಕೆರೆಗಳಿಗೆ ನೀರು ಸರಬರಾಜು ಮಾಡುವ ಕಾಮಗಾರಿಗಳನ್ನು ೨೫೪ ಕೋಟಿ ರೂ.ಗಳ ವೆಚ್ಚದಲ್ಲಿ ಪೂರ್ಣಗೊಳಿಸಿದೆ. ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಮತ್ತು ತುಮಕೂರು ಜಿಲ್ಲೆಗಳ ೫,೫೭,೨೬೦ ಎಕರೆ ಬರಪೀಡಿತ ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ ಸೇರಿದಂತೆ ನೀರಾವರಿ ಸೌಲಭ್ಯ ಕಲ್ಪಿಸುವ ಮತ್ತು ೩೬೭ ಸಣ್ಣ ನೀರಾವರಿ ಕೆರೆಗಳನ್ನು ತುಂಬಿಸಲು ೧೨,೩೪೦ ಕೋಟಿ ರೂ.ಗಳ ಮೊತ್ತದ ಕೃಷ್ಣ ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.

ಕಾಲುವೆಗಳ ಮೇಲೆ ಸೌರಶಕ್ತಿ ಪ್ಯಾನೆಲ್‌ಗಳನ್ನು ಅಳವಡಿಸಿ ಸೌರಶಕ್ತಿ ವಿದ್ಯುತ್ ಉತ್ಪಾದನೆಗೆ ಕ್ರಮ  ಕೈಗೊಳ್ಳಲಾಗಿದೆ. ’ಹನಿ ನೀರಾವರಿ ಪದ್ಧತಿ’ ಯನ್ನು ಕಬ್ಬನಿ ಬೆಳೆಗಳಿಗೆ ಅನುಸರಿಸಿ ಪ್ರಥಮ ಹಂತದಲ್ಲಿ ರಾಜ್ಯದ ಕೆಲವು ನೀರಾವರಿ ಅಚ್ಚುಕಟ್ಟು ಪ್ರದೇಶದಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲು ಕ್ರಮ ಕೈಗೊಳ್ಳಲಾಗಿದೆ. ಕೃಷ್ಣ ಭಾಗ್ಯ ಜಲ ನಿಗಮದ ಅಡಿ ಅನುಷ್ಠಾನಗೊಳಿಸುತ್ತಿರುವ ಬೃಹತ್ ನೀರಾವರಿ ಯೋಜನೆಗಳಡಿ ನವೀನ ತಂತ್ರಜ್ಞಾನ ಅಳವಡಿಕೆಯ ಕ್ರಮಗಳಿಗಾಗಿ ಕೇಂದ್ರ ಸರ್ಕಾರದ  ಕೇಂದ್ರೀಯ ಜಲಸಂಪನ್ಮೂಲ ಮತ್ತು ಇಂಧನ ಸಂಸ್ಥೆಯು ನೀಡುವ ’ಜಲ ಸಂಪನ್ಮೂಲದ ಸಮರ್ಥ ಬಳಕೆಯ ಪ್ರಶಸ್ತಿ’ಯನ್ನು ೨೦೧೫ ಮತ್ತು ೨೦೧೬ರಲ್ಲಿ ಸತತವಾಗಿ ಎರಡು ಬಾರಿ ಪಡೆದುಕೊಂಡಿದೆ. ಸಣ್ಣ ನೀರಾವರಿ ಮೂಲಕ ಕಳೆದ ಮೂರು ವರ್ಷಗಳಲ್ಲಿ ೯೯,೫೪೦ ಹೆಕ್ಟೇರ್ ಪ್ರದೇಶದಲ್ಲಿ ಹೊಸದಾಗಿ ನೀರಾವರಿ ಸೌಲಭ್ಯವನ್ನು ಸೃಜಿಸಲಾಗಿದೆ ಹಾಗೂ ೪೪,೬೨೧ ಹೆಕ್ಟೇರ್ ಪ್ರದೇಶದಲ್ಲಿ ನೀರಾವರಿ ಸ್ಥಿರೀಕರಿಸಲಾಗಿದೆ. ಕೃಷಿಗೆ ನೇರವಾಗಿ ಸಂಬಂಧಿಸಿದ ಕೆರೆ ನೀರಾವರಿ ಯೋಜನೆಗಳ ಜೀರ್ಣೋದ್ಧಾರ ಮತ್ತು ಪಾರಂಪರಿಕ ಜಲಕಾಯಗಳ ಪುನರುಜ್ಜೀವನ ಕಾರ್ಯವನ್ನು ಅನುಷ್ಠಾನಗೊಳಿಸಿದೆ. ಕಳೆದ ಮೂರು  ವರ್ಷಗಳಲ್ಲಿ ಏಳು ಹಂತಗಳಲ್ಲಿ ಕೈಗೊಳ್ಳಲಾದ ೪೮೯ ಕಾಮಗಾರಿಗಳ ಪೈಕಿ ೩೬೧ ಕಾಮಗಾರಿಗಳನ್ನು  ಪೂರ್ಣಗೊಳಿಸಿದೆ.

ಪರಿಶಿಷ್ಟ ಜಾತಿ ಉಪಯೋಜನೆ ಹಾಗೂ ಪರಿಶಿಷ್ಟ ಪಂಗಡಗಳ ಉಪಯೋಜನೆಗಳಡಿ ಸಮುದಾಯ ಏತ ನೀರಾವರಿ ಯೋಜನೆಗಳಿಗೆ ಪ್ರಾಯೋಗಿಕವಾಗಿ ’ಸೂರ್ಯ ಜ್ಯೋತಿ- ರೈತರ ಬಾಳಿನ ಪರಂಜ್ಯೋತಿ,ಕಾರ್ಯಕ್ರಮದಡಿ ೨೧೧೯ ಸೌರಶಕ್ತಿ ಚಾಲಿತ ಪಂಪುಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ. ’ಕೆರೆ ಅಭಿವೃದ್ಧಿ -ನಾಡಿನ ಶ್ರೇಯೋಭಿವೃದ್ಧಿ’ ಕಾರ್ಯಕ್ರಮದಡಿ ೯೯.೨೫ ಕೋಟಿ ರೂ. ವೆಚ್ಚದಲ್ಲಿ ಗುರುತಿಸಲಾಗಿದ್ದ ೧೦೪ ಕೆರೆಗಳ ಪೈಕಿ ೯೨ ಕೆರೆಗಳ ಸಮಗ್ರ ಅಭಿವೃದ್ಧಿ ಕಾರ್ಯಕ್ರಮವನ್ನು  ಕೈಗೊಳ್ಳಲಾಗಿದೆ. ರಾಜ್ಯದಲ್ಲಿರುವ ಸುಮಾರು ೩೦ ಸಾವಿರ ಕೆರೆಗಳ ಕ್ರಮಬದ್ಧ ಅಭಿವೃದ್ಧಿಗಾಗಿ ’ಕೆರೆ ಅಭಿವೃದ್ಧಿ-ನಾಡಿನ ಶ್ರೇಯೋಭಿವೃದ್ಧಿ’ ಕಾರ್ಯಕ್ರಮದಡಿ ೯೯.೨೫ ಕೋಟಿ ರೂ. ವೆಚ್ಚದಲ್ಲಿ ಗುರುತಿಸಲಾಗಿದ್ದ  ೧೦೪ ಕೆರೆಗಳ ಪೈಕಿ ೯೨ ಕೆರೆಗಳ ಸಮಗ್ರ ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳಲಾಗಿದೆ. ರಾಜ್ಯದಲ್ಲಿರುವ ಸುಮಾರು ೩೦ ಸಾವಿರ ಕೆರೆಗಳ ಕ್ರಮಬದ್ಧ ಅಭಿವೃದ್ಧಿಗಾಗಿ ’ಕೆರೆ  ಅಭಿವೃದ್ಧಿ ಪ್ರಾಧಿಕಾರ’ವನ್ನು ರಚಿಸಿದೆ. ೧೦೦ ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೆರೆಗಳ ಒತ್ತುವರಿ ತೆರವು ಮತ್ತು ಕೆರೆಗಳ ಪೋಷಕ ಕಾಲುವೆ/ರಾಜ ಕಾಲುವೆಗಳ ದುರಸ್ತಿ ಕಾರ್ಯವನ್ನು  ಕೈಗೊಳ್ಳಲಾಗುತ್ತಿದೆ. ಅಂತರ್ಜಲ ನಿರ್ದೇಶನಾಲಯವನ್ನು ಪ್ರತ್ಯೇಕವಾಗಿ ಸ್ಥಾಪಿಸಿ, ಅಂತರ್ಜಲ ನಿಯಂತ್ರಣ ಹಾಗೂ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿದೆ. ಅಂತರ್ಜಲ ಕುಸಿದಿರುವ ಜಿಲ್ಲೆಗಳಾದ ಗದಗ, ವಿಜಯಪುರ, ಕೊಪ್ಪಳ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ನೈಸರ್ಗಿಕ ನದಿ-ಕೊಳ್ಳಗಳಿಗೆ ಅಡ್ಡಲಾಗಿ ಸರಣಿ ಪಿಕಪ್‌ಗಳ ನಿರ್ಮಾಣ ಮಾಡಲಾಗುತ್ತಿದ್ದು,  ಇದಕ್ಕಾಗಿ ೧೦೦ ಕೋಟಿ ರೂ. ಗಳನ್ನು ವೆಚ್ಚ ಮಾಡಲಾಗಿದೆ. ಕೊಳಚೆ ನೀರನ್ನು ಸಂಸ್ಕರಿಸಿ ಕೆರೆ ತುಂಬಿಸುವ ಯೋಜನೆಯಡಿ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿರುವ ಕೆರೆಗಳಿಗೆ ಕೋರಮಂಗಲ- ಚಲ್ಲಘಟ್ಟ ಕಣಿವೆಯಿಂದ ಹರಿಯುವ ಕೊಳಚೆ ನೀರನ್ನು ಸಂಸ್ಕರಿಸಿ ತುಂಬಿಸುವ ಏತ ನೀರಾವರಿ ಕಾಮಗಾರಿಗೆ ಚಾಲನೆ ನೀಡಿದೆ.

ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಸುಮಾರು ೬೦ ಕೆರೆಗಳಿಗೆ ದಕ್ಷಿಣ ಪಿನಾಕಿನಿ ನದಿಗೆ ಹರಿಯುತ್ತಿರುವ ಬೆಂಗಳೂರು ನಗರದ ಸಂಸ್ಕರಿಸಿದ ಕೊಳಚೆ ನೀರನ್ನು ತುಂಬಿಸಲು ಮುತ್ತಸಂದ್ರ ಗ್ರಾಮದ ಸಮೀಪ ಏತ ನೀರಾವರಿ ಯೋಜನೆಯ ಕಾಮಗಾರಿಗಳನ್ನು ಪ್ರಾರಂಭಿಸಿದೆ.

ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆ

ಈ ಸಂಸ್ಥೆಯು ರಾಜ್ಯದಲ್ಲಿರುವ ಭಾರಿ ಮತ್ತು ಮಧ್ಯಮ ನೀರಾವರಿ ಯೋಜನೆಗಳ ಸಮೀಕ್ಷೆ ಮತ್ತು ಅನ್ವೇಷಣೆ ಕೆಲಸಗಳು, ಅಂತರರಾಜ್ಯ ಜಲವಿವಾದಗಳಾದ ಕಾವೇರಿ, ಕೃಷ್ಣ, ಗೋದಾವರಿ ಮತ್ತು ಮಹದಾಯಿ ಜಲ ವಿವಾದಗಳಿಗೆ ಸಂಬಂಧಿಸಿದಂತೆ ರಾಜ್ಯದ ಹಿತಾಸಕ್ತಿಯನ್ನು ಕಾಪಾಡಲು ಬೇಕಾಗುವ ಎಲ್ಲಾ ಮಾಹಿತಿಗಳನ್ನು ಒದಗಿಸುತ್ತದೆ. ರಾಜ್ಯದಲ್ಲಿ ನದಿ ಮಾಪನ ಕೇಂದ್ರಗಳು ಮತ್ತು ಇತರೆ ಮಾಪನಕೇಂದ್ರಗಳನ್ನು ಸ್ಥಾಪಿಸುವುದು ಮತ್ತು ಈ ಮಾಪನ ಕೇಂದ್ರಗಳಿಂದ ನೀರಿನ ಲೆಕ್ಕ ಮತ್ತು ಸಂಬಂಧಿತ ಮಾಹಿತಿಗಳನ್ನು ಸಂಗ್ರಹಿಸುವುದು ಮತ್ತು ಜಲವಿಜ್ಞಾನಕ್ಕೆ ಸಂಬಂಧಿಸಿದ ವಿವರಗಳನ್ನು ಸಂಗ್ರಹಿಸಿ, ವೈಜ್ಞಾನಿಕ ವಿಧಾನಗಳಂತೆ ವಿಶ್ಲೇಷಿಸಲಾಗುವುದು.

ರಾಜ್ಯದ ಪೂರ್ಣಗೊಂಡಿರುವ, ಪ್ರಗತಿಯಲ್ಲಿರುವ ಮತ್ತು ಹೊಸ ನೀರಾವರಿ ಯೋಜನೆಗಳ ಎಲ್ಲಾ  ಮಾಹಿತಿಗಳನ್ನು ಈ ಸಂಸ್ಥೆಯು ಒದಗಿಸುತ್ತದೆ. ಈ ಸಂಸ್ಥೆಯು ಮಳೆಮಾಪನ ಕೇಂದ್ರಗಳನ್ನು ಸೂಚಿಸುವ ಜಲಾನಯನ ಪ್ರದೇಶದ ನಕ್ಷೆಗಳನ್ನು ತಯಾರಿಸುತ್ತದೆ. ಹಾಗೆಯೇ, ಕರ್ನಾಟಕ ರಾಜ್ಯದ ಜಲ ಹವಾಮಾನ  ಕೇಂದ್ರಗಳನ್ನು ಒಳಗೊಂಡ ಡಿಜಿಟಲ್‌ ನಕ್ಷೆಗಳನ್ನು ಮತ್ತು ಕಾವೇರಿ ಹಾಗೂ ಕೃಷ್ಣ ಜಲಾನಯನ ಪ್ರದೇಶಗಳಲ್ಲಿನ ಪೂರ್ಣಗೊಂಡಿರುವ, ಪ್ರಗತಿಯಲ್ಲಿರುವ ಹಾಗೂ ಪ್ರಸ್ತಾವಿತ ನೀರಾವರಿ ಯೋಜನೆಗಳ ಅಚ್ಚುಕಟ್ಟು ಪ್ರದೇಶದ ನಕ್ಷೆಗಳನ್ನು  ಜಿ.ಐ.ಎಸ್‌, ದೂರ ಸಂವೇದಿ ತಂತ್ರಜ್ಞಾನ ಹಾಗೂ ಆಟೋಡೆಸ್ಕ್‌ ಮ್ಯಾಪ ಮುಂತಾದ ನೂತನ ಸಾಫ್ಟ್‌ವೇರ್‌ಗಳನ್ನು ಬಳಸಿ ತಯಾರಿಸುತ್ತದೆ. ಪೂರ್ಣಗೊಂಡಿರುವ ಹಾಗೂ ಚಾಲ್ತಿಯಲ್ಲಿರುವ ನೀರಾವರಿ ಯೋಜನೆಗಳ ಉಸ್ತುವಾರಿ ಹಾಗೂ ಮೌಲ್ಯಮಾಪನ ಕಾರ್ಯಗಳ ಹಾಗೂ   ಈ ರಾಜ್ಯದ ಅಣೆಕಟ್ಟುಗಳ ಸುರಕ್ಷತೆಯ ಬಗ್ಗೆ ಈ ಸಂಸ್ಥೆಯು ಮೇಲ್ವಿಚಾರಣೆ ನಡೆಸುತ್ತದೆ.

ನೀರಾವರಿ ವಲಯಗಳ ಆಡಳಿತ ವಿಷಯಗಳು ಅಂದರೆ, ಸಿಬ್ಬಂದಿ ಸ್ಥಳ ನಿಯುಕ್ತಿಗೊಳಿಸುವುದು, ವರ್ಗಾವಣೆ, ದಿನಗೂಲಿ ನೌಕರರ ಬಗ್ಗೆ ಹಾಗೂ ಮಾಸಿಕ ವೇತನ ಸಿಬ್ಬಂದಿಯವರನ್ನು ಸುಪ್ರೀಂ ಕೋರ್ಟ್ ಆದೇಶಗಳಂತೆ ಸಕ್ರಮಗೊಳಿಸುವುದರ ಬಗ್ಗೆ ನಿರ್ವಹಿಸುತ್ತಿದೆ.

ಪ್ರಗತಿಯ ಸಂಕ್ಷಿಪ್ತ ವಿವರ: ಇಲಾಖೆಯಲ್ಲಿ ಒಟ್ಟು ೧೨೫ ಭಾರಿ ಮತ್ತು ಮಧ್ಯಮ ನೀರಾವರಿ ಯೋಜನೆಗಳಿದ್ದು, ಈ ಪೈಕಿ ೪೭ ಯೋಜನೆಗಳು ಪೂರ್ಣಗೊಂಡಿರುತ್ತವೆ, ೭೮ ಯೋಜನೆಗಳು ಪ್ರಗತಿಯ ವಿವಿಧ ಹಂತದಲ್ಲಿರುತ್ತವೆ. ಜಲಸಂಪನ್ಮೂಲ ಇಲಾಖೆಯಲ್ಲಿ ಮೂರು ವಿಶೇಷ ಉದ್ದೇಶ ವಾಹಿನಿಗಳಾದ ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ, ಕರ್ನಾಟಕ ನೀರಾವರಿ ನಿಗಮ ನಿಯಮಿತ ಹಾಗು ಕಾವೇರಿ ನೀರಾವರಿ ನಿಗಮ ನಿಯಮಿತಗಳನ್ನು ಕಂಪನಿ ಕಾಯ್ದೆ ೧೯೫೬ ರನ್ವಯ, ಆರ್ಥಿಕ ಸಂಪನ್ಮೂಲವನ್ನು ಸಂಗ್ರಹಿಸಿ ನೀರಾವರಿ ಯೋಜನೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವ ಉದ್ದೇಶದಿಂದ ಸ್ಥಾಪಿಸಲಾಗಿದೆ.

ಜಲ ಸಂಪನ್ಮೂಲ ಇಲಾಖೆಯಲ್ಲಿ ಮೂರು ವಿಶೇಷ ಉದ್ದೇಶ ವಾಹಿನಿಗಳಾದ ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ, ಕರ್ನಾಟಕ ನೀರಾವರಿ ನಿಗಮ ನಿಯಮಿತ ಹಾಗೂ ಕಾವೇರಿ ನೀರಾವರಿ ನಿಗಮ ನಿಯಮಿತಗಳನ್ನು ಕಂಪನಿ ಕಾಯ್ದೆ ೧೯೫೬ ರನ್ವಯ, ಆರ್ಥಿಕ ಸಂಪನ್ಮೂಲವನ್ನು ಸಂಗ್ರಹಿಸಿ ನೀರಾವರಿ ಯೋಜನೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವ ಉದ್ದೇಶದಿಂದ ಸ್ಥಾಪಿಸಲಾಗಿದೆ.

ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ (ಕೃ.ಭಾ.ಜ.ನಿ.ನಿ): ಸರ್ಕಾರದ ಆದೇಶದಲ್ಲಿ ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತವನ್ನು ಕೃಷ್ಣ ಮೇಲ್ದಂಡೆ ಯೋಜನೆಯನ್ನು ಅನುಷ್ಠಾನಗೊಳಿಸಲು ರಚಿಸಲಾಯಿತು. ಈ ನಿಗಮವು ೧೯ನೇ ಆಗಸ್ಟ್ ೧೯೯೪ ರಿಂದ ಕಾರ್ಯರಂಭಿಸಿದೆ.

ಕರ್ನಾಟಕ ನೀರಾವರಿ ನಿಗಮ ನಿಯಮಿತ (ಕ.ನೀ.ನಿ.ನಿ): ಸರ್ಕಾರದ ಆದೇಶದಲ್ಲಿ ಕರ್ನಾಟಕ ನೀರವಾರಿ ನಿಗಮ ನಿಯಮಿತವನ್ನು ಕೃಷ್ಣ ಕಣಿವೆಯ, ಕೃಷ್ಣ ಮೇಲ್ದಂಡೆ ಯೋಜನೆಯನ್ನು ಹೊರತುಪಡಿಸಿ ಉಳಿದ ಎಲ್ಲಾ ಯೋಜನೆಗಳನ್ನು ಅನುಷ್ಠಾನಗೊಳಿಸಲು ರಚಿಸಲಾಯಿತು. ಈ ನಿಗಮವು ೦೯ನೇ ಡಿಸೆಂಬರ್ ೧೯೯೮ ರಿಂದ ಕಾರ್ಯಾರಂಭಿಸಿದೆ.

ಕಾವೇರಿ ನೀರಾವರಿ ನಿಗಮ ನಿಯಮಿತ (ಕಾ.ನೀ.ನಿ.ನಿ): ಸರ್ಕಾರದ ಆದೇಶದಲ್ಲಿ ಕಾವೇರಿ ನೀರಾವರಿ ನಿಗಮ ನಿಯಮಿತವನ್ನು ಕಾವೇರಿ ಕಣಿವೆಯ ಯೋಜನೆಗಳನ್ನು ಅನುಷ್ಠಾನಗೊಳಿಸಲು ರಚಿಸಲಾಯಿತು. ಈ ನಿಗಮವು, ೦೩ ನೇ ಜೂನ್ ೨೦೦೩ ರಿಂದ ಕಾರ್ಯಾರಂಭಿಸಿದೆ.

ಕರ್ನಾಟಕ ಇಂಜಿನಿಯರಿಂಗ್ ಸಂಶೋಧನಾ ಕೇಂದ್ರ

ಕರ್ನಾಟಕ ಇಂಜಿನಿಯರಿಂಗ್ ಸಂಶೋಧನಾ ಕೇಂದ್ರವು ೧೯೪೪ ರಲ್ಲಿ ಒಂದು ಸಣ್ಣ ಸಂಶೋಧನ ಭಾಗವಾಗಿ ಪ್ರಾರಂಭವಾಗಿ ಈಗ ದೇಶದ ಒಂದು ಪ್ರಮುಖ ಸಂಶೋಧನಾ ಕೇಂದ್ರವಾಗಿ ಬೆಳೆದಿದೆ ಮತ್ತು ದೇಶದಲ್ಲಿರುವ ಇಪ್ಪತ್ತಕ್ಕಿಂತ ಹೆಚ್ಚಿನ ಘಟಕಗಳ ಪೈಕಿ ಹಳೆಯ ಹಾಗೂ ಹೆಸರಾಂತ ಸಂಶೋಧನಾ ಕೇಂದ್ರವೆಂದು ಪ್ರಖ್ಯಾತಿ ಪಡೆದಿದೆ. ಸಂಶೋಧನಾ ಕೇಂದ್ರವು ಕರ್ನಾಟಕದ ಜಲ ಸಂಪನ್ಮೂಲ ಇಲಾಖೆಯ ಒಂದು ಭಾಗವಗಿ ಕಾರ್ಯ ನಿರ್ವಹಿಸುತ್ತಿದೆ. ಕರ್ನಾಟಕ ಇಜಿನಿಯರಿಂಗ್ ಸಂಶೋಧನಾ ಕೇಂದ್ರದ ಮೂಲೋದ್ದೇಶವು ಇಲಾಖೆಯ ಸಿವಿಲ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ನಿರ್ಮಾಣದಲ್ಲಿ ಎದುರಿಸಲಾಗುವ ಸಮಸ್ಯೆಗಳನ್ನು ವಿಶ್ಲೇಸಿಸಿ, ಅಧ್ಯಯನ ನಡೆಸಿ ಸೂಕ್ತ ಪರಿಹಾರ ಕಂಡುಹಿಡಿಯುವುದೇ ಆಗಿರುತ್ತದೆ. ಮುಖ್ಯ ಇಂಜಿನಿಯರ್ ದರ್ಜೆಯ ನಿರ್ದೇಶಕರು, ಸಂಶೋಧನಾ ಕೇಂದ್ರದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜಲಶಾಸ್ತ್ರ ಸಂಶೋಧನಾ ಮಾದರಿ ಅಧ್ಯಯನ, ಜಲಾಶಯಗಳ ಹೂಳು ಸಮೀಕ್ಷಾ ಕಾರ್ಯ (ಹೈಡ್ರೋಗ್ರಾಫಿಕ್ ಸರ್ವೆ ಹಾಗೂ ದೂರ ಸಂವೇದಿ ತಂತ್ರಜ್ಞಾನದ ಮುಖಾಂತರ), ಗೇಜಿಂಗ್ ಕಾರ್ಯ ಹಾಗೂ ಕರೆಂಟ್ ಮೀಟರ್ ರೇಟಿಂಗ್ ಕಾರ್ಯ, ಕರಾವಳಿ ತೀರ ಕೊರತೆ ಸಮಸ್ಯೆಗಳ ಅಧ್ಯಯನ, ಭೂಗುಣತಂತ್ರ ವಿಜ್ಞಾನ ಕ್ಷೇತ್ರದಲ್ಲಿ ಮಣ್ಣಿನ ಮಾದರಿಗಳು ಹಾಗೂ ತಳಪಾಯದ ಪರೀಕ್ಷಾ ಅಧ್ಯಯನ, ರಸ್ತೆಗೆ ಸಂಬಂಧಿಸಿದ ಸಮಸ್ಯೆಗಳ ಅಧ್ಯಯನ, ಶಿಲಾಗುಣ ಪರೀಕ್ಷೆಗಳು, ನೀರಿನ ಗುಣಮಟ್ಟ ಪರೀಕ್ಷೆಗಳು ಹಾಗೂ ಕಟ್ಟಡ ನಿರ್ಮಾಣ ಸಾಮಗ್ರಿಗಳ ಪರೀಕ್ಷೆಗಳು ಇತ್ಯಾದಿ ಅಧ್ಯಯನಗಳನ್ನು ಕೈಗೊಳ್ಳಲಾಗುತ್ತಿದೆ.

ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ): ನೀರಾವರಿ ಯೋಜನೆಗಳ ನಿರ್ಮಾಣಕ್ಕಾಗಿ ಸರ್ಕಾರ ಮಾಡಿದ ವೆಚ್ಚದಿಂದ ಗರಿಷ್ಠ ಆದಾಯ ಬರಬೇಕಾದರೆ ಜಲ ಹಾಗೂ ನೆಲದ ವ್ಯವಸ್ಥೆ ಹಾಗೂ ವೈಜ್ಞಾನಿಕ ನಿರ್ವಹಣೆ ಮಾಡುವುದು ಅವಶ್ಯವಿದೆ. ಈ ಉದ್ದೇಶ ಸಾಧಿಸಲು ನಿರ್ವಹಣಾ ಕಾರ್ಯದಲ್ಲಿ ತೊಡಗಿದ ಸರ್ಕಾರಿ ಸಿಬ್ಬಂದಿ ಹಾಗೂ ನೀರು ಬಳಕೆದಾರರ ನಿರ್ವಹಣಾ ಸಾಮರ್ಥ್ಯವನ್ನು ತರಬೇತಿ ನೀಡುವುದರೊಂದಿಗೆ ಹೆಚ್ಚಿಸಬೇಕಾಗಿದೆ. ಈ ಕೆಲಸವನ್ನು ನಿರ್ವಹಿಸಲು ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ) ಯು ದಿನಾಂಕ: ೧೨-೦೫-೧೯೮೬ರಂದು ಧಾರವಾಡದಲ್ಲಿ ಚಟುವಟಿಕೆಗಳನ್ನು ಪ್ರಾರಂಭಿಸಿತು. ವಾಲ್ಮಿ ಸಂಸ್ಥೆಯನ್ನು ಕರ್ನಾಟಕ ಸೊಸೈಟೀಸ್ ನೋಂದಣಿ ಕಾಯ್ದೆ ೧೯೬೦ ರಡಿಯಲ್ಲಿ ದಿನಾಂಕ: ೧೬-೬-೧೯೮೬ ರಂದು ನೋಂದಾಯಿಸಲಾಯಿತು.

ತರಬೇತಿಗಳನ್ನು ಏರ್ಪಡಿಸುವದು; ತಾಂತ್ರಿಕ ಸಹಾಯ ನೀಡುವುದು; ಸರ್ಕಾರಕ್ಕೆ ಕಾನೂನು, ನೀತಿ, ಸಾಂಸ್ಥಿಕ ಹಾಗೂ ನಿಯಮಗಳ ಬದಲಾವಣೆಗಳ ಬಗ್ಗೆ ಸಲಹೆ ನೀಡುವುದು; ಇತರ ಸಂಸ್ಥೆಗಳ ಸಹಯೋಗದಿಂದ ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸುವುದು, ವಿಶೇಷ ಅಧ್ಯಯನಗಳನ್ನು ಕೈಗೊಂಡು ವರದಿಗಳನ್ನು ಪ್ರಕಟಿಸುವುದು ವಾಲ್ಮಿ ಸಂಸ್ಥೆಯ ಚಟುವಟಿಕೆಗಳಾಗಿವೆ.

ತರಬೇತಿ: ರಾಜ್ಯದ ಜಲ ನೀತಿ ಹಾಗೂ ನೀರಾವರಿ ವಲಯದಲ್ಲಿ ಸುಧಾರಣೆಗಳ ಅನುಷ್ಠಾನಕ್ಕೆ ಅವಶ್ಯವಿರುವ ತರಬೇತಿ ನೀಡುವುದಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ. ನೀರಾವರಿ ನಿರ್ವಹಣೆಯಲ್ಲಿ ರೈತರ ಪಾಲ್ಗೊಳುವಿಕೆ (ಪಾರ್ಟಿಸಿಪೇಟರಿ ಇರಿಗೇಶನ್ ಮ್ಯಾನೇಜಮೆಂಟ್ ಅಥವಾ ಪಿ.ಆಯ್.ಎಂ), ನೀರಿನ ನಿರ್ವಹಣೆ ಹಾಗೂ ನೀರಾವರಿಗಾಗಿ ಭೂಮಿಯನ್ನು ಅಭಿವೃದ್ಧಿ ಪಡಿಸುವುದಕ್ಕೆ ಸಂಬಂಧಪಟ್ಟ ವಿಷಯಗಳ  ಮೇಲೆ ತರಬೇತಿ ಚಟುವಟಿಕೆಗಳನ್ನು ಏರ್ಪಡಿಸಲಾಗಿದೆ.  ಹೆಚ್ಚಿನ ಸಂಪನ್ಮೂಲಗಳನ್ನು ಕ್ರೋಢಿಕರಿಸಿ ಕೃಷ್ಣ ಮೇಲ್ದಂಡೆ ಯೋಜನೆಯ ಕೆಲಸಗಳನ್ನು ತ್ವರಿತಗೊಳಿಸಲು ೧೯ ಆಗಸ್ಟ್ ೧೯೯೪ ರಂದು ಕೃಷ್ಣ ಭಾಗ್ಯ ಜಲ ನಿಗಮವನ್ನು ಕಂಪನಿ ಕಾಯ್ದೆ ೧೯೫೬ ರಡಿ ಸ್ಥಾಪಿಸಲಾಗಿದೆ. ಕೃಷ್ಣ ಭಾಗ್ಯ ಜಲ ನಿಗಮ ಕರ್ನಾಟಕ ಸರ್ಕಾರದ ಪೂರ್ಣ ಒಡೆತನದಲ್ಲಿ ಇದ್ದು, ಯೋಜನೆಗೆ ಬೇಕಾಗುವ ಎಲ್ಲಾ ಸಂಪನ್ಮೂಲಗಳನ್ನು, Estimation, Planning, Investigationಗಳ ಮತ್ತು ಕಾಲುವೆಯ ಉಸ್ತುವಾರಿ ಕೆಲಸಗಳನ್ನು ನೋಡಿಕೊಳ್ಳುತ್ತದೆ. ಅದೂ ಅಲ್ಲದೇ, ಮೇಲ್ಕಂಡ ಅಣೆಕಟ್ಟಿನಿಂದ ಉದ್ಭವಿಸುವ ಪುನರ್ ವಸತಿ ಮತ್ತು ಪುನರ್ ನಿರ್ಮಾಣದ  ಕೆಲಸಗಳನ್ನು ಕೃಷ್ಣ ಭಾಗ್ಯ ಜಲ ನಿಗಮ ಕೈಗೆತ್ತಿಕೊಂಡಿದೆ. ನಿಗಮಕ್ಕೆ ರೈತರು, ನೀರು ಬಳಕೆದಾರರ ಸಹಕಾರ ಸಂಘಗಳು, ಪುರಸಭೆ, ನಗರಸಭೆ ಮತ್ತುಕೈಗಾರಿಕೆಗಳಿಗೆ ನೀರನ್ನು ಒದಗಿಸಿ ಅವರಿಗಂದ ನೀರಿನ ದರವನ್ನು ಸಂಗ್ರಹಿಸಲು ಅಧಿಕಾರವಿರುತ್ತದೆ. ಮಾರ್ಚ್ ೨೦೧೧ರ ವರೆಗೆ ಕೃಷ್ಣ ಮೇಲ್ದಂಡೆ ಯೋಜನೆ ಕಾಮಗಾರಿ ಹಾಗೂ ಸಿಬ್ಬಂದಿ ವೆಚ್ಚಕ್ಕಾಗಿ ರೂ ೧೦,೬೭೫.೬೮ ಕೋಟಿಗಳು ಖರ್ಚಾಗಿರುತ್ತದೆ (ಸಾಲ ಮೇಲುಸ್ತುವಾರಿ ಹೊರತುಪಡಿಸಿ). ನಿಗಧಿತ ೬.೨೨ ಲಕ್ಷ ಹೆಕ್ಟೇರ್ ನೀರಾವರಿ ಸಾಮರ್ಥ್ಯದ ಪೈಕಿ ಮಾರ್ಚ್ ೨೦೧೧ರ ಅಂತ್ಯಕ್ಕೆ ೬.೦೬ ಲಕ್ಷ ಹೆಕ್ಟೆರ್ ಕ್ಷೇತ್ರದ ನೀರಾವರಿ ಸಾಮರ್ಥ್ಯ ಕಲ್ಪಿಸಲಾಗಿರುತ್ತದೆ.

ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ., ಅಣೆಕಟ್ಟು ವಲಯ, ಆಲಮಟ್ಟಿ

ಈ ವಲಯವು ದಿನಾಂಕ: ೩೦-೦೧-೧೯೭೭ ರಂದು ಆಲಮಟ್ಟಿಯಲ್ಲಿ ಪ್ರಾರಂಭವಾಯಿತು. ಈ ವಲಯದಲ್ಲಿ ಒಂದು ವೃತ್ತ, ಆರು ವಿಭಾಗಗಳು ಮತ್ತು ಇಪ್ಪತ್ತು ಉಪ ವಿಭಾಗಗಳು ಹಾಗೂ ಹಿರಿಯ ಆರೋಗ್ಯಾಧಿಕಾರಿಗಳು (ಪ್ರಥಮ ದರ್ಜೆ) ಅದರ ವ್ಯಾಪ್ತಿಯಲ್ಲಿ ನಾಲ್ಕು ಮಲೇರಿಯಾ ನಿಯಂತ್ರಣ  ಘಟಕಗಳು ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ವಿಭಾಗ, ಆಲಮಟ್ಟಿ ಮತ್ತು ಅದರ ಅಡಿಯಲ್ಲಿ ಮೂರು ಉಪವಿಭಾಗಗಳು, ಕಾರ್ಯ ನಿರ್ವಹಿಸುತ್ತವೆ ಹಾಗೂ ಪ್ರಧಾನ ಮುಖ್ಯ ಲೆಕ್ಕಾಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಆಲಮಟ್ಟಿ ಅಣೆಕಟ್ಟು, ಏತ ನೀರಾವರಿ ಯೋಜನೆಗಳಾದ ಆಲಮಟ್ಟಿ ಎಡದಂಡೆ  ಕಾಲುವೆ, ಆಲಮಟ್ಟಿ ಬಲದಂಡೆ ಕಾಲುವೆ, ಮುಳವಾಡ ಏತ ನೀರಾವರಿ ಯೋಜನೆ, ಮರೋಳ ಏತ ನೀರಾವರಿ ಯೋಜನೆ, ತಿಮ್ಮಾಪುರ ಏತ ನೀರಾವರಿ ಯೋಜನೆ, ತೆಗ್ಗಿ-ಸಿದ್ದಾಪುರ ಏತ ನೀರಾವರಿ ಯೋಜನೆ, ಸೊನ್ನೆ ಹಾಗೂ ರೊಳ್ಳಿ-ಮನ್ನಿಕೇರಿ ಏತ ನಿರಾವರಿ,ಚಿಮ್ಮಲಗಿ ಏತ ನೀರಾವರಿ ಯೋಜನೆ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಡಿ ಕೆರೆ ತುಂಬುವ ಯೋಜನೆ ಹಾಗೂ ಆಲಮಟ್ಟಿ ಅಣೆಕಟ್ಟು ಕೆಳಭಾಗದಲ್ಲಿ ಉದ್ಯಾನವನ ಅಭಿವೃದ್ಧಿ ಕಾಮಗಾರಿಗಳು ಈ ವಲಯದ ವ್ಯಾಪ್ತಿಯಡಿ ಬರುತ್ತವೆ.

ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ., ಕಾರ್ಯಾಚರಣೆ ಮತ್ತು ನಿರ್ವಹಣೆ ವಲಯ, ನಾರಾಯಣಪುರ

ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ ದಡಿಯಲ್ಲಿ ಈಗಾಗಲೇ ನೀರಾವರಿಗಾಗಿ ಅಧಿಸೂಚಿತವಾಗಿರುವ ಕ್ಷೇತ್ರವನ್ನು ಹಾಗೂ ಮುಂದಿರುವ ಹಂತಗಳಲ್ಲಿ ನೀರಾವರಿಗೊಳಪಡುವ ಕ್ಷೇತ್ರದ ತೀವ್ರತೆಯನ್ನು ಪರಿಗಣಿಸಿ ಕಾರ್ಯಾಚರಣೆ ಮತ್ತು ನಿರ್ವಹಣೆಯ ಉಸ್ತುವಾರಿಗಾಗಿ ಪ್ರತ್ಯೇಕ ವಲಯವನ್ನು ರಚಿಸುವ ಬಗ್ಗೆ ಸರಕಾರದ ಆದೇಶದ ಮುಖಾಂತರ ಮಂಜೂರಾತಿ ನೀಡಲಾಗಿದೆ. ಈ ಆದೇಶದನ್ವಯ ದಿನಾಂಕ: ೦೩-೦೧-೧೯೯೨ ರಂದು ಮುಖ್ಯ ಅಭಿಯಂತರವರ ಕಾರ್ಯಾಲಯ ಕಾರ್ಯಾಚರಣೆ ಮತ್ತು ನಿರ್ವಹಣೆ ವಲಯ, ನೀರಾವರಿ ಇಲಾಖೆ ಕೃಷ್ಣ ಮೇಲ್ದಂಡೆ ಯೋಜನೆ ನಾರಾಯಣಪೂರದಲ್ಲಿ ಅಸ್ತಿತ್ವಕ್ಕೆ ಬಂದಿತು. ದಿನಾಂಕ: ೧೫-೧೧-೧೯೯೫ ರಿಂದ ಈ ವಲಯವು ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತದಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಈ ವಲಯದ ವ್ಯಾಪ್ತಿಯಲ್ಲಿ ಒಂದು ವೃತ್ತ ಕಛೇರಿ, ನಾಲ್ಕು ವಿಭಾಗ ಕಛೇರಿಗಳು ಹಾಗೂ ಹನ್ನೆರಡು ಉಪ-ವಿಭಾಗ ಕಛೇರಿಗಳು ಕಾರ್ಯ ನಿರ್ವಹಿಸುತ್ತಿರುವವು. ಕೃಷ್ಣ ಮೇಲ್ದಂಡೆ ಯೋಜನೆಯ ಘಟ್ಟ-೧ ರಡಿಯ ಒಟ್ಟು ೪.೨೫ ಲಕ್ಷ ಹೆಕ್ಟೇರ್ ಕ್ಷೇತ್ರಕ್ಕೆ ನೀರು ನಿರ್ವಹಣೆ ಉಸ್ತುವಾರಿಯು ಈ ವಲಯದ ಅಧೀನಕ್ಕೆ ಬರುತ್ತದೆ. ಯೋಜನೆಯು ಪ್ರಗತಿಗೊಂಡಂತೆ ನೀರಾವರಿಗೆ ಒಳಪಡುವ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.

ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕು, ಯಾದಗಿರಿ ಜಿಲ್ಲೆಯ ಶೋರಾಪುರ ಮತ್ತು ಶಹಾಪುರ ತಾಲೂಕುಗಳು ಹಾಗೂ ರಾಯಚೂರು ಜಿಲ್ಲೆಯ ಲಿಂಗಸುಗೂರ ಮತ್ತು ದೇವದುರ್ಗ ತಾಲೂಕುಗಳಡಿ ಈ ಯೋಜಿತ ಕ್ಷೇತ್ರವು ಒಳಪಟ್ಟಿರುತ್ತದೆ.

ಮೇಲ್ದಂಡೆ ಯೋಜನೆ ಕಾಲುವೆ ವಲಯ-೨, ಕೆಂಭಾವಿಯು

ಸರ್ಕಾರದ ಆದೇಶದ ಪ್ರಕಾರ ದಿನಾಂಕ: ೦೧-೧೦-೧೯೮೬ ರಿಂದ ಪ್ರಾರಂಭವಾಯಿತು ಹಾಗೂ ಇಂಡಿ ಶಾಖಾ ಕಾಲುವೆ, ಮುಡಬಾಳ ಶಾಖಾ ಕಾಲುವೆ ಕಾಮಗಾರಿಗಳನ್ನೊಳಗೊಂಡಿತ್ತು. ತರುವಾಯ ಸರ್ಕಾರದ ಆದೇಶ  ಪ್ರಕಾರ ಮುಡಬಾಳ ಶಾಖಾ ಕಾಲುವೆ ಕಾಮಗಾರಿಗಳನ್ನು ಕಾಲುವೆ ವಲಯ-೧, ಭೀಮರಾಯನಗುಡಿ ಇವರಿಗೆ ವರ್ಗಾಯಿಸಲಾಯಿತು ಹಾಗೂ ಅಚ್ವುಕಟ್ಟು ರಸ್ತೆ ಕಾಮಗಾರಿಗಳನ್ನು ಈ ವಲಯಕ್ಕೆ ವರ್ಗಾಯಿಸಲಾಯಿತು. ಸದ್ಯಕ್ಕೆ ಈ ವಲಯದ ವ್ಯಾಪ್ತಿಗೆ ಇಂಡಿ ಶಾಖಾ ಕಾಲುವೆ ಕಿ.ಮೀ ೧ ರಿಂದ ೧೭೨, ವಿತರಣಾ ಕಾಲುವೆ ೧ ರಿಂದ ೪೬, ಇಂಡಿ ಏತ ನೀರಾವರಿ ಕಾಲುವೆ ಕಿ.ಮೀ ೧ ರಿಂದ ೧೪೭, ಮತ್ತು ಇಂಡಿ ಶಾಖಾ ಕಾಲುವೆಯ ಅಚ್ಚುಕಟ್ಟಿನಲ್ಲಿ ಬರುವ ಅಚ್ಚುಕಟ್ಟು ರಸ್ತೆ ಕಾಮಗಾರಿಗಳು ಬರುತ್ತವೆ.

ಬಾಗಲಕೋಟ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ,

ಬಾಗಲಕೋಟ :ಕೃಷ್ಣ ಮೇಲ್ದಂಡೆ ಯೋಜನೆಯ ಅಡಿಯಲ್ಲಿ ನಿರ್ಮಿಸಲಾಗುತ್ತಿರುವ ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಬಾಗಲಕೋಟ ನಗರದ ಸುಮಾರು ಮುಕ್ಕಾಲು ಭಾಗ ೫೨೪.೨೫೬ ಮೀ.ನಲ್ಲಿ ಮುಳುಗಡೆಯಾಗುವುದು. ಬಾಗಲಕೋಟ ಪಟ್ಟಣ ಅಭಿವೃದ್ಧಿ ಪ್ರಾಧಿಕಾರವು ಮುಳುಗಡೆಯಾಗುವ ಬಾಗಲಕೋಟ ಪಟ್ಟಣದ ಸ್ಥಳಾಂತರ ಹಾಗೂ ಪುನರ್ ನಿರ್ಮಾಣಕ್ಕಾಗಿ ೪,೫೦೦ ವರೆಗೆ ಜಮೀನನ್ನು  ಸ್ವಾಧೀನಪಡಿಸಿ ಕೊಂಡಿರುತ್ತದೆ. ಆಲಮಟ್ಟಿ ಆಣೆಕಟ್ಟೆಯಲ್ಲಿ ೫೧೯.೬೦ ಮೀ ನೀರು ಸಂಗ್ರಹವಾದಾಗ ಬಾಗಲಕೋಟ ಶಹರದಲ್ಲಿ ೫೨೦.೧೦ ಮೀ.ವರೆಗೆ ಹಿನ್ನೀರು ವ್ಯಾಪಿಸುತ್ತದೆ.

ಕರ್ನಾಟಕ ನೀರಾವರಿ ನಿಗಮ ನಿಯಮಿತ

ಮುಖ್ಯ ಇಂಜಿನಿಯರ್, ನೀರಾವರಿ (ಉ) ವಲಯ, ಬೆಳಗಾವಿ, ಇವರ ವ್ಯಾಪ್ತಿಯಲ್ಲಿ ಬರುವ ಯೋಜನೆಗಳು ಸರ್ಕಾರಿ ಆದೇಶ  ಅನುಗುಣವಾಗಿ ನೀರಾವರಿ (ಉತ್ತರ) ವಲಯವು ದಿನಾಂಕ: ೧೦-೦೮-೧೯೬೭ ರಂದು ಅಸ್ತಿತ್ವದಲ್ಲಿ ಬಂದಿತು. ಕರ್ನಾಟಕ ರಾಜ್ಯದ ಉತ್ತರ ವಲಯದ ನೀರಾವರಿ ಯೋಜನೆಗಳಿಗಾಗಿ ವಿಭಜಿತ ಪ್ರಮಾಣದಲ್ಲಿ ಹೆಚ್ಚಿನ ಮೊತ್ತವನ್ನು ಕಲ್ಪಿಸಿದ್ದರಿಂದ ಯೋಜನೆಗಳನ್ನು ತ್ವರಿತ ಗತಿಯಿಂದ ಪೂರ್ಣಗೊಳಿಸುವ ಉದ್ದೇಶವನ್ನು ಇಟ್ಟಿಕೊಂಡು ನೀರಾವರಿ (ಉತ್ತರ) ವಲಯವನ್ನು ರಚಿಸಲಾಯಿತು.

ಪ್ರಗತಿಯಲ್ಲಿರುವ ಯೋಜನೆಗಳು

೧. ಘಟಪ್ರಭಾ ನೀರಾವರಿ ಯೋಜನೆ

೨. ಹಿಪ್ಪರಗಿ ನೀರಾವರಿ ಯೋಜನೆ

೩. ಮಾರ್ಕಂಡೇಯ ಜಲಾಶಯ ಯೋಜನೆ

೪. ದೂಧಗಂಗಾ ನೀರಾವರಿ ಯೋಜನೆ

೫. ಹಿರಣ್ಯಕೇಶಿ ನದಿಯಿಂದ ಘ.ಬ.ದಂ.ಕಾಲುವೆಗೆ ನೀರೆತ್ತುವುದು

೬. ಬಳ್ಳಾರಿ ನಾಲಾ ಯೋಜನೆ

೭. ಶ್ರೀ ರಾಮೇಶ್ವರ ಏತ ನೀರಾವರಿ ಯೋಜನೆ

೮. ಕಿಣಯೇ ನೀರಾವರಿ ಯೋಜನೆ

ಈ ಯೋಜನೆಗಳಲ್ಲಿ ಮಾರ್ಕಂಡೇಯ ಯೋಜನೆಯನ್ನು ಸುವರ್ಣ ಕರ್ನಾಟಕ ವರ್ಷದಲ್ಲಿ ರಾಷ್ಟ್ರಕ್ಕೆ ಸಮರ್ಪಿಸಲಾಗಿದೆ. ಇದಲ್ಲದೇ ಉಳಿದ ಯೋಜನೆಗಳು ವಿವಿಧ ಹಂತದಲ್ಲಿವೆ. ಮೇಲಿನ ಯೋಜನೆಗಳಡಿ ಇದುವರೆವಿಗೂ ೩,೫೩,೨೮೪.೪೩ ಹೆ. ನೀರಾವರಿ ಸಾಮರ್ಥ್ಯ ಕಲ್ಪಿಸಲಾಗಿದೆ. ಪ್ರಾರಂಭದಿಂದ ಮೇಲಿನ ಯೋಜನೆಗಳಿಗೆ ರೂ ೨,೯೦೦.೯೮೫ ಗಳನ್ನು ಮಾರ್ಚ್ ೨೦೧೧ ಅಂತ್ಯದವರೆಗೆ ವೆಚ್ಚ ಮಾಡಲಾಗಿದೆ.

ಮುಖ್ಯ ಇಂಜಿನಿಯರ್, ಮಲಪ್ರಭಾ ಯೋಜನಾ ವಲಯ ಧಾರವಾಡ, ಇವರ ವ್ಯಾಪ್ತಿಯಲ್ಲಿ ಬರುವ ಯೋಜನೆಗಳು.

ಸರ್ಕಾರಿ ಆದೇಶ ಅನುಗುಣವಾಗಿ ನೀರಾವರಿ ( ಉತ್ತರ ) ವಲಯವು ದಿನಾಂಕ: ೧೦-೦೮-೧೯೬೭ ರಂದು ಅಸ್ತಿತ್ವದಲ್ಲಿ ಬಂದಿತು. ಕರ್ನಾಟಕ ರಾಜ್ಯದ ಉತ್ತರ ವಲಯದ ನೀರಾವರಿ ಯೋಜನೆಗಳಿಗಾಗಿ ವಿಭಜಿತ ಪ್ರಮಾಣದಲ್ಲಿ ಹೆಚ್ಚಿನ ಮೊತ್ತವನ್ನು ಕಲ್ಪಿಸಿದ್ದರಿಂದ ಯೋಜನೆಗಳನ್ನು ತ್ವರಿತ ಗತಿಯಿಂದ ಪೂರ್ಣಗೊಳಿಸುವ  ದ್ದೇಶವನ್ನು ಇಟ್ಟುಕೊಂಡು ಮಲಪ್ರಾಭಾ ಯೋಜನಾ ವಲಯವನ್ನು ರಚಿಸಲಾಯಿತು.

ಪ್ರಗತಿಯಲ್ಲಿರುವ ಯೋಜನೆಗಳು

೧. ಮಲಪ್ರಭಾ

೨. ಹರಿನಾಲಾ

೩. ಕಳಸಾನಾಲಾ ಮತ್ತು ಭಂದೂರು ನಾಲಾ ಯೋಜನೆಗಳು

೪. ಜವಳುಹಳ್ಳ ಏತ ನೀರಾವರಿ ಯೋಜನೆ*

೫. ಬೆಣ್ಣಿಹಳ್ಳ ಏತ ನೀರಾವರಿ ಯೋಜನೆಗಳು

೬. ಕೊಣ್ಣೂರು ಏತ ನೀರಾವರಿ ಯೋಜನೆ*

೭. ಕೊಳಚಿ ಏತ ನೀರಾವರಿ ಯೋಜನೆ*

೮. ಶಿಗ್ಗಾಂವಿ ಏತ ನೀರಾವರಿ ಯೋಜನೆ

(*) ಮಲಪ್ರಭಾ ಯೋಜನೆಯ ಬಲದಂಡೆ ನಾಲೆಯಲ್ಲಿನ ಕುಂಠಿತ ನೀರಾವರಿ ಕ್ಷೇತ್ರಕ್ಕೆ ಪೂರಕ ನೀರಾವರಿ ವ್ಯವಸ್ಥೆಗಾಗಿ.

ಮೇಲಿನ ಯೋಜನೆಗಳಲ್ಲಿ ಹರಿನಾಲಾ ಯೋಜನೆ ಪೂರ್ಣಗೊಂಡಿರುತ್ತದೆ. ಇದಲ್ಲದೇ ಉಳಿದ ಯೋಜನೆಗಳು ವಿವಿಧ ಹಂತದಲ್ಲಿವೆ. ಮೇಲಿನ ಯೋಜನೆಗಳಡಿ ಇದುವರೆವಿಗೂ ೨,೧೫,೫೮೯ ಹೆ. ನೀರಾವರಿ ಸಾಮರ್ಥ್ಯ ಕಲ್ಪಿಸಲಾಗಿದೆ. ಪ್ರಾರಂಭದಿಂದ ಮೇಲಿನ ಯೋಜನೆಗಳಿಗೆ ೧,೧೬೮.೯೯ ಕೋಟಿ ರೂ.ಗಳನ್ನು ಮಾರ್ಚ್ ೨೦೧೧ ರ ಅಂತ್ಯದವರೆಗೆ ವೆಚ್ಚ ಮಾಡಲಾಗಿದೆ.

ಮುಖ್ಯ ಇಂಜಿನಿಯರ್, ನೀರಾವರಿ ಕೇಂದ್ರ ವಲಯಮುನಿರಾಬಾದ್, ಇವರ ವ್ಯಾಪ್ತಿಯಲ್ಲಿ ಬರುವ ಯೋಜನೆಗಳು

ಸಿಂಗಟಾಲೂರು ಏತ ನೀರಾವರಿ ಯೋಜನೆಯಲ್ಲಿ ಗದಗ ಜಿಲ್ಲೆಯ ಮುಂಡರಾಗಿ ತಾಲ್ಲೂಕಿನ ಹಮ್ಮಿಗಿ ಗ್ರಾಮದ ಬಳಿ ತುಂಗಭದ್ರಾ ನದಿಗೆ ಬ್ಯಾರೇಜ್ ಹಾಗೂ ೧,೨೦,೨೩೬ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯವನ್ನು ೧೮.೫೫ ಟಿ.ಎಂ.ಸಿ ನೀರಿನ ಬಳಕೆಯಿಂದ ಒದಗಿಸಲಾಗುವುದು. (ಬಳ್ಳಾರಿ, ಕೊಪ್ಪಳ, ಗದಗ  ಜಿಲ್ಲೆಯಲ್ಲಿ ಸುಮಾರು ೧,೪೦,೬೭೭ ಎಕರೆ ನೀರಾವರಿ ಕ್ಷೇತ್ರ).

ಮುಖ್ಯ ಇಂಜಿನಿಯರ್, ತುಂಗ ಮೇಲ್ದಂಡೆ ಯೋಜನೆ, ಶಿವಮೊಗ್ಗ, ಇವರ ವ್ಯಾಪ್ತಿಯಲ್ಲಿ ಬರುವ ಯೋಜನೆಗಳು

ತುಂಗಾ ಮೇಲ್ದಂಡೆ ಯೋಜನಾ ವೃತ್ತ, ಶಿವಮೊಗ್ಗ, ಇದರ ವ್ಯಾಪ್ತಿಯಲ್ಲಿ ಬರುವ ಯೋಜನೆಗಳ ವಿವರ ಮುಂದೆ ನೀಡಲಾಗಿದೆ.

೧. ತಂಗಾ ಮೇಲ್ದಂಡೆ ಯೋಜನೆ

೨. ತುಂಗಾ ಏತ ನೀರಾವರಿ ಯೋಜನೆ

೩. ಬಸಾಪುರ ಏತ ನೀರಾವರಿ ಯೋಜನೆ

೪. ಇಟಗಿ-ಸಾಸಲವಾಡ ಏತ ನೀರಾವರಿ ಯೋಜನೆ

೫. ಗುಡ್ಡದಮಲ್ಲಪುರ ಏತ ನೀರಾವರಿ ಯೋಜನೆ

೬. ಭದ್ರಾ ಮೇಲ್ದಂಡೆ ಯೋಜನೆ ಹಂತ-೧ ಮತ್ತು ೨

೭. ಉಬ್ರಾಣಿ-ಅಮೃತಾಪುರ ಸಂಯುಕ್ತ ಏತ ನೀರಾವರಿ ಯೋಜನೆ

೮. ಸನ್ಯಸಿ ಕೊಪ್ಪ ಏತ ನೀರಾವರಿ ಯೋಜನೆ

೯. ದಂಡಾವತಿ ಯೋಜನೆ

೧೦.ಕಲ್ಲುವಡ್ಡಹಳ್ಳ ಕೆರೆ

೧೧. ತಿಳುವಳ್ಳಿ ಏತ ನೀರಾವರಿ ಯೋಜನೆ

೧೨. ರಾಜನಹಳ್ಳಿ ಏತ ನೀರಾವರಿ (ದಾವಣಗೆರೆ ೨೨ ಕೆರೆಗಳು)

೧೩. ನಿದಿಗೆ ಮತ್ತು ಪುರ್ಲೆ ಕೆರೆಗಳು

ಮುಖ್ಯ ಇಂಜಿನಿಯರ್, ಭದ್ರಾ ಮೇಲ್ದಂಡೆ ಯೋಜನಾ ವಲಯ:ಚಿತ್ರದುರ್ಗ, ಇವರ ವ್ಯಾಪ್ತಿಯಲ್ಲಿ ಬರುವ ಯೋಜನೆಗಳು

ಭದ್ರಾ ಮೇಲ್ದಂಡೆ ಯೋಜನೆ ಹಂತ-೧ ಮತ್ತು ೨ : ಈ ಯೋಜನೆಯಲ್ಲಿ ತುಂಗಾ ನದಿಯಿಂದ ೧೫ ಟಿಎಂಸಿ ನೀರನ್ನು ಭದ್ರಾ ಜಲಾಶಯಕ್ಕೆ ಹೊರಳಿಸಿ ಭದ್ರಾ ಜಲಾಶಯದಿಂದ ೨೧.೫ ಟಿಎಂಸಿ ನೀರನ್ನು ಪಂಪ್ ಮಾಡಲು ಉದ್ದೇಶಿಸಿದೆ ಹಾಗೂ ಈ ನೀರಿನ ಸಂಪನ್ಮೂಲವನ್ನು ಭದ್ರಾ ಜಲಾಶಯದ ನಾಲೆ, ತುಂಗಭದ್ರಾ ಎಡದಂಡೆ ನಾಲೆ, ವಿಜಯನಗರ ನಾಲಾ, ಬಲದಂಡೆ ಉನ್ನತಮಟ್ಟದ ನಾಲೆ ಹಾಗೂ ವಿತರಣಾ ನಾಲೆಗಳ ಆಧುನೀಕರಣದಿಂದ ಉಳಿತಾಯ ಮಾಡಿಕೊಳ್ಳಲಾಗುವುದು.

ಚಿತ್ರದುರ್ಗ ಶಾಖಾ ನಾಲೆಯಡಿ ಹೊಸದುರ್ಗ, ಚಿತ್ರದುರ್ಗ ಮತ್ತು ಚಳ್ಳಕೆರೆ ತಾಲೂಕುಗಳ ೧,೦೪,೯೮೯ ಹೆ. ಪ್ರದೇಶಕ್ಕೆ ಮತ್ತು ಕಡೂರು ಹಾಗೂ ತರೀಕೆರೆ ತಾಲೂಕುಗಳ ೨,೨೭೬ ಹೆ. ಪ್ರದೇಶಕ್ಕೆ ಒಟ್ಟು ೧,೦೭,೨೬೫ ಹೆ ಪ್ರದೇಶಕ್ಕೆ ೧೫.೯ ಟಿಎಂಸಿ ನೀರು ಬಳಕೆ ಮಾಡಿಕೊಂಡು ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು. ತುಮಕೂರು ಹಾಗೂ ಕೋಲಾರ ಜಿಲ್ಲೆಗಳ ಆಯ್ದ ೧೧೯ ಕೆರೆಗಳು ಮತ್ತು ಚಿಕ್ಕಮಗಳೂರು ಹಾಗೂ ಚಿತ್ರದುರ್ಗ ಜಿಲ್ಲೆಗಳ ೩೭ ಕೆರೆಗಳನ್ನು ಶೇ.೭೫ ರಷ್ಟು ಸಂಗ್ರಹಣಾ ಸಾಮರ್ಥ್ಯವನ್ನು ೫.೬ ಟಿಎಂಸಿ ನೀರಿನ ಬಳಕೆ ಮಾಡಿಕೊಂಡು ಭರ್ತಿ ಮಾಡಲಾಗುವುದು ಹಾಗೂ ಅಂತರ್ಜಲ ವೃದ್ಧಿ ಮತ್ತು ಕುಡಿಯುವ ನೀರಿಗಾಗಿ ಪೂರಕವಾಗುವುದು.

ಮುಖ್ಯ ಇಂಜನಿಯರ್, ವಾರಾಹಿ ಯೋಜನಾ ವಲಯ : ಸಿದ್ದಾಪುರ, ಇವರ ವ್ಯಾಪ್ತಿಯಲ್ಲಿ ಬರುವ ಯೋಜನೆಗಳು

ವಾರಾಹಿ ನೀರಾವರಿ ಯೋಜನೆ : ವಾರಾಹಿ ನೀರಾವರಿ ಯೋಜನೆಯಡಿಯಲ್ಲಿ ಪಶ್ಚಿಮಾಭಿಮುಖವಾಗಿ ಹರಿಯುವ ವಾರಾಹಿ ನದಿಗೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸಿದ್ದಾಪುರದ ಬಳಿ ಹೊರಿಯಬ್ಬೆ ಎಂಬಲ್ಲಿ ಒಂದು ಡೈವರ್ಶನ್ ವಿಯರ್‌ನ್ನು ನಿರ್ಮಿಸಿ ವಾರಾಹಿ ಜಲ ವಿದ್ಯುತ್ ಯೋಜನೆಯ ಟೇಲ್ ರೇಸ್ ನಿಂದ ಪ್ರತಿ ನಿತ್ಯ ಹೊರಬರುವ ೧,೧೦೦ ಕ್ಯೂಸೆಕ್‌ ನೀರನ್ನು ಉಪಯೋಗಿಸಿಕೊಂಡು ಕುಂದಾಪುರ ಮತ್ತು ಉಡುಪಿ ತಾಲೂಕುಗಳ ಒಟ್ಟು ಸುಮಾರು ೧೫,೭೦೨ ಹೆಕ್ಟೇರ್ (೩೮,೮೦೦ ಎಕರೆ) ಪ್ರದೇಶಕ್ಕೆ ನೀರಾವರಿ ಸೌಲಭ್ಯವನ್ನು ಒದಗಿಸುವ ಗುರಿ ಹೊಂದಲಾಗಿದೆ.

ಮುಖ್ಯ ಇಂಜಿನಿಯರ್, ನೀರಾವರಿ ಯೋಜನಾ ವಲಯ ಕಲಬುರಗಿ ಇವರ ವ್ಯಾಪ್ತಿಯಲ್ಲಿ ಬರುವ ಯೋಜನೆಗಳು

ಬೆಣ್ಣೆತೋರಾ ಯೋಜನೆ: ಬೆಣ್ಣೆತೋರಾ ಯೋಜನೆಯು ಒಂದು ಬೃಹದ ನೀರಾವರಿ ಯೋಜನೆಯಾಗಿದೆ. ಸದರಿ ಅಣೆಕಟ್ಟು ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಹೆರೂರ ಗ್ರಾಮದ ಬೆಣ್ಣೆತೋರಾ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. ಸದರಿ ಯೋಜನೆಯ ಎರಡು ಕಾಲುವೆಗಳ ಅಡಿಯಲ್ಲಿ ಕಲಬುರಗಿ ಜಿಲ್ಲೆಯ ೨೦,೨೩೪ ಹೆ. ಪ್ರದೇಶವು ನೀರಾವರಿಗೊಳಪಟ್ಟಿದ್ದು ೫.೭೫ ಟಿ.ಎಂ.ಸಿ. ನೀರನ್ನು ಹರಿಯ ಬಿಡಲಾಗಿದೆ. ಯೋಜನೆಯ ಆಣೆಕಟ್ಟಿನ ಏರಿಯ (ಎಂಬ್ಯಾಂಕ್ ಮೆಂಟ್) ಕೆಲಸ ಹಾಗೂ ಸ್ಟಿಲ್‌ವೇ ಕೆಲಸ ಪೂರ್ಣಗೊಂಡಿದ್ದು ೨೦೦೧ ರಿಂದ ನೀರನ್ನು ಶೇಖರಿಸಲಾಗುತ್ತಿದೆ. 

ಭೀಮಾ ಏತ ನೀರಾವರಿ ಯೋಜನೆ : ಭೀಮಾ ಏತ ನೀರಾವರಿ ಯೋಜನೆ ಅಡಿ ಕಲಬುರಗಿ ಜಿಲ್ಲೆಯ ಅಫಜಲಪೂರ ತಾಲೂಕಿನ ಸೊನ್ನ ಗ್ರಾಮದ ಬಳಿ ಬ್ಯಾರೇಜ್ ನಿರ್ಮಿಸಲಾಗಿದ್ದು ಗೇಟ್ ಅಳವಡಿಸುವುದನ್ನು ಸೇರಿ ಬ್ಯಾರೇಜ್ ಕಾಮಗಾರಿ ಪೂರ್ಣಗೊಂಡಿದೆ. ಇದರಿಂದ ೨೪,೨೯೨ ಹೆ. ಪ್ರದೇಶಕ್ಕೆ ನೀರಾವರಿ ಒದಗಿಸಲು ಉದ್ದೇಶಿಸಲಾಗಿದೆ. ಈ ಯೋಜನೆ ಅಡಿಯಲ್ಲಿ ೬.೦೦ ಟಿ.ಎಂ.ಸಿ. ನೀರಿನ ಬಳಕೆಯಾಗಲಿದೆ.

ಗಂಡೋರಿ ನಾಲಾ ಯೋಜನೆ : ಗಂಡೋರಿ ನಾಲಾ ಯೋಜನೆಯ ಕಲಬುರಗಿ, ಜಿಲ್ಲೆಯ ಒಂದು ಮಧ್ಯಮ ನೀರಾವರಿ ಯೋಜನೆಯಾಗಿದ್ದು, ಬೆಣ್ಣೆತೋರಾ ನದಿಯ ಉಪ ನದಿಯಾದ ಗಂಡೋರಿನಾಲಾಗೆ  ಅಡ್ಡಲಾಗಿ ನಿರ್ಮಿಸಲಾಗಿದೆ. ಮುಂದೆ ಈ ನದಿಯು ಕೃಷ್ಣಕೊಳ್ಳದ ಭೀಮಾ ನದಿಯನ್ನು ಕೂಡಿಕೊಳ್ಳುತ್ತದೆ. ಸದರಿ ಯೋಜನೆಯಡಿಯಲ್ಲಿ ೧.೯೭ ಟಿ.ಎಂ.ಸಿ. ನೀರಿನ ಬಳಕೆಯಾಗುತ್ತದೆ ಹಾಗೂ ೮,೦೯೪ ಹೆಕ್ಟೇರ್  ಪ್ರದೇಶಕ್ಕೆ ನೀರಾವರಿಗೊಳಪಟ್ಟಿದೆ.

ಕೆಳದಂಡೆ ಮುಲ್ಲಾಮಾರಿ ಯೋಜನೆ: ಕೃಷ್ಣ ಕೊಳ್ಳದ ಕಾಗಿಣಾ ನದಿಯ ಉಪನದಿಯಾದ ಮುಲ್ಲಾಮಾರಿ ನದಿಗೆ ಅಡ್ಡಲಾಗಿ ಈ ಮಧ್ಯಮ ನೀರಾವರಿ ಯೋಜನೆಯನ್ನು ನಿರ್ಮಿಸಲಾಗಿದೆ. ಸದರಿ ಯೋಜನೆಯು ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ನಾಗರಾಳ ಗ್ರಾಮದ ಬಳಿಯಲ್ಲಿದ್ದು ಯೋಜನೆಯಡಿ ೨.೬೧ ಟಿ.ಎಂ.ಸಿ. ನೀರು ಬಳಕೆಯಾಗುತ್ತಿದೆ. ೯,೭೧೩ ಹೆಕ್ಟೇರ್ ಪ್ರದೇಶದ ನೀರಾವರಿ ಸಾಮರ್ಥ್ಯವನ್ನು ಹೊಂದಿದೆ.

ಕಾವೇರಿ ನೀರಾವರಿ ನಿಗಮ ನಿಯಮಿತ ಮುಖ್ಯ ಇಂಜಿನಿಯರ್ ನೀರಾವರಿ(ದ) ವಲಯ ಮೈಸೂರು: ಇವರ ವ್ಯಾಪ್ತಿಯಲ್ಲಿ ಬರುವ ಯೋಜನೆಗಳು ಕಾವೇರಿ ನೀರಾವರಿ ನಿಗಮ ನಿಯಮಿತವನ್ನು ಕರ್ನಾಟಕದ ಕಾವೇರಿ ಜಲಾನಯನ ಯೋಜನೆಗಳನ್ನು ತೀವ್ರಗತಿಯಿಂದ ಅನುಷ್ಠಾನಗೊಳಿಸುವ ವಿಶೇಷ ಉದ್ದೇಶಕ್ಕಾಗಿ ಕರ್ನಾಟಕ ಸರ್ಕಾರದಿಂದ ಕಂಪನಿ ಆಕ್ಟ್ ಅಡಿಯಲ್ಲಿ ದಿನಾಂಕ: ೦೩-೦೬-೨೦೦೩ ರಂದು ಸ್ಥಾಪನೆಯಾಗಿದೆ.

ಕರ್ನಾಟಕದ ಒಟ್ಟು ಭೌಗೋಳಿಕ ಪ್ರದೇಶವಾದ ೧,೯೧,೭೯೧ ಚ.ಕಿ.ಮೀ. ನಲ್ಲಿ ಕಾವೇರಿ ಜಲಾನಯನ ಭೌಗೋಳಿಕ ಪ್ರದೇಶವು ೩೪,೨೭೫ ಚ.ಕ.ಮೀ ಆವರಿಸದ್ದು, ಇದು ಶೇ.೧೭.೯೯ ಇರುತ್ತದೆ. ಈ ಜಲಾನಯನ ಪ್ರದೇಶದಲ್ಲಿ ಹರಿಯುವ ನದಿಗಳು-ಹಾರಂಗಿ (೫೦ ಕೆ.ಮೀ), ಹೇಮಾವತಿ (೨೪೫ ಕಿ.ಮೀ), ಲಕ್ಷ್ಮಣ ತೀರ್ಥ (೧೩೧ ಕಿ.ಮೀ), ಕಬಿನಿ (೨೩೦ ಕಿ.ಮೀ), ಶಿಂಷಾ (೨೨೧ ಕಿ.ಮೀ), ಹೇಮಾವತಿ (೨೪೫ ಕಿ.ಮೀ), ಅರ್ಕಾವತಿ (೧೬೧ಕಿ.ಮೀ.) ಹಾಗೂ ಮುಖ್ಯ ನದಿಯಾದ ಕಾವೇರಿ (೩೮ ಕಿ.ಮೀ) ಯಾಗಿವೆ. ಕಾವೇರಿ ಕಣಿವೆಯು ೧೧ ಜಿಲ್ಲೆಗಳಲ್ಲಿ ವ್ಯಾಪಿಸಿಕೊಂಡಿರುತ್ತದೆ. ಕಾವೇರಿ ನೀರಾವರಿ ನಿಗಮ ನಿಯಮಿತದ ಮುಖ್ಯ ಉದ್ದೇಶಗಳು ಕರ್ನಾಟಕ ಸರ್ಕಾರವು ವಹಿಸಿರುವ ಕಾವೇರಿ ಕಣಿವೆಯಲ್ಲಿ ಬರುವ ಏತ ನೀರಾವರಿ, ಸಣ್ಣ ನೀರಾವರಿ ಮತ್ತು ಕಾಡಾ ಕಾಮಗಾರಿಗಳು ಒಳಗೊಂಡಂತೆ ಎಲ್ಲಾ ಪ್ರಗತಿಯಲ್ಲಿರುವ ನೀರಾವರಿ ಯೋಜನೆಗಳನ್ನು ಪೂರ್ತಿಗೊಳಿಸುವುದಾಗಿದೆ.

ಇದಲ್ಲದೆ, ಏತ ನೀರಾವರಿ, ಸಣ್ಣ ನೀರಾವರಿ ಮತ್ತು ಹಾಗೂ ಕಾಡಾ ಯೋಜನೆಗಳನ್ನು ಒಳಗೊಂಡಂತೆ ಎಲ್ಲಾ ನೀರಾವರಿ ಯೋಜನೆಗಳನ್ನು ನಿರ್ವಹಿಸುವ, ನಡೆಸುವ ಹಾಗೂ ಸುಧಾರಿಸುವ (ಅಧುನೀಕರಿಸುವ) ಉದ್ದೇಶವನ್ನು ಕೂಡ ಹೊಂದಿರುತ್ತದೆ. ಕಾವೇರಿ ನೀರಾವರಿ ನಿಗಮ ನಿಯಮಿತದ ವ್ಯಾಪ್ತಿಯಲ್ಲಿ (೧) ನೀರಾವರಿ (ದ) ವಲಯ, ಮೈಸೂರು (೨) ಹೇಮಾವತಿ ನಾಲಾ ವಲಯ, ತುಮಕೂರು ಹಾಗೂ (೩) ಹೇಮಾವತಿ ಯೋಜನಾ ವಲಯ, ಗೊರೂರು ಬರುತ್ತವೆ.

 

 

ಮುಖ್ಯ ಇಂಜಿನಿಯರ್ ಹೇಮಾವತಿ ನಾಲಾ ವಲಯತು ಮಕೂರು : ಇವರ ವ್ಯಾಪ್ತಿಯಲ್ಲಿ ಬರುವ ಯೋಜನೆಗಳು.

ಹೇಮಾವತಿ ನಾಲಾ ವಲಯ- ತುಮಕೂರು : ತುಮಕೂರು ಹೇಮಾವತಿ ನಾಲಾ ವಲಯವು ಸರ್ಕಾರದ

ಪ್ರಕಾರ ಹೇಮಾವತಿ ನಾಲಾ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವ ಸಲುವಾಗಿ ತುಮಕೂರು ಕೇಂದ್ರ ಸ್ಥಾನದಲ್ಲಿ ದಿನಾಂಕ: ೨೩-೦೪-೮೭ ರಿಂದ ಪ್ರಾರಂಭಿಸಿ ಕೆಲಸ ನಿರ್ವಹಿಸುತ್ತಿದೆ. ಹೇಮಾವತಿ ಎಡದಂಡೆ ನಾಲೆಯ ಅಡಿಯಲ್ಲಿ ಬರುವ ವೈ ನಾಲೆ, ತುಮಕೂರು ಶಾಖಾ ನಾಲೆ, ನಾಗಮಂಗಲ ಶಾಖಾ ನಾಲೆ, ಬಾಗೂರು ನವಿಲೆ ಏತ ನೀರಾವರಿ ಯೋಜನೆ ಹಾಗೂ ತುಮಕೂರು ಮತ್ತು ತಿಪಟೂರು ಟೌನ್ ಗಳಿಗೆ ನೀರನ್ನು ಒದಗಿಸುವ ಕಾಮಗಾರಿಗಳನ್ನು ನಿರ್ವಹಿಸಲಾಗುತ್ತಿದೆ. ಈ ವಲಯವು ಹೇಮಾವತಿ ಜಲಾಶಯ ಯೋಜನೆ, ಗೋರೂರು, ಇದರ ಒಂದು ಭಾಗವಾಗಿರುತ್ತದೆ. ಹೇಮಾವತಿ ಯೋಜನೆಯ ಮೂಲ ಅಂದಾಜು ಪಟ್ಟಿ ೧೯೬೭ ರಲ್ಲಿ ರೂ ೧೬.೩೦ ಕೋಟಿಗಳಿಗೆ  ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ೨೦೦೭-೦೮ ನೇ ಸಾಲಿನ ಪರಿಷ್ಕೃತ ಅಂದಾಜು ಮೊತ್ತ ರೂ ೩,೮೭೭ ಕೋಟಿ ಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಇದರಲ್ಲಿ ಹೇಮಾವತಿ ನಾಲಾ ವಲಯ, ತುಮಕೂರಿನ ಅಂದಾಜು ಪಟ್ಟಿ ಮೊತ್ತ ರೂ ೨,೧೨೬ ಕೋಟಿಗಳನ್ನು ಒಳಗೊಂಡಿರುತ್ತದೆ.

 ಮುಖ್ಯ ಇಂಜಿನಿಯರ್, ಹೇಮಾವತಿ ಯೋಜನಾ ವಲಯ, ಗೊರೂರು : ಇವರ ವ್ಯಾಪ್ತಿಯಲ್ಲಿ ಬರುವ ಯೋಜನೆಗಳು

ಹೇಮಾವತಿ ಯೋಜನೆ, ಗೊರೂರು : ಹೇಮಾವತಿ ಯೋಜನೆಯನ್ನು ಹಾಸನ ಜಿಲ್ಲೆ ಹಾಸನ ತಾಲ್ಲೂಕಿನ ಗೊರೂರು ಗ್ರಾಮದ ಹತ್ತಿರ ಹೇಮಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುತ್ತದೆ. ಹೇಮಾವತಿ ಯೋಜನೆಯ ಮೂಲ ಅಂದಾಜು ಪಟ್ಟಿ ೧೯೬೭ ರಲ್ಲಿ ರೂ ೧೬.೩೦ ಕೋಟಿಗಳಿಗೆ  ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ೨೦೦೭-೦೮ನೇ ಸಾಲಿನ ಪರಿಷ್ಕೃತ ಅಂದಾಜು ಮೊತ್ತ ರೂ ೩,೮೭೭ ಕೋಟಿಗಳಿಗೆ  ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಇದು ಹೇಮಾವತಿ ಯೋಜನೆ-ಗೊರೂರಿನ ಅಂದಾಜು ಪಟ್ಟಿ  ಮೊತ್ತ ರೂ ೧,೭೫೧ ಕೋಟಿ ಹಾಗೂ ಹೇಮಾವತಿ ನಾಲಾ ವಲಯ, ತುಮಕೂರಿನ ಅಂದಾಜು ಪಟ್ಟಿ ಮೊತ್ತವಾದ ರೂ. ೨೧೨೬ ಕೋಟಿಗಳನ್ನು ಒಳಗೊಂಡಿರುತ್ತದೆ. ಈ ಯೋಜನೆಯ ಹರಿ ನೀರಾವರಿ ಹಾಗೂ ಏತ ನೀರಾವರಿ ಘಟಕಗಳನ್ನು ಒಳಗೊಂಡಿದೆ. ಈ ಯೋಜನೆಯಿಂದ ಒಟ್ಟು ೫೬.೬೭ ಟಿ.ಎಂ.ಸಿ ನೀರನ್ನು ಉಪಯೋಗಿಸಿಕೊಳ್ಳಲು ನಿಯೋಜಿಸಲಾಗಿದ್ದು, ಇದರಲ್ಲಿ ಹೇಮಾವತಿ ನಾಲಾ ವಲಯ ತುಮಕೂರಿನ ನಿಯೋಜಿತ ೩೦.೯೯ ಟಿಎಂಸಿ ನೀರನ್ನು ಉಪಯೋಗಿಸಿಕೊಳ್ಳುವುದನ್ನು ಒಳಗೊಂಡಿರುತ್ತದೆ. ಆದುದರಿಂದ ಹೇಮಾವತಿ ಯೋಜನೆ ಗೊರೂರಿಗೆ ನಿಯೋಜಿತ ೨೫.೬೮ ಟಿಎಂಸಿ ನೀರು ಉಪಯೋಗಕ್ಕೆ ಲಭ್ಯವಿರುತ್ತದೆ. ಈ ಯೋಜನೆಯ ಗೊರೂರು ವಲಯದಿಂದ ಒಟ್ಟು ೩,೧೦,೯೪೩ ಎಕರೆ (೧,೨೫,೮೩೭ ಹೆ) ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಯೋಜಿಸಲಾಗಿದೆ. ಹಾಸನ ಜಿಲ್ಲೆಯ ಹಾಸನ, ಆಲೂರು, ಅರಕಲಗೂಡು, ಹೊಳೆನರಸೀಪುರ ಮತ್ತು ಚನ್ನರಾಯಪಟ್ಟನ ತಾಲೂಕುಗಳು, ಮಂಡ್ಯ ಜಿಲ್ಲೆಯ ಮಂಡ್ಯ ಕೆ.ಆರ್.ಪೇಟೆ, ಪಾಂಡವಪುರ, ನಾಗಮಂಗಲ ತಾಲೂಕುಗಳು,  ಮೈಸೂರು ಜಿಲ್ಲೆಯ ಕೆ.ಆರ್.ನಗರ ಹಾಗೂ ಕೊಡಗು ಜಿಲ್ಲೆಯ ಸೋಮವಾರ ಪೇಟೆ -ತಾಲೂಕುಗಳು ಈ ಯೋಜನೆಯಿಂದ ನೀರಾವರಿ ಸೌಲಭ್ಯ ಪಡೆಯಲಿವೆ.

ಮುಖ್ಯ ಇಂಜಿನಿಯರ್, ನೀರಾವರಿ ಯೋಜನಾ ವಲಯ, ಕಲಬುರಗಿ : ಇವರ ವ್ಯಾಪ್ತಿಯಲ್ಲಿ ಬರುವ ಯೋಜನೆಗಳು

ಕಾರಂಜಾ ಯೋಜನೆ : ಕಾರಂಜಾ ನೀರಾವರಿ ಯೋಜನೆಯು ಬೀದರ ಜಿಲ್ಲೆಯಲ್ಲಿರುವ ಒಂದು ಬೃಹತ ನೀರಾವರಿ ಯೋಜನೆ ಆಗಿರುತ್ತದೆ. ಈ ಯೋಜನೆಯು ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ಬ್ಯಾಲಹಳ್ಳಿ  ಗ್ರಾಮದ ಗೋದಾವರಿ ಕೊಳ್ಳದ ಮಾಂಜರಾ ನದಿಯ ಕಾರಂಜಾ ಬಳಿ ನಿರ್ಮಿಸಲಾಗಿದೆ. ಈ ಯೋಜನೆಯಡಿಯಲ್ಲಿ ೯.೨೭ ಟಿ.ಎಂ.ಸಿ. ನೀರನ್ನು ಉಪಯೋಗಿಸಲ್ಪಟ್ಟಿದೆ.  ಈ ಯೋಜನೆಯಡಿಯಲ್ಲಿ  ಬೀದರ ಜಿಲ್ಲೆಯ ಭಾಲ್ಕಿ, ಬೀದರ್ ಹಾಗೂ ಹುಮನಾಬಾದ ತಾಲ್ಲೂಕಿನ ಒಟ್ಟು ೨೯೨೨೭ ಹೆಕ್ಟೇರ್ ಪ್ರದೇಶವು ಒಳಗೊಂಡಿರುತ್ತದೆ. ಈ ಯೋಜನೆಗೆ ಕೇಂದ್ರ ನೆರವು ಎ.ಐ.ಬಿ.ಪಿ. ಅಡಿಯಲ್ಲಿ ದೊರೆತಿದೆ.

ಮುಖ್ಯ ಇಂಜಿನಿಯರ್, ನೀರಾವರಿ ಕೇಂದ್ರ ವಲಯ ಮುನಿರಾಬಾದ್ : ಇವರ ವ್ಯಾಪ್ತಿಯಲ್ಲಿ ಬರುವ ಯೋಜನೆಗಳು

ನೀರಾವರಿ ಕೇಂದ್ರ ವಲಯ: ಮುನಿರಾಬಾದ ವ್ಯಾಪ್ತಿಯಲ್ಲಿ ಕನಕನಾಲಾ, ನಾರಿಹಳ್ಳ, ರಾಜೋಳಿಬಂಡಾ, ವಿಜಯನಗರ ಕಾಲುವೆಗಳು, ಹಗರಿಬೊಮ್ಮನಹಳ್ಳಿ ಯೋಜನೆಗಳನ್ನು ಪೂರ್ಣ ಗೊಳಿಸಲಾಗಿದೆ. ತುಂಗಭದ್ರಾ (ಆಧುನೀಕರಣ) ಹಿರೇಹಳ್ಳ, ಮಸ್ಕಿನಾಲಾ ಹಾಗೂ ಸಿಂಗಟಾಲೂರು ಏತ ನೀರಾವರಿ ಯೋಜನೆಗಳು ಪ್ರಗತಿಯಲ್ಲಿವೆ. ತುಂಗಭದ್ರಾ ಯೋಜನೆ ಮೂಲ ಕಾಮಗಾರಿಗಳು ಪೂರ್ಣಗೊಂಡಿವೆ. ಆದರೆ ಎಡದಂಡೆ ನಾಲ ಆಧುನೀಕರಣ ಕಾಮಗರಿಗಳನ್ನು ಪೂರ್ಣಗೊಳಿಸಬೇಕಾಗಿದೆ. ತುಂಗಭದ್ರಾ ಯೋಜನೆ ಈ ಯೋಜನೆಯು ಅಂತರರಾಜ್ಯ ವಿವಿಧೋದ್ದೇಶ ಯೋಜನೆಯಾಗಿದ್ದು, ೧೯೪೫ ರಲ್ಲಿ ಆಗಿನ ಮದ್ರಾಸ್ ಮತ್ತು ಹೈದರಾಬಾದ್ ಸರ್ಕಾರಗಳು ಜಂಟಿಯಾಗಿ ಕೆಲಸವನ್ನು ಪ್ರಾರಂಭಿಸಿ, ತುಂಗಭದ್ರಾ ಅಣೆಕಟ್ಟೆಯನ್ನು ಕೃಷ್ಣ ನದಿಯ ಉಪನದಿಯಾದ ತುಂಗಭದ್ರ ನದಿಗೆ ಅಡ್ಡಲಾಗಿ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಮುದ್ಲಾಪುರ ಹತ್ತಿರ ಕಟ್ಟಲಾಗಿದೆ. ಈ ಯೋಜನೆಯ ಎರಡು ಬದಿಯ ಕಾಲುವೆಗಳಿಂದ ಕರ್ನಾಟಕ ರಾಜ್ಯದ ಬಳ್ಳಾರಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಯ ೩,೬೨,೭೮೫ ಹೆಕ್ಟೇರು ಜಮೀನಿಗೆ ನೀರಾವರಿ ಸೌಲಭ್ಯ ಒದಗಿಸಲು ಉದ್ದೇಶಿಸಲಾಗಿದ್ದು, ನಿಗದಿತ ನೀರಿನ ಬಳಕೆಯ ಪ್ರಮಾಣ ೩,೭೩೬ ದಶಲಕ್ಷ ಘನ ಮೀಟರ್ (೧೩೩.೦೦ ಟಿ.ಎಂ.ಸಿ) ಆಗಿರುತ್ತದೆ. ಈಗ ಇದು ಎರಡು ರಾಜ್ಯ ಸರ್ಕಾರಗಳ (ಆಂಧ್ರ ಪ್ರದೇಶ ಮತ್ತು ಕರ್ನಾಟಕ) ಜಂಟಿ ಯೋಜನೆಯಾಗಿದೆ. ಈ ಅಣೆಕಟ್ಟು ಬುಡದಲ್ಲಿ ಎಡ ಮತ್ತು ಬಲ ಹಾಗೂ ಕಾಲುವೆಗಳ ಸಮತಟ್ಟದಲ್ಲಿ ಹೆಚ್ಚು ವ್ಯತ್ಯಾಸವಿರುವ ಸ್ಥಳಗಳ ಹತ್ತಿರ ವಿದ್ಯುಚ್ಛಕ್ತಿಯನ್ನು ಉತ್ಪಾದಿಸಲಾಗುತ್ತಿದೆ. ಮೇಲೆ ಹೇಳಿರುವ ಅಂಕಿ ಅಂಶಗಳು ಕರ್ನಾಟಕ ರಾಜ್ಯಕ್ಕೆ ಮಾತ್ರ ಸಂಬಂಧಿಸಿದೆ.

ಮುಖ್ಯ ಇಂಜಿನಿಯರ್, ತುಂಗಾ ಮೇಲ್ದಂಡೆ ಯೋಜನೆ, ಶಿವಮೊಗ್ಗ : ಇವರ ವ್ಯಾಪ್ತಿಯಲ್ಲಿ ಬರುವ ಯೋಜನೆಗಳು

ಪ್ರಧಾನ ಇಂಜನಿಯರ್ ತುಂಗಾ ಮೇಲ್ದಂಡೆ ಯೋಜನಾ ವಲಯ : ಕರ್ನಾಟಕ ನೀರಾವರಿ ನಿಗಮ ನಿಯಮಿತ, ಶಿವಮೊಗ್ಗ, ಇವರ ಆಡಳಿತಾತ್ಮಕ ಅದೀನದಲ್ಲಿನ ಭದ್ರಾ ಯೋಜನಾ ವೃತ್ತವು, ಶಿವಮೊಗ್ಗ ತಾಲೂಕಿನ, ಭದ್ರಾ ಜಲಾಶಯ ಯೋಜನಾ ಪ್ರದೇಶದಲ್ಲಿ ೦೭-೧೧-೧೯೬೯ ರಿಂದ ಕಾರ್ಯನಿರ್ವಹಿಸುತ್ತಿದೆ. ಈ ವೃತ್ತದ ವ್ಯಾಪ್ತಿಯಲ್ಲಿ ಮೂರು ವಿಭಾಗೀಯ ಕಛೇರಿಗಳು, ಕಾರ್ಯಪಾಲಕ ಇಂಜನಿಯರ್, ನಂ:೩, ಕಾಲುವೆ ವಿಭಾಗ, ಮಲೆಬೆನ್ನೂರು, ಭದ್ರಾ ಎಡದಂಡೆ ನಾಲೆ, ವಿಭಾಗ ನಂ:೪, ಭದ್ರಾವತಿ ಮತ್ತು ಭದ್ರಾ ನಾಲಾ ವಿಭಾಗ ನಂ:೫ ದಾವಣಗೆರೆ, ಹಾಗೂ ೧೫ ಉಪ ವಿಭಾಗಗಳಿರುತ್ತವೆ.

ಭದ್ರಾ ಯೋಜನಾ ವೃತ್ತ ವ್ಯಾಪ್ತಿಯಲ್ಲಿ ಬರುವ ಯೋಜನೆಗಳು ಈ ಕೆಳಗಿನಂತಿವೆ:

೧. ಭಾರಿ ನೀರಾವರಿ ಯೋಜನೆ

೧) ಭದ್ರಾ ಜಲಾಶಯ

೨) ವಾಣಿ ವಿಲಾಸ ಸಾಗರ ಜಲಾಶಯ

೨. ಮಧ್ಯಮ ನೀರಾವರಿ ಯೋಜನೆ

೧) ಭದ್ರಾ (ಗೊಂದಿ) ಅಣೆಕಟ್ಟು ಯೋಜನೆ

೨) ಜಂಬದಹಳ್ಳ ಜಲಾಶಯ ಯೋಜನೆ

೩) ರಾಣಿಕೆರೆಗೆ ಪೂರಕ ನಾಲಾ ಯೋಜನೆ

೪) ಗಾಯತ್ರಿ ಜಲಾಶಯ ಯೋಜನೆ

೫) ಅಂಬ್ಲಿಗೊಳ ಜಲಾಶಯ ಯೋಜನೆ

೬) ತಿಮ್ಮಾಪುರ ಏತ ನೀರಾವರಿ ಯೋಜನೆ

೭) ಅಂಜನಾಪುರ ಜಲಾಶಯ ಯೋಜನೆ

೮) ಧರ್ಮಾ ಯೋಜನೆ

೯) ತುಂಗಾ ಅಣೆಕಟ್ಟು ಯೋಜನೆ

೧೦) ಕಡುಹಿನಬೈಲು ಏತ ನೀರಾವರಿ ಯೋಜನೆ

೧೧) ಡಿ.ಬಿ.ಕೆರೆ ಪಿಕಪ್ ಯೋಜನೆ

೩. ಕೆರೆಗಳು

೧) ಸೂಳೆಕೆರೆ (ಶಾಂತಿಸಾಗರ)

೨) ಭೀಮಸಮುದ್ರ ಕೆರೆ

೩) ಆಸುಂಡಿ ಕೆರೆ

೪) ಮದಗ-ಮಾಸೂರು ಕೆರೆ

೧). ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಕಾರ್ಯಕ್ರಮ ನೀರಾವರಿ ನಿರ್ವಹಣೇಯು ವಿವಿಧ ರೀತಿಯ ಚಟುವಟಿಕೆಗಳನ್ನು ಒಳಗೊಂಡಿದ್ದು, ಇದರಲ್ಲಿ ಪ್ರಮುಖ ಇಲಾಖೆಗಳಾದ ನೀರಾವರಿ, ಕೃಷಿ, ಸಹಕಾರ  ಹಾಗೂ ತರಬೇತಿ ಮತ್ತು ಸಂಶೋಧನೆ ಚಟುವಟಿಕೆಗಳನ್ನು ನಿರ್ವಹಿಸುತ್ತಿರುವ ಸಂಸ್ಥೆಗಳ ಪಾತ್ರವಿರುತ್ತದೆ. ಈ ದೂರದರ್ಶಿತ್ವದ ರೀತ್ಯ ಕಾಡಾವು ೧೯೭೦ ರಲ್ಲಿ ಆರಂಭಿಸಲಾಗಿದ್ದು, ಮೇಲ್ಕಂಡ ಇಲಾಖೆಗಳ ಮಧ್ಯೆ ವೇಗವರ್ಧಕವಾಗಿ ಕೆಲಸ ನಿರ್ವಹಿಸುತ್ತಿದ್ದು, ಇದರಿಂದಾಗಿ ಸೃಷ್ಟಿಯಾದ ನೀರಾವರಿ ಸಾಮರ್ಥ್ಯ ಹಾಗೂ ಬಳಸಲಾದ ನೀರಾವರಿ ಸಾಮರ್ಥ್ಯದ ನಡುವಿನ ಅಂತರವನ್ನು ಕಡಿಮೆಗೊಳಿಸುವುದು, ಪ್ರತಿ ನೀರು ಹಾಗೂ ಭೂಮಿ ಘಟಕದಲ್ಲಿ ಕೃಷಿ ಉತ್ಪಾದನೆ ಹೆಚ್ಚಿಸುವುದು, ನೀರು ಸಾಗಣಿಕೆ ಪದ್ಧತಿಯಲ್ಲಿ ನಷ್ಟವನ್ನು ಕಡಿಮೆ ಮಾಡುವುದು,  ಜಮೀನಿನ ಮಟ್ಟದಲ್ಲಿ ಸಾಮರ್ಥ್ಯವನ್ನು ಹೆಚ್ಚಿಸುವುದು ಹಾಗೂ ನೀರಿನ ಸಮಾನ ಹಂಚಿಕೆ ಉದ್ದೇಶಗಳನ್ನು ನೆರವೇರಿಸುತ್ತಿದೆ.

ಜಲಾನಯನ ಅಭಿವೃದ್ಧಿ

ಕರ್ನಾಟಕದಲ್ಲಿ ಜಲಾನಯನ ಅಭಿವೃದ್ಧಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತಿದೆ ಏಕೆಂದರೆ, ಸುಮಾರು ಶೇ.೭೫ರಷ್ಟು ಬೆಳೆ ಪ್ರದೇಶವು ಅತಿ ಕಡಿಮೆ ಮತ್ತು ಅನಿಶ್ಚಿತ ಮಳೆಯನ್ನಾಧರಿಸಿದೆ. ರಾಜ್ಯದ ಒಟ್ಟು ಭೌಗೋಳಿಕ ಪ್ರದೇಶವು ೧೯೦.೫೦ ಲಕ್ಷ ಹೆಕ್ಟೇರ್‌ನಷ್ಟಿದ್ದು, ಅದರಲ್ಲಿ ೧೨೯.೭೦ ಲಕ್ಷ ಹೆಕ್ಟೇರು ಜಲಾನಯನ ಅಭಿವೃದ್ಧಿಗೆ ಲಭ್ಯತೆಯಿದೆ. ಇದರಲ್ಲಿ ಸುಮಾರು ೪೨.೬೫ ಲಕ್ಷ ಹೆಕ್ಟೇರ್‌ನಷ್ಟು ಪ್ರದೇಶವನ್ನು ಈಗಾಗಲೇ ಉಪಚರಿಸಲ್ಪಟ್ಟಿದ್ದು (೨೦೦೬-೦೭ರ ಒಳಗೆ), ಇನ್ನು ಮಿಕ್ಕ ಸುಮಾರು ೮೭.೦೫ ಲಕ್ಷ ಹೆಕ್ಟೇರ್‌ನಷ್ಟು ಪ್ರದೇಶವನ್ನು ಜಲಾನಯನ ಅಭಿವೃದ್ಧಿಯಡಿ ಉಪಚರಿಸಲ್ಪಡಬೇಕಿದೆ.

ಕರ್ನಾಟಕದಲ್ಲಿ ಜಲಾನಯನ ಅಭಿವೃದ್ಧಿಯ ಪ್ರಾಮುಖ್ಯತೆ:

ಕರ್ನಾಟಕ ರಾಜ್ಯದ ಬರಪೀಡಿತ ಪ್ರದೇಶಗಳ ಅದರಲ್ಲೂ ಸುಮಾರು ಶೇ. ೭೫ ರಷ್ಟು ಉಳುಮೆ ಯೋಗ್ಯ ಪ್ರದೇಶದ ಭೂ ಸಂಪನ್ಮೂಲಗಳ ನಿರ್ವಹಣೆಯನ್ನು ಸಂಪನ್ಮೂಲ ರಹಿತ ಬಡರೈತರೇ ಮಾಡುತ್ತಿದ್ದಾರೆ. ತೀವ್ರ ಮಣ್ಣಿನ ಕೊಚ್ಚಣೆಯಿಂದ, ಮಣ್ಣು ಮತ್ತು ನೀರಿನ ಸಂಪನ್ಮೂಲಗಳು ಕ್ಷೀಣಿಸುವುದರೊಂದಿಗೆ, ಮಣ್ಣಿನ ಫಲವತ್ತತೆ, ಬೆಳೆ ಇಳುವರಿ ಹಾಗೂ ಅಂತರ್ಜಲ ಮಟ್ಟ ಗಣನೀಯವಾಗಿ ಕುಸಿಯುತ್ತದೆ. ಅರಣ್ಯ ನಾಶ, ಹುಲ್ಲುಗಾವಲಿನ ನಾಶ ಹಾಗೂ ಜೈವಿಕ ಉತ್ಪತ್ತಿಯು ಗಣನೀಯವಾಗಿ ಕ್ಷೀಣಿಸುತ್ತಿದೆ. ರಾಜ್ಯದಲ್ಲಿ ಬೆಳೆಯುತ್ತಿರುವ ಜನ ಹಾಗೂ ಜಾನುವಾರುಗಳ ಸಂಖ್ಯೆಗನುಗುಣವಾಗಿ ಆಹಾರ, ಹುಲ್ಲು ಮತ್ತು  ಉರುವಲಿನ ಅವಶ್ಯಕತೆ ಪೂರೈಸಲು ನಮಗೆ ಉಳಿದುರುವುದೊಂದೇ ದಾರಿ ಎಂದರೆ ಮಳೆಯಾಶ್ರಿತ ಖುಷ್ಕಿ ಪ್ರದೇಶದ ಉತ್ಪಾದನಾ ಸಾಮರ್ಥ್ಯವನ್ನು ಸುಸ್ಥಿರಗೊಳಿಸುವುದು. ಈ ಸುಸ್ಥಿರ ಅಭಿವೃದ್ಧಿಯು ಸೂಕ್ತ ಮಣ್ಣು ಮತ್ತು ನೀರು ಸಂರಕ್ಷಣಾ ತಂತ್ರಜ್ಞಾನ, ಖುಷ್ಕಿ ಹವಮಾನಕ್ಕೆ ಸೂಕ್ತವಾದ ಬೆಳೆ-ತಳಿಗಳ ಅಭಿವೃದ್ಧಿ, ಅತ್ಯುತ್ತಮ ಕೃಷಿ ವಿಸ್ತರಣಾ ಸೇವೆಗಳು ಮತ್ತು ಉತ್ತಮ ಮಾರುಕಟ್ಟೆ, ಸಾಲ ಸೌಲಭ್ಯ ಹಾಗೂ ಉತ್ಪಾದನಾ ಸಾಮಗ್ರಿಗಳ ಲಭ್ಯತೆ ಸೂಕ್ತ ಸಮಯದಲ್ಲಿ ಖುಷ್ಕಿ ಪ್ರದೇಶದ ರೈತರಿಗೆ ಕೊಡುವಂತೆ ಮಾಡಬೇಕು. ನೀರಾವರಿ ಪ್ರದೇಶದ ವಿಸ್ತರಣೆ ಮತ್ತು ಉತ್ಪಾದನಾ ಸಾಮರ್ಥ್ಯವನ್ನು ಪ್ರಸ್ತುತ ಪರಿಸ್ಥಿತಿಯಲ್ಲಿ ಹೆಚ್ಚಿಸುವುದಕ್ಕೆ ಸಾಧ್ಯವಿಲ್ಲ. ಕರ್ನಾಟಕದಲ್ಲಿ ಒಟ್ಟು ೧೦೪.೮೯ ಲಕ್ಷ ಹೆಕ್ಟೇರ್ ಬೆಳೆ ಪ್ರದೇಶದಲ್ಲಿ ವಿವಿಧ ಅಚ್ಚು ಕಟ್ಟು ಹಾಗೂ ಇತರೆ ಮೂಲಗಳಿಂದ ನೀರಾವರಿ ಸಾಮರ್ಥ್ಯವನ್ನು ಶೇ.೫೦ ರವರೆಗೆ ಮಾತ್ರ ವಿಸ್ತರಿಸಬಹುದು. ಖುಷ್ಕಿ ಪ್ರದೇಶ ಸದಾಕಾಲ ಮಳೆಯನ್ನೇ ಅವಲಂಬಿಸಿದೆ. ಆದ್ದರಿಂದ ರಾಜ್ಯದ ಬೆಳೆ ಉತ್ಪಾದನೆಯನ್ನು ಹೆಚ್ಚಿಸಲು, ಖುಷ್ಕಿ ಪ್ರದೇಶದ ನೈಸರ್ಗಿಕ ಸಂಪನ್ಮೂಲಗಳನ್ನು ಜಲಾನಯನ ಅಭಿವೃದ್ಧಿ ಮಾದರಿಯಲ್ಲಿ ಅಭಿವೃದ್ಧಿ ಪಡಿಸಬೇಕು. ಖುಷ್ಕಿ ಪ್ರದೇಶದ ಅಭಿವೃದ್ಧಿಯು ಇಂದಿನ ಪರಿಸ್ಥಿತಿಯಲ್ಲಿ ಅತ್ಯವಶ್ಯಕವಾದುದು, ಏಕೆಂದರೆ, ಶೇ.೪೪ ರಷ್ಟು ಕೃಷಿ ಉತ್ಪಾದನೆಯು ಖುಷ್ಕಿ ಪ್ರದೇಶದಿಂದಲೇ ಬರುತ್ತದೆ. ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ, ಕರ್ನಾಟಕ ರಾಜ್ಯವು ಅತೀ ಹೆಚ್ಚಿನ ಬರಪೀಡಿತ ಪ್ರದೇಶವನ್ನು (ಶೇ.೭೯) ಹೊಂದಿದೆ.

ಇಡೀ ದೇಶದಲ್ಲೇ ರಾಜಸ್ಥಾನವನ್ನು ಬಿಟ್ಟರೆ, ಕರ್ನಾಟಕವು ಖುಷ್ಕಿ ಭೂಮಿಯ ವಿಸ್ತೀರ್ಣದಲ್ಲಿ ೨ನೇ ಸ್ಥಾನದಲ್ಲಿದೆ, ಇದೇ ರೀತಿ ರಾಜಸ್ಥಾನದ ನಂತರ, ಕರ್ನಾಟಕವು ಕಡಿಮೆ ಮಟ್ಟದ ಅಂತರ್ಜಲ (೧೫೪.೨ M.ha.m/yr) ದಲ್ಲೂ ಸಹ ೨ನೇ ಸ್ಥಾನದಲ್ಲಿದೆ. ಜಲಾನಯನ ಪ್ರದೇಶ ಎಂದರೆ ಒಂದು ನಿರ್ದಿಷ್ಟ ಭೂಜಲ ಘಟಕವಾಗಿದ್ದು, ಈ ಪ್ರದೇಶದಲ್ಲಿ ಬಿದ್ದಂತಹ ಮಳೆ ನೀರು ಹಳ್ಳಕೊಳ್ಳಗಳ ಮುಖಾಂತರ ಹರಿದು, ಒಂದು ಸಾಮಾನ್ಯ ಬಿಂದುವಿನ ಮೂಲಕ ಹೊರಹೋಗುವುದು ಎಂದರ್ಥ. ಜಲಾನಯನ ಅಭಿವೃದ್ಧಿ ಪರಿಕಲ್ಪನೆ ಎಂದರೆ, ವಿವಿಧ ಸಂಪನ್ಮೂಲಗಳ (ಭೂಮಿ, ನೀರು, ಸಸ್ಯ, ಪ್ರಾಣಿ, ಮನುಷ್ಯ ಸಂಪತ್ತು) ಸಂರಕ್ಷಣೆ, ಮರುಪೂರಣೆ ಮತ್ತು ವ್ಯವಸ್ಥಿತ ರೀತಿಯ ಬಳಕೆ ಎಂದರ್ಥ. ಜಲಾನಯನ ಅಭಿವೃದ್ಧಿಯು ಪರಿಸರದಲ್ಲಿ ಒಂದು ರೀತಿಯ ಸಮತೋಲನ ಎಂದರೆ ಮನುಷ್ಯ ಮತ್ತು ಪ್ರಾಣಿಗಳ ಹಾಗೂ ನೈಸರ್ಗಿಕ ಸಂಪನ್ಮೂಲಗಳ ವ್ಯವಸ್ಥಿತ ನಿರ್ವಹಣೆ ಹಾಗೂ ಬಳಕೆಯಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ಶ್ರಮಿಸುತ್ತದೆ. ಏಕೆಂದರೆ ಪರಿಸರದ ಅವನತಿಯಲ್ಲಿ ಮನುಷ್ಯನದೇ ಅತೀ ಪ್ರಮುಖ ಪಾತ್ರ, ಆದ್ದರಿಂದ ಜನರ ತಿಳುವಳಿಕೆ ಮಟ್ಟ ಹೆಚ್ಚಿಸುವುದರೊಂದಿಗೆ, ಅವರ ಸಹಭಾಗಿತ್ವದಲ್ಲಿ ಪರಿಸರದ ಸಂರಕ್ಷಣೆಯನ್ನು ಜಲಾನಯನ ಅಭಿವೃದ್ಧಿ ಮಾದರಿಯಲ್ಲಿ ಮಾಡಬೇಕಾಗುತ್ತದೆ.

ಜಲಾನಯನ ಅಭಿವೃದ್ಧಿಯ ಇತಿಹಾಸ: ಸ್ವಾತಂತ್ರ್ಯ ಪೂರ್ವದಲ್ಲಿ: ಮಣ್ಣು ಸಂರಕ್ಷಣೆ ಮತ್ತು ಭೂ ಅಭಿವೃದ್ಧಿ ಚಟುವಟಿಕೆಗಳು ಬಹಳ ಪುರಾತನ ಕಾಲದಿಂದಲೂ ಎಂದರೆ, ಬೇಸಾಯ ಒಂದು ಜೀವನ ಕಲೆ ಎಂದು ಪ್ರಾರಂಭವಾದಾಗಿನಿಂದಲೂ ಬಳಕೆಯಲ್ಲಿರುವವು. ಹಿಂದಿನ ರಾಜ ಮಹಾರಾಜರುಗಳು ಮತ್ತು ಇತರ ಪಾಳೆಗಾರರು ತಮ್ಮ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಹೊಂಡ, ಕಲ್ಯಾಣಿ, ಗೋಕಟ್ಟೆ, ಕೆರೆಗಳನ್ನು  ಕಟ್ಟಿ ಸಾಲು ಮರಗಳನ್ನು ನೆಡುವ ಪದ್ಧತಿಯನ್ನು ಅಳವಡಿಸಿಕೊಂಡಿದ್ದರು. ನಂತರ ಬಂದ ಇಂಗ್ಲಿಷ್‌ ಸರ್ಕಾರವು ಭೂ ಸವಕಳಿ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳುವತ್ತ ಹೆಜ್ಜೆ ಇಟ್ಟಿತು. ಇಂಪೀರಿಯಲ್ ಸರ್ಕಾರ  ಸ್ಥಾಪಿಸಿದ ರಾಯಲ್  ಆಯೋಗವು ದೇಶದಲ್ಲಿಯ ಬರಗಾಲ ನಿವಾರಣೆಗೆ ಅನೇಕ ಪರಿಹಾರ ಕ್ರಮಗಳನ್ನು   ಸಲಹೆ ಮಾಡಿತು. ಈ ಆಯೋಗವು ಶಿಫಾರಸ್ಸು ಮಾಡಿದ ಅನೇಕ ಅಂಶಗಳಲ್ಲಿ ಒಣ ಭೂಮಿ ಅಭಿವೃದ್ಧಿ ಸಂಶೋಧನಾ ಕೇಂದ್ರದ ಸ್ಥಾಪನೆಯು ಅತ್ಯಂತ ಮಹತ್ವದ್ದು. ದೇಶದಲ್ಲಿ ಸ್ಥಾಪನೆಯಾದ ಐದು ಸಂಶೊಧನಾ ಕೇಂದ್ರಗಳಲ್ಲಿ, ಮೂರು ಕೇಂದ್ರಗಳು ಕರ್ನಾಟಕ ರಾಜ್ಯದ ವಿಜಯಪುರ, ಹಗರಿ ಮತ್ತು ರಾಯಚೂರಿನಲ್ಲಿ ಸ್ಥಾಪನೆಯಾದವು. ಈ ಕೇಂದ್ರಗಳಲ್ಲಿ ಮಣ್ಣು ಮತ್ತು ನೀರಿನ ಸಂರಕ್ಷಣೆಯ ಸಂಶೋಧನೆಗೆ ಪ್ರಾಮುಖ್ಯತೆಯನ್ನು ನೀಡಲಾಯಿತು. ಈ ಕೇಂದ್ರಗಳು ಅರೆ ಶುಷ್ಕವಲಯದಲ್ಲಿ ಮಣ್ಣು ಮತ್ತು ನೀರಿನ ಸಂರಕ್ಷಣೆಗಾಗಿ ಉತ್ತಮ ಮತ್ತು ಸಮರ್ಥವಾದ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದವು.

ಸ್ವಾತಂತ್ರ್ಯಾನಂತರದ ಬೆಳವಣಿಗೆ ಈ ಕೆಳಕಂಡಂತಿದೆ.

ಹಂತ-1ಸಾಂಪ್ರದಾಯಿಕ ಮಣ್ಣು ಮತ್ತು ನೀರು ಸಂರಕ್ಷಣೆಯ ಅವಧಿ (೧೯೭೦ರವರೆಗೆ): ಮೊದಲ ಪಂಚವಾರ್ಷಿಕ ಯೋಜನೆಯ (೧೯೫೧-೧೯೫೬) ಅವಧಿಯಲ್ಲಿ ಯೋಜನಾಕಾರರು ಮತ್ತು ವಿಜ್ಞಾನಿಗಳಿಗೆ ದೇಶದಲ್ಲಿರುವ ಮಣ್ಣು ಸವಕಳಿ ಸಮಸ್ಯೆಯ ಕುರಿತು ಅರಿವಿದ್ದಿತು. ಆದರೆ ಈ ಸಮಸ್ಯೆಗೆ ವೈಜ್ಞಾನಿಕ ಪರಿಹಾರೋಪಾಯಗಳು ಲಭ್ಯವಿರಲಿಲ್ಲ. ಆದ್ದರಿಂದ, ಸರ್ಕಾರವು ಮೊದಲೆರಡು ಪಂಚವಾರ್ಷಿಕ ಯೋಜನೆಗಳಲ್ಲಿ ಒಂಬತ್ತು ಮಣ್ಣು ಮತ್ತು ನೀರು ಸಂರಕ್ಷಣಾ ಸಂಶೋಧನಾ ಪ್ರಾತ್ಯಕ್ಷಿಕೆ ಮತ್ತು ತರಬೇತಿ ಕೇಂದ್ರಗಳನ್ನು ಸ್ಥಾಪಿಸಿತು. ಅಂಥ ಒಂದು ಸಂಶೋಧನಾ ಕೇಂದ್ರ ಕರ್ನಾಟಕದ ಬಳ್ಳಾರಿಯಲ್ಲಿ ೧೯೫೪ ರಲ್ಲಿ ಸ್ಥಾಪನೆಯಾಯಿತು. ಈ ಸಂಶೋಧನಾ ಕೇಂದ್ರದ ಮುಖ್ಯ ಕಾರ್ಯವು ಶುಷ್ಕ ಮತ್ತು ಅರೆ ಶುಷ್ಕ ವಲಯಗಳಲ್ಲಿ ಭೂ ಸವಕಳಿಯ ನಿಯಂತ್ರಣ ಹಾಗೂ ಮಳೆಯ ನೀರನ್ನು ಸ್ಥಳದಲ್ಲಿಯೇ ಇಂಗಿಸುವುದರ ಮೇಲೆ ಕೇಂದ್ರೀಕರಿಸುವುದಾಗಿದ್ದಿತು. ೧೯೬೦ ರಲ್ಲಿ ಮೈಸೂರು ಸರ್ಕಾರವು ಮೈಸೂರು ಭೂಸುಧಾರಣಾ  ಕಾಯಿದೆ ಮತ್ತು ನಿಯಮಗಳನ್ನು ಜಾರಿಗೆ ತಂದಿತು. ಮುಂದೆ ಭಾರತ ಸರ್ಕಾರವು ಜಲಾಶಯಗಳಲ್ಲಿ ಹೂಳು ತಡೆಯುವ ಉದ್ದೇಶದಿಂದ ೧೯೬೨ ರಲ್ಲಿ ನದೀಕಣಿವೆ ಯೋಜನೆಯನ್ನು ಪ್ರಾರಂಭಿಸಿತು. ಮಣ್ಣು ಮತ್ತು ನೀರು ಸಂರಕ್ಷಣಾ ಯೋಜನೆಗಳು ಹಾಗೂ ಕಾರ್ಯಕ್ರಮಗಳು ಜನ ಸಹಭಾಗಿತ್ವವಿಲ್ಲದೆ ಹಾಗೂ ಇತರ ಇಲಾಖೆಗಳಾದ ತೋಟಗಾರಿಕೆ, ಅರಣ್ಯ ಮತ್ತು ಪಶು ಸಂಗೋಪನೆಗಳ ಸಹಭಾಗಿತ್ವವಿಲ್ಲದೇ ಕೇವಲ ಸರ್ಕಾರದ ಕಾರ್ಯಕ್ರಮಗಳಾಗಿ ಉಳಿದವು.

ಹಂತ-2: ಮಣ್ಣು ನೀರು ಸಂರಕ್ಷಣೆಗಾಗಿ ಸಮಗ್ರ ಮಾರ್ಗ (೧೯೭೦ರಿಂದ ೧೯೮೫ರವರೆಗೆ): ೧೯೭೦ರ ದಶಕದಲ್ಲಿ ಮಳೆಯಾಶ್ರಿತ ಕೃಷಿಗೆ ಪ್ರಾಮುಖ್ಯತೆಯನ್ನು ಕೊಡಲಾಯಿತು ಮತ್ತು ಇದೆ ಸಮಯದಲ್ಲಿ ಮಳೆ ಆಶ್ರಿತ ಕೃಷಿಯ ಸಮಸ್ಯೆಗಳನ್ನು ಎದುರಿಸಲು ಬಹುವಿಭಾಗೀಯ ಸಮನ್ವಯ ಮಾರ್ಗದ ಕುರಿತು ವಿಚಾರ ಮಾಡಲಾಯಿತು. ಭಾರತೀಯ ಕೃಷಿ ಅನುಸಂಧಾನ ಸಂಸ್ಥೆಯು ೧೯೭೧ರಲ್ಲಿ ಅಖಿಲ ಭಾರತ ಮಳೆಯಾಶ್ರಿತ ಕೃಷಿ ಸಮಗ್ರ ಸಂಶೋಧನಾ ಯೋಜನೆಯನ್ನು ಪ್ರಾರಂಭಿಸಿತು. ಇಂತಹ ಯೋಜನೆಗಳನ್ನು ಕರ್ನಾಟಕದಲ್ಲಿ ಮೂರು ಸ್ಥಳಗಳಲ್ಲಿ ಎಂದರೆ ಜಿಕೆವಿಕೆ-ಗಾಂಧೀ ಕೃಷಿವಿಜ್ಞಾನ ಕೇಂದ್ರ, ಬೆಂಗಳೂರು, ಕೃಷಿ ಸಂಶೋಧನಾ ಕೇಂದ್ರ, ವಿಜಯಪುರ ಮತ್ತು ಕೇಂದ್ರೀಯ ಮಣ್ಣು ಮತ್ತು ನೀರು ಸಂರಕ್ಷಣಾ ಸಂಶೋಧನಾ ಮತ್ತು ತರಬೇತಿ ಸಂಸ್ಥೆ, ಬಳ್ಳಾರಿಯಲ್ಲಿ ಪ್ರಾರಂಭಿಸಲಾಯಿತು. ನಂತರ ಸಂಶೋಧನೆಯ ಫಲಿತಾಂಶಗಳನ್ನು ರೈತರ ಹೂಲಗಳಿಗೆ ತಲುಪಿಸುವ ಉದ್ದೇಶದಿಂದ ಕಾರ್ಯರೂಪಿ ಸಂಶೋಧನಾ ಯೋಜನೆಗಳನ್ನು ಪ್ರಾರಂಭಿಸಲಾಯಿತು. ಕೇಂದ್ರ ಸರ್ಕಾರವು ೧೯೭೩-೭೪ರಲ್ಲಿ ಮೇಲಿಂದ ಮೇಲೆ ಬರಗಾಲಕ್ಕೆ ತುತ್ತಾಗುವ ಪ್ರದೇಶಗಳಲ್ಲಿ ಬರಗಾಲದ ಸಮಸ್ಯೆಗಳನ್ನು ನಿವಾರಿಸುವ ಉದ್ದೇಶದಿಂದ ಬರಗಾಲಪೀಡಿತ ಪ್ರದೇಶಾಭಿವೃದ್ಧಿ ಯೋಜನೆಯನ್ನು (ಡಿಪಿಎಪಿ) ಆರಂಭ ಮಾಡಿತು. ಮರುಭೂಮಿ ಬೆಳೆಯುವುದರಿಂದಾಗುವ ದುಷ್ಪರಿಣಾಮ ಮತ್ತು ಹವಾಮಾನದ ವೈಪರೀತ್ಯವು ಬೆಳೆಗಳ, ಪಶು ಸಂಪತ್ತು ಹಾಗೂ ಮಾನವನ ಮೇಲೆ ಬೀರುವ ಪ್ರಭಾವವನ್ನು ಕಡಿಮೆ ಮಾಡುವ ಉದ್ದೇಶದಿಂದ ರಾಷ್ಟ್ರೀಯ ಕೃಷಿ ಆಯೋಗದ ಶಿಫಾರಸ್ಸಿನಂತೆ (೧೯೭೪ ಮತ್ತು ೧೯೭೬) ೧೯೭೭-೭೮ ರಲ್ಲಿ ಮರುಭೂಮಿ ಅಭಿವೃದ್ಧಿ ಯೋಜನೆ (ಡಿಡಿಪಿ) ಯನ್ನು ಪ್ರಾರಂಭಿಸಲಾಯಿತು. ಈ ಅವಧಿಯಲ್ಲಿ ಬಹು ವಿಭಾಗೀಯ (ಇಲಾಖೆಗಳ) ಸಹಭಾಗಿತ್ವದಿಂದ ಜಲಾನಯನ ಅಭಿವೃದ್ಧಿಗೆ ಚಾಲನೆ ದೊರೆಯಿತಾದರೂ ಮಣ್ಣು ಮತ್ತು ನೀರು ಸಂರಕ್ಷಣೆ ಚಟುವಟಿಕೆಗಳಲ್ಲಿ ಜನ ಸಹಭಾಗಿತ್ವದ ಕೊರತೆ ಇತ್ತು.

ಹಂತ-3

ಜನ ಸಹಭಾಗಿತ್ವ ವಿಚಾರದ ಸಮನ್ವಯತೆ, ಸಮಗ್ರತೆ ಮತ್ತು ಚಾಲನೆಯ ಕ್ರೋಢೀಕರಣ (೧೯೮೫-೨೦೦೦): ಜಲಾನಯನ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಬಹು ಇಲಾಖೆಗಳ ಸಹಕಾರದ ಮಳೆಯಾಶ್ರಿತ ಕೃಷಿ ತಾಂತ್ರಿಕತೆಗಳ ಸಾಮರ್ಥ್ಯವನ್ನು ೨ನೇ ಹಂತದ ಯೋಜನೆಗಳು ತೋರಿಸಿ ಕೊಟ್ಟಿವೆ. ಆದರೆ ವಿವಿಧ ವಿಭಾಗಗಳ ಸಹಕಾರದ ಕೊರತೆಯಿಂದಾಗಿ ಅನುಷ್ಠಾನ ತೊಂದರೆ ಅನುಭವಿಸಿದೆ. ಆದ್ದರಿಂದ, ಇಂತಹ ಸಹಕಾರದ ಕೊರತೆಯನ್ನು ನಿವಾರಿಸುವ ಉದ್ದೇಶದಿಂದ ವಿಶ್ವಬ್ಯಾಂಕ್ ನೆರವಿನ ಯೋಜನೆಯಾದ ಕಬ್ಬಾಳನಾಲಾ ಜಲಾನಯನ ಯೋಜನೆಯನ್ನು ೧೯೮೪ರಲ್ಲಿ ಅನುಷ್ಠಾನ ಗೊಳಿಸಲಾಯಿತು. ಈ ಯೋಜನೆಯಲ್ಲಿ, ಕೃಷಿ, ಅರಣ್ಯ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಒಬ್ಬ ಯೋಜನಾ  ರ್ದೇಶಕರ ಮಾರ್ಗದರ್ಶನ ಮತ್ತು ಮುಂದಾಳತ್ವದಲ್ಲಿ ಕಾರ್ಯ ನಿರ್ವಹಿಸಲಾಯಿತು. ನಂತರ ಕರ್ನಾಟಕ ಸರ್ಕಾರವು ಪ್ರತಿ ಕಂದಾಯ ವಿಭಾಗದಲ್ಲಿ ಒಂದೊಂದು ಖುಷ್ಕಿ ಭೂಮಿ ಅಭಿವೃದ್ಧಿ ಮಂಡಳಿಯನ್ನು (ಡಿಎಲ್‌ಡಿಬಿ) ಪ್ರಾರಂಭಿಸಿ ಪ್ರತಿ ಜಿಲ್ಲೆಯಲ್ಲಿಯೂ ಜಲಾನಯನ ಅಭಿವೃದ್ಧಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ವ್ಯವಸ್ಥೆ ಮಾಡಿತು.

ಆಡಳಿತಾತ್ಮಕ (ಆರ್ಥಿಕ) ಹಾಗೂ ತಾಂತ್ರಿಕ ವಿಷಯಗಳಲ್ಲಿ ಇತರ ಅಭಿವೃದ್ಧಿ ಇಲಾಖೆಗಳೊಂದಿಗೆ ಹಾಗೂ ಯೋಜನಾಕಾರರೊಂದಿಗೆ ಚಟುವಟಿಕೆಗಳ ಸಮನ್ವಯ ಸಾಧಿಸಲು ರಾಜ್ಯಮಟ್ಟದಲ್ಲಿ ಒಬ್ಬ ನಿರ್ದೇಶಕರ ಮುಖ್ಯಸ್ಥಿಕೆಯಲ್ಲಿ ರಾಜ್ಯ ಜಲಾನಯನ ಅಭಿವೃದ್ಧಿ ಕೋಶವನ್ನು ಸ್ಥಾಪಿಸಲಾಯಿತು. ಭಾರತ ಸರ್ಕಾರದಿಂದ ರಾಷ್ಟ್ರೀಯ ಜಲಾನಯನ ಅಭಿವೃದ್ಧಿ ಯೋಜನೆ (ಎನ್ ಡಬ್ಲ್ಯೂಡಿಪಿ- ೧೯೫೮) ಮತ್ತು ಮಳೆಯಾಶ್ರಿತ ರಾಷ್ಟ್ರೀಯ ಜಲಾನಯನ ಅಭಿವೃದ್ಧಿ ಯೋಜನೆಗಳನ್ನು (ಎನ್ ಡಬ್ಲ್ಯೂ ಡಿ ಪಿ ಆರ್ ಎ-೧೯೭೨) ಆರಂಭಿಸಲಾಯಿತು. ೧೯೯೩ರಲ್ಲಿ ಹನುಮಂತರಾವ್ ಸಮಿತಿಯನ್ನು ರಚಿಸಿ ವಿವಿಧ ಪ್ರದೇಶಾಭಿವೃದ್ಧಿ ಕಾರ್ಯಕ್ರಮಗಳಾದ ಡಿಪಿಎಪಿ, ಡಿಡಿಪಿ ಮತ್ತು ಐಡಬ್ಲ್ಯೂಡಿಪಿಗಳನ್ನು ಸಮರ್ಥವಾಗಿ ಅನುಷ್ಠಾನಗೊಳಿಸಲು ಕಾರ್ಯತಂತ್ರ ಯೋಜನೆ ರೂಪಿಸಲು ಕೇಳಿಕೊಳ್ಳಲಾಯಿತು. ಡಾ.ಹನುಮಂತರಾವ್  ಸಮಿತಿಯು ೧೯೯೫ ರಲ್ಲಿ ತಮ್ಮ ವರದಿಯನ್ನು ಸಲ್ಲಿಸಿ ಯೋಜನೆ ಕಾರ್ಯಾನುಷ್ಠಾನ ಮತ್ತು ನಿರ್ವಹಣೆಯ ಹೊಣೆಗಾರಿಕೆಯನ್ನು ಜನರ ಸಂಘಸಂಸ್ಥೆಗಳಿಗೆ ಒಪ್ಪಿಸಲು ಶಿಫಾರಸ್ಸು ಮಾಡಿತು.

ಜಲಾನಯನ ಅಭಿವೃದ್ಧಿ ಮಾರ್ಗವು ಗಣನೀಯವಾದ ಬದಲಾವಣೆ ಹೊಂದಿ ಭದ್ರವಾಯಿತು. ಒಂದೆಡೆ ಜಲಾನಯನ ಅಭಿವೃದ್ಧಿ ಕಾರ್ಯಕ್ರಮವು ಜನರ ಐಕ್ಯತೆ ಮತ್ತು ಸಹಕಾರ ದೃಷ್ಟಿಯಿಂದ ಬಲಿಷ್ಠವಾದರೂ ಇನ್ನೊಂದೆಡೆ ಜನಸಹಭಾಗಿತ್ವ ನೀತಿಯು ಗಣನೀಯವಾದ ಚಾಲನೆ ಪಡೆಯಲಿಲ್ಲ.

ಹಂತ 4

ಜಲಾನಯನ ಅಭಿವೃದ್ಧಿ ಇಲಾಖೆ (೨೦೦೦ದ ನಂತರ): ಕೃಷಿ ಉತ್ಪಾದನೆಯ ಬೆಳವಣಿಗೆಗೆ ಮಣ್ಣು ಮತ್ತು ನೀರು ಸಂರಕ್ಷಣೆಯು ಅತ್ಯಂತ ಮೂಲಭೂತವಾದದ್ದು. ಕರ್ನಾಟಕ ಕೃಷಿ ಇಲಾಖೆಯ ಮುಂದಾಳತ್ವದಲ್ಲಿ ದೊಡ್ಡ ಪ್ರಮಾಣದಲ್ಲಿ ಕ್ಷೇತ್ರ ಬದುಗಳನ್ನು ಹಾಕುವ ಕಾರ್ಯಕ್ರಮ ಹಿಂದಿನಿಂದಲೂ ಚಾಲನೆಯಲ್ಲಿತ್ತು. ೨೦೦೦ನೇ ಸಾಲಿನವರೆಗೆ ಬಹು ದೊಡ್ಡ ಪ್ರಮಾಣದಲ್ಲಿ ಬದಲಾವಣೆಗಳಾದವು. ಪ್ರತ್ಯೇಕ ಜಲಾನಯನ ಅಭಿವೃದ್ಧಿ ಇಲಾಖೆಯನ್ನು ೨೦೦೦ ವರ್ಷದಲ್ಲಿ ಆರಂಭಿಸಲಾಯಿತು. ಜಲಾನಯನ ಅಭಿವೃದ್ಧಿಯನ್ನು ಹೆಚ್ಚು ವೃತ್ತಿಪರವನ್ನಾಗಿ ಮಾಡಲು ಮತ್ತು ಇತರ ಇಲಾಖೆಗಳೊಂದಿಗೆ ಸಹಕಾರ ಮತ್ತು ಸಮನ್ವಯ ಸಾಧಿಸಲು ಈ ಇಲಾಖೆಯನ್ನು ಪ್ರಾರಂಭಿಸಲಾಯಿತು. ಜನಸಹಭಾಗಿತ್ವ ಎಂಬ ಚಿಂತನೆಯನ್ನು ಪುನರ್‌ಪರಿಶೀಲಿಸಿ, ಪುನರುಚ್ಚರಿಸಿ, ಪುನರ್ರಚನೆ ಮಾಡಿ ಶಕ್ತಿಯುತಗೊಳಿಸಿ ಇಲಾಖೆಯ ಕಾರ್ಯಕ್ರಮಗಳಾದ ಜನಸಹಭಾಗಿತ್ವದೊಂದಿಗೆ ಮಳೆಯಾಶ್ರಿತ ರಾಷ್ಟ್ರೀಯ ಜಲಾನಯನ ಅಭಿವೃದ್ಧಿ ಕಾರ್ಯಕ್ರಮ (೨೦೦೨) ಮತ್ತು ಪ್ರದೇಶಾಭಿವೃದ್ಧಿ ಕಾರ್ಯಕ್ರಮಗಳಾದ ಡಿಪಿಎಪಿ, ಡಿಡಿಪಿ, ಐಡಬ್ಲ್ಯೂಡಿಪಿ (ಹರಿಯಾಲಿ ೨೦೦೩) ಗಳ ಅನುಷ್ಠಾನ ಪ್ರಾರಂಭವಾಯಿತು. ಕೃಷಿ ಇಲಾಖೆಯಿಂದ ಅನುಷ್ಠಾನವಾಗುವ ಎಲ್ಲಾ ಕಾರ್ಯಕ್ರಮಗಳ ಜೊತೆಗೆ ಎ.ಡಿ.ಪಿ.ಕಾರ್ಯಕ್ರಮವೂ ಜಲಾನಯನ ಅಭಿವೃದ್ಧಿ ಇಲಾಖೆಗೆ ೨೦೦೫ ರಲ್ಲಿ  ರ್ಗಾವಣೆಯಾದವು.

ಕರ್ನಾಟಕದಲ್ಲಿ ಪ್ರತ್ಯೇಕ ಜಲಾನಯನ ಅಭಿವೃದ್ಧಿ ಇಲಾಖೆಯ ಪ್ರಾರಂಭ: ರಾಜ್ಯದಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ಜನ ಸಂಖ್ಯೆಗನುಗುಣವಾಗಿ ಆಹಾರದ ಬೇಡಿಕೆಯು ಹೆಚ್ಚುತ್ತಿರುವುದರಿಂದ ಉತ್ಪಾದಕತೆಯನ್ನು ಹೆಚ್ಚಿಸಲು ಮಳೆ ಆಶ್ರಿತ (೭೯%) ಪ್ರದೇಶವನ್ನು ಜಲಾನಯನ ಪದ್ಧತಿಯಲ್ಲಿ ಅಳವಡಿಸುವುದು ಅವಶ್ಯ ಮತ್ತು ಅನಿವಾರ್ಯವೂ ಹೌದು. ವಿವಿಧ ಇಲಾಖೆಗಳು ಎಂದರೆ ಕೃಷಿ ಇಲಾಖೆಯಲ್ಲಿ ವಿವಿಧ ಮಣ್ಣು ಮತ್ತು ನೀರು ಸಂರಕ್ಷಣಾ ಕಾರ್ಯಕ್ರಮಗಳು ಮತ್ತು ಜಲಾನಯನ ಯೋಜನೆಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯಲ್ಲಿ ಪಂಚಾಯತ್‌ರಾಜ್ ಸಂಸ್ಥೆಗಳಿಂದ ಅನುಷ್ಠಾನವಾಗುವ ಜಲಾನಯನ ಆಧಾರದ ಅಭಿವೃದ್ಧಿ ಕಾರ್ಯಕ್ರಮಗಳು, ತೋಟಗಾರಿಕೆ, ಅರಣ್ಯ ಮತ್ತು ಪಶು ಸಂಗೋಪನೆ ಇಲಾಖೆಗಳಿಂದಲೂ ವಿವಿಧ ಜಲಾನಯನ ಅಭಿವೃದ್ಧಿ ಕಾರ್ಯಕ್ರಮಗಳನ್ನು ಆಯಾ ಇಲಾಖೆಗಳೇ ಅನುಷ್ಠಾನ ಮಾಡುತ್ತಿದ್ದವು. ಇದಲ್ಲದೆ ಜಲಾನಯನ ಅಭಿವೃದ್ಧಿಯಲ್ಲಿ ಇತರ ಮುಖ್ಯ ಅಂಶಗಳೆಂದರೆ ಭೂರಹಿತ ಆದಾಯ ಉತ್ಪನ್ನ ಚಟುವಟಿಕೆಗಳು, ಸರ್ಕಾರೇತರ ಮತ್ತು ಗ್ರಾಮೀಣ ಸಂಸ್ಥೆಗಳ ಸಹಭಾಗಿತ್ವ. ಆದ್ದರಿಂದ ಕರ್ನಾಟಕ ಸರ್ಕಾರವು ವಿವಿಧ ಅಂಶಗಳನ್ನು ಪರಿಗಣಿಸಿ ಹಾಗೂ ಯೋಜನೆಗೆ ವಿಶ್ವಬ್ಯಾಂಕ್‌ನಿಂದ ನೆರವು ಪಡೆಯುವಾಗ ನೀಡಿದ ವಾಗ್ದಾನವನ್ನು ಒಳಗೊಂಡಂತೆ ಯೋಜನೀಕರಣ ಅನುಷ್ಠಾನ ಮತ್ತು ಮೇಲ್ವಿಚಾರಣೆಗಳ ಸಮನ್ವಯವನ್ನು ಸಾಧಿಸಲು ಹೊಸದಾಗಿ ಪ್ರತ್ಯೇಕವಾಗಿ ಬಹು ವಿಭಾಗೀಯ ತಂಡದ ಜಲಾನಯನ ಅಭಿವೃದ್ಧಿ ಇಲಾಖೆಯನ್ನು ಸ್ಥಾಪಿಸುವುದು ಎಂದು ನಿರ್ಧರಿಸಲಾಯಿತು. ಸರ್ವತೋಮುಖ ಮತ್ತು ಸಮಗ್ರ ಜಲಾನಯನ ಅಭಿವೃದ್ಧಿಯ  ಪ್ರಮುಖ ಉದ್ದೇಶದಿಂದ ಕರ್ನಾಟಕ ಸರ್ಕಾರವು ದಿನಾಂಕ:೨೧-೧೨-೧೯೯೯ರಲ್ಲಿ ಜಲಾನಯನ ಅಭಿವೃದ್ಧಿ ಇಲಾಖೆ ಯನ್ನು ಪ್ರಾರಂಭಿಸಿತು. ಈ ಇಲಾಖೆಗೆ ಕೃಷಿ, ಭೂಸಂರಕ್ಷಣೆ, ಅರಣ್ಯೀಕರಣ, ತೋಟಗಾರಿಕೆ, ಪಶು ಸಂಗೋಪನೆ, ಹುಲ್ಲುಗಾವಲು ಅಭಿವೃದ್ಧಿ, ಆದಾಯ ಉತ್ಪನ್ನ ಚಟುವಟಿಕೆಗಳ ಸೂತ್ರೀಕರಣ, ಯೋಜನೀಕರಣ ಮತ್ತು ಅನುಷ್ಠಾನ ಕ್ರಮಗಳ ಸಮನ್ವಯ ಮತ್ತು ಸಮಗ್ರ ರೀತಿಯಲ್ಲಿ ಜಲಾನಯನ ಅಭಿವೃದ್ಧಿ ಆಧಾರದ ಮೇಲೆ ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು ವಹಿಸಲಾಗಿದೆ.

ಕೃಷಿ ನೀತಿ

ರಾಷ್ಟ್ರೀಯ ನೋಟ: ೧೯೯೦ ರ ದಶಕದ ಮಧ್ಯಭಾಗದ ನಂತರ ಹಲವಾರು ವರ್ಷಗಳಲ್ಲಿದ್ದ ಕೃಷಿ ಅಭಿವೃದ್ಧಿಯು ಇಳಿಮುಖವಾಗುತ್ತಿರುವುದು ಒಂದು ಗಮನ ಸೆಳೆಯುವ ಅಂಶವಾಗಿದೆ. ೧೯೮೦ ರಿಂದ ೧೯೯೬ರ ವರೆಗೆ ಶೇಕಡಾ ೩.೨ ರಷ್ಟಿದ್ದ ಕೃಷಿವಲಯದ ಬೆಳವಣಿಗೆಯು ಒಂಬತ್ತನೆಯ ಯೋಜನೆಯ ಮೂಲ ಉದ್ದೇಶ, ಈ ಇಳಿಮುಖದ ಪ್ರವೃತ್ತಿಯನ್ನು ಬದಲಿಸಿ ಶೇಕಡಾ ನಾಲ್ಕರಷ್ಟು ಕೃಷಿ ಅಭಿವೃದ್ಧಿಯ ಗುರಿಯನ್ನು ಸಾಧಿಸುವುದಾಗಿರುತ್ತದೆ. ದುರಾದೃಷ್ಟವಶಾತ್ ಕೃಷಿಯಲ್ಲಿನ ನಿಖರ ಸಾಧನೆ ಇನ್ನೂ ಇಳಿಮುಖವಾಗುತ್ತಿದ್ದು ೧೦ನೆಯ ಪಂಚವಾರ್ಷಿಕ ಯೋಜನೆಯ ಅಂತ್ಯಕ್ಕೆ ಶೇಕಡಾ ೧.೫ ಅನ್ನು ಮೀರುವ ಸಾಧ್ಯತೆಯಿಲ್ಲವೆಂದು ಗ್ರಹಿಸಲಾಗಿದೆ. ಕರ್ನಾಟಕ ರಾಜ್ಯವು ಪ್ರಸಕ್ತ ಪಂಚವಾರ್ಷಿಕ ಯೋಜನೆಯ ಸತತ ನಾಲ್ಕುವರ್ಷಗಳಲ್ಲಿ ತೀವ್ರ ಬರವನ್ನು ಎದುರಿಸಿದೆ. ಕಳೆದ ಕೆಲವು ವರ್ಷಗಳ ಮುಂಗಾರಿನ ವೈಫಲ್ಯದಿಂದ ಕೃಷಿ ಅಭಿವೃದ್ಧಿಯ ಪ್ರಮುಖ ತೊಡಕಿನ ಅಂಶವಾಗಿದ್ದರೂ, ಕೃಷಿಯಲ್ಲಿನ ಸಮಸ್ಯೆಗಳು ಹವಾಮಾನ ವೈಪರೀತ್ಯಗಳಿಗೆ ಮಾತ್ರ ಸೀಮಿತಗೊಂಡಿಲ್ಲ. ನಮ್ಮ ರಾಜ್ಯದ ಕೃಷಿ ಬೆಳವಣಿಗೆಯ ವೇಗದಲ್ಲಿನ ಇಳಿಮುಖ  ಪ್ರವೃತ್ತಿಯು ಕೃಷಿಯಲ್ಲಿರುವ ತೀವ್ರತರ ಸಮಸ್ಯೆಗಳನ್ನು ಸೂಚಿಸುತ್ತದೆ. ಇದನ್ನು ಸರಿಪಡಿಸುವುದು ಇಂದು ಅತಿಹೆಚ್ಚಿನ ಆದ್ಯತೆಯ ವಿಷಯವಾಗಿದ್ದು, ಇದಕ್ಕಾಗಿ ಮುಂದಿನ ೧೦ ವರ್ಷಗಳ ಅವಧಿಯ ಒಂದು ಸಮಗ್ರ ಕೃಷಿ ನೀತಿಯನ್ನು ರೂಪಿಸಲಾಗಿದೆ. ವಿಶ್ವ ವಾಣಿಜ್ಯ ಸಂಸ್ಥೆಯ ಕೃಷಿ ಸಂಬಂಧಿತ ಒಪ್ಪಂದಗಳು ಅಂತರಾಷ್ಟ್ರೀಯ ವ್ಯಾಪಾರದಲ್ಲಲ್ಲದೆ ದೇಶೀಯ ಕೃಷಿ ನೀತಿಯ ಮೇಲೂ ಪರಿಣಾಮ ಬೀರಿದೆ. ಹಾಗಾಗಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ನಮ್ಮ ರೈತರು ಸ್ಪರ್ಧಿಸಲು ಹೊಸ ಅವಕಾಶಗಳನ್ನು ಕಲ್ಪಿಸುವುದರ ಜೊತೆಗೆ ಗುತ್ತಿಗೆ ಕೃಷಿ ಮೂಲಕ ಹೊಸ ಸವಾಲುಗಳನ್ನು ಎದುರಿಸಲು ರೈತರನ್ನು ಸಜ್ಜುಗೊಳಿಸಬೇಕಿದೆ. ಕರ್ನಾಟಕ ಕೃಷಿ ನೀತಿಯು ಅವಶ್ಯಕವಾಗಿ ರೈತ ಕೇಂದ್ರೀಕೃತವಾಗಿದ್ದು, ಇದರಲ್ಲಿ ಅಳವಡಿಸಿರುವ ತತ್ವಗಳು ಕೆಳಕಂಡ ಪಂಚಸೂತ್ರಗಳನ್ನಾಧರಿಸಿವೆ. ೧) ಮಣ್ಣಿನ ಆರೋಗ್ಯ ಸಂರಕ್ಷಣೆ ಮತ್ತು ಸುಧಾರಣೆ; ೨) ನೀರು ಮತ್ತು ಲಘು ನೀರಾವರಿಗೆ ವಿಶೇಷ ಆದ್ಯತೆಯೊಂದಿಗೆ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ; ೩) ಸಕಾಲದಲ್ಲಿ ರೈತರಿಗೆ ಸಾಲ ಮತ್ತು ಇತರೆ ಪರಿಕರಗಳ ಲಭ್ಯತೆ; ೪) ಉತ್ಪಾದನೆ ಚಟುವಟಿಕೆಗಳೊಂದಿಗೆ ಕಟಾವು ನಂತರದ ಸಂಸ್ಕರಣೆಯ ಜೋಡಣೆ; ೫) ಪ್ರಯೋಗಾಲಯದಿಂದ ಕ್ಷೇತ್ರಕ್ಕೆ ತಾಂತ್ರಿಕತೆ ವರ್ಗಾವಣೆಯ ಅಂತರವನ್ನು ಕಡಿಮೆ ಮಾಡುವುದು.

ಪ್ರಸ್ತುತ ಕೃಷಿ ನೀತಿಯು ರೈತರು, ರೈತ ಮುಖಂಡರು, ಸಂಸದರು, ಶಾಸಕರು, ಪಂಚಾಯತಿ ಸದಸ್ಯರು, ಸಮಾಜ ಸೇವಾ ಕಾರ್ಯಕರ್ತರು, ಸ್ವಾತಂತ್ರ್ಯ ಹೋರಾಟಗಾರರು, ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಇತರರೊಂದಿಗೆ ನಡೆಸಿದ ಅನೇಕ ಸುದೀರ್ಘ ಚರ್ಚೆ ಮತ್ತು ಸಭೆಗಳಿಂದ ಹಾಗೂ ವಿಶ್ವವಿಖ್ಯಾತ ಕೃಷಿ ವಿಜ್ಞಾನಿಯಾದ ಡಾ. ಎಂ.ಎಸ್. ಸ್ವಾಮಿನಾಥನ್ ಅವರೊಡನೆ ಆಯೋಜಿಸಿದಂತಹ ಹಲವಾರು ಚರ್ಚಾಗೋಷ್ಠಿಗಳಿಂದ ಹೊರ ಹೊಮ್ಮಿದೆ.

ಕೃಷಿ ನೀತಿ ಹೊರತರುವಲ್ಲಿ ಪರಿಗಣಿಸಲಾದ ಪ್ರಮುಖ ಅಂಶಗಳು: ೧) ಕಳೆದ ದಶಕದಿಂದೀಚೆಗೆ ರೈತರ ನಿವ್ವಳ ಆದಾಯದಲ್ಲಿ ಸ್ಥಿರತೆ ಕಂಡು ಬಂದಿದೆ. ಆದರೆ, ಅದೇ ಸಮಯದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಗ್ರಾಹಕ ಬೆಲೆ ಸೂಚ್ಯಂಕದಲ್ಲಿನ ಹೆಚ್ಚಳ ಕಂಡು ಬಂದಿದ್ದು, ಕೃಷಿ ಕ್ಷೇತ್ರದಲ್ಲಿನ ಆದಾಯದ ಒತ್ತಡ ಹೆಚ್ಚಾಗುತ್ತಿದೆ, ೨) ಒಟ್ಟು ಆಯವ್ಯಯದಲ್ಲಿ ಕೃಷಿ ವಲಯದ ಅಭಿವೃದ್ಧಿ ವೆಚ್ಚದ ಪಾಲಿನಲ್ಲಿ ವಾಸ್ತವಾಗಿ ಇಳಿಮುಖ ಪ್ರವೃತ್ತಿ ಕಂಡು ಬಂದಿದೆ, ೩) ನೈಸರ್ಗಿಕ ಸಂಪನ್ಮೂಲಗಳ ಅಸಮರ್ಪಕ ಬಳಕೆ ತೀವ್ರಗತಿಯಲ್ಲಿ ಹೆಚ್ಚುತ್ತಿದ್ದು, ಭೂಮಿ ಮತ್ತು ಪರಿಸರ ವಿನಾಶಕ್ಕೆ ಕಾರಣವಾಗುತ್ತಿರುವುದು, ೪) ರೈತರಿಗೆ ಸಾಲ ನೀಡುವ ಸಹಕಾರಿ ಬ್ಯಾಂಕ್ ಮತ್ತು ಸ್ಥಳೀಯ ಲೇವಾದೇವಿ ವ್ಯಾಪಾರಿಗಳಲ್ಲಿನ ಬಡ್ಡಿ ದರದಲ್ಲಿ ಭಾರಿ ಅಂತರವಿದ್ದು, ಕೃಷಿ ಕ್ಷೇತ್ರದಲ್ಲಿ ಸಾಲ ಋಣಬದ್ಧತೆಗೆ ಕಾರಣವು ಅಸಾಂಪ್ರದಾಯಕ ಮೂಲಗಳಿಂದ ಮತ್ತು ಬಳಕೆ ಅಗತ್ಯತೆಗಳ ಪೂರೈಕೆಗೆ ರೈತರು ಪಡೆದ ಸಾಲದಿಂದಾಗಿದೆ, ೫) ಸಣ್ಣ ಮತ್ತು ಅತಿಸಣ್ಣ ರೈತರ ಸಂಖ್ಯೆಯು  ತೀವ್ರಗತಿಯಲ್ಲಿ ಹೆಚ್ಚುತ್ತಿರುವುದರಿಂದ ಹಿಡುವಳಿ ಗಾತ್ರ ಕುಗ್ಗುತ್ತಿದೆ ಹಾಗು ಹೆಚ್ಚಿನ ಸಂಖ್ಯೆಯ ರೈತರನ್ನು ಬದುಕಿನ ಅಂಚಿನಿಂದ ಕೆಳಗೆ ತಳ್ಳುತ್ತಿದೆ, ೬) ಇಂದು ರೈತನ ಸಾಮಾಜಿಕ ಗೌರವ ಹಿಂದಿನಂತೆ ಇಲ್ಲ. ಅಧ್ಯಯನಗಳ ಪ್ರಕಾರ ರೈತರು ಬೇಸಾಯಕ್ಕಿಂತಲೂ ಇತರೆ ಕಸುಬುಗಳಿಗೆ ಒಲವು ತೋರುತ್ತಿದ್ದಾರೆ, ರಾಜಸ್ಥಾನ ರಾಜ್ಯದ ನಂತರ ಅತಿಹೆಚ್ಚಿನ ಮಳೆಯಾಧಾರಿತ ಪ್ರದೇಶವನ್ನು ಕರ್ನಾಟಕ ರಾಜ್ಯ ಹೊಂದಿರುತ್ತದೆ. ಭವಿಷ್ಯದ ಕೃಷಿ ಅಭಿವೃದ್ಧಿಯು ಬಿತ್ತನೆ ಪ್ರದೇಶದ ಶೇಕಡಾ ೭೫ ಕ್ಕೂ ಮೀರಿದ ಮಳೆಯಾಧಾರಿತ ಪ್ರದೇಶದ ಮೇಲೆ ಅವಲಂಬಿಸಿರುತ್ತದೆ. ಪ್ರತಿ ಅನಾವೃಷ್ಠಿಯು ಬೆಳವಣಿಗೆ ಪ್ರವೃತ್ತಿಯಲ್ಲಿ ಅಭದ್ರತೆ ತಂದು ಸಾಕಷ್ಟು ಪ್ರದೇಶ ಮತ್ತು ಜನಸಂಖ್ಯೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಅನಾವೃಷ್ಠಿಯ ಹಾನಿಯನ್ನು ಎದುರಿಸಿ ಮತ್ತು ಅದಕ್ಕೆ ಹೊಂದಿಕೊಳ್ಳಲು ಸಮಯ ವ್ಯಯವಾಗುತ್ತಿದೆ. ಅನಾವೃಷ್ಠಿಯ ಪರಿಣಾಮಗಳನ್ನು ಗಣನೀಯವಾಗಿ ಕಡಿಮೆ ಮಾಡಲು ಪ್ರಸ್ತುತ ಕೃಷಿ ನೀತಿಯಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ.

ಕೃಷಿ ಸಾಲ ಲಭ್ಯತೆ ಮತ್ತು ಸೂಕ್ತ ಪ್ರಮಾಣದಲ್ಲಿ ಲಭ್ಯವಾಗುವ ಬಗ್ಗೆ ಕೃಷಿ ನೀತಿಯಲ್ಲಿ ಒತ್ತು ನೀಡಲಾಗಿದೆ. ಬೆಳೆ ವಿಮೆ ಯೋಜನೆಯ ಅನುಷ್ಠಾನವನ್ನು ಉತ್ತಮಪಡಿಸಲು ಸೂಕ್ತ ಕ್ರಮಗಳನ್ನು ಸೂಚಿಸಲಾಗಿದೆ. ಕೃಷಿ ಸಂಸ್ಥೆಗಳನ್ನು ಮತ್ತು ರೈತರ ಸಂಸ್ಥೆಗಳಾದ ರೈತ ಸಂಪರ್ಕ ಕೇಂದ್ರ, ಸಹಕಾರಿ ಬ್ಯಾಂಕಿಂಗ್ ಮತ್ತು ಕೆಪೆಕ್ ನಂತಹ ಇತರೆ ಸಂಸ್ಥೆಗಳನ್ನು ಬಲಪಡಿಸಲು ನೀತಿಯಲ್ಲಿ ಹೆಚ್ಚು ಒತ್ತು ನೀಡಲಾಗಿದೆ. ಕೃಷಿ ಮತ್ತು ಗ್ರಾಮೀಣ ಕ್ಷೇತ್ರಗಳ ಒಟ್ಟಾರೆ ಬೆಳವಣಿಗೆ ಹೆಚ್ಚಿಸಲೂ ಆದ್ಯತೆ ನೀಡಲಾಗಿದೆ. ಕೃಷಿ ವಲಯದಲ್ಲಿ ನಿವ್ವಳ ಆದಾಯ ಹೆಚ್ಚಿಸಲು ಕಟಾವು ನಂತರದ ನಿರ್ವಹಣೆ, ಕೃಷಿ ಸಂಸ್ಕರಣೆ ಮತ್ತು ಗ್ರಾಮೀಣ ಉದ್ದಿಮೆಗಳಿಗೆ ಪ್ರೋತ್ಸಾಹ  ಅವಶ್ಯಕ. ಕೃಷಿ ನೀತಿಯ ಘಟಕಗಳನ್ನು ಸ್ಥಾಪಿಸಲು ಅಲ್ಲಿ ದೊರೆಯುವ ಕಚ್ಚಾವಸ್ತು ಮತ್ತು ಬಂಡವಾಳ  ಲಭ್ಯತೆಗಳನ್ನು ಆಧರಿಸಿ ಸೂಕ್ತ ಪ್ರದೇಶಗಳನ್ನು ಗುರುತಿಸಿರುತ್ತದೆ. ತೋಟಗಾರಿಕೆ, ಪುಷ್ಪ ಕೃಷಿ ಮತ್ತು ರೇಷ್ಮೆ ಕೃಷಿಗಳು ರಾಜ್ಯದ ಮೂರು ಪ್ರಮುಖ ಕ್ಷೇತ್ರಗಳಾಗಿದ್ದು, ಇವುಗಳ ಅಭಿವೃದ್ಧಿಯು ಮುಂಚೂಣಿಯಲ್ಲಿರುವಂತೆ ಮಾರ್ಗೋಪಾಯಗಳನ್ನು ರೂಪಿಸುವ ಅಗತ್ಯತೆ ಇರುತ್ತದೆ. ರೈತರ ಸಂಕಷ್ಟಗಳು ಕೃಷಿ ಮಾರುಕಟ್ಟೆಯ ಹಂತದಲ್ಲಿಯೇ ಪ್ರಾರಂಭವಾಗುವುದರಿಂದ, ಪ್ರಸ್ತುತ ನೀತಿಯಲ್ಲಿ ಕೃಷಿ ಮಾರುಕಟ್ಟೆ ಮತ್ತು ಬೆಲೆಗಳ ಬಗ್ಗೆ ಸವಿಸ್ತಾರವಾಗಿ ಪ್ರಸ್ತಾಪಿಸಲಾಗಿದೆ. ಖಾಸಗಿ ಮತ್ತು ಸಾರ್ವಜನಿಕ ಪಾಲುದಾರಿಕೆ ಮೂಲಕ ಕ್ಷೇತ್ರಗಳ ಸಾಮರ್ಥ್ಯತೆ ಹೆಚ್ಚಿಸಲು ಮತ್ತು ಅಭಿವೃದ್ದಿ ಸಾಧಿಸಲು ಈ ನೀತಿಯಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ.

ಕೃಷಿ ನೀತಿಯಲ್ಲಿ ಅಳವಡಿಸಿರುವ ಐದು ಪ್ರಮುಖ ಕಾರ್ಯತಂತ್ರಗಳು: ಮೊದಲನೆಯದಾಗಿ ಮುಂದಿನ ದಶಕದಲ್ಲಿ ವಾರ್ಷಿಕ ಶೇಕಡಾ ೪.೫ರ ಬೆಳವಣಿಗೆ ಗತಿಯಲ್ಲಿ ಕೃಷಿಯು ಒಟ್ಟು ರಾಜ್ಯ ಆಂತರಿಕ ಉತ್ಪನ್ನಕ್ಕೆ ಕೊಡುಗೆ ನೀಡಲು ಉತ್ಪಾದನೆಯನ್ನು ದ್ವಿಗುಣಗೊಳಿಸಿ ಸಾಧಿಸಲು ಉದ್ದೇಶಿಸಲಾಗಿದೆ. ಇದರಿಂದಾಗಿ ರೈತರ ನಿವ್ವಳ ಆದಾಯವು ಹೆಚ್ಚಾಗುವುದೆಂದು ನಿರೀಕ್ಷಿಸಲಾಗಿದೆ ಮತ್ತು ಕೃಷಿ ವಲಯ ಹಾಗೂ ಕೃಷಿಯೇತರ ವಲಯಗಳಲ್ಲಿನ ಅಂತರವನ್ನು ತಗ್ಗಿಸಲು ಸಹಾಯಕವಾಗುತ್ತದೆ. ವಿವಿಧ ಪ್ರದೇಶಗಳಲ್ಲಿ ಮತ್ತು ರೈತ ವರ್ಗಗಳ ಆದಾಯ ಹೆಚ್ಚಳ ಸಾಧಿಸಲು ಕೃಷಿ, ಕೃಷಿ ಅವಲಂಬಿತ ಮತ್ತು ಕೃಷಿಯೇತರ ವಲಯಗಳಲ್ಲಿ ಸೃಷ್ಟಿಸಲಾಗುವ ಉದ್ಯೋಗಾವಕಾಶಗಳು ಪ್ರಮುಖ ಪಾತ್ರ ವಹಿಸುವುವು. ಒಟ್ಟಾರೆ ನೀತಿಯ ಚಿತ್ರಣದಲ್ಲಿ ಹಲವಾರು ಯೋಜನೆಗಳಲ್ಲಿ ಉದ್ಯೋಗ ಸೃಷ್ಟಿಗೆ ಅತ್ಯಂತ ಹೆಚ್ಚಿನ ಆದ್ಯತೆ ನೀಡಲಾಗಿದೆ. ಎರಡನೆಯದಾಗಿ, ಸದರಿ ನೀತಿಯು ಅಭಿವೃದ್ಧಿ ವಂಚಿತ ಪ್ರದೇಶ ಮತ್ತು ಅಭಿವೃದ್ಧಿ ವಂಚಿತ ರೈತರೆಡೆಗೆ ಆದ್ಯತೆಯನ್ನು ಕೇಂದ್ರೀಕರಿಸಿದೆ. ಪ್ರಾದೇಶಿಕ ತಾರತಮ್ಯಗಳನ್ನು ಹೋಗಲಾಡಿಸಲು ಬೆಳವಣಿಗೆ ಮಾರ್ಗೋಪಾಯಗಳನ್ನು ಅಭಿವೃದ್ಧಿ ಹೊಂದದ ಪ್ರದೇಶಗಳಿಗೆ ಸೂಚಿಸಲಾಗಿದೆ. ಮೂರನೆಯದಾಗಿ, ಈವರೆವಿಗಿನ ತಾಂತ್ರಿಕ ಬದಲಾವಣೆಗಳು ಬೇಡಿಕೆ ಆಧಾರಿತವಾಗಿರದೆ ಸರಬರಾಜು ಆಧಾರಿತವಾಗಿರುತ್ತದೆ. ರೈತರ ಮನೆಯ ಬಾಗಿಲಿಗೆ ತಾಂತ್ರಿಕ ವರ್ಗಾವಣೆಯು ನಿಧಾನ ಗತಿಯಲ್ಲಿ ತಲುಪುತ್ತಿರುವುದು, ಪ್ರಯೋಗಾಲಯದಿಂದ ಕ್ಷೇತ್ರದಲ್ಲಿ ತಾಂತ್ರಿಕತೆಯ ಅಳವಡಿಕೆಯಲ್ಲಿ ಹೆಚ್ಚಿನ ಅಂತರ ಇದೆ. ಆದುದರಿಂದ, ತಾಂತ್ರಿಕತೆಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮರುಚಿಂತನೆ ನಡೆಸುವ ಅಗತ್ಯತೆಯ ಬಗ್ಗೆ ನೀತಿಯಲ್ಲಿ ಪ್ರಸ್ತಾಪಿಸಲಾಗಿದೆ. ನಾಲ್ಕನೆಯದಾಗಿ, ನೈಸರ್ಗಿಕ ಸಂಪನ್ಮೂಲಗಳಾದ ಮಣ್ಣು, ನೀರು ಮತ್ತು ಜೈವಿಕ ಸಂಪನ್ಮೂಲಗಳು ಹೆಚ್ಚಿನ ಒತ್ತಡಕ್ಕೆ ಒಳಪಟ್ಟಿರುವ ಹನ್ನೆಲೆಯಲ್ಲಿ ಅವುಗಳ ಸಂರಕ್ಷಣೆ ಜೊತೆಗೆ ಉತ್ತಮ ಉತ್ಪಾದನಾ ಪರಿಸರವನ್ನು ಸೃಷ್ಠಿಸುವ ಅವಶ್ಯಕತೆ ಇರುತ್ತದೆ. ಉತ್ಪಾದನೆ ಮತ್ತು ಸಂಪನ್ಮೂಲಗಳು ಬರಿದಾಗುವ ಬಗ್ಗೆ ಕಾಳಜಿ ವಹಿಸಿ ಸಂಬಂಧ ಕಲ್ಪಿಸಬೇಕಾಗಿದೆ. ಕಡೆಯದಾಗಿ, ದಲ್ಲಾಳಿ (ಫಾಕ್ಟರ್) ಮಾರುಕಟ್ಟೆ ಮತ್ತು ರೈತರಿಗೆ ಸರಬರಾಜಾಗುವ ಕಳಪೆ ದರ್ಜೆಯ ಕೃಷಿ ಪರಿಕರಗಳ ಸಂಬಂಧಿತ ವಿಷಯಗಳು ಸಾಮಾನ್ಯವಾಗಿ ಚರ್ಚಾ ವಿಷಯಳಾಗಿರುತ್ತವೆ. ಅಲ್ಲದೆ, ಉತ್ಪನ್ನ ಮಾರುಕಟ್ಟೆ ನ್ಯೂನತೆಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಬೇಕಿದೆ.

ಕೃಷಿ ನೀತಿಯಲ್ಲಿನ ಕೆಲವು ಪ್ರಮುಖ ಅಂಶಗಳು: ಕೃಷಿ ಇಲಾಖೆಯನ್ನು ’ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ’ ಎಂದು ಮರು ನಾಮಕರಣ. ಮುಂದಿನ ವರ್ಷಗಳಲ್ಲಿ, ಪ್ರತಿ ವರ್ಷ ಶೇಕಡಾ ೪.೫ ರಷ್ಟು ಕೃಷಿ ಬೆಳವಣಿಗೆ ವೃದ್ಧಿಸುವ ಗುರಿ. ಸಕಾಲಿಕ ಸಾಲ ವ್ಯವಸ್ಥೆ, ಕಟಾವಿನ ನಂತರದ ಮೌಲ್ಯವರ್ಧನೆ ಮತ್ತು ಪ್ರಯೋಗಾಲಯದಿಂದ ಕ್ಷೇತ್ರಕ್ಕೆ ತಾಂತ್ರಿಕ ವರ್ಗಾವಣೆಯಲ್ಲಿ ಕನಿಷ್ಠ ಸಮಯದ ಅಂತರ. ರೈತರ ನಿವ್ವಳ ಆದಾಯ ಮತ್ತು ಉದ್ಯೋಗಾವಕಾಶಗಳನ್ನು ಕಲ್ಪಿಸುವುದರ ಮೂಲಕ ರೈತರನ್ನು ಗೌರವಯುತ ಮಟ್ಟಕ್ಕೆ ಏರಿಸಿ, ಕೃಷಿಯನ್ನು ಹೆಚ್ಚು ಆಕರ್ಷಣೀಯ ವೃತ್ತಿಯಾಗಿ ಪರಿವರ್ತಿಸುವುದು. ಗ್ರಾಮೀಣ ಕೃಷಿ ಮತ್ತು ಕೃಷಿಯೇತರ ಉದ್ಯಮಗಳ ಅಭಿವೃದ್ಧಿಗೆ ವಾರ್ಷಿಕ ಶೇಕಡಾ ೫ರ ಪ್ರಮಾಣದಲ್ಲಿ ಬಂಡವಾಳ ಹೊಡಿಕೆಯಲ್ಲಿ ಹೆಚ್ಚಳ. ಒಟ್ಟು ಅಭಿವೃದ್ಧಿ ಆಯವ್ಯಯ ವೆಚ್ಚದ ಶೇಕಡಾ ೧೦ ರಷ್ಟು ಅನುದಾನವನ್ನು ಕೃಷಿ ವಲಯಕ್ಕೆ ಮೀಸಲಿಡುವುದು. ಹಲವು ಉದ್ದೇಶಗಳಿಗೆ ಬಳಸಬಹುದಾದ ರೈತ ಕುಟುಂಬದ ಮಾಹಿತಿಯನ್ನು ಹೊಂದಿರುವ ರೈತಮಿತ್ರ ಪುಸ್ತಕ (ಚಿಕ್ಕ ಪಾಸ್‌ಬುಕ್) ವಿತರಣೆ.  ಪ್ರತಿ ವರ್ಷ ೩೫,೦೦೦ಹೆಕ್ಟೇರ್ ಪ್ರದೇಶದಲ್ಲಿ ಮಣ್ಣಿನ ಆರೋಗ್ಯ ವೃದ್ಧಿಸಲು ಭೂಮಿ ತಾಯಿಯ ಆರೋಗ್ಯ ಯೋಜನೆಯನ್ನು ಅನುಷ್ಠಾನಕ್ಕೆ ತರುವುದು. ಮಳೆಯಾಶ್ರಿತ ಪ್ರದೇಶದ ಕೃಷಿ ಅಭಿವೃದ್ಧಿಗಾಗಿ ಸೂಕ್ತ ಮಾರ್ಗೋಪಾಯಗಳನ್ನು ಯೋಜಿಸಲು ಪರಿಣಿತ ತಾಂತ್ರಿಕ ವ್ಯಕ್ತಿಯ ಅಧ್ಯಕ್ಷತೆಯಲ್ಲಿ ಉತ್ತರ ಕರ್ನಾಟಕದಲ್ಲಿ ಮಳೆಯಾಶ್ರಿತ ಕೃಷಿ ಆಯೋಗವನ್ನು ಸ್ಥಾಪಿಸಲು ಪ್ರಸ್ತಾವನೆ. ಡಾ. ಎಂ.ಎಸ್. ಸ್ವಾಮಿನಾಥನ್‌ರವರ ಸಲಹೆಯಂತೆ ಭಾರತೀಯ ವ್ಯಾಪಾರ ಪ್ರಾಧಿಕಾರ ಸ್ಥಾಪನೆಯ ರೀತಿಯಲ್ಲಿಯೇ ರಾಜ್ಯದಲ್ಲಿ ಕರ್ನಾಟಕ ವ್ಯಾಪಾರ ಪ್ರಾಧಿಕಾರ ಸ್ಥಾಪನೆಯ ಪ್ರಯತ್ನ ಮಾಡಲಾಗುವುದು. ಈ ಪ್ರಾಧಿಕಾರವು ಬದಲಾಗುತ್ತಿರುವ ಅಂತಾರಾಷ್ಟ್ರೀಯ ವ್ಯಾಪಾರ ವ್ಯವಸ್ಥೆ ಬಗ್ಗೆ ಗಮನ ಹರಿಸಿ ಕೆಪೆಕ್ ಹಾಗೂ ಕೈಗಾರಿಕೆ ಮತ್ತು ಗಣಿ ಇಲಾಖೆಯ ಸಹಯೋಗದೊಂದಿಗೆ ವ್ಯಾಪಾರಕ್ಕೆ ಸಂಬಂಧಿಸಿದಂತೆ ಮೇಲ್ವಿಚಾರಣೆ ನಡೆಸಿ, ರಾಜ್ಯದ ಹಿತದೃಷ್ಟಿಯನ್ನು ಕಾಪಾಡುವುದು. ಗ್ರಾಮ ಪಂಚಾಯತಿ ಮಟ್ಟದಲ್ಲಿ ಹಂತ ಹಂತವಾಗಿ ಟೆಲಿಮೆಟ್ರಿಕ್ ಮಳೆ ಮಾಪನಾ ಕೇಂದ್ರಗಳನ್ನು ಸ್ಥಾಪಿಸುವುದು. ರಾಜ್ಯವು ಕೃಷಿ ಶಿಕ್ಷಣಕ್ಕೆ ಸಂಬಂಧಿಸಿದಂತೆ ಖಾಸಗಿ ಮತ್ತು ಸಾರ್ವಜನಿಗ ಪಾಲುದಾರಿಕೆಗೆ ಆಸ್ಪದ ಕಲ್ಪಿಸುವುದು. ಸಣ್ಣ ಮತ್ತು ಅತಿ ಸಣ್ಣ ರೈತರು ಒಗ್ಗೂಡಿ ರೈತ ಚಟುವಟಿಕೆ ಮತ್ತು ಕಟಾವು ನಂತರದ ಚಟುವಟಿಕೆಗಳನ್ನು ಕೈಗೊಳ್ಳಲು ೧೦ ರಿಂದ ೫೦ ರೈತರನ್ನೊಳಗೊಂಡ ಪ್ರಗತಿಪರ ರೈತರ ಒಕ್ಕೂಟವನ್ನು ಸ್ಥಾಪಿಸಲು ಪ್ರೋತ್ಸಾಹ ನೀಡುವುದು. ಬಂಜರು ಭೂಮಿಯಲ್ಲಿ ಜೈವಿಕ ಇಂಧನ ಸಸ್ಯಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುವುದು. ಐದು ಕಿಲೊಮೀಟರ್ ವ್ಯಾಪ್ತಿಯೊಳಗೆ ಗ್ರಾಮೀಣ ಗೋದಾಮುಗಳನ್ನು ಸ್ಥಾಪಿಸುವ ಮೂಲಕ ರೈತರು ಕೃಷಿ ಉತ್ಪನ್ನಗಳನ್ನು ಸಂಗ್ರಹಣೆ ಮಾಡಲು ಅನುಕೂಲ ಮಾಡಿ ಸಂಕಷ್ಟ ಮಾರಾಟವನ್ನು ತಪ್ಪಿಸುವುದು. ಅಡಮಾನ ಸಾಲ ಯೋಜನೆಯನ್ನು ಈ ರೈತರಿಗೆ ವಿಸ್ತರಿಸಲಾಗುವುದು. ಕನಿಷ್ಠ ಬೆಂಬಲ ಬೆಲೆಯ ಶೇಕಡಾ ೫೦ ರಷ್ಟು ಮೌಲ್ಯದ ಬಡ್ಡಿರಹಿತ ಸಾಲ (ಮುಂಗಡ ಹಣ) ವನ್ನು ರೈತರಿಗೆ ಒದಗಿಸಲಾಗುವುದು. ಜೈವಿಕ ತಂತ್ರಜ್ಞಾನ ಸಂಶೋದನೆ ಮತ್ತು ವಿಸ್ತರಣೆಗೆ ಬಂಡವಾಳ ಹೂಡಿಕೆಯನ್ನು ಹೆಚ್ಚಿಸುವುದು. ಕೃಷಿ ವಿಶ್ವವಿದ್ಯಾನಿಲಯಗಳು ಬಿತ್ತನೆ ಬೀಜ ಮತ್ತು ತಾಂತ್ರಿಕತೆ ವಲಯಗಳಲ್ಲಿ ತಮ್ಮ ಬ್ರಾಂಡ್ ಹೆಸರು ಸ್ಥಾಪಿಸಲು ಪ್ರಯತ್ನಿಸುವುದು. ಕೃಷಿ ತಾಂತ್ರಿಕ ಪಾರ್ಕ್‌ಗಳನ್ನು ಗ್ರಾಮ ಪಂಚಾಯತಿ ಮಟ್ಟದಲ್ಲಿ ಸ್ಥಾಪಿಸುವುದು. ಪ್ರತಿ ಹಳ್ಳಿಯನ್ನು ಒಂದು ಜ್ಞಾನ ಆಂದೋಲನ ಕೇಂದ್ರವಾಗಿ ಸ್ಥಾಪಿಸಲು ಉತ್ತೇಜನ ನೀಡುವುದು.

ಕೃಷಿ ಪದವಿ/ಕೃಷಿ ಡಿಪ್ಲೊಮಾ ಪದವೀಧರರಿಗೆ ಮಾತ್ರ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಸಸ್ಯ ಸಂರಕ್ಷಣಾ ಔಷಧಿಗಳನ್ನು ಮಾರಾಟ ಮಾಡಲು ಅನುಮತಿ ನೀಡುವುದು ಮತ್ತು ಪ್ರತಿ ಪರಿಕರ ಚೀಲ/ಪ್ಯಾಕೆಟ್ ಮೇಲೆ ವಿವರದ ಚೀಟಿ (ಲೇಬಲ್) ಹೊಂದಿರುವುದು. ಒಂದು ವೇಳೆ ಅದು ಕಳಪೆ ಮಟ್ಟದ್ದಾದಲಿ ಅದರ ಪೂರ್ಣ ಜವಾಬ್ದಾರಿಯ ಉತ್ಪಾದಕ ಮತ್ತು ವಿತರಕರದ್ದೆಂದು ದೃಢೀಕರಿಸುವಂತಿರುವುದು. ಸೂಕ್ತ ಹಣಕಾಸಿನ ನೆರವಿನೊಂದಿಗೆ ಯಶಸ್ವಿನಿ ಸಹಕಾರಿ ಆರೊಗ್ಯ ರಕ್ಷಣಾ ಯೋಜನೆ ಯ ಅನುಕೂಲಗಳನ್ನು ರಾಜ್ಯದ ಎಲ್ಲಾ ಪ್ರದೇಶದ ರೈತರಿಗೆ ಮತ್ತು ಕೃಷಿ ಕಾರ್ಮಿಕರಿಗೆ ದೊರಕುವಂತೆ ಮಾಡುವುದು. ಕೃಷಿ ಉತ್ಪನ್ನಗಳ ಆಂತರಿಕ ಬೆಲೆಗಳು ಮತ್ತು ವಿಶ್ವದ ಬೆಲೆಗಳನ್ನು ಸಮನ್ವಯಗೊಳಿಸಿ ಮಾರಾಟ ಪದ್ದತಿಗಳನ್ನು  ಸುಧಾರಿಸುವ ಮೂಲಕ ರಾಜ್ಯವು ರೈತರಿಗೆ, ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ದೊರಕಿಸಿಕೊಡಲು ಪ್ರಯತ್ನಿಸುವುದು.

ಇದರೊಂದಿಗೆ ಗ್ರಾಹಕರಿಗೆ ಸೂಕ್ತ ಬೆಲೆಗಳಲ್ಲಿ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಪೂರೈಸಲಾಗುವುದು. ಮಾರುಕಟ್ಟೆ ಸಂಬಂಧಿತ ವಿಮಾ ಯೋಜನೆಯನ್ನು ರೂಪಿಸಲು ಕ್ರಮ ಕೈಗೊಳ್ಳಲಾಗುವುದು. ಆವರ್ತ ನಿಧಿಯ ಪ್ರಮಾಣವನ್ನು ಅಧಿಕಗೊಳಿಸಿ, ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯ ಮೂಲಕ ರೈತರ ಸಂಕಷ್ಟ ಮಾರಾಟವನ್ನು ತಪ್ಪಿಸಿ ರೈತರ ಹಿತಾಸಕ್ತಿಗಳನ್ನು ಕಾಪಾಡಲು ಪ್ರಯತ್ನ ಮಾಡಲಾಗುವುದು. ಪ್ರಸ್ತುತ ಈ ಯೋಜನೆಯ ಕಾರ್ಯರೂಪ ಹಾಗೂ ಸಂಪೂರ್ಣ ಧನ ಸಹಾಯ ರಾಜ್ಯ ಸರ್ಕಾರ ಮಾಡುತ್ತಿದೆ. ಈ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರದಿಂದ ಶೇಕಡಾ ೫೦ ರ ಕೊಡುಗೆಯನ್ನು ಪಡೆಯಲು ರಾಜ್ಯ ಸರ್ಕಾರವು ಪ್ರಯತ್ನಿಸುವುದು. ರಾಜ್ಯದಲ್ಲಿರುವ ಎಲ್ಲಾ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಯೋಜನೆಯನ್ನು ವಿಸ್ತರಿಸಲಾಗುವುದು ಹಾಗೂ ಇದರಡಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.

ತೋಟಗಾರಿಕೆ

ಕರ್ನಾಟಕ ರಾಜ್ಯದಲ್ಲಿ ತೋಟಗಾರಿಕೆಯು ಒಂದು ಪ್ರಮುಖ ಮತ್ತು ಹೆಚ್ಚು ಪ್ರವರ್ಧಮಾನಗೊಳ್ಳುತ್ತಿರುವ ರಂಗವಾಗಿದೆ.  ತೋಟಗಾರಿಕೆ ಬೆಳೆಗಳು ನಿಸ್ಸಂದೇಹವಾಗಿ ಹೆಚ್ಚು ಲಾಭವನ್ನು ರೈತರಿಗೆ ನೀಡುವ ಕಾರಣ, ಇವುಗಳು ರಾಜ್ಯದಲ್ಲಿನ ಪರ್ಯಾಯ ಭೂಬಳಕೆ ಕಾರ್ಯಕ್ರಮದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಪಡೆಯುತ್ತಿವೆ. ರಾಜ್ಯದಲ್ಲಿ ಕಾಣಬರುವ ವೈವಿಧ್ಯಮಯ ಭೂ-ಹವಾಗುಣ ಪರಿಸ್ಥಿತಿಗಳು ವಿವಿಧ ತೋಟಗಾರಿಕೆ ಬೆಳೆಗಳನ್ನು ವರ್ಷವಿಡೀ ಯಶಸ್ವಿಯಾಗಿ ಬೆಳೆಯಲು ಸಹಕಾರಿಯಾಗಿರುತ್ತವೆ. ಅನೇಕ ಬಹುವಾರ್ಷಿಕ ತೋಟಗಾರಿಕೆ ಬೆಳೆಗಳು ತೀವ್ರ ಬರ ಪರಿಸ್ಥಿತಿಯನ್ನು ನಿಗ್ರಹಿಸಿ ಸಾಕಷ್ಟು ಸಮಾಧಾನಕರವಾದ ಇಳುವರಿಯನ್ನು ನೀಡುವ ಗುಣ ಹೊಂದಿರುವ ಕಾರಣ, ಕಡಿಮೆ ಬೆಳೆ ಬೀಳುವ ಮತ್ತು ಬರ ಪೀಡಿತ ಪ್ರದೇಶಗಳಲ್ಲಿ ಈ ಬೆಳೆಗಳನ್ನು ಬೆಳೆಸುವುದರ ಅವಶ್ಯಕತೆ ಹೆಚ್ಚಾಗಿ ಕಂಡುಬಂದಿರುತ್ತದೆ. ಈ ಕಾರಣದಿಂದಲೇ ರಾಜ್ಯದ ಅನೇಕ ಒಣ ಪ್ರದೇಶಗಳಲ್ಲಿ ತೋಟಗಾರಿಕೆ ಬೆಳೆಗಳು ಕೃಷಿ ಬೆಳೆಗಳ ಬದಲಾಗಿ ಪರ್ಯಾಯ ಬೆಳೆಗಳಾಗಿ ಹೊರಹೊಮ್ಮಿರುತ್ತವೆ. ತೋಟಗಾರಿಕೆಯಿಂದ ರೈತರು ಪಡೆಯಬಹುದಾದ ಇನ್ನೊಂದು ಮಹತ್ವದ ಲಾಭವು ತೋಟಗಾರಿಕೆ ಪದಾರ್ಥಗಳನ್ನು ಅಧಿಕ ಮೌಲ್ಯದ ವಸ್ತುಗಳನ್ನಾಗಿಸಿ ಪರಿವರ್ತನೆಗೊಳಿಸುವುದಕ್ಕೆ ಸಂಬಂಧಿಸಿದಂತಹುದಾಗಿದೆ. ಇದರಿಂದ, ನೇರವಾಗಿ ಅವಲಂಬಿಸಿದ ರೈತರಿಗೆ ಹಾಗೂ ಪರೋಕ್ಷವಾಗಿ ಅವಲಂಬಿತರಾಗಿರುವ ಇನ್ನನೇಕರಿಗೆ ಇದು ಹಲವಾರು ರೀತಿಯ ಪ್ರಯೋಜನವನ್ನು ಪಡೆಯುವ ಅವಕಾಶವನ್ನು ಕಲ್ಪಿಸಿರುತ್ತದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರವರ್ಧಮಾನಕ್ಕೆ ಬರುತ್ತಿರುವ ಉನ್ನತ ತಂತ್ರಜ್ಞಾನದ  ತೋಟಗಾರಿಕೆಯಿಂದಾಗಿ ಉತ್ತಮ ಗುಣಮಟ್ಟದ ಪದಾರ್ಥಗಳನ್ನು ವಿದೇಶಗಳಿಗೆ ರಫ್ತುಮಾಡುವ ಅವಕಾಶಗಳು ಹೆಚ್ಚುತ್ತಲಿವೆ.

ಇದರಿಂದ ಅಂತಹ ರೈತರಿಗೆ ಹೆಚ್ಚಿನ ಲಾಭವಿರುವ ಕಾರಣ ಅನೇಕ ರೈತರು ಇದರಲ್ಲಿ ಆಸಕ್ತಿ ಹೊಂದಿರುತ್ತಾರೆ. ತೋಟಗಾರಿಕೆ ಪದಾರ್ಥಗಳಾದ ಹಣ್ಣು ಮತ್ತು ತರಕಾರಿಗಳು ರಕ್ಷಿತ ಆಹಾರ  ಪದಾರ್ಥಗಳೆಂದು ಪರಿಗಣಿಸಲ್ಪಟ್ಟಿರುವ ಕಾರಣ ಹಾಗೂ ಇತ್ತೀಚಿನ ದಿನಗಳಲ್ಲಿ ಜನಸಾಮಾನ್ಯರು ಆರೋಗ್ಯ ರಕ್ಷಣೆಯ ಕಡೆಗೆ ಹೆಚ್ಚಿನ ಗಮನವೀಯುತ್ತಿರುವ ಕಾರಣ ತೋಟಗಾರಿಕೆ ಪದಾರ್ಥಗಳಿಗೆ ಹೆಚ್ಚಿನ ಬೇಡಿಕೆ ಉತ್ತೇಜನಕಾರಿಯಾಗಿದೆ. ತೋಟಗಾರಿಕೆಯು ಮಾನವನ ಸೌಂದರ್ಯವರ್ಧಕ ಬೇಡಿಕೆಗಳನ್ನು ಪೂರೈಸುವಲ್ಲಿಯೂ ಸಹ ಹಿಂದೆ ಬಿದ್ದಿಲ್ಲ. ಪುಷ್ಪಗಳು ಹಾಗೂ ಅವುಗಳ ಪದಾರ್ಥಗಳು ಈ ದಿಸೆಯಲ್ಲಿ ಜನಸಾಮಾನ್ಯರಿಗೆ ಹೆಚ್ಚು ಅಗತ್ಯವಾಗಿ ಕಂಡುಬರುತ್ತಿರುವ ಕಾರಣ ಸಾಂಪ್ರದಾಯಿಕ ಪುಷ್ಪಗಾರಿಕೆ ಮತ್ತು ಉನ್ನತ ತಂತ್ರಜ್ಞಾನದ ಪುಷ್ಪಗಾರಿಕೆಗೆ ಹೆಚ್ಚಿನ ಒಲವು ಕಂಡುಬಂದಿರುತ್ತದೆ. ಇವೆಲ್ಲ ಅವಶ್ಯಕತೆಗಳು ಹಾಗೂ

ಬೆಳವಣಿಗೆಗಳ ದೆಸೆಯಿಂದಾಗಿ ರಾಜ್ಯದಲ್ಲಿ ತೋಟಗಾರಿಕೆಯ ಒಂದು ಉತ್ತಮವಾದ ಭವಿಷ್ಯಕ್ಕೆ ಹೊಸ ಆಯಾಮ ಒದಗಿಸಿರುತ್ತದೆ.

ಐತಿಹಾಸಿಕ ಹಿನ್ನೆಲೆ: ಕರ್ನಾಟಕ ರಾಜ್ಯದಲ್ಲಿನ ತೋಟಗಾರಿಕೆ ಬೆಳವಣಿಗೆಯು ಅದ್ಭುತವಾದ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದ್ದು, ಹಲವಾರು ಕೌತುಕಮಯ ಸಂಗತಿಗಳು, ಸಾಧನೆಗಳ ಮೈಲುಗಲ್ಲುಗಳು ಹಾಗೂ ಹೆಮ್ಮೆಪಡುವಂತಹ ಪರಂಪರೆಯನ್ನು ಬಿಂಬಿಸುವಂತಹದ್ದಾಗಿದೆ. ರಾಜ್ಯದಲ್ಲಿ ಹಲವಾರು ತೋಟಗಾರಿಕೆ ಬೆಳೆಗಳನ್ನು ಅನಾದಿಕಾಲದಿಂದ ಬೆಳೆಯಲಾಗುತ್ತಿದ್ದರೂ, ಅವುಗಳ ವಾಣಿಜ್ಯ ಪ್ರಮಾಣದ ಬೇಸಾಯವು ಕೇವಲ ಎರಡೂವರೆ ಶತಮಾನಗಳ ಹಿಂದೆಯಷ್ಟೆ ಪ್ರಾರಂಭವಾಯಿತೆನ್ನಬಹುದು. ಈ ದಿಸೆಯಲ್ಲಿ ಮೊಟ್ಟಮೊದಲು ಹೆಸರಿಸಬಹುದಾದ ಪ್ರಯತ್ನವು ನಿಸ್ಸಂದೇಹವಾಗಿ ಹೈದರಾಲಿ ಮತ್ತು ಟಿಪ್ಪುಸುಲ್ತಾನರಿಗೆ ಸಲ್ಲುತ್ತದೆ. ಹೈದರಾಲಿಯು ೧೭೬೦ ರ ಸುಮಾರಿಗೆ ಬೆಂಗಳೂರಿನ ಕೋಟೆಯ ಬಳಿ ಒಂದು ಚಿಕ್ಕ ರಾಜ್ಯೋದ್ಯಾನವನ್ನು ಪ್ರಾರಂಭಿಸಿದ್ದನು. ಕಾಲಾನಂತರ ಇದನ್ನು ಟಿಪ್ಪು ಸುಲ್ತಾನನು ಅನೇಕ ಜಾತಿಯ ಗಿಡಮರಗಳನ್ನು ನೆಟ್ಟು ಅಭಿವೃದ್ಧಿ ಪಡಿಸಿದನು. ಈತನು ದೇಶ ವಿದೇಶಗಳಿಂದ ಅನೇಕ ಮಹತ್ವಪೂರ್ಣ ಜಾತಿಯ ಹೂಗಳು, ಹಣ್ಣುಗಳು, ತರಕಾರಿಗಳು ಮತ್ತು ಇತರ ಜಾತಿಯ ಸಸ್ಯಗಳನ್ನು ತರಿಸಿ ಲಾಲ್‌ಬಾಗ್‌ ನಲ್ಲಿ ಬೆಳೆಸಲು ಉಪಕ್ರಮಿಸಿದನು. ದೂರದ ಪ್ರದೇಶಗಳಾದ ಮಲಕ್ಕಾ, ಫ್ರಾನ್ಸ್ ದ್ವೀಪಗಳು, ಓಮನ್, ಅರೇಬಿಯ, ಪರ್ಷಿಯಾ, ಟರ್ಕಿ, ಜಾಂಜಿಬಾರ್, ಫ್ರಾನ್ಸ್ ಮತ್ತು ಇತರ ಅನೇಕ ಯುರೋಪ್ ದೇಶಗಳಿಂದ ಹಲವಾರು ಅಪರೂಪದ ಸಸ್ಯ ಪ್ರಭೇದಗಳನ್ನು ಈತನು ತರಿಸಿ ಅಭಿವೃದ್ಧಿಪಡಿಸಿದನು. ಶ್ರೀರಂಗಪಟ್ಟಣದ ಹತ್ತಿರದ ಗಂಜಾಂನಲ್ಲಿ ಈತನೊಂದು ವಿಶಾಲವಾದ ಅಂಜೂರದ ತೋಟವನ್ನು ಸಹ ಅಭಿವೃದ್ಧಿಪಡಿಸಿದನು. ಆಗ ಟಿಪ್ಪು ತರಿಸಿ ಅಭಿವೃದ್ಧಿಪಡಿಸಿದ ಹಲವಾರು ತೋಟಗಾರಿಕೆ ಸಸ್ಯಗಳು ನಂತರದ ದಿನಗಳಲ್ಲಿ ಮೈಸೂರು   ಪ್ರಾಂತ್ಯದಲ್ಲಿ ವಾಣಿಜ್ಯ ಪ್ರಮಾಣದ ಬೆಳೆಗಳಾಗಿ ಹೊರಹೊಮ್ಮಿದವು ಎಂಬುದು ನಾವು ಗಮನಿಸತಕ್ಕ ವಿಶೇಷವಾಗಿದೆ. ಉದಾ: ಹಿಪ್ಪುನೇರಳೆ, ದ್ರಾಕ್ಷಿ, ದಾಳಿಂಬೆ, ಗುಲಾಬಿ ಮತ್ತು ಅನೇಕ ಐರೋಪ್ಯ ತರಕಾರಿ ಬೆಳೆಗಳು.

೧೭೯೯ ರಲ್ಲಿ ಘಟಿಸಿದ ಟಿಪ್ಪುಸುಲ್ತಾನನ ಪತನದ ನಂತರ, ಲಾಲ್‌ಬಾಗ್ ಬ್ರಿಟಿಷರಿಗೆ ಹಸ್ತಾಂತರಗೊಂಡಿತು. ಹಳೆಯ ದಾಖಲಾತಿಗಳ ಪ್ರಕಾರ ಮೇಜರ್ ವಾಘ್ ಎಂಬ ಸೇನಾ ಸಸ್ಯಶಾಸ್ತ್ರಜ್ಞನು ೧೮೧೯ರವರೆಗೆ ತನ್ನ ಉಸ್ತುವಾರಿಯಲ್ಲಿ ಇಟ್ಟುಕೊಂಡಿದ್ದನು ತದನಂತರ ಈ ಉದ್ಯಾನವನ್ನು ಈಸ್ಟ್ ಇಂಡಿಯಾ ಕಂಪನಿಯ ಗವರ್ನರ್ ಜನರಲ್ ಆದ ಮಾರ್ಕ್ಸ್ ವಾರನ್ ಹೇಸ್ಟಿಂಗ್ಸ್‌ಗೆ ಬಳುವಳಿಯನ್ನಾಗಿ ನೀಡಿದನು. ಹೇಸ್ಟಿಂಗ್ಸ್‌ನು ಕಲ್ಕತ್ತಾದ ರಾಯಲ್ ಬಟಾನಿಕಲ್ ಉದ್ಯಾನವನದ ಮೇಲ್ವಿಚಾರಕನಾಗಿದ್ದ ಡಾ. ವಾಲಿಚ್‌ರನ್ನು ಲಾಲ್‌ ಬಾಗ್ ಸಸ್ಯಶಾಸ್ತ್ರೀಯ ತೋಟದ ಉಪ ಮೇಲ್ವಿಚಾರಕರನ್ನಾಗಿ ನೇಮಿಸಿದನು. ಈ ವ್ಯವಸ್ಥೆಯು ೧೮೩೧ ರವರೆಗೆ ಮುಂದುವರಿಯಿತು. ೧೮೩೧ ರಲ್ಲಿ ಮೈಸೂರು ಪ್ರಾಂತ್ಯವು ಬ್ರಿಟಿಷ್‌ ಆಳ್ವಿಕೆಗೊಳಪಟ್ಟ ನಂತರ ಅಂದಿನ ಮೈಸೂರಿನ ಮುಖ್ಯ ಆಯುಕ್ತ ಸರ್ ಮಾರ್ಕ್ ಕಬ್ಬನ್‌ರವರ ಸುಪರ್ದಿಗೆ ಒಳಪಟ್ಟಿತು. ೧೮೩೯ ರಲ್ಲಿ ಲಾಲ್‌ಬಾಗ್ ಸಸ್ಯಶಾಸ್ತ್ರೀಯ ತೋಟದ ಕೆಲಸ ಕಾರ್ಯಗಳನ್ನು ಕಲ್ಕತ್ತಾದ ಅಗ್ರಿಹಾರ್ಟಿಕಲ್ಚರಲ್ ಸೊಸೈಟಿಗೆ ಹಸ್ತಾಂತರಿಸಲಾಯಿತು. ೧೮೪೨ ರಲ್ಲಿ ಈ ಸೊಸೈಟಿಯು ಸ್ಥಗಿತಗೊಂಡ ನಂತರ ಮತ್ತೆ ೧೮೫೬ ರವರೆಗೆ ಮೈಸೂರಿನ ಮುಖ್ಯ ಆಯುಕ್ತರ ನಿರ್ವಹಣೆಗೆ ಒಳಪಡಿಸಲಾಯಿತು.

೧೮೫೬ರ ಆಗಸ್ಟ್‌ನಲ್ಲಿ ಲಾಲ್‌ಬಾಗ್‌ನ್ನು ಸರ್ಕಾರಿ ಸಸ್ಯಶಾಸ್ತ್ರೀಯ ಉದ್ಯಾನವನವನ್ನಾಗಿ ನಾಮಕರಣ ಮಾಡಿ ಸಂಪೂರ್ಣವಾಗಿ ಸರ್ಕಾರದ ಸ್ವಾಯುತ್ತತೆಗೆ ಒಳಪಡಿಸಲಾಯಿತು. ಸಸ್ಯಶಾಸ್ತ್ರೀಯವಾಗಿ ಮಹತ್ವವುಳ್ಳ ಜಾತಿಯ ಮರಗಳನ್ನು ಸಂರಕ್ಷಿಸಲು ಉದ್ಯಾನವನ್ನು ಆಕರ್ಷಣಿಯವಾಗಿಸಲು ಆಯುಕ್ತ ಕಾರ್ಯದರ್ಶಿಗಳು, ಬೆಂಗಳೂರು ವಿಭಾಗದ ಮೇಲ್ವಿಚಾರಕರು ಹಾಗೂ ಡಾ. ಕಿರ್ಕ್‌ಪ್ಯಾಟ್ರಿಕ್ ರವರನ್ನೊಳಗೊಂಡ ಒಂದು ಸಮಿತಿಯನ್ನು ರಚಿಸಲಾಯಿತು. ನಂತರದ ಎರಡು ವರ್ಷಗಳಲ್ಲಿ ಬಹಳಷ್ಟು ಸಾಧನೆಗಳನ್ನು ಮಾಡಲಾಯಿತು. ಇದಾದ ನಂತರ ೧೮೫೮ ರಲ್ಲಿ ಸರ್.ವಿಲಿಯಂ ಹೂಕರ್, ನಿರ್ದೇಶಕರು ರಾಯಲ್ ಬಟಾನಿಕಲ್ ಗಾರ್ಡನ್ಸ್ ರವರು ಕ್ಯೂ ರವರನ್ನು ಲಾಲ್‌ಬಾಗ್ ಸಸ್ಯೋದ್ಯಾನದ ಮೇಲ್ವಿಚಾರಕರೆಂದು ನೇಮಿಸಿದರು.

ಲಾಲ್‌ಬಾಗ್ ಸಸ್ಯೋದ್ಯಾನದಲ್ಲಿ ಹೆಸರಿಸಬಹುದಾದ ಸಾಧನೆಯ ಶಕೆಯ ೧೮೭೪ ರಲ್ಲಿ ಜಾನ್ ಕೆಮರಾನ್‌ರವರನ್ನು ಈ ತೋಟದ ಮೇಲ್ವಿಚಾರಕರೆಂದು ನೇಮಿಸಿದ ನಂತರ ಪ್ರಾರಂಭವಾಯಿತು ಎನ್ನಬಹುದು. ಇವರ ಅವಧಿಯಲ್ಲಿ ಲಾಲ್‌ಬಾಗ್‌ನ ವಿಸ್ತರಣೆ ಮತ್ತು ವ್ಯವಸ್ಥಿತ ಅಭಿವೃದ್ಧಿಗಳೆರಡೂ ಕೈಗೂಡಿದವು. ೧೯ನೇ ಶತಮಾನದ ಅಂತ್ಯದ ವೇಳೆಗೆ, ಜಾನ್ ಕೆಮೆರಾನ್‌ರ ಪ್ರಯತ್ನದಿಂದಾಗಿ ಲಾಲ್‌ಬಾಗ್‌ನ ಮೂಲ ವಿಸ್ತಾರವು ೪೫ ಎಕರೆಯಿಂದ ೧೦೦ ಎಕರೆಗೆ ವಿಸ್ತರಿಸಲ್ಪಟ್ಟಿತು. ವಿಶ್ವವಿಖ್ಯಾತ ಗಾಜಿನ ಮನೆಯ ನಿರ್ಮಾಣವನ್ನಿಲ್ಲಿ ೧೮೮೯ ರಲ್ಲಿ ಕೈಗೊಳ್ಳಲಾಯಿತು. ಮೈಸೂರು ಪ್ರಾಂತ್ಯದಲ್ಲಿ ಅನೇಕ ಹಣ್ಣು, ತರಕಾರಿ ಪ್ಲಾಂಟೇಶನ್ ಬೆಳೆಗಳನ್ನು ವಾಣಿಜ್ಯ ಪ್ರಮಾಣದಲ್ಲಿ ಬೆಳೆಯುವುದನ್ನು ಪ್ರೋತ್ಸಾಹಿಸಿದ ಕೀರ್ತಿ ನಿಸ್ಸಂದೇಹವಾಗಿ ಇವರಿಗೆ ಸಲ್ಲುತ್ತದೆ. ಈ ಎಲ್ಲಾ ಕಾರಣಗಳಿಂದಲೇ ೧೮೭೪ ರಿಂದ ೧೯೦೮ ರವರೆಗೆ ಜಾನ್ ಕೆಮೆರಾನ್‌ರು ಪೂರೈಸಿದ ಸೇವಾವಧಿಯನ್ನು ಲಾಲ್‌ಬಾಗ್‌ನಲ್ಲಿ ಸಸ್ಯಗಳನ್ನು ಪರಿಚಯಿಸಿದ ಸುವರ್ಣಯುಗವೆಂದು ಕರೆಯಲಾಗುತ್ತಿದೆ.

ಇವರ ತರುವಾಯ ಲಾಲ್‌ಬಾಗ್‌ನ ನಿರ್ವಹಣೆಯನ್ನು ಜಿ.ಹೆಚ್.ಕೃಂಬಿಗಲ್‌ರವರು ೧೯೦೮ರಲ್ಲಿ ವಹಿಸಿಕೊಂಡರು. ಇವರು ಲಾಲ್‌ಬಾಗ್ ಉದ್ಯಾನವನದಲ್ಲಿ ಮತ್ತು ಮೈಸೂರು ಪ್ರಾಂತ್ಯದಲ್ಲಿ ಅವಿಸ್ಮರಣೀಯ ಸೇವೆಯನ್ನು ಸಲ್ಲಿಸಿರುವರು. ಇವರು ಸಹ ತಮ್ಮ ಪೂರ್ವಾಧಿಕಾರಿಗಳಂತೆ ಲಾಲ್‌ಬಾಗ್‌ನಲ್ಲಿ ಅನೇಕ ದೇಶೀಯ ಮತ್ತು ವಿದೇಶೀ ಸಸ್ಯ ಪ್ರಭೇದಗಳನ್ನು ತರಿಸಿ, ನೆಡಿಸಿ ಸುಂದರೀಕರಣಗೊಳಿಸಿದರು ಹಾಗೂ ಬೆಂಗಳೂರು ಮತ್ತು ಮೈಸೂರು ನಗರಗಳಲ್ಲಿ ಅನೇಕ ಸುಂದರ ತೋಟಗಳನ್ನು ಮತ್ತು ಉದ್ಯಾನವನಗಳನ್ನು ರಚಿಸುವುದಕ್ಕೆ ಒತ್ತುಕೊಟ್ಟರು. ಕೃಷ್ಣರಾಜಸಾಗರ ಜಲಾಶಯದ ಬದಿಯಲ್ಲಿ ವಿಶ್ವವಿಖ್ಯಾತ ಬೃಂದಾವನ ಉದ್ಯಾನವನವನ್ನು ಪ್ರಾರಂಭಿಸಿದವರು ಸಹ ಇವರೇ. ೧೯೧೨ ರಲ್ಲಿ ಕೃಂಬಿಗಲ್‌ ವರು ಮೈಸೂರು ಉದ್ಯಾನ ಕಲಾಸಂಘವನ್ನು ಪ್ರಾರಂಭಿಸಿ, ಈ ಸಂಘದ ಮೂಲಕ ಲಾಲ್‌ಬಾಗ್‌ನಲ್ಲಿ ಪುಷ್ಪ ಪ್ರದರ್ಶನಗಳನ್ನು ನಿಯಮಿತವಾಗಿ ನಡೆಸುವುದಕ್ಕೆ ಚಾಲನೆ ನೀಡಿದರು. ಇವರ ಅವಧಿಯಲ್ಲಿಯೇ ಲಾಲ್‌ ಬಾಗ್ ವಾಣಿಜ್ಯ ಸಸ್ಯಗಳ ಬ್ಯೂರೋ ಮತ್ತು ತೋಟಗಾರಿಕೆ ತರಬೇತಿ ಕೇಂದ್ರಗಳು ಪ್ರಾರಂಭಿಸಲ್ಪಟ್ಟವು. ಈ  ರೀತಿ ಇವರು ಇಲಾಖೆಯಲ್ಲಿ ೨೫ ವರ್ಷಗಳ ಅವಿಸ್ಮರಣೀಯ ಸೇವೆ ಸಲ್ಲಿಸಿ ೧೯೩೨ರಲ್ಲಿ ಸೇವಾ ನಿವೃತ್ತರಾದರು. ಇವರ ನಂತರ ಎಚ್.ಸಿ. ಜವರಾಯರವರು ೧೯೩೨ ರಲ್ಲಿ ಲಾಲ್‌ಬಾಗ್ ಮತ್ತು ತೋಟಗಾರಿಕೆ ಇಲಾಖೆಗಳ ನಿರ್ವಹಣೆಯನ್ನು ಕೈಗೆತ್ತಿಕೊಂಡರು. ಇವರು ಲಂಡನ್ನಿನ ರಾಯಲ್ ಬಟಾನಿಕಲ್ ಗಾರ್ಡನ್, ಕ್ಯೂ ನಲ್ಲಿ ತರಬೇತಿಯನ್ನು ಪಡೆದಂತವರಾಗಿದ್ದರು. ಇವರು ಮೈಸೂರು ರಾಜ್ಯದಲ್ಲಿ ತೋಟಗಾರಿಕೆಯ ಸರ್ವತೋಮುಖ ಅಭಿವೃದ್ಧಿಗೆ ಭದ್ರವಾದ ಬುನಾದಿ ಹಾಕಿದರು. ೧೯೩೮ ರಲ್ಲಿ ಬೆಂಗಳೂರಿನ ಹೆಸರಘಟ್ಟದಲ್ಲಿ ಪ್ರಾರಂಭಿಸಲ್ಪಟ್ಟ ಹಣ್ಣು ಸಂಶೋಧನಾ ಕೇಂದ್ರದಲ್ಲಿ ಹಣ್ಣಿನ ಬೆಳೆಗಳ ಹೊಂದಾಣಿಕೆಯ ಬಗ್ಗೆ ಬೆಳಕು ಚೆಲ್ಲುವ ಸಂಶೋಧನೆಯನ್ನು ಪ್ರಾರಂಭಿಸಿದರು. ಇವರ ಅವಧಿಯಲ್ಲಿಯೇ ೧೯೪೨ರಲ್ಲಿ ತೋಟಗಾರಿಕೆ ಇಲಾಖೆಯ ಮೊಟ್ಟಮೊದಲ ಫಾರ್ಮ ಅನ್ನು ಮದ್ದೂರಿನಲ್ಲಿ ಸ್ಥಾಪಿಸಲಾಯಿತು, ಹಾಗೂ ಈ ಕ್ಷೇತ್ರದಲ್ಲಿ ತರಕಾರಿ ಬೀಜ ಮತ್ತು ಇತರ ಸಸ್ಯ ಸಾಮಗ್ರಿಗಳನ್ನು ಉತ್ಪಾದಿಸಿ ರೈತರಿಗೆ ನೀಡುವುದು, ಹಣ್ಣಿನ ಬೆಳೆಗಳ ಬಗ್ಗೆ ರೈತರಿಗೆ ಪ್ರಾತ್ಯಕ್ಷಿಕೆ ಏರ್ಪಡಿಸುವುದು, ಇತ್ಯಾದಿ ಸ್ತುತ್ಯ ಕಾರ್ಯಗಳನ್ನು ಕೈಗೊಳ್ಳಲಾಯಿತು. ಇವರು ೧೯೪೪ ರಲ್ಲಿ ಸೇವಾ ನಿವೃತ್ತರಾದರು. ಎಚ್.ಸಿ. ಜವರಾಯರವರ ನಂತರ ಕೆ.ನಂಜಪ್ಪನವರು ಲಾಲ್‌ಬಾಗ್ ಮತ್ತು ತೋಟಗಾರಿಕೆ ಇಲಾಖೆಗಳ ನಿರ್ವಹಣೆಯನ್ನು ಕೈಗೆತ್ತಿಕೊಂಡರು. ಇವರು ತಮ್ಮ ಹಿಂದಿನಿಂದಲೂ ಸಾಗಿಬಂದ ಪರಂಪರೆಯನ್ನು ಮುಂದುವರಿಸಿದ್ದಲ್ಲದೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಪೂರೈಸಿದರು.

ಡಾ.ಎಂ.ಎಚ್.ಮರಿಗೌಡರವರು ೧೯೫೧ ರಲ್ಲಿ ತೋಟಗಾರಿಕೆ ಮೇಲ್ವಿಚಾರಕರಾಗಿ ನಿಯುಕ್ತಿಗೊಂಡ ನಂತರ ರಾಜ್ಯದಲ್ಲಿ ತೋಟಗಾರಿಕೆ ಅಭಿವೃದ್ಧಿ ಕಾರ್ಯಗಳು ಅಭೂತ ಪೂರ್ವವಾದ ರೀತಿಯಲ್ಲಿ ನಡೆದವು. ೧೯೬೩ ರಲ್ಲಿ ಸ್ವತಂತ್ರ ತೋಟಗಾರಿಕೆ ಇಲಾಖೆಯು ಅಸ್ತಿತ್ವಕ್ಕೆ ಬಂದು ಇವರ ಹುದ್ದೆಯನ್ನು ತೋಟಗಾರಿಕೆ ನಿರ್ದೇಶಕರ ಹುದ್ದೆಗೆ ಪರಿವರ್ತಿಸಲಾಯಿತು. ಈ ಮೊದಲು ಕೃಷಿ ಇಲಾಖೆಯಡಿಯಲ್ಲಿ ಇದ್ದಂತಹ ಅನೇಕ ತೋಟಗಾರಿಕೆ ಯೋಜನೆಗಳು ಈ ಹೊಸ ಇಲಾಖೆಗೆ ವರ್ಗಾಯಿಸಲ್ಪಟ್ಟವು. ಆನಂತರ ೧೯೬೫ ರಲ್ಲಿ ತೋಟಗಾರಿಕೆ ಇಲಾಖೆಯ ಪುನರ್ ರಚನೆ ಆದನಂತರ ಅನೇಕ ಹೊಸ ಹುದ್ದೆಗಳು ಸೃಷ್ಟಿಸಲ್ಪಟ್ಟವು. ಇದರಿಂದಾಗಿ ರಾಜ್ಯದಲ್ಲಿ ತೋಟಗಾರಿಕೆ ಅಭಿವೃದ್ಧಿ ಕಾರ್ಯಗಳು ಹೆಚ್ಚು ಪರಿಣಾಮಕಾರಿ ರೀತಿಯಲ್ಲಿ ನಡೆಯುವಂತಾದವು. ಇದೇ ವೇಳೆಗೆ ಇನ್ನೂ ಹಲವಾರು ಹೆಚ್ಚಿನ ಯೋಜನೆಗಳು ಮಂಜೂರು ಮಾಡಲ್ಪಟ್ಟವು. ೧೯೫೬ರಲ್ಲಿ ರಾಜ್ಯಗಳ ಪುನರ್ ವಿಂಗಡಣೆಯಾಗಿ ಹೊಸದಾಗಿ ಸೃಷ್ಟಿಸಲ್ಪಟ್ಟ ವಿಶಾಲ ಮೈಸೂರು ರಾಜ್ಯದ ಎಲ್ಲಾ ೧೯ ಜಿಲ್ಲೆಗಳಿಗೆ ತೋಟಗಾರಿಕೆ ಅಭಿವೃದ್ಧಿ ಕಾರ್ಯಕ್ರಮಗಳು ವಿಸ್ತರಿಸಲ್ಪಟ್ಟವು. ಆದ್ದರಿಂದ, ರಾಜ್ಯದಲ್ಲಿ ಸಣ್ಣದಾಗಿ ಕಾರ್ಯ ನಿರ್ವಹಿಸುತ್ತಿದ್ದ ತೋಟಗಾರಿಕೆ ಇಲಾಖೆಯನ್ನು ಒಂದು ಪ್ರಮುಖ ಅಭಿವೃದ್ಧಿ ಇಲಾಖೆಯೆಂದು ಪರಿವರ್ತಿಸುವ ಪ್ರಕ್ರಿಯೆಗೆ ಚಾಲನೆ ನೀಡಿದ ಯಶಸ್ಸು ಇವರದಾಯಿತು. ಡಾ. ಎಂ. ಎಚ್. ಮರಿಗೌಡರವರು ತಮ್ಮ ಸೇವಾವಧಿಯಲ್ಲಿ ತೋಟಗಾರಿಕೆಯನ್ನು ಹಳ್ಳಿಗಾಡುಗಳಿಗೆ ಮತ್ತು ಸಾಮಾನ್ಯ ರೈತರಿಗೆ ಮುಟ್ಟಿಸುವ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪ್ರಾರಂಭಿಸಿದರು. ಅಲ್ಲದೇ, ತೋಟಗಾರಿಕೆ ಇಲಾಖೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಇವರು ನಾಲ್ಕು ಅಂಗಗಳ ಮಾದರಿಯನ್ನು ಅನುಸರಿಸಿದರು. ಇದಕ್ಕಾಗಿ ಇವರು ತೋಟಗಾರಿಕೆ ಬೆಳೆಗಳ ಸಹಕಾರಿ ಮಾರಾಟ ಸಂಘ ಮತ್ತು ಸಸಿ ಬೆಳೆಗಾರರ ಸಹಕಾರಿ ಸಂಘಗಳನ್ನು ಲಾಲ್‌ಬಾಗ್‌ನಲ್ಲಿ ಸ್ಥಾಪಿಸಿದರು. ತಮ್ಮ ಸೇವಾವಧಿಯಲ್ಲಿ ಇವರು ಒಟ್ಟು ೩೫೭ ಕ್ಷೇತ್ರ ಮತ್ತು ನರ್ಸರಿಗಳನ್ನು ಸ್ಥಾಪಿಸಿದರು. ಈ ಕ್ಷೇತ್ರ ಮತ್ತು ನರ್ಸರಿಗಳನ್ನು ಅವರು ತೋಟಗಾರಿಕೆ ಬೆಳೆಗಳನ್ನು ಮತ್ತು ತಂತ್ರಜ್ಞಾನವನ್ನು ರೈತರಿಗೆ ಪ್ರಚುರಪಡಿಸುವ ಪ್ರಾತ್ಯಕ್ಷತಾ ತಾಕುಗಳನ್ನಾಗಿಸುವುದಕ್ಕೆ ಬಳಸಿಕೊಂಡು ಅಭಿವೃದ್ಧಿ ಸಾಧಿಸಿದರು. ಲಾಲ್‌ಬಾಗ್‌ನಲ್ಲಿ ರೈತರ ಪ್ರಯೋಜನಕ್ಕೋಸ್ಕರ ಬೀಜ ಪರೀಕ್ಷೆ ಪ್ರಯೋಗಾಲಯ, ಮಣ್ಣುಪರೀಕ್ಷೆ ಪ್ರಯೋಗಾಲಯ ಮತ್ತು ಸಸ್ಯ ಸಂರಕ್ಷಣೆ ಪ್ರಯೋಗಾಲಯಗಳನ್ನು ಸ್ಥಾಪಿಸಿದರು. ಇದಲ್ಲದೆ, ರಾಜ್ಯದ ಅನೇಕ ನಗರ ಮತ್ತು ಪಟ್ಟಣಗಳಲ್ಲಿ ಉದ್ಯಾನವನ ಮತ್ತು ತೋಟಗಳನ್ನು ನಿರ್ಮಿಸಿದರು. ಲಾಲ್‌ಬಾಗ್ ಸಸ್ಯೋದ್ಯಾನದ ವಿಸ್ತೀರ್ಣವನ್ನು ೨೪೦ ಎಕರೆಗೆ ವಿಸ್ತರಿಸಿದರಲ್ಲದೇ ಅನೇಕಾನೇಕ ದೇಶೀಯ ಮತ್ತು ವಿದೇಶೀ ಸಸ್ಯ ಪ್ರಭೇದಗಳನ್ನು ತರಿಸಿ ನೆಡಿಸಿದರು. ಕರ್ನಾಟಕ ರಾಜ್ಯದಲ್ಲಿ ಒಣ ತೋಟಗಾರಿಕೆಯ ಮುಖ್ಯ ಪ್ರವರ್ತಕರು ಡಾ. ಎಂ. ಎಚ್. ಮರಿಗೌಡ ರವರು. ಇವರು ಒಣ ತೋಟಗಾರಿಕೆಯ ತತ್ವ ಮತ್ತು ಪದ್ಧತಿಗಳನ್ನು ತಾವು ಸ್ಥಾಪಿಸಿದ ತೋಟಗಾರಿಕಾ ಕ್ಷೇತ್ರಗಳಲ್ಲಿ ಪ್ರಾತ್ಯಕ್ಷಿಕೆಗಳ ಮೂಲಕ ರೈತರಿಗೆ ಪ್ರಚುರಪಡಿಸಿದರು. ಇವರ ಈ ಮಹತ್ವಪೂರ್ಣ ಪ್ರಯತ್ನದಿಂದ ಪ್ರೇರಣೆಗೊಂಡ ರಾಜ್ಯದ ರೈತರು ಒಣ ತೋಟಗಾರಿಕೆಯನ್ನು ರಾಜ್ಯದ ಕಡಿಮೆ ಮಳೆ ಬೀಳುವ ಮತ್ತು ಬರ ಪೀಡಿತ ಪ್ರದೇಶಗಳಲ್ಲಿ ನಡೆಸಲು ಯಶಸ್ವಿಯಾದರು. ಇದಲ್ಲದೇ ತೋಟಗಾರಿಕೆಯಲ್ಲಿ ಮಿಶ್ರ ಬೆಳೆ ಪದ್ಧತಿ ಮತ್ತು ಅಂತರ್‌ಬೆಳೆ ಪದ್ಧತಿಗಳನ್ನು ಸಹ ಜನಪ್ರಿಯಗೊಳಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಈ ರೀತಿ ತೋಟಗಾರಿಕೆ ರಂಗಕ್ಕೆ ಡಾ. ಎಂ. ಎಚ್. ಮರಿಗೌಡರು ನೀಡಿದ ಅಭೂತಪೂರ್ವ ಆಯಾಮ ಮತ್ತು ಸಾಧನೆಗಳಿಂದಾಗಿ ಕರ್ನಾಟಕವು ಭಾರತದ ತೋಟಗಾರಿಕೆ ರಾಜ್ಯ ಎಂಬ ಬಿರುದನ್ನು ಪಡೆಯಿತು. ಹಾಗೂ ಡಾ. ಎಂ.ಎಚ್. ಮರಿಗೌಡರ ಹೆಸರು ತೋಟಗಾರಿಕೆ ಅಭಿವೃದ್ಧಿಯ ಇತಿಹಾಸದಲ್ಲಿ ಅಮರವಾಗುವಂತಾಯಿತು. ಕರ್ನಾಟಕವು ಇಡೀ ರಾಷ್ಟ್ರದಲ್ಲಿಯೇ ಒಂದು ಪ್ರತ್ಯೇಕ ತೋಟಗಾರಿಕೆ ಇಲಾಖೆಯನ್ನು ಪಡೆದ ಮೊಟ್ಟ ಮೊದಲ ರಾಜ್ಯ ಹಾಗೂ ಕರ್ನಾಟಕ ಈ ಕ್ರಮವನ್ನು ಅನಂತರ ಇತರ ಅನೇಕ ರಾಜ್ಯಗಳು ಅನುಸರಿಸಿದವು. ಈ ಅನುಕೂಲತೆಯಿಂದಾಗಿಯೇ ರಾಜ್ಯವು ಹಣ್ಣು, ತರಕಾರಿ, ತೋಟದ ಬೆಳೆಗಳು, ಪುಷ್ಪಗಳ ಬೇಸಾಯದಲ್ಲಿ ಹಾಗೂ ಇತರ ದಿಸೆಗಳಲ್ಲಿ ಹೆಮ್ಮೆಪಡುವಂತಹ ಸಾಧನೆಯನ್ನು ಮಾಡುವಲ್ಲಿ ಸಹಕಾರಿಯಾಯಿತು.

ತೋಟಗಾರಿಕೆ ಇಲಾಖೆಯ ಮೂಲ ಉದ್ದೇಶಗಳು

೧) ಕೃಷಿ- ಹವಾಮಾನ ವಲಯಗಳಿಗೆ ಅನುಗುಣವಾಗಿ ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆ;

೨) ವಿವಿಧ ತೋಟಗಾರಿಕೆ ಬೆಳೆಗಳ ಉತ್ಕೃಷ್ಟ ಗುಣಮಟ್ಟದ ಸಸಿ/ಕಸಿ ಗಿಡಗಳ ಉತ್ಪಾದನೆ ಮತ್ತು ವಿಸ್ತರಣೆ;

೩) ಉನ್ನತ ತೋಟಗಾರಿಕೆ ತಂತ್ರಜ್ಞಾನದ ಪ್ರಸರಣ;

೪) ಖುಷ್ಕಿ ತೋಟಗಾರಿಕೆಗೆ ಉತ್ತೇಜನ;

೫) ವಿಶೇಷ ನೀರಾವರಿ ತಂತ್ರಜ್ಞಾನಗಳ ಮೂಲಕ ನೀರಿನ ಮಿತವ್ಯಯ ಸಾಧಿಸಲು ರೈತರಿಗೆ ನೆರವು ನೀಡುವುದು;

೬) ತೋಟಗಾರಿಕೆಯಲ್ಲಿ ಉನ್ನತ ತಾಂತ್ರಿಕತೆಗೆ ಪ್ರೋತ್ಸಾಹ;

೭) ಸಾಲ ಸೌಲಭ್ಯವನ್ನು ಪಡೆಯಲು ರೈತರಿಗೆ ಸಲಹೆ ನೀಡುವುದು;

೮) ತೋಟಗಾರಿಕೆ ಬೆಳೆಗಳಿಗೆ ಸೂಕ್ತ ಸಸ್ಯ ಸಂರಕ್ಷಣಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು;

೯) ತೋಟಗಾರಿಕೆ ಕೊಯ್ಲೋತ್ತರ ನಿರ್ವಹಣೆ ಮತ್ತು ಮಾರುಕಟ್ಟೆಗಳಿಗೆ ನೆರವು ಒದಗಿಸುವುದು;

೧೦) ತೋಟಗಾರಿಕೆ ಉತ್ಪನ್ನಗಳ ರಫ್ತು ಮತ್ತು ಮೌಲ್ಯವರ್ಧನೆಗೆ ರೈತರಿಗೆ ನೆರವು ನೀಡುವುದು;

೧೧) ಮಾನವ ಸಂಪನ್ಮೂಲ ಅಭಿವೃದ್ಧಿಪಡಿಸುವುದು ಮತ್ತು

೧೨) ರೈತರು ಎದುರಿಸುತ್ತಿರುವ ತೀವ್ರತರ ಸಮಸ್ಯೆಗಳ ಪರಿಹಾರಕ್ಕಾಗಿ ಸಂಶೋಧನಾ ಸಂಸ್ಥೆಗಳಿಗೆ ನೆರವು ನೀಡುವುದು.

ತೋಟಗಾರಿಕೆ ಇಲಾಖೆಯ ಅಂಗರಚನೆ

ಇಲಾಖೆಯು, ತೋಟಗಾರಿಕೆ ನಿರ್ದೇಶಕರ ನೇತೃತ್ವದಲ್ಲಿ ನಿರ್ದೇಶನಾಲಯದ ಒಟ್ಟಾರೆ ಆಡಳಿತಾತ್ಮಕ ನಿರ್ವಹಣೆಗೊಳಪಟ್ಟಿದ್ದು, ತೋಟಗಾರಿಕೆ ನಿರ್ದೇಶಕರ ನೆರವಿಗೆ ಮೂರು ತೋಟಗಾರಿಕೆ ಅಪರ ನಿರ್ದೇಶಕರು ಹಾಗೂ ಏಳು ತೋಟಗಾರಿಕೆ ಜಂಟಿ ನಿರ್ದೇಶಕರು ಕೇಂದ್ರ ಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆ. ಜಿಲ್ಲಾ ಮಟ್ಟದಲ್ಲಿ, ತೋಟಗಾರಿಕೆ ಉಪನಿರ್ದೇಶಕರು ಜಿಲ್ಲೆಯ ತೋಟಗಾರಿಕೆ ಅಭಿವೃದ್ಧಿಯ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ರಾಜ್ಯ ವಲಯ) ರಾಜ್ಯವಲಯದಡಿ ಇರುವ ತೋಟಗಾರಿಕೆ ಕ್ಷೇತ್ರಗಳ ಮತ್ತು ನರ್ಸರಿಗಳ ನಿರ್ವಹಣೆ, ವಿವಿಧ ರಾಜ್ಯ ವಲಯ ಮತ್ತು ಕೇಂದ್ರ ವಲಯ ಯೋಜನೆಗಳ ಅನುಷ್ಠಾನ ಹಾಗೂ ಸಹಾಯಕ ತೋಟಗಾರಿಕೆ ನಿರ್ದೇಶಕರ ನೇತೃತ್ವದಲ್ಲಿ ನಿರ್ವಹಿಸಲಾಗುತ್ತಿರುವ ಜಿಲ್ಲಾ ತೋಟಗಾರಿಕೆ ತರಬೇತಿ ಕೇಂದ್ರಗಳ ಮೇಲುಸ್ತುವಾರಿಯಂತಹ ಕಾರ್ಯಗಳನ್ನು ನಿರ್ವಹಿಸುತ್ತಾರೆ. ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಮತ್ತು ಸಹಾಯಕ ತೋಟಗಾರಿಕೆ ನಿರ್ದೇಶಕರು ತಾಲೂಕು ಮಟ್ಟದ  ತೋಟಗಾರಿಕೆ ಅಭಿವೃದ್ಧಿಯ ಜವಾಬ್ದಾರಿ ಹೊಂದಿರುತ್ತಾರೆ ಹಾಗೂ ಆಡಳಿತಾತ್ಮಕವಾಗಿ ಜಿಲ್ಲಾ ಪಂಚಾಯತ್ ವ್ಯಾಪ್ತಿಗೊಳಪಟ್ಟಿರುತ್ತಾರೆ. ಇದಲ್ಲದೇ, ಆಡಳಿತಾತ್ಮಕ ವಿಷಯಗಳ ನಿರ್ವಹಣೆಯಲ್ಲಿ   ನೆರವಾಗಲು ಇತರೆ ಸಿಬ್ಬಂದಿವರ್ಗದವರು ಸಹ ಆಯಾ ಕಛೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ತೋಟಗಾರಿಕೆಯು ಕೃಷಿ ವಲಯದ ಒಂದು ಭಾಗವಾಗಿದ್ದು ಕರ್ನಾಟಕದಲ್ಲಿ ಕ್ಷಿಪ್ರಗತಿಯಲ್ಲಿ ಪ್ರಗತಿ ಹೊಂದುತ್ತಿದೆ. ಸರ್ಕಾರವು ಜಾರಿಗೊಳಿಸುತ್ತಿರುವ ವಿವಿಧ ಕಾರ್ಯಕ್ರಮಗಳಾದ ಅ) ಪ್ರದೇಶ ವಿಸ್ತರಣೆ ಕಾರ್ಯಕ್ರಮ, ಆ) ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಸೂಕ್ಷ್ಮ ನೀರಾವರಿ ಯೋಜನೆ, ಇ) ತೋಟಗಾರಿಕಾ ವಿಸ್ತರಣೆ ಮತ್ತು ತರಬೇತಿ, ಈ) ರೋಗ ಮತ್ತು ಕೀಟಗಳ ನಿರ್ವಹಣೆ. ಉ) ಯಾಂತ್ರೀಕರಣ. ಊ) ಕೊಯ್ಲೋತ್ತರ ನಿರ್ವಹಣೆ, ಮಾರುಕಟ್ಟೆ. ಋ)ಮೂಲಭೂತ ಸೌಕರ್ಯಗಳನ್ನು ಒದಗಿಸುವುದು. ಇತ್ಯಾದಿ ಕಾರ್ಯಕ್ರಮಗಳು ತೋಟಗಾರಿಕೆ ಕ್ಷೇತ್ರದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿವೆ. ಇದರ ಫಲವಾಗಿ ರಾಜ್ಯದಲ್ಲಿ ತೋಟಗಾರಿಕೆ ಬೆಳೆಗಳ ವಿಸ್ತೀರ್ಣ ಹಾಗೂ ಉತ್ಪಾದನೆಯಲ್ಲಿ ಹೆಚ್ಚಳವಾಗಿದೆ. ೨೦೧೪-೧೫ ನೇ ಸಾಲಿನಲ್ಲಿ ೧೮.೯೯ ಲಕ್ಷ ಹೆಕ್ಟೇರ್ ಪ್ರದೇಶವು ತೋಟಗಾರಿಕೆ ಬೆಳೆಗಳಿಂದ ಆವೃತವಾಗಿದ್ದು, ೧೪೭.೮೦ ಲಕ್ಷ ಟನ್ನುಗಳಷ್ಟು ಉತ್ಪಾದನೆಯಾಗಿರುತ್ತದೆ.

 

ಖುಷ್ಕಿ ಪ್ರದೇಶದಲ್ಲೂ ಸಹ ರೈತರ ಆದಾಯವನ್ನು ಹೆಚ್ಚಿಸಲು ತೋಟಗಾರಿಕಾ ಕ್ಷೇತ್ರವು ಹೆಚ್ಚಿನ ಅವಕಾಶವನ್ನು ಒದಗಿಸುತ್ತದೆ. ತೋಟಗಾರಿಕಾ ಬೆಳೆಗಳನ್ನು ಬೆಳೆದಿರುವ ವಿಸ್ತೀರ್ಣ ಹಾಗೂ ತೋಟಗಾರಿಕಾ ಬೆಳೆಗಳ ಉತ್ಪಾದನೆಯಲ್ಲಿ ಆಗಿರುವ ಹೆಚ್ಚಳವೂ ಇದಕ್ಕೆ ಸಾಕ್ಷಿಯಾಗಿದೆ. ಜಲಾನಯನ ಕಾರ್ಯಕ್ರಮಗಳ ಅಡಿಯಲ್ಲಿ ೫೮,೦೦೦ ಹೆಕ್ಟೇರ್ ಪ್ರದೇಶದಲ್ಲಿ ಆಗಿರುವ ತೋಟಗಾರಿಕಾ ಬೆಳೆಗಳ ಅಭಿವೃದ್ಧಿ ಇದಕ್ಕೊಂದು ಉದಾಹರಣೆ. ತೋಟಗಾರಿಕಾ ಕ್ಷೇತ್ರವು ಪ್ರತಿ ಹೆಕ್ಟೇರ್ ಪ್ರದೇಶದಲ್ಲಿ ಅಧಿಕ ಇಳುವರಿಯನ್ನು ನೀಡುವುದರೊಂದಿಗೆ ಉತ್ಪಾದನೆಗಳ ಮೌಲ್ಯವರ್ಧನೆಗೂ ಉತ್ತಮವಾದ ಅವಕಾಶವನ್ನು ನೀಡಲಿದ್ದು, ಈ ಕ್ಷೇತ್ರವು ರಾಜ್ಯದ ಉದ್ದಗಲಕ್ಕೂ ವಿಸ್ತಾರಗೊಳ್ಳುತ್ತಲಿದೆ. ರಾಜಸ್ತಾನದ ನಂತರ ಅತಿ ಹೆಚ್ಚು ಖುಷ್ಕಿ ಜಮೀನನ್ನು ಹೊಂದಿರುವ ಕರ್ನಾಟಕ ರಾಜ್ಯವು, ಅಧಿಕ ಮೌಲ್ಯದೊಂದಿಗೆ ಕಡಿಮೆ ನೀರಿನ ಅವಶ್ಯಕತೆ ಇರುವ ತೋಟಗಾರಿಕಾ ಬೆಳೆಗಳನ್ನು ಬೆಳೆಯಲು ಉತ್ತಮವಾದ ಅವಕಾಶ ಹಾಗೂ ಸಾಮರ್ಥ್ಯವನ್ನು ಹೊಂದಿರುತ್ತದೆ.

ಮುಖ್ಯವಾದ ತೋಟಗಾರಿಕಾ ಬೆಳೆಗಳು: ಆಧುನಿಕ ತೋಟಗಾರಿಕಾ ಕ್ಷೇತ್ರದಲ್ಲಿ ಕರ್ನಾಟಕವು ದೇಶದಲ್ಲಿ ಪ್ರಗತಿ ಹೊಂದುತ್ತಿರುವ ರಾಜ್ಯವಾಗಿದೆ. ರಾಜ್ಯದಲ್ಲಿ ಲಭ್ಯವಿರುವ ವೈವಿಧ್ಯಮಯ ಕೃಷಿ ಪರಿಸರ, ವಿವಿಧ ರೀತಿಯ ಹಾಗೂ ಬಗೆಬಗೆಯ ಹಣ್ಣು, ಹೂ, ತರಕಾರಿ, ಸಾಂಬಾರ ಬೆಳೆಗಳು, ಪ್ಲಾಂಟೇಷನ್‌, ಗೆಡ್ಡೆ/ಗೆಣಸು, ಔಷಧಿ ಹಾಗೂ ಸುಗಂಧ ದ್ರವ್ಯ ಮುಂತಾದ ತೋಟಗಾರಿಕಾ ಬೆಳೆಗಳನ್ನು ರಾಜ್ಯದಲ್ಲಿ ಬೆಳೆಯಲು ವಿಪುಲ ಅವಕಾಶವನ್ನು ನೀಡುತ್ತದೆ. ಕರ್ನಾಟಕ ರಾಜ್ಯವು ಹಣ್ಣುಗಳ ಉತ್ಪಾದನೆಯಲ್ಲಿ ಮೂರನೇ ಸ್ಥಾನದಲ್ಲಿದ್ದು, ತರಕಾರಿ ಬೆಳೆಗಳ ವಿಸ್ತೀರ್ಣ ಹಾಗೂ ಉತ್ಪಾದನೆಯಲ್ಲಿ ಐದನೇ ಸ್ಥಾನವನ್ನು ಪಡೆದಿರುತ್ತದೆ. ಹೂ ಬೆಳೆಗಳ ವಿಸ್ತೀರ್ಣದಲ್ಲಿ ಮೊದಲನೆ ಸ್ಥಾನದಲ್ಲಿರುವ ರಾಜ್ಯವು, ಹೂಗಳ ಉತ್ಪಾದನೆಯಲ್ಲಿ ಮೂರನೇ ಸ್ಥಾನವನ್ನು ಪಡೆದಿರುತ್ತದೆ. ಪ್ಲಾಂಟೇಷನ್‌ ಬೆಳೆಗಳ ವಿಸ್ತೀರ್ಣ ಹಾಗೂ ಉತ್ಪಾದನೆಯಲ್ಲಿ ಕ್ರಮವಾಗಿ ಎರಡನೇ ಹಾಗೂ ಮೂರನೇ ಸ್ಥಾನವನ್ನು ಪಡೆದಿರುತ್ತದೆ. ಕರ್ನಾಟಕವು ಸಾಂಬಾರ ಬೆಳೆ,ಔಷಧಿ ಸಸ್ಯ ಹಾಗೂ ಸುಗಂಧ ದ್ರವ್ಯಗಳ ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿದೆ.

ಕರ್ನಾಟಕ ರಾಜ್ಯದಲ್ಲಿ ಸೇಬುಹಣ್ಣನ್ನು ಬಿಟ್ಟು ದೇಶದ ವಿವಿಧ ಭಾಗಗಳಲ್ಲಿ ಬೆಳೆಯುವ ಎಲ್ಲಾ ಬಗೆಯ ಹಣ್ಣುಗಳನ್ನು ಭಾಗಶಃ ಬೆಳೆಯಲಾಗುತ್ತಿದೆ. ಸೇಬುಹಣ್ಣನ್ನು ಕೂಡ ಕಳೆದ ಶತಮಾನದಲ್ಲೊಮ್ಮೆ ಬೆಂಗಳೂರಿನ ಸುತ್ತ ಮುತ್ತ ವ್ಯವಹಾರಿಕ ದೃಷ್ಟಿಯಿಂದ ಬೆಳೆಯಲಾಗಿತ್ತು. ಪ್ರಸ್ತುತ ರಾಜ್ಯದಲ್ಲಿ ದಾಳಿಂಬೆ, ಅಂಜೂರ, ಹಲಸಿನ ಹಣ್ಣು, ಪಪ್ಪಾಯಿ, ಕಲ್ಲಂಗಡಿ ಮತ್ತು ಖರ್ಬೂಜ ಹಣ್ಣುಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ. ಇದಲ್ಲದೆ ರಾಜ್ಯವು ಇತರೆ ಹಲವಾರು ಪ್ರಧಾನವಲ್ಲದ ಹಾಗೂ ಕಾಡು ಜಾತಿಯ ಹಣ್ಣುಗಳ ತವರು ಮನೆಯಾಗಿದೆ. ರಾಜ್ಯದಲ್ಲಿ ಬೆಳೆದ ಹಣ್ಣುಗಳನ್ನು ದೇಶ ವಿದೇಶಗಳ ವಿವಿಧ ಮಾರುಕಟ್ಟೆಗಳಿಗೆ ಕಳುಹಿಸಲಾಗುತ್ತಿದೆ. ಪ್ರಾರಂಭದಿಂದಲೂ ವಾಣಿಜ್ಯಕವಾಗಿ ಮುಖ್ಯವಾಗಿರುವ ಉಷ್ಪಗಳ ಉತ್ಪಾದನಾ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯವು ದೇಶದಲ್ಲೇ ಮುಂಚೂಣಿಯಲ್ಲಿದೆ. ರಾಜ್ಯದಲ್ಲಿ ಸುಮಾರು ೨೧,೦೦೦ ಹೆಕ್ಟೇರ್ ಪ್ರದೇಶದಲ್ಲಿ ಸಾಂಪ್ರದಾಯಿಕ ಪುಷ್ಟಗಳನ್ನು ಬೆಳೆಯಲಾಗುತ್ತಿದ್ದು ಪ್ರತಿ ವರ್ಷ ೧.೫ ಲಕ್ಷ ಟನ್ನಿನಷ್ಟು ಪುಷ್ಪಗಳನ್ನು ಉತ್ಪಾದಿಸಲಾಗುತ್ತಿದೆ. ಮುಖ್ಯವಾಗಿ ರಾಜ್ಯದಲ್ಲಿ ಬೆಳೆಯುತ್ತಿರುವ ಪುಷ್ಪಗಳೆಂದರೆ ಸೇವಂತಿಗೆ, ಚೆಂಡುಹೂ, ಕನಕಾಂಬರ, ಗುಲಾಬಿ, ಮಲ್ಲಿಗೆ, ಸುಗಂಧ ರಾಜ, ಗೈಲಾರ್ಡಿಯಾ, ಸಂಪಿಗೆ, ಇತ್ಯಾದಿ.

ರಾಜ್ಯದಲ್ಲಿ ತೋಟಗಾರಿಕಾ ಬೆಳೆಗಳ ವಿಸ್ತೀರ್ಣದಲ್ಲಿ ಶೇ.೧.೫ ರಷ್ಟು ಪಾಲನ್ನು ಹೊಂದಿರುವ ಪುಷ್ಪೋದ್ಯಮವು ಪ್ರತಿ ವರ್ಷ ರೂ.೩೦೦ ಕೋಟಿಗಳಿಗೂ ಮಿಗಿಲಾಗಿ ಆದಾಯವನ್ನು ತರುತ್ತಿದೆ. ಇದು ವಾಣಿಜ್ಯಿಕ ಪುಷ್ಪೋದ್ಯಮದ ಹೆಚ್ಚಿನ ಲಾಭದಾಯಕತೆಯನ್ನು ತೋರಿಸುತ್ತದೆ. ಪುಷ್ಪ ಕೃಷಿಯಲ್ಲಿನ ಪ್ರತಿ ಹಿಡುವಳಿಯ ಸರಾಸರಿ ವಿಸ್ತೀರ್ಣವು ಕೇವಲ ಅರ್ಧ ಎಕರೆ ಮಾತ್ರ. ಸುಮಾರು ೫೦,೦೦೦ ಕುಟುಂಬಗಳು ಸಂಪೂರ್ಣವಾಗಿ ಪುಷ್ಪ ಕೃಷಿಯ ಮೇಲೆ ಅವಲಂಬಿತವಾಗಿದೆ ಹಾಗೂ ಎರಡು ಲಕ್ಷಕ್ಕೂ ಅಧಿಕ ಜನರು ಪರೋಕ್ಷವಾಗಿ ಪುಷ್ಪೋದ್ಯಮ ವ್ಯವಹಾರದಲ್ಲಿ ತೊಡಗಿಸಿ ಕೊಂಡಿರುತ್ತಾರೆ. ರಾಜ್ಯದಲ್ಲಿ ನಿಯಂತ್ರಿತ  ಪರಿಸರದಲ್ಲಿ ಪುಷ್ಪಗಳ ಬೇಸಾಯವು ತುಂಬಾ ಇತ್ತೀಚಿನ ಬೆಳವಣಿಗೆ. ಇದು ೯೦ರ ದಶಕದ ಪ್ರಾರಂಭದಲ್ಲಿ ಮೊದಲಾಯಿತು. ಪ್ರಥಮವಾಗಿ ನಿಯಂತ್ರಿತ ತಾಂತ್ರಿಕತೆಯ ಕೃಷಿಯನ್ನು ಗುಲಾಬಿ ಬೇಸಾಯದಲ್ಲಿ ಪ್ರಾರಂಭಿಸಲಾಯಿತು. ಹಾಗೂ ಇವತ್ತಿಗೂ ಕೂಡ ರಾಜ್ಯದಲ್ಲಿ ಬೆಳೆಯುತ್ತಿರುವ ಪುಷ್ಪಗಳಲ್ಲಿ ಗುಲಾಬಿಯು ಮಂಚೂಣಿಯಲ್ಲಿದೆ. ಹೆಚ್ಚಿನ ತಾಂತ್ರಿಕತೆ ಬಳಸಿ ಕೃಷಿ ಮಾಡುತ್ತಿರುವ ಇತರ ಪುಷ್ಪಗಳೆಂದರೆ ಜರ್ಬೇರಾ ಕಾರ್ನೇಷನ್‌, ಹಸಿರುಮನೆಯಲ್ಲಿ ಬೆಳೆಸಿದ ಸೇವಂತಿಗೆ, ಆಂತೋರಿಯಂ ಹಾಗೂ ಆರ್ಕಿಡ್‌ಗಳು. ರಾಜ್ಯದಲ್ಲಿ ಒಟ್ಟು ೩೦ ದೊಡ್ಡ ಪ್ರಮಾಣದ (ಕಂಪನಿಗಳು) ಹಾಗೂ ೨೦೦ ಸಣ್ಣ ಪ್ರಮಾಣದ ಘಟಕಗಳು (ರೈತರು) ಈ ರೀತಿಯ ಹೈಟೆಕ್ ತಾಂತ್ರಿಕತೆ ಬಳಸಿ ಕತ್ತರಿಸಿದ ಪುಷ್ಪಗಳ ಕೃಷಿಯಲ್ಲಿ ತೊಡಗಿಸಿಕೊಂಡಿವೆ. ಈ ರೀತಿಯ ಹೈಟೆಕ್ ಕತ್ತರಿಸಿದ ಪುಷ್ಪಗಳ ಉದ್ಯಮದ ಒಟ್ಟು ಮೌಲ್ಯವು ವಾರ್ಷಿಕ ಸುಮಾರು ೫೦ ಕೋಟಿ ರೂಪಾಯಿಗಳಾಗಿರುತ್ತದೆ. ಖುಷ್ಕಿ ಪ್ರದೇಶದಲ್ಲೂ ಸಹ ರೈತರ ಆದಾಯವನ್ನು ಹೆಚ್ಚಿಸಲು ತೋಟಗಾರಿಕಾ ಕ್ಷೇತ್ರವು ಹೆಚ್ಚಿನ ಅವಕಾಶವನ್ನು ಒದಗಿಸುತ್ತದೆ. ತೋಟಗಾರಿಕಾ ಬೆಳೆಗಳನ್ನು ಬೆಳೆದಿರುವ ವಿಸ್ತೀರ್ಣ ಹಾಗೂ ತೋಟಗಾರಿಕಾ ಬೆಳೆಗಳ ಉತ್ಪಾದನೆಯಲ್ಲಿ ಆಗಿರುವ ಹೆಚ್ಚಳವೂ ಇದಕ್ಕೆ ಸಾಕ್ಷಿಯಾಗಿದೆ. ಜಲಾನಯನ ಕಾರ್ಯಕ್ರಮಗಳ ಅಡಿಯಲ್ಲಿ ೫೮,೦೦೦ ಹೆಕ್ಟೇರ್ ಪ್ರದೇಶದಲ್ಲಿ ಆಗಿರುವ ತೋಟಗಾರಿಕಾ ಬೆಳೆಗಳ ಅಭಿವೃದ್ಧಿ ಇದಕ್ಕೊಂದು ಉದಾಹರಣೆ. ತೋಟಗಾರಿಕಾ ಕ್ಷೇತ್ರವು ಪ್ರತಿ ಹೆಕ್ಟೇರ್ ಪ್ರದೇಶದಲ್ಲಿ ಅಧಿಕ ಇಳುವರಿಯನ್ನು ನೀಡುವುದರೊಂದಿಗೆ ಉತ್ಪಾದನೆಗಳ ಮೌಲ್ಯವರ್ಧನೆಗೂ ಉತ್ತಮವಾದ ಅವಕಾಶವನ್ನು ನೀಡಲಿದ್ದು, ಈ ಕ್ಷೇತ್ರವು ರಾಜ್ಯದ ಉದ್ದಗಲಕ್ಕೂ ವಿಸ್ತಾರಗೊಳ್ಳುತ್ತಲಿದೆ. ರಾಜಸ್ತಾನದ ನಂತರ ಅತಿ ಹೆಚ್ಚು ಖುಷ್ಕಿ ಜಮೀನನ್ನು ಹೊಂದಿರುವ ಕರ್ನಾಟಕ ರಾಜ್ಯವು, ಅಧಿಕ ಮೌಲ್ಯದೊಂದಿಗೆ ಕಡಿಮೆ ನೀರಿನ ಅವಶ್ಯಕತೆ ಇರುವ ತೋಟಗಾರಿಕಾ ಬೆಳೆಗಳನ್ನು ಬೆಳೆಯಲು ಉತ್ತಮವಾದ ಅವಕಾಶ ಹಾಗೂ ಸಾಮರ್ಥ್ಯವನ್ನು ಹೊಂದಿರುತ್ತದೆ.

ಹೈಟೆಕ್ ಪುಷ್ಪ ಕೃಷಿಯು ಭಾರತ ದೇಶದಲ್ಲಿ ಪ್ರಥಮವಾಗಿ ಕರ್ನಾಟಕ ರಾಜ್ಯದಲ್ಲಿ ಪ್ರಾರಂಭವಾಯಿತು. ಸುಮಾರು ೧೯೬೦ ರ ದಶಕದಲ್ಲೇ ಇಂಡೋ ಅಮೇರಿಕನ್ ಹೈಬ್ರಿಡ್ ಸೀಡ್ಸ್ ಕಂಪನಿಯು ಬೆಂಗಳೂರಿನಲ್ಲಿ ಹಸಿರುಮನೆ ವಾತಾವರಣದಲ್ಲಿ ಹೂಗಳನ್ನು ಬೆಳೆಸಲು ಪ್ರಾರಂಭಿಸಿತು. ಪ್ರಾಯಶಃ ಇದು ಭಾರತದಲ್ಲಿ ಹೈಟೆಕ್ ಪುಷ್ಪೋಧ್ಯಮದ ಪ್ರಾರಂಭ. ಇದು ೧೯೯೦ರ ದಶಕದಲ್ಲಿ ದೊಡ್ಡ ಪ್ರಮಾಣದಲ್ಲಿ ಹೈಟೆಕ್ ಪುಷ್ಪೋದ್ಯಮವನ್ನು ಸ್ಥಾಪಿಸಲು ದಾರಿ ಮಾಡಿಕೊಟ್ಟಿತು. ಈಗಲೂ ಸಹ ಕರ್ನಾಟಕವು ಹೈಟೆಕ್ ಹೂಗಳ ಉತ್ಪಾದನೆಯಲ್ಲಿ ಶೇ.೪೦ ರಷ್ಟು ಪಾಲನ್ನು ಪಡೆದು ದೇಶದಲ್ಲಿ ಮಂಚೂಣಿಯಲ್ಲಿದೆ. ರಾಜ್ಯದಲ್ಲಿ  ಪ್ರಮುಖವಾಗಿ ಬೆಳೆಯಲಾಗುತ್ತಿರುವ ತರಕಾರಿ ಬೆಳೆಗಳೆಂದರೆ ಈರುಳ್ಳಿ, ಆಲೂಗೆಡ್ಡೆ, ಟೊಮ್ಯೊಟೊ, ಹಸಿಮೆಣಸಿನಕಾಯಿ, ಬದನೆಕಾಯಿ, ಬೆಂಡೆ, ಕ್ಯಾರೆಟ್, ಮೂಲಂಗಿ, ಹುರಳಿಕಾಯಿ, ಕುಂಬಳ ಜಾತಿಯ ತರಕಾರಿಗಳು, ಹಸಿರು ಸೊಪ್ಪುಗಳು ಇತ್ಯಾದಿ. ಈ ಬೆಳೆಗಳಲ್ಲಿ ಸಮಗ್ರ ಅಭಿವೃದ್ಧಿಯನ್ನು ಕಾಣಲು ಹಾಗೂ ಪ್ರಸ್ತುತದಲ್ಲಿ ರೈತರ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಇಳುವರಿ ಹೆಚ್ಚಿಸಲು ಹಾಗೂ ಕಡಿಮೆ ಖರ್ಚಿನ ಬೇಸಾಯ ಕ್ರಮಗಳನ್ನು ಅಳವಡಿಸಿಕೊಳ್ಳಲು ಸಹಾಯವಾಗುವಂತೆ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಇದರಲ್ಲಿ ಮುಖ್ಯವಾದವುಗಳೆಂದರೆ ಕೃಷಿಯಲ್ಲಿ ಯಾಂತ್ರೀಕರಣ, ಕೊಯ್ಲೋತ್ತರ ನಿರ್ವಹಣೆ, ಸಂಸ್ಕರಣೆ ಹಾಗೂ ಮೌಲ್ಯವರ್ಧನೆ, ಮಾರಾಟ ಮಾಡಲು ಪೂರಕವಾದ ಸಂಪರ್ಕ ಹಾಗೂ ಪ್ರಸರಣ ಕಾರ್ಯ ಇತ್ಯಾದಿ, ಇದಕ್ಕಾಗಿ ವಿಸ್ತೃತವಾದ ಅಭಿವೃದ್ಧಿ ಯೋಜನೆಯನ್ನು ೧೫೮.೬೫ ಲಕ್ಷ ರೂಪಾಯಿಗಳ ಅಂದಾಜಿನೊಂದಿಗೆ ೨೦೦೫-೦೬ನೇ ವರ್ಷದಲ್ಲಿ ಸಿದ್ಧಪಡಿಸಲಾಯಿತು. ತೋಟಗಾರಿಕೆ ಇಲಾಖೆಯು ರಾಜ್ಯದಲ್ಲಿ ಸುಂದರವಾದ ಅನೇಕ ಉದ್ಯಾನವನ ಹಾಗೂ ಸಸ್ಯ ಕ್ಷೇತ್ರಗಳನ್ನು ನಿರ್ಮಿಸುವಲ್ಲಿ ಹಾಗೂ ನಿರ್ವಹಿಸುವಲ್ಲಿ ಗಣನೀಯ ಪಾತ್ರವಹಿಸಿದ್ದು ಪ್ರಶಂಸನೀಯವಾಗಿದೆ. ರಾಜ್ಯವು ತುಂಬಾ ಹಿಂದಿನಿಂದಲೂ ಪ್ರಸಿದ್ದ ಉದ್ಯಾನವನಗಳನ್ನು ನಿರ್ಮಿಸುವ ಸಂಪ್ರದಾಯವನ್ನು ಹೊಂದಿರುವ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದೆ. ತನ್ನ ಉದ್ದಗಲಕ್ಕೂ ತುಂಬಾ ಪ್ರಸಿದ್ಧವಾದ ಹಾಗೂ ಸುಂದರವಾದ ಉದ್ಯಾನವನಗಳನ್ನು ಹೊಂದಿರುವ ಬೆಂಗಳೂರು, ದೇಶದಲ್ಲಿ ಉದ್ಯಾನವನಗಳ ನಗರವೆಂದು ಖ್ಯಾತಿಯನ್ನು ಪಡೆದಿದೆ.

ಮೈಸೂರು ನಗರದಲ್ಲೂ ಕೂಡ ಇಲಾಖೆಯು ತುಂಬಾ ವಿಶಿಷ್ಟವಾದ ಮತ್ತು ಸುಂದರವಾದ ಉದ್ಯಾನವನಗಳನ್ನು ನಿರ್ಮಿಸಿ ನಿರ್ವಹಿಸುತ್ತಿದೆ. ಮೈಸೂರು ನಗರದ ಸಮೀಪದಲ್ಲಿರುವ ಕೃಷ್ಣರಾಜ ಸಾಗರದಲ್ಲಿನ ವಿಶ್ವಪ್ರಸಿದ್ಧ ಬೃಂದಾವನ ಉದ್ಯಾನವು ಪ್ರವಾಸಿಗರನ್ನು ಮರಳು ಮಾಡುವ ತನ್ನ ಸಹಜ ಪ್ರಾಕೃತಿಕ ಸೌಂದರ್ಯದಿಂದ ಹೆಸರು ಮಾಡಿದೆ. ಇದೇ ರೀತಿಯಾಗಿ ರಾಜ್ಯದ ವಿವಿಧ ನಗರ ಪಟ್ಟಣಗಳಲ್ಲಿ ಸುಂದರವಾದ ಉದ್ಯಾನವನಗಳನ್ನು ನಿರ್ಮಿಸಿ, ನಿರ್ವಹಿಸುತ್ತಿರುವುದರಿಂದ ರಾಜ್ಯದ ಜನತೆಯು ಈ ಉದ್ಯಾನವನಗಳ ಸೌಂದರ್ಯವನ್ನು ಆಸ್ವಾದಿಸುತ್ತಾ ಆನಂದಿಸುತ್ತಿದೆ.

ರಾಜ್ಯದಲ್ಲಿ ತೋಟಗಾರಿಕಾ ಇಲಾಖೆ ಎರಡು ಗಿರಿಧಾಮ ಗಳನ್ನು ನಿರ್ವಹಣೆ ಮಾಡುತ್ತಿವೆ. ಅವುಗಳೆಂದರೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿನ ನಂದಿ ಬೆಟ್ಟ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕೃಷ್ಣರಾಜೇಂದ್ರ ಬೆಟ್ಟದಲ್ಲಿನ ಕೆಮ್ಮಣ್ಣು ಗುಂಡಿ. ಈ ಎರಡೂ ಗಿರಿಧಾಮಗಳು ಸಮುದ್ರ ಮಟ್ಟದಿಂದ ಕ್ರಮವಾಗಿ ೪,೮೫೦ ಹಾಗೂ ೪,೯೦೦ ಅಡಿಗಳಷ್ಟು ಎತ್ತರದಲ್ಲಿವೆ. ಈ ಎರಡೂ ಗಿರಿಧಾಮಗಳಲ್ಲಿ ಇಲಾಖೆಯು ಹುಲುಸಾದ ಹುಲ್ಲುಹಾಸನ್ನು ನಿರ್ಮಿಸುವುದರ ಮೂಲಕ, ವಾರ್ಷಿಕ ಮತ್ತು ಬಹುವಾರ್ಷಿಕ ಹೂ ಗಿಡ ಮರಗಳನ್ನು  ಬೆಳೆಸುವುದರ ಮೂಲಕ ಹಾಗೂ ವಿವಿಧ ಜಾತಿಯ ಗಿಡ ಹಾಗೂ ಮರಗಳ ಜಾತಿಯನ್ನು ಬೆಳೆಸುವುದರ ಮೂಲಕ ತುಂಬಾ ಸುಂದರವಾಗಿಸಿದೆ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಗೆ ತಂಗಲು ಅವಶ್ಯವಿರುವ ಸೌಲಭ್ಯವನ್ನು ಕೂಡ ಈ ಎರಡು ಗಿರಿಧಾಮಗಳಲ್ಲಿ ನಿರ್ಮಿಸಲಾಗಿದೆ. ಕರ್ನಾಟಕ ಸರ್ಕಾರದ ತೋಟಗಾರಿಕಾ ಇಲಾಖೆಯು ಹೊಸ ಶತಮಾನದಲ್ಲಿ ಆಧುನಿಕವಾದ ಜೈವಿಕ ತಂತ್ರಜ್ಞಾನದ ಕೇಂದ್ರವನ್ನು ಬೆಂಗಳೂರಿನ ಹುಳಿಮಾವು ತೋಟಗಾರಿಕಾ ಕ್ಷೇತ್ರದಲ್ಲಿ ಸ್ಥಾಪಿಸಿದೆ. ಪ್ರಮುಖವಾಗಿ ತೋಟಗಾರಿಕಾ ಅಭಿವೃದ್ಧಿಯನ್ನು ಜೈವಿಕ ತಂತ್ರಜ್ಞಾನದ ವಿವಿಧ ಸ್ತರಗಳನ್ನು ಬೆಸೆಯುವ ಗುರಿಯೊಂದಿಗೆ ಸ್ಥಾಪನೆಗೊಂಡಿರುವ ಈ ಕೇಂದ್ರವು ದೇಶದಲ್ಲೇ ಪ್ರಥಮವಾದ ಪ್ರಯತ್ನವಾಗಿದೆ. ಈ ಕೇಂದ್ರದ ಕಾರ್ಯಚಟುವಟಿಕೆಯನ್ನು ೨೦೦೧ ರ ಜನವರಿ ೨೦ ರಂದು ದೇಶಕ್ಕೆ ಸಮರ್ಪಿಸಲಾಯಿತು. ಈ ಕೇಂದ್ರದ ಮುಖ್ಯ ಉದ್ದೇಶವು ರಾಜ್ಯದಲ್ಲಿ ತೋಟಗಾರಿಕಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಅವಶ್ಯವಿರುವ ತಂತ್ರಜ್ಞಾನಗಳನ್ನು ಪರಿಸರ ಸ್ನೇಹಿ ಜೈವಿಕ ತಂತ್ರಜ್ಞಾನ ತಿಳಿವಳಿಕೆಗಳನ್ನು ಬಳಸಿ ಅಭಿವೃದ್ಧಿ ಪಡಿಸಿ ಪ್ರಚುರಪಡಿಸುವುದಾಗಿರುತ್ತದೆ. ಈ ನಿಟ್ಟಿನಲ್ಲಿ ಕೇಂದ್ರದಲ್ಲಿ ವಿನಾಶದ ಅಂಚಿನಲ್ಲಿರುವ ವಿವಿಧ ತೋಟಗಾರಿಕಾ ಬೆಳೆಗಳ ಪ್ರಬೇಧಗಳ, ಔಷಧಿ ಹಾಗೂ ಸುಗಂಧ ದ್ರವ್ಯ ಬೆಳೆಗಳನ್ನು ಒಳಗೊಂಡಂತೆ, ಸಂರಕ್ಷಣೆ ಹಾಗೂ ದಾಖಲಿಸುವಿಕೆ, ಸಸ್ಯಾಭಿವೃದ್ಧಿ, ಸಾವಯವ ತೋಟಗಾರಿಕೆ, ಸಸ್ಯ ಪೋಷಕಾಂಶಗಳು, ಗುಣಮಟ್ಟ ನಿಯಂತ್ರಣ, ರೋಗ ಪತ್ತೆ ಹಚ್ಚುವಿಕೆ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿಗೆ ಅವಶ್ಯಕವಿರುವ ಸೌಲಭ್ಯ ಹಾಗೂ ನಿಪುಣತೆಯನ್ನು ಪೂರೈಸಲಾಗಿದೆ. ೨೦೦೫-೦೬ನೇ ವರ್ಷದಲ್ಲಿ ಈ ಕೇಂದ್ರದ ಅಡಿಯಲ್ಲಿ ನಡೆಸಲಾದ ಮುಖ್ಯ ಕಾರ್ಯಚಟುವಟಿಕೆಗಳು ಈ ಕೆಳಕಂಡಂತೆ ಇದೆ. ಹುಳಿಮಾವು ಜೈವಿಕ ಕೇಂದ್ರದಲ್ಲಿರುವ ಅಂಗಾಂಶ ಕೃಷಿ ಪ್ರಯೋಗಾಲಯವು ದೇಶದಲ್ಲಿ ಸರ್ಕಾರಿ ಸಂಸ್ಥೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಏಕೈಕ ಅಂಗಾಂಶ ಕೃಷಿ ಘಟಕ ಇಲ್ಲಿ ಬಾಳೆ, ವೆನಿಲ್ಲ, ಅಲಂಕಾರಿಕ ಗಿಡಗಳು, ಆರ್ಕಿಡ್ಸ್, ಆಂತೋರಿಯಂ ಮತ್ತಿತ್ತರ ಅನೇಕ ಸುಗಂಧದ್ರವ್ಯ ಹಾಗೂ ಔಷಧಿಯ ಸಸ್ಯಗಳಲ್ಲಿ ಅಂಗಾಂಶ ಕೃಷಿಯ ಸಸಿಗಳನ್ನು ಬೆಳೆಯಲು ಅವಶ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗಿದೆ. ಇದು ವಾರ್ಷಿಕವಾಗಿ ಒಂದು ಲಕ್ಷ ಸಸಿಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಕೇಂದ್ರದಲ್ಲಿ ಉತ್ಪಾದಿಸಲಾದ ಅಂಗಾಂಶ ಕೃಷಿಯ ಬಾಳೆ ಸಸಿಗಳು ರಾಜ್ಯದ ರೈತರಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿರುತ್ತದೆ. ಕರ್ನಾಟಕ ರಾಜ್ಯವು ವಿಫುಲವಾದ ವೈವಿಧ್ಯತೆಯನ್ನು ತೋಟಗಾರಿಕಾ ಬೆಳೆಗಳಲ್ಲಿ ಹೊಂದಿರುತ್ತದೆ. ನಂಜನಗೂಡಿನ ರಸಬಾಳೆ, ಮೈಸೂರಿನ ವೀಳ್ಯದೆಲೆ, ಉಡುಪಿಯ ಮಲ್ಲಿಗೆ, ಕೊಡಗಿನ ಕಿತ್ತಳೆಯನ್ನು ತೋಟಗಾರಿಕೆಯಲ್ಲಿರುವ ವಿಫುಲವಾದ ಜೀವ ವೈವಿಧ್ಯತೆಗಳಿಗೆ ಉದಾಹರಿಸಬಹುದಾಗಿದೆ. ಕರ್ನಾಟಕ ರಾಜ್ಯದ ಪಶ್ಚಿಮ ಘಟ್ಟ ಪ್ರದೇಶ ಹಾಗೂ ಇನ್ನಿತರ ಕಾಡುಗಳ ಪರಿಸರದಲ್ಲಿ ಸುಮಾರು ೨,೫೦೦ ಕ್ಕೂ ಹೆಚ್ಚಿನ ಔಷಧೀಯ ಸಸ್ಯಗಳ ಪ್ರಭೇದಗಳು ಲಭ್ಯವಿದ್ದು ಜೀವವೈವಿಧ್ಯತೆಯ ಸಮೃದ್ಧತೆಗೆ ಹೆಸರುವಾಸಿಯಾಗಿದೆ. ಆದರೆ ಇತ್ತೀಚಿನ ಬೆಳವಣಿಗೆಗಳಾದ ಅವೈಜ್ಞಾನಿಕವಾದ ಸಂಗ್ರಹಣೆ, ಏಕಬೆಳೆ ಪದ್ಧತಿ, ಉತ್ಪಾದನೆಯನ್ನು ಹೆಚ್ಚಿಸುವ ಕೃಷಿ ಪದ್ಧತಿ ಅಳವಡಿಕೆ, ರೋಗ ಹಾಗೂ ಕೀಟಗಳ ಬಾದೆ ಮುಂತಾದ ಕಾರಣಗಳಿಂದ ಹೆಚ್ಚಿನ ಪ್ರಭೇದಗಳು ವಿನಾಶದ ಅಂಚಿಗೆ ತಲುಪಿರುತ್ತದೆ. ಈ ಪ್ರಭೇದಗಳನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸಲು ಕೇಂದ್ರವು ಪ್ರಯೋಗಾಲಯ ಹಾಗೂ ಕ್ಷೇತ್ರ ಮಟ್ಟದಲ್ಲಿ ಈ ಪ್ರಭೇದಗಳ ತಳಿ ಸಂಗ್ರಹಾಲಯಗಳನ್ನು ಅಭಿವೃದ್ಧಿ ಪಡಿಸುವ ಮಹತ್ವವಾದ ಕಾರ್ಯದಲ್ಲಿ ತೊಡಗಿಸಿಕೊಂಡಿರುತ್ತದೆ. ೨೦೦೪- ೦೫ ರ ಹೊತ್ತಿಗೆ ೫೦೦ಕ್ಕೂ ಹೆಚ್ಚು ಔಷಧಿಯ ಹಾಗೂ ಸುಗಂಧದ್ರವ್ಯ ಸಸ್ಯಗಳ ಪ್ರಭೇದಗಳೂ, ೧೫೦ ಜಾತೀಯ ಹಣ್ಣು ಹಾಗೂ ಹೂವಿನ ಸಸ್ಯಗಳನ್ನು ಈ ಕೇಂದ್ರದಲ್ಲಿ ಪರಿಚಯಿಸಿ ಆಓಂ ಮಾರ್ಕರ್ ತಂತ್ರಜ್ಞಾನ ಬಳಸಿ ವಂಶಾವಳಿ ಮಟ್ಟದಲ್ಲಿ ದಾಖಲಿಸಲಾಗಿದೆ. ೨೦೦೫-೦೬ ರ ಅವಧಿಯಲ್ಲಿ ೮೦ ಕ್ಕೂ ಮಿಗಿಲಾದ ಔಷಧಿಯ ಹಾಗೂ ಸುಗಂಧದ್ರವ್ಯ ಸಸ್ಯಗಳ ಪ್ರಭೇದಗಳನ್ನು ಸಂರಕ್ಷಿಸಿ ದಾಖಲಿಸಲಾಯಿತು. ಅವುಗಳಲ್ಲಿರುವ

ಕೆಲವೊಂದು ಪ್ರಭೇದಗಳೆಂದರೆ Crataeva nervela, Entada puseathea, Garcinia xanthochymus, Garcinia Morella, ಇದರ ಜೊತೆಗೆ ವಿನಾಶದ ಅಂಚಿನಲ್ಲಿರುವ ಪ್ರಭೇದಗಳಂತಹ Symplocosa raccemosa, Gnetum Ula, Myristica malabarica ಇತ್ಯಾದಿಗಳಾಗಿರುತ್ತದೆ. ಹಾಗೆಯೇ ೮೫ ಹಣ್ಣು ಹಾಗೂ ಅಲಂಕಾರಿಕ ಸಸ್ಯಗಳನ್ನು ೨೦೦೫-೦೬ರಲ್ಲಿ ಕೇಂದ್ರದ ಪ್ರಭೇದಗಳ ತಳಿಸಂಗ್ರಹಾಲಯಕ್ಕೆ ಸೇರಿಸಲಾಯಿತು.

 

ಸಾವಯವ ಹಣ್ಣು ಮತ್ತು ತರಕಾರಿಗಳನ್ನು ಮಾರಾಟ ಮಾಡುವ ಸಲುವಾಗಿ ಪ್ರತ್ಯೇಕವಾದ ಮಳಿಗೆಯನ್ನು ಬೆಂಗಳೂರಿನ ಲಾಲ್‌ಬಾಗಿನಲ್ಲಿ ತೆರೆಯಲಾಗಿದ್ದು ಇಲ್ಲಿ ಉತ್ಪಾದಕರು ತಮ್ಮ ಉತ್ಪಾದನೆಗಳನ್ನು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಬಹುದಾಗಿದೆ. ಇಲ್ಲಿ ಮಾರಾಟವಾಗುವ ಉತ್ಪನ್ನಗಳಿಗೆ ಜೈವಿಕ ಎಂಬ ಗುರುತನ್ನು ನೀಡಲಾಗಿದ್ದು ಬೆಂಗಳೂರಿನ ಸಾವಯವ ಗ್ರಾಹಕರಲ್ಲಿ ಪ್ರಸಿದ್ಧಿ ಪಡೆದಿರುತ್ತದೆ. ಸುರಕ್ಷಿತ ಆಹಾರದ ಅವಶ್ಯಕತೆಯ ಬಗ್ಗೆ ಅರಿವು ಮತ್ತು ಒಲವು ಹೆಚ್ಚಿನ ಸಾವಯವ ಪದಾರ್ಥಗಳ ಬಗ್ಗೆ ಗ್ರಾಹಕರ ಅವಶ್ಯಕತೆಯನ್ನು ಮನಗಂಡು ಹುಳಿಮಾವಿನಲ್ಲಿರುವ ಜೈವಿಕ ಕೇಂದ್ರವು ಇನ್ನೂ ದೊಡ್ಡದಾದ ಮತ್ತೊಂದು ಜೈವಿಕ ಮಳಿಗೆಯನ್ನು ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ತೆರೆಯಲು ಪ್ರಯತ್ನ ನಡೆಸುತ್ತಿದೆ. ಹಿಂದಿನ ಮೈಸೂರು ಸಂಸ್ಥಾನದ ಅವಧಿಯಲ್ಲಿ ಸಾರ್ವಜನಿಕ ಉದ್ಯಾನವನ ಇಲಾಖೆಯು (ಮುಂದೆ ಇದು ತೋಟಗಾರಿಕಾ ಇಲಾಖೆಯಾಗಿ ಪರಿವರ್ತನೆಗೊಂಡಿತು) ೧೯೪೨ರಲ್ಲಿ ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಸಸಿಗಳನ್ನು ಬೆಳೆಸಿ ರೈತರಿಗೆ ನ್ಯಾಯಬೆಲೆಗೆ ಒದಗಿಸುವ, ತೋಟಗಾರಿಕಾ ಬೆಳೆಗಳ ಬಗ್ಗೆ ರೈತರಿಗೆ ತಿಳಿಸಿಕೊಡಲು ಹಾಗೂ ತಂತ್ರಜ್ಞಾನ ವರ್ಗಾವಣೆಗೆ ಅನುಕೂಲವಾಗುವಂಥ ಪ್ರಾತ್ಯಕ್ಷಿಕಾ ತಾಕನ್ನು ನಿರ್ಮಿಸುವ ಉದ್ದೇಶದಿಂದ ಪ್ರಥಮವಾಗಿ ತೋಟಗಾರಿಕಾ ಕ್ಷೇತ್ರವನ್ನು ಪ್ರಾರಂಭಿಸಲಾಯಿತು.

ತದನಂತರದಲ್ಲಿ ರೈತರಲ್ಲಿ ತೋಟಗಾರಿಕಾ ಕ್ಷೇತ್ರದ ಬಗ್ಗೆ ಹೆಚ್ಚುತ್ತಿರುವ ಅವಶ್ಯಕತೆಗನುಗುಣವಾಗಿ ರಾಜ್ಯದ  ಬೇರೆ ಬೇರೆ ಭಾಗಗಳಲ್ಲಿ ಇದೇ ರೀತಿಯ ತೋಟಗಾರಿಕಾ ಕ್ಷೇತ್ರಗಳು ಹಾಗೂ ಸಸ್ಯ ಕ್ಷೇತ್ರಗಳನ್ನು ಸ್ಥಾಪಿಸುವ  ಅವಶ್ಯಕತೆ ಉಂಟಾಯಿತು. ಈ ರೀತಿ ತೋಟಗಾರಿಕಾ ಕ್ಷೇತ್ರಗಳನ್ನು ಸ್ಥಾಪಿಸುವ ಚಟುವಟಿಕೆಯು ೧೯೬೩ರಲ್ಲಿ ಪ್ರತ್ಯೇಕವಾದ ತೋಟಗಾರಿಕಾ ಇಲಾಖೆಯನ್ನು ಸ್ಥಾಪಿಸುವುದರೊಂದಿಗೆ ತೀವ್ರಗೊಂಡಿತು. ಪ್ರಸ್ತುತದಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ತೋಟಗಾರಿಕಾ ಇಲಾಖೆಯ ಅಧೀನದಲ್ಲಿ ಒಟ್ಟು ೪೧೫ ತೋಟಗಾರಿಕಾ ಹಾಗೂ ಸಸ್ಯ ಕ್ಷೇತ್ರಗಳು ಕಾರ್ಯನಿರ್ವಹಿಸುತ್ತಿದೆ. ತೋಟಗಾರಿಕಾ ಬೆಳೆಗಳನ್ನು ೧೫.೧೮ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದು ೯೫.೮೧ ಲಕ್ಷ ಟನ್ನುಗಳ ಉತ್ಪಾದನೆಯನ್ನು (೨೦೦೨-೦೩) ಪಡೆಯಲಾಗುತ್ತಿದೆ. ತೋಟಗಾರಿಕಾ ಬೆಳೆಗಳನ್ನು ಹೊಂದಿರುವ ಕ್ಷೇತ್ರವು ಒಟ್ಟು ಬೇಸಾಯವಾದ ಕ್ಷೇತ್ರದ ಕೇವಲ ಶೇ. ೧೩ ರಷ್ಟಿದ್ದರೂ ತೋಟಗಾರಿಕಾ ಬೆಳೆಗಳ ಉತ್ಪಾದನಾ ಮೌಲ್ಯವು ರೂ.೮,೪೦೫ ಕೋಟಿಯಾಗಿರುತ್ತದೆ. ಇದು ರಾಜ್ಯದ ಕೃಷಿವಲಯದ ಒಟ್ಟು ಆದಾಯದ ಶೇ. ೪೦ ರಷ್ಟಿರುತ್ತದೆ.

ತಾಳೆ ಬೆಳೆ ಅಭಿವೃದ್ಧಿ ಯೋಜನೆ

ತಾಳೆಬೆಳೆ ಅಭಿವೃದ್ಧಿ ಯೋಜನೆಯು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಶೇ ೭೫:೨೫ ಕ್ರಮಾನುಸಾರ ಅನುಪಾತದಲ್ಲಿ ಅನುದಾನಿತ ಯೋಜನೆ ಆಗಿರುತ್ತದೆ. ತಾಳೆ ಬೆಳೆ ಅಭಿವೃದ್ಧಿ ಯೋಜನೆಯಡಿ, ತಾಳೆ ಬೇಸಾಯವನ್ನು ಕೈಗೊಳ್ಳುವಂತೆ ರೈತರಲ್ಲಿ ಉತ್ತೇಜನ ನೀಡಲು, ರೈತರಿಗೆ ಮೊದಲ ನಾಲ್ಕು ವರ್ಷದಲ್ಲಿ ಗರಿಷ್ಠ ರೂ.೧೬,೯೦೦ ಗಳಿಗೆ ಬೇಸಾಯ ಸಹಾಯ ಧನವನ್ನು ರಸಗೊಬ್ಬರ ಮತ್ತು ಔಷಧಿ ರೂಪದಲ್ಲಿ ಮತ್ತು ತಾಳೆಸಸಿಗಳ ಸಹಾಯ ಧನವಾಗಿ ಪ್ರತಿ ಹೆಕ್ಟೇರಿಗೆ ಗರಿಷ್ಠ ರೂ.೧೦,೦೦೦ ಗಳನ್ನು

ವಿತರಿಸಲಾಗುತ್ತಿದೆ. ಈ ಕಾರ್ಯಕ್ರಮದಡಿ ರೈತರಿಗೆ ಡೀಸಲ್ ಪಂಪ್ ಸೆಟ್ ಕೊಳ್ಳಲು, ತಾಳೆ ಹಣ್ಣು ಕಟಾವು ಮಾಡುವ ಯಂತ್ರ ಕೊಳ್ಳಲು, ತಾಳೆ ಬೆಳೆನಡುವೆ ಅಂತರಬೆಳೆ ಬೆಸಾಯ ಕೈಗೊಳ್ಳುವ ಸಮಗ್ರ ಕೀಟ ಮತ್ತು ಪೋಷಕಾಂಶದ ನಿರ್ವಹಣೆಗಾಗಿ, ಸೌರಶಕ್ತಿ ಚಾಲಿತ ಉಪಕರಣಕ್ಕಾಗಿ ಬಸಿಕಾಲುವೆ ಮತ್ತು ನೀರಾವರಿ ಪೈಪಲೈನಗಾಗಿ, ಹನಿ ನೀರಾವರಿ ಪದ್ಧತಿ ಅಳವಡಿಸಿ ಕೊಳ್ಳಲು, ಹೊಸ ಕೊಳವೆ ಬಾವಿಯನ್ನು ತೆರೆಯಲು ಸಹಾಯ ಧನ ನೀಡಲಾಗುತ್ತಿದೆ. ಇಷ್ಟಲ್ಲದೇ, ರೈತರಿಗೆ ತಾಳೆ ಬೇಸಾಯದ ಬಗ್ಗೆ ತರಬೇತಿ ನೀಡಲು ರೈತರನ್ನು ಪ್ರವಾಸ ಕರೆದುಕೊಂಡು ಹೋಗಲಾಗುತ್ತಿದೆ.

ರಾಜ್ಯದ ತಾಳೆಮೊಳಕೆಗಳ ಬೇಡಿಕೆಯನ್ನು ನೀಗಿಸುವ ಸಲುವಾಗಿ, ಮೈಸೂರು ಜಿಲ್ಲೆಯ, ಹೆಗ್ಗಡದೇವನಕೋಟೆ ತಾಲೂಕಿನ ತಾರಕ ಕ್ಷೇತ್ರದಲ್ಲಿ ೧೨ ಹೆ. ಪ್ರದೇಶದಲ್ಲಿ ಒಂದು ತಾಳೆ ಬೀಜೋತ್ಪಾದನಾ ಕೇಂದ್ರವನ್ನು ಸ್ಥಾಪಿಸಲಾಗಿದೆ. ತಾಳೆಬೆಳೆ ಯೋಜನೆಯಡಿ ತಾಳೆಹಣ್ಣಿನ ಬೆಲೆಯನ್ನು ಪ್ರತಿ ತಿಂಗಳೂ ಸರ್ಕಾರದ ಹಂತದಲ್ಲಿ ನಿಗಧಿ ಪಡಿಸಲಾಗುತ್ತಿದೆ. ಈ ಬೆಲೆಯನ್ನು ಬೆಲೆ ನಿಗಧಿ ಸಮಿತಿಯು ಪ್ರತಿ ನಾಲ್ಕು ತಿಂಗಳಿಗೊಮ್ಮೆ ಸಭೆ ಸೇರಿ ಸರ್ಕಾರವು ನಿಗಧಿಪಡಿಸಿದ ಬೆಲೆಯನ್ನು ಘಟನ್ನೋತ್ತರವಾಗಿ ಅನುಮೋದಿಸುತ್ತದೆ. ಇದರಿಂದಾಗಿ, ತಾಳೆ ರೈತರಿಗೆ ಮತ್ತು ತಾಳೆ ಉದ್ದಿಮೆಗೆ ಒಂದು ಪಾರದರ್ಶಿಕೆಯುಕ್ತ ಮಾರುಕಟ್ಟೆ ವ್ಯವಸ್ಥೆ ದೊರಕಿಸಿ ಕೊಟ್ಟಂತಾಗಿದೆ. ರಾಜ್ಯ ಸರ್ಕಾರವು, ಕಚ್ಚಾ ತಾಳೆ ಎಣ್ಣೆಯ ಮೇಲಿನ ಆಮದು ಸುಂಕವನ್ನು ಮತ್ತೊಮ್ಮೆ ಹೆಚ್ಚಿಸಲು ಭಾರತ ಸರ್ಕಾರಕ್ಕೆ ಹಲವಾರು ಪ್ರಸ್ತಾವನೆಗಳನ್ನು ಸಲ್ಲಿಸಿದ್ದು,ಅದೇ ಸಮಯದಲ್ಲಿ, ಇತರೆ, ಕೃಷಿ ಮತ್ತು ಎಣ್ಣೆ ಕಾಳು ಬೆಳೆಗಳಿಗೆ ಘೋಷಿಸಿರುವಂತೆ, ತಾಳೆಹಣ್ಣಿಗೂ ಕನಿಷ್ಠ ಬೆಂಬಲ ಬೆಲೆಯನ್ನು ಘೋಷಿಸಲು ಭಾರತ ಸರ್ಕಾರದ ಮೇಲೆ ರೈತ ಸಮುದಾಯದ ಹಿತ ಚಿಂತನೆ ಕಾಪಾಡಲು ಒತ್ತಾಯ ತರಲಾಗುತ್ತಿದೆ.

ತೆಂಗು ಅಭಿವೃದ್ಧಿ ಮಂಡಳಿ ಯೋಜನೆಗಳು

ರಾಜ್ಯದಲ್ಲಿ ತೆಂಗು ಬೆಳೆಯ ಅಭಿವೃದ್ಧಿ ಮತ್ತು ಉತ್ಪಾದನೆಯನ್ನು ಹೆಚ್ಚಿಸಲು ಭಾರತ ಸರ್ಕಾರದ ತೆಂಗು ಅಭಿವೃದ್ಧಿ ಮಂಡಳಿ ಶೇಕಡ ೧೦೦ರಷ್ಟು ಅನುದಾನವನ್ನು ಒದಗಿಸಲಾಗುತ್ತಿದೆ. ಈ ಯೋಜನೆಯಡಿ ತೆಗೆದುಕೊಂಡ ಕಾರ್ಯಕ್ರಮಗಳು ೧) ಪ್ರಾತ್ಯಕ್ಷತೆ ತಾಕುಗಳ ಸ್ಥಾಪನೆ ಮತ್ತು ನಿರ್ವಹಣೆ, ೨) ತೆಂಗುಬೆಳೆಯ ಉತ್ಪಾದನೆ ಹಾಗೂ ಉತ್ಪಾದಕತೆಯನ್ನು ಅಭಿವೃದ್ಧಿ ಪಡಿಸಲು ಸಸ್ಯ ಸಂರಕ್ಷಣಾ ಔಷಧಿಗಳು, ಸಾವಯವ ಗೊಬ್ಬರ ಮತ್ತು ರಾಸಾಯನಿಕ ಗೊಬ್ಬರಗಳ ವಿತರಣೆ ಹಾಗೂ ತೆಂಗು ಬೆಳೆಯ ಇಳುವರಿ ಮತ್ತು ಅಭಿವೃದ್ದಿ.  ೩) ಸಂಕರತಳಿ ತೆಂಗಿನ ಸಸಿಗಳನ್ನು ಉತ್ಪಾದಿಸುವುದು. ೪) ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ತುಂಬೆ  ತೋಟಗಾರಿಕೆ ಪ್ರದೇಶದಲ್ಲಿ ನೀರಾ ತಯಾರಿಕಾ ಘಟಕವನ್ನು ಸ್ಥಾಪಿಸುವುದು. ೫) ಮಂಡ್ಯ ಜಿಲ್ಲೆಯ ಜವರನಹಳ್ಳಿ ತೋಟಗಾರಿಕಾ ಪ್ರದೇಶದಲ್ಲಿ ತರಬೇತಿ ಸಂಸ್ಥೆಯ ನಿರ್ವಹಣೆ.

ಸೂಕ್ಷ್ಮ ನೀರಾವರಿ ಯೋಜನೆ:

ಕೃಷಿ/ತೋಟಗಾರಿಕೆ ಇಲಾಖೆಯಲ್ಲಿ ನೀರು ಅತ್ಯವಶ್ಯಕವಾಗಿದ್ದು, ಅಧುನಿಕ ತೋಟಗಾರಿಕೆಯಲ್ಲಿ ನೀರಿನ ಮಿತಬಳಕೆ ಮತ್ತು ಸಂರಕ್ಷಣೆ ಅತ್ಯಂತ ಮಹತ್ವವನ್ನು ಪಡೆದಿರುತ್ತದೆ. ಈ ನಿಟ್ಟಿನಲ್ಲಿ ನೀರಾವರಿಯ ಬಳಕೆ ಅತ್ಯವಶ್ಯಕವಾಗಿದೆ. ಸೂಕ್ಷ್ಮ ನೀರಾವರಿ ಪದ್ಧತಿಯ ಬಳಕೆಯಿಂದ ಜಲಸಂಪನ್ಮೂಲವನ್ನು ಮಿತವ್ಯಯ ಮಾಡಬಹುದಲ್ಲದೇ ಹೆಚ್ಚಿನ ಲಾಭವನ್ನು ಪಡೆಯಬಹುದು. ತೋಟಗಾರಿಕೆ ಇಲಾಖೆಯು ಸೂಕ್ಷ್ಮ ನೀರಾವರಿಯ ಮಹತ್ವವನ್ನು ಮನಗಂಡು ೧೯೯೧- ೯೨ ನೇ ಸಾಲಿನಿಂದಲೂ ಹನಿ/ತುಂತುರು ನೀರಾವರಿಯನ್ನು ಪ್ರೋತ್ಸಾಹಿಸುತ್ತಿದೆ. ಕೇಂದ್ರ ಪುರಸ್ಕೃತ ಯೋಜನೆಯಾದ ಸೂಕ್ಷ್ಮ ನೀರಾವರಿ ಯೋಜನೆಯನ್ನು ೨೦೦೬-೦೭ ನೇ ಸಾಲಿನಿಂದ ಅನು‍ಷ್ಠಾನಗೊಳಿಸಲಾಗಿದೆ. ಈ ಯೋಜನೆಯಡಿಯಲ್ಲಿ ಕಾಫಿ, ಚಹ(ಟೀ), ರಬ್ಬರ್ ಮತ್ತು ತಾಳೆಬೆಳೆ ಹೊರತುಪಡಿಸಿ ಉಳಿದೆಲ್ಲಾ ತೋಟಗಾರಿಕೆ ಬೆಳೆಗಳಿಗೆ ಈ ಯೋಜನೆಯಡಿಯಲ್ಲಿ ಹನಿ ನೀರಾವರಿ, ತುಂತುರು ನೀರಾವರಿ ಮತ್ತು ಹನಿ ನೀರಾವರಿ ಪ್ರಾತ್ಯಕ್ಷತೆಗಳಿಗೆ ಸಹಾಯಧನ ನೀಡಲಾಗುತ್ತಿದೆ. ಈ ಸಹಾಯಧನವು ಪ್ರತಿ ಫಲಾನುಭವಿಗೆ ಗರಿಷ್ಠ ಐದು ಹೆಕ್ಟೇರ್‌ಗೆ ಲಭ್ಯವಿರುತ್ತದೆ. ಹನಿ ನೀರಾವರಿ ಯೋಜನೆಯಲ್ಲಿ ಸಹಾಯಧನವು ಮೊದಲ ಎರಡು ಹೆಕ್ಟೇರ್‌ಗಳಿಗೆ ಶೇ.೭೫ ರಷ್ಟು ಉಳಿದ ಮೂರು ಹೆಕ್ಟೇರ್‌ಗಳಿಗೆ ಶೇ.೫೦ ರಷ್ಟು ಸಹಾಯ ಧನ ನೀಡಲಾಗುತ್ತಿದೆ. ತುಂತುರು ನೀರಾವರಿಯಲ್ಲಿ ಒಟ್ಟು ಶೇ.೭೫ ರಷ್ಟು ಸಹಾಯಧನ ನೀಡಲಾಗುತ್ತಿದೆ. ಹನಿ ನೀರಾವರಿ ಪ್ರಾತ್ಯಕ್ಷತೆ ಕಾರ್ಯಕ್ರಮದಡಿ ರಾಜ್ಯ ಕೇಂದ ಸರ್ಕಾರಿ ಸಂಸ್ಥೆಗಳು ಸರ್ಕಾರೇತರ ಸಂಸ್ಥೆಗಳ ರೈತರು / ಪ್ರಗತಿದಾಯಕ ರೈತರು ಶೇ.೭೫ ರಷ್ಟು ಸಹಾಯ ಧನವನ್ನು ಗರಿಷ್ಠ ೦.೫ ಹೆಕ್ಟೇರ್ ಪ್ರದೇಶಕ್ಕೆ ಸಹಾಯಧನ ಪಡೆಯಬಹುದಾಗಿರುತ್ತದೆ.

ಕೊಯ್ಲೋತ್ತರ ಮೂಲ ಸೌಕರ್ಯಗಳು ಹಾಗೂ ನಿರ್ವಹಣೆ

ಕರ್ನಾಟಕವು ಭಾರತ ದೇಶದಲ್ಲಿ ತೋಟಗಾರಿಕಾ ಕ್ಷೇತ್ರದಲ್ಲಿ ಪ್ರಗತಿ ಹೊಂದಿದ ರಾಜ್ಯವಾಗಿದೆ. ತನ್ನಲ್ಲಿರುವ ವೈವಿಧ್ಯಮಯ ಕೃಷಿ ಪರಿಸರ ಹಾಗೂ ಉತ್ಸಾಹಿ ರೈತ ಸಮುದಾಯದಿಂದ ಎಲ್ಲಾ ರೀತಿಯ ತೋಟಾಗಾರಿಕಾ ಉತ್ಪಾದನೆಗಳನ್ನು ರಾಜ್ಯದಲ್ಲಿ ಉತ್ಪಾದಿಸಲಾಗುತ್ತಿದೆ. ೨೦೦೨-೦೩ರ ಅಂಕಿ ಅಂಶದ ಪ್ರಕಾರ ೧೫.೮೧ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕಾ ಬೆಳೆಗಳನ್ನು ಬೆಳೆಸಿ ವಾರ್ಷಿಕವಾಗಿ ೯೫.೮೧ ಲಕ್ಷ ಟನ್ ಉತ್ಪಾದನೆಯನ್ನು ಪಡೆಯಲಾಗಿತ್ತು. ಇದರಲ್ಲಿ ಶೇ.೪೧ ರಷ್ಟು ವಿಸ್ತೀರ್ಣ ಹಾಗೂ ಶೇ.೮೭ರಷ್ಟು ಉತ್ಪಾದನೆಯು ಹಣ್ಣು ಹಾಗೂ ತರಕಾರಿ ಬೆಳೆಗಳದ್ದಾಗಿರುತ್ತದೆ. ತರಕಾರಿ ಹಾಗೂ ಹಣ್ಣಿನ ಬೆಳೆಗಳು ಬಹಳ ಬೇಗ ಹಾಳಾಗುವ ಸ್ವಭಾವ ಹೊಂದಿರುವುದರಿಂದ ಸಮರ್ಥವಾದ ಕೊಯ್ಲೋತ್ತರ ನಿರ್ವಹಣೆಯು ತುಂಬಾ ಅವಶ್ಯವಾಗಿದೆ. ಇದಲ್ಲದೆ ಈ ಬೆಳೆಗಳಲ್ಲಿ ರಫ್ತಿಗೆ ಇರುವ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವುದು ಕೂಡ ಪ್ರಮುಖವಾಗಿರುತ್ತದೆ. ಸುಮಾರು ಶೇ.೨೫ ರಿಂದ ೩೦ರಷ್ಟು ಉತ್ಪಾದನೆಯು ಕೊಯ್ಲಿನ ನಂತರ ಸರಿಯಾಗಿ ನಿರ್ವಹಿಸದ ಕಾರಣ ಹಾಳಾಗುತ್ತಿವೆ. ಕರ್ನಾಟಕದಲ್ಲಿ ಒಟ್ಟು ಹಣ್ಣು ಹಾಗೂ ತರಕಾರಿಗಳ ಉತ್ಪಾದನೆಯಲ್ಲಿ ಕೇವಲ ಶೇಕಡ ಒಂದರಷ್ಟು ಉತ್ಪಾದನೆಯನ್ನು ಬೇರೆ ಬೇರೆ ಉತ್ಪನ್ನಗಳಿಗಾಗಿ ಸಂಸ್ಕರಿಸಲಾಗುತ್ತದೆ. ಕೊಯಿಲಿನ ನಂತರದ ನಷ್ಟವನ್ನು ಕಡಿಮೆಗೊಳಿಸಲು ಶೀತಲ ಗೋದಾಮುಗಳು, ಸಂಸ್ಕರಣ ಘಟಕಗಳು ಹಾಗೂ ಮಾರುಕಟ್ಟೆ ಸೌಲಭ್ಯಗಳನ್ನು ನಿರ್ಮಿಸುವುದು ತುಂಬಾ ಅವಶ್ಯವಾಗಿದೆ. ಕುಯ್ಲೋತ್ತರ ನಿರ್ವಹಣಾ ಕ್ರಮಗಳಲ್ಲಿ ಸಂಗ್ರಹಣಾ ಪೂರ್ವ ತಂಪಾಗಿಸುವಿಕೆ, ಶೀತಲ ಗೋದಾಮುಗಳಲ್ಲಿ ಸಂಗ್ರಹಿಸುವಿಕೆ ಹಾಗೂ ಶೀಥಲೀಕರಣ ಸೌಲಭ್ಯವಿರುವ ಸಾರಿಗೆ ವ್ಯವಸ್ಥೆ ಮುಖ್ಯವಾದವುಗಳಾಗಿರುತ್ತವೆ.

ಶೀತಲ ಗೋದಾಮುಗಳು

ಶೀತಲ ಗೋದಾಮುಗಳು ಕೃಷಿ ಹಾಗೂ ತೋಟಾಗಾರಿಕಾ ಬೆಳೆಗಳ ಉತ್ಪಾದನೆ ಹಾಗೂ ಮಾರುಕಟ್ಟೆಯಲ್ಲಿ ಮುಖ್ಯವಾದ ಕೊಂಡಿಯಾಗಿರುತ್ತವೆ. ತೋಟಗಾರಿಕಾ ಉತ್ಪನ್ನಗಳು ಹೇರಳವಾಗಿರುವಾಗ ಅವನ್ನು ಶೇಖರಿಸಲು ಹಾಗೂ ಲಭ್ಯತೆ ಕಡಿಮೆ ಇರುವಾಗ ಉತ್ಪನ್ನಗಳನ್ನು, ಗುಣಮಟ್ಟದಲ್ಲಿ ತುಂಬಾ ಹಾನಿಯಾಗದ ರೀತಿಯಲ್ಲಿ ಪೂರೈಸಲು ಸಹಕಾರಿಯಾಗಿವೆ. ಪ್ರಸ್ತುತ ೯೧,೮೩೦ ಮೆ. ಟನ್ನು ಗಳಷ್ಟು ಹಣ್ಣು ಮತ್ತು ತರಕಾರಿಗಳನ್ನು ನಿರ್ವಹಿಸುವ ಸಾಮರ್ಥ್ಯದೊಂದಿಗೆ ೧೧ ಜಿಲ್ಲೆಗಳಲ್ಲಿ ೫೪ ಶೀಥಲ ಗೋದಾಮುಗಳಿವೆ. ಇವುಗಳಲ್ಲಿ ೧೧ ಘಟಕಗಳು ಸಹಕಾರಿ ವಲಯದಲ್ಲಿ ( ೯೧,೯೦೦ ಮೆಟ್ರಿಕ್ ಟನ್ನುಗಳು), ೪೧ ಘಟಕಗಳು ಖಾಸಗಿ ವಲಯದಲ್ಲಿ (೮೨,೮೩೦ ಮೆಟ್ರಿಕ್ ಟನ್ನುಗಳು) ಹಾಗೂ ಎರಡು ಘಟಕಗಳು ಸರ್ಕಾರಿ ವಲಯದಲ್ಲಿ (೨೬೦ ಮೆಟ್ರಿಕ್ ಟನ್ನುಗಳು) ಇರುತ್ತದೆ. ಈ ಘಟಕಗಳಲ್ಲಿ ಶೇಖರಿಸಲಾಗುತ್ತಿರುವ ಹಣ್ಣು ಮತ್ತು ತರಕಾರಿಗಳೆಂದರೆ ಆಲೂಗಡ್ಡೆ, ದ್ರಾಕ್ಷಿ, ಹುಣಸೆಹಣ್ಣು, ನಿಂಬೆ, ದಾಳಿಂಬೆ, ಅನಾನಸ್, ಮೆಣಸಿನ ಕಾಯಿ, ಸೇಬು ಮತ್ತು ಕತ್ತರಿಸಿದ ಹೂಗಳು.

ಹಣ್ಣು ಮತ್ತು ತರಕಾರಿಗಳ ಸಂಸ್ಕರಣೆ

ಕರ್ನಾಟಕ ಸರ್ಕಾರವು ಹಣ್ಣು ಮತ್ತು ತರಕಾರಿಗಳ ಸಂಸ್ಕರಣಾ ವಲಯವನ್ನು ಅಭಿವೃದ್ಧಿಗೆ ಬಹಳ ಮುಖ್ಯವಾದ ಕ್ಷೇತ್ರವೆಂದು ಪರಿಗಣಿಸಿದೆ. ಹೆಚ್ಚುತ್ತಿರುವ ನಗರೀಕರಣ ಹಾಗೂ ಗುಣಮಟ್ಟದ ಕಡೆಗೆ ಹೆಚ್ಚುತ್ತಿರುವ ಜಾಗೃತಿಯನ್ನು ಪರಿಗಣಿಸಿದರೆ ಸಂಸ್ಕರಿಸಿದ ಹಣ್ಣು ಹಾಗೂ ತರಕಾರಿಗಳಿಗೆ ಹೆಚ್ಚಿನ ಬೇಡಿಕೆಯನ್ನು ನಿರೀಕ್ಷಿಸಬಹುದಾಗಿದೆ.

ಆದ್ದರಿಂದ ಸಂಸ್ಕರಿಸಿದ ಕೃಷಿ ಉತ್ಪನ್ನಗಳ ಅಭಿವೃದ್ಧಿಗೆ ವಿಫುಲವಾದ ಅವಕಾಶವಿದೆ. ಪ್ರಸ್ತುತ ೧,೫೩೩ ಪರವಾನಗಿ ಪಡೆದಿರುವ ಸಂಸ್ಕರಣಾ ಘಟಕಗಳು ರಾಜ್ಯದಲ್ಲಿದ್ದು ಇವುಗಳಿಂದ ವಾರ್ಷಿಕ ಎರಡು ಲಕ್ಷ ಟನ್ನುಗಳಷ್ಟು ಸಂಸ್ಕರಿಸಿದ ಉತ್ಪನ್ನಗಳನ್ನು ಪಡೆಯಲಾಗುತ್ತಿದೆ. ಅನಾನಸ್, ಪಪ್ಪಾಯ, ಸೀಬೆ, ಮುಂತಾದವು ಸಂಸ್ಕರಿಸಲಾಗುತ್ತಿರುವ ಹಣ್ಣುಗಳಾಗಿದ್ದು, ಸಂಸ್ಕರಿಸಲಾಗುತ್ತಿರುವ ಪ್ರಮುಖವಾದ ತರಕಾರಿಗಳೆಂದರೆ ಟೊಮ್ಯೊಟೊ, ಆಲೂಗಡ್ಡೆ, ಬಟಾಣಿ, ಮಿಡಿ ಸೌತೆ (ಗರ್ಕಿನ್/ಕಿರುಸೌತೆ) ಮುಂತಾದವುಗಳು.

ಕರ್ನಾಟಕದಲ್ಲಿ ಕೃಷಿ ರಫ್ತು ವಲಯಗಳನ್ನು ನಿರ್ಮಿಸಲಾಗಿದೆ. ಕೃಷಿ ರಫ್ತುವಲಯದ ಕಲ್ಪನೆಯು ಯಾವುದೇ ಉತ್ಪನ್ನದ ಅಥವಾ ಒಂದು ನಿಶ್ಚಿತ ಪ್ರದೇಶದಲ್ಲಿ ಬೆಳೆಯಲಾಗುವ ಉತ್ಪನ್ನದ ರಫ್ತಿಗೆ ಅವಶ್ಯವಿರುವ ಎಲ್ಲಾ ಸ್ತರಗಳನ್ನು ಒಳಗೊಂಡಿರುತ್ತದೆ. ಈ ರೀತಿಯಾಗಿ ಕಿರು ಸೌತೆ/ಮಿಡಿ ಸೌತೆ(ಗರ್ಕಿನ್), ಗುಲಾಬಿ ಈರುಳ್ಳಿ ಹಾಗೂ ಪುಷ್ಪ ಕೃಷಿಗಾಗಿ ಕೃಷಿ ರಫ್ತು ವಲಯವನ್ನು ಸ್ಥಾಪಿಸಲಾಗಿದೆ.

ಕರ್ನಾಟಕ ಸರ್ಕಾರವು ಮಾಲೂರು, ಬಾಗಲಕೋಟೆ, ಬೆಳಗಾವಿ, ಚಿತ್ರದುರ್ಗ, ಮದ್ದೂರು ಹಾಗೂ ಜೇವರ್ಗಿ ಹೀಗೆ ಆರು ಸ್ಥಳಗಳಲ್ಲಿ ಆಹಾರ ಮತ್ತು ಕೃಷಿ ತಂತ್ರಜ್ಞಾನ ಪಾರ್ಕ್‌ಗಳನ್ನು (ಎಫ್.ಎ.ಟಿ.ಪಿ) ಸ್ಥಾಪಿಸಲು ಉದ್ದೇಶಿಸಿದೆ. ಈ ಆರು ಸ್ಥಳಗಳ ಪೈಕಿ ಭಾರತ ಸರ್ಕಾರವು ಎರಡು ಸ್ಥಳಗಳಲ್ಲಿ, ಮಾಲೂರು ಮತ್ತು ಬಾಗಲಕೋಟೆಗಳಲ್ಲಿ ಆಹಾರ ಮತ್ತು ಕೃಷಿ ತಂತ್ರಜ್ಞಾನ ಪಾರ್ಕ್‌ಗಳನ್ನು ಸ್ಥಾಪಿಸಲು ಅನುಮೋದನೆ ನೀಡಿರುತ್ತದೆ. ಈ ಪಾರ್ಕ್‌ಗಳನ್ನು ೧೦ ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಆಹಾರ ಮತ್ತು  ತಂತ್ರಜ್ಞಾನ ಪಾರ್ಕ್‌ಗಳ ಸ್ಥಾಪನೆಯ ಮುಖ್ಯ ಉದ್ದೇಶವು ಕೃಷಿ ಹಾಗೂ ತೋಟಗಾರಿಕಾ ಉತ್ಪನ್ನಗಳು ಹೇರಳವಾಗಿ ದೊರೆಯುವಂತಹ ನಿರ್ದಿಷ್ಟ ಸ್ಥಳಗಳಲ್ಲಿ ಕೃಷಿ ಹಾಗೂ ಸಂಸ್ಕರಣಾ ಘಟಕಗಳನ್ನು ಗುಂಪುಗಳಲ್ಲಿ ಸ್ಥಾಪಿಸಲು ಪ್ರೋತ್ಸಾಹಿಸುವುದಾಗಿರುತ್ತದೆ. ಈ ಪಾರ್ಕ್‌ಗಳಲ್ಲಿ ಸಂಸ್ಕರಣಾ ಕಾರ್ಖಾನೆಗಳು (ಅ) ಘಟಕಗಳಿಗೆ ಅವಶ್ಯವಿರುವ ಹಾಗೂ ಪೂರಕವಾಗುವ ಮೂಲ ಸೌಕರ್ಯಗಳು ಹಾಗೂ ಇನ್ನಿತರ ಸೌಕರ್ಯಗಳನ್ನು ಕೂಡ ದೊರೆಯುವಂತೆ ಮಾಡಲಾಗುವುದು. ಇವುಗಳಲ್ಲಿ ಕೆಲವುಗಳೆಂದರೆ ಗುಣಮಟ್ಟ ಖಾತರಿಸುವ ಪ್ರಯೋಗಾಲಯಗಳು, ಉಗ್ರಾಣಗಳು ಮತ್ತು ಶೀತಲ ಶೇಖರಣಾ ಕೇಂದ್ರಗಳು, ಸಾಮೂಹಿಕ ತ್ಯಾಜ್ಯ ಸಂಸ್ಕರಣಾ ಘಟಕಗಳು ಮತ್ತೊಂದು ಮುಖ್ಯವಾದ ಅಂಶವೆಂದರೆ ಸಂಸ್ಕರಿಸಲ್ಪಡುವಂತಹ ಪ್ರಾಥಮಿಕ ಉತ್ಪನ್ನಗಳನ್ನು ನೀಡುವ ಬೆಳೆ/ತಳಿಯನ್ನು ವೈಜ್ಞಾನಿಕ ರೀತಿಯಲ್ಲಿ ಕೃಷಿ ಮಾಡುವ ನಿಟ್ಟಿನಲ್ಲಿ  ರೈತರಲ್ಲಿ/ಉತ್ಪಾದಕರಲ್ಲಿ ಜಾಗೃತಿ ಮೂಡಿಸುವುದಾಗಿದೆ. ತನ್ಮೂಲಕ ರೈತರಿಗೆ ಹೆಚ್ಚಿನ ಲಾಭಗಳಿಸುವಂತಾಗುವುದರ ಜೊತೆಗೆ ಸಂಸ್ಕರಣಾ ಘಟಕಗಳಿಗೆ ಅವಶ್ಯಕವಿರುವ ಮೂಲವಸ್ತುಗಳ/ಉತ್ಪನ್ನಗಳ ನಿರಂತರ ಪೂರೈಕೆ ಮಾಡುವಂತಹ ಎರಡು ಉದ್ದೇಶವನ್ನು ಪೂರೈಸಿದಂತಾಗುವುದು.

ಕೃಷಿ ಮತ್ತು ತಂತ್ರಜ್ಞಾನ ಪಾರ್ಕ್‌ಗಳ ಸ್ಥಾಪನೆ ಮತ್ತು ಅಭಿವೃದ್ಧಿಯು ಸುತ್ತ ಮುತ್ತಲ ಕ್ಷೇತ್ರಗಳಲ್ಲಿ ತೋಟಗಾರಿಕಾ ವಲಯದ ಅಭಿವೃದ್ಧಿಗೆ ಅವಶ್ಯವಾದ ಪುಷ್ಟಿಯನ್ನು ನೀಡುವ ನಿರೀಕ್ಷೆ ಇರುತ್ತದೆ. ಸರ್ಕಾರವು ಕೃಷಿ ಹಾಗೂ ತೋಟಗಾರಿಕಾ ಬೆಳೆಗಳ ಮಾರಾಟ ಹಾಗೂ ಸಂಸ್ಕರಣೆಗೆ ಹೆಚ್ಚಿನ ಉತ್ತೇಜನ ನೀಡಿ ಕೊಯಿಲಿನ ನಂತರದ ನಷ್ಟವನ್ನು ಕಡಿಮೆ ಮಾಡಲು ಶ್ರಮಿಸುತ್ತಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಸರಕಾರದ ಶ್ರಮವು, ಎನ್.ಡಿ.ಡಿ.ಬಿಯು ಅತಿದೊಡ್ಡ ಮಾರಾಟ ಸಂಕೀರ್ಣವನ್ನು ೧೫೦ ಕೋಟಿ ರೂಗಳ ವೆಚ್ಚದಲ್ಲಿ ಕನ್ನಮಂಗಲದಲ್ಲಿ ನಿರ್ಮಿಸಲು ಸಹಾಯವಾಗಿರುತ್ತದೆ. ಈ ಸೌಲಭ್ಯವು ದಿನವೊಂದಕ್ಕೆ ೧,೬೦೦ ಮೆಟ್ರಿಕ್ ಟನ್‌ಗಳಷ್ಟು ತೋಟಗಾರಿಕಾ ಉತ್ಪನ್ನಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ತೋಟಗಾರಿಕಾ ಇಲಾಖೆಯು ೬೦ ಎಕರೆಗಳಷ್ಟು ಜಾಗವನ್ನು ಕನ್ನಮಂಗಲದಲ್ಲಿ ಈ ಉದ್ದೇಶಕಕ್ಕಾಗಿ ಬಿಟ್ಟುಕೊಟ್ಟಿರುತ್ತದೆ. ಈ ಮಾರುಕಟ್ಟೆ ಸಂಕೀರ್ಣವು ಆಧುನಿಕ ಹರಾಜು ಕೇಂದ್ರ, ಶಿಥಲೀಕರಣ ಘಟಕ, ಉಗ್ರಾಣ ವ್ಯವಸ್ಥೆ, ೧೦,೦೦೦ ಮೆಟ್ರಿಕ್ ಟನ್ ಸಾಮರ್ಥ್ಯವುಳ್ಳ ಶೀತಲ ಗೋದಾಮುಗಳು, ೫೦,೦೦೦ ಟನ್ ಸಾಮರ್ಥ್ಯದ ಸಂಸ್ಕರಣಾ ಘಟಕಗಳು, ಸಂಗ್ರಹಣ ಕೇಂದ್ರಗಳು, ಸಗಟು ಮಳಿಗೆಗಳು, ವಿತರಣಾ ಕೇಂದ್ರಗಳು ಮುಂತಾದವುಗಳನ್ನು ಹೊಂದಿರುತ್ತದೆ. ರಾಜ್ಯದ ಪ್ರಥಮ ಕೃಷಿ ಮತ್ತು ಆಹಾರೋದ್ಯಮ ನಿಯಮಾವಳಿಗಳು ಕೃಷಿಯಲ್ಲಿ ಕ್ರಾಂತಿಯನ್ನುಂಟು ಮಾಡುವುದರ ಜೊತೆಗೆ ನಗರದ ಮಾರುಕಟ್ಟೆಗಳಿಗೆ ವರ್ಗೀಕರಿಸಿದ ತಾಜಾ ಹಣ್ಣು ಮತ್ತು ತರಕಾರಿಗಳನ್ನು ಪೂರೈಸುವುದರ ಮೂಲಕ ಮುಂದಿನ ಮೂರು ವರ್ಷಗಳಲ್ಲಿ ೫,೦೦೦ ಕೋಟಿ ರೂಪಾಯಿಗಳ ವಿದೇಶಿ ವಿನಿಮಯವನ್ನು ಗಳಿಸುವ ನಿರೀಕ್ಷೆಯಿದೆ.

ಮಾರುಕಟ್ಟೆ ರಾಜ್ಯದಲ್ಲಿ ಹಣ್ಣು ಮತ್ತು ತರಕಾರಿಗಳ ಮಾರಾಟ ಮಾಡಲು ಅವಶ್ಯವಿರುವ ಮೂಲ ಸೌಕರ್ಯಗಳನ್ನು ನಿರ್ಮಿಸಲು ತೋಟಗಾರಿಕಾ ಇಲಾಖೆಯು ಪೂರಕವಾಗಿ ಕಾರ್ಯನಿರ್ವಹಿಸುತ್ತದೆ. ಕೃಷಿ ಮಾರುಕಟ್ಟೆ ಇಲಾಖೆಯು ರಾಜ್ಯದಲ್ಲಿ ಕೃಷಿ ಹಾಗೂ ತೋಟಗಾರಿಕಾ ಉತ್ಪನ್ನಗಳ ಮಾರಾಟ ಮಾಡಲು ಸಹಾಯಕನಾಗಿ ಕಾರ್ಯನಿರ್ವಹಿಸುತ್ತದೆ. ಇತ್ತೀಚೆಗೆ ಇಲಾಖೆಯು ರೈತರ ಸಂತೆಯನ್ನು ಪ್ರಾರಂಭಿಸಿದ್ದು ಇಲ್ಲಿ ರೈತರು/ ಉತ್ಪಾದಕರು ತಾವು ಬೆಳೆದ ಹಣ್ಣು ಮತ್ತು ತರಕಾರಿಗಳನ್ನು ಮಾರುಕಟ್ಟೆಗೆ ತಂದು ಅವನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಬಹುದಾಗಿದೆ. ರಾಜ್ಯದಲ್ಲಿರುವ ಮತ್ತೊಂದು ಮಾರುಕಟ್ಟೆ ಸೌಲಭ್ಯವಾದ ಕೃಷಿ ಉತ್ಪನ್ನ ಮಾರಾಟ ಸಮಿತಿಗಳ ಮೂಲಕ ಇಲಾಖೆಯು ನಿಗದಿ ಪಡಿಸಿದ ಹಣ್ಣು ಮತ್ತು ತರಕಾರಿಗಳ ಮಾರಾಟವನ್ನು ನಿರ್ವಹಿಸುತ್ತದೆ. ಇಲಾಖೆಯ ಉತ್ತೇಜನದೊಂದಿಗೆ ಪ್ರಾರಂಭಿಸಲಾಗಿರುವ ಹಾಪ್ ಕಾಮ್ಸ್ ಒಂದು ಸಹಕಾರಿ ಸಂಸ್ಥೆಯಾಗಿದ್ದು, ಬೆಂಗಳೂರಿನಲ್ಲಿ ತೋಟಗಾರಿಕಾ ಉತ್ಪನ್ನಗಳನ್ನು ಮಾರಾಟ ಮಾಡಲು ನಿಯಮಿತಗೊಂಡಿದ್ದು ಪ್ರತಿದಿನ ೧೦೦ ಟನ್‌ಗಳಷ್ಟು ಹಣ್ಣು ಮತ್ತು ತರಕಾರಿಗಳನ್ನು ನಿರ್ವಹಿಸುತ್ತಿದೆ. ಇದೇ ನಿಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿ ಇಲಾಖೆಯು ಜಿಲ್ಲಾ ತೋಟಗಾರಿಕಾ ಸಹಕಾರಿ ಸಂಘಗಳನ್ನು ಹಣ್ಣು ಮತ್ತು ತರಕಾರಿಗಳ ಮಾರಾಟಕ್ಕಾಗಿ ಉತ್ತೇಜಿಸಿರುತ್ತದೆ. ಪ್ರಸ್ತುತ ರಾಜ್ಯದಲ್ಲಿ ೧೭ ಜಿಲ್ಲಾ ತೋಟಗಾರಿಕಾ ಸಂಘಗಳು ಕಾರ್ಯನಿರ್ವಹಿಸುತ್ತಿವೆ.

ರಾಜ್ಯ ಸರ್ಕಾರದ ಸಂಸ್ಥೆಯಾದ ಕರ್ನಾಟಕ ಕೃಷಿ ಕೈಗಾರಿಕಾ ನಿಗಮವು ಬೆಂಗಳೂರಿನಲ್ಲಿ ಪುಷ್ಪಗಳ ಮಾರಾಟದ ಅವಶ್ಯಕತೆಗಾಗಿ ಕಾರ್ಯನಿರ್ವಹಿಸುತ್ತಿದೆ. ತೋಟಗಾರಿಕಾ ಇಲಾಖೆಯು ರಾಜ್ಯದಲ್ಲಿ ಹಣ್ಣು ಮತ್ತು ತರಕಾರಿಗಳ ಮಾರುಕಟ್ಟೆಯ ಆಧುನೀಕರಣಕ್ಕಾಗಿ ಬೆಂಗಳೂರಿನಲ್ಲಿ ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿಯ ಮೂಲಕ ಉಪಕ್ರಮಿಸಿರುತ್ತದೆ. ಇದು ೨೦೦೩ ರ ಮಾರ್ಚ್ ವೇಳೆಗೆ ಕಾರ್ಯಾರಂಭ ಮಾಡುವ ನಿರೀಕ್ಷೆ ಇದ್ದು ಬೆಂಗಳೂರಿಗೆ ಅವಶ್ಯಕವಿರುವ ಶೇ ೩೦ರಷ್ಟು ಹಣ್ಣು ಮತ್ತು ತರಕಾರಿಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿರುತ್ತದೆ. ಇಲಾಖೆಯು ಹಣ್ಣು ಮತ್ತು ತರಕಾರಿಗಳ ಮಾರಾಟದ ಆಧುನೀಕರಣವನ್ನು ಮೈಸೂರು, ಹುಬ್ಬಳ್ಳಿ, ಧಾರವಾಡ ಹಾಗೂ ವಿಜಯಪುರಗಳಲ್ಲೂ ಉಪಕ್ರಮಿಸಲು ತಯಾರಾಗಿದೆ. ತೋಟಗಾರಿಕಾ ಇಲಾಖೆಯ ಮಾರುಕಟ್ಟೆ ವಿಭಾಗವು ಪ್ರಮುಖವಾದ ಹಣ್ಣು ಮತ್ತು ತರಕಾರಿಗಳ ಬೆಲೆಯ ಮೇಲೆ ನಿಗಾವಹಿಸುತ್ತಿದ್ದು ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂಧಿಗಳ ಅನುಕೂಲಕ್ಕಾಗಿ ಪ್ರತಿವರ್ಷ ಪುಸ್ತಕವನ್ನು ಪ್ರಕಟಿಸುತ್ತಿದೆ. ಇದಲ್ಲದೆ ಈ ವಸ್ತುಗಳ ಮಾರುಕಟ್ಟೆ ಬೆಲೆಯು ತುಂಬಾ ಇಳಿದಾಗ ಸರ್ಕಾರಕ್ಕೆ, ಮಧ್ಯಪ್ರವೇಶಿಸಿ ಅವುಗಳನ್ನು ಖರೀದಿಸಲು ಅವಶ್ಯವಾದ ಪ್ರಸ್ತಾವನೆಗಳನ್ನು ಸರ್ಕಾರಕ್ಕೆ ಮಂಡಿಸುತ್ತದೆ.

ರಾಜ್ಯದಿಂದ ತೋಟಗಾರಿಕಾ ಉತ್ಪನ್ನಗಳ ರಫ್ತಿಗೆ ಉತ್ತೇಜನ ನೀಡಲು, ರಾಜ್ಯದ ರಫ್ತಿನ ಪ್ರಮಾಣವನ್ನು ಉತ್ತಮಗೊಳಿಸಲು, ರೈತರಿಗೆ ಹೆಚ್ಚಿನ ಆದಾಯವನ್ನು ಗಳಿಸುವ ಅವಕಾಶ ಒದಗಿಸಲು ಕೃಷಿ ಹಾಗೂ ಕೃಷಿಗೆ  ಸಂಬಂಧಿಸಿದ ಕ್ಷೇತ್ರಗಳಲ್ಲಿ ಉದ್ಯೋಗವಕಾಶವನ್ನು ಹೆಚ್ಚಿಸಲು ಮತ್ತು ವಿದೇಶಿ ವಿನಿಮಯವನ್ನು ಗಳಿಸಲು ಕೃಷಿ ರಫ್ತು ವಲಯವನ್ನು ಸ್ಥಾಪಿಸಲಾಗಿದೆ. ಕೃಷಿ ರಫ್ತು ವಲಯದ ಸ್ಥಾಪನೆಯು ಪ್ರಮುಖವಾದ ಮೂಲಸೌಕರ್ಯಗಳಾದ ಶೀತಲ ಗೋದಾಮುಗಳು, ಶೇಖರಣಾ ಪೂರ್ವ ಶಿಥಲೀಕರಣ ಘಟಕ, ಕೊಯ್ಲೋತ್ತರ ನಿರ್ವಹಣಾ ಕೇಂದ್ರಗಳು, ಶೈತ್ಯೀಕರಣ ವ್ಯವಸ್ಥೆಯ ಸಾರಿಗೆ ಜೊತೆಗೆ ಸಂಶೂಧನೆ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ಇತ್ಯಾದಿಗಳ ಅಭಿವೃದ್ಧಿಗೆ ಅವಕಾಶ ನೀಡುತ್ತದೆ. ಪ್ರಸ್ತುತದಲ್ಲಿ ಮಿಡಿಸೌತೆ/ಕಿರುಸೌತೆ/ ಗರ್ಕಿನ್, ಬೆಂಗಳೂರು ಗುಲಾಬಿ, ಈರುಳ್ಳಿ ಮತ್ತು ಪುಷ್ಪ ಕೃಷಿಯನ್ನು ಈ ವಲಯಗಳ ಅಡಿಯಲ್ಲಿ ತರಲಾಗಿದೆ. ಇವುಗಳ ಜೊತೆಗೆ ಸಧ್ಯದಲ್ಲೇ ಮಾವು, ದಾಳಿಂಬೆ ಮುಂತಾದ  ತೋಟಗಾರಿಕಾ ಬೆಳೆಗಳನ್ನು ಈ ವಲಯಗಳ ಅಡಿಯಲ್ಲಿ ತರುವ ಉದ್ದೇಶವಿದೆ.

ದ್ರಾಕ್ಷಾರಸ ನೀತಿ

ಕರ್ನಾಟಕ ರಾಜ್ಯದಲ್ಲಿ ವೈನ್ ದ್ರಾಕ್ಷಿ ತಳಿಗಳ ಪ್ರವರ್ಧನೆಗಾಗಿ ಹಾಗೂ ವೈನ್ ಕೈಗಾರಿಕೆಗಳ ಉತ್ಪಾದನೆಯನ್ನು ಹೆಚ್ಚಿಸಲು ದ್ರಾಕ್ಷಾರಸ ನೀತಿಯನ್ನು ೨೦೦೭-೦೮ನೇ ಸಾಲಿನಿಂದ ಅನುಷ್ಠಾನಗೊಳಿಸಲಾಗುತ್ತಿದೆ. ಸದರಿ ದ್ರಾಕ್ಷಾರಸ ನೀತಿಯನ್ನು ಅನುಷ್ಠಾನಗೊಳಿಸಲು ಪ್ರತ್ಯೇಕವಾಗಿ ಕರ್ನಾಟಕ ದ್ರಾಕ್ಷಾರಸ ಮಂಡಳಿಯನ್ನು ೨೦೦೭ ರಲ್ಲಿ ಸ್ಥಾಪಿಸಲಾಗಿದೆ. ಈ ಮಂಡಳಿಗೆ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳುವ ಸಲುವಾಗಿ ೨೦೧೩- ೧೪ನೇ ಸಾಲಿನಲ್ಲಿ ರೂ.೫೦ ಲಕ್ಷಗಳನ್ನು ಕರ್ನಾಟಕ ದ್ರಾಕ್ಷಾರಸ ಮಂಡಳಿಗೆ ನೀಡಲಾಗಿರುತ್ತದೆ.

ಉದ್ದೇಶಗಳು: ದ್ರಾಕ್ಷಾರಸ ನೀತಿ ಯೋಜನಾ ಕಾರ್ಯಕ್ರಮದಡಿ ತೋಟಗಾರಿಕೆ ಇಲಾಖೆಯಿಂದ ಕರ್ನಾಟಕ ದ್ರಾಕ್ಷಾರಸ ಮಂಡಳಿಯ ಅಭಿವೃದ್ಧಿ ಚಟುವಟಿಕೆಗಳಾಗಿ ರೂ.೫೦ ಲಕ್ಷಗಳ ಅನುದಾನವನ್ನು ಒದಗಿಸಲಾಗಿದೆ. ಕರ್ನಾಟಕ ರಾಜ್ಯ ಸರ್ಕಾರದ ಒತ್ತಾಸೆಯೊಂದಿಗೆ ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿಯು ಬೆಂಗಳೂರಿನಲ್ಲಿ ಹಣ್ಣು ಮತ್ತು ತರಕಾರಿ ಮಾರುಕಟ್ಟೆಯನ್ನು ತೋಟಗಾರಿಕಾ ಉತ್ಪನ್ನಗಳಿಗಾಗಿ ಸ್ಥಾಪಿಸಿದೆ. ಇದರೊಂದಿಗೆ ರಾಜ್ಯದ ಇನ್ನಿತರ ಕಡೆ ಇದೇ ರೀತಿಯ ಕ್ಷೇತ್ರ ಆಧಾರಿತ ಮಾರಾಟ ಯೋಜನೆಯನ್ನು ತಯಾರಿಸುವ ಇರಾದೆ ಕೂಡ ಇದೆ. ಸರ್ಕಾರವು ತೋಟಗಾರಿಕಾ ಬೆಳೆಗಳಲ್ಲಿ ಒಪ್ಪಂದ ಕೃಷಿ (ಅ) ಕರಾರು ಕೃಷಿಯನ್ನು ಪ್ರೋತ್ಸಾಹಿಸುತ್ತದೆ. ರಾಜ್ಯ ಕೃಷಿ ಬೆಳೆಗಳ ಬೆಲೆ ಆಯೋಗದೊಂದಿಗೆ ಪರಾಮರ್ಶಿಸಿ ಸರ್ಕಾರವು ತೋಟಗಾರಿಕಾ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ನೀಡುವ ಪ್ರಸ್ತಾವನೆಯನ್ನು ಹೊಂದಿದೆ. ಇದರಿಂದ ತೋಟಗಾರಿಕಾ ಉತ್ಪನ್ನಗಳಿಗೆ ದೇಶಿಯ ಮಾರುಕಟ್ಟೆಯಲ್ಲಿ ಉತ್ತೇಜನ ಸಿಗಲಿದೆ.

ತೋಟಗಾರಿಕಾ ರಫ್ತು ಬೆಳೆಗಳಿಗಾಗಿ ಸಾವಯವ ಕೃಷಿ ಅಭಿವೃದ್ಧಿ

ಇದಕ್ಕೆ ನೀಡುವ ಒತ್ತಾಸೆಯು ಸಾವಯವ ಕೃಷಿಯ ಮಾರುಕಟ್ಟೆ ನಿರ್ವಹಣೆಯಲ್ಲಿ ಒಂದು ಸ್ತೂಲವಾದ ಕ್ರಾಂತಿಯಾಗಿದ್ದು ಕರ್ನಾಟಕ ರಾಜ್ಯದಲ್ಲಿ ಮಾಹಿತಿ ತಂತ್ರಜ್ಞಾನದ ನಂತರದ ಸ್ಥಾನದಲ್ಲಿ ನಿಲ್ಲಲಿದೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ಸಾವಯವ ಹಣ್ಣು, ತರಕಾರಿ, ಮಸಾಲೆ ಪದಾರ್ಥಗಳು, ಸುಗಂಧ ದ್ರವ್ಯ ಸಸ್ಯೋತ್ಪನ್ನಗಳು ಹಾಗೂ ಔಷಧಿಯ ಸಸ್ಯಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿನ ಬೇಡಿಕೆಯು  ಗಣನೀಯವಾಗಿ ಹೆಚ್ಚಾಗಿರುತ್ತದೆ. ಸಾಂಪ್ರದಾಯಿಕವಾಗಿ ಮಳೆಯಾಶ್ರಿತ ಖುಷ್ಕಿ ಜಮೀನಿನಲ್ಲಿ ಹೆಚ್ಚಾಗಿ ನೈಸರ್ಗಿಕ ಕೃಷಿ ಪದ್ಧತಿಯು ಪ್ರಚಲಿತದಲ್ಲಿದ್ದು ರಾಜ್ಯದಲ್ಲಿನ ಪ್ರದೇಶಗಳನ್ನು ಸಾವಯವ ಕೃಷಿಗೆ ರೂಪಾಂತರಿಸುವುದು ತುಂಬಾ ಸುಲಭವಾಗಿರುತ್ತದೆ. ಈ ದಿಸೆಯಲ್ಲಿ ಸಾವಯವ ಕೃಷಿಕರಿಗೆ ಸಹಕಾರಿಯಾಗಲು ಉತ್ಪಾದನಾ ಹಾಗೂ ಮಾರಾಟದ ಕೊಂಡಿಗಳನ್ನು ಜೋಡಿಸುವುದು ತುಂಬಾ ಅವಶ್ಯವಾಗಿರುತ್ತದೆ.

ಇಸ್ರೋ ಸಹಕಾರದೊಂದಿಗೆ ಉಪಗ್ರಹ ಆಧಾರಿತ ತೋಟಗಾರಿಕಾ ಬೆಳೆಗಳ ಸಮೀಕ್ಷೆ ನಡೆಸಿ ನಕ್ಷೆ ತಯಾರಿಸುವುದರೊಂದಿಗೆ ತೋಟಗಾರಿಕಾ ಬೆಳೆಗಳಿಗೆ ಸಂಬಂಧಿಸಿದ ಅಂಕಿ ಅಂಶಗಳನ್ನು ಕ್ರೋಢೀಕರಿಸುವುದೂ ಅಲ್ಲದೆ ನಿಖರವಾದ ಅಂಕಿ ಅಂಶಗಳು ಅಭಿವೃದ್ಧಿ ಕಾರ್ಯಕ್ರಮಗಳ / ಯೋಜನೆಗಳನ್ನು ಕೈಗೆತ್ತಿಕೊಳ್ಳಲು ತುಂಬಾ ಅವಶ್ಯವಾಗಿರುತ್ತದೆ.

ವಿವಿಧ ಇಲಾಖೆಗಳು ಹೊಂದಿರುವ ತೋಟಗಾರಿಕಾ ಬೆಳೆಗಳ ವಿಸ್ತೀರ್ಣ ಹಾಗೂ ಉತ್ಪಾದನೆಯ ಅಂಕಿಅಂಶಗಳು ಒಂದಕ್ಕೊಂದು ತಾಳೆಯಾಗಿರುವುದಿಲ್ಲ. ನಿಯಮಾವಳಿಗಳನ್ನು ರೂಪಿಸುವ ಸಂದರ್ಭದಲ್ಲಿ ನಿಖರವಾದ ಅಂಕಿ ಅಂಶಗಳ ಲಭ್ಯತೆಯು ತುಂಬಾ ಮುಖ್ಯವಾಗಿರುತ್ತದೆ. ಆದ್ದರಿಂದ ಇಲಾಖೆಯು ಒಂದು ಬಾರಿ ಬಹುವಾರ್ಷಿಕ ತೋಟಗಾರಿಕಾ ಬೆಳೆಗಳ ಸಮೀಕ್ಷೆಯನ್ನು ಕೈಗೊಳ್ಳಲು ಪ್ರಸ್ತಾವನೆಯನ್ನು ಹೊಂದಿರುತ್ತದೆ. ಜೊತೆಗೆ ಇಸ್ರೋ ಸಂಸ್ಥೆಯ ಸೇವೆಯನ್ನು ಬಳಸಿಕೊಂಡು ಅತ್ಯಾಧುನಿಕ ಪದ್ಧತಿಗಳನ್ನು ಬಳಸಿ ವಿವಿಧ ತೋಟಗಾರಿಕಾ ಬೆಳೆಗಳನ್ನು ಬೆಳೆಯುತ್ತಿರುವ ಸ್ಥಳಗಳ ನಕ್ಷೆಯನ್ನು ತಯಾರಿಸುವ ಯೋಜನೆಯನ್ನೂ ಹೊಂದಿರುತ್ತದೆ. ಇದು ರಾಜ್ಯದಲ್ಲಿರುವ ತೋಟಗಾರಿಕಾ ಬೆಳೆಗಳ ವಿಸ್ತೀರ್ಣವನ್ನು ನಿಖರವಾಗಿ ಅಂದಾಜಿಸುವಲ್ಲಿ ತುಂಬಾ ಸಹಕಾರಿಯಾಗುತ್ತದೆ. ಮುಂದುವರಿದು ಇದು ವೈಜ್ಞಾನಿಕ ಪದ್ಧತಿಯಲ್ಲಿ ರಾಜ್ಯದ ತೋಟಗಾರಿಕಾ ಬೆಳೆಗಳ ಇಳುವರಿ ಹಾಗೂ ಉತ್ಪಾದನೆಯನ್ನು ಅಂದಾಜಿಸಲು ಸಹಾಯವಾಗುತ್ತದೆ.

ತೋಟಗಾರಿಕಾ ಬೆಳೆಗಳಿಗಾಗಿ ನೀರಿನ ಸಂರಕ್ಷಣೆಗೆ ಪ್ರಾಮುಖ್ಯತೆ ನಿಯಮಿತವಾಗಿರುವ ಲಭ್ಯ ನೀರಿನ ಪ್ರಮಾಣ ಹಾಗೂ ಕುಸಿಯುತ್ತಿರುವ ಅಂತರ್ಜಲ ಮಟ್ಟವನ್ನು ದೃಷ್ಟಿಯಲ್ಲಿಟ್ಟುಕೊಂಡು ನೀರಿನ ಮಿತಬಳಕೆಯ ಪರಿಕರಗಳನ್ನು ಉತ್ತೇಜಿಸುವುದು ನೀರಾವರಿ ಅಂತಃ ಶಕ್ತಿಯನ್ನು ಗರಿಷ್ಠಗೊಳಿಸಲು ತುಂಬಾ ಅವಶ್ಯವಾಗಿರುತ್ತದೆ. ಕಿರುನೀರಾವರಿ ಪದ್ಧತಿಯನ್ನು ಅಳವಡಿಸಿಕೊಳ್ಳುವುದರ ಮೂಲಕ ಲಭ್ಯವಿರುವ ನೀರಿನ ಸಮರ್ಥ ಹಾಗೂ ಗರಿಷ್ಠ ಬಳಕೆಯು ಸಾಧ್ಯವಿದೆ. ರಾಜ್ಯ ಸರ್ಕಾರವು ಹೆಚ್ಚಿನ ತೋಟಗಾರಿಕಾ ಬೆಳೆಗಳನ್ನು ಕಿರು ನೀರಾವರಿ ಪದ್ಧತಿಗಳ ಅಡಿಯಲ್ಲಿ ತರುವ ಇರಾದೆಯನ್ನು ಹೊಂದಿದೆ. ರೈತರು ತಮ್ಮ ತೋಟಗಳಲ್ಲಿ ಕಿರು ನೀರಾವರಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಅವಶ್ಯವಿರುವ ಬೇಡಿಕೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಸಣ್ಣ ನೀರಾವರಿ ಇಲಾಖೆಯ ಅನುದಾನದಲ್ಲಿ ಪ್ರತಿವರ್ಷ ಶೇಕಡ ೧೦ ರಷ್ಟು ಹಣವನ್ನು ಕಿರು ನೀರಾವರಿ ಪದ್ಧತಿಗಳ ಅಳವಡಿಕೆಗೆ ನೀಡುವ ಪ್ರಸ್ತಾವನೆಯನ್ನು ಹೊಂದಿದೆ. ಇದರ ಜೊತೆಗೆ ರೈತರು ತಮ್ಮ ಜಮೀನಿನಲ್ಲಿ ಮಳೆನೀರಿನ ಕೊಯ್ಲನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹ ನೀಡುವುದರ ಮೂಲಕ ಉತ್ತೇಜಿಸಲಾಗುತ್ತಿದೆ. ಖುಷ್ಕಿ ಭೂಮಿಯಲ್ಲಿ ತೋಟಗಾರಿಕೆ ಹೆಚ್ಚುತ್ತಿರುವ ಜನಸಂಖ್ಯೆಗೆ ಅವಶ್ಯವಿರುವ ಆಹಾರೋತ್ಪಾದನೆಗೆ ಇರುವ ಏಕೈಕ ಆಶಾಕಿರಣವೆಂದರೆ ಖುಷ್ಕಿ ಪ್ರದೇಶ. ಖುಷ್ಕಿ ಜಮೀನಿನ ಮೇಲೆ ಅವಲಂಬಿತವಾಗಿರುವ ಜನರ ಆರ್ಥಿಕ ಪರಿಸ್ಥಿತಿ, ಆಹಾರ ಹಾಗೂ ಆರೋಗ್ಯದ ಸ್ಥಿತಿಗಳನ್ನು ಉತ್ತಮ ಪಡಿಸಲು ಖುಷ್ಕಿ ತೋಟಗಾರಿಕಾ ಬೆಳೆಗಳಿಗೆ ಒತ್ತು ನೀಡುವುದು ತುಂಬಾ ಅವಶ್ಯವಾಗಿರುತ್ತದೆ. ಇದಕ್ಕಾಗಿ ಸಂಶೋಧನೆಗಳ ಮೂಲಕ ಹೊಸ ತಂತ್ರಜ್ಞಾನಗಳನ್ನು ಖುಷ್ಕಿ ತೋಟಗಾರಿಕೆಯನ್ನು ಅಭಿವೃದ್ಧಿ  ಪಡಿಸಲು ಹಾಗೂ ಅವುಗಳ ಪ್ರಸರಣಕ್ಕಾಗಿ ಸಂಶೋಧನೆ ಹಾಗೂ ವಿಸ್ತರಣೆಗೆ ಅವಶ್ಯವಾಗಿರುವ ಬೆಂಬಲವನ್ನು ಒದಗಿಸಬೇಕಾಗಿರುತ್ತದೆ. ರಾಜ್ಯವು ಜಲಾನಯನ ಪ್ರದೇಶಗಳ ತೋಟಗಳಲ್ಲಿ ನೀರು ಮತ್ತು ಮಣ್ಣಿನ ಸಂರಕ್ಷಣೆ ಹಾಗೂ ಕೆರೆಗಳ ಅಭಿವೃದ್ಧಿಗೆ ತುಂಬಾ ಹೆಚ್ಚಿನ ಆದ್ಯತೆಯನ್ನು ನೀಡಿರುತ್ತದೆ. ರೈತರು ಸಾಂಪ್ರದಾಯಿಕ ಬೆಳೆ ಬೆಳೆಯುವುದರ ಜೊತೆಗೆ, ಅವರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಸರ್ಕಾರವು ರಾಜ್ಯದಲ್ಲಿ ಹೆಚ್ಚು ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ರೈತರೂ ಕೂಡ ಆಸಕ್ತಿ ತೋರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಸಮಗ್ರ ತೋಟಗಾರಿಕಾ ಅಭಿವೃದ್ಧಿ ಯೋಜನೆಯನ್ನು ಜಾರಿಗೆ ತಂದಿದೆ. ಇದರ ಫಲವಾಗಿ ರಾಜ್ಯದಲ್ಲಿ ತೋಟಗಾರಿಕೆ ಕ್ಷೇತ್ರವು ಕಳೆದ ಮೂರು ವರ್ಷಗಳಲ್ಲಿ ೧೮.೩೬ ಲಕ್ಷ ಹೆ.ಗಳಿಂದ ೨೦.೦೫ ಲಕ್ಷ ಹೆಕ್ಟೇರ್‌ಗೆ ಹೆಚ್ಚಳಗೊಂಡಿದೆ. ಹಾಗೆಯೇ, ಉತ್ಪಾದನೆಯು ೧೪೯.೫೯ಲಕ್ಷ ಟನ್ ನಿಂದ ೧೭೦.೮೫ ಲಕ್ಷ ಟನ್‌ಗೆ ಹೆಚ್ಚಿದೆ. ಹೆಚ್ಚು ನೀರಿನ ಬಳಕೆ ಮಾಡದೆ ತೋಟಗಾರಿಕೆ ಬೆಳೆಗಳನ್ನು ಬೆಳೆಯುವುದು ಒಂದು ಕಲೆ. ಇದನ್ನು ಮೈಗೂಡಿಸಿಕೊಂಡಿರುವ ಅನೇಕ ರೈತರು ನಮ್ಮ ರಾಜ್ಯದಲ್ಲಿದ್ದಾರೆ. ಇದನ್ನು ಇನ್ನಷ್ಟು ಜನರು ಅಳವಡಿಸಿಕೊಂಡು ಹೆಚ್ಚು ಬೆಳೆ ತೆಗೆದು ಆರ್ಥಿಕವಾಗಿ ಸಬಲರಾಗಬೇಕು ಎನ್ನುವ ಉದ್ದೇಶದಿಂದ ಸರ್ಕಾರ ಮೂರು ವರ್ಷಗಳ ಹಿಂದೆಯೇ ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿಯನ್ನು ಅಳವಡಿಸಿಕೊಂಡು ಹೆಚ್ಚು ಬೆಳೆ ತೆಗೆದು ಆರ್ಥಿಕವಾಗಿ ಸಬಲರಾಗಬೇಕು ಎನ್ನುವ ಉದ್ದೇಶದಿಂದ ಸರ್ಕಾರ ಮೂರು ವರ್ಷಗಳ ಹಿಂದೆಯೇ ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿಯನ್ನು ಅಳವಡಿಸಿಕೊಳ್ಳಲು ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯಗಳಿಗೆ ಸಹಾಯಧನ ನೀಡಿತ್ತು. ಇದರ ಫಲಿತಾಂಶವು ಆಶಾದಾಯಕವಾಗಿದ್ದು, ಇದರಿಂದ ಉತ್ತೇಜನಗೊಂಡ ಇತರ ರೈತರು ಹನಿ ನೀರಾವರಿಯುತ್ತ ಮುಖ ಮಾಡಿದ್ದರು. ಇವರೆಲ್ಲರ ಇಂಗಿತವನ್ನು ಅರಿತ ಸರ್ಕಾರ ಹನಿ ನೀರಾವರಿ ಅಳವಡಿಸಿಕೊಳ್ಳುವ ಎಲ್ಲಾ ವರ್ಗದ ರೈತರಿಗೆ ಶೇ.೯೦ ರಷ್ಟು ಸಹಾಯಧನ ನೀಡುತ್ತಿದೆ. ಇಂತಹ ಕ್ರಮ ಕೈಗೊಂಡಿರುವ ನಮ್ಮ ರಾಜ್ಯವು ಇತರ ರಾಜ್ಯಗಳಿಗೂ ಮಾದರಿಯಾಗಿದೆ. ಕಳೆದ ಮೂರು ವರ್ಷಗಳಲ್ಲಿ ೧,೩೨,೬೧೪ ಹೆಕ್ಟೇರ್ ಪ್ರದೇಶದಲ್ಲಿ ಹನಿ ನೀರಾವರಿ ಅಳವಡಿಸಿದ ೧.೩೫ ಲಕ್ಷ ಫಲಾನುಭವಿಗಳಿಗೆ ೬೪,೬೫೧ ಕೋಟಿ ರೂ.ಗಳನ್ನು ನೀಡಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರು ಹೆಚ್ಚು ಪ್ರಮಾಣದಲ್ಲಿ ತೋಟಗಾರಿಕೆಯಲ್ಲಿ   ತೊಡಗಿಸಿಕೊಳ್ಳಲು ಹಾಗೂ ಉತ್ತಮ ಆದಾಯ ಗಳಿಸಲು ಅನುಕೂಲವಾಗುವಂತೆ ಶೇ.೯೦ ರಷ್ಟು  ಸಹಾಯಧನ ನೀಡುತ್ತಿದೆ. ಇದರ ಪ್ರಯೋಜನವನ್ನು ೯೦,೮೮೫ ಮಂದಿ ಪಡೆದುಕೊಂಡಿದ್ದಾರೆ. ಅಡಿಕೆ ಬೆಳೆಗಾರರಿಗೆ ನೆರವಾಗುವ ದೃಷ್ಟಿಯಿಂದ ಸರ್ಕಾರವು ಅಡಿಕೆ ತೋಟಗಳಲ್ಲಿ ಲಾಭದಾಯಕವಾದ ಪರ್ಯಾಯ ಬೆಳೆಗಳನ್ನು ಬೆಳೆಸಲು ಪ್ರೋತ್ಸಾಹ ನೀಡುತ್ತಿದೆ. ಕರಾವಳಿ ಮತ್ತು ಮಲೆನಾಡು ರೈತರ ಅನೇಕ ತೋಟಗಳಲ್ಲಿ ಈ ಬಗೆಯ ಪ್ರಾತ್ಯಕ್ಷಿಕೆಗಳನ್ನು ಆಯೋಜಿಸಿದೆ. ಅಡಿಕೆ ತೋಟದಲ್ಲಿ ಪರ್ಯಾಯ ಬೆಳೆಗಳನ್ನು ಬೆಳೆಯುತ್ತಿರುವ ರೈತರ ಸಂಖ್ಯೆ ಹಂತ ಹಂತವಾಗಿ ಏರಿಕೆಯಾಗುತ್ತಿದೆ. ತೆಂಗಿನ ಉತ್ಪನ್ನಗಳ ಮೌಲ್ಯವರ್ಧನೆಗೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನಲ್ಲಿ ತೆಂಗು ಪಾರ್ಕ್‌ನ್ನು ಪ್ರಾರಂಭಿಸಿದೆ. ಸೌರಶಕ್ತಿಯನ್ನು ನೀರಾವರಿ ಪಂಪ್‌ಗಳಿಗೆ, ತಂತಿ ಬೇಲಿಗಳಿಗೆ, ಉತ್ಪನ್ನಗಳನ್ನು ಒಣಗಿಸುವ ಯಂತ್ರಗಳಿಗೆ ಮತ್ತು ಇತರೆ ಶಕ್ತಿ ಚಾಲಿತಯಂತ್ರಗಳಲ್ಲಿ ಬಳಸುವುದನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಶೇ.೭೫ ರಷ್ಟು ಸಹಾಯಧನವನ್ನು ಸರ್ಕಾರ ಒದಗಿಸುತ್ತಿದೆ. ತೋಟಗಾರಿಕೆಯಲ್ಲಿ ಯಾಂತ್ರೀಕರಣ ಕಾರ್ಯಕ್ರಮದಡಿ ರೈತರಿಗೆ ಶಕ್ತಿಚಾಲಿತ ಯಂತ್ರೋಪಕರಣಗಳ ಖರೀದಿಗೂ ಸಹಾಯಧನ ನೀಡುತ್ತಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ತೋಟಗಾರಿಕೆ ಬೆಳೆಗಳ ಗಣತಿ ಸಮೀಕ್ಷೆಯನ್ನು ಆಯ್ದ ೧೧ ಜಿಲ್ಲೆಗಳಲ್ಲಿ ಕೈಗೊಳ್ಳಲಾಗಿದೆ. ಹೂಗಳ ಕೃಷಿಗೆ ಉತ್ತೇಜನ ಯೋಜನೆಯಡಿ ಹೈಟೆಕ್ ಪುಷ್ಪೋದ್ಯಮ ಘಟಕಗಳನ್ನು ಪುನಶ್ಚೇತನಗೊಳಿಸಿದೆ. ಹೂಗಳ ಕೃಷಿಗೆ ಉತ್ತೇಜನ ಯೋಜನೆಯಡಿ ೪.೮೮ ಕೋಟಿ ರೂ. ವೆಚ್ಚದಲ್ಲಿ ೨೬೭ಕ್ಕೂ ಹೆಚ್ಚು ಹೈಟೆಕ್ ಪುಷ್ಪೋಧ್ಯಮ ಘಟಕಗಳನ್ನು ಪುನಶ್ಚೇತನಗೊಳಿಸಿದೆ.

ಹಾವೇರಿ ತಾಲೂಕಿನ ದೇವಿ ಹೊಸೂರು ಗ್ರಾಮದಲ್ಲಿ ತೋಟಗಾರಿಕೆ ಕಾಲೇಜನ್ನು ಪ್ರಾರಂಭಿಸಿದೆ. ಕರ್ನಾಟಕದಲ್ಲಿ ಕೃಷಿ ಕ್ಷೇತ್ರದ ಬಗ್ಗೆ ಸಮಗ್ರ ದೂರದೃಷ್ಟಿಯನ್ನು ರೂಪಿಸಲು, ಕೃಷಿ, ತೋಟಗಾರಿಕೆ ಮತ್ತು ಆಹಾರ ಸಂಸ್ಕರಣೆ ವಲಯಗಳಿಗೆ ತಜ್ಞರ ಅಧ್ಯಕ್ಷತೆಯಲ್ಲಿ ಒಂದು ’ವಿಷನ್ ಗ್ರೂಪ್’ ರಚಿಸಿದೆ. ಕಂಪ್ಯೂಟರೀಕೃತ ತಂತ್ರಜ್ಞಾನವನ್ನು ಬಳಸಿಕೊಂಡು ಮುಂದೆ ಬರಬಹುದಾದ ಕೀಟ ಮತ್ತು ರೋಗಗಳ ಹಾವಳಿಯ ಮುನ್ಸೂಚನೆ ನೀಡುವ ೭೫ ಘಟಕಗಳನ್ನು ಪ್ರಾಯೋಗಿಕವಾಗಿ ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರಗಳಲ್ಲಿ ಸ್ಥಾಪಿಸಲು ಕ್ರಮ ವಹಿಸಲಾಗಿದೆ. ಮೊಬೈಲ್ ಸಂದೇಶಗಳ ಮೂಲಕ ಹವಾಮಾನ, ಬೇಸಾಯ ಕ್ರಮಗಳು, ಮಾರುಕಟ್ಟೆ ಬೆಲೆಗಳ ವಿವರಗಳನ್ನು ರೈತರ ಮೊಬೈಲ್/ಗಣಕ ಯಂತ್ರ ಮತ್ತು ಮಾಹಿತಿ ಕಿಯೋಸ್ಕ್‌ಗಳಿಗೆ ನಿರಂತರವಾಗಿ ಮಾಹಿತಿಯನ್ನು ಒದಗಿಸುವ ಯೋಜನೆಯನ್ನು ಜಾರಿಗೆ ತಂದಿದೆ. ಯಾಂತ್ರಿಕ ಉಪಕರಣಗಳನ್ನು ಒಳಸಿಕೊಂಡು ಕೃಷಿ ಮಾಡುತ್ತಿರುವ ರೈತರಿಗೆ ತಂತ್ರಜ್ಞಾನ ಆಧಾರಿತ ಸಲಹೆ ಸೂಚನೆಗಳು ಕೃಷಿಯನ್ನು ಲಾಭದಾಯಕ ಕಸುಬನ್ನಾಗಿ ಮಾರ್ಪಡಿಸಲು ನೆರವಾಗಿವೆ. ತೋಟಗಾರಿಕೆಯಲ್ಲಿ ಯಾಂತ್ರೀಕರಣ ಕಾರ್ಯಕ್ರಮದಡಿ ಮೂರು ವರ್ಷಗಳಲ್ಲಿ ೨೭,೨೨೩ ಶಕ್ತಿಚಾಲಿತ ಯಂತ್ರೋಪಕರಣಗಳ ಖರೀದಿಗೆ ೪೮.೭೨ ಕೋಟಿ ರೂ. ಗಳ ಸಹಾಯಧನ ನೀಡಿದೆ. ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯು ೧೯೪೫ ರಲ್ಲಿ ಸ್ವತಂತ್ರ ಇಲಾಖೆಯಾಗಿ ರೂಪುಗೊಂಡಿತು. ರಾಜ್ಯದ ಜಾನುವಾರು ಸಂಪತ್ತಿಗೆ ಅರೋಗ್ಯ ರಕ್ಷಣೆ ನೀಡುವ ಹೊಣೆಗಾರಿಕೆಯ ಜೊತೆಗೆ ಜಾನುವಾರು ಅಭಿವೃದ್ಧಿ ಚಟುವಟಿಕೆ, ವಿಸ್ತರಣಾ ಸೇವೆಗಳು ಮತ್ತು ತರಬೇತಿ, ಸಾಮಾಜಿಕ ಮತ್ತು ಆರ್ಥಿಕ ಕಾರ್ಯಕ್ರಮಗಳ ಅನುಷ್ಠಾನ, ಮಾದರಿ ಸಮೀಕ್ಷೆ ಮತ್ತು ಜಾನುವಾರು ಗಣತಿ ಮುಂತಾದ ಕಾರ್ಯಾಕ್ರಮಗಳನ್ನು ಇಲಾಖೆಯು ತನ್ನ ವಿವಿಧ ಸ್ತರದ ಪಶುವೈದ್ಯ ಸಂಸ್ಥೆಗಳ ಜಾಲದ ಮೂಲಕ ಯಶಸ್ವಿಯಾಗಿ ನಿರ್ವಹಿಸುತ್ತಿದೆ.

ಇಲಾಖೆಯ ಇತಿಹಾಸ:

೧೫೭೨-೧೬೦೦: ವಿಜಯನಗರದಿಂದ ತಂದ ಹಳ್ಳಿಕಾರ್ ಹಸುಗಳನ್ನು ಹೊಂದಿದ ವಿಜಯನಗರದ ವೈಸ್‌ರಾಯ್ ರವರ ಶ್ರೀರಂಗಪಟ್ಟಣದಲ್ಲಿನ ’ಕರುಹಟ್ಟಿ’ ಎಂಬ ಸಂಸ್ಥೆಯ ಮೂಲಕ ಜಾನುವಾರು ಅಭಿವೃದ್ಧಿ ಕಾಯಕವನ್ನು ಪ್ರಾರಂಭಿಸಲಾಯಿತು. ೧೯೬೭-೧೭೦೪: ಆಗಿನ ಮೈಸೂರಿನ ಮಹಾರಾಜರು ಕಾಲಾನುಸಾರವಾಗಿ ಈ ಕರುಹಟ್ಟಿಗೆ ರಾಸುಗಳನ್ನು ಸೇರಿಸಿ, ಈ ರಾಸುಗಳಿಗೆ ನಿಗದಿತ ’ಕಾವಲು’ಗಳನ್ನು  ತಮ್ಮ ರಾಜ್ಯದ ವಿವಿಧ ಭಾಗದಲ್ಲಿ ನೀಡಿದರು. ಅಂದಿನ ಮಹಾರಾಜರಾದ ಸನ್ಮಾನ್ಯ ಶ್ರೀ ಚಿಕ್ಕದೇವರಾಜ ಒಡೆಯರ್ ರವರು ಈ ಸಂಸ್ಥೆಗೆ ’ಬೆಣ್ಣೆ ಚಾವಡಿ’ ಎಂದು ನಾಮಕರಣ ಮಾಡಿದರು. ೧೭೯೯: ಟಿಪ್ಪು ಸುಲ್ತಾನರು ಬೆಣ್ಣೆ ಚಾವಡಿ ಹೆಸರನ್ನು ’ಅಮೃತ್ ಮಹಲ್’ ಎಂದು ಮರುನಾಮಕರಣ ಮಾಡಿ, ಅಮೃತ್ ಮಹಲ್ ತಳಿಯ ಅಭಿವೃದ್ಧಿಗೆ ಹೆಚ್ಚಿನ ಆಸಕ್ತಿ ತೋರಿದರು. ಹಾಗೂ ಈ ಇಲಾಖೆಯ ಉನ್ನತೀಕರಣಕ್ಕಾಗಿ ಸೂಕ್ತ ಕಾಯ್ದೆಗಳನ್ನು ಹುಕುಂನಾಮ ಮುಖೇನ ಅಳವಡಿಸಿದರು. ೧೭೯೯- ೧೮೮೧: ಟಿಪ್ಪು ಸುಲ್ತಾನರ ಅವನತಿಯ ನಂತರ ಅಮೃತ್ ಮಹಲ್ ಇಲಾಖೆಯ ಉಸ್ತುವಾರಿಯನ್ನು ಬ್ರಿಟಿಷರು ತೆಗೆದುಕೊಂಡು ಅವರ ರೀತಿಯಲ್ಲಿಯೇ ಅಮೃತ್ ಮಹಲ್ ದನಗಳನ್ನು ಹಾಲು, ಉಳುಮೆ ಹಾಗೂ ಯುದ್ಧಗಳಲ್ಲಿ  ಉಪಯೋಗಿಸುವ ಸಲುವಾಗಿ ಅಭಿವೃದ್ಧಿಪಡಿಸಲು ಕ್ರಮ ಜರುಗಿಸಿದರು. ಈ ಇಲಾಖೆಗೆ ಒಟ್ಟು ೧೪೩ ಕಾವಲುಗಳಿದ್ದು, ಇವುಗಳ ಉಸ್ತುವಾರಿಯನ್ನು ಅಂದಿನ ಬ್ರಿಟಿಷ್‌ ಸರ್ಕಾರದ ಮಿಲಿಟರಿ ಸಹಾಯಕರಿಗೆ ನೀಡಲಾಯಿತು. ೧೮೯೭: ಅಮೃತ್ ಮಹಲ್ ಇಲಾಖೆಯ ಉಸ್ತುವಾರಿಯನ್ನು ನೋಡಿಕೊಳ್ಳಲು ಒಬ್ಬರು ಪ್ರತ್ಯೇಕ ಅಧೀಕ್ಷಕರನ್ನು ನೇಮಿಸಲಾಯಿತು. ೧೯೧೫-೧೬: ಅಮೃತ್ ಮಹಲ್ ಇಲಾಖೆಯನ್ನು ಕೃಷಿ ಇಲಾಖೆಗೆ ವರ್ಗಾಯಿಸಿ, ಈ ವಿಭಾಗವನ್ನು ಪಶುಸಂಗೋಪನೆ ತಜ್ಞರ ಉಸ್ತುವಾರಿಯಲ್ಲಿ ಕಾರ್ಯನಿರ್ವಹಿಸುವಂತೆ ವ್ಯವಸ್ಥೆಗೊಳಿಸಲಾಯಿತು. ೧೯೪೫: ಈ ವಿಭಾಗವನ್ನು ಕೃಷಿ ಇಲಾಖೆಯಿಂದ  ಬೇರ್ಪಡಿಸಿ, ಮೈಸೂರು ರಾಜ್ಯದ ಪಶುಸಂಗೋಪನೆ ಮತ್ತು ಪಶುವೈದ್ಯ ಸೇವಾ ಇಲಾಖೆಯನ್ನಾಗಿ ಮಾಡಲಾಯಿತು.

ಪಶುಸಂಗೋಪನಾ ವಲಯವು ಕೃಷಿ ಆಧಾರಿತ ಗ್ರಾಮೀಣ ಅರ್ಥವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಚಟುವಟಿಕೆಗಳಲ್ಲಿ ಮುಖ್ಯವಾಗಿ ಹೈನುಗಾರಿಕೆ, ಕುರಿ ಸಾಕಾಣಿಕೆ, ಮೇಕೆ ಸಾಕಾಣಿಕೆ, ಹಂದಿ ಸಾಕಾಣಿಕೆ ಮತ್ತು ಕೋಳಿ ಸಾಕಾಣಿಕೆ ಒಳಗೊಂಡಿವೆ. ಈ ಚಟುವಟಿಕೆಗಳು ನಿರ್ದಿಷ್ಟವಾಗಿ ಗ್ರಾಮೀಣ ಭಾರತದಲ್ಲಿ ಸಾಂಪ್ರದಾಯಿಕವಾಗಿದ್ದರೂ, ವೈಜ್ಞಾನಿಕ ಪ್ರಗತಿ, ಉದಾರೀಕರಣ ಮತ್ತು ಸುಧಾರಣೆಗಳ ಪ್ರಕ್ರಿಯೆಯು ಈ ವಲಯದಲ್ಲಿ ಖಾಸಗಿಯ ಸಣ್ಣ ಮತ್ತು ಬೃಹತ್ ಉದ್ಯಮದಾರರು ಬಂಡವಾಳ ಹೂಡಲು ದಾರಿಮಾಡಿಕೊಟ್ಟಿದೆ.

ದೂರದೃಷ್ಟಿ: ಜಾನುವಾರು, ಕೋಳಿ ಮತ್ತು ಮೆಲುಕು ಹಾಕುವ ಸಣ್ಣ ಪ್ರಾಣಿಗಳ ಸುಸ್ಥಿರ ಬೆಳವಣಿಗೆ ಅಥವಾ ಪೌಷ್ಠಿಕ ಭದ್ರತೆ ಮತ್ತು ಆರ್ಥಿಕ ಅಭಿವೃದ್ಧಿ.

ಗುರಿ: ಪ್ರಾಣಿ ಅನುವಂಶೀಯ ಸಂಪನ್ಮೂಲಗಳ ಸಂರಕ್ಷಣೆ ಹಾಗೂ ಅಭಿವೃದ್ಧಿ, ಮತ್ತು ತ್ವರಿತ ತಳಿವೃದ್ಧಿಗಾಗಿ ತಳಿ ಅಭಿವೃದ್ಧಿ ಕಾರ್ಯಕ್ರಮ.

ಹೊಣೆಗಾರಿಕೆಗಳು: ಬ್ಯಾಕ್ಟೀರಿಯಾ ಹಾಗೂ ವೈರಸ್ ರೋಗಗಳ ಪತ್ತೆಹಚ್ಚುವಿಕೆ, ರೋಗದಿಂದ ನರಳುತ್ತಿರುವ ಪ್ರಾಣಿಗಳ ಚಿಕಿತ್ಸೆ ಹಾಗೂ ಪ್ರಾಣಿಗಳಿಗೆ ಉಚಿತ ಲಸಿಕಾ ಕಾರ್ಯಕ್ರಮ. ಪಶುಸಂಗೋಪನಾ ಸೇವೆಗಳ ಮುಖಾಂತರ ದನ ಮತ್ತು ಎಮ್ಮೆಗಳ ತಳಿ ಸುಧಾರಣೆ. ಸುಧಾರಿತ ತಳಿಗಳ ಟಗರು ಮರಿಗಳು ಹಾಗೂ ಹಂದಿ ಮರಿಗಳನ್ನು ಒದಗಿಸುವುದು. ವಿಸ್ತರಣೆ ಮತ್ತು ತರಬೇತಿಯ ಮುಖಾಂತರ ವಿವಿಧ ಇಲಾಖಾ ಕಾರ್ಯಚಟುವಟಿಕೆಗಳನ್ನು ರೈತರಿಗೆ ತಲುಪಿಸುವುದು. ಋತುಮಾನಕ್ಕನುಗುಣವಾಗಿ ಹಸಿ ಮೇವು ಉತ್ಪಾದನೆಗೆ ರೈತರಿಗೆ ವಿವಿಧ ಮೇವಿನ ಮಿನಿಕಿಟ್ ಗಳನ್ನು ಹಾಗೂ ಬೇರಿನ ಕಂದುಗಳನ್ನು ಒದಗಿಸುವುದು.ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ಜಾನುವಾರುಗಳ ಆರೋಗ್ಯ ಪಾಲನೆ ಮತ್ತು ಮೇವು ಅಗತ್ಯತೆಗಳನ್ನು ಪೂರೈಸಲು ಕ್ರಮ ಕೈಗೊಳ್ಳುವುದು.

ಇಲಾಖೆಯ ಧ್ಯೇಯೋದ್ದೇಶಗಳು:

೧) ರೋಗಗ್ರಸ್ತ ಪ್ರಾಣಿಗಳ ಚಿಕಿತ್ಸೆಗಾಗಿ ಪಶುವೈದ್ಯ ಸೇವೆಗಳನ್ನು ಒದಗಿಸುವುದು ಹಾಗೂ ಪ್ರಾಣಿರೋಗಗಳ ತಡೆಗಟ್ಟುವಿಕೆ, ನಿಯಂತ್ರಿಸುವಿಕೆ ಮತ್ತು ನಿರ್ಮೂಲನೆ ಮಾಡುವಿಕೆ,

೨) ಗುಣಮಟ್ಟ ನಿಯಂತ್ರಣದೊಂದಿಗೆ ಮೇವು ಹಾಗೂ ಪಶುಆಹಾರ ಅಭಿವೃದ್ಧಿಗೊಳಿಸುವುದು. ದನಗಳು, ಎಮ್ಮೆಗಳು, ಮೆಲುಕು ಹಾಕುವ ಸಣ್ಣ ಪ್ರಾಣಿಗಳು, ಕೋಳಿ ಹಾಗೂ ಹಂದಿ ಸಾಕಾಣಿಕೆ ಅಭಿವೃದ್ಧಿಗೊಳಿಸುವುದು,

೩) ಗುಣಮಟ್ಟ ಭರವಸೆಯೊಂದಿಗೆ ಹಾಲು, ಮಾಂಸ ಮತ್ತು ಮೊಟ್ಟೆಗಳ ಉತ್ಪಾದನೆಯನ್ನು ಹೆಚ್ಚಿಸುವುದು,

೪) ಜಾನುವಾರು ಮತ್ತು ಕೋಳಿ ಸಾಕುವ ರೈತರು ಹಾಗೂ ಉದ್ಯಮಶೀಲರಿಗೆ ಆರ್ಥಿಕ ನೆರವು ಒದಗಿಸುವುದು,

೫) ಜಾನುವಾರು ಉತ್ಪಾದನಾ ತಂತ್ರಜ್ಞಾನವನ್ನು ಸುಧಾರಣೆಗೊಳಿಸುವುದು,

೬) ರಾಜ್ಯದಲ್ಲಿ ಆರೋಗ್ಯಕರ ಉತ್ಪಾದನಾ ವ್ಯವಸ್ಥೆ, ಹಾಲು, ಮಾಂಸ ಮತ್ತು ಮೊಟ್ಟೆಗಳ ಮಾರುಕಟ್ಟೆಯನ್ನು ಪ್ರೋತ್ಸಾಹಿಸುವುದು,

೭) ಹಾಲು ಮತ್ತು ಮೊಟ್ಟೆಗಳಿಗೆ ಗುಣಮಟ್ಟ ನಿಯಂತ್ರಣ / ಪ್ರಮಾಣೀಕರಣ

ಘಟಕಗಳನ್ನು ಸ್ಥಾಪಿಸುವುದು,

೮) ಪ್ರಾಣಿ, ಪಶುವೈದ್ಯಕೀಯ ಮತ್ತು ಹೈನುಗಾರಿಕೆ ವಿಜ್ಞಾನಗಳಲ್ಲಿ ಸಂಶೋಧನೆ ಹಾಗೂ ಅಭಿವೃದ್ಧಿ ಚಟುವಟಿಕೆಗಳನ್ನು ಉತ್ತೇಜಿಸುವುದು,

೯) ವಿಸ್ತರಣಾ ಶಿಕ್ಷಣ ವ್ಯವಸ್ಥೆಯನ್ನು ಬಲಗೊಳಿಸುವುದು. ಅನುವಂಶೀಯ ನಕ್ಷೆಯೊಂದಿಗೆ ದೇಶೀಯ ತಳಿಗಳನ್ನು ಸಂರಕ್ಷಿಸುವುದು ಮತ್ತು ಅಭಿವೃದ್ಧಿಪಡಿಸುವುದು,

೧೦) ಹಿಂದುಳಿದ ಪ್ರದೇಶಗಳನ್ನು ಕೇಂದ್ರೀಕರಿಸಿಕೊಂಡು ಪಶುವೈದ್ಯಕೀಯ ಸಂಸ್ಥೆಗಳನ್ನು ಸ್ಥಾಪಿಸುವುದು / ಬಲಪಡಿಸುವುದು,

೧೧) ಪಶುಸಂಗೋಪನಾ ಚಟುವಟಿಕೆಗಳ ಮೂಲಕ ಪರಿಶಿಷ್ಟ ಜಾತಿ / ಪಂಗಡಗಳು ಹಾಗೂ ಇತರೆ ಹಿಂದುಳಿದ ವರ್ಗಗಳು ಮತ್ತು ಮಹಿಳೆಯರಿಗೆ ಸಾಮಾಜಿಕ-ಆರ್ಥಿಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳುವುದು.

ಕಾರ್ಯಕ್ರಮಗಳು

ಜಾನುವಾರುಗಳ ಸಂವರ್ಧನೆ, ಪಾಲನೆ, ಸಂರಕ್ಷಣೆ ಹಾಗೂ ಸುಧಾರಣೆ, ಪಶುಸಂಗೋಪನೆ ಮತ್ತು ಹೈನುಗರಿಕೆ ಅಭಿವೃದ್ಧಿ, ಪಶುವೈದ್ಯಕೀಯ ಸೇವೆಗಳ ಕ್ಷೇತ್ರದಲ್ಲಿ ಕಾರ್ಯನೀತಿ ಹಾಗೂ ಕಾರ್ಯಕ್ರಮಗಳ  ರಚನೆ ಮತ್ತು ಅನುಷ್ಠಾನ ಇವುಗಳು ಇಲಾಖೆಯ ಜವಾಬ್ದಾರಿಯಾಗಿದೆ. ಇಲಾಖೆಯಲ್ಲಿನ ಕಾರ್ಯಚಟುವಟಿಕೆಗಳು ಮುಖ್ಯವಾಗಿ ಈ ಕೆಳಗಿನ ಅಂಶಗಳ ಮೇಲೆ ಹೆಚ್ಚಿನ ಆದ್ಯತೆಯನ್ನು ನೀಡುತ್ತವೆ: ಪಶುಸಂಗೋಪನಾ ಉತ್ಪಾದಕತೆಯನ್ನು ಸುಧಾರಿಸುವುದಕ್ಕಾಗಿ ರಾಜ್ಯದಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವುದು, ಹಾಲು ಮತ್ತು ಹಾಲಿನ ಉತ್ಪನ್ನಗಳ ನಿರ್ವಹಣೆ, ಸಂಸ್ಕರಣೆ ಮತ್ತು ಮಾರಾಟ ಮಾಡುವುದಕ್ಕೆ ಸಂಬಂಧಿಸಿದ ಮೂಲಸೌಲಭ್ಯಗಳನ್ನು ಒದಗಿಸುವುದು, ದೇಶೀಯ ತಳಿಗಳ ಸಂರಕ್ಷಣೆ ಮತ್ತು ಅಭಿವೃದ್ಧಿ, ಪಶು ಆರೋಗ್ಯ ಸೇವೆಯನ್ನು ಕಲ್ಪಿಸುವ ಮೂಲಕ ಜಾನುವಾರುಗಳ ಪಾಲನೆ ಹಾಗೂ ಸಂರಕ್ಷಣೆ. ಅತ್ಯುತ್ಕೃಷ್ಟ ಅನುವಂಶೀಯತೆ ಅಭಿವೃದ್ಧಿಗಾಗಿ ಜಾನುವಾರು ಕ್ಷೇತ್ರಗಳನ್ನು ಬಲಪಡಿಸುವುದು. ಸಾಮರ್ಥ್ಯವರ್ಧನೆ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ, ಸಂಶೋಧನಾ ಮತ್ತು ಅಭಿವೃದ್ಧಿ ಕಾರ್ಯಚಟುವಟಿಕೆಗಳು. ಜಾನುವಾರುಗಳ ಅಭಿವೃದ್ಧಿ ಕಾರ್ಯಚಟುವಟಿಕೆಗಳಿಗೆ ಪ್ರೋತ್ಸಾಹ, ಸಾಮಾಜಿಕ-ಆರ್ಥಿಕ ಕಾರ್ಯಕ್ರಮಗಳ ಅನುಷ್ಠಾನ, ಪಶುವೈದ್ಯ ಸಂಸ್ಥೆಗಳಲ್ಲಿ ದೊರೆಯುವ ಸೌಲಭ್ಯಗಳು. ಆಡಳಿತ ವ್ಯವಸ್ಥೆ: ರಾಜ್ಯ ಮಟ್ಟದ ಆಡಳಿತ: ಆಯುಕ್ತರು, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಇವರು ಇಲಾಖಾ ಮುಖ್ಯಸ್ಥರಾಗಿರುತ್ತಾರೆ. ನಿರ್ದೇಶಕರು, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಇವರು ತಾಂತ್ರಿಕ ಆಡಳಿತದ ಮುಖ್ಯಸ್ಥರಾಗಿದ್ದು, ಆಯುಕ್ತರ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಾರೆ. ಜಿಲ್ಲಾ ಮಟ್ಟದ ಆಡಳಿತ: ಜಿಲ್ಲಾ ಮಟ್ಟದಲ್ಲಿ ಉಪ ನಿರ್ದೇಶಕರು, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಇವರು ಆಡಳಿತ ವ್ಯವಸ್ಥೆಯ ಮುಖ್ಯಸ್ಥರಾಗಿರುತ್ತಾರೆ. ಜಿಲ್ಲಾ ಮತ್ತು ತಾಲೂಕು ಮಟ್ಟದ ಆಡಳಿತವು ಆಯಾ ಜಿಲ್ಲಾ ಪಂಚಾಯಿತಿಗಳ ಅಧೀನದಲ್ಲಿ ಕಾರ್ಯನಿರ್ವಹಿಸುತ್ತವೆ. ತಾಲೂಕು ಮಟ್ಟದ ಆಡಳಿತ: ತಾಲೂಕು ಮಟ್ಟದಲ್ಲಿ ಸಹಾಯಕ ನಿರ್ದೇಶಕರು, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಇವರು ಆಡಳಿತ ವ್ಯವಸ್ಥೆಯ ಮುಖ್ಯಸ್ಥರಾಗಿರುತ್ತಾರೆ. ಕುಂದುಕೊರತೆಗಳನ್ನು ಪರಿಣಾಮಕಾರಿಯಾಗಿ ನಿವಾರಿಸುವ ವ್ಯವಸ್ಥೆ ರಾಜ್ಯ ಮಟ್ಟದಲ್ಲಿ ಆಯುಕ್ತರು/ನಿರ್ದೇಶಕರು, ಜಿಲ್ಲಾ ಮಟ್ಟದಲ್ಲಿ ವಿವಿಧ ಜಿಲ್ಲೆಗಳ ಉಪ ನಿರ್ದೆಶಕರುಗಳು, ತಾಲೂಕು ಮಟ್ಟದಲ್ಲಿ ಸಂಬಂಧಪಟ್ಟ ಸಹಾಯಕ ನಿರ್ದೇಶಕರುಗಳು ಅಥವಾ ನಿಯೋಜಿಸಲ್ಪಟ್ಟ ನೋಡಲ್ ಅಧಿಕಾರಿಗಳು ಸಾರ್ವಜನಿಕರ ಹಾಗೂ ಜಾನುವಾರು ಸಾಕಾಣಿಕೆದಾರರ ಕುಂದುಕೊರತೆಗಳನ್ನು ನಿವಾರಿಸಲು ಸೂಕ್ತ  ಕ್ರಮ ವಹಿಸುತ್ತಾರೆ.

ಇಲಾಖೆಯು ಈ ಕೆಳಕಂಡ ವಿವಿಧ ಅಭಿವೃದ್ಧಿ ಚಟುವಟಿಕೆಗಳನ್ನು ಅನುಷ್ಠಾನಗೊಳಿಸುತ್ತಿದೆ: ೧) ಪ್ರಾಣಿಗಳ ಆರೋಗ್ಯ ಮತ್ತು ಪಶುವೈದ್ಯ ಸೇವೆ, ೨) ಜಾನುವಾರು ಅಭಿವೃದ್ಧಿ, ೩) ಜಾನುವಾರು ಹಾಗೂ ಎಮ್ಮೆ ಸಂವರ್ಧನೆಗಾಗಿ ರಾಷ್ಟ್ರೀಯ ಯೋಜನೆ, ೪) ಕುಕ್ಕುಟ ಅಭಿವೃದ್ಧಿ, ೫) ಕುರಿ ಮತ್ತು ಉಣ್ಣೆ ಅಭಿವೃದ್ಧಿ, ೬) ಹೈನುಗಾರಿಕೆ ಅಭಿವೃದ್ಧಿ, ೭) ವರಾಹ ಅಭಿವೃದ್ಧಿ, ೮) ಮೇವು ಅಭಿವೃದ್ಧಿ, ೯) ಮೊಲ ಸಾಕಾಣಿಕೆ ಅಭಿವೃದ್ಧಿ, ೧೦) ವಿಸ್ತರಣೆ ಮತ್ತು ತರಬೇತಿ ಕಾರ್ಯಕ್ರಮ, ೧೧) ಸಾಮಾಜಿಕ-ಆರ್ಥಿಕ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನ,

ಕಾಯ್ದೆ ಮತ್ತು ನಿಯಮಗಳು: ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಗೆ ಸಂಬಂಧಪಟ್ಟ ಈ ಕೆಳಕಂಡ ಕಾಯ್ದೆಗಳು/ ಮಸೂದೆಗಳು ಜಾರಿಯಲ್ಲಿರುತ್ತವೆ. ಇವುಗಳನ್ನು ಅಗತ್ಯಕ್ಕೆ ತಕ್ಕಂತೆ ಜಾರಿಗೊಳಿಸುವ ಜವಾಬ್ದಾರಿಯನ್ನು ಇಲಾಖೆಯು ಹೊಂದಿರುತ್ತದೆ.

೧) ಕರ್ನಾಟಕ ಗೋಹತ್ಯೆ ತಡೆ ಮತ್ತು ದನಕರು ಸಂರಕ್ಷಣಾ ಅಧಿನಿಯಮ ೧೯೬೪ ಮತ್ತು ನಿಯಮಗಳು ೧೯೬೭, ರಾಜ್ಯದಲ್ಲಿ ಗೋವು ಮತ್ತು ಕರುಗಳ ಹಾಗೂ ಎಮ್ಮೆ ಮತ್ತು ಎಮ್ಮೆ ಕರುಗಳ ಹತ್ಯೆಯನ್ನು ತಡೆಯುವುದಕ್ಕಾಗಿ ಹಾಗೂ ಇತರೆ ದನಕರುಗಳ ರಕ್ಷಣೆಗಾಗಿ ಉಪಬಂಧ ಕಲ್ಪಿಸುವ ಅಧಿನಿಯಮ, ೨) ಕರ್ನಾಟಕ ದನಕರು ಅತಿಕ್ರಮ ಪ್ರವೇಶ ಅಧಿನಿಯಮ ೧೯೬೬ ಮತ್ತು ಕರ್ನಾಟಕ ದನಕರು ಅತಿಕ್ರಮ ಪ್ರವೇಶ ನಿಯಮಗಳು ೧೯೭೧, ಭೂಮಿ ಅಥವಾ ಇತರೆ ಸ್ವತ್ತುಗಳಿಗೆ ಹಾನಿಯನ್ನುಂಟುಮಾಡುವ ದನಕರುಗಳನ್ನು ದೊಡ್ಡಿಯಲ್ಲಿ ಕೂಡಿಹಾಕುವುದಕ್ಕೆ ಹಾಗೂ ಅದಕ್ಕೆ ಸಂಬಂಧಿಸಿದ ವಿಷಯಗಳಿಗೆ ಉಪಬಂಧಿಸುವ ಅಧಿನಿಯಮ, ೩) ಕರ್ನಾಟಕ ಪುರಸಭಾ ನಿಗಮಗಳ ಅಧಿನಿಯಮ ೧೯೭೬ ಮತ್ತು ನಿಯಮಗಳು ಕರ್ನಾಟಕ ರಾಜ್ಯದಲ್ಲಿ ಪುರಸಭಾ ನಿಗಮಗಳ ಸ್ಥಾಪನೆಗೆ ಸಂಬಂಧಿಸಿದಂತೆ ಕಾನೂನುಗಳನ್ನು ಕ್ರೋಢೀಕರಿಸುವ ಮತ್ತು ತಿದ್ದುಪಡಿ ಮಾಡುವ ಅಧಿನಿಯಮ, ೪) ಕರ್ನಾಟಕ ಪ್ರಾಣಿಬಲಿಯನ್ನು ತಡೆಗಟ್ಟುವ ಅಧಿನಿಯಮ ೧೯೫೯ ಮತ್ತು ನಿಯಮಗಳು, ಕರ್ನಾಟಕ ರಾಜ್ಯದಲ್ಲಿ ಪೂಜಾ ಸ್ಥಳಗಳ ಆವರಣಗಳಲ್ಲಿ ಹಾಗೂ ಆವರಣಗಳೊಳಗೆ ಪ್ರಾಣಿಬಲಿಯನ್ನು ತಡೆಗಟ್ಟುವ ಅಧಿನಿಯಮ, ೫) ಕರ್ನಾಟಕ ಜಾನುವಾರು ಸುಧಾರಣಾ ಅಧಿನಿಯಮ ೧೯೬೧ ಮತ್ತು ನಿಯಮಗಳು ೧೯೬೯, ಕರ್ನಾಟಕ ರಾಜ್ಯದಲ್ಲಿ ಜಾನುವಾರು ಸುಧಾರಣೆಗಾಗಿ ಉಪಬಂಧ ಕಲ್ಪಿಸುವ ಅಧಿನಿಯಮ, ೬) ಜಾನುವಾರು ಆಮದು ಅಧಿನಿಯಮ ೧೯೬೮, ಜಾನುವಾರು ಆಮದನ್ನು ನಿಯಂತ್ರಿಸುವುದಕ್ಕೆ ಉತ್ತಮ ಉಪಬಂಧವನ್ನು ಕಲ್ಪಿಸುವ ಅಧಿನಿಯಮ. ೭) ಕರ್ನಾಟಕ ಕುರಿ ಮತ್ತು ಕುರಿ ಉತ್ಪನ್ನಗಳ ಅಭಿವೃದ್ಧಿ ಅಧಿನಿಯಮ ೧೯೭೩, ಕರ್ನಾಟಕ ರಾಜ್ಯದಲ್ಲಿ ಕುರಿ ಮತ್ತು ಕುರಿ ಉತ್ಪನ್ನಗಳ ಅಭಿವೃದ್ಧಿಗಾಗಿ ಒಂದು ಮಂಡಳಿಯನ್ನು ಸ್ಥಾಪಿಸಲು ಹಾಗೂ ಅದಕ್ಕೆ ಸಂಬಂಧಿಸಿದ ವಿಷಯಗಳಿಗಾಗಿ ಉಪಬಂಧ ಕಲ್ಪಿಸುವ ಅಧಿನಿಯಮ, ೮) ವನ್ಯಜೀವಿ ಸಂರಕ್ಷಣಾ ಅಧಿನಿಯಮ ೧೯೭೨ ಮತ್ತು ವನ್ಯಜೀವಿ (ಸಂರಕ್ಷಣಾ) (ಕರ್ನಾಟಕ) ನಿಯಮಗಳು ೧೯೭೩, ವನ್ಯಜೀವಿಗಳು, ಪಕ್ಷಿಗಳು ಮತ್ತು ಅವುಗಳಿಗೆ ಸಂಬಂಧಿಸಿದ ಅಥವಾ ಅದಕ್ಕೆ ಸಹಾಯಕವಾಗಬಹುದಾದ ಅಥವಾ ಪ್ರಾಸಂಗಿಕವಾದ ವಿಷಯಗಳನ್ನು ಉಪಬಂಧಿಸುವ ಅಧಿನಿಯಮ, ೯) ಪ್ರಾಣಿಗಳಲ್ಲಿನ ಸೋಂಕುಕಾರಕ ಮತ್ತು ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ಮತ್ತು ನಿಯಂತ್ರಿಸುವ ಅಧಿನಿಯಮ ೨೦೦೯, ಪ್ರಾಣಿಗಳನ್ನು ಬಾಧಿಸುವ ಸೋಂಕುಕಾರಕ ಮತ್ತು ಸಾಂಕ್ರಾಮಿಕ ರೋಗಗಳನ್ನು ಪ್ರತಿಬಂಧಿಸುವ  ಮತ್ತು ನಿಯಂತ್ರಿಸುವ ಹಾಗೂ ನಿರ್ಮೂಲನೆಗೊಳಿಸುವುದಕ್ಕಾಗಿ ಮತ್ತು ಅಂಥ ರೋಗಗಳು ಒಂದು ರಾಜ್ಯದಿಂದ ಮತ್ತೊಂದು ರಾಜ್ಯದಲ್ಲಿ ತಲೆದೋರುವುದನ್ನು ಅಥವಾ ಹರಡುವುದನ್ನು ತಡೆಗಟ್ಟುವುದಕ್ಕಾಗಿ ಮತ್ತು ಪ್ರಾಣಿಜನ್ಯ ಮತ್ತು ಪ್ರಾಣಿಜನ್ಯ ಉತ್ಪನ್ನಗಳಿಗೆ ಆಮದು ಮತ್ತು ರಫ್ತು ಸೌಲಭ್ಯ ಕಲ್ಪಿಸುವ ವಿಷಯಗಳಿಗೆ ಸಂಬಂಧಪಟ್ಟಂತೆ ಭಾರತದ ಅಂತಾರಾಷ್ಟ್ರೀಯ ಹೊಣೆಗಾರಿಕೆಯನ್ನು ಅದಕ್ಕೆ ಸಂಬಂಧಿಸಿದ ಪ್ರಾಸಂಗಿಕ ವಿಷಯಗಳನ್ನು ಕಾರ್ಯಗತಗೊಳಿಸುವ ಅಧಿನಿಯಮ, ೧೦) ಔಷಧಗಳು ಮತ್ತು ಪ್ರಸಾಧನ ಸಾಮಗ್ರಿಗಳ ಅಧಿನಿಯಮ ೧೯೪೦, ಔಷಧಗಳು ಮತ್ತು ಪ್ರಸಾಧನ ಸಾಮಗ್ರಿಗಳ ಆಮದು ತಯಾರಿಕೆಗಳು, ವಿತರಣೆ ಮತ್ತು ಮಾರಾಟವನ್ನು ನಿಯಂತ್ರಿಸುವ ಅಧಿನಿಯಮ, ೧೧) ಭಾರತೀಯ ಪಶುವೈದ್ಯಕೀಯ ಪರಿಷತ್ತು ಅಧಿನಿಯಮ ೧೯೮೪ - ಕೆವಿಡಿ ನಿಯಮಗಳು ೧೯೯೮, ಪಶುವೈದ್ಯಕೀಯ ವೃತ್ತಿಯನ್ನು ನಿಯಂತ್ರಿಸುವುದಕ್ಕಾಗಿ ಮತ್ತು ರಾಜ್ಯ ಪಶುವೈದ್ಯಕೀಯ ವಿಷಯಗಳನ್ನು ಸ್ಥಾಪಿಸಲು ಮತ್ತು ಪಶುವೈದ್ಯಕೀಯ ವೃತ್ತಿದಾರರ ರಿಜಿಸ್ಟರುಗಳ ನಿರ್ವಹಣೆ ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳಿಗೆ ಉಪಬಂಧ ಕಲ್ಪಿಸುವ ಅಧಿನಿಯಮ, ೧೨) ಕರ್ನಾಟಕ ಕೋಳಿ ಮತ್ತು ಜಾನುವಾರು ಆಹಾರಗಳು (ತಯಾರಿಕೆ ಮತ್ತು ಮಾರಾಟ ನಿಯಂತ್ರಣ)ದನಗಳ ಮತ್ತು ಕೋಳಿ ಆಹಾರ ತಯಾರಿಕೆ ಮತ್ತು ಮಾರಾಟವನ್ನು ನಿಯಂತ್ರಿಸುವ ಆದೇಶ ೧೯೮೭, ತಿದ್ದುಪಡಿ ಆದೇಶ ೧೯೯೧-೯೨, ೧೩) ಪ್ರಾಣಿಹಿಂಸೆ ತಡೆಗಟ್ಟುವ ಅಧಿನಿಯಮ ೧೯೬೦, ಪ್ರಾಣಿಗಳಿಗೆ ಅನಗತ್ಯವಾಗಿ ನೋವು ಅಥವಾ ಯಾತನೆ ಕೊಡುವುದನ್ನು ತಡೆಗಟ್ಟುವ ಅಧಿನಿಯಮ ಮತ್ತು ಪ್ರಾಣಿಹಿಂಸೆ ತಡೆಗಟ್ಟುವುದಕ್ಕೆ ಸಂಬಂಧಪಟ್ಟ ಕಾನೂನನ್ನು ತಿದ್ದುಪಡಿ ಮಾಡುವುದು.

ಪಶುವೈದ್ಯ ಇಲಾಖೆಯ ಯೋಜನೆಗಳು

ಪಶು ಭಾಗ್ಯ: ೨೦೧೫-೧೬ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಮಾನ್ಯ ಮುಖ್ಯಮಂತ್ರಿಗಳು ’ಪಶು ಭಾಗ್ಯ’ ಎಂಬ ಹೊಸ ಯೋಜನೆಯನ್ನು ಘೋಷಿಸಿದ್ದಾರೆ. ಪಶು ಭಾಗ್ಯ ಯೋಜನೆಯು ಈ ಕೆಳಕಂಡ ಅಂಶಗಳನ್ನು ಒಳಗೊಂಡಿರುತ್ತದೆ: ವಾಣಿಜ್ಯ ಬ್ಯಾಂಕುಗಳಿಂದ ಗರಿಷ್ಠ ರೂ. ೧.೨೦ ಲಕ್ಷದ ವರೆಗೆ ಸಾಲ ಪಡೆದು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಹಸು, ಕುರಿ, ಆಡು, ಹಂದಿ, ಕೋಳಿ ಘಟಕಗಳನ್ನು ಸ್ಥಾಪಿಸಲು ಪ.ಜಾ. ಮತ್ತು ಪ.ಪಂ. ದವರಿಗೆ ಶೇ.೩೩ ಹಾಗೂ ಇತರೆ ಜನಾಂಗದವರಿಗೆ ಶೇ.೨೫ ರಷ್ಟು ಬ್ಯಾಕ್ ಎಂಡೆಡ್ ಸಹಾಯಧನ ಒದಗಿಸಲಾಗುವುದು. (ಪ.ಜಾ. ಮತ್ತು ಪ.ಪಂ. ದವರಿಗೆ ಸಹಾಯಧನವನ್ನು ಪಶು ಭಾಗ್ಯ ಯೋಜನೆಯ ಆಡಳಿತಾತ್ಮಕ ಅನುಮೋದನೆ ಸರ್ಕಾರಿ ಆದೇಶ, ದಿನಾಂಕ ೦೪-೦೮-೨೦೧೫ ರಲ್ಲಿ ಶೇ.೩೩ ರಿಂದ ಶೇ.೫೦ ಕ್ಕೆ ಪರಿಷ್ಕರಿಸಲಾಗಿದೆ).

ಬೆಳೆ ಸಾಲದ ಮಾದರಿಯಲ್ಲಿ, ಸಹಕಾರಿ ಬ್ಯಾಂಕುಗಳಿಂದ ಶೂನ್ಯ ಬಡ್ಡಿ ದರದಲ್ಲಿ ರೂ. ೫೦,೦೦೦ ವರೆಗೆ ಪಶು ಆಹಾರ / ಇತರೆ ನಿರ್ವಹಣೆ ವೆಚ್ಚಕ್ಕಾಗಿ ಅಲ್ಪಾವಧಿ ಸಾಲ ಒದಗಿಸಲಾಗುವುದು. ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರುಗಳಿಗೆ ೫ ರಾಸುಗಳವರೆಗೆ ವಿಮಾ ಕಂತುಗಳನ್ನು ಪಾವತಿಸಲು ಸಹಾಯಧನ ಒದಗಿಸಲಾಗುವುದು. ಕುರಿಗಾಹಿ ಸುರಕ್ಷಾ ಯೋಜನೆಯಡಿ ನೀಡುತ್ತಿರುವ ರೂ.೫,೦೦೦ ಪರಿಹಾರ ಧನವನ್ನು ಮುಂದುವರೆಸಲಾಗುವುದು. ಈ ಕಾರ್ಯಕ್ರಮಕ್ಕೆ ರೂ. ಐದು ಕೋಟಿ ಅನುದಾನವನ್ನು ನೀಡಲಾಗುವುದು.

ಹಾಲು ನೀಡುವ ರಾಸುಗಳನ್ನು ಸಂರಕ್ಷಿಸುವ ದೃಷ್ಟಿಯಿಂದ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಸದಸ್ಯರಿಗೆ ಸೇರಿದ ೩.೬೨ ಲಕ್ಷ ಹೈನು ರಾಸುಗಳಿಗೆ ಶೇಕಡಾ ೭೦ ರಷ್ಟು ಸಹಾಯಧನದೊಂದಿಗೆ ವಿಮಾ ರಕ್ಷಣೆ ಒದಗಿಸಿದೆ. ಇದಕ್ಕಾಗಿ ೨೧.೪೦ ಕೋಟಿ ರೂ. ವೆಚ್ಚಮಾಡಿದೆ. ಹಾಗೆಯೇ, ಪಶುಗಳಿಗೆ ಕಳೆದ ಮೂರು ವರ್ಷಗಲ್ಲಿ ಉತ್ತಮ ಪಶುವೈದ್ಯಕೀಯ ಸೇವೆಗಳನ್ನು ನೀಡುವ ಉದ್ದೇಶಕ್ಕಾಗಿ ಗ್ರಾಮೀಣ ಪ್ರದೇಶಗಳಲ್ಲಿ ೧೦೦ ಪಶು ಚಿಕಿತ್ಸಾ ಕೇಂದ್ರಗಳನ್ನು ಮೇಲ್ದಜೆಗೇರಿಸಿದೆ. ೧೦೦ ಹೊಸ ಪಶು ಚಿಕಿತ್ಸಾಲಯಗಳನ್ನು ಸ್ಥಾಪಿಸಿದೆ. ರಾಜ್ಯದಲ್ಲಿ ಉತ್ತಮ ಪಶುವೈದ್ಯಕೀಯ ಸೇವೆ ಒದಗಿಸಲು ಪ್ರತಿ ಕಂದಾಯ ವಿಭಾಗಕ್ಕೆ ಒಂದರಂತೆ ಸೂಪರ ಸ್ಪೆಷಾಲಿಟಿ ಆಸ್ಪತ್ರೆ ತೆರೆಯಲಾಗುತ್ತಿದೆ. ಪಶು ವೈದ್ಯಕೀಯ ಶಿಕ್ಷಣ ಹಾಗೂ ಸಂಶೋಧನಾ ಮಟ್ಟ ಹೆಚ್ಚಿಸಲು ಮತ್ತು ರಾಜ್ಯದಲ್ಲಿ ಪಶುವೈದ್ಯರ ಕೊರತೆ ನೀಗಿಸಲು ಬೀದರ್, ಶಿವಮೊಗ್ಗ, ಗದಗ, ಅಥಣಿ, ಪುತ್ತೂರು ಮತ್ತು ಹಾಸನದ ಪಶು ವೈದ್ಯ ಕಾಲೇಜುಗಳಿಗೆ ಮತ್ತು ಕಲಬುರಗಿಯಲ್ಲಿನ ಡೈರಿ ಕಾಲೇಜಿಗೆ ೫೭.೩ ಕೋಟಿ ರೂ. ಗಳ ವೆಚ್ಚದಲ್ಲಿ ಮೂಲಭೂತ ಸೌಕರ್ಯ ಒದಗಿಸಿದೆ. ಒಂದೇ ಸೂರಿನಡಿ ಎಲ್ಲಾ ಪಶುವೈದ್ಯಕೀಯ ಸೇವೆ ಒದಗಿಸಲು ಅನುವಾಗುವಂತೆ ಪಶು ವೈದ್ಯಕೀಯ ಆಯುಕ್ತಾಲಯ ಮತ್ತು ಇತರೆ ಅಂಗಸಂಸ್ಥೆಗಳು ಒಂದೆಡೆ ಕಾರ್ಯನಿರ್ವಹಿಸಲು ಬೆಂಗಳೂರಿನಲ್ಲಿ ’ಪಶುಭವನ’ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ.  ಕುರಿಗಾಹಿ ಸುರಕ್ಷಾ ಯೋಜನೆಯಡಿ ೫,೦೦೦ ರೂ. ಗಳಂತೆ ೧೦ ಸಾವಿರ ಕುರಿ/ ಮೇಕೆಗಳ ಮಾಲೀಕರಿಗೆ ಒಟ್ಟು ೫ ಕೋಟಿ ರೂ. ಗಳಷ್ಟು ಪರಿಹಾರ ಧನವನ್ನು ಸರ್ಕಾರ ನೀಡುತ್ತಿದೆ. ಕುರಿ ಮತ್ತು ಮೇಕೆ ಅಭಿವೃದ್ಧಿ, ಹಂದಿ ಅಭಿವೃದ್ಧಿ, ಹೈನುಗಾರಿಕೆ ಅಭಿವೃದ್ಧಿ ಹಾಗೂ ಜಾನುವಾರು ಆರೋಗ್ಯ ರಕ್ಷಣೆಗೆ ೬೫ ಕೋಟಿ ರೂ. ಅನುದಾನ ನೀಡಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ಕಾಲುಬಾಯಿ ಜ್ವರದಿಂದ ಮರಣಹೊಂದಿದ ರಾಸುಗಳ ಮಾಲೀಕರಿಗೆ ಒಟ್ಟು ರೂ.೨೩.೭೪ ಕೋಟಿಗಳಷ್ಟು ಪರಿಹಾರವನ್ನು ನೀಡಿದೆ. ದೇಸಿ ತಳಿಯಾದ ದೇವಣಿ ಮತ್ತು ಮಲೆನಾಡು ಗಿಡ್ಡ ಹಸುಗಳ ಸಂರಕ್ಷಣೆಗಾಗಿ ಕೊಯ್ಲ, ಕೂಡಿಗೆ ಮತ್ತು ಕುರಿಕುಪ್ಪೆ ಕ್ಷೇತ್ರಗಳ್ಲಿ ೧೦ ಕೋಟಿ ರೂ.ಗಳ ವೆಚ್ಚದಲ್ಲಿ ’ಗೋಕುಲ ಗ್ರಾಮ’ ಸ್ಥಾಪನೆಗೆ ಕ್ರಮ ಕೈಗೊಂಡಿದೆ. ರಾಸುಗಳಿಗೆ ಯುಡಿಐ ಒಳಗೊಂಡ ಕಿವಿ ಓಲೆ ಅಳವಡಿಕೆ ಮತ್ತು ಆ ಸೇವೆಗಳ ಟ್ರ್ಯಾಕಿಂಗ್ ಮಾಹಿತಿ ಕೋಶ (ಡೇಟಾಬೇಸ್) ಸೃಜನೆಗೆ ೧೦ ಕೋಟಿ ರೂ. ಗಳನ್ನು ನೀಡಿದೆ. ಹೈನು ರಾಸುಗಳು ಮತ್ತು ಕುರಿ ಮೇಕೆಗಳ ತಳಿ ಅಭಿವೃದ್ಧಿ ನೀತಿ ಮತ್ತು ಕಾನೂನು ನಿಯಮಾವಳಿಗಳನ್ನು ಜಾರಿಗೆ ತರಲು ಕ್ರಮ ವಹಿಸಲಾಗಿದೆ. ಸಣ್ಣ ಮತ್ತು ಮಾಧ್ಯಮ ಗಾತ್ರದ ಕೋಳಿ ಸಾಕಾಣಿಕಾ ಘಟಕವನ್ನು ಕೃಷಿ ವಲಯವೆಂದು ಪರಿಗಣಿಸಿ ಕುಕ್ಕುಟ ವಲಯ ನಿಯಂತ್ರಣಕ್ಕೆ ಶಾಸನ ರಚನೆಗಾಗಿ ಕ್ರಮ ಕೈಗೊಳ್ಳಲಾಗಿದೆ. ಸಂಕಷ್ಟದಲ್ಲಿರುವ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳಿಗೆ ಒಂದಾವರ್ತಿ ಸಹಾಯಧನವನ್ನಾಗಿ ೧೮೪ ಸಹಕಾರ ಸಂಘಗಳಿಗೆ ೯.೨ ಕೋಟಿ ರೂ.ಗಳನ್ನು ಪಾವತಿಸಿದೆ. ಶಿರಾ, ಕೋಲಾರ, ಬಾಗಲಕೋಟೆ, ಶಿರಸಿ ನಾಲ್ಕು ಕಡೆಗಳಲ್ಲಿ ಪ್ರಾಂತೀಯ ರೋಗ ಪತ್ತೆ ಹಚ್ಚುವ ಪ್ರಯೋಗಾಲಯಗಳನ್ನು ಎರಡು ಕೋಟಿ ರೂ. ಗಳ ವೆಚ್ಚದಲ್ಲಿ ಸ್ಥಾಪಿಸಿದೆ. ಶುಲ್ಕ ರಹಿತ ಪಶುಪಾಲಕರ ಸಹಾಯವಾಣಿಯಾದ ೧೮೦೦-೪೨೫-೦೦೧೨ ಅನ್ನು ಪ್ರಾರಂಭಿಸಿ, ರೈತರಿಗೆ ಇಲಾಖಾ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ/ಸೇವಾ ಸಲಹೆಗಳನ್ನು ನೀಡಲಾಗುತ್ತಿದೆ. ಇಲಾಖೆಯು ಅನುಷ್ಠಾನಗೊಳಿಸುತ್ತಿರುವ ಇನ್ನಿತರೆ ಕಾರ್ಯಕ್ರಮಗಳು ಕೆಳಕಂಡಂತಿವೆ:

 

ಕೇಂದ್ರ ಪುರಸ್ಕೃತ ಯೋಜನೆಗಳು,

ದೊಡ್ಡರೋಗ ನಿರ್ಮೂಲನಾ ಯೋಜನೆ

ಪ್ರಾಣಿ ರೋಗ ತಡೆಗಟ್ಟುವಿಕೆಗೆ ರಾಜ್ಯಗಳಿಗೆ ನೆರವು

ಕಾಲು ಬಾಯಿ ರೋಗ ನಿಯಂತ್ರಣ ಕಾರ್ಯಕ್ರಮ

ರಾಷ್ಟ್ರೀಯ ಪ್ರಾಣಿ ರೋಗ ವರದಿ ವ್ಯವಸ್ಥೆ

ರಾಷ್ಟ್ರೀಯ ಪಿ.ಪಿ.ಆರ್. ನಿಯಂತ್ರಣ ಕಾರ್ಯಕ್ರಮ

ರಾಷ್ಟ್ರೀಯ ಬ್ರೂಸೆಲ್ಲಾ ನಿಯಂತ್ರಣ ಕಾರ್ಯಕ್ರಮ

ಪಶುವೈದ್ಯಕೀಯ ಆಸ್ಪತ್ರೆ ಹಾಗೂ ಚಿಕಿತ್ಸಾಲಯಗಳ ಸ್ಥಾಪನೆ ಹಾಗೂ ಬಲವರ್ಧನೆ ತಳಿ ಅಭಿವೃದ್ಧಿ

ಜಾನುವಾರು ವಿಮಾ ಯೋಜನೆ

ವಿಶೇಷ ಜಾನುವಾರು ಅಭಿವೃದ್ಧಿ ಯೋಜನೆ

ವಿಶೇಷ ಘಟಕ ಯೋಜನೆ

ಗಿರಿಜನ ಉಪ ಯೋಜನೆ

ಬರಡು ರಾಸು ಚಿಕಿತ್ಸಾ ಶಿಬಿರ

ಮೇವು ಅಭಿವೃದ್ಧಿ ಯೋಜನೆ

ರೈತರ ತರಬೇತಿ ಕಾರ್ಯಕ್ರಮ,

ಪಶುಪಾಲನಾ ಇಲಾಖೆಯ ಸಂಸ್ಥೆಗಳು

ಕುಕ್ಕುಟ, ಕುರಿ, ಮೊಲ ಮತ್ತು ಹಂದಿಗಳ ಸಾಕಾಣಿಕೆ ಹಾಗೂ ತಳಿ ಸಂವರ್ಧನಾ ಚಟುವಟಿಕೆಗಳಿಗಾಗಿ ರಾಜ್ಯದಲ್ಲಿ ತಳಿ ಸಂವರ್ಧನಾ ಕ್ಷೇತ್ರಗಳನ್ನು ಸ್ಥಾಪಿಸಲಾಗಿದೆ. ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕ್ಷೇತ್ರಗಳ ವಿವಿರ ಈ ಕೆಳಕಂಡಂತಿದೆ:

ಕುಕ್ಕುಟ ಸಂವರ್ಧನಾ ಕ್ಷೇತ್ರಗಳು

೧. ರಾಜ್ಯ ಕುಕ್ಕುಟ ಸಂವರ್ಧನಾ ಮತ್ತು ತರಬೇತಿ ಕೇಂದ್ರ, ಹೆಸರಘಟ್ಟ

೨. ಪ್ರಾದೇಶಿಕ ಕೋಳಿ ಸಾಕಾಣಿಕೆ ಕೇಂದ್ರ, ಗಂಗಾವತಿ

೩. ಪ್ರಾದೇಶಿಕ ಕೋಳಿ ಸಾಕಾಣಿಕೆ ಕೇಂದ್ರ, ಮಳವಳ್ಳಿ

೪. ಪ್ರಾದೇಶಿಕ ಕೋಳಿ ಸಾಕಾಣಿಕೆ ಕೇಂದ್ರ, ಹಾವೇರಿ

೫. ಪ್ರಾದೇಶಿಕ ಕೋಳಿ ಸಾಕಾಣಿಕೆ ಕೇಂದ್ರ, ಕಲಬುರಗಿ

೬. ಪ್ರಾದೇಶಿಕ ಕೋಳಿ ಸಾಕಾಣಿಕೆ ಕೇಂದ್ರ, ದಾವಣಗೆರೆ

೭. ಪ್ರಾದೇಶಿಕ ಕೋಳಿ ಸಾಕಾಣಿಕೆ ಕೇಂದ್ರ, ಕೂಡಿಗೆ

೮. ಪ್ರಾದೇಶಿಕ ಕೋಳಿ ಸಾಕಾಣಿಕೆ ಕೇಂದ್ರ, ಬೀದರ

೯. ಪ್ರಾದೇಶಿಕ ಕೋಳಿ ಸಾಕಾಣಿಕೆ ಕೇಂದ್ರ, ವಿಜಯಪುರ

೧೦.ಪ್ರಾದೇಶಿಕ ಕೋಳಿ ಸಾಕಾಣಿಕೆ ಕೇಂದ್ರ, ಗುಂಡ್ಲುಪೇಟೆ

೧೧.ಪ್ರಾದೇಶಿಕ ಕೋಳಿ ಸಾಕಾಣಿಕೆ ಕೇಂದ್ರ, ಮಂಗಳೂರು

೧೨.ಪ್ರಾದೇಶಿಕ ಕೋಳಿ ಸಾಕಾಣಿಕೆ ಕೇಂದ್ರ, ಕೋಲಾರ

ಕುರಿ ಸಂವರ್ಧನಾ ಕೇಂದ್ರಗಳು

೧. ಬಂಡೂರು ಕುರಿ ತಳಿ ಸಂವರ್ಧನಾ ಕೇಂದ್ರ, ಧನಗೂರು, ಮಂಡ್ಯ

೨. ಕುರಿ ಸಂವರ್ಧನಾ ಮತ್ತು ತರಬೇತಿ ಕೇಂದ್ರ, ಚೆಳ್ಳಕೆರೆ, ಚಿತ್ರದುರ್ಗ

೩. ಕುರಿ ಸಂವರ್ಧನಾ ಮತ್ತು ತರಬೇತಿ ಕೇಂದ್ರ, ದೊಡ್ಡ ಉಳ್ಳವರ್ತಿ, ಚಿತ್ರದುರ್ಗ

 ೪. ಕುರಿ ಸಂವರ್ಧನಾ ಮತ್ತು ತರಬೇತಿ ಕೇಂದ್ರ, ಅನಗವಾಡಿ, ಬಾಗಲಕೋಟೆ

೫. ಕುರಿ ಸಂವರ್ಧನಾ ಮತ್ತು ತರಬೇತಿ ಕೇಂದ್ರ, ನುತ್ತಟ್ಟ, ಬೆಳಗಾವಿ

೬. ಕುರಿ ಸಂವರ್ಧನಾ ಮತ್ತು ತರಬೇತಿ ಕೇಂದ್ರ, ಗುತ್ತಲ, ಹಾವೇರಿ

ಮೊಲ ಸಾಕಾಣಿಕೆ ಕ್ಷೇತ್ರಗಳು

೧. ಹೆಸರಘಟ್ಟ, ಬೆಂಗಳೂರು

೨. ಅಜ್ಜಂಪುರ, ಚಿಕ್ಕಮಗಳೂರು

೩. ಬಂಕಾಪುರ, ಹಾವೇರಿ

೪. ಸಿರಸಿ, ಉತ್ತರ ಕನ್ನಡ

೫. ಬಂಗಾರಪೇಟೆ, ಕೋಲಾರ

೬. ಕೂಡಿಗೆ, ಕೊಡಗು

೭. ಹಬ್ಬನ ಘಟ್ಟ (ಬೋರನ ಕೊಪ್ಪಲು), ಹಾಸನ

ಹಂದಿ ಸಂವರ್ಧನಾ ಕೇಂದ್ರಗಳು

೧. ವರಾಹ ತಳಿ ಸಂವರ್ಧನಾ ಕೇಂದ್ರ, ಹೆಸರಘಟ್ಟ

೨. ವರಾಹ ತಳಿ ಸಂವರ್ಧನಾ ಕೇಂದ್ರ, ಕೂಡಿಗೆ

೩. ವರಾಹ ತಳಿ ಸಂವರ್ಧನಾ ಕೇಂದ್ರ, ಕೊಯ್ಲಾ

೪. ವರಾಹ ತಳಿ ಸಂವರ್ಧನಾ ಕೇಂದ್ರ, ಬಂಗಾರಪೇಟೆ

೫. ವರಾಹ ತಳಿ ಸಂವರ್ಧನಾ ಕೇಂದ್ರ, ಕಳಸಾ

ಘನೀಕೃತ ವೀರ್ಯ ಕೇಂದ್ರಗಳು

ದೇಶಿಯ ತಳಿ ಹಸು ಮತ್ತು ಎಮ್ಮೆಗಳ ಉತ್ಪಾದನಾ ಶಕ್ತಿಯನ್ನು ಹೆಚ್ಚಿಸಲು ಉತ್ತಮ ವಂಶಾವಳಿಯ ವಿದೇಶಿ ತಳಿ ಹೋರಿ ಮತ್ತು ಉನ್ನತ ತಳಿ ಕೋಣಗಳ ಸಾಕಾಣಿಕೆ ಮಾಡಿ, ಅವುಗಳಿಂದ ಘನೀಕೃತ ವೀರ್ಯವನ್ನು ಉತ್ಪಾದಿಸಿ, ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿರುವ ಇಲಾಖೆಯ ಪಶುವೈದ್ಯ ಸಂಸ್ಥೆಗಳಿಗೆ ಸರಬರಾಜು ಮಾಡಲು ಇಲಾಖೆಯು ಮೂರು ಘನಿಕೃತ ವೀರ್ಯ ಉತ್ಪಾದನಾ ಕೇಂದ್ರಗಳನ್ನು ಸ್ಥಾಪಿಸಿದೆ. ಜನಕ ಮೌಲ್ಯ ನಿರ್ಣಯ ಕೋಶದ ಪ್ರಮುಖ ಕಾರ್ಯಕ್ರಮಗಳು ಈ ಕೆಳಕಂಡಂತಿವೆ:

ಹೋರಿ / ಕೋಣಗಳ ಗುಣಮಟ್ಟವನ್ನು ಮೌಲ್ಯಮಾಪನ ಮಾಡುವುದು,ವೀರ್ಯ ನಳಿಕೆಗಳನ್ನು ತಾಂತ್ರಿಕ ರೀತಿಯಲ್ಲಿ ಶೇಖರಣೆ ಮಾಡುವುದು, ಸ್ಥಳೀಯ ತಳಿಗಳನ್ನು ಸಂರಕ್ಷಿಸುವುದು ಮತ್ತು ವೃದ್ಧಿಸುವುದು, ವೀರ್ಯ ನಳಿಕೆಗಳನ್ನು ಜಿಲ್ಲಾ ಕೇಂದ್ರಗಳಿಗೆ ವಿತರಿಸುವುದು ಮತ್ತು ಸರಬರಾಜು ಮಾಡುವಾಗ ಗುಣಮಟ್ಟ ಹಾಳಾಗದಂತೆ ನಿಗಾವಹಿಸುವುದು. ರಾಸುಗಳಲ್ಲಿ ವಿದೇಶಿ ತಳಿಗಳ ಅನುವಂಶೀಯ ಗುಣಮಟ್ಟ ಶೇಕದ ೫೦ ಕ್ಕಿಂತ ಹೆಚ್ಚಾಗದಂತೆ ಕಣ್ಗಾವಲಿರುಸುವುದು. ಒಳತಳಿ ಸಂವರ್ಧನೆ ತಡೆಗಟ್ಟುವುದು.

ಜಾನುವಾರು ಕ್ಷೇತ್ರಗಳು: ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಜಾನುವಾರು ಸಂವರ್ಧನಾ ಕ್ಷೇತ್ರಗಳಲ್ಲಿ ಸ್ಥಳೀಯ ರಾಸುಗಳ ಸಂರಕ್ಷಣೆ ಮತ್ತು ಸಾಕಾಣಿಕೆ ಹಾಗೂ ವಿದೇಶಿ ರಾಸುಗಳ ವೈಜ್ಞಾನಿಕ ನಿರ್ವಹಣೆಯ ಕಾರ್ಯಕ್ರಮ ಹಮ್ಮಿಕೊಂಡಿದ್ದು, ರೈತರಿಗೆ ತರಬೇತಿಯನ್ನೂ ಸಹ ಏರ್ಪಡಿಸಲಾಗುತ್ತಿದೆ. ಪ್ರಸ್ತುತ, ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಾನುವಾರು ಸಂವರ್ಧನಾ ಕ್ಷೇತ್ರಗಳು ಈ ಕೆಳಕಂಡಂತಿವೆ:

೧. ರಾಜ್ಯ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ, ಹೆಸರಘಟ್ಟ, ಬೆಂಗಳೂರು ೨. ಜಾನುವಾರು ಸಂವರ್ಧನಾ ಕ್ಷೇತ್ರ, ಹೆಸರಘಟ್ಟ, ಬೆಂಗಳೂರು

೩. ರಾಜ್ಯ ವೀರ್ಯ ಸಂಕಲನಾ ಕೇಂದ್ರ, ಹೆಸರಘಟ್ಟ, ಬೆಂಗಳೂರು

೪. ಹಳ್ಳಿಕಾರ್ ತಳಿ ಸಂವರ್ಧನಾ ಕೇಂದ್ರ, ಕುಣಿಕೇನಹಳ್ಳಿ, ತುರುವೇಕೆರೆ ತಾ., ತುಮಕೂರು

೫. ಖಿಲ್ಲಾರ್ ತಳಿ ಸಂವರ್ಧನಾ ಕ್ಷೇತ್ರ, ಶಿಗ್ಗಾವಿ ತಾ., ಹಾವೇರಿ

೬. ಜರ್ಸಿ ತಳಿ ಸಂವರ್ಧನಾ ಕ್ಷೇತ್ರ, ಕೂಡಿಗೆ ತಾ., ಕೊಡಗು

೭. ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ, ಕೊಯ್ಲಾ ತಾ., ದಕ್ಷಿಣ ಕನ್ನಡ

೮. ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ, ಮುನಿರಾಬಾದ್, ಕೊಪ್ಪಳ

೯. ಅಮೃತ್ ಮಹಲ್ ತಳಿ ಸಂವರ್ಧನಾ ಕೇಂದ್ರ, ಅಜ್ಜಂಪುರ, ಚಿಕ್ಕಮಗಳೂರು

೧೦. ಎಮ್ಮೆ ತಳಿ ಸಂವರ್ಧನಾ ಕೇಂದ್ರ, ತೇಗೂರು, ಧಾರವಾಡ

೧೧. ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ ಹಾಗೂ ಕೇಂದ್ರೀಯ ವೀರ್ಯ ಸಂಕಲನಾ ಕೇಂದ್ರ, ಧಾರವಾಡ

೧೨. ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ, ಕುರಿಕುಪ್ಪೆ, ಸಂಡೂರು ತಾ., ಬಳ್ಳಾರಿ

೧೩. ಕಡಸು ಉತ್ಪಾದನಾ ಕೇಂದ್ರ, ಬರ್ಗಿ, ಗುಂಡ್ಲುಪೇಟೆ ತಾ., ಚಾಮರಾಜನಗರ

ರಾಜ್ಯ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ, ಹೆಸರಘಟ್ಟ, ಬೆಂಗಳೂರು:

ಚಟುವಟಿಕೆಗಳು; ೧) ಜರ್ಸಿ ಶುದ್ಧ ತಳಿ ಹಸುಗಳ ಸಾಕಾಣಿಕೆ, ೨) ವೀರ್ಯ ಸಂಗ್ರಹಣೆಗೆ ಯೋಗ್ಯವಾದ ಜರ್ಸಿ ಹೋರಿ ಕರುಗಳ ಉತ್ಪಾದನೆ, ೩) ಭ್ರೂಣ ವರ್ಗಾವಣೆ ಕಾರ್ಯಕ್ರಮ ಅನುಷ್ಠಾನ, ೪) ರೈತರಿಗೆ ಹೈನುಗಾರಿಕೆ ಮತ್ತು ಮೇವು ಅಭಿವೃದ್ಧಿ ತರಬೇತಿ, ೫) ಪಶುವೈದ್ಯಕೀಯ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಕ್ರಮ, ೬) ಹಸಿರು ಮತ್ತು ಒಣಮೇವು ಉತ್ಪಾದನೆ, ಮತ್ತು ೭) ಘನೀಕೃತ ವೀರ್ಯ ಉತ್ಪಾದನೆ.

ಜಾನುವಾರು ಸಂವರ್ಧನಾ ಕ್ಷೇತ್ರ, ಹೆಸರಘಟ್ಟ, ಬೆಂಗಳೂರು:

ಚಟುವಟಿಕೆಗಳು: ೧) ಶುದ್ಧ ವಿದೇಶಿ ತಳಿ ಮೊಲಗಳ ಸಾಕಾಣಿಕೆ, ೨) ರೈತರಿಗೆ ಮೊಲ ಸಾಕಾಣಿಕೆ ತರಬೇತಿ ಕಾರ್ಯಕ್ರಮ, ೩) ವೀರ್ಯ ಸಂಗ್ರಹಣೆಗೆ ಯೋಗ್ಯವಾದ ಹಳ್ಳಿಕಾರ್ ಮತ್ತು ಅಮೃತ್ ಮಹಲ್ ಹೋರಿ ಕರುಗಳ ಸಾಕಾಣಿಕೆ, ೪) ಹೆಚ್ ಎಫ್ ಹಾಗೂ ಮಿಶ್ರತಳಿ ರಾಸುಗಳ ಸಾಕಾಣಿಕೆ, ಮತ್ತು ೫) ಕ್ಷೇತ್ರಕ್ಕೆ ಹಾಗೂ ರಾಜ್ಯ ವೀರ್ಯ ಸಂಕಲನಾ ಕೇಂದ್ರಕ್ಕೆ ಬೇಕಾದ ಹಸಿ ಮತ್ತು ಒಣ ಮೇವು ಉತ್ಪಾದನೆ.

ರಾಜ್ಯ ವೀರ್ಯ ಸಂಕಲನಾ ಕೇಂದ್ರ, ಹೆಸರಘಟ್ಟ, ಬೆಂಗಳೂರು:

ಚಟುವಟಿಕೆಗಳು: ಅಮೃತ್ ಮಹಲ್, ಹಳ್ಳಿಕಾರ್, ಜರ್ಸಿ ಮತ್ತು ಹೆಚ್ ಎಫ್ ತಳಿಯ ಹೋರಿಗಳ ವೈಜ್ಞಾನಿಕ ನಿರ್ವಹಣೆ ಮತ್ತು ಅವುಗಳಿಂದ ಘನೀಕೃತ ವೀರ್ಯ ಉತ್ಪಾದನೆ.

ಹಳ್ಳಿಕಾರ್ ತಳಿ ಸಂವರ್ಧನಾ ಕೇಂದ್ರ, ಕುಣಿಕೇನಹಳ್ಳಿ, ತುರುವೇಕೆರೆ ತಾ., ತುಮಕೂರು:

ಚಟುವಟಿಕೆಗಳು: ೧) ಹಳ್ಳಿಕಾರ್ ಶುದ್ಧ ತಳಿಯ ಸಂರಕ್ಷಣೆ, ಹಳ್ಳಿಕಾರ್ ತಳಿ ರಾಸುಗಳ ಸಾಕಾಣಿಕೆ, ೨) ಸಂತಾನ ಉತ್ಪತ್ತಿಗೆ ಯೋಗ್ಯವಾದ ಹಳ್ಳಿಕಾರ್ ಹೋರಿ ಕರುಗಳ ಉತ್ಪಾದನೆ, ೩) ರೈತರಿಗೆ ತರಬೇತಿ ಕಾರ್ಯಕ್ರಮ, ೪) ಕ್ಷೇತ್ರದ ಅವಶ್ಯಕತೆಗೆ ಹಸಿ ಮತ್ತು ಒಣ ಮೇವು ಉತ್ಪಾದನೆ, ಮತ್ತು ೫) ಮೇವಿನ ಬೀಜ ಉತ್ಪಾದನೆ.

ಖಿಲ್ಲಾರ್ ತಳಿ ಸಂವರ್ಧನಾ ಕ್ಷೇತ್ರ, ಶಿಗ್ಗಾವಿ ತಾಲೂಕು, ಹಾವೇರಿಜಿಲ್ಲೆ

ಚಟುವಟಿಕೆಗಳು: ೧) ಖಿಲ್ಲಾರ್ ಶುದ್ಧ ತಳಿಯ ಸಂರಕ್ಷಣೆ, ೨) ಖಿಲ್ಲಾರ್ ತಳಿಯ ರಾಸುಗಳ ಸಾಕಾಣಿಕೆ, ೩) ರೈತರಿಗೆ ತರಬೇತಿ ಕಾರ್ಯಕ್ರಮ, ೪) ಕ್ಷೇತ್ರದ ಅವಶ್ಯಕತೆಗೆ ಹಸಿ ಮತ್ತು ಒಣ ಮೇವು ಉತ್ಪಾದನೆ, ಮತ್ತು ೫) ಮೇವಿನ ಬೀಜ ಉತ್ಪಾದನೆ.

ಜರ್ಸಿ ತಳಿ ಸಂವರ್ಧನಾ ಕ್ಷೇತ್ರ, ಕೂಡಿಗೆ ತಾಲೂಕು,ಕೊಡಗು:

ಚಟುವಟಿಕೆಗಳು: ೧) ಜರ್ಸಿ ಶುದ್ಧ ತಳಿ ಹೆಣ್ಣು ರಾಸುಗಳ ಸಾಕಾಣಿಕೆ, ೨) ಸಂತಾನೋತ್ಪತ್ತಿಗೆ ಯೋಗ್ಯವಾದ ಜರ್ಸಿ ಹೋರಿ ಕರುಗಳ ಉತ್ಪಾದನೆ ಮತ್ತು ಸಾಕಾಣಿಕೆ, ೩) ಹೋರಿ ಹಾಗೂ ಕೋಣ ಕರುಗಳ ಕ್ವಾರಂಟೈನ್ ಮಾಡಿ ವೈಜ್ಞಾನಿಕವಾಗಿ ಸಾಕಾಣಿಕೆ ಮಾಡುವುದು, ೪) ರೈತರಿಗೆ ತರಬೇತಿ ಕಾರ್ಯಕ್ರಮ, ೫) ಕ್ಷೇತ್ರದ ಅವಶ್ಯಕತೆಗೆ ಹಸಿ ಮತ್ತು ಒಣ ಮೇವು ಉತ್ಪಾದನೆ, ಮತ್ತು ೬) ಮೇವಿನ ಬೀಜ ವಿತರಣೆ.

ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ, ಕೊಯ್ಲಾ,ದಕ್ಷಿಣ ಕನ್ನಡ:

ಚಟುವಟಿಕೆಗಳು: ೧) ಜರ್ಸಿ ಮಿಶ್ರತಳಿ ಹೆಣ್ಣು ರಾಸುಗಳ ಸಾಕಾಣಿಕೆ, ೨) ಸೂರ್ತಿ, ಮುರ್ರ ಎಮ್ಮೆಗಳ ಸಾಕಾಣಿಕೆ ಮತ್ತು ವೀರ್ಯ ಸಂಗ್ರಹಣೆಗೆ ಅವಶ್ಯವಾದ ಕೋಣ ಕರುಗಳ ಉತ್ಪಾದನೆ, ೩) ಗಿರಿರಾಜ ಕೋಳಿ ಸಾಕಾಣಿಕೆ, ೪) ರೈತರಿಗೆ ತರಬೇತಿ ಕಾರ್ಯಕ್ರಮ, ಮತ್ತು ೫) ಕ್ಷೇತ್ರದ ಅವಶ್ಯಕತೆಗೆ ಹಸಿ ಮತ್ತು ಒಣ ಮೇವು ಉತ್ಪಾದನೆ, ಮೇವಿನ ಬೀಜ ವಿತರಣೆ.

ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ, ಮುನಿರಾಬಾದ್, ಕೊಪ್ಪಳ

ಚಟುವಟಿಕೆಗಳು: ಕೃಷ್ಣವ್ಯಾಲಿ ತಳಿ ಸಂರಕ್ಷಣೆವೀರ್ಯ ಸಂಗ್ರಹಣೆಗೆ ಬೇಕಾದ ಹೋರಿ/ಕೋಣ ಕರುಗಳ ಉತ್ಪಾದನೆ ಮತ್ತು ಕ್ವಾರಂಟೈನ್, ರೈತರಿಗೆ ತರಬೇತಿ ಕಾರ್ಯಕ್ರಮ, ಕ್ಷೇತ್ರದ ಅವಶ್ಯಕತೆಗೆ ಹಸಿ ಮತ್ತು ಒಣ ಮೇವು ಉತ್ಪಾದನೆ, ಮೇವಿನ ಬೇರು ವಿತರಣೆ.

ಅಮೃತ್ ಮಹಲ್ ತಳಿ ಸಂವರ್ಧನಾ ಕೇಂದ್ರ, ಅಜ್ಜಂಪುರ, ಚಿಕ್ಕಮಗಳೂರು

ಚಟುವಟಿಕೆಗಳು: ಅಮೃತ್ ಮಹಲ್ ತಳಿ ರಾಸುಗಳ ಸಂರಕ್ಷಣೆ ವೀರ್ಯ ಸಂಗ್ರಹಣೆಗೆ ಬೇಕಾದ ಅಮೃತ್ ಮಹಲ್ ಹೋರಿ ಕರುಗಳ ವೈಜ್ಞಾನಿಕ ಸಾಕಾಣಿಕೆ, ಸಂತಾನ ಯೋಗ್ಯವಾದ ಅಮೃತ್ ಮಹಲ್ , ಹೋರಿ ಕರುಗಳನ್ನು ಉತ್ಪಾದಿಸುವುದು, ರೈತರಿಗೆ ತರಬೇತಿ ಕಾರ್ಯಕ್ರಮ, ಕ್ಷೇತ್ರದ ಅವಶ್ಯಕತೆಗೆ ಹಸಿ ಮತ್ತು ಒಣ ಮೇವು ಉತ್ಪಾದನೆ, ಮೇವು ಅಭಿವೃದ್ಧಿ ಕಾರ್ಯಕ್ರಮ

ಎಮ್ಮೆ ತಳಿ ಸಂವರ್ಧನಾ ಕೇಂದ್ರ, ತೇಗೂರು, ಧಾರವಾಡ:

ಚಟುವಟಿಕೆಗಳು: ಶುದ್ಧ ಸೂರ್ತಿ ಮತ್ತು ಮುರ್ರ ಎಮ್ಮೆಗಳ ವೈಜ್ಞಾನಿಕ ಸಾಕಾಣಿಕೆ ಘನೀಕೃತ ವೀರ್ಯ ಉತ್ಪಾದನೆಗೆ ಬೇಕಾದ ಶುದ್ಧ ತಳಿಯ ಸೂರ್ತಿ ಮತ್ತು ಮುರ್ರ ಕೋಣಗಳ ಉತ್ಪಾದನೆ, ಕ್ಷೇತ್ರದ ಅವಶ್ಯಕತೆಗೆ ಹಸಿ ಮತ್ತು ಒಣ ಮೇವು ಉತ್ಪಾದನೆ, ಮೇವಿನ ಬೇರು ವಿತರಣೆ.

ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ ಹಾಗೂ ಕೇಂದ್ರೀಯ ವೀರ್ಯ ಸಂಕಲನಾ ಕೇಂದ್ರ, ಧಾರವಾಡ:

ಚಟುವಟಿಕೆಗಳು: ಕೃಷ್ಣವ್ಯಾಲಿ ತಳಿ ಸಂರಕ್ಷಣೆ, ವೀರ್ಯ ಸಂಗ್ರಹಣೆಗೆ ಬೇಕಾದ ಹೋರಿ/ಕೋಣಗಳ ವೈಜ್ಞಾನಿಕ ಸಾಕಾಣಿಕೆ ಮತ್ತು ಕ್ವಾರಂಟೈನ್, ರೈತರಿಗೆ ತರಬೇತಿ ಕಾರ್ಯಕ್ರಮ, ಕ್ಷೇತ್ರದ ಅವಶ್ಯಕತೆಗೆ ಹಸಿ ಮತ್ತು ಒಣ ಮೇವು ಉತ್ಪಾದನೆ, ಮೇವಿನ ಬೇರು ವಿತರಣೆ.

ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ, ಕುರಿಕುಪ್ಪೆ, ಸಂಡೂರು ತಾ., ಬಳ್ಳಾರಿ: ಚಟುವಟಿಕೆಗಳು: ಕುರಿ ಮತ್ತು ಆಡುಗಳ ವೈಜ್ಞಾನಿಕ ಸಾಕಾಣಿಕೆ, ರಾಂಬುಲೆ ಮತ್ತು ಜಮ್ನಾಪಾರಿ ಟಗರುಗಳ ಸಾಕಾಣಿಕೆ, ಮಿಶ್ರ ತಳಿ ಟಗರು/ಹೋತಗಳನ್ನು ಸರ್ಕಾರ ನಿಗಧಿಪಡಿಸಿದ ದರದಲ್ಲಿ ಮಾರಾಟ ಮಾಡುವುದು, ರೈತರಿಗೆ ತರಬೇತಿ ಕಾರ್ಯಕ್ರಮ, ಕ್ಷೇತ್ರದ ಅವಶ್ಯಕತೆಗೆ ಹಸಿ ಮತ್ತು ಒಣ ಮೇವು ಉತ್ಪಾದನೆ, ಮೇವಿನ ಬೇರು ವಿತರಣೆ.

ಕಡಸು ಉತ್ಪಾದನಾ ಕೇಂದ್ರ, ಬರ್ಗಿ, ಗುಂಡ್ಲುಪೇಟೆ ತಾ.,ಚಾಮರಾಜನಗರ:

ಚಟುವಟಿಕೆಗಳು: ರೈತರಿಗೆ ತರಬೇತಿ ಕಾರ್ಯಕ್ರಮ ತರಬೇತಿ ಕೇಂದ್ರಗಳು: ತರಬೇತಿ ಕೇಂದ್ರಗಳಲ್ಲಿ ಆಸಕ್ತ ಗ್ರಾಮೀಣ ರೈತರಿಗೆ ಕೋಳಿ ಸಾಕಾಣಿಕೆ, ಮೊಲ ಸಾಕಾಣಿಕೆ, ಹಂದಿ ಸಾಕಾಣಿಕೆ ಮತ್ತು ಹೈನುಗಾರಿಕೆ ಕ್ಷೇತ್ರಗಳಲ್ಲಿ ನಿರಂತರವಾಗಿ ತರಬೇತಿ ನೀಡಲಾಗುತ್ತದೆ. ಪ್ರಸ್ತುತ ರಾಜ್ಯದಲ್ಲಿ ೨೫ ತರಬೇತಿ ಕೇಂದ್ರಗಳಿರುತ್ತವೆ. ಇಲಾಖೆಯಲ್ಲಿ ತರಬೇತಿ ನೀಡುವ ಕಾರ್ಯಕ್ರಮವು ಒಂದು ಪ್ರಮುಖ ಅಂಶವಾಗಿದೆ. ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ತಾಂತ್ರಿಕ ಸಿಬ್ಬಂದಿಗೆ ತಿಳುವಳಿಕೆ ನೀಡುವ ಸಲುವಾಗಿ ತರಬೇತಿ ನೀಡುವುದೂ ಸಹ ಇಲಾಖೆಯ ನಿರಂತರವಾದ ಪದ್ಧತಿಯಾಗಿದೆ. ಅಧಿಕಾರಿ / ಸಿಬ್ಬಂದಿ ವರ್ಗದವರಿಗೆ ವ್ಯವಸ್ಥಿತವಾಗಿ ಅವರ ಜ್ಞಾನವನ್ನು ಹೆಚ್ಚಿಸುವುದು ಹಾಗೂ ಕೆಲಸವನ್ನು ಸುಸೂತ್ರವಾಗಿ ನಡೆಸುವುದು ತರಬೇತಿ ನೀಡುವ ಉದ್ದೇಶವಾಗಿದೆ.

 

ಪಶುವೈದ್ಯಕೀಯ ಸಂಸ್ಥೆಗಳು

ರಾಜ್ಯದಲ್ಲಿನ ಎಲ್ಲಾ ಪಶುವೈದ್ಯಕೀಯ ಸಂಸ್ಥೆಗಳಲ್ಲಿ ಉತ್ತಮ ರೀತಿಯ ಸೌಲಭ್ಯಗಳನ್ನು  ಒದಗಿಸುವ ಉದ್ದೇಶದಿಂದ ವಿವಿಧ ರೀತಿಯ ಪಶುವೈದ್ಯಕೀಯ ಸಂಸ್ಥೆಗಳನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದೆ: ೧) ಪಶುವೈದ್ಯಕೀಯ ಆಸ್ಪತ್ರೆ, ೨) ಪಶುಚಿಕಿತ್ಸಾಲಯ, ೩) ಸಂಚಾರಿ ಪಶುಚಿಕಿತ್ಸಾಲಯ, ಮತ್ತು ೪) ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರ. ಇಲಾಖೆಯ ಪಶುವೈದ್ಯಕೀಯ ಸಂಸ್ಥೆಗಳು ಉತ್ತಮ ಸೌಲಭ್ಯಗಳನ್ನು ಹೊಂದಿದ್ದು, ನುರಿತ ತಾಂತ್ರಿಕ ಸಿಬ್ಬಂದಿಯನ್ನು ಒಳಗೊಂಡಿದೆ. ರೋಗಪೀಡಿತ ಪ್ರಾಣಿಗಳಿಗೆ ಉತ್ತಮ ಚಿಕಿತ್ಸೆ ನೀಡುವುದಲ್ಲದೆ, ವಿವಿಧ ಕಾಯಿಲೆಗಳಿಗಾಗಿ ಮುಂಜಾಗ್ರತಾ ಕ್ರಮವಾಗಿ ಲಸಿಕೆಗಳನ್ನು ನೀಡಲಾಗುತ್ತಿದೆ. ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಚಾರಿ ಪಶುಚಿಕಿತ್ಸಾಲಯಗಳು ಯಾವುದೇ ಪಶುವೈದ್ಯಕೀಯ ಸಂಸ್ಥೆಗಳ ಸೌಲಭ್ಯ ಹೊಂದಿರದ ಹಳ್ಳಿಗಳಲ್ಲಿ ವಾಸಿಸುತ್ತಿರುವ ರೈತರ ಪಶುಗಳಿಗೆ ಉನ್ನತ ಪಶುವೈದ್ಯಕೀಯ ಸೇವೆಗಳನ್ನು ಒದಗಿಸುತ್ತಿದೆ.

ಪಶುವೈದ್ಯಕೀಯ ಸೇವೆಗಳ ವಿವರ:

ಅ. ಪಶುವೈದ್ಯ ಆಸ್ಪತ್ರೆ ಮತ್ತು ಚಿಕಿತ್ಸಾಲಯಗಳು: ಎಕ್ಸ್-ರೇ ಸೌಲಭ್ಯ (ತಾಲ್ಲೂಕು ಆಸ್ಪತ್ರೆ); ಕೃತಕ ಗರ್ಭಧಾರಣೆ; ರೋಗ ಪತ್ತೆಹಚ್ಚುವಿಕೆ; ಚಿಕಿತ್ಸೆ, ರೊಗನಿರೋಧಕ ಲಸಿಕೆಗಳು; ಪಶುವೈದ್ಯ ಸಂಸ್ಥೆಗಳು ಇಲ್ಲದಿರುವ ಸ್ಥಳಗಳಿಗೆ ಸಂಚಾರಿ ಪಶುವೈದ್ಯ ಸೇವೆಗಳು; ವಿಸ್ತರಣೆ, ಶಿಕ್ಷಣ ಮತ್ತು ತರಬೇತಿ, ಸಾಮಾಜಿಕ- ಆರ್ಥಿಕ ಕಾರ್ಯಕ್ರಮಗಳು;

ಆ. ಪ್ರಾಥಮಿಕ ಪಶುವೈದ್ಯ ಕೇಂದ್ರಗಳು: ಚಿಕಿತ್ಸೆ; ಕೃತಕ ಗರ್ಭಧಾರಣೆ; ರೊಗನಿರೋಧಕ ಲಸಿಕೆಗಳು; ವಿಸ್ತರಣೆ, ಶಿಕ್ಷಣ ಮತ್ತು ತರಬೇತಿಸಂಸ್ಥೆಗಳು ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವಯವಿದ್ಯಾಲ : ಪಶುವೈದ್ಯಕೀಯ ಮತ್ತು ಮಶುಸಂಗೋಪನಾ ಕ್ಷೇತ್ರದಲ್ಲಿ ಸಂಶೋಧನೆಯನ್ನು ಕೈಗೊಳ್ಳುವ ಪದವೀಧರರಿಗೆ ಮೂಲಭೂತ ಪಶುವೈದ್ಯಕೀಯ ಶಿಕ್ಷಣದ ಜೊತೆಗೆ ತಾಂತ್ರಿಕ ಮಾಹಿತಿಯನ್ನು ಒದಗಿಸುತ್ತದೆ.

ಹಾಲು ಉತ್ಪಾದಕರ ಮಹಾಮಂಡಳಿ: ರಾಜ್ಯದಲ್ಲಿನ ಹೈನುಗಾರಿಕೆ ಅಭಿವೃದ್ಧಿ ಕಾರ್ಯಚಟುವಟಿಕೆಗಳಿಗೆ ಹಾಲು ಉತ್ಪನ್ನಗಳ ಸಹಕಾರಿ ಅಗ್ರಸಂಸ್ಥೆಯಾಗಿದ್ದು, ಹಾಲು ಮತ್ತು ಹಾಲು ಉತ್ಪನ್ನಗಳಿಗೆ ನಿಖರವಾದ ಹಾಗೂ ಪ್ರೋತ್ಸಾಹದಾಯಕ ಬೆಲೆಯನ್ನು ಒದಗಿಸುತ್ತಿದೆ.

ಪ್ರಾಣಿ ಜೈವಿಕ ಮತ್ತು ಆರೋಗ್ಯ ಸಂಸ್ಥೆ:

ಜಾನುವಾರುಗಳು ಮತ್ತು ಕೋಳಿಗಳಿಗೆ ಬಾಧಕವಾಗುವ ಬ್ಯಾಕ್ಟೀರಿಯಾ ಮತ್ತು ವೈರಸ್ ಸಂಬಂಧಿ ಕಾಯಿಲೆಗಳ ನಿಯಂತ್ರಣಕ್ಕೆ ಲಸಿಕೆಗಳನ್ನು ಉತ್ಪಾದಿಸುವ ಗುರಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ.

ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ :

ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘವು ಮಿಶ್ರ ತಳಿ ಮತ್ತು ದೇಶೀಯ ತಳಿಗಳನ್ನು ಮೇಲ್ದರ್ಜೆಗೇರಿಸುವ ಮೂಲಕ ರಾಜ್ಯದಲ್ಲಿ ಕುರಿ ಮತ್ತು ಮೇಕೆಗಳ ಅಭಿವೃದ್ಧಿಪಡಿಸುವ ಉದ್ದೇಶವನ್ನು ಹೊಂದಿದೆ.

ಕರ್ನಾಟಕ ಸಹಕಾರಿ ಕುಕ್ಕುಟ ಮಂಡಳಿ:

 ಕೋಳಿ ಸಾಕಾಣಿಕೆ, ಗಿರಿರಾಜ ಕೋಳಿಗಳ ಸಾಕಾಣಿಕೆ ಮತ್ತು ಮಾರಾಟ ಹಾಗೂ ಆಸಕ್ತ ರೈತರಿಗೆ ಹಣಕಾಸು ನೆರವನ್ನು ಒದಗಿಸುವ ಮೂಲಕ ಗ್ರಾಮೀಣ ಯುವಜನರಿಗೆ ಉದ್ಯೋಗಾವಕಾಶವನ್ನು ಕಲ್ಪಿಸುವ ಗುರಿಯನ್ನು ಈ ಸಂಸ್ಥೆಯು ಹೊಂದಿದೆ.

ಮೀನುಗಾರಿಕೆ ಇಲಾಖೆ

ಮೀನುಗಾರಿಕೆಯು ಪೌಷ್ಟಿಕ ಆಹಾರ, ವಿದೇಶಿ ವಿನಿಮಯ ಹಾಗೂ ಉದ್ಯೋಗಾವಕಾಶದ ಸೃಷ್ಠಿಯ ಮೂಲವಾಗಿರುವುದರಿಂದ ರಾಜ್ಯದ ಹಾಗೂ ದೇಶದ ಆರ್ಥಿಕ ಪ್ರಗತಿಯಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದೆ. ಕರ್ನಾಟಕ ರಾಜ್ಯವು ೨.೯೩ ಲಕ್ಷ ಹೆಕ್ಟೇರ್ ವಿಸ್ತೀರ್ಣವುಳ್ಳ, ಕೆರೆ, ಕೊಳಗಳನ್ನು ಮತ್ತು ೨.೭೨ ಲಕ್ಷ ಹೆಕ್ಟೇರ್ ವಿಸ್ತೀರ್ಣವುಳ್ಳ ಜಲಾಶಯಗಳನ್ನೊಳಗೊಂಡ ಒಟ್ಟು ೫.೬೫ ಲಕ್ಷ ಹೆಕ್ಟೇರಿನಷ್ಟು ಒಳನಾಡು ಜಲ ಸಂಪನ್ಮೂಲವನ್ನು ಹೊಂದಿದೆ.

ಇದರ ಜೊತೆಗೆ ೮,೦೦೦ ಹೆಕ್ಟೇರಿನ? ಹಿನ್ನೀರು ಪ್ರದೇಶ, ೩೨೦ ಕಿ.ಮೀ. ಉದ್ದದ ಕರಾವಳಿ ತೀರ ಪ್ರದೇಶ ಹಾಗೂ ೨೭,೦೦೦ ಚ. ಕಿ.ಮೀ. ವಿಸ್ತೀರ್ಣದ ವಿಶಾಲವಾದ ಭೂಖಂಡ ಪ್ರದೇಶವನ್ನು ಹೊಂದಿದ್ದು, ಮೀನುಗಾರಿಕೆಯ ಅಭಿವೃದ್ಧಿಗೆ ವಿಫುಲ ಅವಕಾಶ ಹೊಂದಿರುತ್ತದೆ.

ಕಡಲ ಮೀನುಗಾರಿಕೆಯ ಕಾರ್ಯಾಚರಣೆಯಲ್ಲಿ ೪,೦೨೬ ಯಾಂತ್ರೀಕೃತ ದೋಣಿಗಳು, ೭೪೬೯ ಮೋಟರೀಕೃತ ದೋಣಿಗಳು ಮತ್ತು ೮,೪೪೨ ನಾಡ ದೋಣಿಗಳಿವೆ. ಯಾಂತ್ರೀಕೃತ ಮೀನುಗಾರಿಕೆ ದೋಣಿಗಳು ರಾಜ್ಯದ ಒಟ್ಟು ಕಡಲ ಮೀನು ಉತ್ಪಾದನೆಯಲ್ಲಿ ಶೇಕಡಾ ೮೫ಕ್ಕಿಂತಲೂ ಹೆಚ್ಚಿನ ಪ್ರಮಾಣದ ಮೀನನ್ನು ಹಿಡಿಯುತ್ತಿವೆ.  ಮೀನುಗಾರಿಕೆ ಇಲಾಖೆಯು ಮೀನುಗಾರಿಕೆ ಸಚಿವರ ಅಧಿಕಾರ ವ್ಯಾಪ್ತಿಯಲ್ಲಿರುತ್ತದೆ. ಸರ್ಕಾರದ ಹಂತದಲ್ಲಿ ಕಾರ್ಯದರ್ಶಿಗಳು, ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಯವರು ಮುಖ್ಯಸ್ಥರಾಗಿರುತ್ತಾರೆ. ಮೀನುಗಾರಿಕೆ ಇಲಾಖೆಯ ಆಡಳಿತ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳು ಮೀನುಗಾರಿಕೆ ನಿರ್ದೇಶಕರ ನೇತೃತ್ವದಲ್ಲಿ ನಡೆಯುತ್ತಿವೆ. ನಿರ್ದೇಶಕರ ಸಹಾಯಕ್ಕಾಗಿ ನಿರ್ದೇಶನಾಲಯದಲ್ಲಿ ಇಬ್ಬರು ಜಂಟಿ ನಿರ್ದೇಶಕರು ಇಬ್ಬರು ಉಪ ನಿರ್ದೇಶಕರು, ಒಬ್ಬರು ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು(ಆಡಳಿತ) ಹಾಗೂ ೧೦ ಸಹಾಯಕ ನಿರ್ದೇಶಕರುಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಏಳು ಪ್ರಾಂತೀಯ ಉಪ ನಿರ್ದೇಶಕರು, ೩೦ ಜಿಲ್ಲಾ ಮೀನುಗಾರಿಕೆ ಅಧಿಕಾರಿಗಳು ಹಾಗೂ ೧೨೫ ತಾಲೂಕು ಮಟ್ಟದ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ರಾಜ್ಯದಲ್ಲಿ ಕೇಂದ್ರದ ನೆರವಿನೊಂದಿಗೆ ಹಾಗೂ ರಾಜ್ಯ ಯೋಜನೆಗಳಡಿಯಲ್ಲಿ ಪ್ರಮುಖ ಮೀನುಗಾರಿಕೆ ಬಂದರು ಮತ್ತು ಸಣ್ಣ ಪ್ರಮಾಣದ ಇಳಿದಾಣ ಕೇಂದ್ರಗಳನ್ನು ನಿರ್ಮಿಸಿದ್ದು, ನಿರ್ಮಾಣದ ನಂತರ ಕಾಲ ಕಾಲಕ್ಕೆ ಹೂಳೆತ್ತದೇ ಇರುವುದರಿಂದ ಹಾಗೂ ನೈಸರ್ಗಿಕ ಕಾರಣಗಳಿಂದಾಗಿ ಕೆಲವು ಬಂದರು/ಇಳಿದಾಣ ಕೇಂದ್ರಗಳಲ್ಲಿ ಹೂಳಿನ ಸಮಸ್ಯೆ ತೀವ್ರವಾಗಿದೆ. ಹೂಳಿನ ಸಮಸ್ಯೆಯನ್ನು ಬಗೆಹರಿಸಲು ಹೂಳೆತ್ತುವ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ನಮ್ಮದು ಕೃಷಿ ಪ್ರಧಾನವಾದ ರಾಜ್ಯ. ಆದರೂ, ಆರ್ಥಿಕ ಸ್ವಾವಲಂಬನೆ ತಂದುಕೊಡುವ ಮೀನುಗಾರಿಕೆಗೆ ರಾಜ್ಯದಲ್ಲಿ ವಿಪಲು ಅವಕಾಶಗಳಿವೆ. ಇದನ್ನು ಅರಿತಿರುವ ಸರ್ಕಾರ ಆಳಸಮುದ್ರ ಮೀನುಗಾರಿಕೆಯ ಜೊತೆಗೆ, ಕೃಷಿಹೊಂಡ, ಗ್ರಾಮದ ಕೆರೆ -ಕುಂಟೆ, ಉಪ ಜಲಾನಯನ ಪ್ರದೇಶ, ಹೊಂಡ ಸೇರಿದಂತೆ ಅನೇಕ ಕಡೆಗಳಲ್ಲಿ ಮೀನುಗಾರಿಕೆಯನ್ನು ಪ್ರೋತ್ಸಾಹಿಸುತ್ತಿದೆ. ಅದರಲ್ಲೂ ರಾಜ್ಯದಲ್ಲಿರುವ ೩೦ ಸಾವಿರ ಕೆರೆಗಳನ್ನು ಬಳಸಿಕೊಂಡಿಲ್ಲಿ ’ನೀಲಿ ಕ್ರಾಂತಿ’ ಯನ್ನೇ ರಾಜ್ಯದಲ್ಲಿ ಮಾಡಬಹುದು.

ಸರ್ಕಾರದ ಯೋಜನೆಗಳ ವಿವರ, ಸಮುದ್ರದಲ್ಲಿ ಮೀನು ಲಭ್ಯವಾಗುವ ವಲಯ, ಹವಾಮಾನ ವರದಿ, ಇತ್ಯಾದಿಗಳ ಬಗ್ಗೆ ಉಚಿತ ಧ್ವನಿ ಸಂದೇಶಗಳನ್ನು ಕನ್ನಡದಲ್ಲಿ ೧.೫ ಲಕ್ಷ ಮೀನುಗಾರರಿಗೆ ನೀಡುತ್ತಿದೆ. ವಿದೇಶಿ ವಿನಿಮಯದ ಮೂಲಕ ರಾಜ್ಯ ಆರ್ಥಿಕತೆಗೆ ಪ್ರಮುಖ ಕೊಡುಗೆ ನೀಡುವ ಮೀನುಗಾರಿಕೆಯನ್ನು ಪ್ರೋತ್ಸಾಹಿಸಲು ಸರ್ಕಾರವು ಅನೇಕ ಕ್ರಮಗಳನ್ನು ಕೈಗೊಂಡಿದೆ. ಯಾಂತ್ರೀಕೃತ ಮೀನುಗಾರಿಕೆಯನ್ನು ಲಾಭದಾಯಕಗೊಳಿಸಲು ರಾಜ್ಯ ಮಾರಾಟ ಕರೆ ರಹಿತ ಡೀಸಲ್‌ಅನ್ನು ಪೂರೈಸುತ್ತದೆ.

ಡೀಸೆಲ್‌ಗೆ ನೀಡುತ್ತಿದ್ದ ಮಾರಾಟ ಕರ ರಿಯಾಯಿತಿಗೆ ಬದಲಾಗಿ ಮಾರಾಟ ಕರವನ್ನು ಮರುಪಾವತಿಯ ರೂಪದಲ್ಲಿ ನೇರವಾಗಿ ದೋಣಿ ಮಾಲೀಕರ ಖಾತೆಗೆ ವರ್ಗಾಯಿಸುವ ವ್ಯವಸ್ಥೆಯ ಮೂಲಕ ಸರ್ಕಾರ ಪಾರದರ್ಶಕತೆಯನ್ನು ತಂದಿದೆ. ಇದಕ್ಕಾಗಿ ಸರ್ಕಾರ ೭೦ ಕೋಟಿ ರೂ.ಗಳನ್ನು ಸಹಾಯಧನವಾಗಿ ನೀಡಿದೆ. ಸರ್ಕಾರವು ದೊಡ್ಡ ಮೀನುಗಾರರಲ್ಲದೆ, ಒಳನಾಡು ಮೀನುಗಾರರಿಗೂ ಅನೇಕ ಯೋಜನೆಗಳನ್ನು ತಂದಿದೆ. ಎರಡು ಕೋಟಿ ರೂ. ವೆಚ್ಚದಲ್ಲಿ ಉಚಿತವಾಗಿ ೨,೦೦೦ ಫೈಬರ್ ಗ್ಲಾಸ್ ಹರಿಗೋಲು ವಿತರಣೆ ಮಾಡಿದೆ. ಮೀನುಗಾರರಿಗೆ ಉಚಿತವಾಗಿ ೧೦ ಸಾವಿರ ಮೌಲ್ಯದ ಮೀನುಗಾರಿಕೆ ಸಲಕರಣೆಗಳ ಕಿಟ್ ಅನ್ನು ೧೦ ಸಾವಿರ ಮಂದಿಗೆ ವಿತರಿಸಿದೆ. ನಾಡ ದೋಣಿಯ ಸೀಮೆಎಣ್ಣೆ ಹಂಚಿಕೆಯನ್ನು ಪ್ರತಿ ತಿಂಗಳು ೧೫೦ ಲೀಟರ್‌ ನಿಂದ ೩೦೦ ಲೀಟರ್‌ಗೆ ಹೆಚ್ಚಿಸಿ ಆದೇಶ ಹೊರಡಿಸಿದೆ. ಎಂಟು ಸಾವಿರ ಮೀನುಗಾರರಿಗೆ ಲೈಫ್ ಜಾಕೆಟ್ ಹಾಗೂ ೪,೬೧೪ ಮೀನುಗಾರ ಮಹಿಳೆಯರಿಗೆ ಐಸ್ ಬಾಕ್ಸ್‌ಗಳನ್ನು ಉಚಿತವಾಗಿ ವಿತರಿಸಿದೆ. ಮತ್ಸ್ಯಾಶ್ರಯ ಯೋಜನೆಯಡಿ ಮನೆಗಳ ನಿರ್ಮಾಣಕ್ಕೆ ನೀಡುವ ಸಹಾಯಧನದ ಮೊತ್ತವನ್ನು ೬೦ ಸಾವಿರ ರೂ. ಗಳಿಂದ ೧.೨೦ ಲಕ್ಷ ರೂ. ಗಳಿಗೆ ಹೆಚ್ಚಿಸಿದೆ. ಮೂರು ವರ್ಷಗಳಲ್ಲಿ ಒಟ್ಟು ೪,೮೬೫ ಮನೆಗಳ ಹಂಚಿಕೆ ಮಾಡಿದೆ. ಮತ್ಸ್ಯ ಮಹಿಳಾ ಸ್ವಾವಲಂಬನಾ ಯೋಜನೆಯಡಿ ಮೀನುಗಾರ ಮಹಿಳೆಯರ ಸ್ವಸಹಾಯ ಗುಂಪಿಗೆ ನೀಡಲಾಗದ ಆವರ್ತ ನಿಧಯ ಮೊತ್ತವನ್ನು ೫೦ ಸಾವಿರ ರೂ. ಗಳಿಂದ ಒಂದು ಲಕ್ಷ ರೂ. ಗಳಿಗೆ ಏರಿಸಿದೆ. ಮೀನುಗಾರಿಕೆ ಚಟುವಟಿಕೆಗಾಗಿ ವಾಣಿಜ್ಯ ಬ್ಯಾಂಕಿನಿಂದ ಮೀನುಗಾರರು ಪಡೆಯುವ ೫೦ ಸಾವಿರ ರೂ. ವರೆಗಿನ ಸಾಲದ ಬಡ್ಡಿದರವನ್ನು ಶೇ.ಮೂರರಿಂದ ಶೇ. ಎರಡಕ್ಕೆ ಇಳಿಕೆ ಮಾಡಿದೆ. ಹಾಗೆಯೇ, ಒಳನಾಡು ಮೀನು ಕೃಷಿಕರಿಗೆ ಸಹಕಾರಿ ಬ್ಯಾಂಕುಗಳ ಮೂಲಕ ಶೂನ್ಯ ಬಡ್ಡಿ ದರದಲ್ಲಿ ಒಂದು ಲಕ್ಷ ಮೀನುಗಾರರು ಮೀನುಗಾರರು ಮೀನುಗಾರಿಕೆ ಚಟುವಟಿಕೆ ಕೈಗೊಳ್ಳಲು ವಾಣಿಜ್ಯ ಬ್ಯಾಂಕುಗಳಿಂದ ಪಡೆದ ಸಾಲದ ಮೇಲಿನ ಬಡ್ಡಿ ವ್ಯತ್ಯಾಸವನ್ನು ತುಂಬಿಕೊಡುವ ಯೋಜನೆಯಡಿ ೬.೫೫ ಕೋಟಿ ರೂ. ಬಡ್ಡಿ ಮರುಪಾವತಿ ಮಾಡಿದೆ. ಕರ್ನಾಟಕ ಮೀನುಗಾರಿಕೆ ಬಂದರು ಮತ್ತು ಇಳಿದಾಣ ಕೇಂದ್ರಗಳಲ್ಲಿ ಸಿವಿಲ್ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಒಂದು ಯೋಜನಾ ಅನುಷ್ಠಾನ ಘಟಕದ ಸ್ಥಾಪನೆಗೆ ತಾತ್ಕಾಲಿಕ ಮಂಜೂರಾತಿ ನೀಡಿದೆ. ಮಂಗಳೂರಿನ ಕುಲಾಯಿ ಹಾಗೂ ಉಡುಪಿಯ ಹೆಜಮಾಡಿ ಕೋಡಿಯಲ್ಲಿ ಎರಡು ನೂತನ ಮೀನುಗಾರಿಕಾ ಬಂದರು ಸ್ಥಾಪನೆ ಬಗ್ಗೆ ವಿವರವಾದ ಯೋಜನಾ ವರದಿ ಸಿದ್ದಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ. ಸಮುದ್ರ ಕೊರೆತ ತಡೆಗೆ ಹಾಗೂ ದೋಣಿಗಳಿಗೆ ಸುರಕ್ಷಿತ ಇಳಿದಾಣ ಒದಗಿಸಲು ಏಳು ಅಳಿವೆಗಳಲ್ಲಿ ತಡೆಗೋಡೆಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಉಡುಪಿ ಜಿಲ್ಲೆ ಕುಂದಾಪುರ ತಾಲ್ಲೂಕು ಉಪ್ಪುಂದ ಗ್ರಾಮದ ಮಡಿಕಳ ಬಳಿ ಬ್ರೇಕ್ ವಾಟರ್ ನಿರ್ಮಿಸಿ ಹೊರ ಬಂದರು ನಿರ್ಮಾಣದ ಕಾಮಗಾರಿಗೆ ಸಂಬಂಧಿಸಿದಂತೆ ಪೂರ್ವಭಾವಿ ಅಧ್ಯುನ ಕೈಗೊಳ್ಳಲಾಗುತ್ತಿದೆ.

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಆರು ಕೋಟಿ ರೂ. ವೆಚ್ಚದಲ್ಲಿ ಬೇಲಿಕೇರಿ ಹಾಗೂ ಒಂದು ಕೋಟಿ ರೂ. ವೆಚ್ಚದಲ್ಲಿ ವನ್ನಳ್ಳಿ ಯಲ್ಲಿ ತಡೆಗೋಡೆಯನ್ನು ನಿರ್ಮಿಸಲಾಗುತ್ತಿದೆ. ರಾಜ್ಯ ಸರ್ಕಾರದ ಯೋಜನೆಯಡಿ ಕೋಡೇರಿ ಮತ್ತು ಗಂಗೊಳ್ಳಿ ಯಲ್ಲಿ ೩೩ ಕೋಟಿ ರೂ. ವೆಚ್ಚದಲ್ಲಿ ತಡೆಗೋಡೆ ನಿರ್ಮಾಣವನ್ನು ಕೈಗೊಂಡಿದೆ. ಉತ್ತರ ಕನ್ನಡ ಜಿಲ್ಲೆ ಭಟ್ಕಳ ತಾಲ್ಲೂಕಿನ ತೆಂಗಿನಗುಂಡಿ ಮೀನುಗಾರಿಕೆ ಇಳಿದಾಣ ಕೇಂದ್ರದಲ್ಲಿ ಜೆಟ್ಟಿ  ವಿಸ್ತರಣೆ ಕಾಮಗಾರಿಯನ್ನು ೧೦ ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಮಂಜೂರಾತಿ ನೀಡಿದೆ. ಮಲ್ಪೆ ಮೀನುಗಾರಿಕೆ ಬಂದರು, ಬೇಲೀಕೇರಿ ಮತ್ತು ಕೋಡಿಕನ್ಯಾನ ಮೀನುಗಾರಿಕೆ ಇಳಿದಾಣ ಕೇಂದ್ರಗಳಲ್ಲಿ ಹೂಳೆತ್ತುವ ಕಾಮಗಾರಿಯನ್ನು ಕೇಂದ್ರ ಪುರಸ್ಕೃತ ಯೋಜನೆಯಲ್ಲಿ ಕೈಗೊಳ್ಳಲು ಮಂಜೂರಾತಿ ನೀಡಿದೆ.

ರಾಜ್ಯ ಸರ್ಕಾರದ ಅನುದಾನದಿಂದ ಕೊಡೇರಿ, ಕುಂದಾಪುರ ಕೋಡಿ, ಮರವಂತೆ, ಶಿರೂರು ಅಳ್ವಗದ್ದೆಗಳಲ್ಲಿ ಹಾಗೂ ಕೇಂದ್ರ ನೆರವಿನಲ್ಲಿ ಆಮದಳ್ಳಿ ಮೀನುಗಾರಿಕೆ ಬಂದರು ನಿರ್ಮಾಣ ಮತ್ತು ಜೆಟ್ಟಿಗಳ ನಿರ್ಮಾಣದ ಕಾಮಗಾರಿಗಳಿಗೆ ೨೦೧೪-೧೫ ನೇ ಸಾಲಿನಲ್ಲಿ ೨೧ ಕೋಟಿ ರೂ. ವೆಚ್ಚ ಮಾಡಿದೆ.

ಜಲಾಶಯದಲ್ಲಿ ಮೀನು ಮರಿ ಬಿತ್ತನೆ: ರಾಜ್ಯದಲ್ಲಿ ಒಟ್ಟು ೮೨ ಜಲಾಶಯಗಳಿವೆ. ಈ ಜಲಾಶಯಗಳ ಒಟ್ಟು ಜಲ ವಿಸ್ತೀರ್ಣ ೨.೭೨ ಲಕ್ಷ ಹೆಕ್ಟೇರಗಳಾಗಿರುತ್ತದೆ. ಜಲಾಶಯಗಳನ್ನೆ ತಮ್ಮ ಜೀವನೋಪಾಯಕ್ಕೆ ನಂಬಿರುವ ಸಾವಿರಾರು ಮೀನುಗಾರರ ಕುಟುಂಬಗಳಿವೆ. ಇತ್ತೀಚಿನ ದಿನಗಳಲ್ಲಿ ನದಿಗಳಲ್ಲಿ ಮತ್ತು ಹಲವಾರು ಜಲಾಶಯಗಳಲ್ಲಿ ಮತ್ಸ್ಯ ಸಂಪನ್ಮೂಲಗಳು ಕ್ಷೀಣಿಸಿದ್ದು ಹೆಚ್ಚಿನ ಮೀನು ಶಿಕಾರಿಯಾಗದೆ ಇದನ್ನೇ ಅವಲಂಬಿಸಿರುವ ಮೀನುಗಾರರು ಸಾಕಷ್ಟಿದ್ದಾರೆ. ಜಲಾಶಯಗಳಲ್ಲಿ ಶೀಘ್ರವಾಗಿ ಬೆಳೆಯುವ ಭಾರತದ ದೊಡ್ಡಗೆಂಡೆ ಮೀನುಗಳಾದ ಕಾಟ್ಲಾ, ರೋಹು, ಮೃಗಾಲ ತಳಿಗಳು ದಕ್ಷಿಣ ಭಾರತದ ಜಲಸಂಪನ್ಮೂಲಗಳಲ್ಲಿ ಸ್ವಾಭಾವಿಕವಾಗಿ ಉತ್ಪಾದನೆಯಾಗುವುದಿಲ್ಲವಾದ್ದರಿಂದ ಅವುಗಳನ್ನು ಆಗಿಂದಾಗ್ಗೆ ದಾಸ್ತಾನು ಮಾಡುವ ಮೂಲಕ ಸದರಿ ಸಂಪನ್ಮೂಲಗಳಲ್ಲಿ ಮತ್ಸ್ಯ ಸಂಪನ್ಮೂಲ ವೃದ್ಧಿಗೊಳಿಸುವುದು ಅತ್ಯಗತ್ಯವಾಗಿದೆ.

ಈ ಯೋಜನೆಯಡಿ ರಾಜ್ಯದ ಆಯ್ದ ಜಲಾಶಯಗಳಲ್ಲಿ ಬಲಿತ ಮೀನು ಮರಿಗಳ ಬಿತ್ತನೆ ಮಾಡಿ ಜಲಾಶಯಗಳ ಅಭಿವೃದ್ಧಿ ಕೈಗೊಳ್ಳಲಾಗುತ್ತದೆ. ಒಳನಾಡು ಮೀನುಗಾರರಿಗೆ ಫೈಬರ್ ಗ್ಲಾಸ್ ಹರಿಗೋಲು ವಿತರಣೆ : ಮೀನುಗಾರರ ಶ್ರೇಯೋಭಿವೃದ್ಧಿ ಮತ್ತು ಅವರ ಜೀವರಕ್ಷಣೆಯ ದೃಷ್ಟಿಯಿಂದ ಮೀನುಗಾರಿಕೆ ಇಲಾಖೆಯ ಒಳನಾಡು ಮೀನುಗಾರರಿಗೆ ಫೈಬರ್‌ಗ್ಲಾಸ್ ಹರಿಗೋಲುಗಳ ವಿತರಣೆ ಎಂಬ ಕಾರ್ಯಕ್ರಮವನ್ನು ರೂಪಿಸಿದೆ. ಫೈಬರ್‌ಗ್ಲಾಸ್ ಹರಿಗೋಲುಗಳು ಸದೃಢವಾಗಿದ್ದು ಮೀನುಗಾರರು ಆಳನೀರಿನಲ್ಲಿ ಮೀನುಗಾರಿಕೆಯಲ್ಲಿ ತೊಡಗಲು ಹಾಗೂ ಜೀವ ರಕ್ಷಣೆ ದೃಷ್ಟಿಯಿಂದ ಸಹಕಾರಿಯಾಗಿರುವುದಲ್ಲದೆ ದೀರ್ಘ ಬಾಳಿಕೆಯನ್ನು ನೀಡುತ್ತವೆ. ಈ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಒಳನಾಡು ಪ್ರದೇಶಗಳ ಕೆರೆ, ಜಲಾಶಯ ಹಾಗೂ ನದಿಭಾಗಗಳಲ್ಲಿ ಮೀನುಗಾರಿಕೆಯಲ್ಲಿ ತೊಡಗಿರುವ ಮೀನುಗಾರರಿಗೆ ಸದ್ರಿ ಯೋಜನೆಯಡಿ ತಲಾ ಒಂದು ಫೈಬರ್‌ಗ್ಲಾಸ್ ಹರಿಗೋಲು ಹಾಗೂ ಎರಡು ಹುಟ್ಟುಗಳನ್ನು ರೂ.೧೦,೦೦೦ಘಟಕ ವೆಚ್ಚದಲ್ಲಿ ನೀಡಲು ಅವಕಾಶ ಮಾಡಲಾಗಿದೆ.

ಮೀನುಗಾರರ ಕಲ್ಯಾಣ ಯೋಜನೆಗಳು

ಸಂಕಷ್ಟ ಪರಿಹಾರ ನಿಧಿ: ಮೀನುಗಾರಿಕೆ ಮಾಡುವಾಗ ಅಪಘಾತದಲ್ಲಿ ಮೃತಪಟ್ಟ ಪ್ರಕರಣಗಳಲ್ಲಿ ಮೃತರ ವಾರಸುದಾರರಿಗೆ ಅಥವಾ ಪೂರ್ಣ ಅಂಗವಿಕಲರಾದಲ್ಲಿ ಅವರಿಗೆ ಪರಿಹಾರ ನೀಡಲು ಮೀನುಗಾರರ ಸಂಕಷ್ಟ ಪರಿಹಾರ ನಿಧಿ ಸ್ಥಾಪಿಸಲಾಗಿದೆ. ಈ ಯೋಜನೆಯಡಿ ಮೀನುಗಾರರು ಮರಣ ಹೊಂದಿದ ಪ್ರಕರಣಗಳಲ್ಲಿ ನೀಡಲಾಗುತ್ತಿರುವ ಪರಿಹಾರವನ್ನು ಗರಿಷ್ಠ ತಲಾ ರೂ.ಒಂದು ಲಕ್ಷಗಳಿಂದ ತಲಾ ರೂ.ಎರಡು ಲಕ್ಷಗಳಿಗೆ ಹೆಚ್ಚಿಸಲಾಗಿದೆ. ಬಲೆಹಾನಿ, ದೋಣಿ ಹಾನಿ ಹಾಗೂ ವೈದ್ಯಕೀಯ ವೆಚ್ಚಗಳಿಗೆ ಗರಿಷ್ಠ ರೂ.೨೫,೦೦೦ ಗಳ ಪರಿಹಾರ ನೀಡಲಾಗುತ್ತದೆ.

ಸಾಮೂಹಿಕ ಅಪಘಾತ ವಿಮಾ ಯೋಜನೆ: ಕೇಂದ್ರ ಪುರಸ್ಕೃತ ಸಾಮೂಹಿಕ ಅಪಘಾತ ವಿಮಾ ಯೋಜನೆಯಡಿಯಲ್ಲಿ ಮೀನುಗಾರರ ವಿಮಾ ಕಂತಿನ ಹಣ ತಲಾ ರೂ.೨೦.೨೭ ಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತಿಶತ ೫೦ ರಂತೆ ಪ್ರತಿ ವರ್ಷ ದೆಹಲಿಯಲ್ಲಿರುವ ಮೀನುಗಾರಿಕೆ ಸಹಕಾರಿ ಸಂಘಗಳ ರಾಷ್ಟ್ರೀಯ ಮಹಾಮಂಡಳಿ (ಫಿಶ್ಕೋಫೆಡ್) ರಾಜ್ಯದ ೨.೦೫ ಲಕ್ಷ ಮೀನುಗಾರರಿಗೆ ವಿಮಾ ಸೌಲಭ್ಯ ಒದಗಿಸಲು ಪಾವತಿ ಮಾಡಲಾಗಿದೆ. ೨೦೧೫-೧೬ನೇ ಸಾಲಿನಲ್ಲಿ ಈ ರೂ.೨೦.೮೨ ಲಕ್ಷ ವಿಮಾ ಕಂತನ್ನು ರಾಜ್ಯ ಸರ್ಕಾರವು ಫಿಶ್ಕೋಫೆಡ್, ನವದೆಹಲಿಗೆ ಪಾವತಿಸಿದೆ. ೨೦೧೫-೧೬ನೇ ಸಾಲಿನಲ್ಲಿ ರೂ.೨೬ ಲಕ್ಷದ ಪರಿಹಾರ ಮೊತ್ತವನ್ನು ೨೩ ಪ್ರಕರಣಗಳಲ್ಲಿ ಇತ್ಯರ್ಥಗೊಳಿಸಲಾಗಿದೆ.

ಕೇಂದ್ರ ಸರ್ಕಾರದ ಮನೆಗಳ ನಿರ್ಮಾಣ ಯೋಜನೆ: ಈ ಯೋಜನೆಯಡಿ ಕೇಂದ್ರ ಸರ್ಕಾರವು ಮನೆಗಳ ನಿರ್ಮಾಣಕ್ಕಾಗಿ ರೂ. ೭೫,೦೦೦ ಗಳ ಸಹಾಯಧನ ನೀಡಲು ಅವಕಾಶ ಮಾಡಿದೆ. ಸಹಾಯಧನವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಸಮವಾಗಿ ಭರಿಸಲಾಗುತ್ತದೆ. ಈ ಶೀರ್ಷಿಕೆಯಡಿ ಪ್ರಸಕ್ತ ಸಾಲಿನಲ್ಲಿ ಹುಡ್ಕೋ ಸಾಲ ಮರುಪಾವತಿ ಮಾಡಲಾಗುತ್ತಿದೆ. ರೂ.೧೦೯.೬೬ ಲಕ್ಷ ಸಾಲ ಮತ್ತು ಬಡ್ಡಿ ಮರುಪಾವತಿ ಮಾಡಲಾಗಿದೆ.

ಕರಾವಳಿ ಮೀನುಗಾರರಿಗೆ ಕೇಂದ್ರ ಪುರಸ್ಕೃತ ಉಳಿತಾಯ ಮತ್ತು ಪರಿಹಾರ ಯೋಜನೆ: ಸದರಿ ಯೋಜನೆಯಡಿಯಲ್ಲಿ ಮೀನುಗಾರಿಕೆ ಅವಧಿಯಲ್ಲಿ ಕರಾವಳಿ ಮೀನುಗಾರರಿಂದ ರೂ.೯೦೦ ಗಳನ್ನು ವಸೂಲಿ ಮಾಡಲಾಗುತ್ತದೆ. ಈ ರೀತಿ ವಸೂಲಿ ಮಾಡಿದ ಮೊತ್ತ ರೂ.೯೦೦ ಗಳಿಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ತಲಾ ರೂ.೯೦೦ ಗಳನ್ನು ನೀಡಿ, ಹೀಗೆ ಸಂಗ್ರಹಿಸಿದ ಒಟ್ಟು ರೂ.೨,೭೦೦ಗಳನ್ನು  ಮೀನುಗಾರಿಕೆ ಇಲ್ಲದ ಮೂರು ತಿಂಗಳಲ್ಲಿ ಮಾಸಿಕ ತಲಾ ರೂ.೯೦೦ ಗಳನ್ನು ಮೀನುಗಾರರಿಗೆ ನೀಡಲಾಗುವುದು.

ಮತ್ಸ್ಯ ಆಶ್ರಯ ಯೋಜನೆ: ಮೀನುಗಾರರಿಗೆ ವಸತಿ ಸೌಲಭ್ಯಗಳನ್ನು ಕಲ್ಪಿಸುವ ಮತ್ಸ್ಯ ಆಶ್ರಯ ಯೋಜನೆಯಡಿ ಅವಕಾಶ ಕಲ್ಪಿಸಲಾಗಿದೆ. ಮತ್ಸ್ಯ ಆಶ್ರಯ ಯೋಜನೆಯಡಿ ಮನೆಗಳ ನಿರ್ಮಾಣಕ್ಕಾಗಿ ರೂ.೧.೨೦ ಲಕ್ಷ ಸಹಾಯಧನವನ್ನು ನೀಡಲಾಗುತ್ತಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ರೂ.೧.೫೦ ಲಕ್ಷ ನೀಡಲಾಗುತ್ತಿದೆ.

ಸಂಸ್ಕರಣೆ, ಸಂರಕ್ಷಣೆ ಮತ್ತು ಮಾರಾಟ: ರಾಜ್ಯದಲ್ಲಿನ ಮೀನುಗಾರಿಕೆ ವಲಯದಲ್ಲಿ ದಿನಂಪ್ರತಿ ೫,೬೦೯ ಟನ್ನು ಮಂಜುಗಡ್ಡೆ ಉತ್ಪಾದನೆಯ ಸಾಮರ್ಥ್ಯವುಳ್ಳ ೧೮೬ ಮಂಜುಗಡ್ಡೆ ಕಾರ್ಖಾನೆಗಳು, ೨,೯೨೫ ಟನ್ನುಗಳ ದಾಸ್ತಾನು ಸಾಮರ್ಥ್ಯವುಳ್ಳ ೪೯ ಶೀತಲಗೃಹಗಳು, ೧,೨೫೫ ಟನ್ನು ದಾಸ್ತಾನು ಸಾಮರ್ಥ್ಯವುಳ್ಳ ೧೧ ಘನೀಕೃತ ದಾಸ್ತಾನು ಮಳಿಗೆಗಳು, ೧೭೫ ಟನ್ ಘನೀಕರಣ ಸಾಮರ್ಥ್ಯವುಳ್ಳ ೧೪ ಘನೀಕರಣ ಘಟಕಗಳಿವೆ. ಅಲ್ಲದೆ ೫೨೮.೫೦ ಟನ್ ಸಾಮರ್ಥ್ಯವುಳ್ಳ ಎಂಟು ಡಬ್ಬೀಕರಣ ಘಟಕಗಳು, ಹಾಗೂ ೪೨೪.೫೦ ಟನ್ ಸಾಮರ್ಥ್ಯವುಳ್ಳ ೨೧ ಮೀನು ಹುಡಿ ಘಟಕಗಳಿವೆ.  ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಒಂದು ಮೀನುಗಾರಿಕೆ ಅಭಿವೃದ್ಧಿ ನಿಗಮ ಮತ್ತು ಎರಡು ಜಿಲ್ಲಾ ಸಹಕಾರಿ ಮೀನು ಮಾರಾಟ ಮಹಾಮಂಡಳಿಗಳು ಅಸ್ತಿತ್ವದಲ್ಲಿದ್ದು ಇವುಗಳು ಕೆಲವು ಬಂದರುಗಳಲ್ಲಿ ಮೀನುಗಾರರು ಹಿಡಿದು ತರುವ ಸೀಗಡಿ ಮತ್ತು ತಾಜಾ ಮೀನನ್ನು ಮಾರಾಟ ಮಾಡುತ್ತಿವೆ. ಮೀನುಗಾರರಿಗೆ ಬೇಕಾದ ಡೀಸಲ್, ಮೀನುಗಾರಿಕೆ ಸಲಕರಣೆ, ಬಿಡಿ ಭಾಗ, ಮುಂತಾದವುಗಳನ್ನು ಒದಗಿಸಿ ನಂತರ ಹಿಡಿದ ಮೀನನ್ನು ಅವರಿಂದ ಪಡೆದು ಮಾರಾಟ ಮಾಡಿ ಸಾಲವನ್ನು ವಾಪಸ್ಸು ಪಡೆದುಕೊಳ್ಳುವ ವ್ಯವಸ್ಥೆಯನ್ನು ಈ ಸಂಸ್ಥೆಗಳು ಅಳವಡಿಸಿಕೊಂಡಿವೆ.

ಮೀನು ಮಾರುಕಟ್ಟೆ ನಿರ್ಮಾಣಕ್ಕಾಗಿ ಸಹಾಯ: ರಾಜ್ಯದಲ್ಲಿ ಮೀನು ಮಾರುಕಟ್ಟೆಗಳಲ್ಲಿ ಸ್ವಚ್ಫತೆಯ ಕೊರತೆ ಇದೆ. ಆ ಕಾರಣಕ್ಕಾಗಿ ಸಾರ್ವಜನಿಕರು ಮಾರುಕಟ್ಟೆಗಳಿಗೆ ತೆರಳಿ ಮೀನು ಖರೀದಿಸಲು ಹಿಂಜರಿಯುತ್ತಾರೆ. ಆದುದರಿಂದ ಸ್ವಚ್ಫವಾದ ಮೀನು ಮಾರುಕಟ್ಟೆಗಳನ್ನು ನಿರ್ಮಿಸುವುದು ಅಗತ್ಯ. ಮೀನು ಮಾರುಕಟ್ಟೆಗಳನ್ನು ಸ್ಥಳೀಯ ಸಂಸ್ಥೆಗಳು ನಿರ್ಮಿಸಿ, ನಿರ್ವಹಿಸುತ್ತಿದ್ದಾರೆ. ಇಂತಹ ಸ್ಥಳೀಯ ಸಂಸ್ಥೆಯ ನೆರವಿಗಾಗಿ ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ, ಹೈದರಾಬಾದ್ ರವರು ಮೀನು ಮಾರುಕಟ್ಟೆಗಳ ನಿರ್ಮಾಣಕ್ಕಾಗಿ ಯೋಜನಾ ವೆಚ್ಚದ ಶೇ.೪೦ ರಷ್ಟು ಸಹಾಯಧನವಾಗಿ ನೀಡಲು ಯೋಜನೆ ಹಮ್ಮಿಕೊಂಡಿರುತ್ತಾರೆ. ಈ ಹಿಂದೆ ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿಯಿಂದ ಶೇ.೯೦ ರಷ್ಟು ಸಹಾಯ ನೀಡಲಾಗುತ್ತಿದ್ದು, ಸ್ಥಳೀಯ ಸಂಸ್ಥೆಗಳ ಸಹಾಯಕ್ಕಾಗಿ ಈ ಯೋಜನೆಯಡಿ ಶೇ.೧೦ ರಷ್ಟಿನ ಮೊತ್ತ ಗರಿಷ್ಟ ರೂ.೨೫ ಲಕ್ಷಗಳನ್ನು ರಾಜ್ಯ ಸರ್ಕಾರವು ಭರಿಸುತ್ತದೆ.

ಮೀನುಗಾರರ ಸಹಕಾರ ಸಂಘಗಳು: ರಾಜ್ಯದಲ್ಲಿ ೬೧೨ ಮೀನುಗಾರಿಕೆ ಸಹಕಾರ ಸಂಘಗಳು ಅಸ್ತಿತ್ವದಲ್ಲದ್ದು, ಇವುಗಳಲ್ಲಿ ೫೫೪ ಸಂಘಗಳು ಕಾರ್ಯಾಚರಣೆಯಲ್ಲಿದ್ದು ೫೮ ಸಂಘಗಳು ಸ್ಥಗಿತಗೊಂಡಿರುತ್ತವೆ. ಇವುಗಳಲ್ಲದೆ ಕರಾವಳಿ ಜಿಲ್ಲೆಗಳಲ್ಲಿ ಎರಡು ಮೀನು ಮಾರಾಟ ಮಹಾಮಂಡಳಿಗಳು ಮತ್ತು ಒಳನಾಡಿನಲ್ಲಿ ಒಂದು ರಾಜ್ಯ ಮಟ್ಟದ ಮಹಾಮಂಡಳಿ ಕಾರ್ಯಾಚರಣೆಯಲ್ಲಿವೆ. ಈ ಸಹಕಾರ ಸಂಘಗಳ ಕಾರ್ಯ ಚಟುವಟಿಕೆಗಳನ್ನು ಅಭಿವೃದ್ಧಿಪಡಿಸಲು ಪಾಲು ಕೈಗೊಳ್ಳಲಾಗುತ್ತಿದೆ. ಮೀನುಗಾರಿಕೆ ಸಹಕಾರ ಸಂಘಗಳಲ್ಲಿ ಒಟ್ಟು ೨.೦೫ ಲಕ್ಷ ಸದಸ್ಯರಿರುತ್ತಾರೆ.

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ: ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ೨೦೧೫-೧೬ ನೇ ಸಾಲಿನಲ್ಲಿ ರೂ.೧,೦೦೦ ಲಕ್ಷಗಳ ವೆಚ್ಚದಲ್ಲಿ ಜಲಾಶಯಗಳಲ್ಲಿ ಪಂಜರ ಕೃಷಿ, ಮೀನು ಮಾರಾಟ ಜಾಲದ ವಿಸ್ತರಣೆ ಮತ್ತು ಆಧುನೀಕರಣ, ಕ್ಲಸ್ಟರ್ ಮಾದರಿಯಲ್ಲಿ ಮೀನುಗಾರರಿಗಾಗಿ ಸಮಗ್ರ ಜಲಕೃಷಿ ಅಭಿವೃದ್ಧಿ, ವಿಶೇಷ ಅಭಿವೃದ್ಧಿ ಯೋಜನೆ, ಮೀನು ಮರಿ ಉತ್ಪಾದನಾ ಕೇಂದ್ರಗಳ ಉನ್ನತೀಕರಣ ಮತ್ತು ಪ್ರಮುಖವಾದ ಕೃಷಿಗೆ ಯೋಗ್ಯವಾದ ಮೀನು ತಳಿಗಳಿಂದ ಉತ್ತಮ ಮೀನು ಮರಿ ಉತ್ಪಾದನೆ ಕಾರ್ಯಕ್ರಮಗಳನ್ನು ಕೈಗೊಳ್ಳಲು ಮಂಜೂರಾತಿ ಪಡೆಯಲಾಗಿರುತ್ತದೆ.

ಒಳನಾಡು ಮೀನುಗಾರಿಕೆ ಅಭಿವೃದ್ಧಿಗಾಗಿ ಸಹಾಯ: ಈ ಯೋಜನೆಯಡಿ ಜೌಗು ಹಾಗೂ ಚೌಳು ಪ್ರದೇಶಗಳಲ್ಲಿ ಒಂದು ಎಕರೆ ಮೀನು ಕೃಷಿ ಕೊಳ ನಿರ್ಮಿಸಲು ಪ್ರತಿ ಎಕರೆ ಮೀನು ಕೃಷಿ ಕೊಳ ನಿರ್ಮಾಣ ಹಾಗೂ ಮೊದಲು ವರ್ಷದ ಆವರ್ತಕ ವೆಚ್ಚದ ಶೇಕಡ ೨೫ ರಷ್ಟು ಅಂದರೆ ಗರಿಷ್ಟ ರೂ. ೩೦,೦೦೦ ಸಹಾಯಧನವಾಗಿ ನೀಡಲಾಗುತ್ತದೆ. ಒಂದು ಎಕರೆ ಸ್ವಂತ ಜಮೀನಿನಲ್ಲಿ ಮೀನುಕೃಷಿ ಕೊಳವನ್ನು ನಿರ್ಮಾಣ ಮಾಡಿ ಮೀನುಗಾರಿಕೆಯನ್ನು ತೆಗೆದುಕೊಳ್ಳಲು ಖಾಸಗಿ ವ್ಯಕ್ತಿಗಳಿಗೆ ರೂ.೧೦,೦೦೦ಗಳ ಸಹಾಯಧನವಾಗಿ ನೀಡಲಾಗುತ್ತದೆ. ಅಲ್ಲದೆ, ಹುಲ್ಲುಗೆಂಡೆ ಮೀನುಮರಿಗಳನ್ನು ಕೆರೆಗಳಲ್ಲಿ ಬಿತ್ತನೆ ಮಾಡಿದ ಕೃಷಿಕರಿಗೆ ಶೇಕಡ ೫೦ ರಷ್ಟು ರೂ. ೫,೦೦೦ ಗಳಿಗೆ ಮೀರದಂತೆ ಸಹಾಯಧನವನ್ನು ನೀಡಲಾಗುವುದು ಹಾಗೂ ಬಾವಿ ಮತ್ತು ನೀರಾವರಿ ಹೊಂಡಗಳಲ್ಲಿ ಮೀನು ಕೃಷಿಗಾಗಿ ೨೫೦ ಸಾಮಾನ್ಯ ಗೆಂಡೆ ಮರಿಗಳನ್ನು ಉಚಿತವಾಗಿ ಸರಬರಾಜು ಮಾಡಿ ಮೀನು ಕೃಷಿಯನ್ನು ಪ್ರೋತ್ಸಾಹಿಸಲಾಗುವುದು. ಈ ಯೋಜನೆಯಡಿ ಅನುದಾನವನ್ನು ಮೀನುಮರಿ ಕೇಂದ್ರದಲ್ಲಿ ಮೀನುಮರಿ ಉತ್ಪಾದನೆಗೆ, ತಾಲೂಕು ಮಟ್ಟದ ನರ್ಸರಿಗಳಲ್ಲಿ, ಫಾರಂಗಳಲ್ಲಿ, ಕೇಜ್ ಮತ್ತು ಪೆನ್‌ಗಳಲ್ಲಿ ಮೀನುಮರಿ ಪಾಲನೆಗೆ, ಹಾಗೂ ನಿರ್ವಹಣೆಗೆ ತಗಲುವ ವೆಚ್ಚಗಳಿಗೆ, ಮೀನುಮರಿ ಖರೀದಿ ಮತ್ತು ಸಾಗಾಣಿಕೆಗೆ, ವಾಹನಗಳ ಖರೀದಿ, ನಿರ್ವಹಣೆ ಮತ್ತು ಇತರ ಸಲಕರಣೆಗಳ ಖರೀದಿಗೆ ಉಪಯೋಗಿಸಲು ಅವಕಾಶ ಕಲ್ಪಿಸಲಾಗಿದೆ.

ಮೀನು ಮಾರುಕಟ್ಟೆಗಳ ನಿರ್ಮಾಣ ಮತ್ತು ಮೀನು ಮಾರಾಟಕ್ಕೆ ಸಹಾಯ: ಮೀನುಗಾರರು ಮೀನನ್ನು ತಾಜಾ ಹಾಗೂ ಆರೋಗ್ಯಕರ ಸ್ಥಿತಿಯಲ್ಲಿ ಮಾರಾಟ ಮಾಡಲು ಅನುಕೂಲವಾಗುವಂತೆ ಶಾಖ ನಿರೋಧಕ ಪೆಟ್ಟಿಗೆ ಮತ್ತು ಸೈಕಲ್ಲುಗಳನ್ನು ಖರೀದಿಸಲು ಪ್ರತಿಶತ ೫೦ರ ನೆರವಿನೊಂದಿಗೆ ಗರಿಷ್ಟ ರೂ.೨,೦೦೦ ಸಹಾಯ ಧನವನ್ನು ಹಾಗೂ ದ್ವಿಚಕ್ರ ವಾಹನ ಮತ್ತು ಶಾಖ ನಿರೋಧಕ ಪೆಟ್ಟಿಗೆ ಖರೀದಿಸಲು ಶೇ.೨೫ರಷ್ಟು ಗರಿಷ್ಟ ರೂ.೧೦,೦೦೦ ಗಳ ಸಹಾಯಧನವನ್ನು ನೀಡಲಾಗುವುದು. ಇಳಿದಾಣ ಕೇಂದ್ರಗಳಿಂದ ತಾಜಾ ಮೀನನ್ನು ಆರೋಗ್ಯಕರ ರೀತಿಯಲ್ಲಿ ಮಾರಾಟ ಸ್ಥಳಗಳಿಗೆ ತ್ವರಿತ ಸಾಗಣಿಕೆಗಾಗಿ ಮೀನುಗಾರರಿಗೆ ವಾಹನವನ್ನು ಖರೀದಿಸಲು ಆರ್ಥಿಕ ನೆರವನ್ನು ನೀಡುವ ಉದ್ದೇಶದಿಂದ ಮತ್ಸ್ಯವಾಹಿನಿ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ತ್ರಿಚಕ್ರ ಟೆಂಪೋ ರಿಕ್ಷಾವನ್ನು ಖರೀದಿಸಲು ಶೇ.೨೫ ರಷ್ಟು ಗರಿಷ್ಟ ರೂ. ೩೦,೦೦೦ ಗಳ ಸಹಾಯಧನವನ್ನು ಹಾಗೂ ನಾಲ್ಕು ಚಕ್ರದ ವಾಹನ ಖರೀದಿಸಲು ಶೇ.೨೫ ರಷ್ಟು ಗರಿಷ್ಟ ರೂ. ೩೫,೦೦೦ ಗಳ ಸಹಾಯಧನವನ್ನು ಮೂರು ಅಥವಾ ನಾಲ್ಕು ಫಲಾನುಭವಿಗಳ ಒಂದು ಗುಂಪಿಗೆ ನೀಡಲಾಗುವುದು. ಇದಲ್ಲದೆ ಸದರಿ ಯೋಜನೆಯಡಿ ಯಾಂತ್ರೀಕೃತವಲ್ಲದ (ಪಾತಿ) ದೋಣಿ ಹೊಂದಿರುವ ಮೀನುಗಾರರಿಗೆ ಮೀನುಗಾರಿಕೆ ಸಲಕರಣೆಗಳನ್ನು ಗರಿಷ್ಟ ರೂ. ೧೦,೦೦೦ಗಳ ಘಟಕ ವೆಚ್ಚದಲ್ಲಿ ಖರೀದಿಸಲು ಮತ್ತು ಪ್ರತಿಶತ ೫೦ ರಷ್ಟು ಅಂದರೆ ಗರಿಷ್ಟ ರೂ. ೫,೦೦೦ಗಳನ್ನು ಸಹಾಯಧನವಾಗಿ ನೀಡಲು ಅವಕಾಶ ಕಲ್ಪಿಸಲಾಗಿದೆ.

ಪ್ರದರ್ಶನ ಮತ್ತು ತರಬೇತಿ: ಮೀನು ಕೃಷಿಯ ಹಿತದೃಷ್ಟಿಯಿಂದ ಸಾರ್ವಜನಿಕರ ಮಾಹಿತಿಗಾಗಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ನಡೆಯುವ ವಸ್ತು ಪ್ರದರ್ಶನದಲ್ಲಿ ಮೀನುಗಾರಿಕಾ ಇಲಾಖಾ ಕಾರ್ಯಕ್ರಮಗಳ ಬಗ್ಗೆ ಪ್ರದರ್ಶಿಸಲಾಗುವುದು. ಹಾಗೂ ಆಸಕ್ತಿ ಹೊಂದಿದ ಕೃಷಿಕರಿಗೆ ಮೀನು ಕೃಷಿಯ ಬಗ್ಗೆತರಬೇತಿ ನೀಡುವುದು, ಮತ್ಸ್ಯಪಾಲನೆ ಮತ್ತು ಇಲಾಖಾ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲಾಗುವುದು.

ಕೇಂದ್ರ ಪುರಸ್ಕೃತ ಯೋಜನೆ: ಸಾಂಪ್ರದಾಯಿ ನಾಡದೋಣಿಗಳ ಮೋಟರೀಕರಣ ಯೋಜನೆ ಜಿಲ್ಲಾ ವಲಯ: ಕೇಂದ್ರ ಪುರಸ್ಕೃತ ಸಾಂಪ್ರದಾಯಿಕ ದೋಣಿಗಳ ಮೋಟರೀಕರಣ ಯೋಜನೆಯನ್ನು ರಾಜ್ಯದಲ್ಲಿ ೧೯೮೭-೮೮ನೇ ಸಾಲಿನಿಂದ ಅನುಷ್ಠಾನಗೊಳಿಸಲಾಗುತ್ತಿದ್ದು, ಇದುವರೆವಿಗೆ ೩,೮೦೩ ನಾಡದೋಣಿಗಳನ್ನು ಮೋಟರೀಕರಣಗೊಳಿಸಲಾಗಿದೆ. ಈ ಯೋಜನೆಯಡಿ ಪ್ರತಿ ಔಟ್ ಬೋರ್ಡ್ ಮೋಟಾರಿಗೆ ಘಟಕ ವೆಚ್ಚದ ಶೇ.೫೦ ರಷ್ಟು ಅಂದರೆ ಗರಿಷ್ಟ ರೂ. ೩೦,೦೦೦ ರಂತೆ ಸಹಾಯಧನ ನೀಡಲಾಗುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ೫೦:೫೦ ಅನುಪಾತದಲ್ಲಿ ಈ ಸಹಾಯಧನ ನೀಡುತ್ತಿವೆ. ಫಲಾನುಭವಿಗಳು ಉಳಿದ ಹಣವನ್ನು ಹಣಕಾಸು ಸಂಸ್ಥೆಗಳಿಂದ ಸಾಲದ ರೂಪದಲ್ಲಿ ಪಡೆಯಲು ಅವಕಾಶವಿದೆ.  ೪೦೯ ದೋಣಿಗಳಲ್ಲಿ ಮೋಟರ್ ಅಳವಡಿಸಲು ರೂ.೧೧೬ ಲಕ್ಷ ಅನುದಾನ ವೆಚ್ಚ ಮಾಡಲಾಗಿದೆ.

(*ಮಾಹಿತಿ ಮೂಲ: ಕರ್ನಾಟಕ ಕೈಪಿಡಿ-2017, ಕರ್ನಾಟಕ ರಾಜ್ಯ ಗೆಜೆಟಿಯರ್‌)

 

ಇತ್ತೀಚಿನ ನವೀಕರಣ​ : 07-09-2021 12:56 PM ಅನುಮೋದಕರು: Admin



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
  • ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ.

  • ಸ್ಥಿರಚಿತ್ರಣ : 1280x800 to 1920x1080

ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ |ಕನ್ನಡ ಮತ್ತು ಸಂಸ್ಕೃತಿ ಇಲಾಖೆ| ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ

ಸಹಾಯ, ಸಲಹೆಗಳು ಮತ್ತು ದೂರುಗಳಿಗೆ ಸಂಪರ್ಕಿಸಿ: ಯೋಜನಾ ನಿರ್ದೇಶಕರು, ಜಾಲತಾಣ ವಿಭಾಗ, ಇ-ಆಡಳಿತ ಕೇಂದ್ರ, ಶಾಂತಿನಗರ, ಬೆಂಗಳೂರು ದೂರವಾಣಿ : 080-22230060 | ಇ-ಮೇಲ್ : pd.webportal@karnataka.gov.in

ವಿನ್ಯಾಸ , ಅಭಿವೃದ್ಧಿ ಮತ್ತು ಹೋಸ್ಟಿಂಗ್: cegಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ
  • Meity_logo
  • digital
  • data
  • India
  • pm
  • gigw
  • wcag
  • ssl
  • w3c
  • kp_kn